Friday 8 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 3

ಅರೆಪ್ರಜ್ಞಾಮನಸ್ಸಿನ ಗುಣ ಹಾಗೂ ಶಕ್ತಿ 

        ದಿನಂಪ್ರತಿ ಮನಸ್ಸಿನಲ್ಲಿ ಏಳುವ ಸಾವಿರಾರು ಯೋಚನೆಗಳಿಂದ ಮನಸ್ಸು ಬಳಲುತ್ತದೆ. ಬೇಡದೇ ಇರುವ ವಿಷಯಗಳನ್ನು ಯೋಚಿಸಿ, ಯೋಚಿಸಬೇಕಾದ ವಿಷಯಗಳನ್ನು ಆತ ಯೋಚಿಸುವುದಿಲ್ಲ. ಅರೆಪ್ರಜ್ಞಾಮನಸ್ಸನ್ನು ಹತೋಟಿಗೆ ತಂದರೆ, ಈ ಅಡಚಣೆಗಳನ್ನು ತಡೆದು, ನಮ್ಮ ಲಾಭಕ್ಕೆ ಮಾರ್ಗಗಳನ್ನು ಕಂಡು ಹಿಡಿಯಬಹುದು ಹಾಗೂ ಒಳಗಿನ ಶಾಂತಿಯನ್ನು ಕಾಣಬಹುದು. ಕೆಲವರಿಗೆ ಇದಕ್ಕೆ ಧ್ಯಾನವೇ ಪರಮೋಚ್ಛ ದಾರಿ ಎನಿಸಿದರೆ ಹಲವರಿಗೆ ಧ್ಯಾನ ಕಷ್ಟದ ಕೆಲಸ ಎನ್ನಿಸಬಹುದು. ಅಂತಹವರಿಗೆ ಸಮ್ಮೋಹಿನಿ ಅಥವಾ ಸ್ವಸಮ್ಮೋಹಿನಿ ಸಹಾಯ ಮಾಡಬಲ್ಲದು. 
         ಅರೆಪ್ರಜ್ಞಾಮನಸ್ಸಿಗೆ, ನೀವು ಕಲ್ಪನೆಯಲ್ಲಿ ಪದೇ ಪದೇ ಏನನ್ನು ಅಂದುಕೊಳ್ಳುವಿರೋ ಅದನ್ನು ನಿಜವನ್ನಾಗಿ ಮಾಡುವ ಶಕ್ತಿ ಇದೆ. ಅರೆ ಪ್ರಜ್ಞಾಮನಸ್ಸಿನ ಶಕ್ತಿ ಅಪಾರವಾದದ್ದು, ಆದರೂ ಅದು ನೀವು ಹೇಳಿದ್ದನ್ನು ಕೇಳುತ್ತದೆ. ನೀವು ಪದೇ ಪದೇ ಹೇಳುವುದನ್ನು ಅರೆಪ್ರಜ್ಞಾಮನಸ್ಸು ನಡೆಸಿಕೊಡುತ್ತದೆ. ಅರೆಪ್ರಜ್ಞಾಮನಸ್ಸಿಗೆ ಸತ್ಯ ಹಾಗೂ ಸುಳ್ಳು ಇವುಗಳ ಅರಿವಿಲ್ಲ.
ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನು ನಿಜವೆಂದು ನಂಬುತ್ತದೆಯೋ ಅದನ್ನು ಅರೆಪ್ರಜ್ಞಾಮನಸ್ಸು ಕೂಡಾ ಸಂಪೂರ್ಣವಾಗಿ ನಂಬುತ್ತದೆ. ಆದುದರಿಂದ ಹಗಲುಕನಸು ಕಾಣುವುದು, ನಂಬುವುದು ಹಾಗೂ ನಿಮ್ಮ ನಂಬಿಕೆಯನ್ನು ಪುನರಾವರ್ತಿಸುವುದು ಅತ್ಯಂತ ಪರಿಣಾಮಕಾರಿ ಫಲಿತಾಂಶವನ್ನು ಕೊಡುತ್ತವೆ. 
        ನಾವು ಬಯಸದಿದ್ದರೂ ಮಾಡುವ ಕೆಲಸಗಳನ್ನು ಅರೆಪ್ರಜ್ಞಾಮನಸ್ಸು ನಿರ್ವಹಿಸುತ್ತದೆ. ಈ ದೇಹ ಮಲಗಿದ್ದಾಗ ಪ್ರಜ್ಞಾಮನಸ್ಸು ವಿಶ್ರಮಿಸಿದರೂ, ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತಿರುತ್ತದೆ. ಭಾವನೆಗಳನ್ನು ಅರೆಪ್ರಜ್ಞಾಮನಸ್ಸು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ನಮ್ಮ ನೆನಪು ಹಾಗೂ ನಂಬಿಕೆಗಳ ಆಧಾರದಿಂದ ಹುಟ್ಟಿರುವ ಭಯ, ಆತಂಕ, ಖಿನ್ನತೆ ಮುಂತಾದವುಗಳನ್ನೂ ಅರೆಪ್ರಜ್ಞಾಮನಸ್ಸು ಉದ್ದೀಪನಗೊಳಿಸುತ್ತದೆ. ವಿರುದ್ಧ ದಿಕ್ಕಿಗೆ ತಯಾರು ಮಾಡಿದಲ್ಲಿ 
ಅರೆಪ್ರಜ್ಞಾಮನಸ್ಸು ಎಲ್ಲವನ್ನು ಶಮನಗೊಳಿಸಲೂಬಲ್ಲದು. ನಾವು ಯಾವುದೇ ಆಲೋಚನೆಯಲ್ಲಿ ಮುಳುಗಿದ್ದರೂ, ಅರೆಪ್ರಜ್ಞಾಮನಸ್ಸು ತಾನು ನಿರ್ವಹಿಸಬೇಕಾದ ಕಾರ್ಯಗಳನ್ನು ಕರಾರುವಾಕ್ಕಾಗಿ ಮಾಡುತ್ತಿರುತ್ತದೆ. ಉದಾ: ಕಛೇರಿಯಿಂದ ಮನೆಗೆ ಹೊರಡುವಾಗ ಆತ ಹಲವಾರು ರೀತಿ ಯೋಚನೆಗಳಲ್ಲಿ ಮುಳುಗಿದ್ದರೂ, ತನಗೇ ಅರಿವಿಲ್ಲದಂತೆ ಎಡಬಲಗಳನ್ನು ಬಳಸಿ ಕರಾರುವಾಕ್ಕಾಗಿ ತನ್ನ ಮನೆ ಬಾಗಿಲಿಗೆ ಬಂದಿರುತ್ತಾನೆ. ಇಲ್ಲಿ ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತಿರುತ್ತದೆ.                    ದಿನಂಪ್ರತಿ ಮನಸ್ಸಿನಲ್ಲೇಳುವ ಯೋಚನಾ ತರಂಗಗಳಿಂದ ಮನಸ್ಸು ದಣಿಯುತ್ತದೆ. ನಮ್ಮ ಯೋಚನೆಗಳು ಭಾವನೆಗಳ ಬೀಜರೂಪಗಳು. ಪದೇ ಪದೇ ಯೋಚಿಸುವಾಗ ಭಾವನೆಗಳು ಗಾಢವಾಗುತ್ತ ಹೋಗುತ್ತವೆ. ನಿಮಗೆ ಬೇಡವಾದ ಭಾವನೆಗಳನ್ನು ನಿಯಂತ್ರಿಸಬೇಕಾದರೆ ಆಲೋಚನೆಗಳನ್ನು ನಿಯಂತ್ರಿಸುವುದನ್ನು ಕಲಿಯಬೇಕಾಗುತ್ತದೆ. ಅರೆಪ್ರಜ್ಞಾಮನಸ್ಸು ನಿಮ್ಮ ಜೀವನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತಿರುತ್ತದೆ. ಹಳೆಯ ಅಥವಾ ಪ್ರಾಮುಖ್ಯತೆ ಇಲ್ಲದ ಘಟನೆಗಳು ಸುಪ್ತ ಮನಸ್ಸಿನಲ್ಲಿ ಹುದುಗಿ ಹೋಗುತ್ತೇವೆ. ನಿಮ್ಮ ಸಂಸ್ಕಾರಕ್ಕೆ ತಕ್ಕ ಹಾಗೆ ಅರೆಪ್ರಜ್ಞಾಮನಸ್ಸು ಕೆಲಸ ಮಾಡುತ್ತದೆ. 'ನೀವು' ಅಂದರೆ ಏನು ಎನ್ನುವುದು ಅರೆಪ್ರಜ್ಞಾಮನಸ್ಸಿಗೆ ಕರಾರುವಾಕ್ಕಾಗಿ ಗೊತ್ತಿರುತ್ತದೆ. ಅರೆಪ್ರಜ್ಞಾಮನಸ್ಸು ತಾನೇ ತಾನಾಗಿ ಯಾವ ಯೋಚನೆಗಳನ್ನು ಅಥವಾ ಕಾರಣಗಳನ್ನು ಹುಡುಕುವುದಿಲ್ಲ. ಪ್ರಜ್ಞಾಮನಸ್ಸಿನಿಂದ ಬಂದಿರುವ ಸಂದೇಶಗಳನ್ನು ಅದು ದಾಖಲಿಸುತ್ತದೆ ಹಾಗೂ ನಂಬುತ್ತದೆ. ನಿಮ್ಮ ಪ್ರಜ್ಞಾಮನಸ್ಸು ಬಿತ್ತಿದ ಆಲೋಚನೆ ಎಂಬ ಬೀಜಗಳನ್ನು ಅರೆಪ್ರಜ್ಞಾಮನಸ್ಸು ಫಲವತ್ತಾಗಿ ಬೆಳೆದುಕೊಡುತ್ತದೆ. ನಿಮ್ಮ ಆಲೋಚನೆಗಳು ಹೇಗಿರಬೇಕೆಂಬ ಆಯ್ಕೆ ನಿಮ್ಮದು. ಹೂವು ಬೇಕಾದರೆ ಹೂವು, ಹಾವು ಬೇಕಾದರೆ ಹಾವು. ಪ್ರಜ್ಞಾಮನಸ್ಸು ನೀಡಿದ ಆದೇಶಗಳನ್ನು ಅರೆಪ್ರಜ್ಞಾಮನಸ್ಸು ಪಾಲಿಸುತ್ತದೆ. ನಿಮ್ಮ ಅರೆಪ್ರಜ್ಞಾಮನಸ್ಸು ನಿಮಗಾಗಿ ಹಗಲಿರುಳು ಕೆಲಸ ಮಾಡುತ್ತಿರುತ್ತದೆ. 
ನಿಮ್ಮ ಭಾವನೆಗಳಿಗೆ, ಚಿಂತನೆಗಳಿಗೆ, ಆಸೆಗಳಿಗೆ ಹಾಗೂ ನಿಮ್ಮ ಬಯಕೆಗಳಿಗೆ ಶಕ್ತಿ ತುಂಬುವ ಸಾಮರ್ಥ್ಯ ಅದಕ್ಕೆ ಇದೆ. ಆದ್ದರಿಂದ ನಿಮ್ಮ ಚಿಂತನೆಗಳು ಹಾಗೂ ಸಾಧನೆಗಳ ಗುರಿ ಅತ್ಯುನ್ನತ ಮಟ್ಟದಲ್ಲಿರಲಿ. 
        ಅರೆಪ್ರಜ್ಞಾಮನಸ್ಸು ನಿಮ್ಮನ್ನು ಸದಾಕಾಲ ಆರಾಮಾವಾಗಿಡಲು ಅದು ಬಯಸುತ್ತದೆ. ಅದು ನಿಮ್ಮ ಹಾಗೂ ನಿಮ್ಮ ದೇಹದ ಸುಖದ ಪರ. ಉದಾಹರಣೆಗೆ ಅಲಾರಂ ಬೆಳಿಗ್ಗೆ ಹೊಡೆದುಕೊಂಡಾಗ 'ಇನ್ನೈದು ನಿಮಿಷ ಮಲಗೋಣ' ಎಂದು ಅದು ಉತ್ತೇಜನ ನೀಡುತ್ತದೆ. ಯಾವುದಾದರೂ ಚಟದಿಂದ ನಿಮಗೆ ಸುಖ ಸಿಗುತ್ತಿದ್ದರೆ ಅದು ಅದರ ಕಡೆ ವಾಲುತ್ತದೆ. ಅದು ಚಟವಾಗಿ ಬೆಳೆಯಲು ನೀವು ಪದೇ ಪದೇ ಆ ಸುಖವನ್ನು ಅನುಭವಿಸಿ ಅರೆಪ್ರಜ್ಞಾಮನಸ್ಸಿಗೆ ಆ ಅನುಭವವನ್ನು 'ಸುಖ' ಎಂದು ರವಾನೆ ಮಾಡಿರುತ್ತೀರಿ. 
        ಅರೆಪ್ರಜ್ಞಾಮನಸ್ಸು ಸರಿತಪ್ಪುಗಳ ಆಲೋಚನೆ ಮಾಡುವುದಿಲ್ಲ. 
ಪ್ರಜ್ಞಾಮನಸ್ಸು ರವಾನಿಸಿದ ಸಂದೇಶವನ್ನು ಅದು ನಂಬುತ್ತದೆ. ನೀವು ಜೀವನವನ್ನು ಬದಲಿಸಬೇಕೆಂದು ಬಯಸಿದರೆ ನಿಮ್ಮ ಪ್ರಜ್ಞಾಮನಸ್ಸನ್ನು ಮೊದಲು ಬದಲಿಸಬೇಕಾಗುತ್ತದೆ. ಕೆಲವು ನಿರ್ಧಾರಗಳನ್ನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳಬೇಕಾಗುತ್ತದೆ. ಮನಸ್ಸನ್ನು ಬದಲಾಯಿಸುವ ಮೊದಲು ಮನಸ್ಸು ಹಾಗೂ ಮನಸ್ಸಿನ ಕಾರ್ಯಾಚರಣೆಯ ಬಗ್ಗೆ ಅರ್ಥ ಮಾಡಿಕೊಳ್ಳುವುದು ಅವಶ್ಯ. 
        ನಿಮ್ಮ ಜೀವನದಲ್ಲಿ ಬದಲಾವಣೆ ತರಲು ಹೊರಟಾಗ ನೀವು ಹೊಸ ಆಲೋಚನೆಗಳಿಗೆ, ಹೊಸ ವಿಚಾರಗಳಿಗೆ, ಹೊಸ ಪ್ರಯೋಗಗಳಿಗೆ ಒಳ ಪಡ 
ಬೇಕಾಗುತ್ತದೆ. ಇದು ಸ್ವಾಭಾವಿಕವಾಗಿ ಈಗಾಗಲೇ ತನ್ನದೇ ಆದ ಕೋಟೆಯನ್ನು ಕಟ್ಟಿಕೊಂಡಿರುವ ಅರೆಪ್ರಜ್ಞಾಮನಸ್ಸಿಗೆ ಕಿರಿಕಿರಿ ನೀಡುತ್ತದೆ. 'ಈಗೇನಾಗಿದೆ? ಚೆನ್ನಾಗೇ ಇದೀನಿ.. ಇದೇ ಆರಾಮಾಗಿದೆ. ಈ ಹೊಸ ದಾರಿಯೆಲ್ಲ ಬೇಕಾ? ಎಷ್ಟು ಕಷ್ಟಾನೋ ಏನೋ.. ' ಎಂದು ನಿಮ್ಮ ಪ್ರಜ್ಞಾಮನಸ್ಸಿನಲ್ಲಿ ಮೂಡುವ ಯೋಚನೆಗೆ ಬಲವಾಗಿ ಹಾಗೂ ಸಕಾರಾತ್ಮಕವಾಗಿ ಅದು ಸ್ಪಂದಿಸುತ್ತದೆ. ನಿಮ್ಮ 
ನಂಬಿಕೆಗೆ ವಿರುದ್ಧವಾಗಿ ಏನಾದರೂ ಕೆಲಸ ಮಾಡಲು ಹೋದಾಗಲೂ ಇದೇ ರೀತಿಯ ಮಾನಸಿಕ ಪ್ರತಿರೋಧವನ್ನು ಕಾಣಬಹುದಾಗಿದೆ. 
        ನೀವು ಬೆಳೆಯಬೇಕಾದರೆ ಅಥವಾ ಏನನ್ನಾದರೂ ಸಾಧಿಸಬೇಕಾದರೆ ನಿಮ್ಮ ಸುಖದ ಕೋಟೆಯ ಕಟ್ಟೆಯನ್ನು ದಾಟಿ ಹೊರಬರಬೇಕಾಗುತ್ತದೆ. ಮಾನಸಿಕ ಕಿರಿಕಿರಿ ಅನುಭವಿಸಲು ಸಿದ್ಧರಾಗಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸು ತೆರೆದ ಮನಸ್ಸಾಗಿರಬೇಕಾಗುತ್ತದೆ. ನಿಮ್ಮ ಸಾಧನೆ ಅಥವಾ ಗುರಿಯನ್ನು ತಲುಪಿದಾಗ ಅದು ನಿಮ್ಮ ಹೊಸ ಸುಖದ ಕೋಟೆಯಾಗಿ ರೂಪುಗೊಳ್ಳುತ್ತದೆ.

No comments:

Post a Comment