Wednesday 18 December 2019

ನೆಮ್ಮದಿಯನ್ನು ಹಾಳು ಮಾಡುವ ಗುಟ್ಟುಗಳು ರಟ್ಟಾಗದಿದ್ದರೇನೇ ಒಳಿತು. - ಜೀವನದ ಕಟುಸತ್ಯಗಳು - 6

ಈ ಹಿಂದೆ ಕೇಳಿದ ಪ್ರಶ್ನೆಗಳಿಗೆ ನನ್ನ ಅನಿಸಿಕೆ/ಉತ್ತರವನ್ನು ಹೇಳಲು ಬಯಸುತ್ತೇನೆ.

ಕೇಸ್ ೧
ತನ್ನನ್ನು ನಂಬಿದ್ದ ಗೆಳೆಯನೊಬ್ಬನಿಗೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದ 'ಆತ'. ಅದರಲ್ಲಿ 'ಆತ'ನಿಗೂ ಸಿಂಹ ಪಾಲಿತ್ತು. ಆದರೆ ಗೆಳೆಯನಿಗೆ ಆ ವ್ಯವಹಾರದ ಸೂತ್ರಧಾರಿ 'ಆತ'ನೇ ಎಂದು ಗೊತ್ತಿಲ್ಲ. ಗೆಳೆಯ ಈಗಲೂ 'ಆತ'ನನ್ನು ನಂಬಿದ್ದಾನೆ, 'ಆತ'ನ ಕಷ್ಟಕಾಲದಲ್ಲಿ ಈಗಲೂ ನೆರವಾಗುತ್ತಾನೆ. 'ಆತ' ನನ್ನ ಬಳಿ ಬಂದು ಕೇಳಿದ. 'ಗೆಳೆಯ ನನಗೆ ನೆರವು ನೀಡುವಾಗೆಲ್ಲಾ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ. ನಿನಗಾದ ನಷ್ಟಕ್ಕೆ ಕಾರಣಕರ್ತನು ನಾನೇ ಎಂದು ಹೇಳಿಬಿಡಲೇ?'

ನನ್ನ ಅನಿಸಿಕೆ/ಉತ್ತರ
ನೀವು ಗೆಳೆಯನಿಗೆ ಮೋಸ ಮಾಡಿದ್ದರೂ ನಿಮ್ಮ ಗೆಳೆತನಕ್ಕೆ ಅದು ಅಡ್ಡಿಯಾಗಿಲ್ಲ. ಈಗ ಈ ಸತ್ಯವನ್ನು ಹೇಳಿದರೆ ಆತನಿಗೆ ನೋವಾಗಬಹುದು, ಬಹುತೇಕ ನೋವಾಗಿಯೇ ಆಗುತ್ತದೆ. ನೀವು ಮಾಡಿದ ತಪ್ಪಿನ ಅರಿವು ನಿಮಗಾಗಿದೆ. ಪಶ್ಚಾತ್ತಾಪವನ್ನೂ ಸಾಕಷ್ಟು ಪಟ್ಟಿದ್ದೀರಿ. ನೀವು ಆತನಿಗೆ ಮಾಡಿದ ಮೋಸಕ್ಕೆ ನೀವೂ ನೋವು ಪಟ್ಟಿದ್ದೀರಿ. ಆದ್ದರಿಂದ ಈ  ರಹಸ್ಯವನ್ನು ಹೇಳುವ ಅಗತ್ಯವಿಲ್ಲ. ನಿಮಗೆ ತಪ್ಪಿತಸ್ಥ ಭಾವನೆಯಿಂದ ಹೊರಬರಲೇ ಬೇಕೆಂದಿದ್ದರೆ, ಛಲದಿಂದ ನ್ಯಾಯವಾಗಿ ದುಡಿದು ಆತನಿಂದ ವಂಚನೆ ಮಾಡಿ ಪಡೆದ ಹಣಕ್ಕೆ ಬಡ್ಡಿಯನ್ನೂ ಸೇರಿಸಿ ಆತನಿಗೆ ತಿಳಿಯದಂತೆ ಬೇರೊಂದು ರೂಪದಲ್ಲಿ ನೀಡಬಹುದು. ಅಥವಾ ಹೇಳಲೇ ಬೇಕೆನಿಸಿದರೆ ಸ್ವಲ್ಪ ಸೌಮ್ಯವಾಗಿ 'ನನಗರಿವಿಲ್ಲದೇ ಒಂದು ತಪ್ಪು ಮಾಡಿದೆ. ಅದನ್ನು ಸರಿಪಡಿಸಲು ನಿನ್ನ ವಸ್ತುವನ್ನು ನಿನಗೇ ನೀಡಲು ಬಯಸಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು' ಎಂದು ಹೇಳಿ ಆತನನ್ನು ಒಪ್ಪಿಸುವುದು ಒಳಿತು. ಅನ್ಯಾಯವಾಗಿ ಕಳೆದುಕೊಂಡ ದುಡ್ಡು ಹಿಂದಿರುಗಿ ಬಂದಾಗ ಅದು ಎಂತಹವರಿಗೂ ಸಂತಸವನ್ನು ನೀಡುತ್ತದೆ. ಹಣವನ್ನು ಹಿಂದಿರುಗಿಸುವ ಸಾಮರ್ಥ್ಯ ಇಲ್ಲದಿದ್ದರೆ ಅಪ್ರಿಯವಾದ ಈ ಸತ್ಯವನ್ನು ಹೇಳುವ ಅವಶ್ಯಕತೆ ಇಲ್ಲ. ಅಂದ ಮಾತ್ರಕ್ಕೆ ಮೋಸ ಮಾಡುವುದನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ.    

ಕೇಸ್ ೨
'ನಾನು ಇಬ್ಬರು ಹುಡುಗಿಯರೊಂದಿಗೆ ಅಫೇರ್ ಇಟ್ಟುಕೊಂಡಿದ್ದೆ. ಈಗ ಮದುವೆಗೆ ಹೆಣ್ಣು ನೋಡುತ್ತಿದ್ದಾರೆ. ಆಕೆಗೆ ಈ ವಿಷಯವನ್ನು ಮೊದಲೇ ಹೇಳಿದರೆ ಒಳಿತಲ್ಲವೇ?' ಒಬ್ಬಾತ ಕೇಳುತ್ತಾನೆ. ಇಂತಹದೇ ಪ್ರಶ್ನೆಯನ್ನು ಒಬ್ಬಾಕೆಯೂ ಕೇಳುತ್ತಾಳೆ. ಇನ್ನು ಕೆಲವರು ಮದುವೆಯಾದ ನಂತರ ಇಂತಹದೇ ಪ್ರಶ್ನೆಯನ್ನು ಕೇಳುತ್ತಾರೆ.
'ನಿಮಗೇನು ಲಾಭ ಇದರಿಂದ?' ಎಂದು ಕೇಳಿದರೆ 'ಮುಂದೆ ಎಂದಾದರೂ ಅವರಿಗೆ ತಿಳಿದಲ್ಲಿ ಇದನ್ನು ವಂಚನೆಯೆಂದು ತಿಳಿಯಬಹುದಲ್ಲವೇ?' ಎನ್ನುತ್ತಾರೆ.

ನನ್ನ ಅನಿಸಿಕೆ/ಉತ್ತರ
ಈ ಬಗ್ಗೆ ನಾನು, ನಡೆದ ಒಂದು ಘಟನೆಯನ್ನು ಹೇಳಲಿಚ್ಚಿಸುತ್ತೇನೆ. ಒಂದು ದಿನ ನಾನು ಹೋಟೆಲೊಂದರಲ್ಲಿ ದೋಸೆ ತಿನ್ನುತ್ತಾ ಕುಳಿತಿದ್ದೆ. ಎದುರಿಗೆ ಒಬ್ಬರು ಮಹಿಳೆ (ಆಕೆಗೆ ಸುಮಾರು ಐವತ್ತು ವರ್ಷಗಳು)ಹಾಗೂ ಅವರ ತಾಯಿ (ಅವರಿಗೆ ಸುಮಾರು ಎಪ್ಪತ್ತು ಪ್ಲಸ್ ವರ್ಷಗಳು) ತುಳು ಭಾಷೆಯಲ್ಲಿ ಮಾತನಾಡುತ್ತಾ ಕುಳಿತಿದ್ದರು. ನಾನು ಅವರನ್ನು ತುಳು ಭಾಷೆಯಲ್ಲಿಯೇ ಕೇಳಿದೆ 'ನಿಮ್ಮದು ಮಂಗಳೂರಾ?' ಹೌದೆಂದು ನುಡಿದ ಆಕೆ ಮಾತನಾಡಲು ಶುರು ಮಾಡಿದರು. ಎಷ್ಟೋ ವರ್ಷಗಳ ಪರಿಚಯದವರೇನೋ ಎಂಬಂತೆ ಮಾತನಾಡುತ್ತಿದ್ದೆವು. ಆಕೆಯ ತಾಯಿಯೂ ನಮ್ಮೊಡನೆ ಹರಟುತ್ತಿದ್ದರು. 'ನನ್ನ ಅಫೇರ್ ಬಗ್ಗೆ ಹೇಳಲೇ' ಎಂದು ಪ್ರೀತಿಸಿ ವಂಚನೆಗೊಳಗಾದವರು ಕೇಳುವ ಪ್ರಶ್ನೆಯ ಬಗ್ಗೆ ಮಾತು ಬಂತು. ಆ ಮಹಿಳೆ ಥಟ್ಟನೆ ಉತ್ತರಿಸಿದರು 'ಇಲ್ಲ, ಖಂಡಿತ ಹೇಳಬಾರದು' ಮಾತು ಮುಂದುವರೆಸುತ್ತಾ ಆಕೆ 'ನಾನೂ ಪ್ರಾಯದಲ್ಲಿ ಒಬ್ಬಾತನನ್ನು ಪ್ರೀತಿಸಿದ್ದೆ. ಆದರೆ ಆತ ನನ್ನನ್ನು ವಂಚಿಸಿದ. ನಾನು ತುಂಬಾ ನೊಂದು ಹೋಗಿದ್ದೆ. ನಂತರ ನನ್ನ ಮದುವೆಯ ಪ್ರಸ್ತಾಪ ಬಂದಾಗ ನನಗೆ ಅಳುಕಿತ್ತು.  ಮದುವೆಯ ಬಗ್ಗೆ ಒಬ್ಬರೊಡನೆ ಮಾತುಕತೆಯಾಗಿತ್ತು. ನನ್ನನ್ನು ಭೇಟಿಯಾದಾಗ ಎಲ್ಲ ವಿಷಯಗಳನ್ನು ಅವರ ಬಳಿ ಹೇಳಬೇಕೆಂದುಕೊಂಡಿದ್ದೆ. ನಂತರ ನನ್ನ ಅವರ ಭೇಟಿಯಾಯಿತು. ಅವರು ಎಷ್ಟು ಮುಗ್ಧರು ಹಾಗೂ ಒಳ್ಳೆಯವರಾಗಿದ್ದರೆಂದರೆ, ನನಗೆ ಬಾಯಿಯೇ ಕಟ್ಟಿ ಹೋಗಿತ್ತು. ಅವರು ನನ್ನನ್ನೇ ಮದುವೆಯಾಗಬೇಕೆಂದು ಬಹಳವಾಗಿ ಬಯಸಿದ್ದನ್ನು ನೇರವಾಗಿ  ಹೇಳಿದರು. ನನಗೆ  ಮಾತುಗಳೇ ಬರಲಿಲ್ಲ. ಮೌನವಾಗಿ ಒಪ್ಪಿಕೊಂಡೆ. ಇಷ್ಟು ವರ್ಷಗಳು ಬಹಳ ಪ್ರೀತಿಯಿಂದ ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನನ್ನ ಜೀವನದಲ್ಲಿ ನಡೆದ ಆ ಕಹಿಘಟನೆಯನ್ನು ನಾನು disgusting part of my life ಅಂತ ಕಿತ್ತು ಬಿಸಾಡಿದ್ದೇನೆ. ಹಿಂದೆ ಕೆಲವೊಮ್ಮೆ 'ಹೇಳಿ ಬಿಡಲೇ' ಎಂದೆನ್ನಿಸುತ್ತಿತ್ತು. ಆದರೆ ಆ ಮುಗ್ಧ ಮುದ್ದು ಮನಸ್ಸಿನ ಮೇಲೆ ಯಾವ ರೀತಿಯಲ್ಲೂ ನೋವನುಂಟು ಮಾಡಲು ನನಗೆ ಮನಸ್ಸಾಗಲಿಲ್ಲ. ಈಗಂತೂ ನಾನು ಅವರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದೇನೆ. ನಾನು ಹೇಳದಿರುವುದೇ ಒಳ್ಳೆಯದಾಯಿತೆಂದು ಅನಿಸುತ್ತದೆ'
ಇದಿಷ್ಟನ್ನೂ ಅವರು ಅವರ ತಾಯಿಯ ಎದುರೇ ಹೇಳಿದರು, ಅವರ ತಾಯಿಯೂ ಅದಕ್ಕೆ ಸಹಮತ ಸೂಚಿಸಿದರು.
ಯಾರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆದಿದ್ದರೆ, ಯಾರಿಂದಾದರೂ ಮೋಸ ಹೋಗಿದ್ದರೆ ಆಕೆ ಹೇಳಿದ ಹಾಗೆ disgusting part of my life ಎಂದು ಅರ್ಥ ಮಾಡಿಕೊಂಡು ಕಿತ್ತು ಬಿಸಾಡಿದರೆ ಕ್ಷೇಮ. ಅದರ ಬದಲು ವಂಚನೆ ಮಾಡಿದ ವ್ಯಕ್ತಿಯ ಬಗ್ಗೆ ಒಳ್ಳೆಯ ಭಾವನೆ ಇಟ್ಟುಕೊಂಡು ಇನ್ನೊಬ್ಬನ ಜೊತೆ ಜೀವನ ನಡೆಸುವುದು ನಿರರ್ಥಕ. ತನ್ನ ಗುಟ್ಟು ಬಿಟ್ಟು ಕೊಟ್ಟ ಮಾತ್ರಕ್ಕೆ ನಿಮ್ಮ ಸಂಗಾತಿ  ಕೂಡಾ ಎಲ್ಲ ಗುಟ್ಟನ್ನು ಬಿಟ್ಟು ಕೊಡುವರೆಂಬ ಭರವಸೆ ಇಲ್ಲ. ಅವರೂ ಕೆಲವು ರಹಸ್ಯಗಳನ್ನು ರಹಸ್ಯವಾಗಿಯೇ ಇಟ್ಟುಕೊಂಡಿರುತ್ತಾರೆ. ಆದ್ದರಿಂದ ನೋವು ತರುವ ಅಥವಾ ನೆಮ್ಮದಿಯನ್ನು ಹಾಳು ಮಾಡುವ ಗುಟ್ಟುಗಳು ರಟ್ಟಾಗದಿದ್ದರೇನೇ ಒಳಿತು. 
ಅಂದ ಮಾತ್ರಕ್ಕೆ ತಮ್ಮ ಮೂಗಿನ ನೇರಕ್ಕೆ ಸ್ವೇಚ್ಛಾಚಾರದಿಂದ ಬದುಕನ್ನು ಕಟ್ಟಿಕೊಳ್ಳುವುದು ಸರಿಯಲ್ಲ. 

ಕೇಸ್ ೩
'ನನಗೊಂದು ವಿಲಕ್ಷಣ ಕಾಯಿಲೆ ಇದೆ. ಮದುವೆಗೆ ಮುನ್ನ ಇದನ್ನು ತಿಳಿಸುವುದು ಒಳಿತಲ್ಲವೇ?' ಗಂಡಾಗಲೀ, ಹೆಣ್ಣಾಗಲೀ ಕೆಲವೊಮ್ಮೆ ಕೇಳುವ ಪ್ರಶ್ನೆ. 

ನನ್ನ ಅನಿಸಿಕೆ/ಉತ್ತರ
ಈ ವಿಷಯವನ್ನು ಪರಸ್ಪರ ಚರ್ಚಿಸುವುದು ಒಳಿತೆಂದು ನನ್ನ ಅಭಿಪ್ರಾಯ. ನಂತರ ನಿಮ್ಮ ವಿವೇಚನೆಗೆ ಬಿಟ್ಟದ್ದು. 


No comments:

Post a Comment