Saturday 9 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 4

'ನಾನು' ನಾನಾಗಿ ರೂಪಗೊಂಡಿರುವುದು ಹೇಗೆ ?
ಮಗು ಕಣ್ಣು ಬಿಟ್ಟ ಕ್ಷಣದಿಂದ ಪ್ರಜ್ಞಾಮನಸ್ಸು ತಾನು ಹೊಸದಾಗಿ ಅನುಭವಿಸುತ್ತಿರುವುದನ್ನು ಅರೆಪ್ರಜ್ಞಾಮನಸ್ಸಿಗೆ ರವಾನೆ ಮಾಡುತ್ತಿರುತ್ತದೆ. ಆದರೆ ಪ್ರಜ್ಞಾಮನಸ್ಸಿಗೆ ಸುತ್ತಮುತ್ತ ನಡೆಯುತ್ತಿರುವುದು ಏನೆಂಬುದರ ಅರಿವಿರುವುದಿಲ್ಲ. ಅದು ಹೊಸದಾಗಿ ಎಲ್ಲವನ್ನೂ ಗಮನಿಸುತಿರುತ್ತದೆ. ಸರಿತಪ್ಪುಗಳ ಗ್ರಹಿಕೆ ಅದಕ್ಕಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ದೈನಂದಿನ ವ್ಯವಹಾರಗಳನ್ನು ಅರೆಪ್ರಜ್ಞಾಮನಸ್ಸು ದಾಖಲಿಸುತ್ತಾ ಹೋಗುತ್ತದೆ. 
        'ತಾನು ಅತ್ತರೆ ಗಮನ ಸೆಳೆಯಬಹುದು' 'ಅಮ್ಮನ ಎದೆಹಾಲು ಅಥವಾ ಹಾಲಿನ ಬಾಟಲಿ ತನ್ನ ಆಹಾರ' ಎಂದು ಅರೆಪ್ರಜ್ಞಾಮನಸ್ಸಿನಲ್ಲಿ ಗುರುತಿಸಲು ಪ್ರಾರಂಭಿಸುತ್ತದೆ. ತೊಟ್ಟಿಲಲ್ಲಿ ತೂಗಿ ಲಾಲಿ ಹಾಡು ಕೇಳುತ್ತಿದ್ದಂತೆ ನಿಧಾನವಾಗಿ ನಿದ್ದೆಗೆ ಜಾರುವುದು, ಪದೇ ಪದೇ ಕಣ್ಣಿಗೆ ಕಾಣುವ ಮುಖಗಳು ಹಾಗೂ ಅವರ ಪ್ರೀತಿಯ ಆರೈಕೆಯಿಂದ ಇವರು ನನ್ನವರು ಎಂದು ಗುರುತಿಸುವುದು, 
ಹೀಗೆ ಹತ್ತು ಹಲವು ವಿವರಗಳು ಅರೆಪ್ರಜ್ಞಾಮನಸ್ಸಿನಲ್ಲಿ ದಾಖಲಾಗುತ್ತ ಹೋಗುತ್ತವೆ. ಇಲ್ಲಿಂದ ಮುಂದೆ ಭಾವನೆಗಳು, ಹವ್ಯಾಸಗಳು, ನಂಬಿಕೆಗಳು ನಿರ್ಧಾರಗಳು ಬಲವಾಗುತ್ತಾ ಹೋಗುತ್ತವೆ. 
        ಮುಂದೆ ದಿನಕಳೆದಂತೆ ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ನಿಮ್ಮ ಅರೆಪ್ರಜ್ಞಾಮನಸ್ಸು ಬಹಳಷ್ಟು ಅನುವು ಮಾಡಿಕೊಡುತ್ತದೆ. ಅದು ಪ್ರಜ್ಞಾಮನಸ್ಸಿನ ಜೊತೆ ಸೇರಿ ಕೆಲಸ ಮಾಡುತ್ತದೆ. ಉದಾಹರಣೆಗೆ : ನೆನಪಿಸುವುದು. ಯಾವುದೋ ಒಂದು ಸಮಯದಲ್ಲಿ ಥಟ್ಟನೆ ಮರೆತುಹೋದ ಒಂದು ಕೆಲಸ ನೆನಪಾಗುವುದು. ಮರುದಿನ ಬೇಗ ಎದ್ದು ಕೆಲಸಕ್ಕೆ ಹೋಗುವ ಪ್ರಮೇಯವಿದ್ದಾಗ 
ಬೆಳಿಗ್ಗೆ ಥಟ್ಟನೆ ಎಚ್ಚರವಾಗುವುದು ಇತ್ಯಾದಿ. 
        ನಿಮ್ಮ ಜೀವನಾನುಭವದಿಂದ ಪ್ರಜ್ಞಾಮನಸ್ಸಿನ ಮೇಲೆ ಮುದ್ರೆಯೊತ್ತಿರುವ ನಂಬಿಕೆ ಹಾಗೂ ಮೌಲ್ಯಗಳನ್ನೂ ಎತ್ತಿ ಹಿಡಿಯುವ ಕೆಲಸವನ್ನು ಅದು ಮಾಡುತ್ತದೆ. ನಿಮ್ಮ ಪಂಚೇಂದ್ರಿಯಗಳು ಆ ಕ್ಷಣ ಏನನ್ನು ಅನುಭವಿಸುತ್ತಿವೆ ಎಂಬ ಅರಿವು ಅರೆಪ್ರಜ್ಞಾಮನಸ್ಸಿಗೆ ಇರುತ್ತದೆ. 
        ಅರೆಪ್ರಜ್ಞಾಮನಸ್ಸಿನ ಕೆಲಸ ನಿರಂತರ. ಆಯಾ ಕ್ಷಣಕ್ಕೆ ನಿಮಗೆ ಬೇಕಾಗುವ ಮಾಹಿತಿಯನ್ನು ನೀಡುತ್ತಾ ಅನವಶ್ಯಕ ಮಾಹಿತಿಯನ್ನು ಹಿಂದೆ ಸರಿಸುತ್ತದೆ. ಉದಾಹರಣೆಗೆ ಪರೀಕ್ಷೆಗೆ ಕುಳಿತಾಗ ಪ್ರಶ್ನೆಯನ್ನು ನೋಡುತ್ತಿದ್ದಂತೆ ಓದಿದ ಇತರ ಎಲ್ಲಾ ವಿಷಯಗಳನ್ನು ಹಿಂದಿಕ್ಕಿ, ಆ ಪ್ರಶ್ನೆಯ ಉತ್ತರಕ್ಕೆ ಮಹತ್ವವನ್ನು ನೀಡುತ್ತದೆ.
        ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಸಂಬಂಧ ಹಾಗೂ ವಿಚಾರ ವಿನಿಮಯ ಮಾತುಗಳಲ್ಲಿ ಇರುವುದಿಲ್ಲ. ಅದು ಭಾವನೆ, ಅನುಭವದ ಸಂವೇದನೆ, ಚಿತ್ರಣ, ಕನಸು ಮುಂತಾದವುಗಳ ಮೂಲಕ ವ್ಯಕ್ತ ಪಡಿಸುತ್ತವೆ. ಅರೆಪ್ರಜ್ಞಾಮನಸ್ಸಿನ ಮುಖ್ಯ ಗುಣವೆಂದರೆ ಅದು ಪ್ರಜ್ಞಾಮನಸ್ಸಿನ ಆಜ್ಞೆಗಳಿಗೆ/ಅಭಿಪ್ರಾಯಗಳಿಗೆ ತಲೆ ಬಾಗುವುದು. ಆದರೆ ನಿಮ್ಮ ಪ್ರಜ್ಞಾಮನಸ್ಸಿನ ಮೂಲಕ ಯಾವ ವಿಚಾರಗಳ ಬೀಜ ಬಿತ್ತುವಿರೋ ಅದು ಹೆಮ್ಮರವಾದಂತೆ ನಿಮ್ಮ ಪ್ರಜ್ಞಾಮನಸ್ಸು ಅದರ ವಶವಾಗಿ ಬಿಡುತ್ತದೆ. 
        ನೀವು ಬಿತ್ತುವ ನಕಾರಾತ್ಮಕ ವಿಷಯಗಳಾಗಲೀ, ಸಕಾರಾತ್ಮಕ ವಿಷಯಗಳಾಗಲೀ, ದಿನಗಳೆದಂತೇ ಪ್ರಜ್ಞಾಮನಸ್ಸು ಆ ವಿಷಯಗಳಿಗೆ ಬಲವಾಗಿ ಸ್ಪಂದಿಸುತ್ತದೆ. ಉದಾಹರಣೆಗೆ ದುಡ್ಡು ಕದಿಯಲು ಪ್ರಾರಂಭಿಸಿದರೆ, ಮುಂದೊಮ್ಮೆ ನಿಮ್ಮ ಪ್ರಜ್ಞಾಮನಸ್ಸಿಗೆ ಬೇಡವೆನಿಸಿದರೂ ಅರೆಪ್ರಜ್ಞಾ ಮನಸ್ಸು ಒತ್ತಡ ಹೇರಿ ಮತ್ತೆ ಕದಿಯಲು ಪ್ರೇರೇಪಿಸುತ್ತದೆ.  ನಾವೇ ಕಟ್ಟಿಕೊಟ್ಟಿರುವ ಕೋಟೆಯಲ್ಲಿ ವಿಹರಿಸುತ್ತಿರುವ ಅರೆಪ್ರಜ್ಞಾಮನಸ್ಸನ್ನು ಮತ್ತೆ ಬದಲಿಸುವುದು ಕಷ್ಟಾಸಾಧ್ಯ.
        ಅರೆಪ್ರಜ್ಞಾಮನಸ್ಸಿನ ಉಗ್ರಾಣವೇ ಸುಪ್ತಮನಸ್ಸು.ಇಲ್ಲಿ ನಿಮ್ಮ ಜೀವನದಲ್ಲಿ ಹುಟ್ಟಿದ ಕ್ಷಣದಿಂದ ನಡೆದ ಎಲ್ಲಾ ಘಟನೆಗಳು ದಾಖಲಾಗಿರುತ್ತವೆ.
ಅರೆಪ್ರಜ್ಞಾಮನಸ್ಸು ಮರೆತಿರುವ ವಿಷಯಗಳು ಕೂಡಾ ಇಲ್ಲಿ ಜಮೆಯಾಗಿರುತ್ತವೆ.
ಈ ಭಾಗ ಸ್ವಲ್ಪ ನಿಗೂಢ ಹಾಗೂ ಕೆಲವೊಮ್ಮೆ ವಿವರಿಸಲು ಆಗದ ಕಾರ್ಯಗಳನ್ನು
ಅದು ನಿರ್ವಹಿಸುತ್ತದೆ. ಇಲ್ಲಿ ಹುದುಗಿರುವ ಒಂದು ನೆನಪು ಅಥವಾ ಒಂದು ಘಟನೆ ಭುಗಿಲೆದ್ದಾಗ ಆತನ ವಿಚಿತ್ರ ನಡವಳಿಕೆಗೆ ಕಾರಣವಾಗಬಹುದು. ಸಾಧಾರಣವಾಗಿ ಪ್ರಜ್ಞಾಮನಸ್ಸಿಗೆ ಸಿಗದ  ಮನಸ್ಸಿನ ಈ ಭಾಗವನ್ನು ಸಮ್ಮೋಹಿನಿಯಿಂದ ಹೊರತರಬಹುದಾಗಿದೆ. 
        ಅರೆಪ್ರಜ್ಞಾ ಮನಸ್ಸು ನಮ್ಮ ಜೀವನದ ಹಲವಾರು ನೆನಪುಗಳು, ಅನುಭವಗಳು, ಸಂಸ್ಕಾರ, ಕಲಿಕೆ, ಗ್ರಹಿಕೆ ಎಲ್ಲವೂ ಸೇರಿ ಅವುಗಳನ್ನೆಲ್ಲಾ ನಮ್ಮ ಅರಿವಿಲ್ಲದೇ ವಿಶ್ಲೇಷಿಸಿ ಇಂದಿನ ನನ್ನನ್ನು `ನಾನು' ಆಗಿ ರೂಪಿಸಿರುತ್ತದೆ. ಹಲವಾರು ವಿಷಯಗಳನ್ನು ನಾವು ಮರೆತಿದ್ದರೂ ಅದರ ಪ್ರಭಾವ 'ನಮ್ಮ' ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುತ್ತದೆ. ಇದರ ಆಧಾರದ ಮೇಲೆ ನಮ್ಮ ನಂಬಿಕೆಗಳು ಯೋಚನಾಲಹರಿ, ನಡವಳಿಕೆ, ವೈಚಾರಿಕತೆ, ವಿಶ್ಲೇಷಣೆ ಮುಂತಾದವು ನಮ್ಮೊಂದಿಗೆ ಬೆಸೆದುಕೊಂಡಿರುತ್ತವೆ. 
        ನೆನಪಿಗೆ ಬಾರದಿರುವ ಮನಸ್ಸಿನ ಭಾಗವನ್ನು, ಸುಪ್ತ ಮನಸ್ಸು ಅಥವಾ ಪ್ರಜ್ಞಾರಹಿತಮನಸ್ಸುಎಂದು ಕರೆಯಬಹುದು. ಅರೆಪ್ರಜ್ಞಾಮನಸ್ಸಿನಲ್ಲಿ ನೆನಪುಗಳು, 
ಚಿಂತನೆಗಳು ಹಾಗೂ ಚಟುವಟಿಕೆಗಳು ತಾನೇ ತಾನಾಗಿ ಹಸಿರಾಗಿರುತ್ತವೆ. ನಿಮಗೆ ಪ್ರಶ್ನೆ ಕೇಳಿದೊಡನೆ ನೆನಪಿಗೆ ಬರುವ ಉತ್ತರಗಳು ಅರೆಪ್ರಜ್ಞಾಮನಸ್ಸಿನಲ್ಲಿರುತ್ತವೆ. ಬಯಸಿದರೂ, ಹುಡುಕಿದರೂ, ತಿಣುಕಾಡಿದರೂ ನೆನಪಿಗೆ ಬಾರದಿರುವ ಅಂಶಗಳು 
ಸುಪ್ತ ಮನಸ್ಸಿನಲ್ಲಿರುತ್ತವೆ. 
        ಸುಪ್ತ ಮನಸ್ಸು ದೊಡ್ಡದೊಂದು ಉಗ್ರಾಣವಿದ್ದಂತೆ. ಅದರ ಸಂಗ್ರಹಣಾ ಸಾಮರ್ಥ್ಯಕ್ಕೆ ಮಿತಿಯಿಲ್ಲ. ನಿಮ್ಮ ಜೀವನದ ಎಲ್ಲಾ ವಿವರಗಳು ಅಲ್ಲಿ ಜಮೆಯಾಗಿರುತ್ತವೆ. ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಮೂಲಕ ಹರಿದು ಬರುವ ಅಪಾರ ವಿಷಯಗಳನ್ನು ನಿರಂತರ ಸಂಪರ್ಕವಿಟ್ಟುಕೊಂಡು ಸುಪ್ತ ಮನಸ್ಸು ದಾಖಲಿಸುತ್ತಾ ಇರುತ್ತದೆ.

No comments:

Post a Comment