Friday 27 December 2019

'ಯಾರಿಗೆ ಯಾರುಂಟು ?' ಜೀವನದ ಕಟುಸತ್ಯಗಳು - 9

'ಯಾರಿಗೆ ಯಾರುಂಟು, ರವಿನ ಸಂಸಾರ, ನೀರ ಮೇಲಣ ಗುಳ್ಳೆ, ನಿಜವಲ್ಲ ಹರಿಯೇ..'
'ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲಾ...'
ಮೊದಲ ಸಾಲು ದಾಸರ ಪದದಿಂದ ಆಯ್ದುಕೊಂಡರೆ, ಎರಡನೆಯ ಸಾಲು ನಾಣ್ಣುಡಿ ಹಾಗೂ ಚಲನ ಚಿತ್ರ ಗೀತೆಯೊಂದರ ಸಾಲು.
         ಹಾಗೇನಿಲ್ಲ, ನನಗೆ ಸಾಕಷ್ಟುಆಪ್ತರಿದ್ದಾರೆ, ಜೀವ ಕೊಡುವ ಹೆಂಡತಿ/ಗಂಡ ಇದ್ದಾರೆ, ಅಸಂಖ್ಯಾತ ಅಭಿಮಾನಿಗಳಿದ್ದಾರೆ... ಹೀಗೆ ಬಹುಜನರಿಗೆ ಅನ್ನಿಸಬಹುದು. ನಿಜ. ಇದ್ದಾರೆ, ಎಲ್ಲಿಯ ತನಕ ಹಾಗೂ ಯಾವ್ಯಾವ ಸಂದರ್ಭದಲ್ಲಿ ಇರುತ್ತಾರೆ ಅನ್ನುವುದು ಮುಖ್ಯ. ನಾನು ಜೀವನದಲ್ಲಿ ಅನುಭವಿಸಿಲ್ಲವಾದರೂ, ಬೇರೆ ಬೇರೆ ರೀತಿಯಲ್ಲಿ ಅನುಭವಿಸಿದ ಜನರನ್ನು ನೋಡಿದ್ದೇನೆ, ಅವರ ನೋವಿನಲ್ಲಿ ಭಾಗಿಯಾಗಿದ್ದೇನೆ. 
         ಮೊದಲನೆಯದಾಗಿ ಮನುಷ್ಯನಿಗೆ ಈ ಭಾವನೆ ಬರುವುದು ತಾನು ಅಧಿಕಾರ ಅಥವಾ ಪದವಿಯನ್ನು ಕಳೆದುಕೊಂಡಾಗ. ನಿಮ್ಮಲ್ಲಿ ಅಧಿಕಾರವಿದ್ದು ಅಥವಾ ನೀವೊಂದು ಸಶಕ್ತ ಸ್ಥಾನದಲ್ಲಿದ್ದರೆ ನಿಮ್ಮಿಂದ ಕೆಲಸ ಮಾಡಿಕೊಳ್ಳಲು ಜನರ ಪಡೆಯೇ ನಿಮ್ಮ ಸುತ್ತ ತುಂಬಿರುತ್ತದೆ. ಅದೇ ನೀವು ಅಧಿಕಾರವನ್ನು ಕಳೆದುಕೊಂಡ ಮರುಕ್ಷಣದಿಂದ ನಿಮ್ಮ ಸುತ್ತಲಿದ್ದ ಜನರು ನಿಧಾನವಾಗಿ ಕರಗುತ್ತಾರೆ. ಅಂತೆಯೇ ಚಲನಚಿತ್ರ ನಟ-ನಟಿಯರು, ಕ್ರಿಕೆಟ್ ತಾರೆಯರು, ಸಾಂಸ್ಕ್ರತಿಕ ವಲಯದ ಜನಪ್ರಿಯ ವ್ಯಕ್ತಿಗಳು ಮುಂತಾದವರು ಚಲಾವಣೆಯಲ್ಲಿ ಇರುವವರೆಗೂ ಅವರ ಹಿಂದೆ ಜನರ ಸಂತೆಯೇ ನೆರೆಯುತ್ತಿರುತ್ತದೆ. ಜನಪ್ರಿಯತೆ ಕಳೆದುಕೊಂಡ ಮೇಲೆ ಕ್ರಮೇಣ ಜನರು ದೂರಾಗುತ್ತಾರೆ. 
         'ಅದರಲ್ಲಿ ತಪ್ಪೇನಿದೆ? ಚಲಾವಣೆಯಲ್ಲಿ ಇರುವವರೆಗೂ ನಾಣ್ಯ' ಎಂದು ನಿಮಗೆ ಅನ್ನಿಸಬಹುದು. ಆದರೆ ಎತ್ತರಕ್ಕೇರಿ ಕುಸಿದ ವ್ಯಕ್ತಿಗಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಅವರ ಭ್ರಮಾಲೋಕದಿಂದ ಹೊರಬರಲಾಗದೇ ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋಗುತ್ತಾರೆ. 
         ಎರಡನೆಯದಾಗಿ ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ನಿಮ್ಮ ಸುತ್ತ ಮಂದಿ ಮಾಗಧರು ಇದ್ದೇ ಇರುತ್ತಾರೆ. ನೀವು ಆರ್ಥಿಕವಾಗಿ ದುರ್ಬಲರಾಗುತ್ತಿದ್ದಂತೇ ನಿಮ್ಮ ಬಂಧು ಬಳಗದವರು ನಿಧಾನವಾಗಿ ಕರಗುತ್ತಾರೆ. ನಿಮ್ಮ ಕುಟುಂಬದವರೂ, ನಿಮ್ಮಿಂದ ಸಹಾಯ ಪಡೆದ ಗೆಳೆಯರೂ ನಿಮ್ಮಿಂದ ದೂರವಾಗುತ್ತಾರೆ. ಇಂತಹ ವ್ಯಕ್ತಿಗಳಿಗೆ 'ನನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ' ಎಂದು ನಂಬುವುದು ಕಷ್ಟವಾಗಿ, ಕೊನೆಗೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.  
         ಮೂರನೆಯದಾಗಿ ಹಾಗೂ ಅತಿಮುಖ್ಯವಾಗಿ ನೀವು ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದಾದರೂ ಕಾಯಿಲೆಗೆ ಒಳಗಾದಾಗ 'ನಿಮ್ಮವರು' ನಿಮ್ಮಿಂದ ದೂರಾಗುತ್ತಾರೆ. ಕೆಲಕಾಲ ಅವರು ನಿಮ್ಮೊಂದಿಗೆ ಇರಬಹುದು ಆದರೆ ನೀವು ಕಾಯಿಲೆಯಿಂದ ಗುಣಮುಖರಾಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದ್ದರೆ ನೀವಂದುಕೊಂಡ 'ನಿಮ್ಮವರೇ' ನಿಮ್ಮಿಂದ ನಿಧಾನವಾಗಿ ದೂರಾಗುತ್ತಾರೆ. 
         ನನ್ನ ಜೀವದ ಗೆಳೆಯ/ಗೆಳತಿ, ನನ್ನ ಪ್ರೀತಿಯ ಗಂಡ/ಹೆಂಡತಿ ನನ್ನಿಂದ ದೂರವಾಗುತ್ತಿದ್ದಾರೆ ಎನ್ನುವ ಸತ್ಯ ಅರಿವಾಗುತ್ತಿದ್ದಂತೇ ಆ ರೋಗಗ್ರಸ್ಥನಿಗೆ ಮಾನಸಿಕವಾಗಿ ದೊಡ್ಡ ಆಘಾತವೇ ಆಗುತ್ತದೆ.  
'ಯಾರಿಗೆ ಯಾರುಂಟು,ಇರವಿನ ಸಂಸಾರ, ನೀರ ಮೇಲಣ ಗುಳ್ಳೆ,ನಿಜವಲ್ಲ ಹರಿಯೇ' 
'ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲಾ...' 
ಈ ಮಾತುಗಳ ನಿಜ ಅರ್ಥದ ಸಾಕ್ಷಾತ್ಕಾರ ಮೇಲೆ ಹೇಳಿದ ಎಲ್ಲರಿಗೂ ಆಗುತ್ತದೆ. 

         ನಾವು ಕೆಲವು ಸತ್ಯಗಳನ್ನು ಅರ್ಥ ಮಾಡಿಕೊಳ್ಳಲೇ ಬೇಕು. ಈ ಜಗತ್ತಿನಲ್ಲಿ ಬಹುತೇಕ ಎಲ್ಲರೂ ಸ್ವಾರ್ಥಿಗಳೇ. ಅದನ್ನು ತಪ್ಪು ಎಂದು ಹೇಳಲೂ ಆಗುವುದಿಲ್ಲ, ಪ್ರತಿಯೊಬ್ಬರೂ ತಮ್ಮ ತಮ್ಮ  ಏಳಿಗೆಯನ್ನು ಬಯಸುವುದರಿಂದ ಆತ  ಸ್ವಾರ್ಥಿಯಾಗುತ್ತಾನೆ. ಆದ್ದರಿಂದ ಜನರೊಡನೆ ವ್ಯವಹರಿಸುವಾಗ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳ್ಳೆಯದು. 
         ಜನಪ್ರಿಯತೆ ಎನ್ನುವುದು ಶಾಶ್ವತವಲ್ಲ. 'ಎಲ್ಲೋ ಇದ್ದ ನನಗೆ ಇಷ್ಟೊಂದು ಜನಪ್ರಿಯತೆ ಸಿಕ್ಕಿತಲ್ಲ' ಎಂದು ವಿನಮ್ರವಾಗಿ ಒಪ್ಪಿಕೊಂಡವನಿಗೆ ಅದನ್ನು ಕಳೆದುಕೊಂಡಾಗ ಅಷ್ಟೊಂದು ನೋವಾಗುವುದಿಲ್ಲ. ನಾವು ಬಡವರಾಗಿರಲಿ, ಸಿರಿವಂತರಾಗಿರಲಿ ಒಂದಷ್ಟು ಉಳಿತಾಯವನ್ನು ನಮಗಾಗಿ... ಕೇವಲ ನಮಗಾಗಿ ಎಂದೇ ಮಾಡಿಕೊಳ್ಳಬೇಕು. ಅದೇ ಆಪತ್ಕಾಲದಲ್ಲಿ ನೆರವಾಗುವ ನಿಮ್ಮ ಆಪದ್ಧನ. ಎಲ್ಲಾ ಖರ್ಚುಗಳಂತೇ ಉಳಿತಾಯವನ್ನೂ ಒಂದು ಖರ್ಚೆಂದೇ ಭಾವಿಸಿ ಉಳಿತಾಯ ಮಾಡಿಕೊಳ್ಳಬೇಕು. ನಿಮ್ಮ ಗೆಳೆಯರು, ನೆಂಟರು ಅಷ್ಟೇಕೆ ನಿಮ್ಮ ಕುಟುಂಬದವರೇ ನಿಮಗೆ ಸಹಾಯ ಮಾಡದೇ ಇರಬಹುದು. ನಿಮ್ಮದೇ ಆದ ಹಣ ಸಾಯುವವರೆಗೂ ನಿಮ್ಮಲ್ಲಿರಲಿ. 
        ನಾನು ಹೇಳಿದ ಎಲ್ಲಾ ಉದಾಹರಣೆಗಳಿಗೆ ಅಪವಾದವೆಂಬಂತೆ ಕೆಲವು  ವ್ಯಕ್ತಿಗಳು ಇದ್ದೇ ಇರುತ್ತಾರೆ. ಆದರೆ ಅಂತಹ ವ್ಯಕ್ತಿಗಳು ಬೆರಳೆಣಿಕೆಯಷ್ಟು. 

Wednesday 18 December 2019

ನೆಮ್ಮದಿಯನ್ನು ಹಾಳು ಮಾಡುವ ಗುಟ್ಟುಗಳು ರಟ್ಟಾಗದಿದ್ದರೇನೇ ಒಳಿತು. - ಜೀವನದ ಕಟುಸತ್ಯಗಳು - 6

ಈ ಹಿಂದೆ ಕೇಳಿದ ಪ್ರಶ್ನೆಗಳಿಗೆ ನನ್ನ ಅನಿಸಿಕೆ/ಉತ್ತರವನ್ನು ಹೇಳಲು ಬಯಸುತ್ತೇನೆ.

ಕೇಸ್ ೧
ತನ್ನನ್ನು ನಂಬಿದ್ದ ಗೆಳೆಯನೊಬ್ಬನಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದ 'ಆತ'. ಅದರಲ್ಲಿ 'ಆತ'ನಿಗೂ ಸಿಂಹ ಪಾಲಿತ್ತು. ಆದರೆ ಗೆಳೆಯನಿಗೆ ಆ ವ್ಯವಹಾರದ ಸೂತ್ರಧಾರಿ 'ಆತ'ನೇ ಎಂದು ಗೊತ್ತಿಲ್ಲ. ಗೆಳೆಯ ಈಗಲೂ 'ಆತ'ನನ್ನು ನಂಬಿದ್ದಾನೆ, 'ಆತ'ನ ಕಷ್ಟಕಾಲದಲ್ಲಿ ಈಗಲೂ ನೆರವಾಗುತ್ತಾನೆ. 'ಆತ' ನನ್ನ ಬಳಿ ಬಂದು ಕೇಳಿದ. 'ಗೆಳೆಯ ನನಗೆ ನೆರವು ನೀಡುವಾಗೆಲ್ಲಾ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ. ನಿನಗಾದ ನಷ್ಟಕ್ಕೆ ಕಾರಣಕರ್ತನು ನಾನೇ ಎಂದು ಹೇಳಿಬಿಡಲೇ?'

ನನ್ನ ಅನಿಸಿಕೆ/ಉತ್ತರ
ನೀವು ಗೆಳೆಯನಿಗೆ ಮೋಸ ಮಾಡಿದ್ದರೂ ನಿಮ್ಮ ಗೆಳೆತನಕ್ಕೆ ಅದು ಅಡ್ಡಿಯಾಗಿಲ್ಲ. ಈಗ ಈ ಸತ್ಯವನ್ನು ಹೇಳಿದರೆ ಆತನಿಗೆ ನೋವಾಗಬಹುದು, ಬಹುತೇಕ ನೋವಾಗಿಯೇ ಆಗುತ್ತದೆ. ನೀವು ಮಾಡಿದ ತಪ್ಪಿನ ಅರಿವು ನಿಮಗಾಗಿದೆ. ಪಶ್ಚಾತ್ತಾಪವನ್ನೂ ಸಾಕಷ್ಟು ಪಟ್ಟಿದ್ದೀರಿ. ನೀವು ಆತನಿಗೆ ಮಾಡಿದ ಮೋಸಕ್ಕೆ ನೀವೂ ನೋವು ಪಟ್ಟಿದ್ದೀರಿ. ಆದ್ದರಿಂದ ಈ  ರಹಸ್ಯವನ್ನು ಹೇಳುವ ಅಗತ್ಯವಿಲ್ಲ. ನಿಮಗೆ ತಪ್ಪಿತಸ್ಥ ಭಾವನೆಯಿಂದ ಹೊರಬರಲೇ ಬೇಕೆಂದಿದ್ದರೆ, ಛಲದಿಂದ ನ್ಯಾಯವಾಗಿ ದುಡಿದು ಆತನಿಂದ ವಂಚನೆ ಮಾಡಿ ಪಡೆದ ಹಣಕ್ಕೆ ಬಡ್ಡಿಯನ್ನೂ ಸೇರಿಸಿ ಆತನಿಗೆ ತಿಳಿಯದಂತೆ ಬೇರೊಂದು ರೂಪದಲ್ಲಿ ನೀಡಬಹುದು. ಅಥವಾ ಹೇಳಲೇ ಬೇಕೆನಿಸಿದರೆ ಸ್ವಲ್ಪ ಸೌಮ್ಯವಾಗಿ 'ನನಗರಿವಿಲ್ಲದೇ ಒಂದು ತಪ್ಪು ಮಾಡಿದೆ. ಅದನ್ನು ಸರಿಪಡಿಸಲು ನಿನ್ನ ವಸ್ತುವನ್ನು ನಿನಗೇ ನೀಡಲು ಬಯಸಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು' ಎಂದು ಹೇಳಿ ಆತನನ್ನು ಒಪ್ಪಿಸುವುದು ಒಳಿತು. ಅನ್ಯಾಯವಾಗಿ ಕಳೆದುಕೊಂಡ ದುಡ್ಡು ಹಿಂದಿರುಗಿ ಬಂದಾಗ ಅದು ಎಂತಹವರಿಗೂ ಸಂತಸವನ್ನು ನೀಡುತ್ತದೆ. ಹಣವನ್ನು ಹಿಂದಿರುಗಿಸುವ ಸಾಮರ್ಥ್ಯ ಇಲ್ಲದಿದ್ದರೆ ಅಪ್ರಿಯವಾದ ಈ ಸತ್ಯವನ್ನು ಹೇಳುವ ಅವಶ್ಯಕತೆ ಇಲ್ಲ. ಅಂದ ಮಾತ್ರಕ್ಕೆ ಮೋಸ ಮಾಡುವುದನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ.    

ಕೇಸ್ ೨
'ನಾನು ಇಬ್ಬರು ಹುಡುಗಿಯರೊಂದಿಗೆ ಅಫೇರ್ ಇಟ್ಟುಕೊಂಡಿದ್ದೆ. ಈಗ ಮದುವೆಗೆ ಹೆಣ್ಣು ನೋಡುತ್ತಿದ್ದಾರೆ. ಆಕೆಗೆ ಈ ವಿಷಯವನ್ನು ಮೊದಲೇ ಹೇಳಿದರೆ ಒಳಿತಲ್ಲವೇ?' ಒಬ್ಬಾತ ಕೇಳುತ್ತಾನೆ. ಇಂತಹದೇ ಪ್ರಶ್ನೆಯನ್ನು ಒಬ್ಬಾಕೆಯೂ ಕೇಳುತ್ತಾಳೆ. ಇನ್ನು ಕೆಲವರು ಮದುವೆಯಾದ ನಂತರ ಇಂತಹದೇ ಪ್ರಶ್ನೆಯನ್ನು ಕೇಳುತ್ತಾರೆ.
'ನಿಮಗೇನು ಲಾಭ ಇದರಿಂದ?' ಎಂದು ಕೇಳಿದರೆ 'ಮುಂದೆ ಎಂದಾದರೂ ಅವರಿಗೆ ತಿಳಿದಲ್ಲಿ ಇದನ್ನು ವಂಚನೆಯೆಂದು ತಿಳಿಯಬಹುದಲ್ಲವೇ?' ಎನ್ನುತ್ತಾರೆ.

ನನ್ನ ಅನಿಸಿಕೆ/ಉತ್ತರ
ಈ ಬಗ್ಗೆ ನಾನು, ನಡೆದ ಒಂದು ಘಟನೆಯನ್ನು ಹೇಳಲಿಚ್ಚಿಸುತ್ತೇನೆ. ಒಂದು ದಿನ ನಾನು ಹೋಟೆಲೊಂದರಲ್ಲಿ ದೋಸೆ ತಿನ್ನುತ್ತಾ ಕುಳಿತಿದ್ದೆ. ಎದುರಿಗೆ ಒಬ್ಬರು ಮಹಿಳೆ (ಆಕೆಗೆ ಸುಮಾರು ಐವತ್ತು ವರ್ಷಗಳು)ಹಾಗೂ ಅವರ ತಾಯಿ (ಅವರಿಗೆ ಸುಮಾರು ಎಪ್ಪತ್ತು ಪ್ಲಸ್ ವರ್ಷಗಳು) ತುಳು ಭಾಷೆಯಲ್ಲಿ ಮಾತನಾಡುತ್ತಾ ಕುಳಿತಿದ್ದರು. ನಾನು ಅವರನ್ನು ತುಳು ಭಾಷೆಯಲ್ಲಿಯೇ ಕೇಳಿದೆ 'ನಿಮ್ಮದು ಮಂಗಳೂರಾ?' ಹೌದೆಂದು ನುಡಿದ ಆಕೆ ಮಾತನಾಡಲು ಶುರು ಮಾಡಿದರು. ಎಷ್ಟೋ ವರ್ಷಗಳ ಪರಿಚಯದವರೇನೋ ಎಂಬಂತೆ ಮಾತನಾಡುತ್ತಿದ್ದೆವು. ಆಕೆಯ ತಾಯಿಯೂ ನಮ್ಮೊಡನೆ ಹರಟುತ್ತಿದ್ದರು. 'ನನ್ನ ಅಫೇರ್ ಬಗ್ಗೆ ಹೇಳಲೇ' ಎಂದು ಪ್ರೀತಿಸಿ ವಂಚನೆಗೊಳಗಾದವರು ಕೇಳುವ ಪ್ರಶ್ನೆಯ ಬಗ್ಗೆ ಮಾತು ಬಂತು. ಆ ಮಹಿಳೆ ಥಟ್ಟನೆ ಉತ್ತರಿಸಿದರು 'ಇಲ್ಲ, ಖಂಡಿತ ಹೇಳಬಾರದು' ಮಾತು ಮುಂದುವರೆಸುತ್ತಾ ಆಕೆ 'ನಾನೂ ಪ್ರಾಯದಲ್ಲಿ ಒಬ್ಬಾತನನ್ನು ಪ್ರೀತಿಸಿದ್ದೆ. ಆದರೆ ಆತ ನನ್ನನ್ನು ವಂಚಿಸಿದ. ನಾನು ತುಂಬಾ ನೊಂದು ಹೋಗಿದ್ದೆ. ನಂತರ ನನ್ನ ಮದುವೆಯ ಪ್ರಸ್ತಾಪ ಬಂದಾಗ ನನಗೆ ಅಳುಕಿತ್ತು.  ಮದುವೆಯ ಬಗ್ಗೆ ಒಬ್ಬರೊಡನೆ ಮಾತುಕತೆಯಾಗಿತ್ತು. ನನ್ನನ್ನು ಭೇಟಿಯಾದಾಗ ಎಲ್ಲ ವಿಷಯಗಳನ್ನು ಅವರ ಬಳಿ ಹೇಳಬೇಕೆಂದುಕೊಂಡಿದ್ದೆ. ನಂತರ ನನ್ನ ಅವರ ಭೇಟಿಯಾಯಿತು. ಅವರು ಎಷ್ಟು ಮುಗ್ಧರು ಹಾಗೂ ಒಳ್ಳೆಯವರಾಗಿದ್ದರೆಂದರೆ, ನನಗೆ ಬಾಯಿಯೇ ಕಟ್ಟಿ ಹೋಗಿತ್ತು. ಅವರು ನನ್ನನ್ನೇ ಮದುವೆಯಾಗಬೇಕೆಂದು ಬಹಳವಾಗಿ ಬಯಸಿದ್ದನ್ನು ನೇರವಾಗಿ  ಹೇಳಿದರು. ನನಗೆ  ಮಾತುಗಳೇ ಬರಲಿಲ್ಲ. ಮೌನವಾಗಿ ಒಪ್ಪಿಕೊಂಡೆ. ಇಷ್ಟು ವರ್ಷಗಳು ಬಹಳ ಪ್ರೀತಿಯಿಂದ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನನ್ನ ಜೀವನದಲ್ಲಿ ನಡೆದ ಆ ಕಹಿಘಟನೆಯನ್ನು ನಾನು disgusting part of my life ಅಂತ ಕಿತ್ತು ಬಿಸಾಡಿದ್ದೇನೆ. ಹಿಂದೆ ಕೆಲವೊಮ್ಮೆ 'ಹೇಳಿ ಬಿಡಲೇ' ಎಂದೆನ್ನಿಸುತ್ತಿತ್ತು. ಆದರೆ ಆ ಮುಗ್ಧ ಮುದ್ದು ಮನಸ್ಸಿನ ಮೇಲೆ ಯಾವ ರೀತಿಯಲ್ಲೂ ನೋವನುಂಟು ಮಾಡಲು ನನಗೆ ಮನಸ್ಸಾಗಲಿಲ್ಲ. ಈಗಂತೂ ನಾನು ಅವರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದೇನೆ. ನಾನು ಹೇಳದಿರುವುದೇ ಒಳ್ಳೆಯದಾಯಿತೆಂದು ಅನಿಸುತ್ತದೆ'
ಇದಿಷ್ಟನ್ನೂ ಅವರು ಅವರ ತಾಯಿಯ ಎದುರೇ ಹೇಳಿದರು, ಅವರ ತಾಯಿಯೂ ಅದಕ್ಕೆ ಸಹಮತ ಸೂಚಿಸಿದರು.
ಯಾರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆದಿದ್ದರೆ, ಯಾರಿಂದಾದರೂ ಮೋಸ ಹೋಗಿದ್ದರೆ ಆಕೆ ಹೇಳಿದ ಹಾಗೆ disgusting part of my life ಎಂದು ಅರ್ಥ ಮಾಡಿಕೊಂಡು ಕಿತ್ತು ಬಿಸಾಡಿದರೆ ಕ್ಷೇಮ. ಅದರ ಬದಲು ವಂಚನೆ ಮಾಡಿದ ವ್ಯಕ್ತಿಯ ಬಗ್ಗೆ ಒಳ್ಳೆಯ ಭಾವನೆ ಇಟ್ಟುಕೊಂಡು ಇನ್ನೊಬ್ಬನ ಜೊತೆ ಜೀವನ ನಡೆಸುವುದು ನಿರರ್ಥಕ. ತನ್ನ ಗುಟ್ಟು ಬಿಟ್ಟು ಕೊಟ್ಟ ಮಾತ್ರಕ್ಕೆ ನಿಮ್ಮ ಸಂಗಾತಿ  ಕೂಡಾ ಎಲ್ಲ ಗುಟ್ಟನ್ನು ಬಿಟ್ಟು ಕೊಡುವರೆಂಬ ಭರವಸೆ ಇಲ್ಲ. ಅವರೂ ಕೆಲವು ರಹಸ್ಯಗಳನ್ನು ರಹಸ್ಯವಾಗಿಯೇ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ನೋವು ತರುವ ಅಥವಾ ನೆಮ್ಮದಿಯನ್ನು ಹಾಳು ಮಾಡುವ ಗುಟ್ಟುಗಳು ರಟ್ಟಾಗದಿದ್ದರೇನೇ ಒಳಿತು. 
ಅಂದ ಮಾತ್ರಕ್ಕೆ ತಮ್ಮ ಮೂಗಿನ ನೇರಕ್ಕೆ ಸ್ವೇಚ್ಛಾಚಾರದಿಂದ ಬದುಕನ್ನು ಕಟ್ಟಿಕೊಳ್ಳುವುದು ಸರಿಯಲ್ಲ. 

ಕೇಸ್ ೩
'ನನಗೊಂದು ವಿಲಕ್ಷಣ ಕಾಯಿಲೆ ಇದೆ. ಮದುವೆಗೆ ಮುನ್ನ ಇದನ್ನು ತಿಳಿಸುವುದು ಒಳಿತಲ್ಲವೇ?' ಗಂಡಾಗಲೀ, ಹೆಣ್ಣಾಗಲೀ ಕೆಲವೊಮ್ಮೆ ಕೇಳುವ ಪ್ರಶ್ನೆ. 

ನನ್ನ ಅನಿಸಿಕೆ/ಉತ್ತರ
ಈ ವಿಷಯವನ್ನು ಪರಸ್ಪರ ಚರ್ಚಿಸುವುದು ಒಳಿತೆಂದು ನನ್ನ ಅಭಿಪ್ರಾಯ. ನಂತರ ನಿಮ್ಮ ವಿವೇಚನೆಗೆ ಬಿಟ್ಟದ್ದು. 


Tuesday 17 December 2019

ಎಂದೆಂದಿಗೂ ಸತ್ಯವನ್ನೇ ಹೇಳಬೇಕೇ ? - ಜೀವನದ ಕಟುಸತ್ಯಗಳು - 5

         ಹಿಂದಿನ ಸಂಚಿಕೆಯಲ್ಲಿ 'ನನ್ನೊಳಗಿರುವ ಗುಟ್ಟನ್ನು ರಟ್ಟು ಮಾಡಬಹುದೇ?' ಎಂಬ ವಿಷಯಕ್ಕೆ ಸಂಬಂಧ ಪಟ್ಟಂತೆ ನಾನು ಕೆಲವು ಪ್ರಕರಣಗಳನ್ನು ವಿವರಿಸಿದ್ದೆ.
        ನಾನು ಅವರಿಗೆ ಯಾವ ರೀತಿಯಲ್ಲಿ ಉತ್ತರಿಸಿದೆ ಎಂದು ಹೇಳುವ ಮೊದಲು ಸಂಸ್ಕೃತದ ಒಂದು ಸುಭಾಷಿತವನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ.
    'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ.
    'ಪ್ರಿಯಂ ಚ ನಾನೃತಂ ಬ್ರೂಯಾತ್, ಏಷ ಧರ್ಮಃ ಸನಾತನಃ'
ಹಾಗೆಂದರೆ             
   'ಸತ್ಯವನ್ನೇ ಹೇಳಬೇಕು ಹಾಗೂ ಪ್ರಿಯವಾದುದನ್ನು ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗಿರುತ್ತದೆ ಎಂಬ ಕಾರಣಕ್ಕೆ ಸುಳ್ಳನ್ನೂ ಹೇಳಬಾರದು, ಇದೇ ಸನಾತನವಾದ ಧರ್ಮ' ಇಲ್ಲಿ 'ಧರ್ಮ'ವೆಂದರೆ 'ನಡೆದುಕೊಳ್ಳಬೇಕಾದ ರೀತಿ.'
        ಈ ಸುಭಾಷಿತ ಅತ್ಯಂತ ಅರ್ಥಪೂರ್ಣವಾದ ಸುಭಾಷಿತ. ಸತ್ಯವನ್ನು ಹೇಳುವ ಭರದಲ್ಲಿ ಮನಸ್ಸಿಗೆ ನೋವು ಕೊಡುವ ಅಥವಾ ಹಿತವಲ್ಲದ ಸತ್ಯವನ್ನು ಮೈ ಮೇಲೆ ಬಿದ್ದು ಹೇಳುವ    ಅಗತ್ಯವಿಲ್ಲ. ಇತರರಿಗೆ ಖುಷಿ ನೀಡುತ್ತದೆ ಎಂಬ ಕಾರಣಕ್ಕಾಗಿ ಅನಗತ್ಯವಾಗಿ ಸುಳ್ಳನ್ನು ಹೇಳುವ ಅಗತ್ಯವೂ ಇಲ್ಲ.
        ಇನ್ನೊಬ್ಬರಿಗೆ ಹಾನಿ ತರುವ ಸತ್ಯ ಅಸತ್ಯಕ್ಕಿಂತ ಘೋರವಾಗಿರುತ್ತದೆ. ಒಂದು ಸಣ್ಣ ಕತೆಯನ್ನು ಉದಾಹರಣೆಯಾಗಿ ಹೇಳುತ್ತೇನೆ.
        ಸತ್ಯವನ್ನೇ ಹೇಳುವ ಒಬ್ಬ ಋಷಿ ತನ್ನ ಆಶ್ರಮದ ಮುಂದೆ ಮರವೊಂದರ ನೆರಳಲ್ಲಿ ಕುಳಿತಿರುತ್ತಾನೆ. ಅಮಾಯಕನೊಬ್ಬ ಓಡೋಡಿ ಬಂದು ಆ ಮರದ ಹಿಂದಿರುವ ಪೊಟರೆಯಲ್ಲಿ ಅವಿತುಕೊಳ್ಳುತ್ತಾನೆ. ಕೈಯಲ್ಲಿಮಚ್ಚು,ಕತ್ತಿಗಳನ್ನು ಹಿಡಿದುಕೊಂಡು ವೀರಾವೇಶದಿಂದ ಒಂದಷ್ಟು ದರೋಡೆಕೋರರು ಅದೇ ಸ್ಥಳಕ್ಕೆ ಧಾವಿಸಿ ಬರುತ್ತಾರೆ ಹಾಗೂ ಸತ್ಯಸಂಧನಾದ ಆ ಋಷಿಯ ಬಳಿ ಕೇಳುತ್ತಾರೆ 'ಸ್ವಾಮೀ ಇಲ್ಲಿ ಯಾರಾದರೂ ಓಡುತ್ತಾ ಬಂದಿದ್ದರೇ, ನೀವೇನಾದರೂ ನೋಡಿದಿರಾ ?
   ಅದಕ್ಕೆ ಸತ್ಯವೃತನಾದ ಆ ಋಷಿ 'ಹೌದು ನೋಡಿದ್ದೇನೆ' ಎಂದು ಹೇಳುತ್ತಾನೆ.
   'ಯಾವ ಕಡೆಗೆ ಹೋದ?' ದರೋಡೆಕೋರರಲ್ಲೊಬ್ಬ ಕೇಳುತ್ತಾನೆ.
   'ಇದೋ, ಈ ಮರದ ಹಿಂದಿರುವ ಪೊಟರೆಯಲ್ಲಿ ಕುಳಿತಿದ್ದಾನೆ' ಸತ್ಯವನ್ನೇ ನುಡಿಯುತ್ತಾನೆ ಸತ್ಯವಂತನಾದ ಆ ಮಹಾಋಷಿ.
        ದರೋಡೆಕೋರರು ಪೊಟರೆಯಲ್ಲಿ ಅವಿತಿರುವ ಆತನನ್ನು ಹೊರಗೆಳೆದು ಬರ್ಬರವಾಗಿ ಹತ್ಯೆಗೈದು ಆತನ ಹಣವನ್ನು ಲೂಟಿ ಮಾಡಿ ಪರಾರಿಯಾಗುತ್ತಾರೆ.
'ಸತ್ಯ ಹರಿಶ್ಚಂದ್ರನಂತೆಯೇ ಸತ್ಯವನ್ನು ಎಂತಹ ಸಂದರ್ಭದಲ್ಲಿಯೂ ಹೇಳಲೇ ಬೇಕಾ?' ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಆ ಅಮಾಯಕನ ಸಾವಿಗೆ ಸತ್ಯವೃತನಾದ ಋಷಿಯೇ ಕಾರಣನಾದ.
        ಮೇಲೆ ಉದಹರಿಸಿದ ಸುಭಾಷಿತ, ಇಂತಹ ಕೆಲವು ಕ್ಲಿಷ್ಟ ಸಂದರ್ಭಗಳಲ್ಲಿ ನೆನಪಿಸಿಕೊಳ್ಳಬೇಕಾದ ಸುಭಾಷಿತ.
         ಅಪರಿಚಿತ ಮಹಿಳೆಯೊಬ್ಬರು ಅಚಾನಕ್ಕಾಗಿ ಮಾತನಾಡಿದ, ಹೇಳಿದ ಒಂದು ಅತ್ಯುತ್ತಮ ಉದಾಹರಣೆಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರಿಸುತ್ತೇನೆ. ನಿಮ್ಮ ಅನಿಸಿಕೆಗಳ ನಿರೀಕ್ಷೆಯಲ್ಲಿ .... 

Monday 16 December 2019

ನನ್ನೊಳಗಿರುವ ಗುಟ್ಟನ್ನು ರಟ್ಟು ಮಾಡಬಹುದೇ? - ಜೀವನದ ಕಟುಸತ್ಯಗಳು - 4

ನನ್ನೊಳಗಿರುವ ಗುಟ್ಟನ್ನು ರಟ್ಟು ಮಾಡಬಹುದೇ? 
ನಾನು ಯಾರಿಗೂ ಹೇಳದಿರುವ ಈ ರಹಸ್ಯವನ್ನು ಬಯಲು ಮಾಡಬಹುದೇ? 
ಈ ಪ್ರಶ್ನೆಯನ್ನು ನನ್ನ 'ಥೆರಪಿ ಸೆಂಟರ್' ಗೆ ಬರುವ ಬಹಳಷ್ಟು ಮಂದಿ ಕೇಳುತ್ತಾರೆ.

ಕೇಸ್ ೧ 
ತನ್ನನ್ನು ನಂಬಿದ್ದ ಗೆಳೆಯನೊಬ್ಬನಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದ 'ಆತ'. ಅದರಲ್ಲಿ 'ಆತ'ನಿಗೂ ಸಿಂಹ ಪಾಲಿತ್ತು. ಆದರೆ ಗೆಳೆಯನಿಗೆ ಆ ವ್ಯವಹಾರದ ಸೂತ್ರಧಾರಿ 'ಆತ'ನೇ ಎಂದು ಗೊತ್ತಿಲ್ಲ. ಗೆಳೆಯ ಈಗಲೂ 'ಆತ'ನನ್ನು ನಂಬಿದ್ದಾನೆ, 'ಆತ'ನ ಕಷ್ಟಕಾಲದಲ್ಲಿ ಈಗಲೂ ನೆರವಾಗುತ್ತಾನೆ. 'ಆತ' ನನ್ನ ಬಳಿ ಬಂದು ಕೇಳಿದ. 
'ಗೆಳೆಯ ನನಗೆ ನೆರವು ನೀಡುವಾಗೆಲ್ಲಾ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ. ನಿನಗಾದ ನಷ್ಟಕ್ಕೆ ಕಾರಣಕರ್ತನು ನಾನೇ ಎಂದು ಹೇಳಿಬಿಡಲೇ?'
'ಇದರಿಂದ ನಿನಗೇನು ಲಾಭ? ಅವನಿಗೇನು ಲಾಭ?' ನಾನು ಕೇಳಿದೆ.
'ನನಗಾಗುವ ಲಾಭವೆಂದರೆ, ನನ್ನ ಗೆಳೆಯನಿಗೆ ಮಾಡಿದ ಮೋಸಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡ ಹಾಗಾಗುತ್ತದೆ. ಈ ಪಾಪಪ್ರಜ್ಞೆಯಿಂದ ಹೊರಬರಬಹುದು. ಆದರೆ ಅವನು ಹೇಗೆ ತೆಗೆದುಕೊಳ್ಳುತ್ತಾನೋ ಎನ್ನುವ ಭಯ ಕಾಡುತ್ತದೆ' ಪ್ರಾಮಾಣಿಕವಾಗಿ ಹೇಳಿದ ಆತ.
'ನೀನು ಮೋಸ ಮಾಡಿ ಪಡೆದ ಹಣವನ್ನು ಹಿಂದಿರುಗಿಸಲು ಈಗ ನಿನಗೆ ಶಕ್ತಿಯಿದೆಯೇ?' ಕೇಳಿದೆ. 
'ದೇವರಾಣೆಗೂ ಇಲ್ಲ' ಎಂದು ದೇವರ ಮೇಲೆ ಆಣೆ ಹಾಕಿ ಸತ್ಯ ಹೇಳಿದ ಆತ. 

ಕೇಸ್ ೨
'ನಾನು ಇಬ್ಬರು ಹುಡುಗಿಯರೊಂದಿಗೆ ಅಫೇರ್ ಇಟ್ಟುಕೊಂಡಿದ್ದೆ. ಈಗ ಮದುವೆಗೆ ಹೆಣ್ಣು ನೋಡುತ್ತಿದ್ದಾರೆ. ಆಕೆಗೆ ಈ ವಿಷಯವನ್ನು ಮೊದಲೇ ಹೇಳಿದರೆ ಒಳಿತಲ್ಲವೇ?' ಒಬ್ಬಾತ ಕೇಳುತ್ತಾನೆ. ಇಂತಹದೇ ಪ್ರಶ್ನೆಯನ್ನು ಒಬ್ಬಾಕೆಯೂ ಕೇಳುತ್ತಾಳೆ. ಇನ್ನು ಕೆಲವರು ಮದುವೆಯಾದ ನಂತರ ಇಂತಹದೇ ಪ್ರಶ್ನೆಯನ್ನು ಕೇಳುತ್ತಾರೆ. 
'ನಿಮಗೇನು ಲಾಭ ಇದರಿಂದ?' ಎಂದು ಕೇಳಿದರೆ 'ಮುಂದೆ ಎಂದಾದರೂ ಅವರಿಗೆ ತಿಳಿದಲ್ಲಿ ಇದನ್ನು ವಂಚನೆಯೆಂದು ತಿಳಿಯಬಹುದಲ್ಲವೇ?' ಎನ್ನುತ್ತಾರೆ. 

ಕೇಸ್ ೩
'ನನಗೊಂದು ವಿಲಕ್ಷಣ ಕಾಯಿಲೆ ಇದೆ. ಮದುವೆಗೆ ಮುನ್ನ ಇದನ್ನು ತಿಳಿಸುವುದು ಒಳಿತಲ್ಲವೇ?' ಗಂಡಾಗಲೀ, ಹೆಣ್ಣಾಗಲೀ ಕೆಲವೊಮ್ಮೆ ಕೇಳುವ ಪ್ರಶ್ನೆ. 

ನಾನು ಇವರಿಗೆ ನೀಡಿದ/ನೀಡುವ ಉತ್ತರವನ್ನು ಹೇಳುವ ಮೊದಲು, ನೀವು ಈ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸುತ್ತೀರಿ? ದಯವಿಟ್ಟು ತಿಳಿಸಿ. ಮುಂದೊಮ್ಮೆ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತೇನೆ.   

Wednesday 27 November 2019

ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.- ಜೀವನದ ಕಟುಸತ್ಯಗಳು - 3

 ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.
        ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಕೆಲವು ಅನುಭವಗಳನ್ನು ಯಾರ ಬಳಿಯೂ ಹೇಳದೇ ಗುಟ್ಟಾಗಿಯೇ ಇಟ್ಟಿರುತ್ತಾರೆ. ಕಡೆ ಪಕ್ಷ ಒಂದಾದರೂ ಗುಟ್ಟನ್ನು ತನ್ನಲ್ಲಿಯೇ ಬಚ್ಚಿಟ್ಟುಕೊಂಡಿರುತ್ತಾರೆ. ಆ ಗುಟ್ಟು ಅವರ ಸಾವಿನೊಂದಿಗೆ ಸತ್ತು ಹೋಗುತ್ತದೆ ! 

ಯಾಕೆ ಈ ಗುಟ್ಟು ? 
        ಆ ಗುಟ್ಟಿನ ಹಿಂದೆ ಒಂದು ಅವಮಾನ, ಅನೈತಿಕತೆ, ಕೀಳರಿಮೆ, ತಾವು ಮಾಡಿದ ಮೋಸ ಅಥವಾ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡ ಯಾವುದಾದರೂ ಒಂದು ತಪ್ಪಿತಸ್ಥ ಭಾವನೆ ಇರಬಹುದು. ಈ ರೀತಿ ಯಾರಿಗೂ ಹೇಳದೇ ಗುಟ್ಟಾಗಿ ಇಟ್ಟುಕೊಳ್ಳುವುದು ಸರಿಯೇ? ನನ್ನ ಪ್ರಕಾರ ಸರಿ. ಏಕೆಂದರೆ ಇಂತಹ ಗುಟ್ಟನ್ನು ರಟ್ಟು ಮಾಡಿಕೊಳ್ಳುವುದರಿಂದ, ಲಾಭಕ್ಕಿಂತ ನಷ್ಟವೇ ಜಾಸ್ತಿ. 
        ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು? ಯಾವುದು ಪಾಪ, ಯಾವುದು ಪುಣ್ಯ?  ಈ ತುಲನಾತ್ಮಕ ವಿಷಯಕ್ಕೆ ಸರಿಯಾದ ತಕ್ಕಡಿ ಇಲ್ಲ. ಅದು ಸಮಾಜ, ನಾಗರಿಕತೆಗಾಗಿ ಸೃಷ್ಟಿಸಿಕೊಂಡ ನಿಯಮಗಳಾಗಿರುತ್ತವೆ. ಅವು ದೇಶ, ಕಾಲ, ನಿಮಿತ್ತಗಳಿಗೆ ಅನುಗುಣವಾಗಿರುತ್ತವೆ. ಒಂದು ದೇಶದಲ್ಲಿ 'ಸರಿ' ಎನ್ನಿಸಿಕೊಳ್ಳುವುದು, ಇನ್ನೊಂದು ದೇಶದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಒಂದು ಕಾಲದಲ್ಲಿ 'ಸರಿ' ಎನ್ನಿಸಿಕೊಂಡಿರುವುದು ಮತ್ತೊಂದು ಕಾಲದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಅಂತೆಯೇ ಈ ಕಾರಣಕ್ಕೆ 'ತಪ್ಪು' ಎಂದುಕೊಂಡಿರುವುದು ಆ ಕಾರಣಕ್ಕೆ 'ಸರಿ' ಎಂದೂ ಆಗಬಹುದು. ಆದರೆ ವಿಜ್ಞಾನಕ್ಕೆ ಇದಾವುದೂ ಗೊತ್ತಿಲ್ಲ. ಅದು ತನ್ನ ನಿಯಮಗಳನ್ನು ಮಾತ್ರ ಹೇಳುತ್ತದೆ. ವಿಷಯ ಹೀಗಿರುವಾಗ ಇದು 'ಸರಿ' ಅದು 'ತಪ್ಪು' ಎಂದು ಹೇಳಲು ಸಾಧ್ಯವಿಲ್ಲ. 

ಆದರೆ... 
ನಾವು ಈ ಕಾಲದಲ್ಲಿ, ಈ ಸಮಾಜದಲ್ಲಿ ಬದುಕುತ್ತಿರುವುದರಿಂದ, ಈ ಸಮಾಜದ ನಿಯಮಗಳಿಗೆ ನಾವು ತಲೆ ಬಾಗಬೇಕಾಗುತ್ತದೆ. ಅದು ಸಮಾಜ ಬಯಸುವ ನೈತಿಕತೆಯ ವಿಷಯವಾಗಲೀ, ಸಮಾಜ ಸೃಷ್ಟಿಸಿದ ಕಾನೂನಿನ ಚೌಕಟ್ಟಿನ ವಿಷಯವಾಗಲೀ ಇದಕ್ಕೆ ನಾವು ವಿರುದ್ಧವಾಗಿ ಹೋದಾಗ ಅದಕ್ಕೆ ತಕ್ಕ ಬೆಲೆ ತೆರಬೇಕಾಗಬಹುದು. ಆದ್ದರಿಂದ, ಆದಷ್ಟು ಈ ಚೌಕಟ್ಟಿನೊಳಗೆ ಜೀವನ ಸಾಗಿಸುವುದು ಅತ್ಯಂತ ಸುರಕ್ಷಿತ ಹಾದಿ. ಆದರೆ 'ಕದ್ದು ತಿನ್ನುವುದರಲ್ಲಿ ಸಿಹಿ ಜಾಸ್ತಿ' ಎಂಬ ಗಾದೆಯಂತೇ ಅದರಲ್ಲಿ ಸಿಗುವ ರೋಮಾಂಚನ ಹಾಗೂ ಪುಳಕ, ಅಂತಹ ಸಾಮಾಜಿಕ/ಅನೈತಿಕ ಅಪರಾಧಗಳನ್ನು ಮಾಡುವಂತೆ ಮನಸ್ಸು ಕುಮ್ಮಕ್ಕು ಕೊಡುತ್ತದೆ. ಬಾಲ್ಯದಲ್ಲಿ ಹಣವನ್ನು ಕದ್ದು ತಿಂಡಿ ತಿನ್ನುವುದು, ಸುಳ್ಳು ಹೇಳುವುದು,  ಯೌವನದಲ್ಲಿ ಆಕರ್ಷಣೆಗೆ ಒಳಗಾಗಿ ಗಂಡು ಹೆಣ್ಣು ಪರಸ್ಪರ ಸೆಳೆತಕ್ಕೆ ಒಳಗಾಗಿ ಸಮಾಜ 'ನೀತಿಬಾಹಿರ' ಎಂದು ಕರೆಯುವ ಕೆಲಸಗಳನ್ನು ಮಾಡಲು ಹಾತೊರೆಯುವುದು, ಜೀವನ ರೂಪಿಸಿಕೊಳ್ಳಬೇಕಾದ ಸಮಯದಲ್ಲಿ ಹಣ ಸಂಪಾದಿಸಲು ಮೋಸ, ಅನ್ಯಾಯ, ವಂಚನೆಗಳನ್ನು ಮಾಡಲು ಮನ ಈಡಾಗುವುದು.... ಹೀಗೆ ಆಯಾ ವಯಸ್ಸಿಗನುಗುಣವಾಗಿ 'ತಪ್ಪು' ಅಥವಾ 'ಪಾಪ' ಎಂದು ಸಮಾಜ ಕರೆದಿರುವ ಕಾರ್ಯಗಳನ್ನು ಮಾಡಲು ಮುಂದಾಗುತ್ತಾರೆ. 
        ಇವುಗಳಲ್ಲಿ ಯಾವುದಾದರೂ ವಿಷಯಕ್ಕೆ ನಾವೇ ಬಲಿಯಾದಾಗ ಹಾಗೂ ಅದರಲ್ಲಿ ನಾವು ಏನನ್ನಾದರೂ ಕಳೆದುಕೊಂಡಾಗ ಒಂದಷ್ಟು ಪಶ್ಚಾತ್ತಾಪ ಪಡುವ ಸಾಧ್ಯತೆ ಇದೆ. ಅದಲ್ಲದೇ ಈ ವಿಷಯ ಬೇರೆಯವರಿಗೆ ತಿಳಿದರೆ ನನ್ನ ಬಗ್ಗೆ ಕೀಳಾಗಿ ಅಥವಾ ಲಘುವಾಗಿ ನೋಡಬಹುದು, ನನ್ನನ್ನು ಗೇಲಿ ಮಾಡಬಹುದು, ನನಗೆ ಈಗಿರುವ ಮರ್ಯಾದೆಗೆ ಭಂಗ ಬರಬಹುದು ಮುಂತಾದ ಭಾವನೆಗಳಿಂದ ಅದನ್ನು ಸಾಯುವವರೆಗೂ ಗುಟ್ಟಾಗಿಯೇ ಇಟ್ಟಿರಲು ಬಯಸುತ್ತಾರೆ.
        ಕೆಲವು ಇಕ್ಕಟ್ಟಿನ ಸಮಯದಲ್ಲಿ ತನ್ನಲ್ಲಿ ಗುಪ್ತವಾಗಿ ಇಟ್ಟುಕೊಂಡಿರುವ ಈ ಗುಟ್ಟನ್ನು ಹೇಳಿಬಿಡಲೇ? ಹೇಳದಿದ್ದರೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿದಂತಾಗುವುದಲ್ಲವೇ? ಇಂತಹ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಬಳಿ ಬಂದವರಿಗೆ ನಾನು ಹೇಳುವ ಮಾತುಗಳೇನು ? 
......ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

Monday 25 November 2019

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. - ಜೀವನದ ಕಟುಸತ್ಯಗಳು - 2

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. 
        ಸಣ್ಣ ಪುಟ್ಟ ಸೋಲುಗಳನ್ನು ನಾವು ಜೀರ್ಣಿಸಿಕೊಳ್ಳುತ್ತೇವೆ. ನಮ್ಮ ಸೋಲಲ್ಲದೇ, ನಮ್ಮವರ ಸೋಲನ್ನು, ಬೇಸರವಾದರೂ ಸಹಿಸಿಕೊಳ್ಳುತ್ತೇವೆ. ಉದಾಹರಣೆಗೆ ನಾವು ಯಾವುದಾದರೂ ಕ್ರೀಡೆಗಳಲ್ಲಿ ಸೋತಾಗ 'ಛೆ! ಇನ್ನೊಂದು ಸ್ವಲ್ಪ ಚೆನ್ನಾಗಿ ಆಡಿದ್ರೆ ಗೆಲ್ತಿದ್ದೆ' ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ಕ್ರಿಕೆಟ್ ಆಡುವಾಗ ನಮ್ಮ ತಂಡ ಇತರ ದೇಶದ ತಂಡಕ್ಕೆ ಸೋತಾಗ 'ನಮ್ಮವರೂ ಚೆನ್ನಾಗಿಯೇ ಆಡಿದ್ರು, ಅದೃಷ್ಟ ಕೈಕೊಡ್ತು' ಎಂದೆಲ್ಲಾ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇವೆ. ಅತಿರೇಕದ ಕೆಲವು ಉದಾಹರಣೆಗಳು ಕಾಣ ಸಿಗುವುದೂ ಉಂಟು. 
        ದೊಡ್ಡ ಮಟ್ಟದ ಸೋಲು,ಜೀವನದ ದೆಸೆಯನ್ನೇ ಬದಲಿಸುವಂತಹ ಸೋಲು, ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ನೋವಿನ ಬೇಗುದಿಯನ್ನು ನೀಡುವಂತಹ ಸೋಲಿನಿಂದ ಹೊರಬರುವುದು ಹೇಗೆ? ಇಂತಹ ಸೋಲುಗಳ ಹಿಂದೆ ಅವಮಾನ, ಅನ್ಯಾಯ, ಮೋಸ, ತಪ್ಪಿತಸ್ಥ ಭಾವನೆ ಮುಂತಾದ ಕಾರಣಗಳಿರುತ್ತವೆ. ಅದರಲ್ಲೂ ತನ್ನದೇನೂ ತಪ್ಪಿಲ್ಲದಿರುವಾಗ ಈ ಸೋಲು ಗಾಢವಾದ ನೋವಿನ ತರಂಗಗಳನ್ನು ಎಬ್ಬಿಸುತ್ತವೆ. ಉದಾಹರಣೆಗೆ ಎಲ್ಲರ ಮುಂದೆ ಕೀಳಾಗಿ ಕಂಡು, ಎಲ್ಲರ ಗೇಲಿಗೆ ತುತ್ತಾಗುವಂತಹ ಅವಮಾನಗಳು. ನಂಬಿದ ಮಂದಿಯಿಂದಾಗಿ ಆರ್ಥಿಕ ನಷ್ಟವನ್ನು ಅನುಭವಿಸುವಂತಹ ಅನ್ಯಾಯ. ಮನಸ್ಸಿನೊಡನೆ ಆಟವಾಡಿ ಅಥವಾ ಪ್ರೀತಿಯ ನಾಟಕವಾಡಿ ಕೈ ಕೊಟ್ಟ ಮೋಸದ ಪ್ರಸಂಗಗಳು. ತಾವೇ ಯಾರಿಗಾದರೂ ಮೋಸ ಮಾಡಿ, ಅವರು ನರಳುವಂತೆ ಮಾಡಿದಾಗ ಮೂಡುವ ತಪ್ಪಿತಸ್ಥ ಭಾವನೆ. ಇಂತಹ ನೋವುಗಳು ಜೀವನದ ಕೊನೆಯ ಉಸಿರಿರುವವರೆಗೂ ಕಾಡುವುದುಂಟು. 

ನೀವು ಇಂತಹ ಯಾವುದಾದರೂ ನೋವಿನಿಂದಾಗಿ ಬಳಲುತ್ತಿದ್ದೀರಾ? 
       ನಿಲ್ಲಿ! ಒಂದು ಕ್ಷಣ ಯೋಚಿಸಿ. ಜೀವನ ಅಷ್ಟೇ ಅಲ್ಲ. ಅದು ಜೀವನದಲ್ಲಿ ನಡೆದ ಒಂದು ಕೆಟ್ಟ ಘಟನೆ. ಮೋಸಗಾರರು ತುಂಬಿದ್ದರೂ, ಈ ಜಗತ್ತಿನಲ್ಲಿ 
ಒಳ್ಳೆಯವರೂ ಇದ್ದಾರೆ. ನಿಮ್ಮನ್ನು ಇಷ್ಟ ಪಡುವವರು, ನಿಮ್ಮ ಬಗ್ಗೆ ಕಾಳಜಿ ಇರುವವರು ನಿಮ್ಮ ಉನ್ನತಿಯನ್ನು ಬಯಸುವವರು ನಿಮಗೆ ಸಿಕ್ಕೇ ಸಿಗುತ್ತಾರೆ. ಆದ್ದರಿಂದ ಜಗತ್ತನ್ನು ಹಾಗೂ ಜೀವನವನ್ನು ದ್ವೇಷಿಸಬೇಡಿ. ಪ್ರಪಂಚ ವಿಶಾಲವಾಗಿದೆ. ನೀವು ಸೋಲುಂಡ ಎಲ್ಲ ಘಟನೆಗಳು ಕಳೆದು ಹೋದ ಕಾಲಘಟ್ಟದಲ್ಲಿರುತ್ತವೆ. ನಿಮ್ಮ ಇಂದಿನ ದುಃಸ್ಥಿತಿಗೆ ನೀವು ಕಳೆದುಹೋದ ಘಟನೆಗಳನ್ನು ಮೆಲುಕು ಹಾಕುತ್ತಿರುವುದೇ ಕಾರಣವಾಗಿರುತ್ತದೆ. ನಿಮ್ಮ ನಾಳೆ ಸಧೃಢವಾಗಿ ಉತ್ತಮವಾಗಿ ಇರಬೇಕೆಂದರೆ, ನೀವು ಈ ಯೋಚನೆಗಳಿಗೆ ಕಡಿವಾಣ ಹಾಕಲೇ ಬೇಕು. 

ಇನ್ನೆಷ್ಟು ಕೊರಗುವಿರಿ?
        ಸಾಕು ! ಸೋಲಿನಿಂದಾದ ನಷ್ಟವನ್ನು ಅನುಭವಿಸಿದ್ದು ಸಾಕು. ಅದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆ ನಷ್ಟವನ್ನು ಹತ್ತು ಪಟ್ಟು, ನೂರು ಪಟ್ಟು ಮಾಡಿ ಕೊಳ್ಳುವುದು ಬೇಡ. ನೀವು ಸೋತ ಕ್ಷಣಗಳೇ ನಿಮ್ಮ ಸೋಲಲ್ಲ. ನೀವು ಅದನ್ನು ಮೆಲುಕು ಹಾಕುತ್ತಿರುವುದೇ ನಿಜವಾದ ಸೋಲು. ತಪ್ಪು ಮಾಡಿದ್ದು ಒಂದು ಸೋಲಾದರೆ, ತಪ್ಪಿತಸ್ಥ ಭಾವನೆಯಲ್ಲಿ ನರಳುವುದು ದೊಡ್ಡ ಸೋಲು. ಮನಸ್ಸನ್ನು ಕೆಡಿಸುವ ಇಂತಹ ನೋವಿನ ಹತಾಶ ಭಾವನೆಗಳು ನಿಮ್ಮನ್ನು ಮನೋವ್ಯಾಧಿಗೆ ತುತ್ತಾಗದಂತೆ ನೋಡಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲೇ ಇದೆ. ನಿಮ್ಮ ಮನಸ್ಸು ಸರ್ವಶಕ್ತ. ಮನೆಯಲ್ಲಿ ತುಂಬಿರುವ ಕಸವನ್ನು ಗುಡಿಸಿ ಹೇಗೆ ಹೊರಗೆ ಹಾಕುವಿರೋ ಹಾಗೆಯೇ ಮನಸ್ಸಿನಲ್ಲಿ ತುಂಬಿರುವ ಆ ಕಸವನ್ನು ಹೊರಗೆ ಹಾಕಿ. 
         ನಿಮ್ಮ ಮನಸ್ಸಿನೊಡನೆ ಮಾತನಾಡಿ. 'ಓ ನನ್ನ ಸರ್ವಶಕ್ತ ಮನಸ್ಸೇ, ಈ ಕಸವು ನನಗೆ ಬೇಡ. ಇದರಿಂದ ನನಗೆ ವಿಮುಕ್ತಿ ಕೊಡು. ಹೊಸ ಹೊಸ ಉತ್ಸಾಹಭರಿತ, ಉಲ್ಲಾಸಭರಿತ ಯೋಚನಾಲಹರಿಯನ್ನು ನನ್ನಲ್ಲಿ ತುಂಬು' ಹೀಗೆ ಪದೇ ಪದೇ ನಿಮ್ಮ ಮನಸ್ಸಿಗೆ ಹೇಳಿಕೊಳ್ಳುತ್ತಲಿರಿ. ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಇದೇ ಮಾತನ್ನು ನೀವು ದೇವರ ಬಳಿಯೂ ಕೇಳಿಕೊಳ್ಳಬಹುದು. ನಂತರದ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಆಗುವ ಮಹತ್ತರ ಬದಲಾವಣೆಗಳಿಗೆ ಎದುರು ನೋಡುತ್ತಿರಿ ಹಾಗೂ ಚಂದದ ಜೀವನವನ್ನು ಅನುಭವಿಸಿ.  

ಸರ್ವೇಜನಾಃ ಸುಖಿನೋ ಭವಂತು. 





Saturday 23 November 2019

ಜೀವನದಲ್ಲಿ ಸೋಲುವ ಕ್ಷಣಗಳು - ಜೀವನದ ಕಟುಸತ್ಯಗಳು - 1


ಜೀವನದಲ್ಲಿ ಸೋಲುವ ಕ್ಷಣಗಳು  
        ಕೆಲವು ಸತ್ಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ನಮ್ಮ ನಿಯಮಿತ ಅರಿವು, ಭರವಸೆಯ ಮೇಲೆ ನಿಂತಿರುವ ಬದುಕು ಹಾಗೂ ನಮ್ಮ ಮನಸ್ಸಿನ ಸ್ವ-ಸಮರ್ಥಿಸುವ ಗುಣದಿಂದಾಗಿ  ಕೆಲವು ಸತ್ಯಗಳನ್ನು ಅದು ಒಪ್ಪಿಕೊಳ್ಳಲು ಬಯಸುವುದಿಲ್ಲ. ಜೀವನದಲ್ಲಿ ಸೋತು, ನನ್ನ ಬಳಿ ಬಂದು ತಮ್ಮ ನೋವನ್ನು ತೋಡಿಕೊಂಡಾಗ ನಾನು ಗ್ರಹಿಸಿದ ಅನಿಸಿಕೆಗಳನ್ನು ಈ ಮೊದಲನೆಯ ಕಂತಿನಲ್ಲಿ ಹಂಚಿಕೊಳ್ಳುತ್ತೇನೆ. 
        ಜೀವನದುದ್ದಕ್ಕೂ ಬರೀ ಗೆಲುವು ಅಥವಾ ಯಶಸ್ಸನ್ನೇ ಕಾಣಲಾಗುವುದಿಲ್ಲ. ಸೋಲನ್ನು ಕೂಡಾ ಅನುಭವಿಸಬೇಕಾದ ಅನಿವಾರ್ಯತೆ ಬಂದೇ ಬರುತ್ತದೆ. 'ಬೇಕು' ಎಂದುಕೊಳ್ಳುವ ಗೆಲುವು ಸಿಗದಿದ್ದರೂ, 'ಬೇಡ' ಅನ್ನುವ ಸೋಲು ಮಾತ್ರ ಎಲ್ಲರಿಗೂ ಸಿಗುತ್ತದೆ. ಸೋಲಿನ ಮಟ್ಟ ಕಿರಿದಾಗಿರಬಹುದು ಅಥವಾ ಹಿರಿದಾಗಿರಬಹುದು, ಆದರೆ ಸೋಲನ್ನು ಒಪ್ಪಿಕೊಳ್ಳಬೇಕಾಗುವುದಂತೂ ಸತ್ಯ. ಈಗ ಸೋಲಿನ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನು ಮಾಡೋಣ. 
        'ಸೋಲು' ನಮಗೆ ಹತಾಶೆ,ನಿರಾಶೆ, ನೋವು ಇತ್ಯಾದಿ ಮಾನಸಿಕ ತುಮುಲಗಳಿಗೆ ಹಾದಿ ಮಾಡಿಕೊಡುತ್ತದೆ. ಗೆಲುವು ತನ್ನದೆಂದು ಬೀಗುವ ಮನುಷ್ಯ ಸೋಲಿಗೆ ಇತರರನ್ನು ದೂಷಿಸುತ್ತಾನೆ. 

ಸೋಲಿಗೆ ಕಾರಣಗಳೇನು ?  
        ಗೆಲುವಿಗೆ ಒಮ್ಮೊಮ್ಮೆ ಅದೃಷ್ಟ ಕಾರಣವಾದರೆ, ಸೋಲಿಗೆ ದುರಾದೃಷ್ಟ ಕಾರಣವಾಗಿರುತ್ತದೆ. ಅಂದ ಮಾತ್ರಕ್ಕೆ ನಮ್ಮೆಲ್ಲ ಸೋಲುಗಳನ್ನು ದುರಾದೃಷ್ಟದ ಮೇಲೆ ಹೊರಿಸಲಾಗುವುದಿಲ್ಲ. ಬಹುತೇಕ ನಮ್ಮ ಸೋಲಿಗೆ  ನಾವೇ ಕಾರಣಕರ್ತರಾಗಿರುತ್ತೇವೆ. ನಾವು ಮಾಡಿರಬಹುದಾದ ತಪ್ಪುಗಳು, ನಮ್ಮ ಆಲಸ್ಯತನ, ನಮ್ಮ ತಪ್ಪು ಗ್ರಹಿಕೆ, ನಮ್ಮಿಂದಾದ ಕಡೆಗಣನೆ.. ಹೀಗೆ ಹತ್ತು ಹಲವು ಕಾರಣಗಳಿರಬಹುದು. ಬಹುತೇಕ ನಾವೇ ಮಾಡಿರಬಹುದಾದ ತಪ್ಪುಗಳನ್ನು ನಾವು  ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಪ್ರಕಾರ ನಾವು ತಪ್ಪು ಮಾಡದವರು, ಬುದ್ಧಿವಂತರು, ನಿರಪರಾಧಿಗಳು,ವಿವೇಕಿಗಳು... ಎಂದೆಲ್ಲಾ ಅಂದುಕೊಂಡಿರುತ್ತೇವೆ. ಬೇರೆಯವರ ಮೇಲೆ ತಪ್ಪು ಹೊರಿಸುವುದರಲ್ಲಿ ನಾವು ನಿಷ್ಣಾತರಾಗಿರುತ್ತೇವೆ. ಏಕೆಂದರೆ ನಮ್ಮ ಮನಸ್ಸಿನ ಸ್ವ-ಸಮರ್ಥನಾಗುಣ ನಮ್ಮನ್ನು ಎಲ್ಲಾ ವಿಷಯದಲ್ಲಿ ರಕ್ಷಿಸುತ್ತಿರುತ್ತದೆ. 
        ನಿಧಾನವಾಗಿ ತೆರೆದ ಮನಸ್ಸಿನಿಂದ ಯೋಚಿಸಿದಾಗ ನಾವು ಎಲ್ಲಿ ಎಡವಿದ್ದೇವೆ ಎಂದು ಮನಗಾಣುತ್ತೇವೆ. ನಮ್ಮದೇ ಆದ ತಪ್ಪು ನಿರ್ಧಾರಗಳಿಂದಾಗಿ ಜೀವನವನ್ನು ಸಂಕೀರ್ಣಗೊಳಿಸಿಕೊಂಡಿರುತ್ತೇವೆ. ದುರಾದೃಷ್ಟದಿಂದಾಗುವ ಸೋಲಿಗೆ ನಾವು ಏನೂ ಮಾಡುವ ಪರಿಸ್ಥಿತಿಯಲ್ಲಿರುವುದಿಲ್ಲ. ಸೋಲನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಎಲ್ಲಾ ಸೋಲುಗಳನ್ನು ಚೆನ್ನಾಗಿ ಅವಲೋಕಿಸಿ, ವಿವೇಚಿಸಿದಾಗ ನಮ್ಮ ತಪ್ಪುಗಳು, ಅವಿವೇಕ ಮುಂತಾದವು ಎದ್ದು ಕಾಣುತ್ತವೆ. 

ಪೊಳ್ಳು ಸಮಾಧಾನಗಳು 
        'ಬೆಟರ್ ಲಕ್ ನೆಕ್ಸ್ಟ್ ಟೈಮ್' - ಯಾರಾದರೂ ಸೋತಾಗ ಬಹಳಷ್ಟು ಜನ ಹೇಳುವ ಮಾತಿದು. ಸೋತು ಸುಣ್ಣವಾದ ಮನುಷ್ಯ ಇದನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎನ್ನುವುದೇ ಪ್ರಶ್ನೆ. ಇತರರು ಪದೇ ಪದೇ ಆಡುವ ಈ ಮಾತುಗಳು ಅವನ ಸೋಲನ್ನು ಎತ್ತಿ ತೋರಿಸುತ್ತಲೇ ಇರುತ್ತವೆ. ಆತ ಜೀವನದಲ್ಲಿ ಸೋತಾಗಲೆಲ್ಲಾ ಈ ಮಾತುಗಳನ್ನು ಕೇಳುತ್ತಿರುತ್ತಾನೆ. ಆ 'ಬೆಟರ್ ಲಕ್' ಇರುವ 'ನೆಕ್ಸ್ಟ್ ಟೈಮ್' ಬಾರದೇ ಇರಲೂಬಹುದು. 
'ಸೋಲೇ ಗೆಲುವಿನ ಮೆಟ್ಟಿಲು' - ಅಪರೂಪದ ಕೆಲವು ಉದಾಹರಣೆಗಳನ್ನು ಬಿಟ್ಟರೆ ಈ ಮಾತುಗಳನ್ನು ಕೇಳಿ ಗೆದ್ದವರಿಲ್ಲ. ಸೋತು ಮೆಟ್ಟಿಲಾಗಿ ಎಲ್ಲರಿಂದಲೂ ತುಳಿಸಿಕೊಳ್ಳುತ್ತಲೇ ಇರುತ್ತಾರೆ. 
'ಸೋಲನ್ನು ಪಾಠವೆಂದು ತಿಳಿದುಕೋ' - ಈ ಮಾತನ್ನು ಸಾರಿ ಸಾರಿ ಹೇಳಿದರೂ, ಸೋತವರು ಮತ್ತದೇ ತಪ್ಪುಗಳನ್ನು ಮಾಡಿ ಸೋಲುತ್ತಲೇ ಇರುತ್ತಾರೆ. ಈ ರೀತಿಯ ಎಲ್ಲ ಮಾತುಗಳು ಪರೋಕ್ಷವಾಗಿ 'ನೀನು ಸೋತಿರುವೆ' ಎಂದು ಸಾರಿ ಹೇಳುತ್ತಿರುತ್ತವೆ.
        ಕೆಲವೊಮ್ಮೆ ಜೀವನದಲ್ಲಿ ಸೋಲನ್ನು ದೊಡ್ಡ ರೀತಿಯಲ್ಲಿ ಅನುಭವಿಸಬೇಕಾಗಬಹುದು. ಅದು ಜೀವನವನ್ನು ಅಲ್ಲಾಡಿಸಬಹುದು.ಅಂತಹವರಿಗ
ಮೇಲಿನ ಮಾತುಗಳೆಲ್ಲಾ ಪೊಳ್ಳು ಮಾತುಗಳಂತೆಯೇ ಕಾಣುತ್ತವೆ. ಏಕೆಂದರೆ ಆತ ಅನುಭವಿಸಿದ ಸೋಲಿನ ಕಾರಣಕರ್ತರು - ಆತ ನಂಬಿದ್ದ ಗೆಳೆಯ, ಸಂಬಂಧಿಕ,
ಪ್ರೇಮಿ ಅಥವಾ ಹಿತೈಷಿಗಳೇ ಆಗಿರುತ್ತಾರೆ. ನಂಬಿಕೆ ದ್ರೋಹವಾದಾಗ ಆಗುವ ಆಘಾತ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. 
        ಹೇಗಾದರೂ, ಎಂತಾದರೂ ಇಂತಹ ತೀವ್ರವಾಗಿ ಬಾಧಿಸುವ ಸೋಲಿನಿಂದ ಹೊರಬಂದವರು ಜಗತ್ತಿನಲ್ಲಿ ಅತ್ಯುನ್ನತ ಮಟ್ಟ ತಲುಪಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಸೋಲಿನಿಂದ ಹೊರಬರುವುದು ಹೇಗೆ? 
...ಮುಂದಿನ ಕಂತಿನಲ್ಲಿ   

Thursday 14 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 7

ನಕಾರಾತ್ಮಕ ಆಲೋಚನೆಗಳಿಂದ ಏಕೆ ಹಾಗೂ ಹೇಗೆ ಹೊರಬರಬೇಕು ? 
        ನಿಮ್ಮ ಮನಸ್ಸಿಗೆ ನಿಮ್ಮನ್ನು ನಿಮಗೆ ಬೇಕಾದುದೆಡೆಗೆ ಒಯ್ಯುವ ಶಕ್ತಿಯಿದೆ. ಅದು ನಿಮ್ಮ ಗುರಿಯಾಗಿರಲಿ ಅಥವಾ ನಿಮ್ಮ ಆಸೆ ಆಕಾಂಕ್ಷೆಗಳಾಗಿರಲಿ ಅಥವಾ ನಿಮ್ಮ ಮನೋವೇದನೆಯಿಂದ ಹೊರಬರುವುದಿರಲಿ, ನಿಮ್ಮ ಸುಪ್ತಮನಸ್ಸಿಗೆ ಅದನ್ನು ಸಾಕಾರಗೊಳಿಸುವ ಶಕ್ತಿಯಿದೆ. ಮನಸ್ಸನ್ನು ಆ ದಿಕ್ಕಿನೆಡೆಗೆ ಕೊಂಡೊಯ್ಯುವುದು ಹೇಗೆ? ......... 
        ನೆನಪಿರಲಿ! ನೀವು ಇಂದು ಮಾಡುವ ಆಲೋಚನೆಗಳು, ನೀವು ಮನಸ್ಸಿನಲ್ಲಿ ಇಂದು ಇಟ್ಟುಕೊಳ್ಳುವ ಆಲೋಚನೆಗಳು ಹಾಗೂ ನಿಮ್ಮಚಿಂತನೆಗಳು ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ. ನಮ್ಮನ್ನು ದೈಹಿಕವಾಗಿ ಯಾರಾದರೂ ಕಟ್ಟಿ ಹಾಕಬಹುದು ಆದರೆ ನಮ್ಮ ಮನಸ್ಸನ್ನು ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲ. ನನ್ನ ಮನಸ್ಸಿನ ಮೇಲೆ ನನಗಿರುವ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಿಮ್ಮನ್ನು ನೀವೇ ಒಂದು ಪ್ರಶ್ನೆ ಕೇಳಿಕೊಳ್ಳಿ. 'ನಾನು ಬಹಳಷ್ಟು ವೇಳೆ ಉತ್ಸಾಹದಿಂದ ಸಕಾರಾತ್ಮಕ ಯೋಚನೆಗಳಿಂದ ತುಂಬಿರುತ್ತೇನೆಯೇ? ಅಥವಾ
ಹಲವಾರು ಚಿಂತೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ನಕಾರಾತ್ಮಕ ಯೋಚನೆ ಗಳಲ್ಲಿ ಮುಳುಗಿರುತ್ತಿದ್ದೇನೆಯೇ? ಅಥವಾ ಇವೆರಡರ ಮಧ್ಯೆ ತೂಗಾಡುತ್ತಿರುವೆನೇ ? ತುಲನೆ ಮಾಡಿ ನಿಷ್ಪಕ್ಷಪಾತವಾಗಿ ಉತ್ತರ ನೀಡಿ.  ಒಂದು ವೇಳೆ ನೀವು ನಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೆ ನಿಮ್ಮ ಆಲೋಚನೆಗಳಿಂದ ಅಥವಾ ಚಿಂತೆಯಿಂದ ನಿಮಗೇನಾದರೂ ಲಾಭವಿದೆಯೇ ಎಂದು ಗಮನಿಸಿ. ನಿಮ್ಮ ಮನಸ್ಸಿಗೆ ನೋವು, ತೊಂದರೆ ಹಾಗೂ ಕಿರಿಕಿರಿ ಉಂಟು ಮಾಡುವ ಆಲೋಚನೆಗಳನ್ನು ತಡೆಯಿರಿ, ಸಾಧ್ಯವಾದರೆ ಕಿತ್ತೊಗೆಯಿರಿ. ಕೋಪದಿಂದಲೋ, ಅವಮಾನದಿಂದಲೋ ಅಥವಾ ದ್ವೇಷದಿಂದಲೋ ನಕಾರಾತ್ಮಕ ಭಾವನೆಗಳು ಮೊಳಕೆಯೊಡೆದಿರಬಹುದು. ಏನನ್ನೂ ಸಾಧಿಸದೆ ಕೇವಲ ನಿಮ್ಮ ಮನಃಶಾಂತಿಯನ್ನು ಹಾಳುಗೆಡಹುವ ಇಂತಹ ಆಲೋಚನೆಗಳಿಂದ
ನಿಮಗೆ ಯಾವ ಪ್ರಯೋಜನವೂ ಇಲ್ಲ ಎನ್ನುವುದನ್ನು ಮನಗಾಣಿ. ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಆಲೋಚನೆಗಳನ್ನು ತಡೆಯಲು ಪ್ರಯತ್ನಿಸಿ. ಕಹಿನೆನಪು ಅಥವಾ ನಕಾರಾತ್ಮಕ ಆಲೋಚನೆಗಳು ಬಂದೊಡನೆ ಮನಸ್ಸಿನ ಭಾವನೆಗಳನ್ನು ವಿಷಯಾಂತರಿಸಿ. ನಿಮಗೆ ಖುಷಿ ಕೊಟ್ಟ ಅಥವಾ ಖುಷಿ ನೀಡುವ ವಿಷಯಗಳ ಬಗ್ಗೆ ಗಮನ ಹರಿಸಿ.ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳಿ. ಮನಸ್ಸಿನ ಭಾವನೆಗಳು ನಿಮ್ಮ ಜೀವನವನ್ನು ರೂಪಿಸುತ್ತವೆ. ನೀವು ನಕಾರಾತ್ಮಕ ವಾಗಿ ಯೋಚಿಸಿದಾಗೆಲ್ಲ ಅದು ಅರೆಪ್ರಜ್ಞಾಮನಸ್ಸಿನ ಮೇಲೆ ಮುದ್ರೆಯೊತ್ತುತ್ತಲೇ ಇರುತ್ತದೆ. ಅದು ಗಾಢವಾಗುತ್ತಿದ್ದಂತೆ ದುಃಖ ದುಮ್ಮಾನಗಳು ಉದ್ಭವಿಸುತ್ತವೆ. ಇದು ದೀರ್ಘಕಾಲ ಮುಂದುವರೆಯುತ್ತಿದ್ದಂತೆ ಅದು ಮನೋರೋಗವಾಗಿ ಪರಿ ವರ್ತಿತವಾಗುತ್ತದೆ. ಭಯ, ಆತಂಕ, ಖಿನ್ನತೆ ಇತ್ಯಾದಿ ಮನೋರೋಗಗಳಿಗೆ ಅದು ಎಡೆ ಮಾಡಿಕೊಡುತ್ತದೆ.ರಾತ್ರಿ ಮಲಗುವಾಗ ಕಳೆದುಹೋದ ಅಥವಾ ಅನುಭವಿಸಿದ ನೋವು, ಅವಮಾನ, ಬೇಸರದ ಸಂಗತಿಗಳನ್ನು ನೆನಪಿಸಿಕೊಳ್ಳುತ್ತಾ ಮಲಗಬೇಡಿ. ನೀವು ಪದೇ ಪದೇ ನೆನೆಸಿಕೊಂಡರೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ ಗಾಢವಾದ ಪರಿಣಾಮ ಬೀರುತ್ತಿರುತ್ತದೆ. ನಂತರ ಅದರಿಂದ ಹೊರಗೆ ಬರುವುದು ಕಷ್ಟ ವಾಗುತ್ತದೆ. ಆದ್ದರಿಂದ ನಿಮ್ಮ ಉನ್ನತಿಗೆ ಹಾಗೂ ನಿಮ್ಮ ಮಾನಸಿಕ ಆರೊಗ್ಯಕ್ಕೆ ನೀವು ಸ್ವಲ್ಪ ಸಮಯವನ್ನು ಮೀಸಲಾಗಿಡಲೇಬೇಕು. ಸುಪ್ತಮನಸ್ಸಿನೊಂದಿಗೆ ಮಾತನಾಡಲು ಕಲಿಯಿರಿ. ನಿಮಗೆ ಬೇಡವಾದ ವಿಷಯವನ್ನು ನನಗಿದು ಬೇಡ ಎಂದು ಸ್ಪಷ್ಟವಾಗಿ ಹೇಳಿ. ನಿಮಗೆ ನೀವೇ ಕೆಲವೊಮ್ಮೆ ಸಮಾಧಾನ ಮಾಡಿಕೊಳ್ಳಿ. ನಿಮ್ಮ ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸು ಒಟ್ಟಾಗಿ ಕೆಲಸ ಮಾಡಿ ನಿಮ್ಮನ್ನು ರೂಪಿಸಿವೆ. ತನ್ಮೂಲಕ ನಿಮ್ಮಲ್ಲಿರುವ ಭಾವನೆಗಳು, ನಂಬಿಕೆಗಳು,ದೃಷ್ಟಿ ಕೋನಗಳು, ಅಭಿಪ್ರಾಯಗಳು ಹಾಗೂ ನಿಮ್ಮ ನಡವಳಿಕೆಗಳನ್ನು ರೂಪಿಸಿವೆ. ಹೀಗೆ ರೂಪಿಸುವಾಗ ನಕಾರಾತ್ಮಕ ವಿಷಯಗಳು ನಿಮ್ಮ ಮನಸ್ಸಿನಲ್ಲಿ ಮುದ್ರೆಯೊತ್ತಿದ್ದರೆ ಅದನ್ನು ಬದಲಿಸಲು ಅಥವಾ ದೂರ ಮಾಡಲು ನೀವು ಅರೆಪ್ರಜ್ಞಾ ಮನಸ್ಸನ್ನು  ರೂಪಾಂತರಿಸಬೇಕಾಗುತ್ತದೆ. (ರೀಪ್ರೋಗ್ರಾಮಿಂಗ್). ಕೇವಲ ನಕಾರಾತ್ಮಕ ವಿಶಯಗಳನ್ನು ದೂರ ಮಾಡುವುದಲ್ಲದೇ ನಿಮ್ಮ ಮನಸ್ಸನ್ನು ಆರೋಗ್ಯಕರವಾಗಿ, ಶಕ್ತಿಯುತವಾಗಿ ಹಾಗೂ ನಿಮ್ಮ ಗುರಿ ಮುಟ್ಟಲು ಒಯ್ಯುವಲ್ಲಿ ಕೂಡಾ ನೀವು ಮನಸ್ಸಿಗೆ ತರಬೇತಿ ನೀಡಬೇಕಾಗುತ್ತದೆ. ಅಂಗಸಾಧನೆಗಾಗಿ ವ್ಯಾಯಾಮ ಮಾಡುವಾಗ ಸಮಯ, ಅಭ್ಯಾಸ ಹಾಗೂ ತಾಳ್ಮೆ ಬೇಕಾಗುವಂತೆ ನಿಮ್ಮಲ್ಲಿ ಮಾನಸಿಕ ಬದಲಾವಣೆ ತರಬೇಕಾದರೂ ಸಮಯ, ಅಭ್ಯಾಸ ಹಾಗೂ ತಾಳ್ಮೆ ಬೇಕಾಗುತ್ತದೆ.

ಮನಸ್ಸಿನ ತರಬೇತಿ
ಪ್ರತಿದಿನ ಸ್ವಲ್ಪ ಸಮಯವನ್ನು ನೀವು ಇದಕ್ಕಾಗಿ ನೀಡಲೇಬೇಕು. ನಮ್ಮಬದುಕಿನಲ್ಲಿ ಬಹುತೇಕ ಸಮಯವನ್ನು ನಾವು ಇತರರಿಗಾಗಿ ವ್ಯಯಿಸುತ್ತೇವೆ. ಉದಾಹರಣೆಗೆ, ನಾನು ಕೆಲಸ ಮಾಡುತ್ತಿರುವ ಯಜಮಾನನಿಗಾಗಿ, ನನ್ನ ಕುಟುಂಬಕ್ಕಾಗಿ ಅಥವಾ ನನ್ನ ಗೆಳೆಯರ ಒಳಿತಿಗಾಗಿ. ಸಾಮಾಜಿಕ ಚೌಕಟ್ಟಿನಲ್ಲಿ ಇವೆಲ್ಲಾ ಅನಿವಾರ್ಯ ಹಾಗೂ ಲಾಭದಾಯಕ ಎನಿಸಿದರೂ ಗಮನಿಸಿ ನೋಡಿದಾಗ ಬಹಳಷ್ಟು ಸಮಯವನ್ನು ನಾವು ನಮ್ಮ ಸುತ್ತಮುತ್ತಲಿರುವ ನಮ್ಮವರಿಗಾಗಿ ವ್ಯಯಿಸುತ್ತಿರುತ್ತೇವೆ.
        ದಿನಂಪ್ರತಿ ಸುಮಾರು ಇಪ್ಪತ್ತು ನಿಮಿಷಗಳ ಮನಸ್ಸಿನ ತರಬೇತಿಯಿಂದ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಲು ಸಾಧ್ಯ. ದೈಹಿಕ ಸಾಧನೆಗೆ ದೈಹಿಕ ವ್ಯಾಯಾಮದ ಅಗತ್ಯವಿರುವಂತೇ ಮಾನಸಿಕ ಸಾಧನೆಗೆ ಅದರದ್ದೇ ಆದ ಮಾನಸಿಕ ವ್ಯಾಯಾಮಗಳಿವೆ. ಮನಸ್ಸಿನ ಸಾಧನೆ ಕೆಲವೊಮ್ಮೆ ದೈಹಿಕ ವ್ಯಾಯಾಮದ ಅಗತ್ಯವಿಲ್ಲದೆಯೇ ದೈಹಿಕ ಸಾಧನೆಯ ಪರಿಣಾಮಗಳನ್ನು ನೀಡಬಲ್ಲದು. ಬೇರೆ ಬೇರೆ ಮನಸ್ಥಿತಿಗೆ ಬೇರೆ ಬೇರೆ ತರಬೇತಿಯ ಅಗತ್ಯವಿದ್ದರೂ ಎಲ್ಲರೂ ಮಾಡಬಹುದಾದ ಮಾನಸಿಕ ತರಬೇತಿ ಕಾರ್ಯಕ್ರಮವನ್ನು ಸ್ಥೂಲವಾಗಿ
ವಿವರಿಸುತ್ತೇನೆ. 
        ಮನಸ್ಸಿನ ಶಕ್ತಿಯನ್ನು ಅರಿಯಲು ಹಾಗೂ ಅದರ ಉಪಯೋಗ ಪಡೆಯಲು ಮೊದಲನೆಯದಾಗಿ `ಸಂಕಲ್ಪ' ಮಾಡಿಕೊಳ್ಳಿ. ಸಂಕಲ್ಪ ಮಾಡಿಕೊಳ್ಳಲು  ನಿಮಗೆ ಆ ಬಗ್ಗೆ `ಬಯಕೆ' ಅಥವಾ `ಇಚ್ಛೆ' ಇರಬೇಕು. ನಿಮಗೆ ಏನು ಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ನಿಮ್ಮ ಬೇಡಿಕೆ/ಬಯಕೆ/ಗುರಿಯ ಕುರಿತಾದ ಅವಧಿ ಹಾಗೂ ಫಲ ಒಂದಳತೆಯ ಮಿತಿಯಲ್ಲಿರಲಿ.  ಆಗಿರಲಿ. ಉದಾಹರಣೆಗೆ ನಾಳೆ ಐವತ್ತುಲಕ್ಷ ರೂಪಯಿ ನನ್ನ ಬ್ಯಾಂಕ್ ಖಾತೆಯಲ್ಲಿರಬೇಕು ಅಥವಾ ಇನ್ನೊಂದು ವಾರದಲ್ಲಿ ನಾನು ಒಂದು ದೊಡ್ಡ ಮನೆಯ ಮಾಲೀಕನಾಗಬೇಕು.. ಹೀಗೆಂದುಕೊಂಡರೆ ಆಗುವುದಿಲ್ಲ. ಅದರ ಬದಲು ನಿಮ್ಮ ಪರಿಸ್ಥಿತಿ ಹಾಗೂ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಇನ್ನು ಮೂರು ಅಥವಾ ಐದುವರ್ಷಗಳಲ್ಲಿ ನನ್ನ ಖಾತೆಯಲ್ಲಿ ಐವತ್ತು ಲಕ್ಷ ರೂಪಾಯಿ ಇರುತ್ತದೆ ಎಂದುಕೊಳ್ಳಿ. ನಿಮಗೆ ಏನು ಬೇಕು ಎಂದು ಸಂಕಲ್ಪ ಮಾಡಿಕೊಂಡ ಮೇಲೆ ಆ ವಿಷಯದ ಬಗ್ಗೆ
ಆಳವಾಗಿ ಯೋಚಿಸಿ. ನಂತರ ಅದಕ್ಕೆ ಸಂಬಂಧಪಟ್ಟ ಇತರ ವಿಷಯಗಳನ್ನೂ ಸವಿಸ್ತಾರವಾಗಿ ಕಲ್ಪಿಸಿಕೊಳ್ಳಿ. ಉದಾಹರಣೆಗೆ: ನನ್ನದೇ ಆದ ಸ್ವಂತಮನೆಯೊಂದು ನನಗೆ ಬೇಕು ಎಂಬ ಬಯಕೆ ನಿಮ್ಮಲ್ಲಿದ್ದರೆ,ಇನ್ನು ಐದು ವರ್ಷಗಳಲ್ಲಿ ನಾನು ಮನೆಯೊಂದರ ಮಾಲೀಕನಾಗಿರುತ್ತದೆ. ಅದರ ವಿನ್ಯಾಸ ಹೀಗಿರುತ್ತದೆ. ಮನೆಯ ಮುಂದೆ ಒಂದು ತೋಟವಿರುತ್ತದೆ. ಸುತ್ತಮುತ್ತಲ ವಾತಾವರಣ ಹೀಗಿರುತ್ತದೆ..' ಹೀಗೆ ಸವಿಸ್ತಾರವಾಗಿ ಕಲ್ಪಿಸಿಕೊಳ್ಳಿ. 
        ನಿಮ್ಮ ಅರೆಪ್ರಜ್ಞಾಮನಸ್ಸಿನ ಜೊತೆ ಮಾತನಾಡಿ. ನಿಮ್ಮ ತೊಂದರೆ ಅಥವಾ ಬಯಕೆ ಏನೆಂದು ಅದಕ್ಕೆ ಹೇಳಿ. ಅರೆಪ್ರಜ್ಞಾಮನಸ್ಸಿನ ಜೊತೆ ಮಾತನಾದುವಾಗ ನಿಮ್ಮ ಮಾತು ಪ್ರಾಮಾಣಿಕವಾಗಿರಲಿ. ಯಾವುದೇ ಅಡ್ಡಗೋಡೆ ಇಲ್ಲದ ಹಾಗೆ ಮಾತು ಸ್ಪಷ್ಟವಾಗಿರಲಿ. ಉದಾಹರಣೆಗೆ, ಮುಲಾಜಿಗೆ ಒಳಗಾಗಿ ನಷ್ಟ ಅನುಭವಿಸುತ್ತಿದ್ದರೆ ಅದನ್ನು ಅರೆಪ್ರಜ್ಞಾಮನಸ್ಸಿಗೆ ಸ್ಪಷ್ಟವಾಗಿ ಹೇಳಿ. 'ನೋ' 
ಎಂದು ಹೇಳುವ ಬದಲು 'ಎಸ್' ಎಂದು ಹೇಳಿ ಸಿಕ್ಕಿ ಹಾಕಿಕೊಳ್ಳುತ್ತೇನೆ. ನಂತರ ಮನಸ್ಸಿಲ್ಲದಿದ್ದರೂ ಅವರೊಂದಿಗೆ ಸಮಯ ಕಳೆಯುತ್ತೇನೆ.ಅವರಿಗಾಗಿ ಸುಮ್ಮಸುಮ್ಮನೆ ನಗುತ್ತೇನೆ. ನನ್ನ ಸಮಯ ಹಾಗೂ ಹಣ ಎರಡನ್ನೂ ವ್ಯರ್ಥ ಮಾಡುತ್ತಿದ್ದೇನೆ'. ಜೊತೆಗೆ ನಾನೇಕೆ ಹಾಗೆ ಮಾಡುತ್ತಿದ್ದೇನೆ ಎಂದು ನಿಮ್ಮನ್ನೇ ಪ್ರಶ್ನಿಸಿ ಪ್ರಾಮಾಣಿಕವಾಗಿ ಕಾರಣವನ್ನು ಹುಡುಕಿ ಅರೆಪ್ರಜ್ಞಾಮನಸ್ಸಿಗೆ
ಹೇಳಿಕೊಳ್ಳಿ. `ಅವರ ಮುಂದೆ ಒಳ್ಳೆಯವನಾಗಲು ಪ್ರಯತ್ನ ಪಡುತ್ತಿದ್ದೇನೆ' ಅಥವಾ 'ಅವರಿಂದ ಮುಂದೆ ಏನಾದರೂ ಸಹಾಯ ಸಿಗಬಹುದೆಂದು ನಂಬಿಕೊಂಡಿದ್ದೇನೆ'. ನಿಮ್ಮ ಕಾರಣ ಸ್ಪಷ್ಟವಾಗಿರಲಿ. ಇನ್ನೊಂದು ಉದಾಹರಣೆ: ನೋಡಲು ಬಂದ ಗಂಡುಗಳನ್ನೆಲ್ಲಾ ಬೇಡ ಎಂದು ಹೇಳಿ ಆಮೇಲೆ ಪಶ್ಚಾತ್ತಾಪ ಪಡುವ ಹೆಣ್ಣು. ಯಾಕೆ ಹೀಗಾಗುತ್ತಿದೆ? ಯಾವುದು ನಾನು `ಹೂಂ' ಎನ್ನುವುದನ್ನು ತಡೆಯುತ್ತಿದೆ ಎನ್ನುವುದನ್ನು ಅರೆಪ್ರಜ್ಞಾಮನಸ್ಸನ್ನು ಕೇಳಿದಾಗ ಆಕೆಗೆ ಉತ್ತರ ಸಿಗುತ್ತದೆ. ಹೀಗೆ ಪದೇ ಪದೇ ನೀವು ಈ ಬಗ್ಗೆ ಕೇಳುತ್ತಿದ್ದಂತೆ ಒಂದಲ್ಲ ಒಂದು ರೀತಿಯಲ್ಲಿ ನಿಮಗೆ ಉತ್ತರ ಸಿಕ್ಕೇ ಸಿಗುತ್ತದೆ. 
        ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಲು ಅಥವಾ ನಮ್ಮ ಸಂಕಟಗಳಿಂದ ಅಥವಾ ವ್ಯಾಧಿಗಳಿಂದ ಹೊರತರಲು ಮನಸ್ಸಿಗಿರುವ
ಅತ್ಯಂತ ಶಕ್ತಿಶಾಲಿ ಆಯುಧದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ. 

Wednesday 13 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 6

ನಮ್ಮ ಸುತ್ತಲೂ ಇರುವ ನಕಾರಾತ್ಮಕ ಸಲಹೆ ನೀಡುವ ಜನರು. 
        ನನ್ನ ಜೀವನದ ಉದಾಹರಣೆಯೊಂದಿಗೆ ಹೇಳಬೇಕಾದರೆ ಕಾಲೇಜು ವ್ಯಾಸಂಗ ಮುಗಿಸಿದ ಮೇಲೆ ಕೆಲವಾರು ಕಡೆ ಕೆಲಸ ಮಾಡಿದೆ. ಸ್ವತಂತ್ರವಾಗಿ ಬದುಕುವ ಮನೋಭಾವ ರೂಢಿಸಿಕೊಂಡದ್ದರಿಂದ ಯಾರ ಕೈಕೆಳಗೂ ಕೆಲಸ ಮಾಡಲು ಮನಸ್ಸು ಒಪ್ಪಲಿಲ್ಲ. ಕೊನೆಗೆ ಸ್ವತಂತ್ರವಾಗಿ ವ್ಯಾಪಾರದಲ್ಲಿ ತೊಡಗುವ ಬಗ್ಗೆ ನಿರ್ಧರಿಸಿದೆ. ಹವ್ಯಾಸವಾಗಿದ್ದ ಫೋಟೋಗ್ರಫಿಯನ್ನು ನನ್ನ ವೃತ್ತಿಯಾಗಿ ಆಯ್ದುಕೊಂಡೆ. ಫೋಟೋ ಸ್ಟುಡಿಯೋಗಾಗಿ ಒಂದು ಜಾಗವನ್ನು ಹುಡುಕಿದೆ. ಹನುಮಂತನಗರದ ಮುಖ್ಯರಸ್ತೆಯೊಂದರಲ್ಲಿ ಒಂದು ಕಟ್ಟಡದ ಮೊದಲನೇ ಮಹಡಿಯಲ್ಲಿ ಒಂದು ದೊಡ್ಡ ಜಾಗ ಖಾಲಿ ಇತ್ತು. ವೃತ್ತಿಪರ ಸ್ಟುಡಿಯೋ ಮಾಡಲು 
ಎಲ್ಲ ಅನುಕೂಲಗಳು ಅಲ್ಲಿದ್ದವು. ಹನುಮಂತನಗರದ ಕೆಲವು ಗೆಳೆಯರ ಬಳಿ ಈ ಬಗ್ಗೆ ಪ್ರಸ್ತಾಪಿಸಿದೆ. 
        'ನೋಡು ಗುರು, ಇಲ್ಲಿ ಆ ಕಡೆ ಗುರುದತ್ ಸ್ಟುಡಿಯೋ ಇದೆ. ಪಾಸ್‍ಪೋರ್ಟ್ ಫೋಟೋಸ್‍ಗೆ ಅದು ಫೇಮಸ್ಸು. ಅಲ್ಲಿಂದ ಸ್ವಲ್ಪ ಮುಂದೆ ಛಾಯಾ ಸ್ಟುಡಿಯೋ ಇದೆ. ಅದು ಹಳೇ ಫೋಟೋಗಳನ್ನು ನವೀಕರಿಸುವ ಕೆಲಸಕ್ಕೆ ಫೇಮಸ್ಸು. ಆ ಕಡೆ ಹೋದ್ರೆ ಅಜಂತ ಸ್ಟುಡಿಯೋ, ಅಲ್ಲಿಂದ ಮುಂದೆ ಎಸ್ ಜೆ ಎನ್ ಸ್ಟುಡಿಯೋ. ಇವರೆಲ್ಲಾ ಸುಮಾರು ನಲವತ್ತು ವರ್ಷಗಳಿಂದ ಫೇಮಸ್ ಆಗಿದ್ದಾರೆ. ಇವರ ಮಧ್ಯೆ ನೀನು ಹೊಸ ಸ್ಟುಡಿಯೋ ಶುರು ಮಾಡಿದರೆ ಬದುಕೋಕಾಗುತ್ತಾ ಯೋಚ್ನೆ ಮಾಡು' ಅಂದ ಒಬ್ಬ. ಇನ್ನೊಬ್ಬ 'ಅದಲ್ದೇ ಇನ್ನೂ ಏಳೆಂಟು ಸಣ್ಣ ಪುಟ್ಟ ಸ್ಟುಡಿಯೋಗಳು ಸುತ್ತಮುತ್ತ ಇದ್ದಾವೆ' ಎಂದು ಮಾತು ಸೇರಿಸಿಬಿಟ್ಟ. ಮತ್ತೊಬ್ಬ 'ಈ ಎಲ್ಲಾ ಸ್ಟುಡಿಯೋಗಳು ಗ್ರೌಂಡ್‍ಫ್ಲೋರ್ ನಲ್ಲಿ ಇವೆ. ನೀನು ನೋಡಿದ ಜಾಗ ಫಸ್ಟ್ ಫ್ಲೋರ್. ಒಂದು ಫೋಟೋಗೋಸ್ಕರ ಜನ ಮೇಲೆ ಹತ್ತಿ ಬರ್ತಾರಾ ಯೋಚ್ನೆ ಮಾಡು' ಅಂದ. ಮಗದೊಬ್ಬ 'ಸುಮ್ನೆ ಎಲ್ಲೋ ಕೆಲ್ಸಕ್ಕೆ ಹೋಗೋದು ಬೆಟ್ರು ಗುರು. ಬಿಸಿನೆಸ್ಸು ನಿಂಗೆ ಮೊದ್ಲೇ ಹೊಸ್ದು. ಬೇಕಾ ನೋಡು' ಅಂದ. 
        ಒಮ್ಮೆ ಕೂತು ಯೋಚಿಸಿದೆ. ಎಲ್ಲರ ಮಾತುಗಳಲ್ಲಿ ಸತ್ಯಾಂಶವಿತ್ತು. ಆದರೆ ಹೆದರುತ್ತಾ  ಕುಳಿತರೆ ನಾನು ಜೀವನದಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದಿಲ್ಲ. ಏಕೆಂದರೆ ಎಲ್ಲಾ ವ್ಯಾಪಾರದಲ್ಲೂ ರಿಸ್ಕ್ ಅನ್ನೋದು ಇದ್ದೇ ಇರುತ್ತೆ. ರಿಸ್ಕ್ ತೆಗೆದುಕೊಂಡು ಗೆದ್ದವರೂ ಇದ್ದಾರೆ, ಸೋತವರೂ ಇದ್ದಾರೆ. ಗೆದ್ದವರು ಹೇಗೆ ಗೆದ್ದರು ಎಂದು ಯೋಚಿಸಿದೆ. ನಾನು ಗೆಲ್ಲಲೇಬೇಕು ಎಂದು ತೀರ್ಮಾನಿಸಿಕೊಂಡು ಮನಸ್ಸಿನಲ್ಲೇ ಒಂದು ಸಂಕಲ್ಪ ಮಾಡಿಕೊಂಡೆ. ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ನಾನು ಜನಪ್ರಿಯ ಛಾಯಾಗ್ರಾಹಕನಾಗುತ್ತೇನೆ ಎಂದು ನಂಬಿದೆ ಅಥವಾ ನನ್ನ ಮನಸ್ಸನ್ನು ನಂಬಿಸಿದೆ ಎಂದು ಹೇಳಬಹುದು.
        ನಾನೊಬ್ಬ ಭಿನ್ನ ಛಾಯಾಗ್ರಾಹಕನಾಗಲು ಏನು ಮಾಡಬೇಕೆಂದು ಯೋಚಿಸಿದೆ. ಆಗ ತಾನೇ ಮಾರುಕಟ್ಟೆಗೆ ಬಂದಿದ್ದ `ಅಂಬ್ರೆಲ್ಲಾಲೈಟ್ಸ್'ಗಳನ್ನು ಮುಂಬೈಗೆ ಹೋಗಿ ಖರೀದಿಸಿ ತಂದೆ. ಜನಪ್ರಿಯನಾಗಲು ಪತ್ರಿಕಾ ಛಾಯಾಗ್ರಾಹಕನಾದರೆ ಹಾದಿ ಸುಗಮವಾಗಬಹುದು ಎಂದು ಸಿನೆಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳಗಳಿಗೆ ಹೋಗಿ ಅಲ್ಲಿದ್ದ ನಟನಟಿಯರ ಚಿತ್ರಗಳನ್ನು ತೆಗೆದೆ. ಆ ಚಿತ್ರಗಳನ್ನು ತೆಗೆದುಕೊಂಡು ಪತ್ರಿಕಾಕಛೇರಿಗಳಿಗೆ ಅಲೆದೆ. ಎಲ್ಲಾ ಕಡೆ ನಿರಾಸೆಯಾದರೂ
 'ವಾರದ ರಾಜಕೀಯ' ಪತ್ರಿಕೆಯ ಸಂಪಾದಕರಾದ ಶ್ರೀ.ಚಂದ್ರಶೇಖರ್ ತೌಡೂರು ಅವರು ನನ್ನ ಚಿತ್ರಗಳನ್ನು ನೋಡಿ ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಅವುಗಳನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಲ್ಲದೇ 'ಹೇಗೂ ಚಿತ್ರಗಳನ್ನು ತೆಗೆಯುತ್ತೀರ. ಹಾಗೆಯೇ  ಅವರ ಸಂದರ್ಶನವನ್ನೂ ಮಾಡಿಕೊಟ್ಟರೆ ನಮಗೆ ಇನ್ನೂ ಅನುಕೂಲ' ಎಂದರು. ಹೀಗೆ ಪತ್ರಿಕಾಛಾಯಾಗ್ರಾಹಕ ಹಾಗೂ ಪತ್ರಕರ್ತನಾಗುವ ಅವಕಾಶ ಲಭಿಸಿತು. ಕ್ರಮೇಣ ಸ್ಟುಡಿಯೋದಲ್ಲಿ ಕೂಡಾ ನಟನಟಿಯರ ಚಿತ್ರಗಳನ್ನು ಕ್ಲಿಕ್ಕಿಸತೊಡಗಿದೆ. ಇದರಿಂದಾಗಿ  ಸ್ಟುಡಿಯೋ ಜನಪ್ರಿಯವಾಗತೊಡಗಿತು. ಬಹುತೇಕ ನವ ನಟನಟಿಯರು ನನ್ನ ಸ್ಟುಡಿಯೋಗೆ ಬಂದು ಪೋರ್ಟ್ ಫೋಲಿಯೋ (ಚಿತ್ರಗಳ ಆಲ್ಬಮ್) ಮಾಡಿಸಿಕೊಳ್ಳುತ್ತಿದ್ದರು. ಇತ್ತ ಬೇರೆ ಬೇರೆ ಪತ್ರಿಕೆಗಳಿಂದಲೂ ನನ್ನ ಚಿತ್ರಗಳಿಗಾಗಿ ಬೇಡಿಕೆ ಬರತೊಡಗಿತು. ಹೀಗಾಗಿ ಕನ್ನಡದ ಬಹುತೇಕ ಪತ್ರಿಕೆಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದೆ. ಇದಲ್ಲದೇ 'ಟೈಮ್ಸ್ ಆಫ್ ಇಂಡಿಯ', 'ಸ್ಟಾರ್ ಡಸ್ಟ್' ಮುಂತಾದ ಇಂಗ್ಲೀಷ್ ಪತ್ರಿಕೆಗಳಿಗೂ ಕೆಲಸ ಮಾಡಿದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳನ್ನು ಪತ್ರಿಕಾರಂಗದಲ್ಲಿ ಕಳೆದೆ. ಇಂದಿಗೂ ನನಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ತೃಪ್ತಿ ನೀಡುತ್ತಿರುವುದು ನನ್ನ ಫೋಟೋಸ್ಟುಡಿಯೋ. 
        ಇದು ನನ್ನ ಕಥೆಯಾದರೂ ಬಹುತೇಕ ಜನರ ಕಥೆ ಬೇರೆಯದೇ ಆಗಿರುತ್ತದೆ. ಸಾಮಾನ್ಯವಾಗಿ ಬಹುತೇಕ ಜನರು ಇತರರು ನೀಡುವ ನಕಾರಾತ್ಮಕ 
ಸಲಹೆಗಳನ್ನು ಒಪ್ಪುತ್ತಾರೆ. 'ಹೌದಲ್ಲ. ನಷ್ಟವಾದರೆ ಏನು ಮಾಡುವುದು? ನನಗೆ ಅನುಭವವಿಲ್ಲ. ವ್ಯಾಪಾರ ತುಂಬಾ ಕಷ್ಟವೇ ಸರಿ. ಆದ್ದರಿಂದ ಇದಕ್ಕೆ ಕೈ ಹಾಕದಿರುವುದೇ ಒಳಿತೇನೋ ಎನ್ನಿಸದಿರದು'. ಹೀಗೆ ಪ್ರಜ್ಞಾಮನಸ್ಸು ನಮ್ಮ ಗುರಿ ಅಥವಾ ಆಕಾಂಕ್ಷೆಗಳಿಗೆ ತಣ್ಣೀರೆರೆಚುತ್ತಾ ಹೋದರೆ ಜೀವನದಲ್ಲಿ ಏನನ್ನಾದರೂ ಸಾಧಿಸುವುದಾದರೂ ಹೇಗೆ? ಅದು ಅಸಾಧ್ಯವಾದುದಂತೂ ಅಲ್ಲ. ಆದರೆ ಅದಕ್ಕೆ ನೀವು ಮನಸ್ಸಿಗೆ ತರಬೇತಿ ನೀಡಬೇಕಾಗುತ್ತದೆ.
        ನಿಮ್ಮ ಮನಸ್ಸಿಗೆ ನಿಮ್ಮನ್ನು ನಿಮಗೆ ಬೇಕಾದುದೆಡೆಗೆ ಒಯ್ಯುವ ಶಕ್ತಿಯಿದೆ. ಅದು ನಿಮ್ಮ ಗುರಿಯಾಗಿರಲಿ ಅಥವಾ ನಿಮ್ಮ ಆಸೆ ಆಕಾಂಕ್ಷೆಗಳಾಗಿರಲಿ ಅಥವಾ ನಿಮ್ಮ ಮನೋವೇದನೆಯಿಂದ ಹೊರಬರುವುದಿರಲಿ, ನಿಮ್ಮ ಸುಪ್ತಮನಸ್ಸಿಗೆ ಅದನ್ನು ಸಾಕಾರಗೊಳಿಸುವ ಶಕ್ತಿಯಿದೆ. ಮನಸ್ಸನ್ನು ಆ ದಿಕ್ಕಿನೆಡೆಗೆ ಕೊಂಡೊಯ್ಯುವುದು ಹೇಗೆ? ಮುಂದಿನ ಸಂಚಿಕೆಯಲ್ಲಿ... 

Tuesday 12 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 5

   ಮನಸ್ಸಿನ ಶಕ್ತಿಯನ್ನು ಉಪಯೋಗಿಸುವುದು ಹೇಗೆ?
        ಮನಸ್ಸಿಗೆ ಅಪಾರ ಶಕ್ತಿ ಇರುವುದು ನಿಜವಾದರೂ ಅದನ್ನು ಪಳಗಿಸಿ ಉಪಯೋಗಿಸುವುದು ಹೇಗೆ? ಮನಸ್ಸೆಂಬ ಚಿನ್ನದ ಗಣಿಯಿಂದ ಚಿನ್ನವನ್ನು ತೆಗೆದು ಅಪರಂಜಿ ಮಾಡುವುದು ಹೇಗೆ? ಈ ಮೂಲಕ ಜೀವನದಲ್ಲಿ ಗೆಲುವು ಸಾಧಿಸುವುದು ಹೇಗೆ?
        ಕೆಲವು ವಿಷಯಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಅರೆಪ್ರಜ್ಞಾಮನಸ್ಸು ನಿಮ್ಮ ಗೆಲುವಿಗೆ ಸದಾ ನಿಮ್ಮ ಸಂಗಾತಿಯಾಗಿರುತ್ತದೆ. ಅರೆಪ್ರಜ್ಞಾಮನಸ್ಸಿನ ಶಕ್ತಿಯ ಬಗ್ಗೆ ನಿಮ್ಮ ಪ್ರಜ್ಞಾಮನಸ್ಸಿಗೆ ಅರಿವು ಮೂಡಿದರೆ ಅದು ನಿಮ್ಮ ಮೊದಲ ಗೆಲುವು. ನಿಮ್ಮ ಜೀವನದ ಸಾಧನೆಯ ಅಥವಾ ಗುರಿಯ ಬಗ್ಗೆ ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಂಡು, ಅದನ್ನು ದೃಶ್ಯೀಕರಿಸಲು ನೀವು
ಸಮರ್ಥರಾದರೆ, ಅದು ನಿಮ್ಮ ಎರಡನೆಯ ಗೆಲುವು. ಗುರಿ ತಲುಪುವವರೆಗೂ ಅವಿರತವಾಗಿ ಮುನ್ನಡೆಯುವುದು ನಿಮ್ಮ ಅಂತಿಮ ಗೆಲುವು. ಅರೆಪ್ರಜ್ಞಾಮನಸ್ಸು ಹಾಗೂ ಪ್ರಜ್ಞಾಮನಸ್ಸುಗಳನ್ನು ಜತೆಗೂಡಿಸಿ ಕೆಲಸ ಮಾಡುವುದು ನಿಮ್ಮ ಯಶಸ್ಸಿನ ಏಣಿ.
        ನಿಮ್ಮ ಕನಸುಗಳನ್ನು ನಿಜವಾಗಿಸುವ ಶಕ್ತಿ ಅರೆಪ್ರಜ್ಞಾಮನಸ್ಸಿಗೆ ಇದೆ. ಅದಕ್ಕೆ ತರ್ಕ, ಚರ್ಚೆ, ವಾದ ಹಾಗೂ ವಿಶ್ಲೇಷಣೆಗಳು ಬೇಕಿಲ್ಲ. ನಿಮ್ಮನ್ನು ನಿಮ್ಮ ಗುರಿಯತ್ತ ಕರೆದೊಯ್ಯುವುದು ಅದರ ಕೆಲಸ. ನಿಮ್ಮ ಅನಿಸಿಕೆ ಬಲವಾಗಿದ್ದು ನಿಮ್ಮ ಕನಸುಗಳ ಮೇಲೆ ನಿಮ್ಮ ನಂಬಿಕೆ ಬಲವಾಗಿದ್ದರೆ, ಅರೆಪ್ರಜ್ಞಾಮನಸ್ಸು ಅದನ್ನು ಅಕ್ಷರಶಃ ನಂಬಿ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗುವುದು.
        ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನೂ ಸುಲಭವಾಗಿ ನಂಬುವುದಿಲ್ಲ. ಪ್ರಜ್ಞಾಮನಸ್ಸಿನ ಒಪ್ಪಿಗೆ ದೊರಕದಿದ್ದರೆ ಅದು ಅರೆಪ್ರಜ್ಞಾಮನಸ್ಸಿಗೆ ತಲುಪದು.
ಪ್ರಜ್ಞಾಮನಸ್ಸು ಅರೆಪ್ರಜ್ಞಾಮನಸ್ಸಿಗೆ ಬಾಗಿಲಿದ್ದಂತೆ. ಪ್ರಜ್ಞಾಮನಸ್ಸು ಎಲ್ಲವನ್ನೂ ಅಳೆದು ತೂಗಿ ಅರೆಪ್ರಜ್ಞಾಮನಸ್ಸಿಗೆ ತಲುಪಿಸುತ್ತದೆ. ನಿಮ್ಮ ಸಾಧನೆ, ನಿಮ್ಮ ಗುರಿ ತಲುಪುವ ಶಕ್ತಿ ಹಾಗೂ ನಿಮ್ಮ ಸಮಸ್ಯೆಗಳ ಪರಿಹಾರ ನಿಮ್ಮಲ್ಲೇ ಇದೆ ಎನ್ನುವುದನ್ನು ಪ್ರಜ್ಞಾಮನಸ್ಸು ನಂಬಿ ಮುಂದುವರೆದರೆ ನಿಮ್ಮ ಗೆಲುವು ಖಚಿತ.
ಆದರೆ...
        ಸಮಸ್ಯೆ ಇರುವುದು ಇಲ್ಲಿಯೇ. ನಿಮ್ಮ ಪ್ರಜ್ಞಾಮನಸ್ಸನ್ನು ನಂಬಿಸುವುದೇ ಕಷ್ಟದ ಕೆಲಸ. ನಂಬದಿದ್ದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದೇ ಇಲ್ಲ. ಪ್ರಜ್ಞಾಮನಸ್ಸು ಪಂಚೇಂದ್ರಿಯಗಳು ಅನುಮೋದಿಸಿದ್ದನ್ನು ಒಪ್ಪುತ್ತದೆ. ಉದಾಹರಣೆಗೆ 'ನನ್ನ ಕೈಯ್ಯಲ್ಲೊಂದು ಮಾವಿನ ಹಣ್ಣಿದೆ' ಅಂದಾಗ ಕಣ್ಣಿನಿಂದ ನೋಡಿ ಅಥವಾ ಕೈಯ್ಯಿಂದ ಮುಟ್ಟಿ ನೋಡಿ ಅಥವಾ ಮೂಗಿನಿಂದ ಮೂಸಿ ನೋಡಿ
ಅಥವಾ ಅದನ್ನು ಕಚ್ಚಿ ರುಚಿ ನೋಡಿದಾಗ ಮಾತ್ರ ಪ್ರಜ್ಞಾಮನಸ್ಸು ಅಲ್ಲೊಂದು ಮಾವಿನ ಹಣ್ಣು ಇದೆಯೆಂದು ಒಪ್ಪುತ್ತದೆ. ಇಂತಹ ಯಾವ ಅನುಭವವೂ ಆಗದಿದ್ದಾಗ ಮಾವಿನ ಹಣ್ಣು ಅಲ್ಲಿಲ್ಲ ಎಂದು ಕೂಡಾ ನಂಬುತ್ತದೆ.
        ಚಿಕ್ಕ ವಯಸ್ಸಿನಿಂದ ಒದಗಿ ಬಂದ ಸಂಸ್ಕಾರಕ್ಕೆ ತಕ್ಕ ಹಾಗೆ ತನ್ನ ಭಾವನೆಗಳನ್ನು ಹಾಗೂ ನಂಬಿಕೆಗಳನ್ನು ಅದು ಬೆಳೆಸಿಕೊಂಡು ಬಂದಿರುತ್ತದೆ. ಉದಾಹರಣೆಗೆ 'ಶಿವನೇ ಅತ್ಯಂತ ಬಲಿಷ್ಟ ದೇವರು' ಎಂದು ಚಿಕ್ಕಂದಿನಿಂದ ನಂಬಿರುವ ಮನಸ್ಸಿಗೆ, ಶಿವನಿಗಿಂತ ಬೇರೊಬ್ಬ ದೇವರು ಬಲಿಷ್ಟನಾಗಿರುವನು ಎಂದು ಸುಲಭವಾಗಿ ಒಪ್ಪಿಸಲಾಗದು. ಏಕೆಂದರೆ ಆತನ ಪ್ರಜ್ಞಾಮನಸ್ಸು ದಕ್ಕೆ ವಿರುದ್ಧವಾಗಿ ತರ್ಕ ನೀಡಿ ತನ್ನ ಹಳೆಯ ನಂಬಿಕೆಯನ್ನು ಉಳಿಸಿಕೊಳ್ಳುತ್ತದೆ. ಇದೇ ರೀತಿ ಇನ್ನು ಐದು ವರ್ಷಗಳಲ್ಲಿ ನಾನೊಂದು ಮನೆ ಕಟ್ಟುತ್ತೇನೆ ಎಂದು ನೀವು ಆಸೆ ಪಟ್ಟರೆ ಪ್ರಜ್ಞಾಮನಸ್ಸು ಅದು ಸಾಧ್ಯವಿಲ್ಲ ಎಂದು ಯೋಚನೆ ಮಾಡುತ್ತದೆ. ಅದರ ನಕಾರಾತ್ಮಕ ಗುಣ, 'ಏಕೆ ಸಾಧ್ಯವಿಲ್ಲ' ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತದೆ. 'ಅದು ಹೇಗೆ ಸಾಧ್ಯ? ದೂರದಲ್ಲೆಲ್ಲೋ ಜಾಗ ಖರೀದಿ ಮಾಡಬೇಕೆಂದರೂ ಲಕ್ಷಗಟ್ಟಲೆ ಹಣ ಬೇಕು. ಅದಲ್ಲದೇ ಮನೆ ನಿರ್ಮಾಣದ ವೆಚ್ಚ ಗಗನಕ್ಕೇರಿದೆ. ಕಡಿಮೆ ಎಂದರೂ ಒಂದೈವತ್ತು ಲಕ್ಷ ಬೇಕು. ನನ್ನ ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಷ್ಟು ಲಾಭ ಮಾಡಲು ಐದಾರು ವರ್ಷಗಳಲ್ಲಿ ಅಸಾಧ್ಯ' 
ಎಂದೆಲ್ಲಾ ಪ್ರಜ್ಞಾಮನಸ್ಸು ನಿರ್ಧರಿಸಿಬಿಡುತ್ತದೆ. ಹೀಗಿರುವಾಗ ಒಂದು ಸಕಾರಾತ್ಮಕ ಸಂದೇಶ ನಿಮ್ಮ ಅರೆಪ್ರಜ್ಞಾಮನಸ್ಸನ್ನು ತಲುಪಲು ಸಾಧ್ಯವಾಗುವುದೇ ಇಲ್ಲ. ತತ್ಪರಿಣಾಮವಾಗಿ ಅರೆಪ್ರಜ್ಞಾಮನಸ್ಸು ಕೂಡಾ ನಕಾರಾತ್ಮಕವಾಗಿಯೇ ಉಳಿದು ಬಿಡುತ್ತದೆ.
        ಇದೇ ರೀತಿ 'ನಾನೊಬ್ಬ ಯಶಸ್ವೀ ವ್ಯಾಪಾರಿಯಾಗಬೇಕು' ಎಂದು ಬಯಸಿದೊಡನೆ ಪ್ರಜ್ಞಾಮನಸ್ಸು ಮತ್ತದೇ ನಕಾರಾತ್ಮಕ ಕಾರಣಗಳನ್ನು ನೀಡುತ್ತದೆ. 'ಎಷ್ಟೊಂದು ಜನ ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರದಲ್ಲಿ ಸಾಕಷ್ಟು ಪೈಪೋಟಿ ಇದೆ. ವಾಣಿಜ್ಯಸ್ಥಳಗಳ ಬಾಡಿಗೆಯೂ ಹೆಚ್ಚು. ಹೇಗೋ ಕಷ್ಟ ಪಟ್ಟು  ಹಣ ಹೊಂದಿಸಿದರೂ ವ್ಯಾಪಾರವಾಗದಿದ್ದರೆ ಏನು ಮಾಡುವುದು? ಕಣ್ಣ ಮುಂದೆಯೇ ಹಲವಾರು ಅಂಗಡಿಗಳು ವ್ಯಾಪಾರವಿಲ್ಲದೆ ನಷ್ಟವಾಗಿ ಮುಚ್ಚಿ ಹೋಗುತ್ತಿವೆ. ಇದ್ದಬದ್ದ ಹಣವೆಲ್ಲವೂ ಕೊಚ್ಚಿ ಹೋಗಿ ಸಾಲದ ಸುಳಿಗೆ ಸಿಲುಕಿ ನಿರ್ನಾಮವಾದರೆ?' ಇಂತಹ ಯೋಚನೆಗಳು ಮೂಡಿ, ನಕಾರಾತ್ಮಕ ಸಂದೇಶಗಳು ಅರೆಪ್ರಜ್ಞಾಮನಸ್ಸಿಗೆ
ತಲುಪಿ ಆತ ಪ್ರಯತ್ನ ಪಡಲು ಕೂಡಾ ಹೋಗುವುದಿಲ್ಲ. ಪ್ರಜ್ಞಾಮನಸ್ಸು ನಂಬದೇ ಹೋದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದಿಲ್ಲ. ಅರೆಪ್ರಜ್ಞಾಮನಸ್ಸು ನಂಬದಿದ್ದರೆ ನಮ್ಮಉದ್ದೇಶದ ಫಲ ಸಿಗುವುದಿಲ್ಲ. 'ಮದುವೆಯಾಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗುವುದಿಲ್ಲ' ಎಂಬಂತಹ ಎಡಬಿಡಂಗಿ ಸ್ಥಿತಿಯಲ್ಲಿ ಸಫಲತೆ ಕಾಣುವುದು ಹೇಗೆ? ಅದಕ್ಕಾಗಿ ಮನಸ್ಸಿಗೆ ತರಬೇತಿ ನೀಡುವ ಕೆಲಸವನ್ನು ನೀವು ಮಾಡಬೇಕಾಗುತ್ತದೆ.
       ಅದಕ್ಕೇನು ಮಾಡುವುದು? ನನ್ನ ಜೀವನದ ಉದಾಹರಣೆಯೊಂದಿಗೆ, ಮುಂದಿನ ಸಂಚಿಕೆಯಲ್ಲಿ ವಿವರಿಸುತ್ತೇನೆ.  

Saturday 9 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 4

'ನಾನು' ನಾನಾಗಿ ರೂಪಗೊಂಡಿರುವುದು ಹೇಗೆ ?
ಮಗು ಕಣ್ಣು ಬಿಟ್ಟ ಕ್ಷಣದಿಂದ ಪ್ರಜ್ಞಾಮನಸ್ಸು ತಾನು ಹೊಸದಾಗಿ ಅನುಭವಿಸುತ್ತಿರುವುದನ್ನು ಅರೆಪ್ರಜ್ಞಾಮನಸ್ಸಿಗೆ ರವಾನೆ ಮಾಡುತ್ತಿರುತ್ತದೆ. ಆದರೆ ಪ್ರಜ್ಞಾಮನಸ್ಸಿಗೆ ಸುತ್ತಮುತ್ತ ನಡೆಯುತ್ತಿರುವುದು ಏನೆಂಬುದರ ಅರಿವಿರುವುದಿಲ್ಲ. ಅದು ಹೊಸದಾಗಿ ಎಲ್ಲವನ್ನೂ ಗಮನಿಸುತಿರುತ್ತದೆ. ಸರಿತಪ್ಪುಗಳ ಗ್ರಹಿಕೆ ಅದಕ್ಕಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ದೈನಂದಿನ ವ್ಯವಹಾರಗಳನ್ನು ಅರೆಪ್ರಜ್ಞಾಮನಸ್ಸು ದಾಖಲಿಸುತ್ತಾ ಹೋಗುತ್ತದೆ. 
        'ತಾನು ಅತ್ತರೆ ಗಮನ ಸೆಳೆಯಬಹುದು' 'ಅಮ್ಮನ ಎದೆಹಾಲು ಅಥವಾ ಹಾಲಿನ ಬಾಟಲಿ ತನ್ನ ಆಹಾರ' ಎಂದು ಅರೆಪ್ರಜ್ಞಾಮನಸ್ಸಿನಲ್ಲಿ ಗುರುತಿಸಲು ಪ್ರಾರಂಭಿಸುತ್ತದೆ. ತೊಟ್ಟಿಲಲ್ಲಿ ತೂಗಿ ಲಾಲಿ ಹಾಡು ಕೇಳುತ್ತಿದ್ದಂತೆ ನಿಧಾನವಾಗಿ ನಿದ್ದೆಗೆ ಜಾರುವುದು, ಪದೇ ಪದೇ ಕಣ್ಣಿಗೆ ಕಾಣುವ ಮುಖಗಳು ಹಾಗೂ ಅವರ ಪ್ರೀತಿಯ ಆರೈಕೆಯಿಂದ ಇವರು ನನ್ನವರು ಎಂದು ಗುರುತಿಸುವುದು, 
ಹೀಗೆ ಹತ್ತು ಹಲವು ವಿವರಗಳು ಅರೆಪ್ರಜ್ಞಾಮನಸ್ಸಿನಲ್ಲಿ ದಾಖಲಾಗುತ್ತ ಹೋಗುತ್ತವೆ. ಇಲ್ಲಿಂದ ಮುಂದೆ ಭಾವನೆಗಳು, ಹವ್ಯಾಸಗಳು, ನಂಬಿಕೆಗಳು ನಿರ್ಧಾರಗಳು ಬಲವಾಗುತ್ತಾ ಹೋಗುತ್ತವೆ. 
        ಮುಂದೆ ದಿನಕಳೆದಂತೆ ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ನಿಮ್ಮ ಅರೆಪ್ರಜ್ಞಾಮನಸ್ಸು ಬಹಳಷ್ಟು ಅನುವು ಮಾಡಿಕೊಡುತ್ತದೆ. ಅದು ಪ್ರಜ್ಞಾಮನಸ್ಸಿನ ಜೊತೆ ಸೇರಿ ಕೆಲಸ ಮಾಡುತ್ತದೆ. ಉದಾಹರಣೆಗೆ : ನೆನಪಿಸುವುದು. ಯಾವುದೋ ಒಂದು ಸಮಯದಲ್ಲಿ ಥಟ್ಟನೆ ಮರೆತುಹೋದ ಒಂದು ಕೆಲಸ ನೆನಪಾಗುವುದು. ಮರುದಿನ ಬೇಗ ಎದ್ದು ಕೆಲಸಕ್ಕೆ ಹೋಗುವ ಪ್ರಮೇಯವಿದ್ದಾಗ 
ಬೆಳಿಗ್ಗೆ ಥಟ್ಟನೆ ಎಚ್ಚರವಾಗುವುದು ಇತ್ಯಾದಿ. 
        ನಿಮ್ಮ ಜೀವನಾನುಭವದಿಂದ ಪ್ರಜ್ಞಾಮನಸ್ಸಿನ ಮೇಲೆ ಮುದ್ರೆಯೊತ್ತಿರುವ ನಂಬಿಕೆ ಹಾಗೂ ಮೌಲ್ಯಗಳನ್ನೂ ಎತ್ತಿ ಹಿಡಿಯುವ ಕೆಲಸವನ್ನು ಅದು ಮಾಡುತ್ತದೆ. ನಿಮ್ಮ ಪಂಚೇಂದ್ರಿಯಗಳು ಆ ಕ್ಷಣ ಏನನ್ನು ಅನುಭವಿಸುತ್ತಿವೆ ಎಂಬ ಅರಿವು ಅರೆಪ್ರಜ್ಞಾಮನಸ್ಸಿಗೆ ಇರುತ್ತದೆ. 
        ಅರೆಪ್ರಜ್ಞಾಮನಸ್ಸಿನ ಕೆಲಸ ನಿರಂತರ. ಆಯಾ ಕ್ಷಣಕ್ಕೆ ನಿಮಗೆ ಬೇಕಾಗುವ ಮಾಹಿತಿಯನ್ನು ನೀಡುತ್ತಾ ಅನವಶ್ಯಕ ಮಾಹಿತಿಯನ್ನು ಹಿಂದೆ ಸರಿಸುತ್ತದೆ. ಉದಾಹರಣೆಗೆ ಪರೀಕ್ಷೆಗೆ ಕುಳಿತಾಗ ಪ್ರಶ್ನೆಯನ್ನು ನೋಡುತ್ತಿದ್ದಂತೆ ಓದಿದ ಇತರ ಎಲ್ಲಾ ವಿಷಯಗಳನ್ನು ಹಿಂದಿಕ್ಕಿ, ಆ ಪ್ರಶ್ನೆಯ ಉತ್ತರಕ್ಕೆ ಮಹತ್ವವನ್ನು ನೀಡುತ್ತದೆ.
        ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಸಂಬಂಧ ಹಾಗೂ ವಿಚಾರ ವಿನಿಮಯ ಮಾತುಗಳಲ್ಲಿ ಇರುವುದಿಲ್ಲ. ಅದು ಭಾವನೆ, ಅನುಭವದ ಸಂವೇದನೆ, ಚಿತ್ರಣ, ಕನಸು ಮುಂತಾದವುಗಳ ಮೂಲಕ ವ್ಯಕ್ತ ಪಡಿಸುತ್ತವೆ. ಅರೆಪ್ರಜ್ಞಾಮನಸ್ಸಿನ ಮುಖ್ಯ ಗುಣವೆಂದರೆ ಅದು ಪ್ರಜ್ಞಾಮನಸ್ಸಿನ ಆಜ್ಞೆಗಳಿಗೆ/ಅಭಿಪ್ರಾಯಗಳಿಗೆ ತಲೆ ಬಾಗುವುದು. ಆದರೆ ನಿಮ್ಮ ಪ್ರಜ್ಞಾಮನಸ್ಸಿನ ಮೂಲಕ ಯಾವ ವಿಚಾರಗಳ ಬೀಜ ಬಿತ್ತುವಿರೋ ಅದು ಹೆಮ್ಮರವಾದಂತೆ ನಿಮ್ಮ ಪ್ರಜ್ಞಾಮನಸ್ಸು ಅದರ ವಶವಾಗಿ ಬಿಡುತ್ತದೆ. 
        ನೀವು ಬಿತ್ತುವ ನಕಾರಾತ್ಮಕ ವಿಷಯಗಳಾಗಲೀ, ಸಕಾರಾತ್ಮಕ ವಿಷಯಗಳಾಗಲೀ, ದಿನಗಳೆದಂತೇ ಪ್ರಜ್ಞಾಮನಸ್ಸು ಆ ವಿಷಯಗಳಿಗೆ ಬಲವಾಗಿ ಸ್ಪಂದಿಸುತ್ತದೆ. ಉದಾಹರಣೆಗೆ ದುಡ್ಡು ಕದಿಯಲು ಪ್ರಾರಂಭಿಸಿದರೆ, ಮುಂದೊಮ್ಮೆ ನಿಮ್ಮ ಪ್ರಜ್ಞಾಮನಸ್ಸಿಗೆ ಬೇಡವೆನಿಸಿದರೂ ಅರೆಪ್ರಜ್ಞಾ ಮನಸ್ಸು ಒತ್ತಡ ಹೇರಿ ಮತ್ತೆ ಕದಿಯಲು ಪ್ರೇರೇಪಿಸುತ್ತದೆ.  ನಾವೇ ಕಟ್ಟಿಕೊಟ್ಟಿರುವ ಕೋಟೆಯಲ್ಲಿ ವಿಹರಿಸುತ್ತಿರುವ ಅರೆಪ್ರಜ್ಞಾಮನಸ್ಸನ್ನು ಮತ್ತೆ ಬದಲಿಸುವುದು ಕಷ್ಟಾಸಾಧ್ಯ.
        ಅರೆಪ್ರಜ್ಞಾಮನಸ್ಸಿನ ಉಗ್ರಾಣವೇ ಸುಪ್ತಮನಸ್ಸು.ಇಲ್ಲಿ ನಿಮ್ಮ ಜೀವನದಲ್ಲಿ ಹುಟ್ಟಿದ ಕ್ಷಣದಿಂದ ನಡೆದ ಎಲ್ಲಾ ಘಟನೆಗಳು ದಾಖಲಾಗಿರುತ್ತವೆ.
ಅರೆಪ್ರಜ್ಞಾಮನಸ್ಸು ಮರೆತಿರುವ ವಿಷಯಗಳು ಕೂಡಾ ಇಲ್ಲಿ ಜಮೆಯಾಗಿರುತ್ತವೆ.
ಈ ಭಾಗ ಸ್ವಲ್ಪ ನಿಗೂಢ ಹಾಗೂ ಕೆಲವೊಮ್ಮೆ ವಿವರಿಸಲು ಆಗದ ಕಾರ್ಯಗಳನ್ನು
ಅದು ನಿರ್ವಹಿಸುತ್ತದೆ. ಇಲ್ಲಿ ಹುದುಗಿರುವ ಒಂದು ನೆನಪು ಅಥವಾ ಒಂದು ಘಟನೆ ಭುಗಿಲೆದ್ದಾಗ ಆತನ ವಿಚಿತ್ರ ನಡವಳಿಕೆಗೆ ಕಾರಣವಾಗಬಹುದು. ಸಾಧಾರಣವಾಗಿ ಪ್ರಜ್ಞಾಮನಸ್ಸಿಗೆ ಸಿಗದ  ಮನಸ್ಸಿನ ಈ ಭಾಗವನ್ನು ಸಮ್ಮೋಹಿನಿಯಿಂದ ಹೊರತರಬಹುದಾಗಿದೆ. 
        ಅರೆಪ್ರಜ್ಞಾ ಮನಸ್ಸು ನಮ್ಮ ಜೀವನದ ಹಲವಾರು ನೆನಪುಗಳು, ಅನುಭವಗಳು, ಸಂಸ್ಕಾರ, ಕಲಿಕೆ, ಗ್ರಹಿಕೆ ಎಲ್ಲವೂ ಸೇರಿ ಅವುಗಳನ್ನೆಲ್ಲಾ ನಮ್ಮ ಅರಿವಿಲ್ಲದೇ ವಿಶ್ಲೇಷಿಸಿ ಇಂದಿನ ನನ್ನನ್ನು `ನಾನು' ಆಗಿ ರೂಪಿಸಿರುತ್ತದೆ. ಹಲವಾರು ವಿಷಯಗಳನ್ನು ನಾವು ಮರೆತಿದ್ದರೂ ಅದರ ಪ್ರಭಾವ 'ನಮ್ಮ' ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುತ್ತದೆ. ಇದರ ಆಧಾರದ ಮೇಲೆ ನಮ್ಮ ನಂಬಿಕೆಗಳು ಯೋಚನಾಲಹರಿ, ನಡವಳಿಕೆ, ವೈಚಾರಿಕತೆ, ವಿಶ್ಲೇಷಣೆ ಮುಂತಾದವು ನಮ್ಮೊಂದಿಗೆ ಬೆಸೆದುಕೊಂಡಿರುತ್ತವೆ. 
        ನೆನಪಿಗೆ ಬಾರದಿರುವ ಮನಸ್ಸಿನ ಭಾಗವನ್ನು, ಸುಪ್ತ ಮನಸ್ಸು ಅಥವಾ ಪ್ರಜ್ಞಾರಹಿತಮನಸ್ಸುಎಂದು ಕರೆಯಬಹುದು. ಅರೆಪ್ರಜ್ಞಾಮನಸ್ಸಿನಲ್ಲಿ ನೆನಪುಗಳು, 
ಚಿಂತನೆಗಳು ಹಾಗೂ ಚಟುವಟಿಕೆಗಳು ತಾನೇ ತಾನಾಗಿ ಹಸಿರಾಗಿರುತ್ತವೆ. ನಿಮಗೆ ಪ್ರಶ್ನೆ ಕೇಳಿದೊಡನೆ ನೆನಪಿಗೆ ಬರುವ ಉತ್ತರಗಳು ಅರೆಪ್ರಜ್ಞಾಮನಸ್ಸಿನಲ್ಲಿರುತ್ತವೆ. ಬಯಸಿದರೂ, ಹುಡುಕಿದರೂ, ತಿಣುಕಾಡಿದರೂ ನೆನಪಿಗೆ ಬಾರದಿರುವ ಅಂಶಗಳು 
ಸುಪ್ತ ಮನಸ್ಸಿನಲ್ಲಿರುತ್ತವೆ. 
        ಸುಪ್ತ ಮನಸ್ಸು ದೊಡ್ಡದೊಂದು ಉಗ್ರಾಣವಿದ್ದಂತೆ. ಅದರ ಸಂಗ್ರಹಣಾ ಸಾಮರ್ಥ್ಯಕ್ಕೆ ಮಿತಿಯಿಲ್ಲ. ನಿಮ್ಮ ಜೀವನದ ಎಲ್ಲಾ ವಿವರಗಳು ಅಲ್ಲಿ ಜಮೆಯಾಗಿರುತ್ತವೆ. ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಮೂಲಕ ಹರಿದು ಬರುವ ಅಪಾರ ವಿಷಯಗಳನ್ನು ನಿರಂತರ ಸಂಪರ್ಕವಿಟ್ಟುಕೊಂಡು ಸುಪ್ತ ಮನಸ್ಸು ದಾಖಲಿಸುತ್ತಾ ಇರುತ್ತದೆ.

Friday 8 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 3

ಅರೆಪ್ರಜ್ಞಾಮನಸ್ಸಿನ ಗುಣ ಹಾಗೂ ಶಕ್ತಿ 

        ದಿನಂಪ್ರತಿ ಮನಸ್ಸಿನಲ್ಲಿ ಏಳುವ ಸಾವಿರಾರು ಯೋಚನೆಗಳಿಂದ ಮನಸ್ಸು ಬಳಲುತ್ತದೆ. ಬೇಡದೇ ಇರುವ ವಿಷಯಗಳನ್ನು ಯೋಚಿಸಿ, ಯೋಚಿಸಬೇಕಾದ ವಿಷಯಗಳನ್ನು ಆತ ಯೋಚಿಸುವುದಿಲ್ಲ. ಅರೆಪ್ರಜ್ಞಾಮನಸ್ಸನ್ನು ಹತೋಟಿಗೆ ತಂದರೆ, ಈ ಅಡಚಣೆಗಳನ್ನು ತಡೆದು, ನಮ್ಮ ಲಾಭಕ್ಕೆ ಮಾರ್ಗಗಳನ್ನು ಕಂಡು ಹಿಡಿಯಬಹುದು ಹಾಗೂ ಒಳಗಿನ ಶಾಂತಿಯನ್ನು ಕಾಣಬಹುದು. ಕೆಲವರಿಗೆ ಇದಕ್ಕೆ ಧ್ಯಾನವೇ ಪರಮೋಚ್ಛ ದಾರಿ ಎನಿಸಿದರೆ ಹಲವರಿಗೆ ಧ್ಯಾನ ಕಷ್ಟದ ಕೆಲಸ ಎನ್ನಿಸಬಹುದು. ಅಂತಹವರಿಗೆ ಸಮ್ಮೋಹಿನಿ ಅಥವಾ ಸ್ವಸಮ್ಮೋಹಿನಿ ಸಹಾಯ ಮಾಡಬಲ್ಲದು. 
         ಅರೆಪ್ರಜ್ಞಾಮನಸ್ಸಿಗೆ, ನೀವು ಕಲ್ಪನೆಯಲ್ಲಿ ಪದೇ ಪದೇ ಏನನ್ನು ಅಂದುಕೊಳ್ಳುವಿರೋ ಅದನ್ನು ನಿಜವನ್ನಾಗಿ ಮಾಡುವ ಶಕ್ತಿ ಇದೆ. ಅರೆ ಪ್ರಜ್ಞಾಮನಸ್ಸಿನ ಶಕ್ತಿ ಅಪಾರವಾದದ್ದು, ಆದರೂ ಅದು ನೀವು ಹೇಳಿದ್ದನ್ನು ಕೇಳುತ್ತದೆ. ನೀವು ಪದೇ ಪದೇ ಹೇಳುವುದನ್ನು ಅರೆಪ್ರಜ್ಞಾಮನಸ್ಸು ನಡೆಸಿಕೊಡುತ್ತದೆ. ಅರೆಪ್ರಜ್ಞಾಮನಸ್ಸಿಗೆ ಸತ್ಯ ಹಾಗೂ ಸುಳ್ಳು ಇವುಗಳ ಅರಿವಿಲ್ಲ.
ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನು ನಿಜವೆಂದು ನಂಬುತ್ತದೆಯೋ ಅದನ್ನು ಅರೆಪ್ರಜ್ಞಾಮನಸ್ಸು ಕೂಡಾ ಸಂಪೂರ್ಣವಾಗಿ ನಂಬುತ್ತದೆ. ಆದುದರಿಂದ ಹಗಲುಕನಸು ಕಾಣುವುದು, ನಂಬುವುದು ಹಾಗೂ ನಿಮ್ಮ ನಂಬಿಕೆಯನ್ನು ಪುನರಾವರ್ತಿಸುವುದು ಅತ್ಯಂತ ಪರಿಣಾಮಕಾರಿ ಫಲಿತಾಂಶವನ್ನು ಕೊಡುತ್ತವೆ. 
        ನಾವು ಬಯಸದಿದ್ದರೂ ಮಾಡುವ ಕೆಲಸಗಳನ್ನು ಅರೆಪ್ರಜ್ಞಾಮನಸ್ಸು ನಿರ್ವಹಿಸುತ್ತದೆ. ಈ ದೇಹ ಮಲಗಿದ್ದಾಗ ಪ್ರಜ್ಞಾಮನಸ್ಸು ವಿಶ್ರಮಿಸಿದರೂ, ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತಿರುತ್ತದೆ. ಭಾವನೆಗಳನ್ನು ಅರೆಪ್ರಜ್ಞಾಮನಸ್ಸು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ನಮ್ಮ ನೆನಪು ಹಾಗೂ ನಂಬಿಕೆಗಳ ಆಧಾರದಿಂದ ಹುಟ್ಟಿರುವ ಭಯ, ಆತಂಕ, ಖಿನ್ನತೆ ಮುಂತಾದವುಗಳನ್ನೂ ಅರೆಪ್ರಜ್ಞಾಮನಸ್ಸು ಉದ್ದೀಪನಗೊಳಿಸುತ್ತದೆ. ವಿರುದ್ಧ ದಿಕ್ಕಿಗೆ ತಯಾರು ಮಾಡಿದಲ್ಲಿ 
ಅರೆಪ್ರಜ್ಞಾಮನಸ್ಸು ಎಲ್ಲವನ್ನು ಶಮನಗೊಳಿಸಲೂಬಲ್ಲದು. ನಾವು ಯಾವುದೇ ಆಲೋಚನೆಯಲ್ಲಿ ಮುಳುಗಿದ್ದರೂ, ಅರೆಪ್ರಜ್ಞಾಮನಸ್ಸು ತಾನು ನಿರ್ವಹಿಸಬೇಕಾದ ಕಾರ್ಯಗಳನ್ನು ಕರಾರುವಾಕ್ಕಾಗಿ ಮಾಡುತ್ತಿರುತ್ತದೆ. ಉದಾ: ಕಛೇರಿಯಿಂದ ಮನೆಗೆ ಹೊರಡುವಾಗ ಆತ ಹಲವಾರು ರೀತಿ ಯೋಚನೆಗಳಲ್ಲಿ ಮುಳುಗಿದ್ದರೂ, ತನಗೇ ಅರಿವಿಲ್ಲದಂತೆ ಎಡಬಲಗಳನ್ನು ಬಳಸಿ ಕರಾರುವಾಕ್ಕಾಗಿ ತನ್ನ ಮನೆ ಬಾಗಿಲಿಗೆ ಬಂದಿರುತ್ತಾನೆ. ಇಲ್ಲಿ ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತಿರುತ್ತದೆ.                    ದಿನಂಪ್ರತಿ ಮನಸ್ಸಿನಲ್ಲೇಳುವ ಯೋಚನಾ ತರಂಗಗಳಿಂದ ಮನಸ್ಸು ದಣಿಯುತ್ತದೆ. ನಮ್ಮ ಯೋಚನೆಗಳು ಭಾವನೆಗಳ ಬೀಜರೂಪಗಳು. ಪದೇ ಪದೇ ಯೋಚಿಸುವಾಗ ಭಾವನೆಗಳು ಗಾಢವಾಗುತ್ತ ಹೋಗುತ್ತವೆ. ನಿಮಗೆ ಬೇಡವಾದ ಭಾವನೆಗಳನ್ನು ನಿಯಂತ್ರಿಸಬೇಕಾದರೆ ಆಲೋಚನೆಗಳನ್ನು ನಿಯಂತ್ರಿಸುವುದನ್ನು ಕಲಿಯಬೇಕಾಗುತ್ತದೆ. ಅರೆಪ್ರಜ್ಞಾಮನಸ್ಸು ನಿಮ್ಮ ಜೀವನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತಿರುತ್ತದೆ. ಹಳೆಯ ಅಥವಾ ಪ್ರಾಮುಖ್ಯತೆ ಇಲ್ಲದ ಘಟನೆಗಳು ಸುಪ್ತ ಮನಸ್ಸಿನಲ್ಲಿ ಹುದುಗಿ ಹೋಗುತ್ತೇವೆ. ನಿಮ್ಮ ಸಂಸ್ಕಾರಕ್ಕೆ ತಕ್ಕ ಹಾಗೆ ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತದೆ. 'ನೀವು' ಅಂದರೆ ಏನು ಎನ್ನುವುದು ಅರೆಪ್ರಜ್ಞಾಮನಸ್ಸಿಗೆ ಕರಾರುವಾಕ್ಕಾಗಿ ಗೊತ್ತಿರುತ್ತದೆ. ಅರೆಪ್ರಜ್ಞಾಮನಸ್ಸು ತಾನೇ ತಾನಾಗಿ ಯಾವ ಯೋಚನೆಗಳನ್ನು ಅಥವಾ ಕಾರಣಗಳನ್ನು ಹುಡುಕುವುದಿಲ್ಲ. ಪ್ರಜ್ಞಾಮನಸ್ಸಿನಿಂದ ಬಂದಿರುವ ಸಂದೇಶಗಳನ್ನು ಅದು ದಾಖಲಿಸುತ್ತದೆ ಹಾಗೂ ನಂಬುತ್ತದೆ. ನಿಮ್ಮ ಪ್ರಜ್ಞಾಮನಸ್ಸು ಬಿತ್ತಿದ ಆಲೋಚನೆ ಎಂಬ ಬೀಜಗಳನ್ನು ಅರೆಪ್ರಜ್ಞಾಮನಸ್ಸು ಫಲವತ್ತಾಗಿ ಬೆಳೆದುಕೊಡುತ್ತದೆ. ನಿಮ್ಮ ಆಲೋಚನೆಗಳು ಹೇಗಿರಬೇಕೆಂಬ ಆಯ್ಕೆ ನಿಮ್ಮದು. ಹೂವು ಬೇಕಾದರೆ ಹೂವು, ಹಾವು ಬೇಕಾದರೆ ಹಾವು. ಪ್ರಜ್ಞಾಮನಸ್ಸು ನೀಡಿದ ಆದೇಶಗಳನ್ನು ಅರೆಪ್ರಜ್ಞಾಮನಸ್ಸು ಪಾಲಿಸುತ್ತದೆ. ನಿಮ್ಮ ಅರೆಪ್ರಜ್ಞಾಮನಸ್ಸು ನಿಮಗಾಗಿ ಹಗಲಿರುಳು ಕೆಲಸ ಮಾಡುತ್ತಿರುತ್ತದೆ. 
ನಿಮ್ಮ ಭಾವನೆಗಳಿಗೆ, ಚಿಂತನೆಗಳಿಗೆ, ಆಸೆಗಳಿಗೆ ಹಾಗೂ ನಿಮ್ಮ ಬಯಕೆಗಳಿಗೆ ಶಕ್ತಿ ತುಂಬುವ ಸಾಮರ್ಥ್ಯ ಅದಕ್ಕೆ ಇದೆ. ಆದ್ದರಿಂದ ನಿಮ್ಮ ಚಿಂತನೆಗಳು ಹಾಗೂ ಸಾಧನೆಗಳ ಗುರಿ ಅತ್ಯುನ್ನತ ಮಟ್ಟದಲ್ಲಿರಲಿ. 
        ಅರೆಪ್ರಜ್ಞಾಮನಸ್ಸು ನಿಮ್ಮನ್ನು ಸದಾಕಾಲ ಆರಾಮಾವಾಗಿಡಲು ಅದು ಬಯಸುತ್ತದೆ. ಅದು ನಿಮ್ಮ ಹಾಗೂ ನಿಮ್ಮ ದೇಹದ ಸುಖದ ಪರ. ಉದಾಹರಣೆಗೆ ಅಲಾರಂ ಬೆಳಿಗ್ಗೆ ಹೊಡೆದುಕೊಂಡಾಗ 'ಇನ್ನೈದು ನಿಮಿಷ ಮಲಗೋಣ' ಎಂದು ಅದು ಉತ್ತೇಜನ ನೀಡುತ್ತದೆ. ಯಾವುದಾದರೂ ಚಟದಿಂದ ನಿಮಗೆ ಸುಖ ಸಿಗುತ್ತಿದ್ದರೆ ಅದು ಅದರ ಕಡೆ ವಾಲುತ್ತದೆ. ಅದು ಚಟವಾಗಿ ಬೆಳೆಯಲು ನೀವು ಪದೇ ಪದೇ ಆ ಸುಖವನ್ನು ಅನುಭವಿಸಿ ಅರೆಪ್ರಜ್ಞಾಮನಸ್ಸಿಗೆ ಆ ಅನುಭವವನ್ನು 'ಸುಖ' ಎಂದು ರವಾನೆ ಮಾಡಿರುತ್ತೀರಿ. 
        ಅರೆಪ್ರಜ್ಞಾಮನಸ್ಸು ಸರಿತಪ್ಪುಗಳ ಆಲೋಚನೆ ಮಾಡುವುದಿಲ್ಲ. 
ಪ್ರಜ್ಞಾಮನಸ್ಸು ರವಾನಿಸಿದ ಸಂದೇಶವನ್ನು ಅದು ನಂಬುತ್ತದೆ. ನೀವು ಜೀವನವನ್ನು ಬದಲಿಸಬೇಕೆಂದು ಬಯಸಿದರೆ ನಿಮ್ಮ ಪ್ರಜ್ಞಾಮನಸ್ಸನ್ನು ಮೊದಲು ಬದಲಿಸಬೇಕಾಗುತ್ತದೆ. ಕೆಲವು ನಿರ್ಧಾರಗಳನ್ನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳಬೇಕಾಗುತ್ತದೆ. ಮನಸ್ಸನ್ನು ಬದಲಾಯಿಸುವ ಮೊದಲು ಮನಸ್ಸು ಹಾಗೂ ಮನಸ್ಸಿನ ಕಾರ್ಯಾಚರಣೆಯ ಬಗ್ಗೆ ಅರ್ಥ ಮಾಡಿಕೊಳ್ಳುವುದು ಅವಶ್ಯ. 
        ನಿಮ್ಮ ಜೀವನದಲ್ಲಿ ಬದಲಾವಣೆ ತರಲು ಹೊರಟಾಗ ನೀವು ಹೊಸ ಆಲೋಚನೆಗಳಿಗೆ, ಹೊಸ ವಿಚಾರಗಳಿಗೆ, ಹೊಸ ಪ್ರಯೋಗಗಳಿಗೆ ಒಳ ಪಡ 
ಬೇಕಾಗುತ್ತದೆ. ಇದು ಸ್ವಾಭಾವಿಕವಾಗಿ ಈಗಾಗಲೇ ತನ್ನದೇ ಆದ ಕೋಟೆಯನ್ನು ಕಟ್ಟಿಕೊಂಡಿರುವ ಅರೆಪ್ರಜ್ಞಾಮನಸ್ಸಿಗೆ ಕಿರಿಕಿರಿ ನೀಡುತ್ತದೆ. 'ಈಗೇನಾಗಿದೆ? ಚೆನ್ನಾಗೇ ಇದೀನಿ.. ಇದೇ ಆರಾಮಾಗಿದೆ. ಈ ಹೊಸ ದಾರಿಯೆಲ್ಲ ಬೇಕಾ? ಎಷ್ಟು ಕಷ್ಟಾನೋ ಏನೋ.. ' ಎಂದು ನಿಮ್ಮ ಪ್ರಜ್ಞಾಮನಸ್ಸಿನಲ್ಲಿ ಮೂಡುವ ಯೋಚನೆಗೆ ಬಲವಾಗಿ ಹಾಗೂ ಸಕಾರಾತ್ಮಕವಾಗಿ ಅದು ಸ್ಪಂದಿಸುತ್ತದೆ. ನಿಮ್ಮ 
ನಂಬಿಕೆಗೆ ವಿರುದ್ಧವಾಗಿ ಏನಾದರೂ ಕೆಲಸ ಮಾಡಲು ಹೋದಾಗಲೂ ಇದೇ ರೀತಿಯ ಮಾನಸಿಕ ಪ್ರತಿರೋಧವನ್ನು ಕಾಣಬಹುದಾಗಿದೆ. 
        ನೀವು ಬೆಳೆಯಬೇಕಾದರೆ ಅಥವಾ ಏನನ್ನಾದರೂ ಸಾಧಿಸಬೇಕಾದರೆ ನಿಮ್ಮ ಸುಖದ ಕೋಟೆಯ ಕಟ್ಟೆಯನ್ನು ದಾಟಿ ಹೊರಬರಬೇಕಾಗುತ್ತದೆ. ಮಾನಸಿಕ ಕಿರಿಕಿರಿ ಅನುಭವಿಸಲು ಸಿದ್ಧರಾಗಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸು ತೆರೆದ ಮನಸ್ಸಾಗಿರಬೇಕಾಗುತ್ತದೆ. ನಿಮ್ಮ ಸಾಧನೆ ಅಥವಾ ಗುರಿಯನ್ನು ತಲುಪಿದಾಗ ಅದು ನಿಮ್ಮ ಹೊಸ ಸುಖದ ಕೋಟೆಯಾಗಿ ರೂಪುಗೊಳ್ಳುತ್ತದೆ.

Thursday 7 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 2


       ಪ್ರಜ್ಞಾಮನಸ್ಸು, ಅರೆಪ್ರಜ್ಞಾಮನಸ್ಸು ಹಾಗೂ ಸಿಗ್ಮಂಡ್ ಫ್ರಾಯ್ಡ್

         ಸಿಗ್ಮಂಡ್ ಫ್ರಾಯ್ಡ್, ಮನಸ್ಸಿನ ವಿಭಜನೆಯನ್ನು ಜನಸಾಮಾನ್ಯರಿಗೆ ತಲುಪಿಸಿದ ಮನೋವಿಜ್ಞಾನಿ. ಮನಸ್ಸಿನ ಸ್ಥಿತಿಯನ್ನು ಆತ ಪ್ರಜ್ಞಾಮನಸ್ಸು, ಅರೆಪ್ರಜ್ಞಾಮನಸ್ಸು ಹಾಗೂ ಪ್ರಜ್ಞಾಹೀನಮನಸ್ಸುಗಳೆಂದು ವಿಂಗಡಿಸಿದ್ದಾನೆ. 

ಏನಿದು ಮನಸ್ಸಿನ ವಿಂಗಡಣೆ? ಆದಷ್ಟು ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ.

1. ಪ್ರಜ್ಞಾಮನಸ್ಸು 

         ಇದು ಸಾಧಾರಣವಾಗಿ ನಾವು ಎಚ್ಚರದಿಂದಿರುವಾಗ ಜಾಗೃತವಾಗಿರುವ ಮನಸ್ಸು. ಇದು `ನಾನು' ಎಂಬ ಅರಿವನ್ನು ಮೂಡಿಸುತ್ತದೆ. `ನನ್ನ' ಸುತ್ತಲೂ  ನಡೆಯುವುದನ್ನು ಗಮನಿಸುತ್ತದೆ. ಮನಸ್ಸಿನಲ್ಲಿ ಆಲೋಚನಾ ತರಂಗಗಳನ್ನು 
ಹಬ್ಬಿಸುತ್ತದೆ. ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು ಈ ರೀತಿಯ ನಿರ್ದಿಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಪ್ರಜ್ಞಾಮನಸ್ಸು ನಮ್ಮಲ್ಲಿ ಅಂತರ್ಗತವಾಗಿರುವ ತಾತ್ವಿಕ ಹಾಗೂ ತಾರ್ಕಿಕ ಅರಿವುಗಳ ಹೊಣೆಗಾರನಾಗಿ ಕೆಲಸ ಮಾಡುತ್ತಿರುತ್ತದೆ. 
ಸರಳ ಉದಾಹರಣೆಗಳು  
'ನೀರು ಕೆಳಗೇ ಹರಿಯಬೇಕು'
'ಬೆಣ್ಣೆ ಕಾಯಿಸುವುದರಿಂದ ಅದು ತುಪ್ಪವಾಗುತ್ತದೆ'
ಹೀಗೆ ಅದು ತಾರ್ಕಿಕವಾಗಿ ವಿಶ್ಲೇಷಣೆ ಮಾಡುತ್ತದೆ. ತಾತ್ವಿಕವಾಗಿ ತಾನು ಜೀವನದಲ್ಲಿ ಕಲಿತ ಪಾಠಗಳನ್ನು ಹಾಗೂ ನಂಬಿಕೆಗಳನ್ನು ಕೂಡಾ ಅದು ಈ ವಿಶ್ಲೇಷಣೆಗೆ ಒಳಪಡಿಸುತ್ತದೆ. ಕಾಲಕ್ರಮೇಣ ಅದು ಅರೆಪ್ರಜ್ಞಾಮನಸ್ಸಿನಲ್ಲಿ ನೆಲೆಗೊಳ್ಳುತ್ತದೆ. ಪ್ರಜ್ಞಾಮನಸ್ಸು ಬಾಹ್ಯವಸ್ತುಗಳನ್ನು ಒಪ್ಪಬೇಕಾದರೆ, ಅದು ಪಂಚೇಂದ್ರಿಯಗಳ ಸಹಾಯವನ್ನು ಪಡೆದುಕೊಳ್ಳುತ್ತದೆ. ಅದು ಪಂಚೇಂದ್ರಿಯಗಳು ಅನುಮೋದನೆ ನೀಡಿದ ವಿವರಗಳನ್ನು ಮಾತ್ರ ಒಪ್ಪಿ ಅರೆಪ್ರಜ್ಞಾಮನಸ್ಸಿಗೆ ರವಾನಿಸುತ್ತದೆ. ಅದಲ್ಲದೇ ಪುನರಾವರ್ತನೆಯಾದ ವಿಷಯಗಳು ಹಾಗೂ 
ವಿವರಗಳು ಕೂಡಾ ಅರೆಪ್ರಜ್ಞಾಮನಸ್ಸಿನಲ್ಲಿ ನೆಲೆಗೊಳ್ಳುತ್ತವೆ. ತನ್ನ ನಂಬಿಕೆಗೆ ವಿರುದ್ಧವಾದ ವಿಷಯ ಅಥವಾ ಯೋಚನೆ ಅಥವಾ ಮಾಹಿತಿ ಬಂದಾಗ ಅದು
ಅರೆಪ್ರಜ್ಞಾಮನಸ್ಸಿನ ಕಾವಲುಗಾರನ ಕಾರ್ಯ ನಿರ್ವಹಿಸಿ ಅಂತಹ
ಯೋಚನೆಗಳನ್ನು ತಿರಸ್ಕರಿಸಿ ಅವು ಅರೆಪ್ರಜ್ಞಾಮನಸ್ಸಿಗೆ ತಲುಪುವುದನ್ನು ತಡೆಯುತ್ತದೆ. ನಾವು ಅಂತರ್ಗತವಾಗಿ ಬಯಸಿದ ಕೆಲಸಗಳನ್ನು ಮಾತ್ರ ಇದು ನಿರ್ವಹಿಸುತ್ತದೆ.
         ಪ್ರಜ್ಞಾಮನಸ್ಸು ತನ್ನನ್ನು ತಾನೇ ಗುರುತಿಸಿಕೊಂಡರೂ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಎಲ್ಲಾ ಮಾನಸಿಕ ತೀರ್ಮಾನಗಳು ಅಲ್ಲಿಯೇ  ಆಗುವುದಿಲ್ಲ! 
        ಪ್ರಜ್ಞಾಮನಸ್ಸು ನಿಮ್ಮ ಹೊರಗಿನ ಹಾಗೂ ಒಳಗಿನ ಪ್ರಪಂಚಕ್ಕೆ ತನ್ನನ್ನು ತಾನೇ ಕೊಂಡಿಯಾಗಿ ಹಂಚಿಕೊಂಡಿರುತ್ತದೆ ಹಾಗೂ ಸಂಪರ್ಕಸಾಧನವಾಗಿ ಕೆಲಸ ಮಾಡುತ್ತದೆ. ಪ್ರಜ್ಞಾಮನಸ್ಸು ಮಾಡಬಹುದಾದ ಎರಡು ಶಕ್ತಿಶಾಲಿ ಕೆಲಸಗಳಲ್ಲಿ ಮೊದಲನೆಯದು, ಯಾವುದೇ ವಿಷಯದ ಮೇಲೆ ಕೇಂದ್ರೀಕರಿಸುವ ಅದರ ಗುಣ. ಎರಡನೆಯದು ನಿಮ್ಮ ಯೋಚನೆಗಳನ್ನು ಅಥವಾ ಭಾವನೆಗಳನ್ನು ಕಣ್ಣೇದುರಿಗಿಲ್ಲದಿದ್ದರೂ ಕಲ್ಪಿಸಿ ಕಣ್ಣಿಗೆ ಕಾಣುವಂತೆ ಜೋಡಿಸುವ ಅದರ ಶಕ್ತಿ. 
ನಿಮ್ಮ ಜೀವನದ ಬದಲಾವಣೆಗೆ ಈ ಶಕ್ತಿಯೇ ಓಂಕಾರ. ಆದರೆ ನಮಗೆ ಬೇಕಾದ ಹಾಗೆ ನಮ್ಮ ನಂಬಿಕೆಯನ್ನು ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ಬದಲಾಯಿಸಬೇಕಾದರೆ, ಪ್ರಜ್ಞಾಮನಸ್ಸನ್ನು ತಾರ್ಕಿಕವಾಗಿ ಒಪ್ಪಿಸಿ, ಆ ನಂಬಿಕೆ ಸರಿ ಎಂದು ನಂಬಿಸುವಂತಾದಲ್ಲಿ ಅದು ಅರೆಪ್ರಜ್ಞಾಮನಸ್ಸಿಗೆ ತಲುಪುತ್ತದೆ.

2. ಅರೆಪ್ರಜ್ಞಾಮನಸ್ಸು

         ನಿಮ್ಮ ಪ್ರಜ್ಞಾಮನಸ್ಸಿನಲ್ಲಿ ಮೂಡಿದ, ಕಂಡು ಕೇಳಿದ, ಅನುಮೋದಿಸಿದ, ಅನುಭವಿಸಿದ ಎಲ್ಲಾ ವಿಚಾರಗಳು ಅರೆಪ್ರಜ್ಞಾಮನಸ್ಸಿನಲ್ಲಿ ಸಂಗ್ರಹವಾಗುತ್ತವೆ. ನೀವು ಬೇಕೆಂದಾಗ ನೆನಪಿಸಿಕೊಳ್ಳಬಹುದಾದ ವಿಷಯಗಳೆಲ್ಲಾ ಇಲ್ಲಿ ಜಮೆಯಾಗಿರುತ್ತವೆ. ಪ್ರಾಮುಖ್ಯತೆ ಇಲ್ಲದೇ ನಿಮಗೆ ಸಾಧಾರಣವಾಗಿ ನೆನಪಿಗೆ ಬಾರದ ವಿಷಯಗಳೆಲ್ಲಾ ಸುಪ್ತಮನಸ್ಸಿನ ಮೂಲೆಯಲ್ಲಿ ಶೇಖರವಾಗಿರುತ್ತವೆ. ಹಿಂದೆ ನಡೆದ ಮರೆತುಹೋದ ಘಟನೆ ಅಥವಾ ಮಾತುಗಳು ಅಥವಾ ವಿಚಾರಗಳನ್ನು  ಅರೆಪ್ರಜ್ಞಾಮನಸ್ಸಿನಿಂದ ಹೊರತರಲು ಸಾಧ್ಯ. ಅವುಗಳನ್ನು ನೆನಪಿಗೆ ಅಥವಾ 
ಸ್ಮೃತಿಪಟಲದಲ್ಲಿ ತರುವವು. 
         ಪ್ರಜ್ಞಾಮನಸ್ಸಿನಿಂದ ಬಂದ ವಿಷಯಗಳು ಪುನರಾವರ್ತನೆಯಾದಂತೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ ಘನೀಕೃತವಾಗುತ್ತ ಹೋಗುತ್ತದೆ. ಒಮ್ಮೆ ಅರೆಪ್ರಜ್ಞಾಮನಸ್ಸಿನಲ್ಲಿ ಅದು ಘನೀಕೃತವಾದರೆ ನಂತರ ಪ್ರಜ್ಞಾಮನಸ್ಸಿನ ಅರಿವು ಬೇರೆಡೆ ಇದ್ದರೂ ಅರೆಪ್ರಜ್ಞಾಮನಸ್ಸು ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ಉದಾಹರಣೆಗೆ ಬೆರಳಚ್ಚು ಕಲಿಯುವ ವ್ಯಕ್ತಿ, ಮೊದಮೊದಲು ಪ್ರಜ್ಞಾಪೂರ್ವಕವಾಗಿ ಒಂದೊಂದು ಅಕ್ಷರ ಅಂಕಿಗಳನ್ನು ನೋಡಿ ಬೆರಳನ್ನು ಒತ್ತುತ್ತಿರುತ್ತಾನೆ. ಅಭ್ಯಾಸವಾದಂತೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ
ಘನೀಕೃತವಾಗುತ್ತದೆ. ನಂತರ ಎಲ್ಲೇ ನೋಡುತ್ತಿದ್ದರೂ, ಆತ ಸರಾಗವಾಗಿ
ಬೆರಳುಗಳನ್ನು ಕರಾರುವಾಕ್ಕಾದ ಸ್ಥಳಗಳಲ್ಲಿ ಒತ್ತುತ್ತಿರುತ್ತಾನೆ. 
         ಅರೆಪ್ರಜ್ಞಾಮನಸ್ಸು ನೀವು ಪದೇ ಪದೇ ಏನನ್ನು ಅಂದುಕೊಳ್ಳುವಿರೋ ಅದನ್ನು ಮಾಡಿ ತೋರಿಸುತ್ತದೆ. ನೀವು ಅದಕ್ಕೆ ಪದೇ ಪದೇ ಆದೇಶ ನೀಡಿದರೆ,
ಅದು ತಕ್ಕದಾದ ದಾರಿಯನ್ನು ಹುಡುಕುತ್ತದೆ ಹಾಗೂ ನಿಮ್ಮ ಅಪೇಕ್ಷೆಯನ್ನು ನಡೆಸಿಕೊಡುತ್ತದೆ. ಅರೆಪ್ರಜ್ಞಾಮನಸ್ಸಿಗೆ ನಿಜ ಯಾವುದು? ಸುಳ್ಳು ಯಾವುದು?
ಗೊತ್ತಾಗುವುದಿಲ್ಲ. ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನು ನಿಜವೆಂದು ಭಾವಿಸುತ್ತದೋ ಅದನ್ನು ಅದು ನಿಜವೆಂದು ನಂಬುತ್ತದೆ.

Wednesday 6 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 1

        ಮನಸ್ಸು ಇರುವುದರಿಂದ ನಾವು ಮನುಷ್ಯರಾಗಿದ್ದೇವೆ. ನಮ್ಮ ಮನಸ್ಸು ಹಾಗೂ ನಮ್ಮ ಮನಸ್ಸಿನ ಶಕ್ತಿಯಿಂದ ನಾವು ಬೇರೆ ಎಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿದ್ದೇವೆ. ಚಿಂಪಾಂಜಿಯ ಮೆದುಳಿಗೂ ಮನುಷ್ಯನ ಮೆದುಳಿಗೂ ಸಾಕಷ್ಟು ಹೋಲಿಕೆ ಇದ್ದರೂ ಮನುಷ್ಯನ ಮನಸ್ಸಿನ ಶಕ್ತಿ ಆತನನ್ನು ಬೇರೆಲ್ಲಾ ಪ್ರಾಣಿಗಳಿಗಿಂತ ಉನ್ನತ ಮಟ್ಟದಲ್ಲಿರಿಸಿದೆ. ಮನುಷ್ಯನ ಮನಸ್ಸಿನ ಗ್ರಹಿಕೆಯ ಬಲದಿಂದ ಭಾಷಾ ಜ್ಞಾನ ಬೆಳವಣಿಗೆಯಾಯಿತು.
        ಮನುಷ್ಯನೊಬ್ಬನಿಗೆ ಮಾತ್ರ ತನ್ನ ಭಾವನೆಗಳನ್ನು ಹಲವಾರು ಶಬ್ದಗಳ
(ಭಾಷೆಯ) ಮೂಲಕ ಕರಾರುವಾಕ್ಕಾಗಿ ವ್ಯಕ್ತ ಪಡಿಸಲು ಸಾಧ್ಯವಾಗಿದೆ. ಮನುಷ್ಯನಿಗೆ ಮಾತ್ರ ತನ್ನ ಅನುಭವಗಳ ಆಧಾರದ ಮೇಲೆ ನಾನಾ ಪ್ರಯೋಗಗಳನ್ನು ಮಾಡುವ ಶಕ್ತಿ ಇರುವುದು.ಮನುಷ್ಯನಿಗೆ ಮಾತ್ರ ತನ್ನ ಗ್ರಹಿಕೆಯಿಂದ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳುವ ಹಾಗೂ ತಾಂತ್ರಿಕತೆಯನ್ನು ಬೆಳೆಸಿಕೊಳ್ಳುವ ಶಕ್ತಿ ಇರುವುದು. ಮನುಷ್ಯನಿಗೆ ತನ್ನ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ. ಆತ ಯೋಚಿಸಬಲ್ಲ, ಕಾರಣಗಳನ್ನು ಹುಡುಕಬಲ್ಲ, ಉಪಾಯಗಳನ್ನು ಹೂಡಬಲ್ಲ, ಮುಂದೆ ತನ್ನ ಬದುಕು ಹೇಗೆ ಎಂದು ರೂಪಿಸಿಕೊಳ್ಳಬಲ್ಲ. ಸಂಕಷ್ಟದ ಸಮಯದಲ್ಲಿ ನಿಖರವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲ. ಇದಕ್ಕೆಲ್ಲವೂ ಕಾರಣಕಾರಕವಾಗಿರುವುದು ಮನಸ್ಸು.
        ಮೆದುಳು ಹಾಗೂ ಮನಸ್ಸು ಒಂದನ್ನು ಬಿಟ್ಟು ಇನ್ನೊಂದು ಇರಲಾರವು. ಮೆದುಳಿಗೆ ಒಂದು ಆಕಾರವಿದೆ, ಒಂದು ರೂಪವಿದೆ, ಅದು ಒಂದು ವಸ್ತು. ಅದನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬಹುದು. ಮನಸ್ಸು ಕಣ್ಣಿಗೆ ಕಾಣದ, ಆಕಾರವಿಲ್ಲದ, ಕೈಗೆ ಸಿಗದ ಹಾಗೂ ವೈದ್ಯಕೀಯ ತಪಾಸಣೆಗೆ ಒಳಪಡದ ವಸ್ತು.
        ಮನಸ್ಸಿನ ಶಕ್ತಿಯ ಬಗ್ಗೆ ಅನಾದಿಕಾಲದಿಂದಲೂ ಮನುಷ್ಯನಿಗೆ ಅರಿವಿದೆ. 
ಎಲ್ಲ ಧಾರ್ಮಿಕಗ್ರಂಥಗಳಲ್ಲೂ ಮನಸ್ಸಿನ ಬಗ್ಗೆ ಉಲ್ಲೇಖಗಳನ್ನು ಕಾಣುತ್ತೇವೆ. ಮನಸ್ಸಿನ ಶಕ್ತಿಯೇನು? ಅದನ್ನು ಬಳಸಿಕೊಳ್ಳುವುದು ಹೇಗೆ ಎಂದು ಬಹು ಪ್ರಾಚೀನ
ಕಾಲದಿಂದಲೂ ಪ್ರಯೋಗಗಳಾಗಿವೆ. ಬಹುತೇಕ ಪ್ರಯೋಗಗಳು ಆಧ್ಯಾತ್ಮಿಕ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಒಳಗೊಂಡಿವೆ. 
        ಬೌದ್ಧಧರ್ಮದ ಪ್ರಕಾರ ದೇಹ ಮನೆ ಇದ್ದಂತೆ. ಮನಸ್ಸು ಆ ಮನೆಯಲ್ಲಿ ನೆಲೆಸಿರುವ ಅತಿಥಿಯಂತೆ. ಕಾಲಧರ್ಮಕ್ಕೆ ಅನುಗುಣವಾಗಿ ಅದು ಸತ್ತ ಮನೆಯನ್ನು ಬಿಟ್ಟು ಹೋಗುತ್ತದೆ. ಹಿಂದೂಧರ್ಮದ ಉದಾಹರಣೆಯನ್ನು ಕೊಡುವುದಾದರೆ
ತೈತ್ತೆರೀಯ ಉಪನಿಷತ್ತಿನಲ್ಲಿ ಪಂಚಕೋಶಗಳ ಉದಾಹರಣೆಯನ್ನು ನೀಡಲಾಗಿದೆ. ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶ ಇತ್ಯಾದಿ
ವಿಷಯಗಳ ವಿವರಣೆಗಳು ಇವೆ. ಮನಸ್ಸಿನ ಇಂದಿನ ವೈಜ್ಞಾನಿಕ ವಿವರಣೆಗೆ ಇದು ಬಹಳ ಹತ್ತಿರವಾಗಿದೆ. 
        ತೈತ್ತೆರೀಯ ಉಪನಿಷತ್ತಿನಲ್ಲಿ  ಆತ್ಮ (ಸೆಲ್ಫ್), ಪಂಚಕೋಶಗಳನ್ನು ಮೀರಿ ಇದೆ ಎಂದು ವಿವರಿಸಲಾಗಿದೆ. ಪಂಚಕೋಶಗಳ ಬಗ್ಗೆ ಸ್ಥೂಲವಾಗಿ ಹೀಗೆ ವಿವರಿಸಬಹುದು. ಮೊದಲನೆಯದು ಅನ್ನಮಯಕೋಶ. ಅದು ಆಹಾರಕ್ಕೆ ಹಾಗೂ ಶರೀರಕ್ಕೆ ಸಂಬಂಧ ಪಟ್ಟದ್ದು. ಎರಡನೆಯದು ಪ್ರಾಣಮಯಕೋಶ ಅಂದರೆ ವಾಯು (ಅನ್ನಮಯಕೋಶಕ್ಕೆ ಜೀವ ನೀಡುವುದು). ಮೂರನೆಯದು ಮನೋನ್ಮಯಕೋಶ. (`ನಾನು' ಎಂಬ ಅರಿವು ಮೂಡಿಸುವ ಪ್ರಜ್ಞಾಮನಸ್ಸು). ಇದು ಮನಸ್ಸು ಹಾಗೂ ಕಲಿತ ವಿದ್ಯೆಯ ಒಂದು ಭಾಗ. ಇದು ಬಹಳ ಶಕ್ತಿಶಾಲಿಯಾಗಿರುವುದರಿಂದ ನಿಮ್ಮ ಬಂಧನಕ್ಕೆ ಅಥವಾ ಮುಕ್ತಿಗೆ ಇದೇ ಕಾರಣವಾಗುವುದು. ನಾಲ್ಕನೆಯದು ವಿಜ್ಞಾನಮಯಕೋಶ. ಇಲ್ಲಿ ಜ್ಞಾನದ ಬೆಳಕಿದೆ. ಇದು ನಿಮ್ಮ ಎಚ್ಚರ ಹಾಗೂ ನಿದ್ರಾಸ್ಥಿತಿಯ ಮೇಲೆ ಹಿಡಿತ ಹೊಂದಿದೆ. ಸುಖ ಹಾಗೂ ದುಃಖಗಳನ್ನು ಅನುಭವಿಸುತ್ತದೆ. ಇದು ಆತ್ಮಕ್ಕೆ ಬಹಳ ಹತ್ತಿರವಾಗಿರುವ ಕೋಶ. ಐದನೆಯದು ಆನಂದಮಯಕೋಶ. ಇಲ್ಲಿ ಸಚ್ಚಿದಾನಂದಭಾವವು ಇದೆ. ಆದರೆ ಅದು ತಮಸ್ಸು ಹಾಗೂ ಅಜ್ಞಾನದಿಂದ ಕೂಡಿರುವ ಮನಸ್ಸಿನ ಭಾವನೆಗಳಿಂದ ಕಲುಷಿತಗೊಳ್ಳುತ್ತದೆ. ಕನಸುಗಳಿಲ್ಲದ ನಿದ್ರೆಯಲ್ಲಿ ಅದು ಸ್ಥಿರವಾಗಿರುತ್ತದೆ.

Saturday 2 November 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 20

        ಮಾನಸ ಲೋಕದಲ್ಲಿ ವಿಹರಿಸಲು ಹಾಗೂ ಮನಸ್ಸಿನ ಶಕ್ತಿಯನ್ನು
ತಿಳಿದುಕೊಳ್ಳಲು ಇರುವ ಒಂದು ಆದ್ಭುತವಾದ ವಿದ್ಯೆ, ತಂತ್ರ ವಿದ್ಯೆ. ಜನಸಾಮಾನ್ಯರಿಗೆ ತಂತ್ರದ ಬಗ್ಗೆ ಹಲವಾರು ತಪ್ಪು ಭಾವನೆಗಳಿವೆ. ಅದು ಕೇವಲ ತಪ್ಪು ಭಾವನೆಯೇ ಆಗಿದೆ. ಅಣುಶಕ್ತಿಯನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡಮಾತ್ರಕ್ಕೆ ಅಣುಶಕ್ತಿಯ ಮೇಲೆ ಆಪಾದನೆಯನ್ನು ಹೊರಿಸಲು ಬರುವುದಿಲ್ಲ. ಹಾಗಾಗಿ ಕೆಲವರು ಮನಸ್ಸಿನ ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡಮಾತ್ರಕ್ಕೆ ನೀವು ಮನಸ್ಸಿನ ಶಕ್ತಿಯನ್ನು ದೂರುವಂತಿಲ್ಲ. 
       'ತಂತ್ರ ವಿದ್ಯೆ ಎಲ್ಲರಿಗೂ ಅಲ್ಲ' ಎಂದು ಹಿಂದಿನ ಬರಹದಲ್ಲಿ ಹೇಳಿದ್ದೆ.
ಯಾಕೆ ಎಲ್ಲರಿಗೂ ಅಲ್ಲ ಅಂದರೆ ಮೊದಲನೆಯದಾಗಿ ಇದು ಕೆಲವು ಕಠಿಣ ಅನುಷ್ಠಾನ ಕ್ರಮಗಳನ್ನು ಒಳಗೊಂಡಿರುತ್ತದೆ. ಮನಸ್ಸನ್ನು ಹೊಸ ಸ್ತರಕ್ಕೆ ಇದು ನಿಮ್ಮನ್ನು
ಕೊಂಡೊಯ್ಯುತ್ತದೆ. ಇದನ್ನು ಜೀರ್ಣಿಸಿಕೊಳ್ಳುವುದು ಹಲವರಿಗೆ ಕಷ್ಟದ ವಿಷಯ. ಒಬ್ಬ ನುರಿತ ಗುರು ಬಳಿಯಲ್ಲಿದ್ದರೆ ಆತ ಹಂತ,ಹಂತವಾಗಿ ಹಾಗೂ ಸಹಜವಾಗಿ ಮುಂದುವರೆಯಲು ಸಹಾಯ ಮಾಡುತ್ತಾನೆ. 
        ಎರಡನೆಯದಾಗಿ ಮನಸ್ಸಿನ ಶಕ್ತಿ ತೆರೆದುಕೊಳ್ಳುತ್ತಿದ್ದಂತೇ, ಹಲವಾರು ಪ್ರಯೋಗಗಳನ್ನು ಮಾಡಿ ನೋಡಲು ಮನಸ್ಸು ಹಾತೊರೆಯುತ್ತದೆ. ಅದರಿಂದಾಗಿ ಮನಸ್ಸಿನಲ್ಲಿ 'ಅಹಂ' ಭಾವ ಮೂಡುವ ಅವಕಾಶ ಹೆಚ್ಚು. ಕೆಲವು ಪ್ರಯೋಗಗಳು ಮತ್ತೆ ಹಿಂತೆಗೆದುಕೊಳ್ಳಲಾಗದವಾಗಿರುತ್ತವೆ. ಆದ್ದರಿಂದ ಸಾಧಕನು ಬಹಳ ಎಚ್ಚರಿಕೆಯಿಂದ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಕೆಲವು ಸತ್ಯಗಳನ್ನು ತಿಳಿದುಕೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುತ್ತದೆ. ಪ್ರಕೃತಿಯ ಹಾಗೂ ಜೀವಿಗಳ ಗುಟ್ಟು ಗುಟ್ಟಾಗಿದ್ದರೇನೇ ಚಂದ. 
        ಮನಸ್ಸಿನ ಭಾವಲೋಕದಲ್ಲಿ ವಿಹರಿಸಲು ತಂತ್ರವಿದ್ಯೆ ಅತ್ಯಂತ
ಸಹಾಯಕಾರಿ. ಅಂತೆಯೇ  ಮನಸ್ಸಿನ ಶಕ್ತಿಯನ್ನು ಜನರ ಏಳಿಗೆಗಾಗಿ ಉಪಯೋಗಿಸಿಕೊಳ್ಳುವುದಾದರೆ ತಂತ್ರವಿದ್ಯೆ ನಿಸ್ಸಂದೇಹವಾಗಿಯೂ ಅತ್ಯಂತ ಉನ್ನತ ಸ್ಥಾನದಲ್ಲಿರುವ ವಿದ್ಯೆ. 
        ನಾನು ಮನೋವಿಜ್ಞಾನದ ವಿದ್ಯಾರ್ಥಿಯಾಗಿದ್ದುದರಿಂದ ಎಲ್ಲವನ್ನೂ ಮನೋವಿಜ್ಞಾನದ ದೃಷ್ಟಿಯಲ್ಲಿಯೇ ನೋಡಲು ಇಚ್ಚಿಸುತ್ತೇನೆ. ಹಾಗೆ ನೋಡಿದರೆ ತಾಂತ್ರಿಕ ವಿದ್ಯೆ ಅತ್ಯಂತ ಸುಂದರವಾಗಿ, ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಹೇಳಲ್ಪಟ್ಟ ಮನೋವಿಜ್ಞಾನವೇ. ಜೊತೆಗೆ ಶಿಸ್ತುಬದ್ಧ ಜೀವನವನ್ನೂ ಅದು ಕಲಿಸಿಕೊಡುತ್ತದೆ. 
        ತಂತ್ರದ ಬಗ್ಗೆ ನನ್ನ ವಿಶ್ಲೇಷಣೆಯನ್ನು ಚುಟುಕಾಗಿ ಹೇಳುತ್ತೇನೆ. 
ಜೀವನದಲ್ಲಿ ಯಾವುದೇ ಕೆಲಸದಲ್ಲಿ ನೀವು ಏಳಿಗೆಯನ್ನು ಪಡೆಯಬೇಕಾದರೆ, ನಿಮ್ಮಲ್ಲಿ ನಿಮಗಿರುವ ನಂಬಿಕೆ ಅತಿಮುಖ್ಯವಾಗಿರುತ್ತದೆ. ಅದು ನಿಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ಸಾಧಿಸುವ ಛಲವನ್ನು ಕೊಡುತ್ತದೆ. ಅಧ್ಯಾತ್ಮದ ವಿಚಾರ ಬಂದಾಗಲೂ ನಂಬಿಕೆಗೆ ಪ್ರಥಮ ಆದ್ಯತೆ.
        ತಂತ್ರಶಾಸ್ತ್ರವನ್ನು ಬೋಧಿಸುವಾಗ 'ಇದು ಶಿವನು ಪಾರ್ವತಿಗೆ ಹೇಳಿದ ವಿದ್ಯೆ. ದೇವಾನುದೇವತೆಗಳಿಗೆ ಇದು ದುರ್ಲಭ' ಎಂದೆಲ್ಲಾ ಹೇಳುವುದರ ಉದ್ದೇಶ, ನಿಮಗೆ ಆ ವಿದ್ಯೆಯಲ್ಲಿ ನಂಬಿಕೆ ತರಿಸುವುದೇ ಆಗಿದೆ. ಬೆಳಗಿನ ಜಾವದಲ್ಲಿ, ಕೆಲವೊಮ್ಮೆ ಸರಿರಾತ್ರಿಯಲ್ಲಿ ಇದರ ಅನುಷ್ಠಾನವನ್ನು ಮಾಡಬೇಕಾಗುತ್ತದೆ. ಎರಡೂ ಪ್ರಶಾಂತವಾಗಿರುವ ವೇಳೆಗಳಾಗಿವೆ. ಪ್ರತಿದಿನ ನಿಗದಿತ ಸಮಯದಲ್ಲಿ ಅನುಷ್ಠಾನ ಮಾಡುವುದರಿಂದ ನಿಮ್ಮ ಮನಸ್ಸು ನಿಮಗೇ ಅರಿವಿಲ್ಲದಂತೆ ಆ ವೇಳೆಯಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿರುವುದು
'ಭಾವ' ಹಾಗೂ ಆಯಾ ದೇವರ ಭಾವದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು. 
ಆ ಭಾವದಲ್ಲಿ ಮುಳುಗುತ್ತಿದ್ದಂತೇ, ನಿಮ್ಮ ಮನಸ್ಸು ಮಾನಸಲೋಕದಲ್ಲಿ ವಿಹರಿಸಲು ತೊಡಗಿಕೊಳ್ಳುತ್ತದೆ. ನಿಮ್ಮ ಭಾವ ಹಾಗೂ ನಿಮ್ಮ ನಂಬಿಕೆ, ಅರೆಪ್ರಜ್ಞಾಮನಸ್ಸಿಗೂ ಸರ್ವಶಕ್ತ ಪ್ರಜ್ಞಾಮನಸ್ಸಿಗೂ ಒಂದು ಏಣಿಯನ್ನು ಕಟ್ಟಿಕೊಡುತ್ತದೆ. 
        ನಾನು ಮನೋವಿಜ್ಞಾನವನ್ನು ಸಾಕಷ್ಟು ತಿಳಿದುಕೊಂಡಿದ್ದುದರಿಂದ ಆರಂಭಿಕ ದಿನಗಳಲ್ಲಿ ನನ್ನಲ್ಲಿ ಹಲವಾರು ದ್ವಂದ್ವಗಳಿದ್ದವು. ತಾರ್ಕಿಕವಾಗಿ ತಿಳಿಯಲು ಪ್ರಯತ್ನ ಪಡುತ್ತಿದ್ದೆ. ಕೊನೆಗೊಮ್ಮೆ ಈಜು ಕಲಿಯಲು ಧುಮುಕುವುದು ಮುಖ್ಯ ಎಂದು ಮನಗಂಡಂತೇ ನನ್ನ ತರ್ಕ, ದ್ವಂದ್ವಗಳನ್ನೆಲ್ಲಾ ಮೂಟೆಕಟ್ಟಿ ಈ ವಿದ್ಯೆಯ ಸಾಗರಕ್ಕೆ ಧುಮುಕಿ ಬಿಟ್ಟೆ.
       ಏನನ್ನಾದರೂ ನಂಬುವ ಮುನ್ನ ಪ್ರಶ್ನೆ ಮಾಡಿ, ಪರೀಕ್ಷಿಸಿ.. ಏನು ಬೇಕಾದರೂ ಮಾಡಿ. ಎಲ್ಲವನ್ನು ಮನನಗೊಂಡು, ಮಥನಗೊಂಡು ನಂಬಿದಮೇಲೆ ಅದನ್ನು ಸಾಧಿಸುವವರೆಗೂ ಬಿಡಬೇಡಿ. 
ನಂಬಿ ಕೆಟ್ಟವರಿಲ್ಲ... 

Friday 25 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 19

        ನಾನು ಬಂಟವಾಳದಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದು ಉಪಾಸನೆಯಿಂದ ಇನ್ನೊಂದು ಉಪಾಸನೆಯ ನಡುವೆ ನನಗೆ ಸಾಕಷ್ಟು ಬಿಡುವು ಸಿಗುತ್ತಿತ್ತು. ಅನುಷ್ಠಾನ ಮಾಡುತ್ತಿರುವಾಗಲೂ ಸಂಜೆಯ ವೇಳೆ ನನಗೆ ಬಿಡುವು ಸಿಗುತ್ತಿತ್ತು. 'ಈ ಉಪಾಸನೆಯ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಬಹುದೇ? ಹೋಟೆಲ್ ತಿಂಡಿ ಕಾಫಿ ಕುಡಿಯಬಹುದೇ?'  ಗುರುಗಳ ಬಳಿ ಕೇಳಿದ್ದೆ. 'ದೇವರಿಗೆ ಅರ್ಪಿಸುವ ನೈವೇದ್ಯವನ್ನುಮಾತ್ರ ನೀನೇ ಮಾಡು. ಏಕೆಂದರೆ ಹೊರಗಿನ ತಿಂಡಿಯ ಶುದ್ಧತೆಯ ಬಗ್ಗೆ ನನಗೆ ಅನುಮಾನಗಳಿವೆ. ಅದು ನಿನ್ನನ್ನು ಮುಂದೆ ಪ್ರಶ್ನೆಯಾಗಿ ಕಾಡಬಾರದು. ನೀನು ಏನು ಬೇಕಾದರೂ ತಿನ್ನಬಹುದು, ತಂತ್ರಶಾಸ್ತ್ರದಲ್ಲಿ ತಿನ್ನುವುದಕ್ಕೆ ಕಡಿವಾಣವಿಲ್ಲ. ಆರೋಗ್ಯಕ್ಕೆ ಒಳ್ಳೆಯದನ್ನು ನೋಡಿ ತಿನ್ನು. ಈರುಳ್ಳಿ, ಬೆಳ್ಳುಳ್ಳಿ ಮುಂತಾದವು ರಾಜಸಿಕ ಸ್ವಭಾವ ಬೆಳೆಸುತ್ತದೆ ಎಂದೆಲ್ಲಾ ಹೇಳುತ್ತಾರೆ. ಮನಸ್ಸನ್ನು ಗಟ್ಟಿ ಮಾಡಿದರೆ ಇವೆಲ್ಲಾ ಏನೂ ಲೆಕ್ಕಕ್ಕಿಲ್ಲ' ಎಂದು ಉತ್ತರಿಸಿ ನನಗೆ ಮಹದುಪಕಾರವನ್ನು ಮಾಡಿದರು. ಏಕೆಂದರೆ ನಾನು ರುಚಿರುಚಿಯಾಗಿ ತಿಂಡಿ ತಿನ್ನುತ್ತಿದ್ದ ಮನುಷ್ಯ. ನಾನು ನನಗಾಗಿ ಕೇವಲ ಅನ್ನ ಸಾರು ಮಾಡಿಕೊಂಡರೂ ತುಪ್ಪ ಹಾಗೂ ಅಪ್ಪೆಮಿಡಿ ಉಪ್ಪಿನಕಾಯಿ ಜೊತೆಯಲ್ಲಿರುತ್ತಿತ್ತು. ಅಲ್ಲದೇ 'ವಿಷ್ಣು ವಿಲಾಸ' ಹೋಟೆಲಿನ ಬಿಸ್ಕುಟ್ ರೊಟ್ಟಿ, ಬಿಸ್ಕುಟ್ ಆಂಬೊಡೆ, ಮಿಕ್ಸ್ಚರ್ ರೊಟ್ಟಿ, ತುಪ್ಪದ ದೋಸೆ ಮುಂತಾದವು ನನ್ನ ಮೆಚ್ಚಿನ ತಿನಿಸುಗಳಾಗಿದ್ದವು. ಅದಲ್ಲದೇ ಸಂಜೆಯ ವೇಳೆಯಲ್ಲಿ 'ಪೋಡಿ ದಾಮ್ಮ'ನ ಅಂಗಡಿಯ ಬಜೆ (ಬಜ್ಜಿ), ಅಂಬಡೆಗಳು, 'ಅರ್ಲಾ ಸುಬ್ಬ'ನ ಅಂಗಡಿಯ ಸಿಹಿತಿನಿಸುಗಳು, 'ಮುಕುಂದ'ನ ಅಂಗಡಿಯ ಚುರುಮುರಿ... ಇವೆಲ್ಲವೂ ತಿನ್ನುತ್ತಿದ್ದೆ. ಒಂದೇ ದಿನ ಅಲ್ಲ, ಬೇರೆ ಬೇರೆ ದಿನ ! 
        ಸಂಜೆಯಾದಮೇಲೆ ಯಶವಂತ ವ್ಯಾಯಾಮ ಶಾಲೆಯಲ್ಲಿ ಪ್ರತಿ ದಿನ ಎನ್ನುವಂತೇ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ್ ಬಾಳಿಗಾ ಸಿಗುತ್ತಿದ್ದರು. ಭಾಮೀ ಸುಧಾಕರ್, ಸುಬ್ರಾಯ ಬಾಳಿಗಾ, ಗುರು ಮುಂತಾದವರಲ್ಲದೇ ಹಲವು ಗೆಳೆಯರು ಅಲ್ಲಿ ಸಿಗುತ್ತಿದ್ದರು. ಎಲ್ಲರೂ ಒಂದಲ್ಲ ಒಂದು ರೀತಿ ನನಗೆ ನೆರವಾದವರೇ. ಭವಾನಿ ಅಕ್ಕನ ಮನೆಗೆ ಹೋದರೆ ಏನಾದರೂ ತಿನ್ನಿಸದೇ ಬಿಡುತ್ತಿರಲಿಲ್ಲ. ದೇವಸ್ಥಾನದ ಎದುರಿಗಿರುವ ಶ್ರೀ ಕೃಷ್ಣ ಮಠಕ್ಕೆ ಹೋದರೆ ಜನ್ನ ಭಟ್ಟರ ಶ್ರೀಮತಿಯವರೂ ಪ್ರೀತಿಯಿಂದ ಏನಾದರೂ ತಿನ್ನಲು ಕೊಡುತ್ತಿದ್ದರು. ನನ್ನ ದೊಡ್ಡಪ್ಪ ರಾಮ್ ನಾಯಕ್ ಹಾಗೂ ದೊಡ್ಡಮ್ಮ ಪ್ರೇಮಾ ನಾಯಕ್ ಅವರು ತುಂಬಾ ಆತ್ಮೀಯತೆಯಿಂದ ನೋಡಿಕೊಳ್ಳುತ್ತಿದ್ದರು. ಇವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸಲು ಇದೊಂದು ಅವಕಾಶವೆಂದು ಭಾವಿಸಿ, ಈ ಮೂಲಕ ನನ್ನ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ. 
        ನಾನು ಏನು ಮಾಡುತ್ತಿದ್ದೇನೆಂದು ಯಾರ ಬಳಿಯೂ ವಿವರವಾಗಿ ಹೇಳಿಕೊಳ್ಳುತ್ತಿರಲಿಲ್ಲ. ಕೆಲ ದಿನಗಳಿಗಾಗಿ ಮಾತ್ರ ಬರುತ್ತಿದ್ದ ನನ್ನ ಗುರುಗಳಂತೂ ಯಾರನ್ನೂ ಭೇಟಿಯಾಗಲು ಸಿದ್ಧರಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಎಂದು, ಬಂದದ್ದು ಹೋಗಿದ್ದು ಎರಡೂ ಗೊತ್ತಾಗದಂತೆ ಇರುತ್ತಿದ್ದರು. 
        ನಾನು ಮೊದಲಿನಿಂದಲೂ ಸಾಮಾನ್ಯ ಮನುಷ್ಯನ ಹಾಗೆ ನನಗೆ ಬೇಕಾದ ರೀತಿಯಲ್ಲಿ ಬದುಕಲು ಇಷ್ಟ ಪಡುತ್ತಿದ್ದೆ. ನಾನು ಯಾರಿಗೂ ಯಾವ ಗುಟ್ಟು ಬಿಟ್ಟುಕೊಡದಿದ್ದರೂ, ನಮ್ಮ ಓಣಿಯಲ್ಲಿಯೇ ಇದ್ದ ಹರಿಭಟ್ಟರು ಒಮ್ಮೆ ಬೆಳಗಿನ ಜಾವ ನದಿಯ ಬಳಿ ಹೋಗುತ್ತಿದ್ದಾಗ ಗಮನಿಸಿದರು. ಆನಂತರ ಹಲವಾರು ಬಾರಿ ನನ್ನನ್ನು ಗಮನಿಸಿ ನಾನು ಏನು ಮಾಡುತ್ತಿದ್ದೇನೆಂದು ಅವರಾಗಿಯೇ ತಿಳಿದುಕೊಂಡರು. ಅವರ ಬಳಿ ಮಾತ್ರ ನಾನು ಮುಕ್ತವಾಗಿ ನನ್ನ ಸಾಧನೆಯ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಕೂಡಾ ದೇವರ ಉಪಾಸನೆಯ ಬಗ್ಗೆ ಒಲವಿತ್ತು. ವೇದಗಳಲ್ಲಿ ಪರಿಣಿತರು. ನನ್ನ ಹಲವು ಸಮಸ್ಯೆಗಳಿಗೆ ವೇದಸೂಕ್ತಗಳಿಂದ ಉತ್ತರ ಕೊಡುತ್ತಿದ್ದರು. ಅವರಿಗೂ ನನ್ನದೊಂದು ಹೃತ್ಪೂರ್ವಕ ನಮನ. 'ಮಾಣೂರು ಅಚ್ಚು' ನನಗೆ ಅಚ್ಚುಮೆಚ್ಚಾಗಿದ್ದರು. ನಾನು ಏನು ಕೇಳಿದರೂ ಅದು ಎಷ್ಟೇ ಕಷ್ಟವಾದರೂ ಅವರು ಅದನ್ನು ಪೂರೈಸುತ್ತಿದ್ದರು. ಇಂದು ಆತ ನಮ್ಮೊಡನೆ ಇಲ್ಲ ಎನ್ನುವುದೇ ತುಂಬಾ ಬೇಸರದ ಸಂಗತಿ. 
        ಕೆಲವೊಮ್ಮೆ ನನಗೆ ಕೆಲವು ಸಮಸ್ಯೆಗಳನ್ನು ನಿವಾರಿಸುವ ಕೆಲಸ ಬಂದೊದಗುತ್ತಿತ್ತು. ಉದಾಹರಣೆಗೆ 'ಒಂದು ಹುಡುಗಿಯ ಮೈಮೇಲೆ ದೆವ್ವವೊಂದು ಬಂದು ಕಾಡುತ್ತಿದೆ, ನೀವು ಸರಿ ಮಾಡಲು ಸಾಧ್ಯವೇ?' ಎಂದು ಕೇಳಿದಾಗ ನಾನು ಒಪ್ಪಿಕೊಂಡು ಹೋಗಿ (ಸಮ್ಮೋಹಿನೀ ವಿದ್ಯೆಯಿಂದ) ಆಕೆಯ ಮನಃಸ್ವಾಸ್ಥ್ಯವನ್ನು ಸರಿಪಡಿಸಿ ಬರುತ್ತಿದ್ದೆ. ಇಂತಹ ಹತ್ತು ಹಲವು ಕೆಲಸಗಳಿಂದ ಒಂದಷ್ಟು ಜನರಿಗೆ ಹತ್ತಿರವಾಗಿದ್ದೆ. 
        ನಾನು ಹೊರಡುವ ದಿನ ಹತ್ತಿರ ಬರುತ್ತಿದ್ದಂತೇ ಒಂದು ದಿನ ಮಾಣೂರು ಅಚ್ಚು ನನ್ನ ಬಳಿ ಬಂದು, ಒಂದು ಪಂಚೆ, ಒಂದು ಚೌಕ ನನಗೆ ಕೊಟ್ಟು 'ಇದು ನನ್ನ ಕಡೆಯಿಂದ'  ಎಂದು ಹೇಳಿ ಒಂದು ಶಾಲನ್ನು ಹೊದೆಸಿದ. 'ನೀನು ಇಲ್ಲಿಯೇ ಇರುವ ಹಾಗಿದ್ದರೆ ಒಂದು ಸಣ್ಣ ಜಾಗದಲ್ಲಿ ಒಂದು ಮನೆಯನ್ನು ಕಟ್ಟಿ ಕೊಟ್ಟು, ಒಂದಷ್ಟು ಹಣವನ್ನು ನಿನ್ನ ಹೆಸರಲ್ಲಿ ಬ್ಯಾಂಕಲ್ಲಿ ಹಾಕಿಡಲು ನನ್ನ ಕೆಲವು ಗೆಳೆಯರು ಹಾಗೂ ಸಂಬಂಧಿಕರು ಸಿದ್ಧರಿದ್ದಾರೆ' ಎಂದು ಆತ ಹೇಳಿದಾಗ ನಂಗೆ ಅಚ್ಚರಿ ಹಾಗೂ ನಗು!
'ಅಂತೂ ನನಗೆ ಗುರುವಿನ ಪಟ್ಟ ಕಟ್ಟಿ ಇಲ್ಲಿಯೇ ಕೂರಿಸುವ ಇರಾದೆ ನಿಮಗೆ, ಆದರೆ ಅದು ಸಾಧ್ಯವಿಲ್ಲ. ಏಕೆಂದರೆ ನಾನು ಮನೆಯಲ್ಲಿ ಎರಡು ವರ್ಷಗಳ ನಂತರ ಹಿಂತಿರುಗಿ ಬರುತ್ತೇನೆಂದು ಮಾತುಕೊಟ್ಟು ಬಂದಿದ್ದೇನೆ' ಎಂದು ಹೇಳಿದೆ. ಆತನ ಪ್ರೀತಿಯನ್ನು ನಾನೆಂದೂ ಮರೆಯಲಾರೆ. 
        ಬೆಂಗಳೂರಿಗೆ ಬಂದ ಮೇಲೆ ನಾನು ನನ್ನ ಹವ್ಯಾಸವಾಗಿದ್ದ
ಛಾಯಾಚಿತ್ರಗಾರಿಕೆಯನ್ನು ನನ್ನ ಕಸುಬಾಗಿ ಮಾಡಿಕೊಂಡೆ.
'ಗುರು'ವಾಗುವ ಬದಲು ಸಿನೆಮಾ ಪತ್ರಿಕೆಗಳ 'ಗ್ಲಾಮರ್' ಛಾಯಾಗ್ರಾಹಕನಾದೆ. 


ಬೆಂಗಳೂರಿಗೆ ಬಂದು ಒಂದೆರಡು ವರ್ಷಗಳ ನಂತರ ಬೀರುವಿನಲ್ಲಿ ಇಟ್ಟಿದ್ದ 'ಅಚ್ಚು' ನೀಡಿದ್ದ ಬಟ್ಟೆಗಳನ್ನು ಒಮ್ಮೆ ಕಂಡೆ. ಗಡ್ಡವನ್ನು ಹೇಗೂ ಬಿಟ್ಟಿದ್ದೆ. 'ಗುರುವಾಗಿದ್ದರೆ ಹೇಗಿರುತ್ತಿದ್ದೆ' ಎಂದು ಯೋಚಿಸಿ ಆ ಚೌಕವನ್ನು ತಲೆಗೆ ಸುತ್ತಿಕೊಂಡು ಆ ಶಾಲನ್ನು ಹೊದ್ದುಕೊಂಡು ಒಂದೆರಡು ಚಿತ್ರಗಳನ್ನು ತೆಗೆಸಿಕೊಂಡೆ. 



        ತಂತ್ರ ವಿದ್ಯೆ ಎಲ್ಲರಿಗೂ ಅಲ್ಲ. ಅದರಲ್ಲಿರುವ ಸಾಧಕ ಬಾಧಕಗಳೇನು?  'ತಂತ್ರ'ವನ್ನು ಮನೋವಿಜ್ಞಾನದ ದೃಷ್ಠಿಯಲ್ಲಿ ನೋಡುವುದು ಹೇಗೆ ?       
....ಮುಂದಿನ ಸಂಚಿಕೆಯಲ್ಲಿ.                                  

Wednesday 23 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 18

        'ಕುಲಕುಂಡಲಿನೀ ಯೋಗ' ತಾಂತ್ರಿಕ ಸಾಧನೆಯ ಅಂತಿಮ ಗುರಿ. ಇದರ ಬಗ್ಗೆ ಸಣ್ಣ ವಿವರಣೆ ಕೊಡುತ್ತೇನೆ. ಮೂಲಾಧಾರದಲ್ಲಿರುವ ಶಕ್ತಿಯನ್ನು, ಷಟ್ ಚಕ್ರಗಳನ್ನು ಬೇಧಿಸಿ ಸಹಸ್ರಾರದಲ್ಲಿರುವ ಶಿವನಲ್ಲಿ ಒಂದಾಗಿಸುವ ಕ್ರಿಯೆಯೇ ಕುಲಕುಂಡಲಿನೀ ಯೋಗ. ಇದಕ್ಕೂ ಮುಂಚೆ ಯೋಗ ಶಾಲೆಯಲ್ಲಿ ನನಗೆ ಕುಂಡಲಿನೀ ಶಕ್ತಿಯ ಕುರಿತಾದ ಕೆಲವು ಪ್ರಯೋಗಗಳನ್ನು ಮಾಡಿಸಿದ್ದರು. ಹಠಯೋಗದ 'ತಾಡನ' ಕ್ರಿಯೆ ಕುಂಡಲಿನೀ ಶಕ್ತಿಯನ್ನು ಉದ್ದೀಪನಗೊಳಿಸುವ ಅಂತಹ ಒಂದು ಕ್ರಿಯೆ.ಈ ಶಕ್ತಿಯ ಬಗ್ಗೆ ವಿವರಗಳನ್ನು ಒತ್ತಟ್ಟಿಗಿಟ್ಟು ಹೇಳಬಹುದಾದ ನನ್ನ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತೇನೆ. 
        ಸಾಧಾರಣವಾಗಿ ತಂತ್ರವಿದ್ಯೆಯ ಸಾಧನೆಯನ್ನು ಮೂರು ಭಾವಗಳಲ್ಲಿ ಕಲಿಸಲಾಗುತ್ತದೆ. ಅವುಗಳಲ್ಲಿ ಪಶುಭಾವ ಘೋರವಾಗಿರುವಂತೆ ಭಾಸವಾಗುತ್ತದೆ. ವೀರಭಾವ ಕಠೋರವಾಗಿದ್ದು, ದಿವ್ಯಭಾವ ಮನಸ್ಸಿನ ಉತ್ಕಟಸ್ಥಿತಿಗೆ ಸಾಕ್ಷಿಯಾಗುತ್ತದೆ. 
           ತಂತ್ರದ ಪಂಚಮಕಾರಗಳನ್ನೊಳಗೊಂಡ  ಸಾಧನೆಯಲ್ಲಿ `ಮೈಥುನ'ದ ಪ್ರಶ್ನೆ ಬಂದಾಗ ನಾನು ಗುರುಗಳ ಬಳಿ ಆ ಬಗ್ಗೆ ನನ್ನ ವಿರೋಧ ವ್ಯಕ್ತ ಪಡಿಸಿದ್ದೆ. `ಮೈಥುನ'ವೆಂದರೆ ಹೆಣ್ಣೊಬ್ಬಳೊಂದಿಗೆ ಲೈಂಗಿಕ ಸಂಪರ್ಕ. ಅದು ಸುತರಾಂ ನನ್ನ ಮನಸ್ಸಿಗೆ ಒಪ್ಪಿಗೆಯಾಗಿರಲಿಲ್ಲ. 
        'ಮಿಥುನ'ದ  ತಾತ್ಪರ್ಯವನ್ನು ಗುರುಗಳು ಆಗ ನನಗೆ ವಿವರಿಸಿ ಹೇಳಿದರು. ಪಶುಭಾವದ 'ಮಿಥುನ' ಸಾಧಾರಣ ಜನರು ಅನುಭವಿಸುವ ಸುಖ. ಅಲ್ಲಿ ನಾನು ಸುಖ ಪಡಬೇಕು ಎನ್ನುವುದಷ್ಟೇ ಮುಖ್ಯವಾಗಿರುತ್ತದೆ. ತನ್ನ ಸಂಗಾತಿಯ ಬೇಕು ಬೇಡಗಳ ಬಗ್ಗೆ ಆತ ಯೋಚಿಸುವುದೇ ಇಲ್ಲ. ವೀರಭಾವದ ಮಿಥುನದಲ್ಲಿ ತಾನು ಸುಖ ಪಡುವುದಕ್ಕಿಂತ ತನ್ನ ಸಂಗಾತಿ ಸುಖದ ಚರಮಾವಸ್ಥೆ ಪಡೆಯಲಿ ಎನ್ನುವುದು ಮುಖ್ಯವಾಗಿರುತ್ತದೆ. ಆದರೆ ತಾನೂ ಸುಖದಲ್ಲಿ ಭಾಗಿಯಾಗಿಯೇ ಇರುತ್ತಾನೆ. ದಿವ್ಯಭಾವದಲ್ಲಿ ದೈಹಿಕ ಸುಖಕ್ಕಾಗಿ ಸಂಗಾತಿಯನ್ನು ಸೇರು ಪ್ರಶ್ನೆಯೇ ಇರುವುದಿಲ್ಲ. (ಈ ಭಾವಗಳ ಕ್ರಿಯೆ ಗಂಡು, ಹೆಣ್ಣು ಇಬ್ಬರಿಗೂ ಸಮಾನವಾಗಿಯೇ ಅನ್ವಯವಾಗುತ್ತದೆ)
        ದಿವ್ಯಭಾವದಲ್ಲಿಯೂ ಕೂಡ ಪಂಚಮಕಾರದ ಭಾಗವಾದ 'ಮಿಥುನ'ದಲ್ಲಿ  ಹೆಣ್ಣನ್ನು ಸೇರುವ ಮೊದಲು ಆಕೆಯನ್ನು (ಆಕೆಯೂ ತಂತ್ರಸಾಧಕಿ ಆಗಿರುತ್ತಾಳೆ) ದೇವಿಯಂತೆ ಪೂಜಿಸಲಾಗುತ್ತದೆ. ದೇವಿಯನ್ನು ಸ್ಮರಿಸುತ್ತಾ ಸಾಧಕಿಯನ್ನು ಸಾಧಕ ಸೇರಬೇಕಾಗುತ್ತದೆ. ಇಲ್ಲಿ ಸಾಧಕ ದೈಹಿಕವಾಗಿ ಆಕೆಯನ್ನು ಸೇರಿದರೂ ಮನಸ್ಸನ್ನು ದೇವಿಯ ಪಾದಗಳಲ್ಲಿ ಸ್ಥಿರವಾಗಿರಿಸಬೇಕೇ ವಿನಃ ದೈಹಿಕ ಆನಂದದಲ್ಲಿ ಒಂದು ಕ್ಷಣವೂ ಮೈಮರೆಯುವಂತಿಲ್ಲ. ಕೇಳಲೇ ಘೋರವಾಗಿರುವ ಈ ಸಾಧನೆಯನ್ನು ನಾನು ನಿರಾಕರಿಸಿದೆ. ಮದುವೆಯಾಗುವ ಮುನ್ನ ಹೆಣ್ಣೊಬ್ಬಳೊಡನೆ ಲೈಂಗಿಕ ಸಂಪರ್ಕವಾಗುವುದು ನನಗಿಷ್ಟವಿರಲಿಲ್ಲ. 
          ನನ್ನ ನಿಲುವನ್ನು ಬದಲಿಸಲು ನನ್ನ ಗುರುಗಳು ಬಹಳ ಪ್ರಯತ್ನ ಪಟ್ಟರು. ಈ 'ದಿವ್ಯಮಿಥುನ' ನಿನಗೆ ಕುಲಕುಂಡಲಿನೀ ಯೋಗದ ಸಚ್ಚಿದಾನಂದ ಸ್ಥಿತಿಗೆ ತಲುಪಲು ಬಹು ಮುಖ್ಯ ಸಾಧನವಾಗುತ್ತದೆ ಎಂದು ಹೇಳಿದರಲ್ಲದೇ, ಕೊನೆಗೊಮ್ಮೆ 'ನೀನು ಪಂಚಮಕಾರದಲ್ಲಿ ಈ ಹಂತವನ್ನು ದಾಟುವುದು ಖಚಿತ' ಎಂದು ಭವಿಷ್ಯವನ್ನೂ ಕೂಡ ಹೇಳಿಬಿಟ್ಟರು! 
         ಮುಂದೊಂದು ದಿನ ಪ್ರತಿನಿತ್ಯದಂತೆ ನಾನು ಬೆಳಿಗ್ಗೆ ಮೂರುಗಂಟೆಗೆ ಎದ್ದು ಸ್ನಾನ ಮಾಡಲು ನದೀತೀರಕ್ಕೆ ಹೋದಾಗ ಅಂದು ನದಿಯಲ್ಲಿ ತುಂಬಾ ಸೆಳೆತವಿತ್ತು. ಹಾಗಾಗಿ ನಾನು ಸ್ವಲ್ಪ ಮುಂದಿರುವ ಲಿಂಗದೇವಸ್ಥಾನದ ತಟದ ಬಳಿ ಸ್ನಾನ ಮಾಡಲು ಹೋದೆ. ಏಕೆಂದರೆ ಅಲ್ಲಿ ದೊಡ್ಡ ಕಲ್ಲುಗಳು ನದಿಗೆ ಅಡ್ಡವಿರುವುದರಿಂದ, ಆ ಕಲ್ಲಿನ ಬಳಿ ನದಿಯ ನೀರು ಹೆಚ್ಚಿನ ಸೆಳೆತವಿಲ್ಲದೇ ಸ್ವಲ್ಪ ಮಟ್ಟಿಗೆ ಶಾಂತವಾಗಿರುತ್ತಿತ್ತು. 



        ಆ ದೊಡ್ಡ ಕಲ್ಲುಗಳ ಮುಂದೆ ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಲ್ಲೂ ನೀರಿನ ಸೆಳೆತ ಆರಂಭವಾಯಿತು. ನಾನು ಅದರಲ್ಲಿ ಕೊಚ್ಚಿಕೊಂಡು ಹೋಗದಂತೆ ಎದುರಿಗಿದ್ದ ಎರಡು ಕಲ್ಲಿನ ತುದಿಗಳನ್ನು ನನ್ನ ಕೈಗಳಿಂದ ಹಿಡಿದುಕೊಂಡೆ. ಆದರೂ ಆ ಕಲ್ಲುಗಳ ಮಧ್ಯದಿಂದ ಬಂದ ನೀರಿನ ಹೊಡೆತಕ್ಕೆ ನನ್ನ ಇಡೀ ದೇಹ ಮೇಲೆದ್ದಿತು. ಆದರೂ ಕಲ್ಲುಗಳನ್ನು ಆಧಾರವಾಗಿ ಬಲವಾಗಿ ಕೈಗಳಿಂದ ಹಿಡಿದುಕೊಂಡಿದ್ದರಿಂದ ದೇಹ ನದಿಯಲ್ಲಿ ತೇಲುತ್ತಿತ್ತು. ನದಿಯ ನೀರಿನ ಹೊಡೆತಕ್ಕೆ ದೇಹ ಮೇಲೆ ಕೆಳಗೆ ಹೊಯ್ದಾಡುತ್ತಿತ್ತು. ಅದೇನು ಭಾವ ಮೂಡಿತ್ತೋ ಏನೋ, ಆ ಕ್ಷಣದಲ್ಲಿ ನದಿ ಒಂದು ಹುಡುಗಿಯಂತೆ, ನಾನು ಕೈಯಿಟ್ಟ ಕಲ್ಲುಗಳು ವಕ್ಷಸ್ಥಳದಂತೆ ಮೃದುವಾಗಿ ಭಾಸವಾಗಿ, ಪದೇ ಪದೇ ದೇಹದ ಹೊಯ್ದಾಟದ ಪರಿಣಾಮವಾಗಿ ಅಲ್ಲಿ ವೀರ್ಯಸ್ಖಲನವಾಗಿ ಹೋಯಿತು. 
        ಅದಾದ ಒಡನೆಯೇ  ನನ್ನಲ್ಲಿ ಅಪರಾಧೀ ಮನೋಭಾವ ಮೂಡಿತು. ಸ್ನಾನ ಮಾಡುವ ಮುನ್ನ ನದಿಯನ್ನು ದೇವರೆಂದು ಭಾವಿಸಿ ಸ್ತೋತ್ರ ಹೇಳಿ ಸ್ನಾನ ಮಾಡುತ್ತೇವೆ. ಇಂತಹ ದೈವಸಮಾನವಾದ ನದಿಯನ್ನು ಮಲಿನಗೊಳಿಸಿ ತಪ್ಪು ಮಾಡಿದೆ ಎಂಬ ಪಶ್ಚಾತಾಪ ಭಾವನೆ ಮೂಡಿತು.
        ಈ ಘಟನೆಯನ್ನು ಗುರುಗಳ ಬಳಿ ನೋವಿನಿಂದ ಹೇಳಿಕೊಂಡೆ. ಆಗ ಅವರು `ಆಯಿತು.. ಮಿಥುನವೂ ಆಯಿತು..ನೋಡು ನೀನು ದೈವೀಭಾವದಿಂದ ಹುಡುಗಿಯನ್ನು ಸೇರಲು ನಿರಾಕರಿಸಿದೆ. ಈಗ ನೋಡು ನದಿಯ ಬಗ್ಗೆ ನಿನಗೆ ಸಹಜವಾಗಿಯೇ ದೈವೀಭಾವನೆ ಇದೆ. ಅಲ್ಲಿಯೇ ಮಿಥುನವೂ ಆಗಿದೆ. ಇಂದಿನಿಂದ ನಿನಗೆ ದೈವ ಭಾವದ ಕುಲಕುಂಡಲಿನೀ ಯೋಗದ ಶಿಕ್ಷಣ' ಎಂದು ಹೇಳಿಬಿಟ್ಟರು
        'ದಿವ್ಯಭಾವ' ಎಂದು ಕರೆಯಲ್ಪಡುವ ದೈವ ಸಾಕ್ಷಾತ್ಕಾರದ ಹಾದಿ (ಜಡಶಿವನನ್ನು ಶಕ್ತಿಯು ಸೇರುವ ಕುಲಕುಂಡಲಿನೀ ಯೋಗ)ಯನ್ನು ನನಗೆ ನಂತರ ಭೋಧಿಸಲಾಯಿತು. ನಿರ್ವಿಕಲ್ಪ ಸಮಾಧಿ ಎನ್ನುವ ಅಂತಿಮಸ್ಥಿತಿಯನ್ನು ತಲುಪಲು ಗುರುಗಳು ನನ್ನನ್ನು ಅನುವುಗೊಳಿಸಿದರು. 
        ಕೆಲವು ದಿನಗಳು ಕಳೆದವು. ನನ್ನ ಸಾಧನೆ ಮುಂದುವರೆಯುತ್ತಲೇ ಇತ್ತು. ಈ ಸಾಧನೆ ಮುಂದುವರೆಯುತ್ತಿದ್ದಂತೇ ಒಂದು ಹಂತದಲ್ಲಿ ನಾನು ನನ್ನ ತಾಂತ್ರಿಕ ಸಾಧನೆಯನ್ನೇ ನಿಲ್ಲಿಸಿಬಿಟ್ಟೆ.
        ನಿರ್ವಿಕಲ್ಪ ಸಮಾಧಿಯ ಸಾಧನೆ ಮುಂದುವರಿಸುತ್ತಿದ್ದಾಗ ಆ ಪ್ರಚಂಡ ಪ್ರಕೃತೀ ಶಕ್ತಿಯಲ್ಲಿ ಲೀನವಾದರೆ ನಾನು ನನ್ನನ್ನೇ ಮರೆತುಬಿಡುವೆನೇನೋ ಎನ್ನುವಂತಹ ಭಾವನೆ ಅಂದು ನನಗೆ ಬಲವಾಗುತ್ತಾ ಹೋಯಿತು. ನಾನು ಸತ್ತರೂ ಸಾಯಬಹುದು ಎಂದೂ ಅನ್ನಿಸಿತ್ತು. ಅದಲ್ಲದೇ ನನ್ನ ತಂದೆ ತಾಯಿಗೆ 'ಎರಡು ವರ್ಷಗಳ ಬಳಿಕ ಖಂಡಿತ ಬರುತ್ತೇನೆ ಹಾಗೂ ನಿಮ್ಮೊಂದಿಗಿರುತ್ತೇನೆ' ಎಂದು ಮಾತು ಕೊಟ್ಟಿದ್ದೆ. ಗುರುಗಳನ್ನು ಭೇಟಿಯಾಗಲು ಮಂಗಳೂರಿಗೆ ಹೋದಾಗ, ನನ್ನ ಗುರುಗಳು ಬೇರೊಂದು ಕಾರ್ಯನಿಮಿತ್ತ ಉತ್ತರ ಭಾರತಕ್ಕೆ ತೆರಳಿದ್ದಾರೆಂದು ತಿಳಿಯಿತು. 
        ಆಗ ನನಗೆ ನನ್ನ ಗುರುಗಳು ಹೇಳಿದ ಮಾತುಗಳು ನೆನಪಾದವು. 'ನಾನಿಲ್ಲದಿರುವಾಗ ಯಾವುದಾದರೂ ಸಂಧಿಗ್ಧ ಪರಿಸ್ಥಿತಿ ಉಂಟಾದರೆ ನಿಮ್ಮ ಸಮಾಜದ ಗುರುಗಳಲ್ಲಿ ಸಂದೇಹ ಪರಿಹರಿಸಿಕೊಳ್ಳಬಹುದು' 
        ನಮ್ಮ ಸಮಾಜದ ಗುರುಗಳಾದ ಕಾಶೀಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ತೀರ್ಮಾನಿಸಿದೆ. ನಮ್ಮ ದೇಗುಲದ ಸನಿಹವಿದ್ದ ಶ್ರೀ ಹರಿಭಟ್ಟರಿಗೆ ಮಾತ್ರ ನಾನು ಮಾಡುತ್ತಿದ್ದ ಸಾಧನೆಗಳ ಬಗ್ಗೆ ತಿಳಿದಿತ್ತು. ಆದ್ದರಿಂದ ಅವರೊಂದಿಗೆ ಚಾತುರ್ಮಾಸದಲ್ಲಿದ್ದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ಹೊರಟೆ. ಹೊರಡುವ ಮುನ್ನ ನನ್ನೆಲ್ಲಾ ವಿವರಗಳನ್ನು ಪತ್ರಮುಖೇನ ಸ್ವಾಮೀಜಿಯವರಿಗೆ ಬರೆದು ತಿಳಿಸಿದ್ದೆ.       

ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು

  ನನ್ನನ್ನು ಕಂಡೊಡನೆ ಪ್ರೀತಿಯಿಂದ ಬರ ಮಾಡಿಕೊಂಡ ಸ್ವಾಮೀಜಿಯವರು ನನ್ನೊಡನೆ ಸುಮಾರು ಮೂರು ಗಂಟೆಗಳ ಕಾಲ ಕಳೆದರು. ನನ್ನಿಂದ ಪ್ರತಿಯೊಂದು ವಿವರ ಪಡೆದುಕೊಂಡ ಸ್ವಾಮೀಜಿಯವರು ಪ್ರಶ್ನೆಯೊಂದನ್ನು ಕೇಳಿದರು. 
'ನಿಮಗೆ ಸಾಂಸಾರಿಕ ಜೀವನದ ಸುಖಗಳಲ್ಲಿ ಆಸಕ್ತಿಯಿದೆಯೇ ?'
'ಆಸಕ್ತಿಯೇನೋ ಬಹಳಷ್ಟಿದೆ. ಬೇಕೆಂದಾದಲ್ಲಿ ನಾನದನ್ನು ನಿಗ್ರಹಿಸಿಕೊಳ್ಳಬಲ್ಲೆ' ಎಂದು ನನಗನ್ನಿಸಿದ್ದನ್ನು ನಾನು ಹೇಳಿದೆ. 
'ನಿಗ್ರಹಿಸುವುದೇ ಬೇರೇ.. ಆಸಕ್ತಿಯೇ ಬೇರೆ, ನಮ್ಮ ಉದಾಹರಣೆಯನ್ನು ತೆಗೆದುಕೊಳ್ಳಿ. ನಮಗೆ ಆಸಕ್ತಿಯೇ ಇರಲಿಲ್ಲ. ಆಸಕ್ತಿಯಿದ್ದೂ ನಿಗ್ರಹಿಸಿಕೊಂಡರೆ ಕೆಲಕಾಲ ಅದು ಸಫಲವಾಗಬಹುದು. ಆದರೆ ಗುಪ್ತವಾಗಿರುವ ಆ ಆಸಕ್ತಿ ಒಮ್ಮೆ ಹೆಡೆಯೆತ್ತಿದರೆ ಅದು ಮನೋರೋಗಕ್ಕೆ ಎಡೆ ಮಾಡಿಕೊಡಬಹುದು. ಆದ್ದರಿಂದ ಸಾಂಸಾರಿಕ ಜೀವನವೇ ನಿಮಗೆ ಒಳಿತು. ಸಂಸಾರದಲ್ಲಿದ್ದೂ ಸಾಧನೆ ಮಾಡಬಾರದೆಂಬ ಯಾವ ನಿಯಮವೂ ಇಲ್ಲ. ಸಂಸಾರಿಗಳಿಗೆ ತಪ್ಪು ಮಾಡಿದರೆ ಕ್ಷಮೆಯಿದೆ. ಸಾಧಕರು, ಸನ್ಯಾಸಿಗಳು ಮಾಡುವ ತಪ್ಪಿಗೆ ಕ್ಷಮೆಯಿಲ್ಲ. ಈಗ ನಿಲ್ಲಿಸಿದರೂ ಮುಂದೆ ಸಾಧನೆಯನ್ನು ಮುಂದುವರೆಸಬಹುದು. ಹಾಗೆ  ನೋಡಿದರೆ ಸನ್ಯಾಸಿಗಳಿಗಿಂತ ಹೆಚ್ಚು ಸಂಸಾರಿಗಳಿಗೇ ದೇವರ ಸಾಕ್ಷಾತ್ಕಾರವಾಗಿರುವುದು' ಎಂದು ಹೇಳಿ ಮುಗುಳ್ನಗುತ್ತಾ 'ಮುಂದಿನ ತೀರ್ಮಾನ ನಿಮ್ಮದು' ಎಂದು ಹೇಳಿ ಫಲ-ತಾಂಬೂಲ ಕೊಟ್ಟು 'ನಿಮಗೆ ಒಳ್ಳೆಯದಾಗಲಿ' ಎಂದು ಹರಸಿ ಕಳಿಸಿದರು.  
       ಎರಡು ವರ್ಷಗಳ ಕಾಲ ಅಂದಿನ ನನ್ನ ಜೀವನಶೈಲಿ, ನನ್ನ ಗೆಳೆಯರು, ನನಗೆ ನೆರವಾದವರು ಈ ಬಗ್ಗೆ ಮುಂದೆ ಬರೆಯುತ್ತೇನೆ. ಬೆಂಗಳೂರಿಗೆ ಹೊರಡುವ ತಯಾರಿಯಲ್ಲಿದ್ದಾಗ ಗೆಳೆಯ ಮಾಣೂರು ಅಚ್ಚು ಹೇಳಿದ ಮಾತೇನು?
 .... ಮುಂದಿನ ಸಂಚಿಕೆಯಲ್ಲಿ.  

Monday 21 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 17

        ನಂತರ ನಿಗದಿತ ದಿನದಂದು ಗುರುಗಳು ಬಂದರು. ಈ ಬಾರಿ ನಿನ್ನೊಡನೆಯೇ ಇರುತ್ತೇನೆ.  'ವಾಮಮಾರ್ಗವನ್ನು ಇಣುಕಿ ನೋಡುವ ಆಸಕ್ತಿಯಿದೆಯೇ?' ಎಂದು ಕೇಳಿದಾಗ ಸುಮ್ಮನೆ ತಲೆ ಆಡಿಸಿದ್ದೆ. 'ಆದರೆ ಅದಕ್ಕಾಗಿ ನೀನು ನನ್ನೊಡನೆ ಕಾಶಿಗೆ ಬರಬೇಕಾಗುತ್ತದೆ' ಎಂದೂ ಹೇಳಿದರು. ಹಿಂದೆ ಮುಂದೆ ನೋಡದೇ ಒಪ್ಪಿದೆ. 
        ಈ ವಿಷಯದ ಬಗ್ಗೆ ಗೋಪ್ಯತೆ ಕಾಪಾಡುವಂತೆ ಗುರುಗಳು ಹೇಳಿದ್ದರಿಂದ, ಗೆಳೆಯರ ಬಳಿ ಕಾಶಿಗೆ ಹೋಗುವುದಾಗಿ ಹೇಳಲಿಲ್ಲ. ಬದಲಿಗೆ ಬೆಂಗಳೂರಿಗೆ ಕೆಲ ದಿನಗಳ ಮಟ್ಟಿಗೆ ಹೋಗುವುದಾಗಿ ತಿಳಿಸಿದ್ದೆ.
        ಈ ಸಾಧನೆಯ ಬಗ್ಗೆಯೂ ನಾನು ವಿವರವಾಗಿ ಬರೆಯಲು ಹೋಗುವುದಿಲ್ಲ, ಮಂತ್ರಗಳ ಬಗ್ಗೆಯೂ ಬರೆಯಲು ಹೋಗುವುದಿಲ್ಲ. 'ಏನದು?' ಎಂದು ಮಾತ್ರ ಸೂಕ್ಷ್ಮವಾಗಿ ಹೇಳಲು ಬಯಸುತ್ತೇನೆ.
        ವಾಮಮಾರ್ಗದಲ್ಲಿ ತಾಂತ್ರಿಕ ದೇವತೆಗಳೆಂದು ಕರೆಯಲ್ಪಡುವ ದೇವತೆಗಳ ಆರಾಧನೆಯಿದೆ. ಶಾಕಿನಿ,ಢಾಕಿನಿ, ಭೈರವ, ಕರ್ಣ ಪಿಶಾಚಿ.. ಇತ್ಯಾದಿ. ಈ ಸಾಧನೆಗಳು ತುಸು ಘೋರವಾಗಿರುವಂತೆಯೇ ಭಾಸವಾಗುತ್ತದೆ.                                ಪಂಚಮಕಾರಗಳನ್ನು ಇವು ಒಳಗೊಂಡಿರುತ್ತವೆ. ಎಚ್ಚರ ತಪ್ಪಿದರೆ ಬೇರೆ ರೀತಿಯ ಅನಾಹುತ ಸಂಭವಿಸಬಹುದಾದಂತಹ ಹಾದಿ. 'ಪಂಚಮಕಾರಗಳಲ್ಲಿ ನಿನಗೆ ಪಶುಭಾವದ ಅಗತ್ಯವಿಲ್ಲ, ಈಗಾಗಲೇ ನೀನು ವೀರಭಾವವನ್ನು ಅನುಭವಿಸಿರುವುದರಿಂದ ವೀರಭಾವದ ಹಾದಿಯಲ್ಲಿ ಮುನ್ನಡೆಯಬಹುದು' ಎಂದು ಗುರುಗಳು ತಿಳಿಸಿದ್ದರು. ನನಗೆ 'ಮೈಥುನ' ಒಂದನ್ನು ಬಿಟ್ಟರೆ ಪಂಚಮಕಾರಗಳ ಬಗ್ಗೆ ಯಾವ ತಕರಾರೂ ಇರಲಿಲ್ಲ. ಅದರ ಬಗ್ಗೆ ನನಗೂ ಗುರುಗಳಿಗೂ ಸಾಕಷ್ಟು ಚರ್ಚೆಯಾಯಿತು. ಏನೇ ಆದರೂ ನಾನು 'ಒಲ್ಲೆ' ಎಂದೇ ಪಟ್ಟು ಹಿಡಿದು ಕೂತಿದ್ದೆ. ಗುರುಗಳ ಬಳಿ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದುದರಿಂದ ಹೀಗೆ ಮಾತನಾಡಲು ಧೈರ್ಯ ಮಾಡಿದ್ದೆ. ಅಲ್ಲದೇ ಅದು ನನ್ನ ಮನಸ್ಸಿಗೆ ವಿರುದ್ಧವಾಗಿತ್ತು.
        ಅಂತೂ ವಾಮಮಾರ್ಗದಲ್ಲಿ ನನ್ನ ಪಯಣವನ್ನು ಮುಂದುವರೆಸಿದ್ದಾಯಿತು. 'ಈ ಮಂತ್ರಗಳನ್ನು ಅನಾವಶ್ಯಕವಾಗಿ ಉಪಯೋಗಿಸಬೇಡ' ಎಂದು ಗುರುಗಳು ಹೇಳಿದ್ದರು. ಅವರು ಹೇಳುವ ಮೊದಲೇ 'ಅವಶ್ಯಕತೆ ಇದ್ದರೂ ನಾನು ಉಪಯೋಗಿಸುವುದಿಲ್ಲ' ಎಂದು ಮನಸ್ಸಿನಲ್ಲಿಯೇ ಸ್ಥಿರವಾಗಿ ಅಂದುಕೊಂಡಿದ್ದೆ' 
        ನನ್ನ ತಾಂತ್ರಿಕ ಸಾಧನೆಯ ಕೊನೆಯ ಭಾಗವಾದ 'ಕುಲಕುಂಡಲಿನೀ ಯೋಗ'ದ ಬಗ್ಗೆ ಮುಂದೆ ಬರೆಯುತ್ತೇನೆ.

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 16

       ನಾನು ಮಾಡಿದ ನಾಲ್ಕು ಮುಖ್ಯ ದೇವೋಪಾಸನೆಯಲ್ಲಿ ಕೊನೆಯ ಉಪಾಸನೆ ಶ್ರೀ ಕೃಷ್ಣನದು. ಕೃಷ್ಣನ ಭಾವ ಅತ್ಯಂತ ಸುಂದರ ಭಾವ. ಕೃಷ್ಣನ ರಸಿಕತೆ, ಚಾಣಾಕ್ಷತನ, ಕಳ್ಳಾಟಗಳು, ಆತನ ಮೋಹಕ ರೂಪ, ಕೊಳಲ ಗಾನ, ಗೋಪಿಕಾ ವಲ್ಲಭನೆಂಬ ಬಿರುದು... ಹೀಗೆ ಒಂದೇ ಎರಡೇ?   
         ಕೃಷ್ಣನನ್ನು ಒಬ್ಬ ದೇವರಾಗಿ ಅನುಭವಿಸುವುದಕ್ಕಿಂತ ಇಡಿಯಾಗಿ
ಅನುಭವಿಸಲು ಮನಸ್ಸಾಗಿತ್ತು. ಈ ಸಾಧನೆಗೆ ಕುಳಿತಾಗ ಅವನೇ ಇಡೀ ಪ್ರಕೃತಿ ಎಂದೆನಿಸಿ, ಪ್ರಕೃತಿಯೊಡನೆ ಒಂದಾದ ಭಾವವನ್ನು ಅನುಭವಿಸಿದೆ. ಆ ಭಾವವನ್ನು ಅನುಭವಿಸಿದಾಗ, 'ಇದು ನನ್ನ ದೇಹದ, ಮನಸ್ಸಿನ ಅಳತೆಗೆ ಮೀರಿದ್ದು' ಎಂದು ಅನ್ನಿಸಿ ಒಮ್ಮೆ ತತ್ತರಿಸಿ ಹೋಗಿದ್ದೂ ನಿಜ. ಪ್ರಕೃತಿಶಕ್ತಿಯನ್ನು ಇಡಿಯಾಗಿ
ಅನುಭವಿಸುವುದು ನನಗೆ ನಿಜಕ್ಕೂ ಸವಾಲಾಗಿತ್ತು. ದೇಹವಿಡೀ ಅದರ ಪಾಡಿಗೆ ನಡುಗುತ್ತಿತ್ತು. ಆ ಶಕ್ತಿಯನ್ನು ತುಂಬಾ ಹೊತ್ತು ಹಿಡಿದಿಟ್ಟುಕೊಳ್ಳುವುದು ಅಸಾಧ್ಯ ಕೆಲಸವಾಗಿತ್ತು. ನನಗೆ ನಾನೇ ಸಮಾಧಾನ ಮಾಡಿಕೊಂಡೆ.
         ನಂತರ ಕೃಷ್ಣನನ್ನು ಪೂರ್ತಿಯಾಗಿ ಅನುಭವಿಸುವ ಬದಲು ಆತನ ಯಾವುದಾದರೊಂದು ಗುಣದ ಭಾವದಲ್ಲಿರುವುದು ಒಳಿತು ಎಂದನ್ನಿಸಿತ್ತು. ಕೃಷ್ಣನ ಭಾವ ಎಂದೊಡನೆ ಹಲವಾರು ಭಾವಗಳ ಸಂಗಮವೇ ಆಗಿರುತ್ತದೆ. ನನಗೇ ಅರಿವಿಲ್ಲದಂತೆ ಕೃಷ್ಣನ ಮೋಹಕ ರೂಪ ಹಾಗೂ ರಸಿಕತೆಯ ಕಡೆ ಮನಸ್ಸು ವಾಲತೊಡಗಿತು. ಈ ಭಾವ ಅತ್ಯಂತ ಅಪ್ಯಾಯಮಾನವಾಗಿತ್ತು. ಬಹುಶಃ ಕಠಿಣವಾದ ಪ್ರಯೋಗಗಳನ್ನು ಮಾಡಿದ ದೇಹ ಹಾಗೂ ಮನಸ್ಸು ಒಂದಷ್ಟು ಪರಿಹಾರ ಬಯಸುತ್ತಿತ್ತೋ ಏನೋ! ಈ ಭಾವದಲ್ಲಿಯೇ ಕೃಷ್ಣನ ಉಪಾಸನೆ ಮಾಡುತ್ತಿದ್ದೆ. 
        ನನ್ನಲ್ಲಿ ಆದ ಬದಲಾವಣೆಗಳನ್ನು ಇಲ್ಲಿ ಹೇಳಬಯಸುತ್ತೇನೆ. ನನಗೆ ನಾನೇ ಅತ್ಯಂತ ಸುಂದರನಾಗಿ ಕಾಣುತ್ತಿದ್ದೆ. ಅಪ್ಪಿ ತಪ್ಪಿ ಕನ್ನಡಿಯ ಮುಂದೆ ಸಾಗುವಾಗ ನನ್ನನ್ನು ನಾನೇ ನೋಡಿ ಹೆಮ್ಮೆ ಪಡುತ್ತಿದ್ದೆ. ದೇವಸ್ಥಾನಕ್ಕೆ ಬರುವ ಕೆಲವು ಹೆಣ್ಣು ಮಕ್ಕಳು ನನ್ನೊಡನೆ ಹೆಚ್ಚುಹೆಚ್ಚಾಗಿ ಮಾತನಾಡಲು ಕುಳಿತುಕೊಳ್ಳುತ್ತಿದ್ದರು. ಕೆಲವರೊಡನೆ ಮಾತನಾಡುವುದು ನನಗೂ ಹಿತವೆನ್ನಿಸುತ್ತಿತ್ತು. ಒಮ್ಮೊಮ್ಮೆ ಕಿರುಗೆಜ್ಜೆ ಧರಿಸಿದ ಗೋಪಿಕಾ ಸ್ತ್ರೀಯರೊಂದಿಗೆ ನಾನೂ ಕುಳಿತಂತೆ ಭಾಸವಾಗುತ್ತಿತ್ತು. ಕಿಟಕಿಯ ಮರೆಯಿಂದ ಯಾರಾದರೂ ಗೋಪಿಕಾ ಸ್ತ್ರೀಯರು ಕಿರುಗೆಜ್ಜೆ ಧರಿಸಿದ್ದಾರೋ ಎಂದು ಗಮನಿಸುತ್ತಿದ್ದೆ! ಯಾರೊಡನೆಯೂ ದೈಹಿಕವಾಗಿ ಒಂದು ಸಣ್ಣ ಸಲಿಗೆಯನ್ನು ತೆಗೆದುಕೊಳ್ಳಲೂ ಮನಸ್ಸು ಇಚ್ಚಿಸಲಿಲ್ಲ. ಒಟ್ಟಾರೆ ಆಹ್ಲಾದಕರ ವಾತಾವರಣವಿತ್ತು. 
        ಹಿಂದಿರುಗಿ ಬಂದ ಗುರುಗಳ ಬಳಿ ನನ್ನ ಕಷ್ಟವನ್ನು ತೋಡಿಕೊಂಡೆ. 'ಈ ಬಾರಿ ನಿನ್ನ ಮುಂದಿನ ಸಾಧನೆ ಮುಗಿಯುವವರೆಗೆ ನಿನ್ನೊಡನೆಯೇ ಇರುತ್ತೇನೆ' ಎಂದು ಭರವಸೆ ಇತ್ತರು. 'ನೀನು ಅನುಭವಿಸಿದ್ದು ವಿರಾಟ್ ಭಾವ. ಕೃಷ್ಣನ ವಿರಾಟ್ ಸ್ವರೂಪದ ಭಾವ ಸಿಗುವುದೇ ಕಷ್ಟ. ನೀನು
ಧೈರ್ಯ ಮಾಡಿ ಮುಂದುವರೆಯಬೇಕಿತ್ತು, ಹಲವಾರು ಹಂತಗಳನ್ನು ಒಮ್ಮೆಯೇ ದಾಟಬಹುದಿತ್ತು ' ಎಂದೆಲ್ಲಾ ಹೇಳಿದ ಗುರುಗಳು 'ನಾನು ಇಲ್ಲಿಯೇ ಇದ್ದರೆ ಚೆನ್ನಿತ್ತು. ಇರಲಿ, ನಿನ್ನ ಯಾವ ಸಾಧನೆಯೂ ವ್ಯರ್ಥವಾಗುವುದಿಲ್ಲ' ಎಂದು ಮೈದಡವಿದರು. ನಂತರ ಕೆಲ ದಿನಗಳು ನನಗೆ ವಿರಾಮ ಸಿಕ್ಕಿತ್ತು.