Wednesday 23 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 18

        'ಕುಲಕುಂಡಲಿನೀ ಯೋಗ' ತಾಂತ್ರಿಕ ಸಾಧನೆಯ ಅಂತಿಮ ಗುರಿ. ಇದರ ಬಗ್ಗೆ ಸಣ್ಣ ವಿವರಣೆ ಕೊಡುತ್ತೇನೆ. ಮೂಲಾಧಾರದಲ್ಲಿರುವ ಶಕ್ತಿಯನ್ನು, ಷಟ್ ಚಕ್ರಗಳನ್ನು ಬೇಧಿಸಿ ಸಹಸ್ರಾರದಲ್ಲಿರುವ ಶಿವನಲ್ಲಿ ಒಂದಾಗಿಸುವ ಕ್ರಿಯೆಯೇ ಕುಲಕುಂಡಲಿನೀ ಯೋಗ. ಇದಕ್ಕೂ ಮುಂಚೆ ಯೋಗ ಶಾಲೆಯಲ್ಲಿ ನನಗೆ ಕುಂಡಲಿನೀ ಶಕ್ತಿಯ ಕುರಿತಾದ ಕೆಲವು ಪ್ರಯೋಗಗಳನ್ನು ಮಾಡಿಸಿದ್ದರು. ಹಠಯೋಗದ 'ತಾಡನ' ಕ್ರಿಯೆ ಕುಂಡಲಿನೀ ಶಕ್ತಿಯನ್ನು ಉದ್ದೀಪನಗೊಳಿಸುವ ಅಂತಹ ಒಂದು ಕ್ರಿಯೆ.ಈ ಶಕ್ತಿಯ ಬಗ್ಗೆ ವಿವರಗಳನ್ನು ಒತ್ತಟ್ಟಿಗಿಟ್ಟು ಹೇಳಬಹುದಾದ ನನ್ನ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತೇನೆ. 
        ಸಾಧಾರಣವಾಗಿ ತಂತ್ರವಿದ್ಯೆಯ ಸಾಧನೆಯನ್ನು ಮೂರು ಭಾವಗಳಲ್ಲಿ ಕಲಿಸಲಾಗುತ್ತದೆ. ಅವುಗಳಲ್ಲಿ ಪಶುಭಾವ ಘೋರವಾಗಿರುವಂತೆ ಭಾಸವಾಗುತ್ತದೆ. ವೀರಭಾವ ಕಠೋರವಾಗಿದ್ದು, ದಿವ್ಯಭಾವ ಮನಸ್ಸಿನ ಉತ್ಕಟಸ್ಥಿತಿಗೆ ಸಾಕ್ಷಿಯಾಗುತ್ತದೆ. 
           ತಂತ್ರದ ಪಂಚಮಕಾರಗಳನ್ನೊಳಗೊಂಡ  ಸಾಧನೆಯಲ್ಲಿ `ಮೈಥುನ'ದ ಪ್ರಶ್ನೆ ಬಂದಾಗ ನಾನು ಗುರುಗಳ ಬಳಿ ಆ ಬಗ್ಗೆ ನನ್ನ ವಿರೋಧ ವ್ಯಕ್ತ ಪಡಿಸಿದ್ದೆ. `ಮೈಥುನ'ವೆಂದರೆ ಹೆಣ್ಣೊಬ್ಬಳೊಂದಿಗೆ ಲೈಂಗಿಕ ಸಂಪರ್ಕ. ಅದು ಸುತರಾಂ ನನ್ನ ಮನಸ್ಸಿಗೆ ಒಪ್ಪಿಗೆಯಾಗಿರಲಿಲ್ಲ. 
        'ಮಿಥುನ'ದ  ತಾತ್ಪರ್ಯವನ್ನು ಗುರುಗಳು ಆಗ ನನಗೆ ವಿವರಿಸಿ ಹೇಳಿದರು. ಪಶುಭಾವದ 'ಮಿಥುನ' ಸಾಧಾರಣ ಜನರು ಅನುಭವಿಸುವ ಸುಖ. ಅಲ್ಲಿ ನಾನು ಸುಖ ಪಡಬೇಕು ಎನ್ನುವುದಷ್ಟೇ ಮುಖ್ಯವಾಗಿರುತ್ತದೆ. ತನ್ನ ಸಂಗಾತಿಯ ಬೇಕು ಬೇಡಗಳ ಬಗ್ಗೆ ಆತ ಯೋಚಿಸುವುದೇ ಇಲ್ಲ. ವೀರಭಾವದ ಮಿಥುನದಲ್ಲಿ ತಾನು ಸುಖ ಪಡುವುದಕ್ಕಿಂತ ತನ್ನ ಸಂಗಾತಿ ಸುಖದ ಚರಮಾವಸ್ಥೆ ಪಡೆಯಲಿ ಎನ್ನುವುದು ಮುಖ್ಯವಾಗಿರುತ್ತದೆ. ಆದರೆ ತಾನೂ ಸುಖದಲ್ಲಿ ಭಾಗಿಯಾಗಿಯೇ ಇರುತ್ತಾನೆ. ದಿವ್ಯಭಾವದಲ್ಲಿ ದೈಹಿಕ ಸುಖಕ್ಕಾಗಿ ಸಂಗಾತಿಯನ್ನು ಸೇರು ಪ್ರಶ್ನೆಯೇ ಇರುವುದಿಲ್ಲ. (ಈ ಭಾವಗಳ ಕ್ರಿಯೆ ಗಂಡು, ಹೆಣ್ಣು ಇಬ್ಬರಿಗೂ ಸಮಾನವಾಗಿಯೇ ಅನ್ವಯವಾಗುತ್ತದೆ)
        ದಿವ್ಯಭಾವದಲ್ಲಿಯೂ ಕೂಡ ಪಂಚಮಕಾರದ ಭಾಗವಾದ 'ಮಿಥುನ'ದಲ್ಲಿ  ಹೆಣ್ಣನ್ನು ಸೇರುವ ಮೊದಲು ಆಕೆಯನ್ನು (ಆಕೆಯೂ ತಂತ್ರಸಾಧಕಿ ಆಗಿರುತ್ತಾಳೆ) ದೇವಿಯಂತೆ ಪೂಜಿಸಲಾಗುತ್ತದೆ. ದೇವಿಯನ್ನು ಸ್ಮರಿಸುತ್ತಾ ಸಾಧಕಿಯನ್ನು ಸಾಧಕ ಸೇರಬೇಕಾಗುತ್ತದೆ. ಇಲ್ಲಿ ಸಾಧಕ ದೈಹಿಕವಾಗಿ ಆಕೆಯನ್ನು ಸೇರಿದರೂ ಮನಸ್ಸನ್ನು ದೇವಿಯ ಪಾದಗಳಲ್ಲಿ ಸ್ಥಿರವಾಗಿರಿಸಬೇಕೇ ವಿನಃ ದೈಹಿಕ ಆನಂದದಲ್ಲಿ ಒಂದು ಕ್ಷಣವೂ ಮೈಮರೆಯುವಂತಿಲ್ಲ. ಕೇಳಲೇ ಘೋರವಾಗಿರುವ ಈ ಸಾಧನೆಯನ್ನು ನಾನು ನಿರಾಕರಿಸಿದೆ. ಮದುವೆಯಾಗುವ ಮುನ್ನ ಹೆಣ್ಣೊಬ್ಬಳೊಡನೆ ಲೈಂಗಿಕ ಸಂಪರ್ಕವಾಗುವುದು ನನಗಿಷ್ಟವಿರಲಿಲ್ಲ. 
          ನನ್ನ ನಿಲುವನ್ನು ಬದಲಿಸಲು ನನ್ನ ಗುರುಗಳು ಬಹಳ ಪ್ರಯತ್ನ ಪಟ್ಟರು. ಈ 'ದಿವ್ಯಮಿಥುನ' ನಿನಗೆ ಕುಲಕುಂಡಲಿನೀ ಯೋಗದ ಸಚ್ಚಿದಾನಂದ ಸ್ಥಿತಿಗೆ ತಲುಪಲು ಬಹು ಮುಖ್ಯ ಸಾಧನವಾಗುತ್ತದೆ ಎಂದು ಹೇಳಿದರಲ್ಲದೇ, ಕೊನೆಗೊಮ್ಮೆ 'ನೀನು ಪಂಚಮಕಾರದಲ್ಲಿ ಈ ಹಂತವನ್ನು ದಾಟುವುದು ಖಚಿತ' ಎಂದು ಭವಿಷ್ಯವನ್ನೂ ಕೂಡ ಹೇಳಿಬಿಟ್ಟರು! 
         ಮುಂದೊಂದು ದಿನ ಪ್ರತಿನಿತ್ಯದಂತೆ ನಾನು ಬೆಳಿಗ್ಗೆ ಮೂರುಗಂಟೆಗೆ ಎದ್ದು ಸ್ನಾನ ಮಾಡಲು ನದೀತೀರಕ್ಕೆ ಹೋದಾಗ ಅಂದು ನದಿಯಲ್ಲಿ ತುಂಬಾ ಸೆಳೆತವಿತ್ತು. ಹಾಗಾಗಿ ನಾನು ಸ್ವಲ್ಪ ಮುಂದಿರುವ ಲಿಂಗದೇವಸ್ಥಾನದ ತಟದ ಬಳಿ ಸ್ನಾನ ಮಾಡಲು ಹೋದೆ. ಏಕೆಂದರೆ ಅಲ್ಲಿ ದೊಡ್ಡ ಕಲ್ಲುಗಳು ನದಿಗೆ ಅಡ್ಡವಿರುವುದರಿಂದ, ಆ ಕಲ್ಲಿನ ಬಳಿ ನದಿಯ ನೀರು ಹೆಚ್ಚಿನ ಸೆಳೆತವಿಲ್ಲದೇ ಸ್ವಲ್ಪ ಮಟ್ಟಿಗೆ ಶಾಂತವಾಗಿರುತ್ತಿತ್ತು. 



        ಆ ದೊಡ್ಡ ಕಲ್ಲುಗಳ ಮುಂದೆ ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಲ್ಲೂ ನೀರಿನ ಸೆಳೆತ ಆರಂಭವಾಯಿತು. ನಾನು ಅದರಲ್ಲಿ ಕೊಚ್ಚಿಕೊಂಡು ಹೋಗದಂತೆ ಎದುರಿಗಿದ್ದ ಎರಡು ಕಲ್ಲಿನ ತುದಿಗಳನ್ನು ನನ್ನ ಕೈಗಳಿಂದ ಹಿಡಿದುಕೊಂಡೆ. ಆದರೂ ಆ ಕಲ್ಲುಗಳ ಮಧ್ಯದಿಂದ ಬಂದ ನೀರಿನ ಹೊಡೆತಕ್ಕೆ ನನ್ನ ಇಡೀ ದೇಹ ಮೇಲೆದ್ದಿತು. ಆದರೂ ಕಲ್ಲುಗಳನ್ನು ಆಧಾರವಾಗಿ ಬಲವಾಗಿ ಕೈಗಳಿಂದ ಹಿಡಿದುಕೊಂಡಿದ್ದರಿಂದ ದೇಹ ನದಿಯಲ್ಲಿ ತೇಲುತ್ತಿತ್ತು. ನದಿಯ ನೀರಿನ ಹೊಡೆತಕ್ಕೆ ದೇಹ ಮೇಲೆ ಕೆಳಗೆ ಹೊಯ್ದಾಡುತ್ತಿತ್ತು. ಅದೇನು ಭಾವ ಮೂಡಿತ್ತೋ ಏನೋ, ಆ ಕ್ಷಣದಲ್ಲಿ ನದಿ ಒಂದು ಹುಡುಗಿಯಂತೆ, ನಾನು ಕೈಯಿಟ್ಟ ಕಲ್ಲುಗಳು ವಕ್ಷಸ್ಥಳದಂತೆ ಮೃದುವಾಗಿ ಭಾಸವಾಗಿ, ಪದೇ ಪದೇ ದೇಹದ ಹೊಯ್ದಾಟದ ಪರಿಣಾಮವಾಗಿ ಅಲ್ಲಿ ವೀರ್ಯಸ್ಖಲನವಾಗಿ ಹೋಯಿತು. 
        ಅದಾದ ಒಡನೆಯೇ  ನನ್ನಲ್ಲಿ ಅಪರಾಧೀ ಮನೋಭಾವ ಮೂಡಿತು. ಸ್ನಾನ ಮಾಡುವ ಮುನ್ನ ನದಿಯನ್ನು ದೇವರೆಂದು ಭಾವಿಸಿ ಸ್ತೋತ್ರ ಹೇಳಿ ಸ್ನಾನ ಮಾಡುತ್ತೇವೆ. ಇಂತಹ ದೈವಸಮಾನವಾದ ನದಿಯನ್ನು ಮಲಿನಗೊಳಿಸಿ ತಪ್ಪು ಮಾಡಿದೆ ಎಂಬ ಪಶ್ಚಾತಾಪ ಭಾವನೆ ಮೂಡಿತು.
        ಈ ಘಟನೆಯನ್ನು ಗುರುಗಳ ಬಳಿ ನೋವಿನಿಂದ ಹೇಳಿಕೊಂಡೆ. ಆಗ ಅವರು `ಆಯಿತು.. ಮಿಥುನವೂ ಆಯಿತು..ನೋಡು ನೀನು ದೈವೀಭಾವದಿಂದ ಹುಡುಗಿಯನ್ನು ಸೇರಲು ನಿರಾಕರಿಸಿದೆ. ಈಗ ನೋಡು ನದಿಯ ಬಗ್ಗೆ ನಿನಗೆ ಸಹಜವಾಗಿಯೇ ದೈವೀಭಾವನೆ ಇದೆ. ಅಲ್ಲಿಯೇ ಮಿಥುನವೂ ಆಗಿದೆ. ಇಂದಿನಿಂದ ನಿನಗೆ ದೈವ ಭಾವದ ಕುಲಕುಂಡಲಿನೀ ಯೋಗದ ಶಿಕ್ಷಣ' ಎಂದು ಹೇಳಿಬಿಟ್ಟರು
        'ದಿವ್ಯಭಾವ' ಎಂದು ಕರೆಯಲ್ಪಡುವ ದೈವ ಸಾಕ್ಷಾತ್ಕಾರದ ಹಾದಿ (ಜಡಶಿವನನ್ನು ಶಕ್ತಿಯು ಸೇರುವ ಕುಲಕುಂಡಲಿನೀ ಯೋಗ)ಯನ್ನು ನನಗೆ ನಂತರ ಭೋಧಿಸಲಾಯಿತು. ನಿರ್ವಿಕಲ್ಪ ಸಮಾಧಿ ಎನ್ನುವ ಅಂತಿಮಸ್ಥಿತಿಯನ್ನು ತಲುಪಲು ಗುರುಗಳು ನನ್ನನ್ನು ಅನುವುಗೊಳಿಸಿದರು. 
        ಕೆಲವು ದಿನಗಳು ಕಳೆದವು. ನನ್ನ ಸಾಧನೆ ಮುಂದುವರೆಯುತ್ತಲೇ ಇತ್ತು. ಈ ಸಾಧನೆ ಮುಂದುವರೆಯುತ್ತಿದ್ದಂತೇ ಒಂದು ಹಂತದಲ್ಲಿ ನಾನು ನನ್ನ ತಾಂತ್ರಿಕ ಸಾಧನೆಯನ್ನೇ ನಿಲ್ಲಿಸಿಬಿಟ್ಟೆ.
        ನಿರ್ವಿಕಲ್ಪ ಸಮಾಧಿಯ ಸಾಧನೆ ಮುಂದುವರಿಸುತ್ತಿದ್ದಾಗ ಆ ಪ್ರಚಂಡ ಪ್ರಕೃತೀ ಶಕ್ತಿಯಲ್ಲಿ ಲೀನವಾದರೆ ನಾನು ನನ್ನನ್ನೇ ಮರೆತುಬಿಡುವೆನೇನೋ ಎನ್ನುವಂತಹ ಭಾವನೆ ಅಂದು ನನಗೆ ಬಲವಾಗುತ್ತಾ ಹೋಯಿತು. ನಾನು ಸತ್ತರೂ ಸಾಯಬಹುದು ಎಂದೂ ಅನ್ನಿಸಿತ್ತು. ಅದಲ್ಲದೇ ನನ್ನ ತಂದೆ ತಾಯಿಗೆ 'ಎರಡು ವರ್ಷಗಳ ಬಳಿಕ ಖಂಡಿತ ಬರುತ್ತೇನೆ ಹಾಗೂ ನಿಮ್ಮೊಂದಿಗಿರುತ್ತೇನೆ' ಎಂದು ಮಾತು ಕೊಟ್ಟಿದ್ದೆ. ಗುರುಗಳನ್ನು ಭೇಟಿಯಾಗಲು ಮಂಗಳೂರಿಗೆ ಹೋದಾಗ, ನನ್ನ ಗುರುಗಳು ಬೇರೊಂದು ಕಾರ್ಯನಿಮಿತ್ತ ಉತ್ತರ ಭಾರತಕ್ಕೆ ತೆರಳಿದ್ದಾರೆಂದು ತಿಳಿಯಿತು. 
        ಆಗ ನನಗೆ ನನ್ನ ಗುರುಗಳು ಹೇಳಿದ ಮಾತುಗಳು ನೆನಪಾದವು. 'ನಾನಿಲ್ಲದಿರುವಾಗ ಯಾವುದಾದರೂ ಸಂಧಿಗ್ಧ ಪರಿಸ್ಥಿತಿ ಉಂಟಾದರೆ ನಿಮ್ಮ ಸಮಾಜದ ಗುರುಗಳಲ್ಲಿ ಸಂದೇಹ ಪರಿಹರಿಸಿಕೊಳ್ಳಬಹುದು' 
        ನಮ್ಮ ಸಮಾಜದ ಗುರುಗಳಾದ ಕಾಶೀಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ತೀರ್ಮಾನಿಸಿದೆ. ನಮ್ಮ ದೇಗುಲದ ಸನಿಹವಿದ್ದ ಶ್ರೀ ಹರಿಭಟ್ಟರಿಗೆ ಮಾತ್ರ ನಾನು ಮಾಡುತ್ತಿದ್ದ ಸಾಧನೆಗಳ ಬಗ್ಗೆ ತಿಳಿದಿತ್ತು. ಆದ್ದರಿಂದ ಅವರೊಂದಿಗೆ ಚಾತುರ್ಮಾಸದಲ್ಲಿದ್ದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ಹೊರಟೆ. ಹೊರಡುವ ಮುನ್ನ ನನ್ನೆಲ್ಲಾ ವಿವರಗಳನ್ನು ಪತ್ರಮುಖೇನ ಸ್ವಾಮೀಜಿಯವರಿಗೆ ಬರೆದು ತಿಳಿಸಿದ್ದೆ.       

ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು

  ನನ್ನನ್ನು ಕಂಡೊಡನೆ ಪ್ರೀತಿಯಿಂದ ಬರ ಮಾಡಿಕೊಂಡ ಸ್ವಾಮೀಜಿಯವರು ನನ್ನೊಡನೆ ಸುಮಾರು ಮೂರು ಗಂಟೆಗಳ ಕಾಲ ಕಳೆದರು. ನನ್ನಿಂದ ಪ್ರತಿಯೊಂದು ವಿವರ ಪಡೆದುಕೊಂಡ ಸ್ವಾಮೀಜಿಯವರು ಪ್ರಶ್ನೆಯೊಂದನ್ನು ಕೇಳಿದರು. 
'ನಿಮಗೆ ಸಾಂಸಾರಿಕ ಜೀವನದ ಸುಖಗಳಲ್ಲಿ ಆಸಕ್ತಿಯಿದೆಯೇ ?'
'ಆಸಕ್ತಿಯೇನೋ ಬಹಳಷ್ಟಿದೆ. ಬೇಕೆಂದಾದಲ್ಲಿ ನಾನದನ್ನು ನಿಗ್ರಹಿಸಿಕೊಳ್ಳಬಲ್ಲೆ' ಎಂದು ನನಗನ್ನಿಸಿದ್ದನ್ನು ನಾನು ಹೇಳಿದೆ. 
'ನಿಗ್ರಹಿಸುವುದೇ ಬೇರೇ.. ಆಸಕ್ತಿಯೇ ಬೇರೆ, ನಮ್ಮ ಉದಾಹರಣೆಯನ್ನು ತೆಗೆದುಕೊಳ್ಳಿ. ನಮಗೆ ಆಸಕ್ತಿಯೇ ಇರಲಿಲ್ಲ. ಆಸಕ್ತಿಯಿದ್ದೂ ನಿಗ್ರಹಿಸಿಕೊಂಡರೆ ಕೆಲಕಾಲ ಅದು ಸಫಲವಾಗಬಹುದು. ಆದರೆ ಗುಪ್ತವಾಗಿರುವ ಆ ಆಸಕ್ತಿ ಒಮ್ಮೆ ಹೆಡೆಯೆತ್ತಿದರೆ ಅದು ಮನೋರೋಗಕ್ಕೆ ಎಡೆ ಮಾಡಿಕೊಡಬಹುದು. ಆದ್ದರಿಂದ ಸಾಂಸಾರಿಕ ಜೀವನವೇ ನಿಮಗೆ ಒಳಿತು. ಸಂಸಾರದಲ್ಲಿದ್ದೂ ಸಾಧನೆ ಮಾಡಬಾರದೆಂಬ ಯಾವ ನಿಯಮವೂ ಇಲ್ಲ. ಸಂಸಾರಿಗಳಿಗೆ ತಪ್ಪು ಮಾಡಿದರೆ ಕ್ಷಮೆಯಿದೆ. ಸಾಧಕರು, ಸನ್ಯಾಸಿಗಳು ಮಾಡುವ ತಪ್ಪಿಗೆ ಕ್ಷಮೆಯಿಲ್ಲ. ಈಗ ನಿಲ್ಲಿಸಿದರೂ ಮುಂದೆ ಸಾಧನೆಯನ್ನು ಮುಂದುವರೆಸಬಹುದು. ಹಾಗೆ  ನೋಡಿದರೆ ಸನ್ಯಾಸಿಗಳಿಗಿಂತ ಹೆಚ್ಚು ಸಂಸಾರಿಗಳಿಗೇ ದೇವರ ಸಾಕ್ಷಾತ್ಕಾರವಾಗಿರುವುದು' ಎಂದು ಹೇಳಿ ಮುಗುಳ್ನಗುತ್ತಾ 'ಮುಂದಿನ ತೀರ್ಮಾನ ನಿಮ್ಮದು' ಎಂದು ಹೇಳಿ ಫಲ-ತಾಂಬೂಲ ಕೊಟ್ಟು 'ನಿಮಗೆ ಒಳ್ಳೆಯದಾಗಲಿ' ಎಂದು ಹರಸಿ ಕಳಿಸಿದರು.  
       ಎರಡು ವರ್ಷಗಳ ಕಾಲ ಅಂದಿನ ನನ್ನ ಜೀವನಶೈಲಿ, ನನ್ನ ಗೆಳೆಯರು, ನನಗೆ ನೆರವಾದವರು ಈ ಬಗ್ಗೆ ಮುಂದೆ ಬರೆಯುತ್ತೇನೆ. ಬೆಂಗಳೂರಿಗೆ ಹೊರಡುವ ತಯಾರಿಯಲ್ಲಿದ್ದಾಗ ಗೆಳೆಯ ಮಾಣೂರು ಅಚ್ಚು ಹೇಳಿದ ಮಾತೇನು?
 .... ಮುಂದಿನ ಸಂಚಿಕೆಯಲ್ಲಿ.  

No comments:

Post a Comment