Monday 31 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು 3 - ಅಷ್ಟಾಂಗಯೋಗ

          ಮೊತ್ತ ಮೊದಲು ಪಾತಂಜಲಿ (ಪತಂಜಲಿ) ಯೋಗಸೂತ್ರವನ್ನು ನನಗೆ ಬೋಧಿಸಲಾಯಿತು. ಪಾತಂಜಲಿ ಮಹರ್ಷಿಗಳ ಅಷ್ಟಾಂಗಯೋಗವನ್ನು ಸರಳವಾಗಿ ವಿವರಿಸಲು ಇಚ್ಛಿಸುತ್ತೇನೆ. ಇದು ದೇಹ, ಮನಸ್ಸು ಹಾಗೂ ಜ್ಞಾನಕ್ಕೆ 
ಸಂಬಂಧಪಟ್ಟಿರುವಂತಹದ್ದು. ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳಲ್ಲಿ ಸಾಧನೆ ಮಾಡಿದರೆ ಜ್ಞಾನ ಪ್ರಾಪ್ತವಾಗುವುದು. 
          ಏನಿದು ಜ್ಞಾನ ? ಈ ಜ್ಞಾನ ಸಾಮಾನ್ಯವಾದದ್ದಲ್ಲ. ಆದರೆ ಇದನ್ನು ವಿವರಿಸಿ ಹೇಳುವುದೂ ಸುಲಭವಲ್ಲ. ಇದೊಂದು ರೀತಿಯಲ್ಲಿ ಸಮಗ್ರ ಅರಿವು ಎಂದು ಹೇಳಬಹುದು. ಪ್ರಪಂಚದ ಅರಿವು, ಜೀವನದ ಅರಿವು, ಜೀವದ ಅರಿವು, ಆತ್ಮದ ಅರಿವು, ಪರಮಾತ್ಮನ ಅರಿವು... ಹೀಗೆ. ಯಮ ನಿಯಮದ ಎಂಟು ಅಂಗಗಳಲ್ಲಿ ಮನಸ್ಸಿಗೆ ಅತ್ಯಂತ ಪ್ರಾಮುಖ್ಯತೆ ಉಂಟು. ಮೊದಲ ನಾಲ್ಕು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಮಗಳು ದೇಹ ಹಾಗೂ ಅದರ ಆರೋಗ್ಯಕ್ಕೂ ಸಂಬಂಧ ಪಟ್ಟಿವೆ. 'ಶರೀರಮಾದ್ಯಮ್ ಖಲು ಧರ್ಮ ಸಾಧನಂ'  ಎಂದು ಹೇಳಿದಂತೆ ಯಾವುದೇ ಸಾಧನೆ ಮಾಡಬೇಕಾದರೂ ನಮ್ಮ ಶರೀರ ಆರೋಗ್ಯಕರವಾಗಿ ಇರಲೇ ಬೇಕು.
          ಏನಿದು ಯಮ ನಿಯಮಾದಿಗಳು ?

೧. ಯಮ - ಇಲ್ಲಿ ಬದುಕಬೇಕಾದ ರೀತಿಯ ಬಗ್ಗೆ ತಿಳಿಹೇಳಲಾಗುತ್ತದೆ. ನೆಮ್ಮದಿಯಿಂದ, ಮರ್ಯಾದೆಯಿಂದ ಬದುಕಬೇಕಾದರೆ ನಾವು ಒಂದಷ್ಟು ಆದರ್ಶಗಳನ್ನು ರೂಢಿಸಿಗೊಳ್ಳಬೇಕಾಗುತ್ತದೆ. ಉದಾಹರಣೆಗೆ ಯಾರನ್ನೂ ಅಥವಾ ಯಾವುದನ್ನೂ ಹಿಂಸೆ ಮಾಡದಿರುವುದು, ಪರರ ಸ್ವತ್ತಿಗೆ ಆಸೆ ಪಡದಿರುವುದು, ಪರರ ವಸ್ತುವನ್ನು ಕದಿಯದಿರುವುದು,  ಸತ್ಯವನ್ನೇ ಹೇಳುವುದು, ಬ್ರಹ್ಮಚರ್ಯವನ್ನು ಪಾಲಿಸುವುದು.. ಹೀಗೆ ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಲು ಇಲ್ಲಿ ಸಾಧಕನನ್ನು ತಯಾರು ಮಾಡಲಾಗುತ್ತದೆ.

೨. ನಿಯಮ - ಮೌಲ್ಯಗಳನ್ನು ನೀವು ಎಷ್ಟರ ಮಟ್ಟಿಗೆ ಪಾಲಿಸುತ್ತೀರೋ ಅದು ನಿಮಗೆ ಬಿಟ್ಟದ್ದು. ನೀವು ಇಹಲೋಕದಲ್ಲಿ ನೆಮ್ಮದಿಯಿಂದ ಬದುಕಲು ಹಾಗೂ ಮುಕ್ತಿ ಪಡೆಯಲು ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಶುಚಿತ್ವ - ಇಲ್ಲಿ ಬಹಿರಂಗ ಶುದ್ಧಿಯೂ ಮುಖ್ಯ, ಅಂತರಂಗ ಶುದ್ಧಿಯೂ ಮುಖ್ಯವಾಗುತ್ತದೆ.
ಸಂತೋಷ - ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಸಂತಸದಿಂದ ಬಾಳುವುದು ಹೇಗೆ ಎನ್ನುವುದನ್ನು ತಿಳಿಸಲಾಗುತ್ತದೆ. ನಮಗೆ ಸಿಕ್ಕಿದ್ದರಲ್ಲಿ ತೃಪ್ತಿ ಕಾಣುವುದು ಹೇಗೆ? ಎನ್ನುವುದನ್ನು ಮನದಟ್ಟು ಮಾಡಲಾಗುತ್ತದೆ.
ತಪಸ್ಸು- ಇಲ್ಲಿ ತಪಸ್ಸು ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಎಲ್ಲೋ ಹೋಗಿ ಧ್ಯಾನ ಮಾಡುವುದಲ್ಲ. ನಮ್ಮ ಮೌಲ್ಯಗಳಿಗೆ ನಾವು ತೋರುವ ನಿಷ್ಠೆ ಹಾಗೂ ನಮ್ಮ ಜೀವನವನ್ನು ಆದಷ್ಟು ಕಲ್ಮಶರಹಿತವಾಗಿಡುವುದಕ್ಕೆ ತೋರುವ ಶಿಸ್ತು.
          ಯಮ-ನಿಯಮಗಳನ್ನು ನೂರಕ್ಕೆ ನೂರು ಅನ್ನಲಾಗದಿದ್ದರೂ ಬಹುತೇಕ ನಾನು ಪಾಲಿಸುತ್ತಿದ್ದೆ. ನನ್ನ ಗುರಿ ಮುಂದಿನ ಆರು ಅಂಗಗಳಲ್ಲಿ ಕೇಂದ್ರೀಕೃತವಾಗಿತ್ತು. ಅಲ್ಲಿ ನನಗಾದ ಅನುಭವಗಳನ್ನು ಒಂದೊಂದಾಗಿ ಬಿಚ್ಚಿಡುತ್ತೇನೆ.

೩ . ಆಸನ - ಎಲ್ಲಾ ಆಸನಗಳನ್ನು ಕರತಲಾಮಲಕ ಮಾಡಿಕೊಳ್ಳಬೇಕೆಂದು ಅವಿರತ ಅಭ್ಯಾಸ ಮಾಡುತ್ತಿದ್ದೆ. ಮೈಕೈ ನೋವಾದರೂ ಲೆಕ್ಕಿಸದೇ ಮುಂದುವರೆಯುತ್ತಿದ್ದೆ. ಯಾವುದೇ ಆಸನದಲ್ಲಿ ಎರಡು ಗಂಟೆಗಳ ಕಾಲ ನೋವಿಲ್ಲದೇ ಇರಲು ಸಾಧ್ಯವಾದರೆ ಆ ಆಸನ ನಮಗೆ ಸಿದ್ಧಿಸಿದೆ ಎಂದರ್ಥ. ಹೀಗೆ ಹಲವಾರು ಆಸನಗಳನ್ನು ಸಿದ್ಧಿಸಿಕೊಂಡ ಮೇಲೆ ಒಮ್ಮೆ ಯೋಚಿಸಿದೆ. ನನಗೆ, ನನ್ನ ದೇಹಕ್ಕೆ ಬೇಕಾದ ಆಯ್ದ ಆಸನಗಳ ಪಟ್ಟಿ ಮಾಡಿಕೊಂಡೆ. ಬೆನ್ನುಹುರಿಗೆ ಅನುವಾಗಲು ಚಕ್ರಾಸನ, ಭುಜಂಗಾಸನ, ಪಶ್ಚಿಮೋತ್ತಾನಾಸನ ಹಾಗೂ ಅರ್ಧ ಮತ್ಸ್ಯೇ೦ದ್ರಾಸನ (ಎರಡೂ ಬದಿಯಲ್ಲಿ), ರಕ್ತಸಂಚಾರಕ್ಕಾಗಿ ಶೀರ್ಷಾಸನ , ಧ್ಯಾನಕ್ಕೆ ಅನುಕೂಲವಾಗಲು ಪದ್ಮಾಸನ, ಮನಸ್ಸಿನ, ಮೆದುಳಿನ ಬೆಳವಣಿಗೆಗೆ ಗೋಮುಖಾಸನ, ಕೊನೆಗೆ ಶವಾಸನ, ಇವುಗಳನ್ನು ಆಯ್ದುಕೊಂಡು ಮಿಕ್ಕ ಆಸನಗಳನ್ನೆಲ್ಲ ಬದಿಗಿರಿಸಿದೆ. 
          ಆಸನಗಳನ್ನು ಅಭ್ಯಸಿಸುವಾಗ ಗುರುಮುಖೇನ ಏಕೆ ಕಲಿಯಬೇಕು ಎನ್ನುವುದೂ ಅರಿವಾಯಿತು. ಉಸಿರಾಟದ ಕ್ರಮವನ್ನು (ಯಾವಾಗ ಉಸಿರು ತೆಗೆದುಕೊಳ್ಳಬೇಕು, ಯಾವಾಗ ಬಿಡಬೇಕು) ನನ್ನ ಗುರುಗಳು ಸಕಾರಣವಾಗಿ ವಿವರಿಸಿದರು. ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಂಡಾಗ ಎಲ್ಲಿ ತಪ್ಪು ಆಗುತ್ತಿದೆಯೆಂದು ತೋರಿಸಿದರು. ಎಲ್ಲಕ್ಕೂ ಮಿಗಿಲಾಗಿ ಎಷ್ಟು ನಿಧಾನವಾಗಿ ಕ್ರಿಯೆಗಳನ್ನು ನಡೆಸಬೇಕೆಂದು ಹಂತ ಹಂತವಾಗಿ ತೋರಿಸಿದರು. 'ಷಣ್ಮುಖೀ ಮುದ್ರೆ' ಅಭ್ಯಸಿಸುವಾಗ ಅನಾಹತ ಧ್ವನಿಯನ್ನು ಕಿವಿಯಾರೆ ಕೇಳುವಂತೆ ಮಾಡಿದರು.
          ಪ್ರಾಣಾಯಾಮ ಹಾಗೂ  ಧ್ಯಾನದ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೀಡುತ್ತೇನೆ ಹಾಗೂ ಪವಾಡದಂತೆ ಕಂಡ ಗುರುಗಳ ಒಂದು ಕೃತ್ಯದ ಬಗ್ಗೆ ಬರೆಯುತ್ತೇನೆ. 

Saturday 29 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 2

          ಯೋಗಾಭ್ಯಾಸಕ್ಕಾಗಿ ಗುರುಗಳ ಹುಡುಕಾಟದಲ್ಲಿದ್ದೆ. ನ್ಯಾಷನಲ್ ಶಾಲೆಯ ನನ್ನ 'ಸಂಸ್ಕೃತ' ಗುರುಗಳಾದ ಕೆ.ಟಿ.ಎಸ್ ಅವರು ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ಯೋಗಾಭ್ಯಾಸ ಮಾಡಲು ಉತ್ತಮ ಶಾಲೆ ಎಂದು ಸೂಚಿಸಿದರು. 'ಅಲ್ಲಿ ಗುರುಗಳಾಗಿರುವ ಚಿ.ವಿಶ್ವೇಶ್ವರಯ್ಯನವರಲ್ಲದೇ ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಕೂಡ ಆಗಾಗ ಬರುತ್ತಿರುತ್ತಾರೆ. ಅವರ ಬಳಿಯೂ ಕಲಿಯುವುದು ಸಾಕಷ್ಟಿದೆ' ಎಂದು ಹೇಳಿ ಅಲ್ಲೇ ಸೇರುವಂತೆ ಉತ್ತೇಜಿಸಿದರು. ನಾನು ಹೋಗಿ ಶ್ರೀ ವಿಶ್ವೇಶ್ವರಯ್ಯನವರನ್ನು ಭೇಟಿಯಾಗಿ ನನ್ನ ಮನದ ಇಂಗಿತವನ್ನು ಹೇಳಿಕೊಂಡೆ. 'ಯೋಗಾಭ್ಯಾಸ, ಪ್ರಾಣಾಯಾಮವಲ್ಲದೇ ಇನ್ನಾವುದೇ ರೀತಿಯ ಸಾಧನೆಗಳನ್ನಾದರೂ ಮಾಡುವುದು ನನಗೆ ಇಷ್ಟ' ಎಂದು ಹೇಳಿದೆ. ವಿಶ್ವೇಶ್ವರಯ್ಯನವರು "ಒಂದೆರಡು ತಿಂಗಳು ಯೋಗಾಭ್ಯಾಸ ಹಾಗೂ ಪ್ರಾಣಾಯಾಮದ ತರಬೇತಿ ಪಡೆಯಿರಿ. ನಂತರ ನಿಮಗೆ 'ತ್ರಾಟಕ' ಎಂಬ ಕಣ್ಣಿಗೆ ಹಾಗೂ ಮನಸ್ಸಿಗೆ ಪ್ರಯೋಗ ಒಡ್ಡುವ ವಿದ್ಯೆಯನ್ನು ಹೇಳಿಕೊಡುತ್ತೇನೆ, ನಾಳೆ ಬೆಳಿಗ್ಗೆ ಆರು ಗಂಟೆಗೆ ಮಂದಿರಕ್ಕೆ ಬನ್ನಿ" ಎಂದರು. 'ಸರಿ' ಎಂದು ನಾನು ಹೊರಡುವಾಗ "ಬೆಳಿಗ್ಗೆ ಬೇಗ ಎದ್ದು ಅಭ್ಯಾಸವಿದೆಯೋ? ಇಲ್ಲದಿದ್ದರೂ ಪರವಾಗಿಲ್ಲ, ಒಂದು ಗುಟ್ಟು ಹೇಳುತ್ತೇನೆ. 'ನಾನು ಆರು ಗಂಟೆಗೆ ಅಲ್ಲಿ ಇದ್ದೇ ಇರುತ್ತೇನೆ' ಎಂದು ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಳ್ಳಿ. ನೀವು ಆಗ ಎದ್ದೇ ಏಳುವಿರಿ, ಬಂದೇ ಬರುತ್ತೀರಿ" ಎಂದು ಹೇಳಿ ನಕ್ಕರು. ಯೋಗದ ಪ್ರಥಮ ಪಾಠವನ್ನು, ಸೇರುವ ಮುನ್ನವೇ ಹೇಳಿಕೊಟ್ಟಿದ್ದರು. 
          ಮರುದಿನ ಬೆಳಿಗ್ಗೆ ಐದೂ ಮೂವತ್ತಕ್ಕೆ ಅಲಾರಾಂ ಇಟ್ಟಿದ್ದೆ. ಅಲಾರಾಂ ಹೊಡೆಯುವ ಮುನ್ನವೇ ಐದೂ ಇಪ್ಪತ್ತೊಂಭತ್ತಕ್ಕೇ ಎಚ್ಚರವಾಗಿತ್ತು. ಹೊರಗೆ ಬಂದಾಗ ಕೊರೆಯುವ ಚಳಿ. ಯೋಗಶಾಲೆ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದುದರಿಂದ ಆರಾಮಾಗಿ ಆರು ಗಂಟೆಗೆ ಮೊದಲೇ ತಲುಪಿದೆ. ಕಟ್ಟಡದ ಟೆರೇಸಿನ ಮೇಲೆ ಉಳಿದ ವಿದ್ಯಾರ್ಥಿಗಳೊಂದಿಗೆ ಹೋದೆ. ತುಂಡುಬಟ್ಟೆಯನ್ನುಟ್ಟುಕೊಂಡು ನಿಂತಿದ್ದ ಗುರುಗಳು ಹಿಂದೂ ಧ್ವಜವನ್ನು ಏರಿಸಿ, ಸೂರ್ಯನ ಮಂತ್ರವನ್ನು ಹೇಳುತ್ತಾ, ಸೂರ್ಯನಮಸ್ಕಾರವನ್ನು ಮಾಡಿದರು. ನಂತರ ಎಲ್ಲರೂ ಯೋಗಶಾಲೆಗೆ ಬಂದೆವು. ಮೊದಲ ದಿನ ಬಹಳ ಸುಲಭವಾದ ಎರಡು ಆಸನಗಳನ್ನು ಮಾಡಿಸಿದರು. ನಂತರ ಕೊನೆಗೆ ಸುಲಭಾತಿಸುಲಭವೆಂದು ನನಗನ್ನಿಸಿದ 'ಶವಾಸನ'ವನ್ನು ಮಾಡಿಸಿದರು. ನಾನಂತೂ 'ಯೋಗಾಸನವೆಂದರೆ ಇಷ್ಟೇನೇ, ತಿಂಗಳೆರಡುತಿಂಗಳೊಳಗೆ ಎಲ್ಲಾ ಆಸನಗಳನ್ನೂ ಅರೆದು ಕುಡಿಯುತ್ತೇನೆ' ಎಂದಂದುಕೊಂಡು ಗರ್ವಿಷ್ಠನಾದೆ. 
          ಹಂತಹಂತವಾಗಿ ಮೈಯ್ಯನ್ನು ಹಿಂಡಿ, ತಿರುಚಿ, ತಲೆಕೆಳಗಾಗಿ, ಕೈಕಾಲುಗಳನ್ನೆಳೆದು, ಸೆಳೆದು ಕಷ್ಟಾತಿಕಷ್ಟವಾದ ಆಸನಗಳನ್ನೆಲ್ಲಾ ಕಲಿಸಿದರು. ಜೊತೆಯಲ್ಲಿಯೇ ಪ್ರಾಣಾಯಾಮದ ಪಾಠವೂ ಆರಂಭವಾಗಿತ್ತು. ಅದೂ ಹಾಗೆಯೇ! ಅನುಲೋಮ, ವಿಲೋಮದಂತಹ ಸರಳ ಪ್ರಾಣಾಯಾಮದೊಂದಿಗೆ ಪ್ರಾರಂಭವಾದಾಗ 'ಪ್ರಾಣಾಯಾಮವೆಂದರೆ ಇಷ್ಟೇನೇ' ಎಂದೂ ಅನ್ನಿಸಿತ್ತು. ಆಮೇಲೆ ಗೊತ್ತಲ್ಲ! ಹೌದು, ಉಸಿರು ಬಿಗಿ ಹಿಡಿಯುವುದರಿಂದ ಪ್ರಾರಂಭವಾಗಿ ಮೂಲಬಂಧ, ಜಾಲಂಧರಬಂಧ ಹಾಗೂ ಉಡ್ಯಾನಬಂಧಗಳನ್ನು ಶಾಸ್ತ್ರಬದ್ಧವಾಗಿ, ಕರಾರುವಕ್ಕಾಗಿ ಮಾಡುವ ವೇಳೆಗೆ ಪ್ರಾಣಾಯಾಮಕ್ಕೂ, ಪ್ರಾಣ ಹಾಗೂ ಯಮನಿಗೂ ಇರುವ ಸಂಬಂಧ ಒಂದಷ್ಟು ಅರ್ಥವಾಗಿತ್ತು.             
ಇನ್ನಷ್ಟು ವಿವರಗಳು ಮುಂದಿನ ಬರಹದಲ್ಲಿ.. 

Thursday 27 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 1

             'ಪ್ರಶ್ನಿಸದೇ ಒಪ್ಪಬೇಡ' ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಎಚ್. ನರಸಿಂಹಯ್ಯನವರು (ಪ್ರೀತಿಯ 'ಎಚ್.ಎನ್.') ಹೇಳುತ್ತಿದ್ದ ಮಾತು. ಎಳೆಯ ವಯಸ್ಸಿನಲ್ಲಿ ಮನದಲ್ಲಿ ನಾಟಿದ ಮಾತು. ನನಗೆ ಉಪನಯನವಾದ ಮೇಲೆ ನದೀ ತೀರಕ್ಕೆ ಕರೆದುಕೊಂಡು ಹೋಗಿ ನಮ್ಮ ಆಚಾರ್ಯರು ಸಂಧ್ಯಾವಂದನೆ ಮಾಡುವ ಕ್ರಮವನ್ನು ಹೇಳಿಕೊಡುತ್ತಿದ್ದರು. ಎಚ್.ಎನ್. ಅವರಿಂದ ಪ್ರಭಾವಿತನಾದ ನಾನು ಪ್ರತಿಯೊಂದು ಆಚಾರ ವಿಚಾರಗಳ ಕುರಿತಾಗಿ ಆಚಾರ್ಯರನ್ನು ಪ್ರಶ್ನಿಸುತ್ತಿದ್ದೆ. ಅವರೂ ತಾಳ್ಮೆಯಿಂದ ಸಮರ್ಪಕವಾದ ಉತ್ತರವನ್ನು ನೀಡುತ್ತಿದ್ದರು. ಸಂಧ್ಯಾವಂದನೆಯಲ್ಲಿ 'ಪ್ರಾಣಾಯಾಮ'ವೂ ಒಂದು ಭಾಗ. ಆಚಾರ್ಯರು ನನಗೆ ಮೂಗು ಹಿಡಿದುಕೊಂಡು  'ಓಂಭೂಃ, ಓಂಭುವಃ, ಓಂಸ್ವವಃ, ಓಂಮಹಃ, ಓಂಜನಃ, ಓಂ ತಪಃ ,ಓಂಸತ್ಯಂ ಓಂ ತತ್ಸವಿತುರ್ವರೇಣ್ಯಂ । ಭರ್ಗೋದೇವಸ್ಯ ಧೀಮಹಿ। ಧಿಯೋ ಯೋ ನಃ ಪ್ರಚೋದಯಾತ್।' ಎಂಬ ಮಂತ್ರವನ್ನು ಹೇಳಿ, ನೀರನ್ನು ಕೈ ಮೂಲಕ ಕೆಳಗೆ ತಟ್ಟೆಯಲ್ಲಿ ಬಿಟ್ಟು ಒಂದೇ ಬೆರಳನ್ನು ಕಣ್ಣಿಗೆ ಒತ್ತಿ 'ಓಂ ಆಪೋಜ್ಯೋತಿರಸೋsಮೃತಂ ಬ್ರಹ್ಮ ಭೂರ್ಭುವಸ್ವರೋಂ' ಎಂಬ ಮಂತ್ರವನ್ನು ಪಠಿಸಲು ಹೇಳಿದ್ದರು. 
ನಾನು ಅವರನ್ನು ಕೇಳಿದೆ 'ಪ್ರಾಣಾಯಾಮವೆಂದರೆ ಉಸಿರಾಟದ ನಿಯಂತ್ರಣ ಎಂದು ಎಲ್ಲೋ ಓದಿದ್ದೆ, ಹೀಗಿರುವಾಗ ಬರೀ ಮೂಗು ಹಿಡಿದುಕೊಂಡರೆ ಸಾಕೆ ?'
' ನಿಜ ಕಣಪ್ಪಾ ನೀನು ಹೇಳುವುದು, ಆದರೆ ಪ್ರಾಣಾಯಾಮ, ಹಠಯೋಗ ಮುಂತಾದವುಗಳನ್ನು ನುರಿತ ಗುರುಮುಖೇನ ಕಲಿಯಬೇಕು. ನಾವು ವೈದಿಕರು, ಅದರ ಬಗ್ಗೆ ತರಬೇತಿ ನೀಡುವಷ್ಟು ನಾನು ಅಭ್ಯಾಸ ಮಾಡಿಲ್ಲ, ಆದ್ದರಿಂದ ಸದ್ಯಕ್ಕೆ ನೀನು ಮೂಗು ಹಿಡಿದು ಮಂತ್ರ ಹೇಳಿದರೆ ಸಾಕು' ಎಂದರು. ಅಲ್ಲಿಂದ ಮುಂದೆ ನನ್ನ ದೃಷ್ಟಿಯೆಲ್ಲಾ ಪ್ರಾಣಾಯಾಮ ಕಲಿಸುವ ಸೂಕ್ತ ಗುರುವನ್ನು ಅರಸುತ್ತಿತ್ತು.
            ಇದು ಒಂದೆಡೆಯಾದರೆ ಹೆಚ್ಚು ಕಡಿಮೆ ಅದೇ ಸಮಯದಲ್ಲಿ  ಮಂಗಳೂರಿನಲ್ಲಿ ಒಮ್ಮೆ ಖ್ಯಾತ ಸಂಮೋಹಿನಿಕಾರರಾದ 'ದಿನ್ ಕೋಲಿ' ಅವರಿಂದ 'ಸಂಮೋಹಿನಿ ಪ್ರದರ್ಶನ' ಎಂಬ ಜಾಹಿರಾತು ನೋಡಿದೆ. ಸಂಮೋಹಿನಿಯ ಬಗ್ಗೆ ಒಂದಷ್ಟು ಕೇಳಿದ್ದೆ ಅಷ್ಟೇ. ಅಪ್ಪನ ಬಳಿ ಹೋಗಿ ಈ ಪ್ರದರ್ಶನಕ್ಕೆ ಕರೆದುಕೊಂಡು ಹೋಗಲು ಕೇಳಿದೆ. ಅಂದೇ ಸಂಜೆ ಆ ಪ್ರದರ್ಶನಕ್ಕೆ ಕರೆದುಕೊಂಡು ಹೋದರು ಅಪ್ಪ. ಅಲ್ಲಿ ಆತ ಒಂದಷ್ಟು ಜನರನ್ನು ಸಂಮೋಹನಕ್ಕೆ ಒಳಪಡಿಸಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಿದ್ದರು. ನನಗೆ ನಂಬಲು ಕಷ್ಟವಾಗುತ್ತಿತ್ತು. 'ನೀವೆಲ್ಲಾ ನಿಮ್ಮ ಇಷ್ಟವಾದ ದೇವಸ್ಥಾನದಲ್ಲಿರುವಿರಿ' ಎಂದು ಆತ ಅಂದೊಡನೆ ಎಲ್ಲರೂ ದೇವಸ್ಥಾನದಲ್ಲಿ ಇರುವಂತೇ ಓಡಾಡುತ್ತಿದ್ದರು. ತೀರ್ಥ ತೆಗೆದುಕೊಳ್ಳುವುದು, ಪ್ರದಕ್ಷಿಣೆ ಮಾಡುವುದು, ನಮಸ್ಕರಿಸುವುದು... ಹೀಗೆ ತಾವು ದೇವಸ್ಥಾನದಲ್ಲೇ ಇರುವಂತೆ ಅನುಭವಿಸುತ್ತಿದ್ದರು ಹಾಗೂ ಹಾಗೆಯೇ ಓಡಾಡುತ್ತಿದ್ದರು. ನಾನು ತಂದೆಯವರನ್ನು 'ಇದೆಲ್ಲಾ ನಿಜವೇ ಅಥವಾ ಎಲ್ಲರೂ ಆಕ್ಟಿಂಗ್ ಮಾಡ್ತಿದ್ದಾರಾ?' ಎಂದು ಕೇಳಿದೆ. ಅದಕ್ಕೆ ಅಪ್ಪ ' ಅದು ನಟನೆ ಅಲ್ಲ ಅವರೆಲ್ಲಾ ಸಂಮೋಹನಕ್ಕೆ ಒಳಗಾಗಿದ್ದಾರೆ, ಆದ್ದರಿಂದ ಅವರಿಗೆ ಅದು ನಿಜವಾಗಿರುತ್ತದೆ.' ಅಂದರು. 
            ನಾನು ಪ್ರದರ್ಶನ ಮುಗಿದ ಮೇಲೆ ಸಭಾಂಗಣದ ಹಿಂಭಾಗಕ್ಕೆ ಹೋಗಿ ದಿನ್ ಕೋಲಿ ಅವರನ್ನು ಭೇಟಿಯಾಗಿ 'ಈ ವಿದ್ಯೆ ನನಗೂ ಕಲಿಯಲು ಆಸೆಯಿದೆ, ಕಲಿಸುವಿರಾ?' ಎಂದು ಕೇಳಿದೆ. ಆಗ ನನಗೆ ಸುಮಾರು ಹನ್ನೊಂದರ ಪ್ರಾಯ. ನನ್ನನ್ನು ನೋಡಿ ನಕ್ಕ ಅವರು 'ದಿನಾ ಮನಸ್ಸಿನಲ್ಲಿ ಒಂದು ಚುಕ್ಕೆಯನ್ನು ನೆನೆಸಿಕೊಂಡು ಧ್ಯಾನ ಮಾಡು, ನಿನಗೆ ಈ ವಿದ್ಯೆ ಒಲಿಯುತ್ತದೆ' ಎಂದು ಹೇಳಿದರು. ನಾನು ಅಂದಿನಿಂದ ದಿನಾ ಅಂತೆಯೇ ಧ್ಯಾನ ಮಾಡುತ್ತಿದ್ದೆ.
'ಅವ್ನು ನಿನ್ನ ಹತ್ರ ಬಂಡಲ್ ಬಿಟ್ಟಿದ್ದಾನೆ, ನೀನು ಹೀಗೆ ಮಾಡೋದು ವೇಸ್ಟು' ಅಂತ ಉಮಕ್ಕನ ಮಗ ವೆಂಕಟೇಶ ಹೇಳುವ ಹೊತ್ತಿಗೆ ನನಗೂ ಹಾಗನ್ನಿಸಲು ಶುರುವಾಗಿತ್ತು. ಆದ್ದರಿಂದ ಹಾಗೆ ಧ್ಯಾನ ಮಾಡುವುದನ್ನು ಬಿಟ್ಟುಬಿಟ್ಟೆ !
             ತಂದೆಯವರಿಗೆ ಬೆಂಗಳೂರಿಗೆ ವರ್ಗವಾದಾಗ ನಾನು ನ್ಯಾಷನಲ್ ಮಿಡ್ಲ್ ಸ್ಕೂಲ್ ಸೇರಿಕೊಂಡೆ (೧೯೭೪). ಬೆಂಗಳೂರಿಗೆ ಬಂದಮೇಲೆ ನಾನು ಅರಸುತ್ತಿದ್ದುದು ಸಂಮೋಹಿನಿ ವಿದ್ಯೆ ಕಲಿಸುವ ಗುರುಗಳು, ಯೋಗ - ಪ್ರಾಣಾಯಾಮ ಕಲಿಸುವ ಗುರುಗಳು ಹಾಗೂ ಚಿತ್ರಕಲೆ ಕಲಿಸುವ ಗುರುಗಳು. ಸತತ ಹುಡುಕಾಟದಿಂದ ನಾಲ್ಕೈದು ವರ್ಷಗಳೊಳಗೆ ಎಲ್ಲರೂ ದೊರೆತರು. ಸಂಮೋಹಿನಿ ವಿದ್ಯೆ ಒಬ್ಬರಲ್ಲ, ಇಬ್ಬರಲ್ಲ, ಹಲವರ ಬಳಿ ಕಲಿತೆ. ಶ್ರೀ ರಮೇಶ್ ಕಾಮತ್ ಅವರು ನೀಡಿದ 'Clinical study of Hypnosis' ಎನ್ನುವ ಪುಸ್ತಕ ನನಗೆ ತುಂಬಾ ಸಹಕಾರಿಯಾಯಿತು.
             ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ನನ್ನ ಯೋಗ ಶಾಲೆಯಾಯಿತು. ಗುರುಗಳಾದ ಶ್ರೀ ಚಿ. ವಿಶ್ವೇಶ್ವರಯ್ಯ (ಚಿ. ಸದಾಶಿವಯ್ಯನವರ ತಮ್ಮ ) ಅವರು ನನ್ನ ಗುರುಗಳು. ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದ ಗುರುರಾಜ ತಂತ್ರಿಯವರನ್ನೂ ಮರೆಯಲಾರೆ. 
            ನನಗೆ ಆಸಕ್ತಿಯಿದ್ದ ಚಿತ್ರಕಲೆಯನ್ನು ಅಭ್ಯಸಿಸಲು ಶ್ರೀ ಹಡಪದ್ ಅವರ 'Ken school of arts' ಸೇರಿಕೊಂಡರೂ ನಂತರ ನನ್ನ ಕಲಾಭ್ಯಾಸ ನಡೆದದ್ದು ಶ್ರೀ ಎಂ. ಟಿ. ವಿ. ಆಚಾರ್ಯ ಅವರ 'ಆಚಾರ್ಯ ಚಿತ್ರಕಲಾ'ಭವನ'ದಲ್ಲಿ.
            ಐದಾರು ವರ್ಷಗಳಲ್ಲಿ ನಾನೇನು ಕಂಡೆ, ಏನೇನು ಕಲಿತೆ ಎನ್ನುವುದನ್ನು ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ.