Saturday 2 November 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 20

        ಮಾನಸ ಲೋಕದಲ್ಲಿ ವಿಹರಿಸಲು ಹಾಗೂ ಮನಸ್ಸಿನ ಶಕ್ತಿಯನ್ನು
ತಿಳಿದುಕೊಳ್ಳಲು ಇರುವ ಒಂದು ಆದ್ಭುತವಾದ ವಿದ್ಯೆ, ತಂತ್ರ ವಿದ್ಯೆ. ಜನಸಾಮಾನ್ಯರಿಗೆ ತಂತ್ರದ ಬಗ್ಗೆ ಹಲವಾರು ತಪ್ಪು ಭಾವನೆಗಳಿವೆ. ಅದು ಕೇವಲ ತಪ್ಪು ಭಾವನೆಯೇ ಆಗಿದೆ. ಅಣುಶಕ್ತಿಯನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡಮಾತ್ರಕ್ಕೆ ಅಣುಶಕ್ತಿಯ ಮೇಲೆ ಆಪಾದನೆಯನ್ನು ಹೊರಿಸಲು ಬರುವುದಿಲ್ಲ. ಹಾಗಾಗಿ ಕೆಲವರು ಮನಸ್ಸಿನ ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡಮಾತ್ರಕ್ಕೆ ನೀವು ಮನಸ್ಸಿನ ಶಕ್ತಿಯನ್ನು ದೂರುವಂತಿಲ್ಲ. 
       'ತಂತ್ರ ವಿದ್ಯೆ ಎಲ್ಲರಿಗೂ ಅಲ್ಲ' ಎಂದು ಹಿಂದಿನ ಬರಹದಲ್ಲಿ ಹೇಳಿದ್ದೆ.
ಯಾಕೆ ಎಲ್ಲರಿಗೂ ಅಲ್ಲ ಅಂದರೆ ಮೊದಲನೆಯದಾಗಿ ಇದು ಕೆಲವು ಕಠಿಣ ಅನುಷ್ಠಾನ ಕ್ರಮಗಳನ್ನು ಒಳಗೊಂಡಿರುತ್ತದೆ. ಮನಸ್ಸನ್ನು ಹೊಸ ಸ್ತರಕ್ಕೆ ಇದು ನಿಮ್ಮನ್ನು
ಕೊಂಡೊಯ್ಯುತ್ತದೆ. ಇದನ್ನು ಜೀರ್ಣಿಸಿಕೊಳ್ಳುವುದು ಹಲವರಿಗೆ ಕಷ್ಟದ ವಿಷಯ. ಒಬ್ಬ ನುರಿತ ಗುರು ಬಳಿಯಲ್ಲಿದ್ದರೆ ಆತ ಹಂತ,ಹಂತವಾಗಿ ಹಾಗೂ ಸಹಜವಾಗಿ ಮುಂದುವರೆಯಲು ಸಹಾಯ ಮಾಡುತ್ತಾನೆ. 
        ಎರಡನೆಯದಾಗಿ ಮನಸ್ಸಿನ ಶಕ್ತಿ ತೆರೆದುಕೊಳ್ಳುತ್ತಿದ್ದಂತೇ, ಹಲವಾರು ಪ್ರಯೋಗಗಳನ್ನು ಮಾಡಿ ನೋಡಲು ಮನಸ್ಸು ಹಾತೊರೆಯುತ್ತದೆ. ಅದರಿಂದಾಗಿ ಮನಸ್ಸಿನಲ್ಲಿ 'ಅಹಂ' ಭಾವ ಮೂಡುವ ಅವಕಾಶ ಹೆಚ್ಚು. ಕೆಲವು ಪ್ರಯೋಗಗಳು ಮತ್ತೆ ಹಿಂತೆಗೆದುಕೊಳ್ಳಲಾಗದವಾಗಿರುತ್ತವೆ. ಆದ್ದರಿಂದ ಸಾಧಕನು ಬಹಳ ಎಚ್ಚರಿಕೆಯಿಂದ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಕೆಲವು ಸತ್ಯಗಳನ್ನು ತಿಳಿದುಕೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುತ್ತದೆ. ಪ್ರಕೃತಿಯ ಹಾಗೂ ಜೀವಿಗಳ ಗುಟ್ಟು ಗುಟ್ಟಾಗಿದ್ದರೇನೇ ಚಂದ. 
        ಮನಸ್ಸಿನ ಭಾವಲೋಕದಲ್ಲಿ ವಿಹರಿಸಲು ತಂತ್ರವಿದ್ಯೆ ಅತ್ಯಂತ
ಸಹಾಯಕಾರಿ. ಅಂತೆಯೇ  ಮನಸ್ಸಿನ ಶಕ್ತಿಯನ್ನು ಜನರ ಏಳಿಗೆಗಾಗಿ ಉಪಯೋಗಿಸಿಕೊಳ್ಳುವುದಾದರೆ ತಂತ್ರವಿದ್ಯೆ ನಿಸ್ಸಂದೇಹವಾಗಿಯೂ ಅತ್ಯಂತ ಉನ್ನತ ಸ್ಥಾನದಲ್ಲಿರುವ ವಿದ್ಯೆ. 
        ನಾನು ಮನೋವಿಜ್ಞಾನದ ವಿದ್ಯಾರ್ಥಿಯಾಗಿದ್ದುದರಿಂದ ಎಲ್ಲವನ್ನೂ ಮನೋವಿಜ್ಞಾನದ ದೃಷ್ಟಿಯಲ್ಲಿಯೇ ನೋಡಲು ಇಚ್ಚಿಸುತ್ತೇನೆ. ಹಾಗೆ ನೋಡಿದರೆ ತಾಂತ್ರಿಕ ವಿದ್ಯೆ ಅತ್ಯಂತ ಸುಂದರವಾಗಿ, ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಹೇಳಲ್ಪಟ್ಟ ಮನೋವಿಜ್ಞಾನವೇ. ಜೊತೆಗೆ ಶಿಸ್ತುಬದ್ಧ ಜೀವನವನ್ನೂ ಅದು ಕಲಿಸಿಕೊಡುತ್ತದೆ. 
        ತಂತ್ರದ ಬಗ್ಗೆ ನನ್ನ ವಿಶ್ಲೇಷಣೆಯನ್ನು ಚುಟುಕಾಗಿ ಹೇಳುತ್ತೇನೆ. 
ಜೀವನದಲ್ಲಿ ಯಾವುದೇ ಕೆಲಸದಲ್ಲಿ ನೀವು ಏಳಿಗೆಯನ್ನು ಪಡೆಯಬೇಕಾದರೆ, ನಿಮ್ಮಲ್ಲಿ ನಿಮಗಿರುವ ನಂಬಿಕೆ ಅತಿಮುಖ್ಯವಾಗಿರುತ್ತದೆ. ಅದು ನಿಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ಸಾಧಿಸುವ ಛಲವನ್ನು ಕೊಡುತ್ತದೆ. ಅಧ್ಯಾತ್ಮದ ವಿಚಾರ ಬಂದಾಗಲೂ ನಂಬಿಕೆಗೆ ಪ್ರಥಮ ಆದ್ಯತೆ.
        ತಂತ್ರಶಾಸ್ತ್ರವನ್ನು ಬೋಧಿಸುವಾಗ 'ಇದು ಶಿವನು ಪಾರ್ವತಿಗೆ ಹೇಳಿದ ವಿದ್ಯೆ. ದೇವಾನುದೇವತೆಗಳಿಗೆ ಇದು ದುರ್ಲಭ' ಎಂದೆಲ್ಲಾ ಹೇಳುವುದರ ಉದ್ದೇಶ, ನಿಮಗೆ ಆ ವಿದ್ಯೆಯಲ್ಲಿ ನಂಬಿಕೆ ತರಿಸುವುದೇ ಆಗಿದೆ. ಬೆಳಗಿನ ಜಾವದಲ್ಲಿ, ಕೆಲವೊಮ್ಮೆ ಸರಿರಾತ್ರಿಯಲ್ಲಿ ಇದರ ಅನುಷ್ಠಾನವನ್ನು ಮಾಡಬೇಕಾಗುತ್ತದೆ. ಎರಡೂ ಪ್ರಶಾಂತವಾಗಿರುವ ವೇಳೆಗಳಾಗಿವೆ. ಪ್ರತಿದಿನ ನಿಗದಿತ ಸಮಯದಲ್ಲಿ ಅನುಷ್ಠಾನ ಮಾಡುವುದರಿಂದ ನಿಮ್ಮ ಮನಸ್ಸು ನಿಮಗೇ ಅರಿವಿಲ್ಲದಂತೆ ಆ ವೇಳೆಯಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿರುವುದು
'ಭಾವ' ಹಾಗೂ ಆಯಾ ದೇವರ ಭಾವದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು. 
ಆ ಭಾವದಲ್ಲಿ ಮುಳುಗುತ್ತಿದ್ದಂತೇ, ನಿಮ್ಮ ಮನಸ್ಸು ಮಾನಸಲೋಕದಲ್ಲಿ ವಿಹರಿಸಲು ತೊಡಗಿಕೊಳ್ಳುತ್ತದೆ. ನಿಮ್ಮ ಭಾವ ಹಾಗೂ ನಿಮ್ಮ ನಂಬಿಕೆ, ಅರೆಪ್ರಜ್ಞಾಮನಸ್ಸಿಗೂ ಸರ್ವಶಕ್ತ ಪ್ರಜ್ಞಾಮನಸ್ಸಿಗೂ ಒಂದು ಏಣಿಯನ್ನು ಕಟ್ಟಿಕೊಡುತ್ತದೆ. 
        ನಾನು ಮನೋವಿಜ್ಞಾನವನ್ನು ಸಾಕಷ್ಟು ತಿಳಿದುಕೊಂಡಿದ್ದುದರಿಂದ ಆರಂಭಿಕ ದಿನಗಳಲ್ಲಿ ನನ್ನಲ್ಲಿ ಹಲವಾರು ದ್ವಂದ್ವಗಳಿದ್ದವು. ತಾರ್ಕಿಕವಾಗಿ ತಿಳಿಯಲು ಪ್ರಯತ್ನ ಪಡುತ್ತಿದ್ದೆ. ಕೊನೆಗೊಮ್ಮೆ ಈಜು ಕಲಿಯಲು ಧುಮುಕುವುದು ಮುಖ್ಯ ಎಂದು ಮನಗಂಡಂತೇ ನನ್ನ ತರ್ಕ, ದ್ವಂದ್ವಗಳನ್ನೆಲ್ಲಾ ಮೂಟೆಕಟ್ಟಿ ಈ ವಿದ್ಯೆಯ ಸಾಗರಕ್ಕೆ ಧುಮುಕಿ ಬಿಟ್ಟೆ.
       ಏನನ್ನಾದರೂ ನಂಬುವ ಮುನ್ನ ಪ್ರಶ್ನೆ ಮಾಡಿ, ಪರೀಕ್ಷಿಸಿ.. ಏನು ಬೇಕಾದರೂ ಮಾಡಿ. ಎಲ್ಲವನ್ನು ಮನನಗೊಂಡು, ಮಥನಗೊಂಡು ನಂಬಿದಮೇಲೆ ಅದನ್ನು ಸಾಧಿಸುವವರೆಗೂ ಬಿಡಬೇಡಿ. 
ನಂಬಿ ಕೆಟ್ಟವರಿಲ್ಲ... 

No comments:

Post a Comment