Monday 28 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 8 - ಧ್ಯಾನ (ಮೈ ಬಗ್ಗಿಸುವುದು ಸುಲಭ, ಮನ ಬಗ್ಗಿಸುವುದೇ ಕಷ್ಟ.)

     

   'ತ್ರಾಟಕ'ದ ಅಭ್ಯಾಸ ನನಗೆ ಅಷ್ಟಾಂಗಯೋಗದ ಬಹುಮುಖ್ಯ ಅಂಗವಾದ 'ಧ್ಯಾನ'ಕ್ಕೆ ಅತ್ಯಂತ ಸಹಕಾರಿಯಾಯಿತು. ಧ್ಯಾನ ಮಾಡಲು ಹಲವಾರು ವಿಧಾನಗಳಿವೆ. ಸಾಕಾರ ಹಾಗೂ ನಿರಾಕಾರ ಎರಡೂ ವಿಧಾನಗಳಲ್ಲಿ ನನಗೆ ತರಬೇತಿ ನೀಡಲಾಯಿತು. 
         ಧ್ಯಾನದ ಆರಂಭಿಕ ಶಿಕ್ಷಣದಲ್ಲಿ, ಮನಸ್ಸಲ್ಲಿ ಯಾವುದೇ ಭಾವನೆಗಳು, ಆಲೋಚನೆಗಳು ಬಾರದಂತೇ ಕೆಲಕಾಲ ಕುಳಿತುಕೊಳ್ಳಲು ಸಾಧ್ಯವೇ ಎಂದು ಪ್ರಯತ್ನ ಪಡುವಂತೆ ನನಗೆ ಸೂಚಿಸಲಾಗಿತ್ತು. 'ಅಷ್ಟೇ ತಾನೇ' ಎಂದುಕೊಂಡು ಕುಳಿತ ನನಗೆ 'ಅದೆಷ್ಟು ಕಷ್ಟ' ಎಂದು ಅರಿವಾಯಿತು. 'ನನಗೀಗ ಯಾವ ಆಲೋಚನೆಯೂ ಬೇಡ' ಎಂದು ಕುಳಿತ ಮರುಕ್ಷಣವೇ ಆಲೋಚನೆಗಳ ಮಹಾಪೂರವೇ ಹರಿದು ಬಂತು. ಸುಮ್ಮನೆ ಇದ್ದಾಗಲೂ ಬಾರದಿರುವ, ಸಂಬಂಧವೇ ಇಲ್ಲದಿರುವ, ಅನಗತ್ಯ ಭಾವನೆಗಳೆಲ್ಲಾ ತಲೆಯಲ್ಲಿ ತುಂಬತೊಡಗಿದವು. ಮಸಾಲೆದೋಸೆಯಿಂದ ಚಂದ್ರಲೋಕದವರೆಗೆ ಏನೇನೋ ಯೋಚನೆಗಳು. ಅದೆಲ್ಲಿ ಹುದುಗಿ ಕುಳಿತಿದ್ದವೋ ಅನ್ನಿಸತೊಡಗಿತು.
         ಇದೇಕೋ ಅಸಾಧ್ಯದ ವಿಷಯ ಎಂದುಕೊಂಡು ಗುರುಗಳಿಗೆ ಹೇಳಿದೆ 'ಬೇಡ' ಎಂದುಕೊಂಡು ಕುಳಿತಾಗ, ಎಂದಿಗಿಂತ ಬಲವಾಗಿ ಹಾಗೂ ಅಸಹ್ಯವೆನಿಸುವಂತಹ ವಿಷಯಗಳೂ ಕೂಡಾ ಮನಸ್ಸಿನಲ್ಲಿ ತುಂಬಿ ಬರುತ್ತಿದೆ, ಬಹುಶಃ ನನ್ನಿಂದ ಧ್ಯಾನ ಮಾಡಲು ಸಾಧ್ಯವಾಗದು ಅನ್ನಿಸುತ್ತಿದೆ'.
         'ಏಕೆ ಸಾಧ್ಯವಾಗದು? ಎಲ್ಲರ ಆರಂಭವು ಹೀಗೆಯೇ ಇರುತ್ತದೆ. ಯಾವುದೇ ಯೋಚನೆ ಬರಲಿ, ಇಲ್ಲ.. ನನಗಿದು ಬೇಡ ಎಂದು ಬದಿಗೆ ತಳ್ಳುತ್ತಾ ಇದ್ದರೆ ನಿಧಾನವಾಗಿ ಯೋಚನೆಗಳನ್ನು ಒಂದು ನಿಯಂತ್ರಣಕ್ಕೆ ತರಬಹುದು. ಮನುಷ್ಯನ ಮನಸ್ಸಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ' ಎಂದರು.
         'ಆದರೆ ಈ ಅಸಹ್ಯ ಹಾಗೂ ಅನವಶ್ಯಕ ವಿಷಯಗಳು ಬಂದಾಗ ಕಿರಿಕಿರಿಯಾಗುತ್ತದೆ' ನನ್ನ ಅಳಲು ತೋಡಿಕೊಂಡೆ.
'ಬರಲಿ ಏನಂತೆ ? ಬಗ್ಗಡಗಳು ಮೇಲೆ ಬಂದು ಮನಸ್ಸು ನಿರ್ಮಲವಾಗಲು ಸಹಾಯ ಮಾಡುತ್ತಿದೆ ಎಂದು ತಿಳಿದುಕೊಂಡರೆ ಆಯಿತು ಅಷ್ಟೇ, ಹಾಲಾಹಲ ಬಂದ ಮೇಲೆಯೇ ಅಮೃತ ಬಂದಿದ್ದು. 'Never give up' ಎಂದು ಉತ್ತೇಜನ ನೀಡಿದರು.
ಮತ್ತೆ ನವೋತ್ಸಾಹದಿಂದ 'ಧ್ಯಾನ' ಮುಂದುವರೆಸಿದೆ. ಯೋಚನೆಗಳನ್ನು 'ನನಗಿದು ಬೇಡ' ಎಂದು ಬದಿಗೆ ಸರಿಸಿದರೂ ಮತ್ತೆ ಮತ್ತೆ ಕಾಡುತ್ತಿದ್ದಾಗ ನನ್ನದೇ ಆದ ಒಂದು ಉಪಾಯ ಕಂಡು ಹಿಡಿದೆ. ಮನಸ್ಸಿನಲ್ಲಿಯೇ ಒಂದು ಕಸದ ಬುಟ್ಟಿಯನ್ನು ಕಲ್ಪಿಸಿಕೊಂಡು ಯಾವ ಆಲೋಚನೆ ಬಂದರೂ ಆ ಕಸದ ಬುಟ್ಟಿಯಲ್ಲಿ ಹಾಕುತ್ತಾ ಬಂದೆ. ಈ ವಿಧಾನ ಬಹಳಷ್ಟು ಸಹಕಾರಿಯಾಯಿತು.
          ಒಂದಷ್ಟು ಕಾಲ ಕಳೆದ ಮೇಲೆ ಗುರುಗಳು ಒಮ್ಮೆ ಮಾತಿಗಿಳಿದರು. 'ಮನಸ್ಸಿನ ಸ್ವಭಾವವೇ ಯೋಚನಾಲಹರಿಯಲ್ಲಿ ಮುಳುಗುವುದು. ಅದು ಇಷ್ಟು ಹೊತ್ತಿಗಾಗಲೇ ನಿಮ್ಮ ಮನಸ್ಸಿಗೆ ಅರ್ಥವಾಗಿರಬಹುದು. ಅದರಲ್ಲಿ ತಪ್ಪೇನೂ ಇಲ್ಲ, ಏಕೆಂದರೆ ಅದು ಮನಸ್ಸಿನ ಸಹಜ ಕ್ರಿಯೆ. ಇಷ್ಟು ಅರ್ಥ ಆದರೆ ಸಾಕು. ಇಲ್ಲಿಂದ ಮುಂದೆ ಸಾಕಾರ ಧ್ಯಾನವನ್ನು ಅಭ್ಯಾಸ ಮಾಡಿ. ನಂತರ ನಿರಾಕಾರ ಧ್ಯಾನದತ್ತ ಗಮನ ಹರಿಸಬಹುದು' ಎಂದು ಹೇಳಿದರು.
         ಇಲ್ಲಿಂದ ಮುಂದೆ ನನಗೆ ಓಂಕಾರದ ಚಿತ್ರವನ್ನು ನೋಡುತ್ತಾ ಧ್ಯಾನ ಮಾಡುವುದು ಹೇಗೆ ಎಂದು ಹೇಳಿಕೊಟ್ಟರು. ಓಂಕಾರವನ್ನು ಬರೆಯುವಾಗ ಹೇಗೆ ಕೈ ಓಡುತ್ತದೋ ಅದೇ ರೀತಿ ಓಂಕಾರದ ಮೇಲೆ ಮನಸ್ಸನ್ನು ಓಡಿಸುವುದು ಅಂದರೆ ಮನಸ್ಸಿನಿಂದ ಓಂಕಾರವನ್ನು ಬರೆಯುವುದು. ಇದೇ ರೀತಿ ನಾನಾ ವಿಧದ ಯಂತ್ರಗಳನ್ನು ನೋಡುತ್ತಾ ಧ್ಯಾನ ಮಾಡುವುದು ಹೇಗೆ ಎಂದು ವಿವರಿಸಿ ಹೇಳಿದರು. 
         ಇದಾದ ಮೇಲೆ ಸಾಕಾರ ದೇವರ ಚಿತ್ರವನ್ನು ನೋಡುತ್ತಾ ನಂತರ ಕಣ್ಣು ಮುಚ್ಚಿ ಆಯಾ ದೇವರನ್ನು ಮನಸ್ಸಿನೊಳಗೆ ಹೇಗೆ ಸಾಕ್ಷಾತ್ಕರಿಸುವುದು ಎಂದು ಹೇಳಿಕೊಟ್ಟರು. ಇದಾದ ನಂತರ 'ಶಾಂಭವೀಮುದ್ರೆ'ಯ ಮೂಲಕ ಧ್ಯಾನಿಸುತ್ತಾ ಸಾಕಾರವನ್ನು ನಿರಾಕಾರವಾಗಿ ಅನುಷ್ಠಾನ ಮಾಡುವ ಬಗ್ಗೆ ತರಬೇತಿ ಪಡೆದೆ.
         ಮನಸ್ಸನ್ನು ನನಗೆ ಬೇಕಾದಂತೆ ಪಳಗಿಸಿದ ಮೇಲೆ ಆರಂಭದ ದಿನಗಳಲ್ಲಿ ಕಷ್ಟಪಟ್ಟ ನೆನಪು ಒಂದು ರೀತಿಯ ಸಂತಸ ನೀಡುತ್ತಿತ್ತು. 'ಕಲಿಯುವವರೆಗೂ ಬ್ರಹ್ಮವಿದ್ಯೆ, ಕಲಿತ ಮೇಲೆ ಕೋತಿವಿದ್ಯೆ' ಎನ್ನುವ ಗಾದೆ ನೆನಪಾಗುತ್ತಿತ್ತು. ಮುಂದೆ ಗುರುರಾಜ್ ತಂತ್ರಿ ಹಾಗೂ ನಾನು ಜತೆಗೂಡಿ ಕೆಲವು ಯೋಗಶಿಬಿರಗಳನ್ನು ಆಯೋಜಿಸಿದ್ದೆವು. ಅಲ್ಲಿ ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ಹಾಗೂ ನನ್ನ ಅನುಭವವನ್ನು ತಳಹದಿಯಾಗಿಟ್ಟುಕೊಂಡು 'ಧ್ಯಾನ' ಎಂಬ ಒಂದು ಕಿರುಪುಸ್ತಕವನ್ನು 1989ರಲ್ಲಿ  ಪ್ರಕಟಿಸಿದೆ. 
'ಧ್ಯಾನ'ದಲ್ಲಿ ನನಗಾದ ಅನುಭವಗಳನ್ನು ಮುಂದಿನ ಭಾಗದಲ್ಲಿ ವಿವರಿಸುತ್ತೇನೆ. 

Tuesday 15 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 7 - ಯೋಗಶಾಲೆಯ ಸವಿನೆನಪುಗಳು

ಯೋಗಾಸನ ಹಾಗೂ ಪ್ರಾಣಾಯಾಮದ ಬಗ್ಗೆ ಬರೆಯುತ್ತಿದ್ದ ಹಾಗೆ ನನಗೆ ಒಮ್ಮೆ ನನ್ನ ಯೋಗಶಾಲೆಗೆ ಹೋಗುವ ಬಯಕೆ ಉಂಟಾಯಿತು. ಇಂದು ಭೇಟಿ ನೀಡಿದೆ. ಮನಸ್ಸಿಗೆ ಒಂದು ತಂಪು ಅನುಭವವನ್ನು ಅದು ನೀಡಿತು. ಅಲ್ಲಿ ತೆಗೆದ ಕೆಲವು ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. It was Nostalgic! 

ನನ್ನ ಯೋಗಶಾಲೆ, ಲಲಿತಾ ವಿದ್ಯಾಮಂದಿರ.


ನನ್ನ ಗುರುಗಳಾದ ಶ್ರೀ ಚಿ.ವಿ. ಅಯ್ಯನವರು. 




ಗೋಡೆಯ ಮೇಲೆ ರಾರಾಜಿಸುತ್ತಿರುವ ಪಾತಂಜಲಿ ಅಷ್ಟಾಂಗ ಯೋಗ ಸೂತ್ರದ ಫಲಕಗಳು. 














ಗುರುಗಳು ಕಲಿಸಿಕೊಟ್ಟ ಯೋಗಮುದ್ರೆಗಳು.






ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು ಹಲವಾರು ಬಾರಿ ಭೇಟಿಯಿತ್ತು, ಸೂಕ್ಷ್ಮವಿಕಾರಗಳನ್ನು ಕಲಿಸಿ ಸ್ಪೂರ್ತಿ ನೀಡುತ್ತಿದ್ದರು.

ಭುಜಂಗಾಸನ 

ಸೂರ್ಯನಮಸ್ಕಾರ 

ಯೋಗಚಕ್ರ 

ಯೋಗಮಂದಿರದಲ್ಲೊಂದು ರಾಮಮಂದಿರ.


ತಾರಸಿಯ ಮೇಲೊಂದು ಯಾಗಶಾಲೆ.

ತ್ರಾಟಕ ಹಾಗೂ ಧ್ಯಾನ ಮಾಡಲು ಅನುಕೂಲವಾಗುವ ನೆಲಮಾಳಿಗೆಯಲ್ಲಿರುವ ಕತ್ತಲಕೋಣೆಗೆ ಪ್ರವೇಶ ಇಲ್ಲಿಂದ.


ಅಂದು ಯೋಗಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ ತೆಗೆದ ಕೆಲಚಿತ್ರಗಳು ಹಾಗೂ ಇಂದಿನ ಕೆಲಚಿತ್ರಗಳು.






Saturday 12 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 6 - ತ್ರಾಟಕ

         ಯಾವುದೇ ವಸ್ತುವನ್ನು ಎವೆಯಿಕ್ಕದೆ ನೋಡುವುದಕ್ಕೆ 'ತ್ರಾಟಕ' ಎಂದು ಕರೆಯುತ್ತಾರೆ. ಯೋಗಾಭ್ಯಾಸ ಸಾಧನೆಯಲ್ಲಿ ಓಂಕಾರದ ಚಿತ್ರ, ಕೆಲವು ಯಂತ್ರಗಳ ಚಿತ್ರ ಹಾಗೂ ಬೆಂಕಿಯ ಚಿಕ್ಕ ಜ್ಯೋತಿಯನ್ನು ಏಕಾಗ್ರತೆಯಿಂದ ನೋಡುವುದು ಹೇಗೆ? ಎಂದು  ಬಹುತೇಕವಾಗಿ ಕಲಿಸಲಾಗುತ್ತದೆ. ಓಂಕಾರದ ಚಿತ್ರ ಎವೆಯಿಕ್ಕದೇ ಸಾಧ್ಯವಾದಷ್ಟು ಹೊತ್ತು ನೋಡಿ ನಂತರ ಕಣ್ಣು ಮುಚ್ಚಿ ಅದನ್ನು ಒಳಗಣ್ಣುಗಳಿಂದ ನೋಡಲು ಪ್ರಯತ್ನಿಸುವುದು. ಓಂಕಾರದ ಚಿತ್ರವನ್ನು ನೋಡುವಾಗ, ಓಂಕಾರವನ್ನು ಬರೆಯುವಾಗ ಹೇಗೆ ಬರೆಯುತ್ತೇವೆಯೋ ಅದೇ ಮಾರ್ಗವನ್ನು ಕಣ್ಣುಗಳಿಂದ ಅನುಸರಿಸುವುದು. ನಂತರ ಕಣ್ಣು ಮುಚ್ಚಿಕೊಂಡು ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸುವುದು. ಅಂತೆಯೇ ಯಂತ್ರಗಳನ್ನು ಹೇಗೆ, ಎಲ್ಲಿಂದ ಎಲ್ಲಿಗೆ ಅನುಸರಿಸುತ್ತಾ ನೋಡುವುದು ಎಂಬ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುತ್ತದೆ. ಬಹಳ ಉಪಯುಕ್ತವಾಗಿ ನೆರವಾಗುವುದು ಜ್ಯೋತಿಯನ್ನು ನೋಡಿ ಅದನ್ನು ಸಾಕ್ಷಾತ್ಕರಿಸುವುದು. 
         ನಮ್ಮ ಯೋಗಶಾಲೆಯಲ್ಲಿ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕೊಠಡಿಯನ್ನು ನಿರ್ಮಿಸಲಾಗಿತ್ತು. ಪೂರ್ತಿ ಕತ್ತಲು ತುಂಬಿದ ಕೋಣೆ. ಅಲ್ಲಿ ಹೊಂಗೇ ಎಣ್ಣೆ ತುಂಬಿದ ದೀಪವನ್ನು ಇಡಲಾಗುತ್ತದೆ. ಅದರ ಹಳದಿ ಬಣ್ಣದ ಜ್ಯೋತಿಯನ್ನು ನೀಲಿ ಬಣ್ಣ ಕಾಣುವಷ್ಟು ಸಣ್ಣದಾಗಿ ಮಾಡಲಾಗುತ್ತದೆ. ನಂತರ ಅದರ ಎದುರಿಗೆ ಕುಳಿತು ಎವೆಯಿಕ್ಕದೇ ನೋಡುತ್ತಾ ಕುಳಿತುಕೊಳ್ಳಬೇಕು. ಕಣ್ಣಿಂದ ನೀರು ಹರಿಯುತ್ತಿದ್ದರೂ ತಡೆದು ಕೈಲಾದಷ್ಟು ಹೊತ್ತು ರೆಪ್ಪೆ ಮುಚ್ಚದೇ ಜ್ಯೋತಿಯನ್ನು ಗಮನಿಸುತ್ತಿರಬೇಕು. ಕಣ್ಣು ರೆಪ್ಪೆಗಳು ಒಂದಾದ ಮೇಲೆ ಜ್ಯೋತಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸಬೇಕು. ಅಭ್ಯಾಸ ಮಾಡಿದಂತೇ, ಕಣ್ಣು ತೆರೆದಾಗ ಕಂಡಷ್ಟೇ ಸ್ಪುಟವಾಗಿ ಜ್ಯೋತಿ ಕಾಣಿಸಲಾರಂಭಿಸುತ್ತದೆ. ನಾ ಕಂಡ ಇನ್ನೂ ಒಂದು ಅಚ್ಚರಿ ಏನೆಂದರೆ, ಕಣ್ಣು ಮುಚ್ಚಿ ಧ್ಯಾನಿಸುತ್ತಿರುವಾಗ ಜ್ಯೋತಿ ನಂದಿ ಹೋಗಿದ್ದು ಕಂಡು ಕಣ್ಣು ಬಿಟ್ಟರೆ ಅಲ್ಲಿ ಎದುರುಗಡೆ ಇರುವ ದೀಪದ ಜ್ಯೋತಿಯೂ ಆಗತಾನೇ ನಂದಿರುವುದು ಗೊತ್ತಾಗುತ್ತಿತ್ತು. 
         ಇಲ್ಲಿ ಹೊಂಗೇ ಎಣ್ಣೆ ಉಪಯೋಗಿಸುವುದು ಹಾಗೂ ಬತ್ತಿಯನ್ನು ನೀಲಿ ಬಣ್ಣದ ಜ್ಯೋತಿ ಬರುವವರೆಗೂ ಇಳಿಸುವುದರ ಉದ್ದೇಶ ಕಣ್ಣಿಗೆ ತಂಪು ನೀಡುವುದು. ಇದನ್ನು ಅಭ್ಯಸಿಸುವುದರಿಂದ ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಹಾಗೂ ಕಣ್ಣಿನ ಸಂಬಂಧ ರೋಗಗಳು ನಿಯಂತ್ರಣಗೊಳ್ಳುತ್ತವೆ. ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಹಾಗೂ 'ಧ್ಯಾನ' ಮಾಡಲು ಇದು ಬಹಳಷ್ಟು ಸಹಾಯವಾಗುತ್ತದೆ.  
         ಕಣ್ಣಿಗೆ ಸಂಬಂಧ ಪಟ್ಟ ಹಾಗೆ ನಾನು ಅಭ್ಯಸಿಸಿದ ಇನ್ನೊಂದು ವಿದ್ಯೆ 'ಚಾಕ್ಷುಮತೀ ವಿದ್ಯೆ'. ಇದರ ಸಾಧನೆ ಸ್ವಲ್ಪ ಕಷ್ಟಕರವಾಗಿದೆ. ಈ ಸಾಧನೆಯಲ್ಲಿರುವಾಗ ಕೇವಲ ಗೋಧಿ ಹಿಟ್ಟಿನ ಪದಾರ್ಥಗಳನ್ನೇ ಸೇವಿಸಬೇಕಿತ್ತು. ಒಂದಷ್ಟು ಮಂತ್ರಗಳ ಅನುಷ್ಠಾನ ಕ್ರಮವಿದೆ. ಅದಲ್ಲದೇ ಸೂರ್ಯನ ಏಳು ಬಣ್ಣಗಳಲ್ಲಿ ಒಂದೊಂದೇ ಬಣ್ಣದ ನೀರಿನಲ್ಲಿ ಹಂತ ಹಂತವಾಗಿ ಸೂರ್ಯನ ಕಿರಣಗಳ ಪ್ರತಿಫಲವನ್ನು ನೋಡಬೇಕಾಗುತ್ತದೆ. (ಇಲ್ಲೂ ಕೂಡಾ ಮಂತ್ರ ಹಾಗೂ ಏಕಾಗ್ರತೆಗೆ ಮಹತ್ವವಿದೆ.) ಇದರ ಅಭ್ಯಾಸದ ನಂತರ ಉದಯಿಸುತ್ತಿರುವ ಹಾಗೂ ಅಸ್ತಮಿಸುತ್ತಿರುವ ಸೂರ್ಯನನ್ನು ಏಕಾಗ್ರತೆಯಿಂದ ನೋಡಬೇಕಾಗುತ್ತದೆ. ಕೊನೆಯದಾಗಿ ಮಧ್ಯಾಹ್ನದ ಸೂರ್ಯನನ್ನು ಕೆಲ ಕಾಲ ನೋಡುವ ಪಾಠವೂ ಇದೆ. ಈ ಪ್ರಯೋಗವನ್ನು ಸೂಕ್ತ ಗುರು ಪಕ್ಕದಲ್ಲಿಲ್ಲದೇ ಯಾರೂ ಪ್ರಯತ್ನಿಸಬೇಡಿ. ಈ ವಿದ್ಯೆಯನ್ನು ಕರಗತ ಮಾಡಿದ ಮೇಲೆ ಗುರುಗಳು 'ನಿನಗೆ ಬಹುತೇಕ ಜನರ ಹಾಗೆ ನಲವತ್ತು ವರ್ಷಕ್ಕೆ ಕನ್ನಡಕ ಹಾಕುವ ಅವಶ್ಯಕತೆ ಬರುವುದಿಲ್ಲ, ಅಂತೆಯೇ ಕಣ್ಣಿಗೆ ಸಂಬಂಧಿಸಿದ ಬೇನೆಗಳು ಬರುವುದಿಲ್ಲ' ಎಂದರು. ನಾನು reading glass ಕೈಗೆತ್ತಿಕೊಂಡದ್ದು ನನ್ನ ಐವತ್ತೈದನೇ ವಯಸ್ಸಿಗೆ. ಮನೆಯಲ್ಲಿ ಎಲ್ಲರಿಗೂ conjunctivitis ( ಮದ್ರಾಸ್ ಐ ) ಬಂದು, ಎಲ್ಲರ ಕಣ್ಣೂ ಕೆಂಪಾಗಿತ್ತು. ಆಗ ನನಗೆ ಗುರುಗಳ ಹೇಳಿದ ಮಾತು ನೆನಪಾಗಿ ನನಗೆ ಬರಬಹುದೇನೋ ನೋಡೋಣ ಎಂದು ಕುತೂಹಲದಿಂದ ಕಾಯುತ್ತಿದ್ದೆ. ಆದರೆ ಬರಲಿಲ್ಲ, ಖುದ್ದಾಗಿ ನನ್ನ ತಮ್ಮನ ಕೆಂಪು ಕಣ್ಣುಗಳ ಮೇಲೆ ನನ್ನ ಕಣ್ಣುಗಳನ್ನು ಇಟ್ಟು ಉಜ್ಜಿ ನೋಡಿದರೂ ಆ ರೋಗ ನನಗೆ ಬರಲಿಲ್ಲ !

Friday 11 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 5 - ಮುದ್ರೆ, ಬಂಧತ್ರಯ ಹಾಗೂ ಷಟ್ಕರ್ಮಗಳು


          ಕೆಲವು ಮಿತ್ರರು ಹಾಗೂ ಹಿತೈಷಿಗಳು ಪ್ರಾಣಾಯಾಮದ ಬಗ್ಗೆ ಬರೆದ ಹಿಂದಿನ ಕಂತನ್ನು ಕುರಿತು ಮಾತಿಗಿಳಿದರು.
'ಗುರುಮುಖೇನ ಕಲಿಯಬೇಕು ಎಂದಿದ್ದೀರಿ, ಆದರೆ ಅವುಗಳನ್ನು ಆಚರಿಸುವ ವಿಧಿ-ವಿಧಾನಗಳನ್ನು, ಆಚರಿಸುವ ಬಗೆಯನ್ನು ಹೇಳುತ್ತಿದ್ದೀರಿ. ಇದನ್ನು ಓದಿಯೇ ಕೆಲವರು ಪ್ರಯೋಗ ಮಾಡಲು ಹೋರಾಡುವುದಿಲ್ಲವೇ?'
'ಈ ಪ್ರಯೋಗಗಳನ್ನು ಯಾರೂ ಗುರುಗಳ ಸಹಾಯವಿಲ್ಲದೇ ಪ್ರಯೋಗಿಸಬೇಡಿ ಎಂದು ಸ್ಪಷ್ಟವಾಗಿ ಹೇಳುತ್ತೇನೆ' ಎಂದೆ.
'ಹಾಗಂದಾಗಲೇ ಕುತೂಹಲ ಜಾಸ್ತಿಯಾಗಿ ಪ್ರಯೋಗಿಸಲು ಹೋಗುವವರೇ ಹೆಚ್ಚು' ಎಂದರು ಟ್ವಿಟ್ಟರ್ ಗೆಳೆಯ ಕಿರಣ್.
'ಯಾವ ರೀತಿ ಆಚರಿಸಬೇಕು ಎಂದು ಹೇಳದಿದ್ದರೆ ಒಳಿತೇನೋ' ಎಂದು ಹೇಳಿದ್ದು ಅರುಣ್ ಮೇಷ್ಟ್ರು. 
         ನಾನು ಬರೆಯುವುದನ್ನು ಮುಂದೂಡಿ ಸ್ವಲ್ಪ ಯೋಚಿಸಿದೆ. ನನ್ನ ಉಪನಯನದ ಸಮಯದಲ್ಲಿ ಆಚಾರ್ಯರು 'ಯಾರಾದರೂ ನುರಿತ ಗುರುಮುಖೇನ ಕಲಿಯುವುದೊಳಿತು' ಎಂದು ಹೇಳಿದ್ದೂ ನೆನಪಿಗೆ ಬಂತು. ಆರಂಭದಲ್ಲಿ ನನಗಾದ ತೊಂದರೆಗಳು ಹಾಗೂ ನನ್ನ ಗುರುಗಳು ಅದರ ಬಗ್ಗೆ ಕಾಳಜಿ ವಹಿಸಿ ಅದನ್ನು ನಿವಾರಿಸಿದ ಬಗೆ ನೆನಪಿಗೆ ಬಂತು. ಆದ್ದರಿಂದ ಸದ್ಯಕ್ಕೆ ನಾನೇನು ಮಾಡಿದೆ ಎಂದು ಸ್ಥೂಲವಾಗಿ ವಿವರಿಸಿ, ಪ್ರಾಣಾಯಾಮ ಹಾಗೂ ಪ್ರಕೃತಿ ಶಕ್ತಿಯ ಸಂಬಂಧದ ಕುರಿತಾಗಿ ಹೇಳಲು ಬಯಸುತ್ತೇನೆ.
         'ನಾಡಿಶೋಧನ' ಮುಂತಾದ ಪ್ರಾಣಾಯಾಮದ ನಂತರ ನನಗೆ 'ಭಸ್ತ್ರಿಕ' ಪ್ರಾಣಾಯಾಮದ ವೇಳೆ ಸ್ವಲ್ಪ ತೊಂದರೆ ಎದುರಾಯಿತು. ಕಮ್ಮಾರನ ತಿದಿಯಿಂದ ಗಾಳಿ ಹೊರಸೂಸುವ ಹಾಗೆ ಮೂಗಿನ ಹೊಳ್ಳೆಗಳಿಂದ ಶ್ವಾಸವನ್ನು ವೇಗವಾಗಿ ಹೊರತಳ್ಳುತ್ತಾ ಇರುವುದು. ಹೀಗೆ ಮಾಡುತ್ತಿರುವಾಗ ಅಷ್ಟೇ ವೇಗವಾಗಿ ಶ್ವಾಸವು ಒಳಗೆ ಹೋಗುತ್ತಿರುತ್ತದೆ.ಇಪ್ಪತ್ತು ಸಲ ಶ್ವಾಸವನ್ನು ಹೊರಗೆಡವಿದ ನಂತರ ಒಮ್ಮೆ ದೀರ್ಘವಾಗಿ ಉಸಿರನ್ನು ಒಳಗೆಳೆದುಕೊಂಡು ಉಸಿರುಗಟ್ಟಿ ಕೂರುವುದು. ಇದು 'ಒಂದು ಮಂಡಲ'ವೆನಿಸಿಕೊಳ್ಳುತ್ತದೆ. ಗುರುಗಳು ಮೊದಲು ಕೆಲವು ದಿನ ಎರಡು ಮಂಡಲಗಳನ್ನು ಮಾತ್ರ ಮಾಡಲು ಹೇಳಿದ್ದರು. ಅತ್ಯಂತ ಉತ್ಸಾಹದಿಂದ ನಾನು ಐದು, ಕೆಲವೊಮ್ಮೆ ಹತ್ತು ಮಂಡಲಗಳವರೆಗೂ ಮಾಡುತ್ತಿದ್ದೆ. ಪರಿಣಾಮವಾಗಿ ಒಂದು ದಿನ ತಲೆಸುತ್ತು ಬಂದು ನೆಲಕ್ಕೆ ಜಾರಿದೆ. ವಿಷಯ ತಿಳಿದ ಗುರುಗಳು ಎದೆಯನ್ನು ನಿಧಾನವಾಗಿ ನೇವರಿಸಿ, ಹಣೆಯಿಂದ  ತಲೆಯ ಹಿಂಭಾಗದವರೆಗೂ ನೇವರಿಸುತ್ತಾ ಒಂದು ಮಂತ್ರವನ್ನು ಪಠಿಸುತ್ತಾ ಯಥಾಸ್ಥಿತಿಗೆ ನನ್ನನ್ನು ತಂದರು. ಹಾಗೂ ಹೇಳಿದ ಸೂಚನೆ ಮೀರಿ ಅತಿರೇಕದ ಪ್ರಯೋಗಗಳು ಮಾಡುವುದು ಬೇಕಿಲ್ಲ ಎಂದು ನಯವಾಗಿ ಬೆದರಿಸಿದರು. ಮುಂದೆ ಹಲವು ಕ್ಲಿಷ್ಟಕರವಾದ ಪ್ರಾಣಾಯಾಮಗಳನ್ನು ಕೂಡಾ ಮಾಡಿದೆನು.
          ನಂತರ ಮಹಾಮುದ್ರೆ, ಮಹಾವೇಧ, ಯೋಗ ಮುದ್ರೆ, ಖೇಚರೀ ಮುದ್ರೆ ಮುಂತಾದ  ಮುದ್ರೆಗಳು ಹಾಗೂ ಮೂಲಬಂಧ, ಜಾಲಂಧರ ಬಂಧ ಹಾಗೂ ಉಡ್ಡಿಯಾನ ಬಂಧ ಹೀಗೆ ಬಂಧತ್ರಯಗಳ ಬಗ್ಗೆ ವಿವರಿಸಿ ಹೇಳಿ ತರಬೇತಿ ನೀಡಲಾಯಿತು. ಇದಲ್ಲದೇ ಧೌತಿ, ಬಸ್ತಿ, ನೇತಿ, ನೌಲಿ, ತ್ರಾಟಕ, ಕಪಾಲಭಾಟಿ ಮುಂತಾದ ಷಟ್ಕರ್ಮಗಳನ್ನು ವಿಧಿವತ್ತಾಗಿ ಕಲಿತೆ. ಇಲ್ಲಿಯೂ ನನಗೆ ಸ್ವಲ್ಪ ಮಟ್ಟಿಗೆ ತೊಂದರೆಯಲ್ಲಿ ಸಿಲುಕಿಸಿದ್ದು ತಾಡನ ಕ್ರಿಯೆ ಹಾಗೂ ಕಪಾಲಭಾಟಿ.
ತಾಡನ ಕ್ರಿಯೆ ಅಭ್ಯಸಿಸುವುದು ಹೇಗೆ ಎಂದು ವಿವರಿಸುವ ಬದಲಿಗೆ ನನಗೇನಾಯಿತು ಎಂದು ಹೇಳಲು ಇಚ್ಛಿಸುತ್ತೇನೆ. ಮೂಲಾಧಾರದಲ್ಲಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಲು ಈ ಕ್ರಿಯೆಯನ್ನು ಮಾಡಲಾಗುತ್ತದೆ. ಮೂಲಾಧಾರದ ಮೇಲಿನ ಬಲವಾದ ಬಡಿತದಿಂದಾಗಿ ಮೈಯ್ಯೆಲ್ಲಾ ಬಿಸಿಯಾಗಿ ರಕ್ತವೆಲ್ಲಾ ತಲೆಯತ್ತ ಚಿಮ್ಮುತ್ತಿರುವ ಅನುಭವವಾಗಿತ್ತು. ಮತ್ತೆ ನನ್ನ ಗುರುಗಳು ಅದನ್ನು ಒಂದು ತಹಬಂದಿಗೆ ತಂದರು. ಇದೆ ರೀತಿಯ ಅನುಭವ ಕಪಾಲಭಾಟಿಯಲ್ಲೂ ನನಗಾಯಿತು.
         ಕಣ್ಣುಗಳಿಗೆ ಬಲ ನೀಡುವ, ಏಕಾಗ್ರತೆಯನ್ನು ಹೆಚ್ಚಿಸುವ, ಷಟ್ಕರ್ಮಗಳಲ್ಲಿ ಒಂದಾದ 'ತ್ರಾಟಕ'  ಎಂಬ ಕರ್ಮದ ಬಗ್ಗೆ ಮುಂದಿನ ಭಾಗದಲ್ಲಿ ವಿವರಿಸುತ್ತೇನೆ. 







   

Wednesday 9 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 4 - ಪ್ರಾಣಾಯಾಮ

ಪ್ರಾಣಾಯಾಮ 
          ಯೋಗದ ಪ್ರಕಾರ ಪ್ರಾಣಾಯಾಮ ಎಂದರೆ ಉಸಿರಾಟದ ಮೇಲೆ ಹಿಡಿತ ಸಾಧಿಸುವುದು. ಪ್ರಾಣದ ಉಳಿವಿಗೆ ಉಸಿರಾಡುವುದು ಅತ್ಯಗತ್ಯ. ಉಸಿರಾಟ ನಮ್ಮ ಅರಿವಿಲ್ಲದೇ ನಡೆಯುವ ಒಂದು ನಿರಂತರ ಕ್ರಿಯೆ. ಪ್ರಾಣಾಯಾಮದ ಪ್ರಥಮ ಪಾಠವೆಂದರೆ ಅದನ್ನು ಅರಿವಿಗೆ ತರುವುದು ಅಥವಾ ಗಮನಿಸುವುದು. ನಮ್ಮ ಉಸಿರಾಟವನ್ನು ಗಮನಿಸುತ್ತಾ ಕುಳಿತಾಗಲೇ ಮನಸ್ಸು ಏಕಾಗ್ರತೆಯತ್ತ ಜಾರುತ್ತದೆ. ಅನುಲೋಮ-ವಿಲೋಮ ಒಂದು ಸರಳವಾದ  ಪ್ರಾಣಾಯಾಮ. ಪದ್ಮಾಸನ ಅಥವಾ ಇನ್ನಾವುದೇ ನಮಗೆ ಒಂದಷ್ಟು ಕಾಲ ಹಿತವಾಗಿ ಕುಳಿತುಕೊಳ್ಳಬಹುದಾದ ಆಸನದಲ್ಲಿ ಕುಳಿತು ಒಂದೈದು ನಿಮಿಷ ಕೇವಲ ಉಸಿರಾಟವನ್ನು ಗಮನಿಸುತ್ತಾ ಕುಳಿತುಕೊಳ್ಳುವುದು. ನಂತರ ಬೆನ್ನು ಮೂಳೆಯನ್ನು ನೇರವಾಗಿರಿಸಿ, ಸಂಪೂರ್ಣವಾಗಿ ಉಸಿರನ್ನು ಹೊರಹಾಕುವುದು (ರೇಚಕ).
 ಈ ಸಮಯದಲ್ಲಿ ಎದೆ ಹಾಗೂ ಹೊಟ್ಟೆಯನ್ನು ಆದಷ್ಟು ಒಳಗೆ ಎಳೆದುಕೊಂಡು ಉಸಿರನ್ನು ಮೂಗಿನ ಹೊಳ್ಳೆಗಳ ಮೂಲಕ ಸಾಧ್ಯವಾದಷ್ಟು ಹೊರಹಾಕಲು ಪ್ರಯತ್ನಪಡಬೇಕು. ನಂತರ ಉಸಿರನ್ನು ಮೂಗಿನ ಹೊಳ್ಳೆಗಳ ಮೂಲಕ ಸಾಧ್ಯವಾದಷ್ಟು ತುಂಬಿಕೊಳ್ಳಲು ಪ್ರಯತ್ನ ಪಡುವುದು (ಪೂರಕ). ಈ ಸಮಯದಲ್ಲಿ ಎದೆ ಹಾಗೂ ಹೊಟ್ಟೆಯಲ್ಲಿ ಆದಷ್ಟು ಗಾಳಿಯನ್ನು ತುಂಬಿಕೊಳ್ಳುತ್ತಿದ್ದೇನೆ ಎಂಬ ಭಾವನೆಯನ್ನು ಇಟ್ಟುಕೊಂಡು ಎದೆ ಹಾಗೂ ಹೊಟ್ಟೆ ಉಬ್ಬಿಕೊಳ್ಳುವವರೆಗೂ ತುಂಬಬೇಕು. ಆಸನ ಅಥವಾ ಪ್ರಾಣಾಯಾಮ ಮಾಡುವ ಮೊದಲು ಹೊಟ್ಟೆಯನ್ನು ಖಾಲಿ ಇಟ್ಟುಕೊಳ್ಳುವುದು ಮುಖ್ಯ. ಇದು ಅಭ್ಯಾಸವಾದಂತೇ ಎಳೆದುಕೊಂಡ ಪ್ರಾಣವಾಯುವನ್ನು ಒಳಗೆ ಹಿಡಿದಿಟ್ಟುಕೊಳ್ಳುವ ವಿಧಾನವನ್ನು (ಕುಂಭಕ) ಹೇಳಿಕೊಡಲಾಗುತ್ತದೆ. 
          ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೇನೆಂದರೆ ರೇಚಕ ಹಾಗೂ ಪೂರಕವನ್ನು ಅತ್ಯಂತ ನಿಧಾನವಾಗಿ ಮಾಡಬೇಕಾಗುತ್ತದೆ. ಅಂದರೆ ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಂಡು, ನಿಧಾನವಾಗಿ ಹೊರಗೆ ಬಿಡಬೇಕಾಗುತ್ತದೆ. ದಿನಕಳೆದಂತೇ ಉಸಿರನ್ನು ಒಳಗೆ ಹಿಡಿದಿಟ್ಟುಕೊಳ್ಳುವ ಅವಧಿ ವಿಸ್ತರಿಸುತ್ತಾ ಹೋಗುತ್ತದೆ. ಕುಂಭಕದ ಅವಧಿಯ ಎರಡರಷ್ಟು ಅವಧಿಯಲ್ಲಿ ಪೂರಕ ಹಾಗೂ ರೇಚಕವನ್ನು ವಿಸ್ತರಿಸಬೇಕಾಗುತ್ತದೆ. ಉದಾಹರಣೆಗೆ ಮುವ್ವತ್ತು ಸೆಕೆಂಡುಗಳ ಕಾಲ ಉಸಿರನ್ನು ಬಿಗಿ ಹಿಡಿದರೆ ಉಸಿರನ್ನು ತೆಗೆದುಕೊಳ್ಳುವ ಕಾಲ ಹಾಗೂ ಉಸಿರನ್ನು ಬಿಡುವ ಕಾಲ ಒಂದು ನಿಮಿಷದವರೆಗೆ ವಿಸ್ತರಿಸಬೇಕಾಗುತ್ತದೆ. 
          ಈ ಆರಂಭಿಕ ಪ್ರಾಣಾಯಾಮ, ಉಸಿರಾಟದ ಮೇಲೆ ನಮಗೆ ನಿಯಂತ್ರಣವನ್ನು ತಂದುಕೊಡುತ್ತದೆ. ಪ್ರಾಣಾಯಾಮದಿಂದ ಏನು ಲಾಭ? ಕೆಲವು ಸಂಕೀರ್ಣ ಪ್ರಾಣಾಯಾಮಗಳನ್ನು ಗುರುಮುಖೇನ ಏಕೆ ಕಲಿಯಬೇಕು? ಇದರ ಗುಟ್ಟೇನು? ಆಗ ಆಗುವ ಅನುಭವಗಳೇನು? ಮುಂದಿನ ಭಾಗದಲ್ಲಿ ಬರೆಯುತ್ತೇನೆ.