Thursday 7 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 2


       ಪ್ರಜ್ಞಾಮನಸ್ಸು, ಅರೆಪ್ರಜ್ಞಾಮನಸ್ಸು ಹಾಗೂ ಸಿಗ್ಮಂಡ್ ಫ್ರಾಯ್ಡ್

         ಸಿಗ್ಮಂಡ್ ಫ್ರಾಯ್ಡ್, ಮನಸ್ಸಿನ ವಿಭಜನೆಯನ್ನು ಜನಸಾಮಾನ್ಯರಿಗೆ ತಲುಪಿಸಿದ ಮನೋವಿಜ್ಞಾನಿ. ಮನಸ್ಸಿನ ಸ್ಥಿತಿಯನ್ನು ಆತ ಪ್ರಜ್ಞಾಮನಸ್ಸು, ಅರೆಪ್ರಜ್ಞಾಮನಸ್ಸು ಹಾಗೂ ಪ್ರಜ್ಞಾಹೀನಮನಸ್ಸುಗಳೆಂದು ವಿಂಗಡಿಸಿದ್ದಾನೆ. 

ಏನಿದು ಮನಸ್ಸಿನ ವಿಂಗಡಣೆ? ಆದಷ್ಟು ಸರಳವಾಗಿ ಹೇಳಲು ಪ್ರಯತ್ನಿಸುತ್ತೇನೆ.

1. ಪ್ರಜ್ಞಾಮನಸ್ಸು 

         ಇದು ಸಾಧಾರಣವಾಗಿ ನಾವು ಎಚ್ಚರದಿಂದಿರುವಾಗ ಜಾಗೃತವಾಗಿರುವ ಮನಸ್ಸು. ಇದು `ನಾನು' ಎಂಬ ಅರಿವನ್ನು ಮೂಡಿಸುತ್ತದೆ. `ನನ್ನ' ಸುತ್ತಲೂ  ನಡೆಯುವುದನ್ನು ಗಮನಿಸುತ್ತದೆ. ಮನಸ್ಸಿನಲ್ಲಿ ಆಲೋಚನಾ ತರಂಗಗಳನ್ನು 
ಹಬ್ಬಿಸುತ್ತದೆ. ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು ಈ ರೀತಿಯ ನಿರ್ದಿಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಪ್ರಜ್ಞಾಮನಸ್ಸು ನಮ್ಮಲ್ಲಿ ಅಂತರ್ಗತವಾಗಿರುವ ತಾತ್ವಿಕ ಹಾಗೂ ತಾರ್ಕಿಕ ಅರಿವುಗಳ ಹೊಣೆಗಾರನಾಗಿ ಕೆಲಸ ಮಾಡುತ್ತಿರುತ್ತದೆ. 
ಸರಳ ಉದಾಹರಣೆಗಳು  
'ನೀರು ಕೆಳಗೇ ಹರಿಯಬೇಕು'
'ಬೆಣ್ಣೆ ಕಾಯಿಸುವುದರಿಂದ ಅದು ತುಪ್ಪವಾಗುತ್ತದೆ'
ಹೀಗೆ ಅದು ತಾರ್ಕಿಕವಾಗಿ ವಿಶ್ಲೇಷಣೆ ಮಾಡುತ್ತದೆ. ತಾತ್ವಿಕವಾಗಿ ತಾನು ಜೀವನದಲ್ಲಿ ಕಲಿತ ಪಾಠಗಳನ್ನು ಹಾಗೂ ನಂಬಿಕೆಗಳನ್ನು ಕೂಡಾ ಅದು ಈ ವಿಶ್ಲೇಷಣೆಗೆ ಒಳಪಡಿಸುತ್ತದೆ. ಕಾಲಕ್ರಮೇಣ ಅದು ಅರೆಪ್ರಜ್ಞಾಮನಸ್ಸಿನಲ್ಲಿ ನೆಲೆಗೊಳ್ಳುತ್ತದೆ. ಪ್ರಜ್ಞಾಮನಸ್ಸು ಬಾಹ್ಯವಸ್ತುಗಳನ್ನು ಒಪ್ಪಬೇಕಾದರೆ, ಅದು ಪಂಚೇಂದ್ರಿಯಗಳ ಸಹಾಯವನ್ನು ಪಡೆದುಕೊಳ್ಳುತ್ತದೆ. ಅದು ಪಂಚೇಂದ್ರಿಯಗಳು ಅನುಮೋದನೆ ನೀಡಿದ ವಿವರಗಳನ್ನು ಮಾತ್ರ ಒಪ್ಪಿ ಅರೆಪ್ರಜ್ಞಾಮನಸ್ಸಿಗೆ ರವಾನಿಸುತ್ತದೆ. ಅದಲ್ಲದೇ ಪುನರಾವರ್ತನೆಯಾದ ವಿಷಯಗಳು ಹಾಗೂ 
ವಿವರಗಳು ಕೂಡಾ ಅರೆಪ್ರಜ್ಞಾಮನಸ್ಸಿನಲ್ಲಿ ನೆಲೆಗೊಳ್ಳುತ್ತವೆ. ತನ್ನ ನಂಬಿಕೆಗೆ ವಿರುದ್ಧವಾದ ವಿಷಯ ಅಥವಾ ಯೋಚನೆ ಅಥವಾ ಮಾಹಿತಿ ಬಂದಾಗ ಅದು
ಅರೆಪ್ರಜ್ಞಾಮನಸ್ಸಿನ ಕಾವಲುಗಾರನ ಕಾರ್ಯ ನಿರ್ವಹಿಸಿ ಅಂತಹ
ಯೋಚನೆಗಳನ್ನು ತಿರಸ್ಕರಿಸಿ ಅವು ಅರೆಪ್ರಜ್ಞಾಮನಸ್ಸಿಗೆ ತಲುಪುವುದನ್ನು ತಡೆಯುತ್ತದೆ. ನಾವು ಅಂತರ್ಗತವಾಗಿ ಬಯಸಿದ ಕೆಲಸಗಳನ್ನು ಮಾತ್ರ ಇದು ನಿರ್ವಹಿಸುತ್ತದೆ.
         ಪ್ರಜ್ಞಾಮನಸ್ಸು ತನ್ನನ್ನು ತಾನೇ ಗುರುತಿಸಿಕೊಂಡರೂ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಎಲ್ಲಾ ಮಾನಸಿಕ ತೀರ್ಮಾನಗಳು ಅಲ್ಲಿಯೇ  ಆಗುವುದಿಲ್ಲ! 
        ಪ್ರಜ್ಞಾಮನಸ್ಸು ನಿಮ್ಮ ಹೊರಗಿನ ಹಾಗೂ ಒಳಗಿನ ಪ್ರಪಂಚಕ್ಕೆ ತನ್ನನ್ನು ತಾನೇ ಕೊಂಡಿಯಾಗಿ ಹಂಚಿಕೊಂಡಿರುತ್ತದೆ ಹಾಗೂ ಸಂಪರ್ಕಸಾಧನವಾಗಿ ಕೆಲಸ ಮಾಡುತ್ತದೆ. ಪ್ರಜ್ಞಾಮನಸ್ಸು ಮಾಡಬಹುದಾದ ಎರಡು ಶಕ್ತಿಶಾಲಿ ಕೆಲಸಗಳಲ್ಲಿ ಮೊದಲನೆಯದು, ಯಾವುದೇ ವಿಷಯದ ಮೇಲೆ ಕೇಂದ್ರೀಕರಿಸುವ ಅದರ ಗುಣ. ಎರಡನೆಯದು ನಿಮ್ಮ ಯೋಚನೆಗಳನ್ನು ಅಥವಾ ಭಾವನೆಗಳನ್ನು ಕಣ್ಣೇದುರಿಗಿಲ್ಲದಿದ್ದರೂ ಕಲ್ಪಿಸಿ ಕಣ್ಣಿಗೆ ಕಾಣುವಂತೆ ಜೋಡಿಸುವ ಅದರ ಶಕ್ತಿ. 
ನಿಮ್ಮ ಜೀವನದ ಬದಲಾವಣೆಗೆ ಈ ಶಕ್ತಿಯೇ ಓಂಕಾರ. ಆದರೆ ನಮಗೆ ಬೇಕಾದ ಹಾಗೆ ನಮ್ಮ ನಂಬಿಕೆಯನ್ನು ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ಬದಲಾಯಿಸಬೇಕಾದರೆ, ಪ್ರಜ್ಞಾಮನಸ್ಸನ್ನು ತಾರ್ಕಿಕವಾಗಿ ಒಪ್ಪಿಸಿ, ಆ ನಂಬಿಕೆ ಸರಿ ಎಂದು ನಂಬಿಸುವಂತಾದಲ್ಲಿ ಅದು ಅರೆಪ್ರಜ್ಞಾಮನಸ್ಸಿಗೆ ತಲುಪುತ್ತದೆ.

2. ಅರೆಪ್ರಜ್ಞಾಮನಸ್ಸು

         ನಿಮ್ಮ ಪ್ರಜ್ಞಾಮನಸ್ಸಿನಲ್ಲಿ ಮೂಡಿದ, ಕಂಡು ಕೇಳಿದ, ಅನುಮೋದಿಸಿದ, ಅನುಭವಿಸಿದ ಎಲ್ಲಾ ವಿಚಾರಗಳು ಅರೆಪ್ರಜ್ಞಾಮನಸ್ಸಿನಲ್ಲಿ ಸಂಗ್ರಹವಾಗುತ್ತವೆ. ನೀವು ಬೇಕೆಂದಾಗ ನೆನಪಿಸಿಕೊಳ್ಳಬಹುದಾದ ವಿಷಯಗಳೆಲ್ಲಾ ಇಲ್ಲಿ ಜಮೆಯಾಗಿರುತ್ತವೆ. ಪ್ರಾಮುಖ್ಯತೆ ಇಲ್ಲದೇ ನಿಮಗೆ ಸಾಧಾರಣವಾಗಿ ನೆನಪಿಗೆ ಬಾರದ ವಿಷಯಗಳೆಲ್ಲಾ ಸುಪ್ತಮನಸ್ಸಿನ ಮೂಲೆಯಲ್ಲಿ ಶೇಖರವಾಗಿರುತ್ತವೆ. ಹಿಂದೆ ನಡೆದ ಮರೆತುಹೋದ ಘಟನೆ ಅಥವಾ ಮಾತುಗಳು ಅಥವಾ ವಿಚಾರಗಳನ್ನು  ಅರೆಪ್ರಜ್ಞಾಮನಸ್ಸಿನಿಂದ ಹೊರತರಲು ಸಾಧ್ಯ. ಅವುಗಳನ್ನು ನೆನಪಿಗೆ ಅಥವಾ 
ಸ್ಮೃತಿಪಟಲದಲ್ಲಿ ತರುವವು. 
         ಪ್ರಜ್ಞಾಮನಸ್ಸಿನಿಂದ ಬಂದ ವಿಷಯಗಳು ಪುನರಾವರ್ತನೆಯಾದಂತೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ ಘನೀಕೃತವಾಗುತ್ತ ಹೋಗುತ್ತದೆ. ಒಮ್ಮೆ ಅರೆಪ್ರಜ್ಞಾಮನಸ್ಸಿನಲ್ಲಿ ಅದು ಘನೀಕೃತವಾದರೆ ನಂತರ ಪ್ರಜ್ಞಾಮನಸ್ಸಿನ ಅರಿವು ಬೇರೆಡೆ ಇದ್ದರೂ ಅರೆಪ್ರಜ್ಞಾಮನಸ್ಸು ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡುತ್ತಿರುತ್ತದೆ. ಉದಾಹರಣೆಗೆ ಬೆರಳಚ್ಚು ಕಲಿಯುವ ವ್ಯಕ್ತಿ, ಮೊದಮೊದಲು ಪ್ರಜ್ಞಾಪೂರ್ವಕವಾಗಿ ಒಂದೊಂದು ಅಕ್ಷರ ಅಂಕಿಗಳನ್ನು ನೋಡಿ ಬೆರಳನ್ನು ಒತ್ತುತ್ತಿರುತ್ತಾನೆ. ಅಭ್ಯಾಸವಾದಂತೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ
ಘನೀಕೃತವಾಗುತ್ತದೆ. ನಂತರ ಎಲ್ಲೇ ನೋಡುತ್ತಿದ್ದರೂ, ಆತ ಸರಾಗವಾಗಿ
ಬೆರಳುಗಳನ್ನು ಕರಾರುವಾಕ್ಕಾದ ಸ್ಥಳಗಳಲ್ಲಿ ಒತ್ತುತ್ತಿರುತ್ತಾನೆ. 
         ಅರೆಪ್ರಜ್ಞಾಮನಸ್ಸು ನೀವು ಪದೇ ಪದೇ ಏನನ್ನು ಅಂದುಕೊಳ್ಳುವಿರೋ ಅದನ್ನು ಮಾಡಿ ತೋರಿಸುತ್ತದೆ. ನೀವು ಅದಕ್ಕೆ ಪದೇ ಪದೇ ಆದೇಶ ನೀಡಿದರೆ,
ಅದು ತಕ್ಕದಾದ ದಾರಿಯನ್ನು ಹುಡುಕುತ್ತದೆ ಹಾಗೂ ನಿಮ್ಮ ಅಪೇಕ್ಷೆಯನ್ನು ನಡೆಸಿಕೊಡುತ್ತದೆ. ಅರೆಪ್ರಜ್ಞಾಮನಸ್ಸಿಗೆ ನಿಜ ಯಾವುದು? ಸುಳ್ಳು ಯಾವುದು?
ಗೊತ್ತಾಗುವುದಿಲ್ಲ. ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನು ನಿಜವೆಂದು ಭಾವಿಸುತ್ತದೋ ಅದನ್ನು ಅದು ನಿಜವೆಂದು ನಂಬುತ್ತದೆ.

No comments:

Post a Comment