Wednesday 27 November 2019

ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.- ಜೀವನದ ಕಟುಸತ್ಯಗಳು - 3

 ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.
        ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಕೆಲವು ಅನುಭವಗಳನ್ನು ಯಾರ ಬಳಿಯೂ ಹೇಳದೇ ಗುಟ್ಟಾಗಿಯೇ ಇಟ್ಟಿರುತ್ತಾರೆ. ಕಡೆ ಪಕ್ಷ ಒಂದಾದರೂ ಗುಟ್ಟನ್ನು ತನ್ನಲ್ಲಿಯೇ ಬಚ್ಚಿಟ್ಟುಕೊಂಡಿರುತ್ತಾರೆ. ಆ ಗುಟ್ಟು ಅವರ ಸಾವಿನೊಂದಿಗೆ ಸತ್ತು ಹೋಗುತ್ತದೆ ! 

ಯಾಕೆ ಈ ಗುಟ್ಟು ? 
        ಆ ಗುಟ್ಟಿನ ಹಿಂದೆ ಒಂದು ಅವಮಾನ, ಅನೈತಿಕತೆ, ಕೀಳರಿಮೆ, ತಾವು ಮಾಡಿದ ಮೋಸ ಅಥವಾ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡ ಯಾವುದಾದರೂ ಒಂದು ತಪ್ಪಿತಸ್ಥ ಭಾವನೆ ಇರಬಹುದು. ಈ ರೀತಿ ಯಾರಿಗೂ ಹೇಳದೇ ಗುಟ್ಟಾಗಿ ಇಟ್ಟುಕೊಳ್ಳುವುದು ಸರಿಯೇ? ನನ್ನ ಪ್ರಕಾರ ಸರಿ. ಏಕೆಂದರೆ ಇಂತಹ ಗುಟ್ಟನ್ನು ರಟ್ಟು ಮಾಡಿಕೊಳ್ಳುವುದರಿಂದ, ಲಾಭಕ್ಕಿಂತ ನಷ್ಟವೇ ಜಾಸ್ತಿ. 
        ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು? ಯಾವುದು ಪಾಪ, ಯಾವುದು ಪುಣ್ಯ?  ಈ ತುಲನಾತ್ಮಕ ವಿಷಯಕ್ಕೆ ಸರಿಯಾದ ತಕ್ಕಡಿ ಇಲ್ಲ. ಅದು ಸಮಾಜ, ನಾಗರಿಕತೆಗಾಗಿ ಸೃಷ್ಟಿಸಿಕೊಂಡ ನಿಯಮಗಳಾಗಿರುತ್ತವೆ. ಅವು ದೇಶ, ಕಾಲ, ನಿಮಿತ್ತಗಳಿಗೆ ಅನುಗುಣವಾಗಿರುತ್ತವೆ. ಒಂದು ದೇಶದಲ್ಲಿ 'ಸರಿ' ಎನ್ನಿಸಿಕೊಳ್ಳುವುದು, ಇನ್ನೊಂದು ದೇಶದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಒಂದು ಕಾಲದಲ್ಲಿ 'ಸರಿ' ಎನ್ನಿಸಿಕೊಂಡಿರುವುದು ಮತ್ತೊಂದು ಕಾಲದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಅಂತೆಯೇ ಈ ಕಾರಣಕ್ಕೆ 'ತಪ್ಪು' ಎಂದುಕೊಂಡಿರುವುದು ಆ ಕಾರಣಕ್ಕೆ 'ಸರಿ' ಎಂದೂ ಆಗಬಹುದು. ಆದರೆ ವಿಜ್ಞಾನಕ್ಕೆ ಇದಾವುದೂ ಗೊತ್ತಿಲ್ಲ. ಅದು ತನ್ನ ನಿಯಮಗಳನ್ನು ಮಾತ್ರ ಹೇಳುತ್ತದೆ. ವಿಷಯ ಹೀಗಿರುವಾಗ ಇದು 'ಸರಿ' ಅದು 'ತಪ್ಪು' ಎಂದು ಹೇಳಲು ಸಾಧ್ಯವಿಲ್ಲ. 

ಆದರೆ... 
ನಾವು ಈ ಕಾಲದಲ್ಲಿ, ಈ ಸಮಾಜದಲ್ಲಿ ಬದುಕುತ್ತಿರುವುದರಿಂದ, ಈ ಸಮಾಜದ ನಿಯಮಗಳಿಗೆ ನಾವು ತಲೆ ಬಾಗಬೇಕಾಗುತ್ತದೆ. ಅದು ಸಮಾಜ ಬಯಸುವ ನೈತಿಕತೆಯ ವಿಷಯವಾಗಲೀ, ಸಮಾಜ ಸೃಷ್ಟಿಸಿದ ಕಾನೂನಿನ ಚೌಕಟ್ಟಿನ ವಿಷಯವಾಗಲೀ ಇದಕ್ಕೆ ನಾವು ವಿರುದ್ಧವಾಗಿ ಹೋದಾಗ ಅದಕ್ಕೆ ತಕ್ಕ ಬೆಲೆ ತೆರಬೇಕಾಗಬಹುದು. ಆದ್ದರಿಂದ, ಆದಷ್ಟು ಈ ಚೌಕಟ್ಟಿನೊಳಗೆ ಜೀವನ ಸಾಗಿಸುವುದು ಅತ್ಯಂತ ಸುರಕ್ಷಿತ ಹಾದಿ. ಆದರೆ 'ಕದ್ದು ತಿನ್ನುವುದರಲ್ಲಿ ಸಿಹಿ ಜಾಸ್ತಿ' ಎಂಬ ಗಾದೆಯಂತೇ ಅದರಲ್ಲಿ ಸಿಗುವ ರೋಮಾಂಚನ ಹಾಗೂ ಪುಳಕ, ಅಂತಹ ಸಾಮಾಜಿಕ/ಅನೈತಿಕ ಅಪರಾಧಗಳನ್ನು ಮಾಡುವಂತೆ ಮನಸ್ಸು ಕುಮ್ಮಕ್ಕು ಕೊಡುತ್ತದೆ. ಬಾಲ್ಯದಲ್ಲಿ ಹಣವನ್ನು ಕದ್ದು ತಿಂಡಿ ತಿನ್ನುವುದು, ಸುಳ್ಳು ಹೇಳುವುದು,  ಯೌವನದಲ್ಲಿ ಆಕರ್ಷಣೆಗೆ ಒಳಗಾಗಿ ಗಂಡು ಹೆಣ್ಣು ಪರಸ್ಪರ ಸೆಳೆತಕ್ಕೆ ಒಳಗಾಗಿ ಸಮಾಜ 'ನೀತಿಬಾಹಿರ' ಎಂದು ಕರೆಯುವ ಕೆಲಸಗಳನ್ನು ಮಾಡಲು ಹಾತೊರೆಯುವುದು, ಜೀವನ ರೂಪಿಸಿಕೊಳ್ಳಬೇಕಾದ ಸಮಯದಲ್ಲಿ ಹಣ ಸಂಪಾದಿಸಲು ಮೋಸ, ಅನ್ಯಾಯ, ವಂಚನೆಗಳನ್ನು ಮಾಡಲು ಮನ ಈಡಾಗುವುದು.... ಹೀಗೆ ಆಯಾ ವಯಸ್ಸಿಗನುಗುಣವಾಗಿ 'ತಪ್ಪು' ಅಥವಾ 'ಪಾಪ' ಎಂದು ಸಮಾಜ ಕರೆದಿರುವ ಕಾರ್ಯಗಳನ್ನು ಮಾಡಲು ಮುಂದಾಗುತ್ತಾರೆ. 
        ಇವುಗಳಲ್ಲಿ ಯಾವುದಾದರೂ ವಿಷಯಕ್ಕೆ ನಾವೇ ಬಲಿಯಾದಾಗ ಹಾಗೂ ಅದರಲ್ಲಿ ನಾವು ಏನನ್ನಾದರೂ ಕಳೆದುಕೊಂಡಾಗ ಒಂದಷ್ಟು ಪಶ್ಚಾತ್ತಾಪ ಪಡುವ ಸಾಧ್ಯತೆ ಇದೆ. ಅದಲ್ಲದೇ ಈ ವಿಷಯ ಬೇರೆಯವರಿಗೆ ತಿಳಿದರೆ ನನ್ನ ಬಗ್ಗೆ ಕೀಳಾಗಿ ಅಥವಾ ಲಘುವಾಗಿ ನೋಡಬಹುದು, ನನ್ನನ್ನು ಗೇಲಿ ಮಾಡಬಹುದು, ನನಗೆ ಈಗಿರುವ ಮರ್ಯಾದೆಗೆ ಭಂಗ ಬರಬಹುದು ಮುಂತಾದ ಭಾವನೆಗಳಿಂದ ಅದನ್ನು ಸಾಯುವವರೆಗೂ ಗುಟ್ಟಾಗಿಯೇ ಇಟ್ಟಿರಲು ಬಯಸುತ್ತಾರೆ.
        ಕೆಲವು ಇಕ್ಕಟ್ಟಿನ ಸಮಯದಲ್ಲಿ ತನ್ನಲ್ಲಿ ಗುಪ್ತವಾಗಿ ಇಟ್ಟುಕೊಂಡಿರುವ ಈ ಗುಟ್ಟನ್ನು ಹೇಳಿಬಿಡಲೇ? ಹೇಳದಿದ್ದರೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿದಂತಾಗುವುದಲ್ಲವೇ? ಇಂತಹ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಬಳಿ ಬಂದವರಿಗೆ ನಾನು ಹೇಳುವ ಮಾತುಗಳೇನು ? 
......ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

No comments:

Post a Comment