Thursday 14 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 7

ನಕಾರಾತ್ಮಕ ಆಲೋಚನೆಗಳಿಂದ ಏಕೆ ಹಾಗೂ ಹೇಗೆ ಹೊರಬರಬೇಕು ? 
        ನಿಮ್ಮ ಮನಸ್ಸಿಗೆ ನಿಮ್ಮನ್ನು ನಿಮಗೆ ಬೇಕಾದುದೆಡೆಗೆ ಒಯ್ಯುವ ಶಕ್ತಿಯಿದೆ. ಅದು ನಿಮ್ಮ ಗುರಿಯಾಗಿರಲಿ ಅಥವಾ ನಿಮ್ಮ ಆಸೆ ಆಕಾಂಕ್ಷೆಗಳಾಗಿರಲಿ ಅಥವಾ ನಿಮ್ಮ ಮನೋವೇದನೆಯಿಂದ ಹೊರಬರುವುದಿರಲಿ, ನಿಮ್ಮ ಸುಪ್ತಮನಸ್ಸಿಗೆ ಅದನ್ನು ಸಾಕಾರಗೊಳಿಸುವ ಶಕ್ತಿಯಿದೆ. ಮನಸ್ಸನ್ನು ಆ ದಿಕ್ಕಿನೆಡೆಗೆ ಕೊಂಡೊಯ್ಯುವುದು ಹೇಗೆ? ......... 
        ನೆನಪಿರಲಿ! ನೀವು ಇಂದು ಮಾಡುವ ಆಲೋಚನೆಗಳು, ನೀವು ಮನಸ್ಸಿನಲ್ಲಿ ಇಂದು ಇಟ್ಟುಕೊಳ್ಳುವ ಆಲೋಚನೆಗಳು ಹಾಗೂ ನಿಮ್ಮಚಿಂತನೆಗಳು ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ. ನಮ್ಮನ್ನು ದೈಹಿಕವಾಗಿ ಯಾರಾದರೂ ಕಟ್ಟಿ ಹಾಕಬಹುದು ಆದರೆ ನಮ್ಮ ಮನಸ್ಸನ್ನು ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲ. ನನ್ನ ಮನಸ್ಸಿನ ಮೇಲೆ ನನಗಿರುವ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಿಮ್ಮನ್ನು ನೀವೇ ಒಂದು ಪ್ರಶ್ನೆ ಕೇಳಿಕೊಳ್ಳಿ. 'ನಾನು ಬಹಳಷ್ಟು ವೇಳೆ ಉತ್ಸಾಹದಿಂದ ಸಕಾರಾತ್ಮಕ ಯೋಚನೆಗಳಿಂದ ತುಂಬಿರುತ್ತೇನೆಯೇ? ಅಥವಾ
ಹಲವಾರು ಚಿಂತೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ನಕಾರಾತ್ಮಕ ಯೋಚನೆ ಗಳಲ್ಲಿ ಮುಳುಗಿರುತ್ತಿದ್ದೇನೆಯೇ? ಅಥವಾ ಇವೆರಡರ ಮಧ್ಯೆ ತೂಗಾಡುತ್ತಿರುವೆನೇ ? ತುಲನೆ ಮಾಡಿ ನಿಷ್ಪಕ್ಷಪಾತವಾಗಿ ಉತ್ತರ ನೀಡಿ.  ಒಂದು ವೇಳೆ ನೀವು ನಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೆ ನಿಮ್ಮ ಆಲೋಚನೆಗಳಿಂದ ಅಥವಾ ಚಿಂತೆಯಿಂದ ನಿಮಗೇನಾದರೂ ಲಾಭವಿದೆಯೇ ಎಂದು ಗಮನಿಸಿ. ನಿಮ್ಮ ಮನಸ್ಸಿಗೆ ನೋವು, ತೊಂದರೆ ಹಾಗೂ ಕಿರಿಕಿರಿ ಉಂಟು ಮಾಡುವ ಆಲೋಚನೆಗಳನ್ನು ತಡೆಯಿರಿ, ಸಾಧ್ಯವಾದರೆ ಕಿತ್ತೊಗೆಯಿರಿ. ಕೋಪದಿಂದಲೋ, ಅವಮಾನದಿಂದಲೋ ಅಥವಾ ದ್ವೇಷದಿಂದಲೋ ನಕಾರಾತ್ಮಕ ಭಾವನೆಗಳು ಮೊಳಕೆಯೊಡೆದಿರಬಹುದು. ಏನನ್ನೂ ಸಾಧಿಸದೆ ಕೇವಲ ನಿಮ್ಮ ಮನಃಶಾಂತಿಯನ್ನು ಹಾಳುಗೆಡಹುವ ಇಂತಹ ಆಲೋಚನೆಗಳಿಂದ
ನಿಮಗೆ ಯಾವ ಪ್ರಯೋಜನವೂ ಇಲ್ಲ ಎನ್ನುವುದನ್ನು ಮನಗಾಣಿ. ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಆಲೋಚನೆಗಳನ್ನು ತಡೆಯಲು ಪ್ರಯತ್ನಿಸಿ. ಕಹಿನೆನಪು ಅಥವಾ ನಕಾರಾತ್ಮಕ ಆಲೋಚನೆಗಳು ಬಂದೊಡನೆ ಮನಸ್ಸಿನ ಭಾವನೆಗಳನ್ನು ವಿಷಯಾಂತರಿಸಿ. ನಿಮಗೆ ಖುಷಿ ಕೊಟ್ಟ ಅಥವಾ ಖುಷಿ ನೀಡುವ ವಿಷಯಗಳ ಬಗ್ಗೆ ಗಮನ ಹರಿಸಿ.ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳಿ. ಮನಸ್ಸಿನ ಭಾವನೆಗಳು ನಿಮ್ಮ ಜೀವನವನ್ನು ರೂಪಿಸುತ್ತವೆ. ನೀವು ನಕಾರಾತ್ಮಕ ವಾಗಿ ಯೋಚಿಸಿದಾಗೆಲ್ಲ ಅದು ಅರೆಪ್ರಜ್ಞಾಮನಸ್ಸಿನ ಮೇಲೆ ಮುದ್ರೆಯೊತ್ತುತ್ತಲೇ ಇರುತ್ತದೆ. ಅದು ಗಾಢವಾಗುತ್ತಿದ್ದಂತೆ ದುಃಖ ದುಮ್ಮಾನಗಳು ಉದ್ಭವಿಸುತ್ತವೆ. ಇದು ದೀರ್ಘಕಾಲ ಮುಂದುವರೆಯುತ್ತಿದ್ದಂತೆ ಅದು ಮನೋರೋಗವಾಗಿ ಪರಿ ವರ್ತಿತವಾಗುತ್ತದೆ. ಭಯ, ಆತಂಕ, ಖಿನ್ನತೆ ಇತ್ಯಾದಿ ಮನೋರೋಗಗಳಿಗೆ ಅದು ಎಡೆ ಮಾಡಿಕೊಡುತ್ತದೆ.ರಾತ್ರಿ ಮಲಗುವಾಗ ಕಳೆದುಹೋದ ಅಥವಾ ಅನುಭವಿಸಿದ ನೋವು, ಅವಮಾನ, ಬೇಸರದ ಸಂಗತಿಗಳನ್ನು ನೆನಪಿಸಿಕೊಳ್ಳುತ್ತಾ ಮಲಗಬೇಡಿ. ನೀವು ಪದೇ ಪದೇ ನೆನೆಸಿಕೊಂಡರೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ ಗಾಢವಾದ ಪರಿಣಾಮ ಬೀರುತ್ತಿರುತ್ತದೆ. ನಂತರ ಅದರಿಂದ ಹೊರಗೆ ಬರುವುದು ಕಷ್ಟ ವಾಗುತ್ತದೆ. ಆದ್ದರಿಂದ ನಿಮ್ಮ ಉನ್ನತಿಗೆ ಹಾಗೂ ನಿಮ್ಮ ಮಾನಸಿಕ ಆರೊಗ್ಯಕ್ಕೆ ನೀವು ಸ್ವಲ್ಪ ಸಮಯವನ್ನು ಮೀಸಲಾಗಿಡಲೇಬೇಕು. ಸುಪ್ತಮನಸ್ಸಿನೊಂದಿಗೆ ಮಾತನಾಡಲು ಕಲಿಯಿರಿ. ನಿಮಗೆ ಬೇಡವಾದ ವಿಷಯವನ್ನು ನನಗಿದು ಬೇಡ ಎಂದು ಸ್ಪಷ್ಟವಾಗಿ ಹೇಳಿ. ನಿಮಗೆ ನೀವೇ ಕೆಲವೊಮ್ಮೆ ಸಮಾಧಾನ ಮಾಡಿಕೊಳ್ಳಿ. ನಿಮ್ಮ ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸು ಒಟ್ಟಾಗಿ ಕೆಲಸ ಮಾಡಿ ನಿಮ್ಮನ್ನು ರೂಪಿಸಿವೆ. ತನ್ಮೂಲಕ ನಿಮ್ಮಲ್ಲಿರುವ ಭಾವನೆಗಳು, ನಂಬಿಕೆಗಳು,ದೃಷ್ಟಿ ಕೋನಗಳು, ಅಭಿಪ್ರಾಯಗಳು ಹಾಗೂ ನಿಮ್ಮ ನಡವಳಿಕೆಗಳನ್ನು ರೂಪಿಸಿವೆ. ಹೀಗೆ ರೂಪಿಸುವಾಗ ನಕಾರಾತ್ಮಕ ವಿಷಯಗಳು ನಿಮ್ಮ ಮನಸ್ಸಿನಲ್ಲಿ ಮುದ್ರೆಯೊತ್ತಿದ್ದರೆ ಅದನ್ನು ಬದಲಿಸಲು ಅಥವಾ ದೂರ ಮಾಡಲು ನೀವು ಅರೆಪ್ರಜ್ಞಾ ಮನಸ್ಸನ್ನು  ರೂಪಾಂತರಿಸಬೇಕಾಗುತ್ತದೆ. (ರೀಪ್ರೋಗ್ರಾಮಿಂಗ್). ಕೇವಲ ನಕಾರಾತ್ಮಕ ವಿಶಯಗಳನ್ನು ದೂರ ಮಾಡುವುದಲ್ಲದೇ ನಿಮ್ಮ ಮನಸ್ಸನ್ನು ಆರೋಗ್ಯಕರವಾಗಿ, ಶಕ್ತಿಯುತವಾಗಿ ಹಾಗೂ ನಿಮ್ಮ ಗುರಿ ಮುಟ್ಟಲು ಒಯ್ಯುವಲ್ಲಿ ಕೂಡಾ ನೀವು ಮನಸ್ಸಿಗೆ ತರಬೇತಿ ನೀಡಬೇಕಾಗುತ್ತದೆ. ಅಂಗಸಾಧನೆಗಾಗಿ ವ್ಯಾಯಾಮ ಮಾಡುವಾಗ ಸಮಯ, ಅಭ್ಯಾಸ ಹಾಗೂ ತಾಳ್ಮೆ ಬೇಕಾಗುವಂತೆ ನಿಮ್ಮಲ್ಲಿ ಮಾನಸಿಕ ಬದಲಾವಣೆ ತರಬೇಕಾದರೂ ಸಮಯ, ಅಭ್ಯಾಸ ಹಾಗೂ ತಾಳ್ಮೆ ಬೇಕಾಗುತ್ತದೆ.

ಮನಸ್ಸಿನ ತರಬೇತಿ
ಪ್ರತಿದಿನ ಸ್ವಲ್ಪ ಸಮಯವನ್ನು ನೀವು ಇದಕ್ಕಾಗಿ ನೀಡಲೇಬೇಕು. ನಮ್ಮಬದುಕಿನಲ್ಲಿ ಬಹುತೇಕ ಸಮಯವನ್ನು ನಾವು ಇತರರಿಗಾಗಿ ವ್ಯಯಿಸುತ್ತೇವೆ. ಉದಾಹರಣೆಗೆ, ನಾನು ಕೆಲಸ ಮಾಡುತ್ತಿರುವ ಯಜಮಾನನಿಗಾಗಿ, ನನ್ನ ಕುಟುಂಬಕ್ಕಾಗಿ ಅಥವಾ ನನ್ನ ಗೆಳೆಯರ ಒಳಿತಿಗಾಗಿ. ಸಾಮಾಜಿಕ ಚೌಕಟ್ಟಿನಲ್ಲಿ ಇವೆಲ್ಲಾ ಅನಿವಾರ್ಯ ಹಾಗೂ ಲಾಭದಾಯಕ ಎನಿಸಿದರೂ ಗಮನಿಸಿ ನೋಡಿದಾಗ ಬಹಳಷ್ಟು ಸಮಯವನ್ನು ನಾವು ನಮ್ಮ ಸುತ್ತಮುತ್ತಲಿರುವ ನಮ್ಮವರಿಗಾಗಿ ವ್ಯಯಿಸುತ್ತಿರುತ್ತೇವೆ.
        ದಿನಂಪ್ರತಿ ಸುಮಾರು ಇಪ್ಪತ್ತು ನಿಮಿಷಗಳ ಮನಸ್ಸಿನ ತರಬೇತಿಯಿಂದ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಲು ಸಾಧ್ಯ. ದೈಹಿಕ ಸಾಧನೆಗೆ ದೈಹಿಕ ವ್ಯಾಯಾಮದ ಅಗತ್ಯವಿರುವಂತೇ ಮಾನಸಿಕ ಸಾಧನೆಗೆ ಅದರದ್ದೇ ಆದ ಮಾನಸಿಕ ವ್ಯಾಯಾಮಗಳಿವೆ. ಮನಸ್ಸಿನ ಸಾಧನೆ ಕೆಲವೊಮ್ಮೆ ದೈಹಿಕ ವ್ಯಾಯಾಮದ ಅಗತ್ಯವಿಲ್ಲದೆಯೇ ದೈಹಿಕ ಸಾಧನೆಯ ಪರಿಣಾಮಗಳನ್ನು ನೀಡಬಲ್ಲದು. ಬೇರೆ ಬೇರೆ ಮನಸ್ಥಿತಿಗೆ ಬೇರೆ ಬೇರೆ ತರಬೇತಿಯ ಅಗತ್ಯವಿದ್ದರೂ ಎಲ್ಲರೂ ಮಾಡಬಹುದಾದ ಮಾನಸಿಕ ತರಬೇತಿ ಕಾರ್ಯಕ್ರಮವನ್ನು ಸ್ಥೂಲವಾಗಿ
ವಿವರಿಸುತ್ತೇನೆ. 
        ಮನಸ್ಸಿನ ಶಕ್ತಿಯನ್ನು ಅರಿಯಲು ಹಾಗೂ ಅದರ ಉಪಯೋಗ ಪಡೆಯಲು ಮೊದಲನೆಯದಾಗಿ `ಸಂಕಲ್ಪ' ಮಾಡಿಕೊಳ್ಳಿ. ಸಂಕಲ್ಪ ಮಾಡಿಕೊಳ್ಳಲು  ನಿಮಗೆ ಆ ಬಗ್ಗೆ `ಬಯಕೆ' ಅಥವಾ `ಇಚ್ಛೆ' ಇರಬೇಕು. ನಿಮಗೆ ಏನು ಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ನಿಮ್ಮ ಬೇಡಿಕೆ/ಬಯಕೆ/ಗುರಿಯ ಕುರಿತಾದ ಅವಧಿ ಹಾಗೂ ಫಲ ಒಂದಳತೆಯ ಮಿತಿಯಲ್ಲಿರಲಿ.  ಆಗಿರಲಿ. ಉದಾಹರಣೆಗೆ ನಾಳೆ ಐವತ್ತುಲಕ್ಷ ರೂಪಯಿ ನನ್ನ ಬ್ಯಾಂಕ್ ಖಾತೆಯಲ್ಲಿರಬೇಕು ಅಥವಾ ಇನ್ನೊಂದು ವಾರದಲ್ಲಿ ನಾನು ಒಂದು ದೊಡ್ಡ ಮನೆಯ ಮಾಲೀಕನಾಗಬೇಕು.. ಹೀಗೆಂದುಕೊಂಡರೆ ಆಗುವುದಿಲ್ಲ. ಅದರ ಬದಲು ನಿಮ್ಮ ಪರಿಸ್ಥಿತಿ ಹಾಗೂ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಇನ್ನು ಮೂರು ಅಥವಾ ಐದುವರ್ಷಗಳಲ್ಲಿ ನನ್ನ ಖಾತೆಯಲ್ಲಿ ಐವತ್ತು ಲಕ್ಷ ರೂಪಾಯಿ ಇರುತ್ತದೆ ಎಂದುಕೊಳ್ಳಿ. ನಿಮಗೆ ಏನು ಬೇಕು ಎಂದು ಸಂಕಲ್ಪ ಮಾಡಿಕೊಂಡ ಮೇಲೆ ಆ ವಿಷಯದ ಬಗ್ಗೆ
ಆಳವಾಗಿ ಯೋಚಿಸಿ. ನಂತರ ಅದಕ್ಕೆ ಸಂಬಂಧಪಟ್ಟ ಇತರ ವಿಷಯಗಳನ್ನೂ ಸವಿಸ್ತಾರವಾಗಿ ಕಲ್ಪಿಸಿಕೊಳ್ಳಿ. ಉದಾಹರಣೆಗೆ: ನನ್ನದೇ ಆದ ಸ್ವಂತಮನೆಯೊಂದು ನನಗೆ ಬೇಕು ಎಂಬ ಬಯಕೆ ನಿಮ್ಮಲ್ಲಿದ್ದರೆ,ಇನ್ನು ಐದು ವರ್ಷಗಳಲ್ಲಿ ನಾನು ಮನೆಯೊಂದರ ಮಾಲೀಕನಾಗಿರುತ್ತದೆ. ಅದರ ವಿನ್ಯಾಸ ಹೀಗಿರುತ್ತದೆ. ಮನೆಯ ಮುಂದೆ ಒಂದು ತೋಟವಿರುತ್ತದೆ. ಸುತ್ತಮುತ್ತಲ ವಾತಾವರಣ ಹೀಗಿರುತ್ತದೆ..' ಹೀಗೆ ಸವಿಸ್ತಾರವಾಗಿ ಕಲ್ಪಿಸಿಕೊಳ್ಳಿ. 
        ನಿಮ್ಮ ಅರೆಪ್ರಜ್ಞಾಮನಸ್ಸಿನ ಜೊತೆ ಮಾತನಾಡಿ. ನಿಮ್ಮ ತೊಂದರೆ ಅಥವಾ ಬಯಕೆ ಏನೆಂದು ಅದಕ್ಕೆ ಹೇಳಿ. ಅರೆಪ್ರಜ್ಞಾಮನಸ್ಸಿನ ಜೊತೆ ಮಾತನಾದುವಾಗ ನಿಮ್ಮ ಮಾತು ಪ್ರಾಮಾಣಿಕವಾಗಿರಲಿ. ಯಾವುದೇ ಅಡ್ಡಗೋಡೆ ಇಲ್ಲದ ಹಾಗೆ ಮಾತು ಸ್ಪಷ್ಟವಾಗಿರಲಿ. ಉದಾಹರಣೆಗೆ, ಮುಲಾಜಿಗೆ ಒಳಗಾಗಿ ನಷ್ಟ ಅನುಭವಿಸುತ್ತಿದ್ದರೆ ಅದನ್ನು ಅರೆಪ್ರಜ್ಞಾಮನಸ್ಸಿಗೆ ಸ್ಪಷ್ಟವಾಗಿ ಹೇಳಿ. 'ನೋ' 
ಎಂದು ಹೇಳುವ ಬದಲು 'ಎಸ್' ಎಂದು ಹೇಳಿ ಸಿಕ್ಕಿ ಹಾಕಿಕೊಳ್ಳುತ್ತೇನೆ. ನಂತರ ಮನಸ್ಸಿಲ್ಲದಿದ್ದರೂ ಅವರೊಂದಿಗೆ ಸಮಯ ಕಳೆಯುತ್ತೇನೆ.ಅವರಿಗಾಗಿ ಸುಮ್ಮಸುಮ್ಮನೆ ನಗುತ್ತೇನೆ. ನನ್ನ ಸಮಯ ಹಾಗೂ ಹಣ ಎರಡನ್ನೂ ವ್ಯರ್ಥ ಮಾಡುತ್ತಿದ್ದೇನೆ'. ಜೊತೆಗೆ ನಾನೇಕೆ ಹಾಗೆ ಮಾಡುತ್ತಿದ್ದೇನೆ ಎಂದು ನಿಮ್ಮನ್ನೇ ಪ್ರಶ್ನಿಸಿ ಪ್ರಾಮಾಣಿಕವಾಗಿ ಕಾರಣವನ್ನು ಹುಡುಕಿ ಅರೆಪ್ರಜ್ಞಾಮನಸ್ಸಿಗೆ
ಹೇಳಿಕೊಳ್ಳಿ. `ಅವರ ಮುಂದೆ ಒಳ್ಳೆಯವನಾಗಲು ಪ್ರಯತ್ನ ಪಡುತ್ತಿದ್ದೇನೆ' ಅಥವಾ 'ಅವರಿಂದ ಮುಂದೆ ಏನಾದರೂ ಸಹಾಯ ಸಿಗಬಹುದೆಂದು ನಂಬಿಕೊಂಡಿದ್ದೇನೆ'. ನಿಮ್ಮ ಕಾರಣ ಸ್ಪಷ್ಟವಾಗಿರಲಿ. ಇನ್ನೊಂದು ಉದಾಹರಣೆ: ನೋಡಲು ಬಂದ ಗಂಡುಗಳನ್ನೆಲ್ಲಾ ಬೇಡ ಎಂದು ಹೇಳಿ ಆಮೇಲೆ ಪಶ್ಚಾತ್ತಾಪ ಪಡುವ ಹೆಣ್ಣು. ಯಾಕೆ ಹೀಗಾಗುತ್ತಿದೆ? ಯಾವುದು ನಾನು `ಹೂಂ' ಎನ್ನುವುದನ್ನು ತಡೆಯುತ್ತಿದೆ ಎನ್ನುವುದನ್ನು ಅರೆಪ್ರಜ್ಞಾಮನಸ್ಸನ್ನು ಕೇಳಿದಾಗ ಆಕೆಗೆ ಉತ್ತರ ಸಿಗುತ್ತದೆ. ಹೀಗೆ ಪದೇ ಪದೇ ನೀವು ಈ ಬಗ್ಗೆ ಕೇಳುತ್ತಿದ್ದಂತೆ ಒಂದಲ್ಲ ಒಂದು ರೀತಿಯಲ್ಲಿ ನಿಮಗೆ ಉತ್ತರ ಸಿಕ್ಕೇ ಸಿಗುತ್ತದೆ. 
        ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಲು ಅಥವಾ ನಮ್ಮ ಸಂಕಟಗಳಿಂದ ಅಥವಾ ವ್ಯಾಧಿಗಳಿಂದ ಹೊರತರಲು ಮನಸ್ಸಿಗಿರುವ
ಅತ್ಯಂತ ಶಕ್ತಿಶಾಲಿ ಆಯುಧದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ. 

No comments:

Post a Comment