Friday 25 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 19

        ನಾನು ಬಂಟವಾಳದಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದು ಉಪಾಸನೆಯಿಂದ ಇನ್ನೊಂದು ಉಪಾಸನೆಯ ನಡುವೆ ನನಗೆ ಸಾಕಷ್ಟು ಬಿಡುವು ಸಿಗುತ್ತಿತ್ತು. ಅನುಷ್ಠಾನ ಮಾಡುತ್ತಿರುವಾಗಲೂ ಸಂಜೆಯ ವೇಳೆ ನನಗೆ ಬಿಡುವು ಸಿಗುತ್ತಿತ್ತು. 'ಈ ಉಪಾಸನೆಯ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನಬಹುದೇ? ಹೋಟೆಲ್ ತಿಂಡಿ ಕಾಫಿ ಕುಡಿಯಬಹುದೇ?'  ಗುರುಗಳ ಬಳಿ ಕೇಳಿದ್ದೆ. 'ದೇವರಿಗೆ ಅರ್ಪಿಸುವ ನೈವೇದ್ಯವನ್ನುಮಾತ್ರ ನೀನೇ ಮಾಡು. ಏಕೆಂದರೆ ಹೊರಗಿನ ತಿಂಡಿಯ ಶುದ್ಧತೆಯ ಬಗ್ಗೆ ನನಗೆ ಅನುಮಾನಗಳಿವೆ. ಅದು ನಿನ್ನನ್ನು ಮುಂದೆ ಪ್ರಶ್ನೆಯಾಗಿ ಕಾಡಬಾರದು. ನೀನು ಏನು ಬೇಕಾದರೂ ತಿನ್ನಬಹುದು, ತಂತ್ರಶಾಸ್ತ್ರದಲ್ಲಿ ತಿನ್ನುವುದಕ್ಕೆ ಕಡಿವಾಣವಿಲ್ಲ. ಆರೋಗ್ಯಕ್ಕೆ ಒಳ್ಳೆಯದನ್ನು ನೋಡಿ ತಿನ್ನು. ಈರುಳ್ಳಿ, ಬೆಳ್ಳುಳ್ಳಿ ಮುಂತಾದವು ರಾಜಸಿಕ ಸ್ವಭಾವ ಬೆಳೆಸುತ್ತದೆ ಎಂದೆಲ್ಲಾ ಹೇಳುತ್ತಾರೆ. ಮನಸ್ಸನ್ನು ಗಟ್ಟಿ ಮಾಡಿದರೆ ಇವೆಲ್ಲಾ ಏನೂ ಲೆಕ್ಕಕ್ಕಿಲ್ಲ' ಎಂದು ಉತ್ತರಿಸಿ ನನಗೆ ಮಹದುಪಕಾರವನ್ನು ಮಾಡಿದರು. ಏಕೆಂದರೆ ನಾನು ರುಚಿರುಚಿಯಾಗಿ ತಿಂಡಿ ತಿನ್ನುತ್ತಿದ್ದ ಮನುಷ್ಯ. ನಾನು ನನಗಾಗಿ ಕೇವಲ ಅನ್ನ ಸಾರು ಮಾಡಿಕೊಂಡರೂ ತುಪ್ಪ ಹಾಗೂ ಅಪ್ಪೆಮಿಡಿ ಉಪ್ಪಿನಕಾಯಿ ಜೊತೆಯಲ್ಲಿರುತ್ತಿತ್ತು. ಅಲ್ಲದೇ 'ವಿಷ್ಣು ವಿಲಾಸ' ಹೋಟೆಲಿನ ಬಿಸ್ಕುಟ್ ರೊಟ್ಟಿ, ಬಿಸ್ಕುಟ್ ಆಂಬೊಡೆ, ಮಿಕ್ಸ್ಚರ್ ರೊಟ್ಟಿ, ತುಪ್ಪದ ದೋಸೆ ಮುಂತಾದವು ನನ್ನ ಮೆಚ್ಚಿನ ತಿನಿಸುಗಳಾಗಿದ್ದವು. ಅದಲ್ಲದೇ ಸಂಜೆಯ ವೇಳೆಯಲ್ಲಿ 'ಪೋಡಿ ದಾಮ್ಮ'ನ ಅಂಗಡಿಯ ಬಜೆ (ಬಜ್ಜಿ), ಅಂಬಡೆಗಳು, 'ಅರ್ಲಾ ಸುಬ್ಬ'ನ ಅಂಗಡಿಯ ಸಿಹಿತಿನಿಸುಗಳು, 'ಮುಕುಂದ'ನ ಅಂಗಡಿಯ ಚುರುಮುರಿ... ಇವೆಲ್ಲವೂ ತಿನ್ನುತ್ತಿದ್ದೆ. ಒಂದೇ ದಿನ ಅಲ್ಲ, ಬೇರೆ ಬೇರೆ ದಿನ ! 
        ಸಂಜೆಯಾದಮೇಲೆ ಯಶವಂತ ವ್ಯಾಯಾಮ ಶಾಲೆಯಲ್ಲಿ ಪ್ರತಿ ದಿನ ಎನ್ನುವಂತೇ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ್ ಬಾಳಿಗಾ ಸಿಗುತ್ತಿದ್ದರು. ಭಾಮೀ ಸುಧಾಕರ್, ಸುಬ್ರಾಯ ಬಾಳಿಗಾ, ಗುರು ಮುಂತಾದವರಲ್ಲದೇ ಹಲವು ಗೆಳೆಯರು ಅಲ್ಲಿ ಸಿಗುತ್ತಿದ್ದರು. ಎಲ್ಲರೂ ಒಂದಲ್ಲ ಒಂದು ರೀತಿ ನನಗೆ ನೆರವಾದವರೇ. ಭವಾನಿ ಅಕ್ಕನ ಮನೆಗೆ ಹೋದರೆ ಏನಾದರೂ ತಿನ್ನಿಸದೇ ಬಿಡುತ್ತಿರಲಿಲ್ಲ. ದೇವಸ್ಥಾನದ ಎದುರಿಗಿರುವ ಶ್ರೀ ಕೃಷ್ಣ ಮಠಕ್ಕೆ ಹೋದರೆ ಜನ್ನ ಭಟ್ಟರ ಶ್ರೀಮತಿಯವರೂ ಪ್ರೀತಿಯಿಂದ ಏನಾದರೂ ತಿನ್ನಲು ಕೊಡುತ್ತಿದ್ದರು. ನನ್ನ ದೊಡ್ಡಪ್ಪ ರಾಮ್ ನಾಯಕ್ ಹಾಗೂ ದೊಡ್ಡಮ್ಮ ಪ್ರೇಮಾ ನಾಯಕ್ ಅವರು ತುಂಬಾ ಆತ್ಮೀಯತೆಯಿಂದ ನೋಡಿಕೊಳ್ಳುತ್ತಿದ್ದರು. ಇವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸಲು ಇದೊಂದು ಅವಕಾಶವೆಂದು ಭಾವಿಸಿ, ಈ ಮೂಲಕ ನನ್ನ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ. 
        ನಾನು ಏನು ಮಾಡುತ್ತಿದ್ದೇನೆಂದು ಯಾರ ಬಳಿಯೂ ವಿವರವಾಗಿ ಹೇಳಿಕೊಳ್ಳುತ್ತಿರಲಿಲ್ಲ. ಕೆಲ ದಿನಗಳಿಗಾಗಿ ಮಾತ್ರ ಬರುತ್ತಿದ್ದ ನನ್ನ ಗುರುಗಳಂತೂ ಯಾರನ್ನೂ ಭೇಟಿಯಾಗಲು ಸಿದ್ಧರಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಎಂದು, ಬಂದದ್ದು ಹೋಗಿದ್ದು ಎರಡೂ ಗೊತ್ತಾಗದಂತೆ ಇರುತ್ತಿದ್ದರು. 
        ನಾನು ಮೊದಲಿನಿಂದಲೂ ಸಾಮಾನ್ಯ ಮನುಷ್ಯನ ಹಾಗೆ ನನಗೆ ಬೇಕಾದ ರೀತಿಯಲ್ಲಿ ಬದುಕಲು ಇಷ್ಟ ಪಡುತ್ತಿದ್ದೆ. ನಾನು ಯಾರಿಗೂ ಯಾವ ಗುಟ್ಟು ಬಿಟ್ಟುಕೊಡದಿದ್ದರೂ, ನಮ್ಮ ಓಣಿಯಲ್ಲಿಯೇ ಇದ್ದ ಹರಿಭಟ್ಟರು ಒಮ್ಮೆ ಬೆಳಗಿನ ಜಾವ ನದಿಯ ಬಳಿ ಹೋಗುತ್ತಿದ್ದಾಗ ಗಮನಿಸಿದರು. ಆನಂತರ ಹಲವಾರು ಬಾರಿ ನನ್ನನ್ನು ಗಮನಿಸಿ ನಾನು ಏನು ಮಾಡುತ್ತಿದ್ದೇನೆಂದು ಅವರಾಗಿಯೇ ತಿಳಿದುಕೊಂಡರು. ಅವರ ಬಳಿ ಮಾತ್ರ ನಾನು ಮುಕ್ತವಾಗಿ ನನ್ನ ಸಾಧನೆಯ ಬಗ್ಗೆ ಮಾತನಾಡುತ್ತಿದ್ದೆ. ಅವರಿಗೆ ಕೂಡಾ ದೇವರ ಉಪಾಸನೆಯ ಬಗ್ಗೆ ಒಲವಿತ್ತು. ವೇದಗಳಲ್ಲಿ ಪರಿಣಿತರು. ನನ್ನ ಹಲವು ಸಮಸ್ಯೆಗಳಿಗೆ ವೇದಸೂಕ್ತಗಳಿಂದ ಉತ್ತರ ಕೊಡುತ್ತಿದ್ದರು. ಅವರಿಗೂ ನನ್ನದೊಂದು ಹೃತ್ಪೂರ್ವಕ ನಮನ. 'ಮಾಣೂರು ಅಚ್ಚು' ನನಗೆ ಅಚ್ಚುಮೆಚ್ಚಾಗಿದ್ದರು. ನಾನು ಏನು ಕೇಳಿದರೂ ಅದು ಎಷ್ಟೇ ಕಷ್ಟವಾದರೂ ಅವರು ಅದನ್ನು ಪೂರೈಸುತ್ತಿದ್ದರು. ಇಂದು ಆತ ನಮ್ಮೊಡನೆ ಇಲ್ಲ ಎನ್ನುವುದೇ ತುಂಬಾ ಬೇಸರದ ಸಂಗತಿ. 
        ಕೆಲವೊಮ್ಮೆ ನನಗೆ ಕೆಲವು ಸಮಸ್ಯೆಗಳನ್ನು ನಿವಾರಿಸುವ ಕೆಲಸ ಬಂದೊದಗುತ್ತಿತ್ತು. ಉದಾಹರಣೆಗೆ 'ಒಂದು ಹುಡುಗಿಯ ಮೈಮೇಲೆ ದೆವ್ವವೊಂದು ಬಂದು ಕಾಡುತ್ತಿದೆ, ನೀವು ಸರಿ ಮಾಡಲು ಸಾಧ್ಯವೇ?' ಎಂದು ಕೇಳಿದಾಗ ನಾನು ಒಪ್ಪಿಕೊಂಡು ಹೋಗಿ (ಸಮ್ಮೋಹಿನೀ ವಿದ್ಯೆಯಿಂದ) ಆಕೆಯ ಮನಃಸ್ವಾಸ್ಥ್ಯವನ್ನು ಸರಿಪಡಿಸಿ ಬರುತ್ತಿದ್ದೆ. ಇಂತಹ ಹತ್ತು ಹಲವು ಕೆಲಸಗಳಿಂದ ಒಂದಷ್ಟು ಜನರಿಗೆ ಹತ್ತಿರವಾಗಿದ್ದೆ. 
        ನಾನು ಹೊರಡುವ ದಿನ ಹತ್ತಿರ ಬರುತ್ತಿದ್ದಂತೇ ಒಂದು ದಿನ ಮಾಣೂರು ಅಚ್ಚು ನನ್ನ ಬಳಿ ಬಂದು, ಒಂದು ಪಂಚೆ, ಒಂದು ಚೌಕ ನನಗೆ ಕೊಟ್ಟು 'ಇದು ನನ್ನ ಕಡೆಯಿಂದ'  ಎಂದು ಹೇಳಿ ಒಂದು ಶಾಲನ್ನು ಹೊದೆಸಿದ. 'ನೀನು ಇಲ್ಲಿಯೇ ಇರುವ ಹಾಗಿದ್ದರೆ ಒಂದು ಸಣ್ಣ ಜಾಗದಲ್ಲಿ ಒಂದು ಮನೆಯನ್ನು ಕಟ್ಟಿ ಕೊಟ್ಟು, ಒಂದಷ್ಟು ಹಣವನ್ನು ನಿನ್ನ ಹೆಸರಲ್ಲಿ ಬ್ಯಾಂಕಲ್ಲಿ ಹಾಕಿಡಲು ನನ್ನ ಕೆಲವು ಗೆಳೆಯರು ಹಾಗೂ ಸಂಬಂಧಿಕರು ಸಿದ್ಧರಿದ್ದಾರೆ' ಎಂದು ಆತ ಹೇಳಿದಾಗ ನಂಗೆ ಅಚ್ಚರಿ ಹಾಗೂ ನಗು!
'ಅಂತೂ ನನಗೆ ಗುರುವಿನ ಪಟ್ಟ ಕಟ್ಟಿ ಇಲ್ಲಿಯೇ ಕೂರಿಸುವ ಇರಾದೆ ನಿಮಗೆ, ಆದರೆ ಅದು ಸಾಧ್ಯವಿಲ್ಲ. ಏಕೆಂದರೆ ನಾನು ಮನೆಯಲ್ಲಿ ಎರಡು ವರ್ಷಗಳ ನಂತರ ಹಿಂತಿರುಗಿ ಬರುತ್ತೇನೆಂದು ಮಾತುಕೊಟ್ಟು ಬಂದಿದ್ದೇನೆ' ಎಂದು ಹೇಳಿದೆ. ಆತನ ಪ್ರೀತಿಯನ್ನು ನಾನೆಂದೂ ಮರೆಯಲಾರೆ. 
        ಬೆಂಗಳೂರಿಗೆ ಬಂದ ಮೇಲೆ ನಾನು ನನ್ನ ಹವ್ಯಾಸವಾಗಿದ್ದ
ಛಾಯಾಚಿತ್ರಗಾರಿಕೆಯನ್ನು ನನ್ನ ಕಸುಬಾಗಿ ಮಾಡಿಕೊಂಡೆ.
'ಗುರು'ವಾಗುವ ಬದಲು ಸಿನೆಮಾ ಪತ್ರಿಕೆಗಳ 'ಗ್ಲಾಮರ್' ಛಾಯಾಗ್ರಾಹಕನಾದೆ. 


ಬೆಂಗಳೂರಿಗೆ ಬಂದು ಒಂದೆರಡು ವರ್ಷಗಳ ನಂತರ ಬೀರುವಿನಲ್ಲಿ ಇಟ್ಟಿದ್ದ 'ಅಚ್ಚು' ನೀಡಿದ್ದ ಬಟ್ಟೆಗಳನ್ನು ಒಮ್ಮೆ ಕಂಡೆ. ಗಡ್ಡವನ್ನು ಹೇಗೂ ಬಿಟ್ಟಿದ್ದೆ. 'ಗುರುವಾಗಿದ್ದರೆ ಹೇಗಿರುತ್ತಿದ್ದೆ' ಎಂದು ಯೋಚಿಸಿ ಆ ಚೌಕವನ್ನು ತಲೆಗೆ ಸುತ್ತಿಕೊಂಡು ಆ ಶಾಲನ್ನು ಹೊದ್ದುಕೊಂಡು ಒಂದೆರಡು ಚಿತ್ರಗಳನ್ನು ತೆಗೆಸಿಕೊಂಡೆ. 



        ತಂತ್ರ ವಿದ್ಯೆ ಎಲ್ಲರಿಗೂ ಅಲ್ಲ. ಅದರಲ್ಲಿರುವ ಸಾಧಕ ಬಾಧಕಗಳೇನು?  'ತಂತ್ರ'ವನ್ನು ಮನೋವಿಜ್ಞಾನದ ದೃಷ್ಠಿಯಲ್ಲಿ ನೋಡುವುದು ಹೇಗೆ ?       
....ಮುಂದಿನ ಸಂಚಿಕೆಯಲ್ಲಿ.                                  

Wednesday 23 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 18

        'ಕುಲಕುಂಡಲಿನೀ ಯೋಗ' ತಾಂತ್ರಿಕ ಸಾಧನೆಯ ಅಂತಿಮ ಗುರಿ. ಇದರ ಬಗ್ಗೆ ಸಣ್ಣ ವಿವರಣೆ ಕೊಡುತ್ತೇನೆ. ಮೂಲಾಧಾರದಲ್ಲಿರುವ ಶಕ್ತಿಯನ್ನು, ಷಟ್ ಚಕ್ರಗಳನ್ನು ಬೇಧಿಸಿ ಸಹಸ್ರಾರದಲ್ಲಿರುವ ಶಿವನಲ್ಲಿ ಒಂದಾಗಿಸುವ ಕ್ರಿಯೆಯೇ ಕುಲಕುಂಡಲಿನೀ ಯೋಗ. ಇದಕ್ಕೂ ಮುಂಚೆ ಯೋಗ ಶಾಲೆಯಲ್ಲಿ ನನಗೆ ಕುಂಡಲಿನೀ ಶಕ್ತಿಯ ಕುರಿತಾದ ಕೆಲವು ಪ್ರಯೋಗಗಳನ್ನು ಮಾಡಿಸಿದ್ದರು. ಹಠಯೋಗದ 'ತಾಡನ' ಕ್ರಿಯೆ ಕುಂಡಲಿನೀ ಶಕ್ತಿಯನ್ನು ಉದ್ದೀಪನಗೊಳಿಸುವ ಅಂತಹ ಒಂದು ಕ್ರಿಯೆ.ಈ ಶಕ್ತಿಯ ಬಗ್ಗೆ ವಿವರಗಳನ್ನು ಒತ್ತಟ್ಟಿಗಿಟ್ಟು ಹೇಳಬಹುದಾದ ನನ್ನ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತೇನೆ. 
        ಸಾಧಾರಣವಾಗಿ ತಂತ್ರವಿದ್ಯೆಯ ಸಾಧನೆಯನ್ನು ಮೂರು ಭಾವಗಳಲ್ಲಿ ಕಲಿಸಲಾಗುತ್ತದೆ. ಅವುಗಳಲ್ಲಿ ಪಶುಭಾವ ಘೋರವಾಗಿರುವಂತೆ ಭಾಸವಾಗುತ್ತದೆ. ವೀರಭಾವ ಕಠೋರವಾಗಿದ್ದು, ದಿವ್ಯಭಾವ ಮನಸ್ಸಿನ ಉತ್ಕಟಸ್ಥಿತಿಗೆ ಸಾಕ್ಷಿಯಾಗುತ್ತದೆ. 
           ತಂತ್ರದ ಪಂಚಮಕಾರಗಳನ್ನೊಳಗೊಂಡ  ಸಾಧನೆಯಲ್ಲಿ `ಮೈಥುನ'ದ ಪ್ರಶ್ನೆ ಬಂದಾಗ ನಾನು ಗುರುಗಳ ಬಳಿ ಆ ಬಗ್ಗೆ ನನ್ನ ವಿರೋಧ ವ್ಯಕ್ತ ಪಡಿಸಿದ್ದೆ. `ಮೈಥುನ'ವೆಂದರೆ ಹೆಣ್ಣೊಬ್ಬಳೊಂದಿಗೆ ಲೈಂಗಿಕ ಸಂಪರ್ಕ. ಅದು ಸುತರಾಂ ನನ್ನ ಮನಸ್ಸಿಗೆ ಒಪ್ಪಿಗೆಯಾಗಿರಲಿಲ್ಲ. 
        'ಮಿಥುನ'ದ  ತಾತ್ಪರ್ಯವನ್ನು ಗುರುಗಳು ಆಗ ನನಗೆ ವಿವರಿಸಿ ಹೇಳಿದರು. ಪಶುಭಾವದ 'ಮಿಥುನ' ಸಾಧಾರಣ ಜನರು ಅನುಭವಿಸುವ ಸುಖ. ಅಲ್ಲಿ ನಾನು ಸುಖ ಪಡಬೇಕು ಎನ್ನುವುದಷ್ಟೇ ಮುಖ್ಯವಾಗಿರುತ್ತದೆ. ತನ್ನ ಸಂಗಾತಿಯ ಬೇಕು ಬೇಡಗಳ ಬಗ್ಗೆ ಆತ ಯೋಚಿಸುವುದೇ ಇಲ್ಲ. ವೀರಭಾವದ ಮಿಥುನದಲ್ಲಿ ತಾನು ಸುಖ ಪಡುವುದಕ್ಕಿಂತ ತನ್ನ ಸಂಗಾತಿ ಸುಖದ ಚರಮಾವಸ್ಥೆ ಪಡೆಯಲಿ ಎನ್ನುವುದು ಮುಖ್ಯವಾಗಿರುತ್ತದೆ. ಆದರೆ ತಾನೂ ಸುಖದಲ್ಲಿ ಭಾಗಿಯಾಗಿಯೇ ಇರುತ್ತಾನೆ. ದಿವ್ಯಭಾವದಲ್ಲಿ ದೈಹಿಕ ಸುಖಕ್ಕಾಗಿ ಸಂಗಾತಿಯನ್ನು ಸೇರು ಪ್ರಶ್ನೆಯೇ ಇರುವುದಿಲ್ಲ. (ಈ ಭಾವಗಳ ಕ್ರಿಯೆ ಗಂಡು, ಹೆಣ್ಣು ಇಬ್ಬರಿಗೂ ಸಮಾನವಾಗಿಯೇ ಅನ್ವಯವಾಗುತ್ತದೆ)
        ದಿವ್ಯಭಾವದಲ್ಲಿಯೂ ಕೂಡ ಪಂಚಮಕಾರದ ಭಾಗವಾದ 'ಮಿಥುನ'ದಲ್ಲಿ  ಹೆಣ್ಣನ್ನು ಸೇರುವ ಮೊದಲು ಆಕೆಯನ್ನು (ಆಕೆಯೂ ತಂತ್ರಸಾಧಕಿ ಆಗಿರುತ್ತಾಳೆ) ದೇವಿಯಂತೆ ಪೂಜಿಸಲಾಗುತ್ತದೆ. ದೇವಿಯನ್ನು ಸ್ಮರಿಸುತ್ತಾ ಸಾಧಕಿಯನ್ನು ಸಾಧಕ ಸೇರಬೇಕಾಗುತ್ತದೆ. ಇಲ್ಲಿ ಸಾಧಕ ದೈಹಿಕವಾಗಿ ಆಕೆಯನ್ನು ಸೇರಿದರೂ ಮನಸ್ಸನ್ನು ದೇವಿಯ ಪಾದಗಳಲ್ಲಿ ಸ್ಥಿರವಾಗಿರಿಸಬೇಕೇ ವಿನಃ ದೈಹಿಕ ಆನಂದದಲ್ಲಿ ಒಂದು ಕ್ಷಣವೂ ಮೈಮರೆಯುವಂತಿಲ್ಲ. ಕೇಳಲೇ ಘೋರವಾಗಿರುವ ಈ ಸಾಧನೆಯನ್ನು ನಾನು ನಿರಾಕರಿಸಿದೆ. ಮದುವೆಯಾಗುವ ಮುನ್ನ ಹೆಣ್ಣೊಬ್ಬಳೊಡನೆ ಲೈಂಗಿಕ ಸಂಪರ್ಕವಾಗುವುದು ನನಗಿಷ್ಟವಿರಲಿಲ್ಲ. 
          ನನ್ನ ನಿಲುವನ್ನು ಬದಲಿಸಲು ನನ್ನ ಗುರುಗಳು ಬಹಳ ಪ್ರಯತ್ನ ಪಟ್ಟರು. ಈ 'ದಿವ್ಯಮಿಥುನ' ನಿನಗೆ ಕುಲಕುಂಡಲಿನೀ ಯೋಗದ ಸಚ್ಚಿದಾನಂದ ಸ್ಥಿತಿಗೆ ತಲುಪಲು ಬಹು ಮುಖ್ಯ ಸಾಧನವಾಗುತ್ತದೆ ಎಂದು ಹೇಳಿದರಲ್ಲದೇ, ಕೊನೆಗೊಮ್ಮೆ 'ನೀನು ಪಂಚಮಕಾರದಲ್ಲಿ ಈ ಹಂತವನ್ನು ದಾಟುವುದು ಖಚಿತ' ಎಂದು ಭವಿಷ್ಯವನ್ನೂ ಕೂಡ ಹೇಳಿಬಿಟ್ಟರು! 
         ಮುಂದೊಂದು ದಿನ ಪ್ರತಿನಿತ್ಯದಂತೆ ನಾನು ಬೆಳಿಗ್ಗೆ ಮೂರುಗಂಟೆಗೆ ಎದ್ದು ಸ್ನಾನ ಮಾಡಲು ನದೀತೀರಕ್ಕೆ ಹೋದಾಗ ಅಂದು ನದಿಯಲ್ಲಿ ತುಂಬಾ ಸೆಳೆತವಿತ್ತು. ಹಾಗಾಗಿ ನಾನು ಸ್ವಲ್ಪ ಮುಂದಿರುವ ಲಿಂಗದೇವಸ್ಥಾನದ ತಟದ ಬಳಿ ಸ್ನಾನ ಮಾಡಲು ಹೋದೆ. ಏಕೆಂದರೆ ಅಲ್ಲಿ ದೊಡ್ಡ ಕಲ್ಲುಗಳು ನದಿಗೆ ಅಡ್ಡವಿರುವುದರಿಂದ, ಆ ಕಲ್ಲಿನ ಬಳಿ ನದಿಯ ನೀರು ಹೆಚ್ಚಿನ ಸೆಳೆತವಿಲ್ಲದೇ ಸ್ವಲ್ಪ ಮಟ್ಟಿಗೆ ಶಾಂತವಾಗಿರುತ್ತಿತ್ತು. 



        ಆ ದೊಡ್ಡ ಕಲ್ಲುಗಳ ಮುಂದೆ ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಲ್ಲೂ ನೀರಿನ ಸೆಳೆತ ಆರಂಭವಾಯಿತು. ನಾನು ಅದರಲ್ಲಿ ಕೊಚ್ಚಿಕೊಂಡು ಹೋಗದಂತೆ ಎದುರಿಗಿದ್ದ ಎರಡು ಕಲ್ಲಿನ ತುದಿಗಳನ್ನು ನನ್ನ ಕೈಗಳಿಂದ ಹಿಡಿದುಕೊಂಡೆ. ಆದರೂ ಆ ಕಲ್ಲುಗಳ ಮಧ್ಯದಿಂದ ಬಂದ ನೀರಿನ ಹೊಡೆತಕ್ಕೆ ನನ್ನ ಇಡೀ ದೇಹ ಮೇಲೆದ್ದಿತು. ಆದರೂ ಕಲ್ಲುಗಳನ್ನು ಆಧಾರವಾಗಿ ಬಲವಾಗಿ ಕೈಗಳಿಂದ ಹಿಡಿದುಕೊಂಡಿದ್ದರಿಂದ ದೇಹ ನದಿಯಲ್ಲಿ ತೇಲುತ್ತಿತ್ತು. ನದಿಯ ನೀರಿನ ಹೊಡೆತಕ್ಕೆ ದೇಹ ಮೇಲೆ ಕೆಳಗೆ ಹೊಯ್ದಾಡುತ್ತಿತ್ತು. ಅದೇನು ಭಾವ ಮೂಡಿತ್ತೋ ಏನೋ, ಆ ಕ್ಷಣದಲ್ಲಿ ನದಿ ಒಂದು ಹುಡುಗಿಯಂತೆ, ನಾನು ಕೈಯಿಟ್ಟ ಕಲ್ಲುಗಳು ವಕ್ಷಸ್ಥಳದಂತೆ ಮೃದುವಾಗಿ ಭಾಸವಾಗಿ, ಪದೇ ಪದೇ ದೇಹದ ಹೊಯ್ದಾಟದ ಪರಿಣಾಮವಾಗಿ ಅಲ್ಲಿ ವೀರ್ಯಸ್ಖಲನವಾಗಿ ಹೋಯಿತು. 
        ಅದಾದ ಒಡನೆಯೇ  ನನ್ನಲ್ಲಿ ಅಪರಾಧೀ ಮನೋಭಾವ ಮೂಡಿತು. ಸ್ನಾನ ಮಾಡುವ ಮುನ್ನ ನದಿಯನ್ನು ದೇವರೆಂದು ಭಾವಿಸಿ ಸ್ತೋತ್ರ ಹೇಳಿ ಸ್ನಾನ ಮಾಡುತ್ತೇವೆ. ಇಂತಹ ದೈವಸಮಾನವಾದ ನದಿಯನ್ನು ಮಲಿನಗೊಳಿಸಿ ತಪ್ಪು ಮಾಡಿದೆ ಎಂಬ ಪಶ್ಚಾತಾಪ ಭಾವನೆ ಮೂಡಿತು.
        ಈ ಘಟನೆಯನ್ನು ಗುರುಗಳ ಬಳಿ ನೋವಿನಿಂದ ಹೇಳಿಕೊಂಡೆ. ಆಗ ಅವರು `ಆಯಿತು.. ಮಿಥುನವೂ ಆಯಿತು..ನೋಡು ನೀನು ದೈವೀಭಾವದಿಂದ ಹುಡುಗಿಯನ್ನು ಸೇರಲು ನಿರಾಕರಿಸಿದೆ. ಈಗ ನೋಡು ನದಿಯ ಬಗ್ಗೆ ನಿನಗೆ ಸಹಜವಾಗಿಯೇ ದೈವೀಭಾವನೆ ಇದೆ. ಅಲ್ಲಿಯೇ ಮಿಥುನವೂ ಆಗಿದೆ. ಇಂದಿನಿಂದ ನಿನಗೆ ದೈವ ಭಾವದ ಕುಲಕುಂಡಲಿನೀ ಯೋಗದ ಶಿಕ್ಷಣ' ಎಂದು ಹೇಳಿಬಿಟ್ಟರು
        'ದಿವ್ಯಭಾವ' ಎಂದು ಕರೆಯಲ್ಪಡುವ ದೈವ ಸಾಕ್ಷಾತ್ಕಾರದ ಹಾದಿ (ಜಡಶಿವನನ್ನು ಶಕ್ತಿಯು ಸೇರುವ ಕುಲಕುಂಡಲಿನೀ ಯೋಗ)ಯನ್ನು ನನಗೆ ನಂತರ ಭೋಧಿಸಲಾಯಿತು. ನಿರ್ವಿಕಲ್ಪ ಸಮಾಧಿ ಎನ್ನುವ ಅಂತಿಮಸ್ಥಿತಿಯನ್ನು ತಲುಪಲು ಗುರುಗಳು ನನ್ನನ್ನು ಅನುವುಗೊಳಿಸಿದರು. 
        ಕೆಲವು ದಿನಗಳು ಕಳೆದವು. ನನ್ನ ಸಾಧನೆ ಮುಂದುವರೆಯುತ್ತಲೇ ಇತ್ತು. ಈ ಸಾಧನೆ ಮುಂದುವರೆಯುತ್ತಿದ್ದಂತೇ ಒಂದು ಹಂತದಲ್ಲಿ ನಾನು ನನ್ನ ತಾಂತ್ರಿಕ ಸಾಧನೆಯನ್ನೇ ನಿಲ್ಲಿಸಿಬಿಟ್ಟೆ.
        ನಿರ್ವಿಕಲ್ಪ ಸಮಾಧಿಯ ಸಾಧನೆ ಮುಂದುವರಿಸುತ್ತಿದ್ದಾಗ ಆ ಪ್ರಚಂಡ ಪ್ರಕೃತೀ ಶಕ್ತಿಯಲ್ಲಿ ಲೀನವಾದರೆ ನಾನು ನನ್ನನ್ನೇ ಮರೆತುಬಿಡುವೆನೇನೋ ಎನ್ನುವಂತಹ ಭಾವನೆ ಅಂದು ನನಗೆ ಬಲವಾಗುತ್ತಾ ಹೋಯಿತು. ನಾನು ಸತ್ತರೂ ಸಾಯಬಹುದು ಎಂದೂ ಅನ್ನಿಸಿತ್ತು. ಅದಲ್ಲದೇ ನನ್ನ ತಂದೆ ತಾಯಿಗೆ 'ಎರಡು ವರ್ಷಗಳ ಬಳಿಕ ಖಂಡಿತ ಬರುತ್ತೇನೆ ಹಾಗೂ ನಿಮ್ಮೊಂದಿಗಿರುತ್ತೇನೆ' ಎಂದು ಮಾತು ಕೊಟ್ಟಿದ್ದೆ. ಗುರುಗಳನ್ನು ಭೇಟಿಯಾಗಲು ಮಂಗಳೂರಿಗೆ ಹೋದಾಗ, ನನ್ನ ಗುರುಗಳು ಬೇರೊಂದು ಕಾರ್ಯನಿಮಿತ್ತ ಉತ್ತರ ಭಾರತಕ್ಕೆ ತೆರಳಿದ್ದಾರೆಂದು ತಿಳಿಯಿತು. 
        ಆಗ ನನಗೆ ನನ್ನ ಗುರುಗಳು ಹೇಳಿದ ಮಾತುಗಳು ನೆನಪಾದವು. 'ನಾನಿಲ್ಲದಿರುವಾಗ ಯಾವುದಾದರೂ ಸಂಧಿಗ್ಧ ಪರಿಸ್ಥಿತಿ ಉಂಟಾದರೆ ನಿಮ್ಮ ಸಮಾಜದ ಗುರುಗಳಲ್ಲಿ ಸಂದೇಹ ಪರಿಹರಿಸಿಕೊಳ್ಳಬಹುದು' 
        ನಮ್ಮ ಸಮಾಜದ ಗುರುಗಳಾದ ಕಾಶೀಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ತೀರ್ಮಾನಿಸಿದೆ. ನಮ್ಮ ದೇಗುಲದ ಸನಿಹವಿದ್ದ ಶ್ರೀ ಹರಿಭಟ್ಟರಿಗೆ ಮಾತ್ರ ನಾನು ಮಾಡುತ್ತಿದ್ದ ಸಾಧನೆಗಳ ಬಗ್ಗೆ ತಿಳಿದಿತ್ತು. ಆದ್ದರಿಂದ ಅವರೊಂದಿಗೆ ಚಾತುರ್ಮಾಸದಲ್ಲಿದ್ದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಲು ಹೊರಟೆ. ಹೊರಡುವ ಮುನ್ನ ನನ್ನೆಲ್ಲಾ ವಿವರಗಳನ್ನು ಪತ್ರಮುಖೇನ ಸ್ವಾಮೀಜಿಯವರಿಗೆ ಬರೆದು ತಿಳಿಸಿದ್ದೆ.       

ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು

  ನನ್ನನ್ನು ಕಂಡೊಡನೆ ಪ್ರೀತಿಯಿಂದ ಬರ ಮಾಡಿಕೊಂಡ ಸ್ವಾಮೀಜಿಯವರು ನನ್ನೊಡನೆ ಸುಮಾರು ಮೂರು ಗಂಟೆಗಳ ಕಾಲ ಕಳೆದರು. ನನ್ನಿಂದ ಪ್ರತಿಯೊಂದು ವಿವರ ಪಡೆದುಕೊಂಡ ಸ್ವಾಮೀಜಿಯವರು ಪ್ರಶ್ನೆಯೊಂದನ್ನು ಕೇಳಿದರು. 
'ನಿಮಗೆ ಸಾಂಸಾರಿಕ ಜೀವನದ ಸುಖಗಳಲ್ಲಿ ಆಸಕ್ತಿಯಿದೆಯೇ ?'
'ಆಸಕ್ತಿಯೇನೋ ಬಹಳಷ್ಟಿದೆ. ಬೇಕೆಂದಾದಲ್ಲಿ ನಾನದನ್ನು ನಿಗ್ರಹಿಸಿಕೊಳ್ಳಬಲ್ಲೆ' ಎಂದು ನನಗನ್ನಿಸಿದ್ದನ್ನು ನಾನು ಹೇಳಿದೆ. 
'ನಿಗ್ರಹಿಸುವುದೇ ಬೇರೇ.. ಆಸಕ್ತಿಯೇ ಬೇರೆ, ನಮ್ಮ ಉದಾಹರಣೆಯನ್ನು ತೆಗೆದುಕೊಳ್ಳಿ. ನಮಗೆ ಆಸಕ್ತಿಯೇ ಇರಲಿಲ್ಲ. ಆಸಕ್ತಿಯಿದ್ದೂ ನಿಗ್ರಹಿಸಿಕೊಂಡರೆ ಕೆಲಕಾಲ ಅದು ಸಫಲವಾಗಬಹುದು. ಆದರೆ ಗುಪ್ತವಾಗಿರುವ ಆ ಆಸಕ್ತಿ ಒಮ್ಮೆ ಹೆಡೆಯೆತ್ತಿದರೆ ಅದು ಮನೋರೋಗಕ್ಕೆ ಎಡೆ ಮಾಡಿಕೊಡಬಹುದು. ಆದ್ದರಿಂದ ಸಾಂಸಾರಿಕ ಜೀವನವೇ ನಿಮಗೆ ಒಳಿತು. ಸಂಸಾರದಲ್ಲಿದ್ದೂ ಸಾಧನೆ ಮಾಡಬಾರದೆಂಬ ಯಾವ ನಿಯಮವೂ ಇಲ್ಲ. ಸಂಸಾರಿಗಳಿಗೆ ತಪ್ಪು ಮಾಡಿದರೆ ಕ್ಷಮೆಯಿದೆ. ಸಾಧಕರು, ಸನ್ಯಾಸಿಗಳು ಮಾಡುವ ತಪ್ಪಿಗೆ ಕ್ಷಮೆಯಿಲ್ಲ. ಈಗ ನಿಲ್ಲಿಸಿದರೂ ಮುಂದೆ ಸಾಧನೆಯನ್ನು ಮುಂದುವರೆಸಬಹುದು. ಹಾಗೆ  ನೋಡಿದರೆ ಸನ್ಯಾಸಿಗಳಿಗಿಂತ ಹೆಚ್ಚು ಸಂಸಾರಿಗಳಿಗೇ ದೇವರ ಸಾಕ್ಷಾತ್ಕಾರವಾಗಿರುವುದು' ಎಂದು ಹೇಳಿ ಮುಗುಳ್ನಗುತ್ತಾ 'ಮುಂದಿನ ತೀರ್ಮಾನ ನಿಮ್ಮದು' ಎಂದು ಹೇಳಿ ಫಲ-ತಾಂಬೂಲ ಕೊಟ್ಟು 'ನಿಮಗೆ ಒಳ್ಳೆಯದಾಗಲಿ' ಎಂದು ಹರಸಿ ಕಳಿಸಿದರು.  
       ಎರಡು ವರ್ಷಗಳ ಕಾಲ ಅಂದಿನ ನನ್ನ ಜೀವನಶೈಲಿ, ನನ್ನ ಗೆಳೆಯರು, ನನಗೆ ನೆರವಾದವರು ಈ ಬಗ್ಗೆ ಮುಂದೆ ಬರೆಯುತ್ತೇನೆ. ಬೆಂಗಳೂರಿಗೆ ಹೊರಡುವ ತಯಾರಿಯಲ್ಲಿದ್ದಾಗ ಗೆಳೆಯ ಮಾಣೂರು ಅಚ್ಚು ಹೇಳಿದ ಮಾತೇನು?
 .... ಮುಂದಿನ ಸಂಚಿಕೆಯಲ್ಲಿ.  

Monday 21 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 17

        ನಂತರ ನಿಗದಿತ ದಿನದಂದು ಗುರುಗಳು ಬಂದರು. ಈ ಬಾರಿ ನಿನ್ನೊಡನೆಯೇ ಇರುತ್ತೇನೆ.  'ವಾಮಮಾರ್ಗವನ್ನು ಇಣುಕಿ ನೋಡುವ ಆಸಕ್ತಿಯಿದೆಯೇ?' ಎಂದು ಕೇಳಿದಾಗ ಸುಮ್ಮನೆ ತಲೆ ಆಡಿಸಿದ್ದೆ. 'ಆದರೆ ಅದಕ್ಕಾಗಿ ನೀನು ನನ್ನೊಡನೆ ಕಾಶಿಗೆ ಬರಬೇಕಾಗುತ್ತದೆ' ಎಂದೂ ಹೇಳಿದರು. ಹಿಂದೆ ಮುಂದೆ ನೋಡದೇ ಒಪ್ಪಿದೆ. 
        ಈ ವಿಷಯದ ಬಗ್ಗೆ ಗೋಪ್ಯತೆ ಕಾಪಾಡುವಂತೆ ಗುರುಗಳು ಹೇಳಿದ್ದರಿಂದ, ಗೆಳೆಯರ ಬಳಿ ಕಾಶಿಗೆ ಹೋಗುವುದಾಗಿ ಹೇಳಲಿಲ್ಲ. ಬದಲಿಗೆ ಬೆಂಗಳೂರಿಗೆ ಕೆಲ ದಿನಗಳ ಮಟ್ಟಿಗೆ ಹೋಗುವುದಾಗಿ ತಿಳಿಸಿದ್ದೆ.
        ಈ ಸಾಧನೆಯ ಬಗ್ಗೆಯೂ ನಾನು ವಿವರವಾಗಿ ಬರೆಯಲು ಹೋಗುವುದಿಲ್ಲ, ಮಂತ್ರಗಳ ಬಗ್ಗೆಯೂ ಬರೆಯಲು ಹೋಗುವುದಿಲ್ಲ. 'ಏನದು?' ಎಂದು ಮಾತ್ರ ಸೂಕ್ಷ್ಮವಾಗಿ ಹೇಳಲು ಬಯಸುತ್ತೇನೆ.
        ವಾಮಮಾರ್ಗದಲ್ಲಿ ತಾಂತ್ರಿಕ ದೇವತೆಗಳೆಂದು ಕರೆಯಲ್ಪಡುವ ದೇವತೆಗಳ ಆರಾಧನೆಯಿದೆ. ಶಾಕಿನಿ,ಢಾಕಿನಿ, ಭೈರವ, ಕರ್ಣ ಪಿಶಾಚಿ.. ಇತ್ಯಾದಿ. ಈ ಸಾಧನೆಗಳು ತುಸು ಘೋರವಾಗಿರುವಂತೆಯೇ ಭಾಸವಾಗುತ್ತದೆ.                                ಪಂಚಮಕಾರಗಳನ್ನು ಇವು ಒಳಗೊಂಡಿರುತ್ತವೆ. ಎಚ್ಚರ ತಪ್ಪಿದರೆ ಬೇರೆ ರೀತಿಯ ಅನಾಹುತ ಸಂಭವಿಸಬಹುದಾದಂತಹ ಹಾದಿ. 'ಪಂಚಮಕಾರಗಳಲ್ಲಿ ನಿನಗೆ ಪಶುಭಾವದ ಅಗತ್ಯವಿಲ್ಲ, ಈಗಾಗಲೇ ನೀನು ವೀರಭಾವವನ್ನು ಅನುಭವಿಸಿರುವುದರಿಂದ ವೀರಭಾವದ ಹಾದಿಯಲ್ಲಿ ಮುನ್ನಡೆಯಬಹುದು' ಎಂದು ಗುರುಗಳು ತಿಳಿಸಿದ್ದರು. ನನಗೆ 'ಮೈಥುನ' ಒಂದನ್ನು ಬಿಟ್ಟರೆ ಪಂಚಮಕಾರಗಳ ಬಗ್ಗೆ ಯಾವ ತಕರಾರೂ ಇರಲಿಲ್ಲ. ಅದರ ಬಗ್ಗೆ ನನಗೂ ಗುರುಗಳಿಗೂ ಸಾಕಷ್ಟು ಚರ್ಚೆಯಾಯಿತು. ಏನೇ ಆದರೂ ನಾನು 'ಒಲ್ಲೆ' ಎಂದೇ ಪಟ್ಟು ಹಿಡಿದು ಕೂತಿದ್ದೆ. ಗುರುಗಳ ಬಳಿ ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದುದರಿಂದ ಹೀಗೆ ಮಾತನಾಡಲು ಧೈರ್ಯ ಮಾಡಿದ್ದೆ. ಅಲ್ಲದೇ ಅದು ನನ್ನ ಮನಸ್ಸಿಗೆ ವಿರುದ್ಧವಾಗಿತ್ತು.
        ಅಂತೂ ವಾಮಮಾರ್ಗದಲ್ಲಿ ನನ್ನ ಪಯಣವನ್ನು ಮುಂದುವರೆಸಿದ್ದಾಯಿತು. 'ಈ ಮಂತ್ರಗಳನ್ನು ಅನಾವಶ್ಯಕವಾಗಿ ಉಪಯೋಗಿಸಬೇಡ' ಎಂದು ಗುರುಗಳು ಹೇಳಿದ್ದರು. ಅವರು ಹೇಳುವ ಮೊದಲೇ 'ಅವಶ್ಯಕತೆ ಇದ್ದರೂ ನಾನು ಉಪಯೋಗಿಸುವುದಿಲ್ಲ' ಎಂದು ಮನಸ್ಸಿನಲ್ಲಿಯೇ ಸ್ಥಿರವಾಗಿ ಅಂದುಕೊಂಡಿದ್ದೆ' 
        ನನ್ನ ತಾಂತ್ರಿಕ ಸಾಧನೆಯ ಕೊನೆಯ ಭಾಗವಾದ 'ಕುಲಕುಂಡಲಿನೀ ಯೋಗ'ದ ಬಗ್ಗೆ ಮುಂದೆ ಬರೆಯುತ್ತೇನೆ.

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 16

       ನಾನು ಮಾಡಿದ ನಾಲ್ಕು ಮುಖ್ಯ ದೇವೋಪಾಸನೆಯಲ್ಲಿ ಕೊನೆಯ ಉಪಾಸನೆ ಶ್ರೀ ಕೃಷ್ಣನದು. ಕೃಷ್ಣನ ಭಾವ ಅತ್ಯಂತ ಸುಂದರ ಭಾವ. ಕೃಷ್ಣನ ರಸಿಕತೆ, ಚಾಣಾಕ್ಷತನ, ಕಳ್ಳಾಟಗಳು, ಆತನ ಮೋಹಕ ರೂಪ, ಕೊಳಲ ಗಾನ, ಗೋಪಿಕಾ ವಲ್ಲಭನೆಂಬ ಬಿರುದು... ಹೀಗೆ ಒಂದೇ ಎರಡೇ?   
         ಕೃಷ್ಣನನ್ನು ಒಬ್ಬ ದೇವರಾಗಿ ಅನುಭವಿಸುವುದಕ್ಕಿಂತ ಇಡಿಯಾಗಿ
ಅನುಭವಿಸಲು ಮನಸ್ಸಾಗಿತ್ತು. ಈ ಸಾಧನೆಗೆ ಕುಳಿತಾಗ ಅವನೇ ಇಡೀ ಪ್ರಕೃತಿ ಎಂದೆನಿಸಿ, ಪ್ರಕೃತಿಯೊಡನೆ ಒಂದಾದ ಭಾವವನ್ನು ಅನುಭವಿಸಿದೆ. ಆ ಭಾವವನ್ನು ಅನುಭವಿಸಿದಾಗ, 'ಇದು ನನ್ನ ದೇಹದ, ಮನಸ್ಸಿನ ಅಳತೆಗೆ ಮೀರಿದ್ದು' ಎಂದು ಅನ್ನಿಸಿ ಒಮ್ಮೆ ತತ್ತರಿಸಿ ಹೋಗಿದ್ದೂ ನಿಜ. ಪ್ರಕೃತಿಶಕ್ತಿಯನ್ನು ಇಡಿಯಾಗಿ
ಅನುಭವಿಸುವುದು ನನಗೆ ನಿಜಕ್ಕೂ ಸವಾಲಾಗಿತ್ತು. ದೇಹವಿಡೀ ಅದರ ಪಾಡಿಗೆ ನಡುಗುತ್ತಿತ್ತು. ಆ ಶಕ್ತಿಯನ್ನು ತುಂಬಾ ಹೊತ್ತು ಹಿಡಿದಿಟ್ಟುಕೊಳ್ಳುವುದು ಅಸಾಧ್ಯ ಕೆಲಸವಾಗಿತ್ತು. ನನಗೆ ನಾನೇ ಸಮಾಧಾನ ಮಾಡಿಕೊಂಡೆ.
         ನಂತರ ಕೃಷ್ಣನನ್ನು ಪೂರ್ತಿಯಾಗಿ ಅನುಭವಿಸುವ ಬದಲು ಆತನ ಯಾವುದಾದರೊಂದು ಗುಣದ ಭಾವದಲ್ಲಿರುವುದು ಒಳಿತು ಎಂದನ್ನಿಸಿತ್ತು. ಕೃಷ್ಣನ ಭಾವ ಎಂದೊಡನೆ ಹಲವಾರು ಭಾವಗಳ ಸಂಗಮವೇ ಆಗಿರುತ್ತದೆ. ನನಗೇ ಅರಿವಿಲ್ಲದಂತೆ ಕೃಷ್ಣನ ಮೋಹಕ ರೂಪ ಹಾಗೂ ರಸಿಕತೆಯ ಕಡೆ ಮನಸ್ಸು ವಾಲತೊಡಗಿತು. ಈ ಭಾವ ಅತ್ಯಂತ ಅಪ್ಯಾಯಮಾನವಾಗಿತ್ತು. ಬಹುಶಃ ಕಠಿಣವಾದ ಪ್ರಯೋಗಗಳನ್ನು ಮಾಡಿದ ದೇಹ ಹಾಗೂ ಮನಸ್ಸು ಒಂದಷ್ಟು ಪರಿಹಾರ ಬಯಸುತ್ತಿತ್ತೋ ಏನೋ! ಈ ಭಾವದಲ್ಲಿಯೇ ಕೃಷ್ಣನ ಉಪಾಸನೆ ಮಾಡುತ್ತಿದ್ದೆ. 
        ನನ್ನಲ್ಲಿ ಆದ ಬದಲಾವಣೆಗಳನ್ನು ಇಲ್ಲಿ ಹೇಳಬಯಸುತ್ತೇನೆ. ನನಗೆ ನಾನೇ ಅತ್ಯಂತ ಸುಂದರನಾಗಿ ಕಾಣುತ್ತಿದ್ದೆ. ಅಪ್ಪಿ ತಪ್ಪಿ ಕನ್ನಡಿಯ ಮುಂದೆ ಸಾಗುವಾಗ ನನ್ನನ್ನು ನಾನೇ ನೋಡಿ ಹೆಮ್ಮೆ ಪಡುತ್ತಿದ್ದೆ. ದೇವಸ್ಥಾನಕ್ಕೆ ಬರುವ ಕೆಲವು ಹೆಣ್ಣು ಮಕ್ಕಳು ನನ್ನೊಡನೆ ಹೆಚ್ಚುಹೆಚ್ಚಾಗಿ ಮಾತನಾಡಲು ಕುಳಿತುಕೊಳ್ಳುತ್ತಿದ್ದರು. ಕೆಲವರೊಡನೆ ಮಾತನಾಡುವುದು ನನಗೂ ಹಿತವೆನ್ನಿಸುತ್ತಿತ್ತು. ಒಮ್ಮೊಮ್ಮೆ ಕಿರುಗೆಜ್ಜೆ ಧರಿಸಿದ ಗೋಪಿಕಾ ಸ್ತ್ರೀಯರೊಂದಿಗೆ ನಾನೂ ಕುಳಿತಂತೆ ಭಾಸವಾಗುತ್ತಿತ್ತು. ಕಿಟಕಿಯ ಮರೆಯಿಂದ ಯಾರಾದರೂ ಗೋಪಿಕಾ ಸ್ತ್ರೀಯರು ಕಿರುಗೆಜ್ಜೆ ಧರಿಸಿದ್ದಾರೋ ಎಂದು ಗಮನಿಸುತ್ತಿದ್ದೆ! ಯಾರೊಡನೆಯೂ ದೈಹಿಕವಾಗಿ ಒಂದು ಸಣ್ಣ ಸಲಿಗೆಯನ್ನು ತೆಗೆದುಕೊಳ್ಳಲೂ ಮನಸ್ಸು ಇಚ್ಚಿಸಲಿಲ್ಲ. ಒಟ್ಟಾರೆ ಆಹ್ಲಾದಕರ ವಾತಾವರಣವಿತ್ತು. 
        ಹಿಂದಿರುಗಿ ಬಂದ ಗುರುಗಳ ಬಳಿ ನನ್ನ ಕಷ್ಟವನ್ನು ತೋಡಿಕೊಂಡೆ. 'ಈ ಬಾರಿ ನಿನ್ನ ಮುಂದಿನ ಸಾಧನೆ ಮುಗಿಯುವವರೆಗೆ ನಿನ್ನೊಡನೆಯೇ ಇರುತ್ತೇನೆ' ಎಂದು ಭರವಸೆ ಇತ್ತರು. 'ನೀನು ಅನುಭವಿಸಿದ್ದು ವಿರಾಟ್ ಭಾವ. ಕೃಷ್ಣನ ವಿರಾಟ್ ಸ್ವರೂಪದ ಭಾವ ಸಿಗುವುದೇ ಕಷ್ಟ. ನೀನು
ಧೈರ್ಯ ಮಾಡಿ ಮುಂದುವರೆಯಬೇಕಿತ್ತು, ಹಲವಾರು ಹಂತಗಳನ್ನು ಒಮ್ಮೆಯೇ ದಾಟಬಹುದಿತ್ತು ' ಎಂದೆಲ್ಲಾ ಹೇಳಿದ ಗುರುಗಳು 'ನಾನು ಇಲ್ಲಿಯೇ ಇದ್ದರೆ ಚೆನ್ನಿತ್ತು. ಇರಲಿ, ನಿನ್ನ ಯಾವ ಸಾಧನೆಯೂ ವ್ಯರ್ಥವಾಗುವುದಿಲ್ಲ' ಎಂದು ಮೈದಡವಿದರು. ನಂತರ ಕೆಲ ದಿನಗಳು ನನಗೆ ವಿರಾಮ ಸಿಕ್ಕಿತ್ತು.  
        

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 15

        ಗುರುಗಳು ಬಂದರು. ನನ್ನೆಲ್ಲಾ ಅನುಭವಗಳನ್ನು ಹಂಚಿಕೊಂಡೆ. 'ಶಿವನನ್ನಾಗಲೀ ಶಿವನ ಮುಖವನ್ನಾಗಲೀ ನೋಡಲಿಲ್ಲ'ಎಂದೆ. 
'ಅಡ್ಡಿಯಿಲ್ಲ, ಈ ಅನುಭವಗಳೇ ಮುಖ್ಯ. ಭಾವ, ಭಾವದಿಂದ ಅನುಭವ' ಎಂದು ಹೇಳಿ ಸಮಾಧಾನ ಮಾಡಿದರು. 
        ಅಂದು ಗುರುಗಳಿಗೆ ನನ್ನ ಅಡುಗೆ ರುಚಿ ತೋರಿಸಿದೆ. 'ಅಡ್ಡಿಯಿಲ್ಲಪ್ಪಾ, ಪಾಕ ಶಾಸ್ತ್ರದಲ್ಲೂ ಪ್ರವೀಣನೇ' ಮೊದಲ ಬಾರಿಗೆ ಸ್ವಲ್ಪ ತಮಾಷೆಯ ಧ್ವನಿಯಲ್ಲಿ ಮಾತನಾಡಿದ್ದರು ಅವರು. ನಂತರ ಸಂಜೆ ಮಾತನಾಡುತ್ತಾ ಕುಳಿತಿದ್ದೆವು. 'ತಂತ್ರ ಸಾಧನೆಯ ಪೂರ್ತಿ ವಿವರಗಳನ್ನು ಬರೆದಿಡಲೇ' ಕೇಳಿದೆ ನಾನು. 'ಏಕೆ?' ತಕ್ಷಣ ಬಂತು ಪ್ರಶ್ನೆ.
 'ಇದು ನಶಿಸಿಹೋಗದಂತೆ ಮುಂದಿನ ಸಂತತಿಗೂ ಉಳಿಸಲು...' 
'ನೀನ್ಯಾರು ಇದನ್ನು ಉಳಿಸಲು? ಇದನ್ನು ಯಾರೂ ಉಳಿಸಬೇಕೆಲ್ಲ, ಅಳಿಸಲೂ ಆಗುವುದಿಲ್ಲ' ಎಂದು ಹೇಳಿ, ನನ್ನ ಮುಖ ಸಪ್ಪೆಯಾಗಿದ್ದುದನ್ನು ಗಮನಿಸಿ ' ಇದು ಅನಾದಿಕಾಲದಿಂದ ಉಳಿದು ಬಂದಿದೆ. ಯಾರಿಗೆ ಬೇಕು ಎನ್ನುವ ತವಕವಿದೆಯೋ, ಅವರಿಗೆ ಹೇಗಾದರೂ ಸಿಗುತ್ತದೆ. ಬೇಕು ಅನ್ನುವವರು ಇರುವ ತನಕ ಅದು ಇರುತ್ತದೆ, ಯಾರಿಗೂ ಬೇಡವಾದಾಗ ಅದು ಇದ್ದೇನು ಪ್ರಯೋಜನ? ಆದರೆ ಅಂತಹ ಕಾಲ ಬಾರದು. ಈ ವಿದ್ಯೆಯ ತಾಕತ್ತು ಅಂತಹದ್ದು... ಚಿಂತಿಸಬೇಡ' ಎಂದು ಮೃದುವಾಗಿ ಹೇಳಿದರು. (ಆ ಕಾರಣಕ್ಕಾಗಿಯೇ ನಾನು ಈ ನನ್ನಬ್ಲಾಗ್ ನಲ್ಲಿ ವಿಧಿ ವಿಧಾನಗಳ ಬಗ್ಗೆ ವಿವರವಾಗಿ ಬರೆಯಲಿಲ್ಲ. ನನ್ನ ಅನುಭವಗಳ ಬಗ್ಗೆ ಹೇಳಲು ಅವಶ್ಯವಿರುವಷ್ಟೇ ಬರೆದಿದ್ದೇನೆ) 
        ಇದಾಗಿ ಕೆಲ ದಿನಗಳಲ್ಲಿ 'ಏನಪ್ಪಾ ವೈಷ್ಣವಾ? ರಾಮ,ಕೃಷ್ಣ, ಹನುಮಂತ ಇತ್ಯಾದಿ ದೇವರ ಆರಾಧನೆಯ ಮೇಲೆ ಒಲವಿದೆಯೇ?' ಎಂದು ತಮಾಷೆಯಾಗಿ ಕೇಳಿದರು.  ತಂತ್ರ ವಿದ್ಯೆ ಕೇವಲ ಶಿವ ಶಕ್ತಿಯರಿಗೆ ಸಂಬಂಧ ಪಟ್ಟಿದ್ದೆಂದು ಭಾವಿಸಿದ್ದೆ. 'ತಂತ್ರದಲ್ಲಿ ವಿಷ್ಣುವಿನ ಆರಾಧನೆಯೂ ಉಂಟೇ?' ಅಚ್ಚರಿಯಿಂದ ಕೇಳಿದೆ. 'ತಂತ್ರ ವಿದ್ಯೆ, ದೇವರನ್ನು ಆರಾಧಿಸುವ ಒಂದು ವಿಶೇಷ ತಂತ್ರವನ್ನು ಒಳಗೊಂಡಿರುವ ಸಾಧನಾಕ್ರಮ. ಯಾವ ದೇವರನ್ನಾದರೂ ಆರಾಧಿಸಲು ಇದರಲ್ಲಿ ತನ್ನದೇ ಆದ ಕ್ರಮಗಳಿವೆ. ನಿನಗೆ ಆಸಕ್ತಿ ಉಂಟೋ, ಇಲ್ಲವೋ? ಅದನ್ನು ಮೊದಲು ಹೇಳು' ಎಂದರು. 'ಖಂಡಿತ ಉಂಟು' ಎಂದು ಖಡಾ ಖಂಡಿತವಾಗಿ ಹೇಳಿದೆ.
         ಹನುಮಂತನ ಉಪಾಸನೆಯೊಂದಿಗೆ ನನ್ನ ಸಾಧನೆಯ ಎರಡನೆಯ ಘಟ್ಟ ಪ್ರಾರಂಭವಾಯಿತು. ಹನುಮಂತನ ಉಪಾಸನೆ ಹನ್ನೊಂದು ದಿನಗಳ ಉಪಾಸನೆ. ಇದರಲ್ಲಿ ಕೆಲವು ಕಟ್ಟಳೆಗಳಿವೆ. ಚಿಕ್ಕದೊಂದು ಗಂಧದ ತುಂಡಿನಲ್ಲಿ ನಾನೇ ನನ್ನ ಕೈಯ್ಯಾರೆ ನನಗೆ ತಿಳಿದಂತೆ ಆಂಜನೇಯನ ಮೂರ್ತಿಯನ್ನು ಕೆತ್ತಬೇಕಾಗಿತ್ತು. ಹನ್ನೊಂದು ದಿನಗಳು ಕೇವಲ ಕೆಂಪು ಬಟ್ಟೆಯನ್ನೇ ಉಟ್ಟುಕೊಳ್ಳಬೇಕಾಗಿತ್ತು. ನೆಲದ ಮೇಲೆ ಮಲುಗುವಾಗಲೂ ಕೆಂಪು ಬಟ್ಟೆಯನ್ನೇ ಹಾಸಬೇಕಾಗುತ್ತಿತ್ತು. ನಾನು ಮನೆಯಿಂದ ಹೊರಗೆ ಓಡಾಡುವುದು ನಿಷಿದ್ಧವಾಗಿತ್ತು. ಎಲ್ಲವನ್ನೂ ಗುರುಗಳೇ ಪೂರೈಸುತ್ತಿದ್ದರು. ವೀಳ್ಯದ ಎಲೆಯೊಂದಕ್ಕೆ ಕಾಡಿಗೆ(ಅಂಜನ)ಹಚ್ಚಿ ಅದನ್ನು ನೋಡುತ್ತಾ ಆಂಜನೇಯನ ಧ್ಯಾನ ಮಾಡಬೇಕು. 
        ಅಂದು ನನಗಾದ ಅನುಭವವನ್ನು ಹಂಚಿಕೊಳ್ಳುತ್ತೇನೆ. ಮೊದಲಿಗೆ ಆಂಜನೇಯನ ಉಪಾಸನೆ ಮಾಡುವ ಸಮಯದಲ್ಲಿ ಇಡೀ ದಿನ ಆಂಜನೇಯನ ಕುರಿತಾಗಿಯೇ ಯೋಚಿಸುತ್ತಿರಬೇಕು. ಆತನ ಬಾಲ್ಯ, ತುಂಟಾಟ, 
ಆತನಗರಿವಿಲ್ಲದಿದ್ದರೂ ಆತನಲ್ಲಿರುವ ಅತ್ಯದ್ಭುತ ಶಕ್ತಿ... ಹೀಗೆ ಆತನ ಬಗ್ಗೆಯೇ ಯೋಚಿಸುತ್ತಾ ಆಂಜನೇಯನ ಭಾವವನ್ನು ಮೈತುಂಬಿಕೊಳ್ಳಬೇಕು. ಈ ಸಾಧನೆ  ಮಾಡುತ್ತಿರುವಾಗ ನಮ್ಮಲ್ಲಿಯೂ ಪರಿವರ್ತನೆಗಳು ಕಾಣುತ್ತವೆ. ಒಂದಷ್ಟು ತುಂಟಾಟ, ಚೇಷ್ಟೆಯ ಸ್ವಭಾವ ಮುಂತಾದವು ತನ್ನಂತೆ ತಾನೇ ನಮ್ಮನ್ನು ಆವರಿಸಿಕೊಳ್ಳುತ್ತದೆ. 
        ಒಂಭತ್ತು ದಿನಗಳು ಕಳೆದವು. ಹತ್ತನೇ ದಿನ, ಎಲೆಯನ್ನು ನೋಡುತ್ತಾ ಕುಳಿತಾಗ ಕಪ್ಪು ಅಂಜನ ಕೆಂಪಾಗಿ ಮಾರ್ಪಟ್ಟು ಧಗಧಗಿಸುವ ಬೆಂಕಿಯಂತೇ ಕಾಣುತ್ತಿತ್ತು. 
        ಹನ್ನೊಂದನೆಯ ದಿನ, ಸಾಧನೆಯ ಅಂತಿಮ ದಿನ. ಹನುಮಂತನ ಸಾಕ್ಷಾತ್ಕಾರವಾಗುವ ದಿನ. ಹನುಮಂತ ಹೇಗಿರಬಹುದು ಎಂಬ ಚಿಂತನೆಯಲ್ಲಿಯೇ ಮನಸ್ಸು ಮುಳುಗಿತ್ತು. ಪರ್ವತ ಕೈಯಲ್ಲಿ ಹಿಡಿದ ವಾಯುಪುತ್ರ, ಎದೆ ಸೀಳಿ ರಾಮನನ್ನು ತೋರಿಸಿದ ರಾಮಭಕ್ತ, ಗದೆಯನ್ನು ಹಿಡಿದು ನಿಂತ ಗಟ್ಟಿಮುಟ್ಟಾದ ಅಂಗಸೌಷ್ಠವದ ಹನುಮ... ಹೀಗೆ ನನಗೆ ನೆನಪಿದ್ದ ಎಲ್ಲಾ ರೂಪಗಳನ್ನು ಮನಸ್ಸಿನಲ್ಲಿಯೇ ಮೂಡಿಸುತ್ತಿದ್ದೆ. ನಾನು ಮಂತ್ರವನ್ನು ಜಪಿಸುತ್ತಾ ಆ ಸಾಕ್ಷಾತ್ಕಾರದ ಕ್ಷಣಕ್ಕೆ ಕಾಯುತ್ತಿದ್ದೆ. ಜಪದ ಸಂಖ್ಯೆ ಮುಗಿಯುವ ಮುನ್ನವೇ ಮಹಡಿ ಮೆಟ್ಟಲ ಬಳಿಯಿಂದ ಯಾರೋ ಕರೆದಂತಾಯಿತು. ತಿರುಗಿ ನೋಡಿದೆ. 
        ಒಂದು ಕ್ಷಣ ಗುಂಡಿಗೆ ನಿಂತ ಅನುಭವ! ಮಹಡಿಯ ಮೆಟ್ಟಲ ಬಳಿ ಕುಳಿತಿದ್ದದ್ದು ಸಾಕ್ಷಾತ್ ಹನುಮಂತ! ನಾನಂದುಕೊಂಡ ಯಾವ ರೂಪದಲ್ಲೂ ಆತನಿರಲಿಲ್ಲ. ಮೈತುಂಬಾ ಮೃದುವಾದ ಬಿಳೀ ರೋಮವನ್ನು ಹೊಂದಿದ್ದ, ಇಳಿವಯಸ್ಸಿನ ಹನುಮ. ವಯಸ್ಸಾಗಿದ್ದರೂ ಆ ಕೆಂಪು ಮುಖದಲ್ಲಿ ಪ್ರಜ್ವಲಿಸುವ ಕಳೆ. ಇದನ್ನು ಬರೆಯುತ್ತಿರುವಾಗಲೇ ನನಗೆ ರೋಮಾಂಚನವಾಗುತ್ತಿದೆ. 'ಇದನ್ನೆಲ್ಲಾ ಅನುಭವಿಸಿದ್ದು ನಾನೇ ಅಲ್ಲವೇ?' ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೇನೆ. ನಿಜವಾಗಿ ಭಾವುಕನಾಗಿದ್ದೇನೆ. 

'ನಾ ಕಂಡ ಹನುಮಂತ' ಹೀಗಿದ್ದ ಎನ್ನಬಹುದು. (ಫೋಟೋಷಾಪ್ ನಲ್ಲಿ ನಾನು ಆದಷ್ಟು ಹತ್ತಿರವಾಗಿ ಮೂಡಿಸಲು ಪ್ರಯತ್ನಿಸಿದ್ದೇನೆ) 

Thursday 17 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 14

        ಅಷ್ಟು ಹತ್ತಿರದಿಂದ ನಾಗರಹಾವನ್ನು ನಾನು ನೋಡಿದ್ದು ಅದೇ ಮೊದಲು. ಮಿರ ಮಿರ ಮಿರುಗುವ ನಾಗರ ಹಾವು! ಅಲ್ಲಾಡದೇ ಹೆಡೆ ಎತ್ತಿ ನಿಂತಿದೆ. ನಾನಂತೂ ಉಸಿರು ಬಿಗಿ ಹಿಡಿದು ನೋಡುತ್ತಿದ್ದೆ!!
        ಒಂದು ಕ್ಷಣದಲ್ಲಿ ನೂರಾರು ಆಲೋಚನೆಗಳು ತಲೆಯಲ್ಲಿ ಸುಳಿದವು. 'ಹತ್ತು ಸಾವಿರ ಬಾರಿ ಜಪ ಮಾಡುವವರೆಗೂ ಕುಳಿತ ಜಾಗದಿಂದ ಕದಲ ಬಾರದೆಂದು ಗುರುಗಳು ಹೇಳಿದ್ದಾರೆ. ಕೇವಲ ಅರ್ಧ ಅಡಿ ದೂರದಲ್ಲಿ ಹಾವು ಹೆಡೆ ಎತ್ತಿ ಕುಳಿತಿದೆ. ಕಣ್ಣು ಎವೆಯಿಕ್ಕುವಷ್ಟರಲ್ಲಿ ಬಡಿದರೆ ಏನು ಮಾಡುವುದು? ಜಪ,ತಪ,ಸಾಧನೆ ಇವೆಲ್ಲಾ ಬೇಕಾ? ಎದ್ದು ಓಡಿ  ಹೋಗಲೇ? ಅಥವಾ ಏನಾದರಾಗಲಿ ಎಂದು ಜಪವನ್ನು ಮುಂದುವರೆಸಲೇ? ಏನು ಸಾಧನೆ ಮಾಡಬೇಕಾದರೂ ಪ್ರಾಣವಿದ್ದರೆ ತಾನೇ? ಈ ಸಾಧನೆಗಳೆಲ್ಲಾ ಬಹಳ ಕಷ್ಟಕರವಾಗಿದೆ. ಕೊನೆಗೂ ಏನಾದರೂ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಸುಮ್ಮನೆ ಸಿಕ್ಕಿಹಾಕಿಕೊಳ್ಳುವ ಬದಲು ಮೆಲ್ಲಗೆ ಹಿಂದೆ ಸರಿಯಲೇ?' ಹಲವಾರು ದ್ವಂದ್ವಗಳು, ಸಂದೇಹಗಳು. ಏನು ಮಾಡುವುದೆಂಬ ತೀರ್ಮಾನಕ್ಕೆ ಬಾರದಾದೆ. ನಂತರ ಒಂದು ಕ್ಷಣ ಯೋಚಿಸಿದೆ. 'ನಾನು ಕಣ್ಣು ಬಿಟ್ಟು ನೋಡಿದ್ದುದರಿಂದ ಹಾವಿರುವುದು ಗೊತ್ತಾಯಿತು. ಇಲ್ಲದಿದ್ದರೆ ಹಾಗೇ ಜಪವನ್ನು ಮುಂದುವರೆಸುತ್ತಿದ್ದೆ. ಏನಾದರಾಗಲಿ, ಸತ್ತರೂ ಯಾವುದೋ ಸಾಧನೆ ಮಾಡಿ ಸತ್ತ ಎಂದಾಗುತ್ತದೆ. ಅಷ್ಟೇ ತಾನೇ' ಎಂದು ಮನದಲ್ಲಿ ಧೈರ್ಯ ತಂದುಕೊಂಡು ಜಪವನ್ನು ಮುಂದುವರೆಸಿದೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಹರಿವಾಣದ ತಟ್ಟೆಯ ಸದ್ದಾಯಿತು. ಈ ಬಾರಿ ನಾನು ಕಣ್ಣು ಬಿಡಲಿಲ್ಲ. ಕೆಲ ಕಾಲ ಕಳೆದ ಮೇಲೆ ಹೊರಗೆ ರಸ್ತೆಯಲ್ಲಿ ಗದ್ದಲ. ಕೆಲವರು ಕೊಂಕಣಿಯಲ್ಲಿ ಮಾತನಾಡುತ್ತಿದ್ದರು. 'ಅಯ್ಯೋ ಹಾವು...  ಇರು ಇರು ಹೊಡೆಯಬೇಡ .. ಆ ಕೋಲಿನಿಂದ ತಳ್ಳು.. ಸೈಕಲ್ ಮೇಲೆ ಸುತ್ತಿಕೊಂಡು ಹೋಗುತ್ತಿದೆ..ದೂರ ನಿಲ್ಲು... ಬಿಡು..ಬಿಡು .. ಆ ತೋಡಿನ ಹತ್ತಿರ ಹೋಗುತ್ತಿದೆ.. ' ಎಂದೆಲ್ಲಾ ಕೂಗಾಡುತ್ತಿದ್ದರು.             ಸ್ವಲ್ಪ ಹೊತ್ತಿನ ಮೇಲೆ ಎಲ್ಲಾ ಶಾಂತವಾಯಿತು, ಬಹುಶಃ ಆ ಹಾವು ಅಲ್ಲಿಂದ ಹೋಗಿರಬೇಕು. ಎಷ್ಟು ಏಕಾಗ್ರತೆ ಸಾಧಿಸಿದ್ದೇನೆ  ಕೊಂಡಿದ್ದೆಲ್ಲಾ ಹುಸಿಯಾಗಿತ್ತು. ಅಷ್ಟೂ ಹೊತ್ತು ಮನಸ್ಸು ಹಾವಿನ ಸುತ್ತಲೇ ಸುತ್ತುತ್ತಿತ್ತು 
ಜಪದ ಸಂಖ್ಯೆ ಮುಗಿದ ಮೇಲೆ ಮತ್ತೆ ಕಣ್ಣು ಬಿಟ್ಟೆ. ಆ ಹಾವು ಎಲ್ಲಿಂದ ಬಂದಿರಬಹುದು ಎಂದು ಸುತ್ತೆಲ್ಲಾ ನೋಡಿದೆ. ನಂತರ ಮೇಲೆ ನೋಡಿದೆ. ಮೇಲೆ ತೇಗದ ಮರದಲ್ಲಿ ಮಾಡಿದ ಛಾವಣಿ ಇತ್ತು. ಅದಕ್ಕೆ ಅಡ್ಡಡ್ಡವಾಗಿ ಮರದ ತೊಲೆಗಳೂ ಇದ್ದವು. ಬಹುಶಃ ಅದರ ಸಂದಿಯಿಂದ ಬಂದಿರಬಹುದು ಎಂದು ಊಹಿಸಿದೆ. 
        ಮಾರನೇ ದಿನ ನನ್ನ ರಘುರಾಮ ಅಜ್ಜನ ಅಂಗಡಿಗೆ ಹೋಗಿ ಹೀಗೆ ಕೊಠಡಿಯಲ್ಲಿ ಹಾವು ಬಂದಿತ್ತು ಎಂದು ದೊಡ್ಡದಾಗಿ ಹೇಳಿದೆ. ಅದಕ್ಕೆ ಅವರು 'ಅದೆಲ್ಲಾ ಇಲ್ಲಿ ಸಾಮಾನ್ಯ, ಒಂದು ನಿಮಿಷ' ಎಂದು ಹೇಳಿ ಅವರ ಅಂಗಡಿಯ ಮಾಡಿನ ಬಳಿ ಕಣ್ಣಾಡಿಸುತ್ತಾ 'ಅಲ್ಲಿ ನೋಡು, ಅಲ್ಲೊಂದು ಹಾವು ಹೋಗುತ್ತಾ ಇದೆ. ಅವು ಇಲಿಯನ್ನು ತಿನ್ನಲು ಬರುತ್ತವೆ, ಮನುಷ್ಯರಿಗೆ ಏನೂ ಮಾಡುವುದಿಲ್ಲ. ಅದಕ್ಕೆ ವಿಷವಿಲ್ಲ, ಅದನ್ನು 'ದೀವೊಡು' (ಕೊಂಕಣಿ ಭಾಷೆಯಲ್ಲಿ) ಅಂತ ಕರೀತಾರೆ' ಎಂದು ಆರಾಮವಾಗಿ ತಮ್ಮ ವ್ಯಾಪಾರವನ್ನು ಮುಂದುವರೆಸುತ್ತಾ ಹೇಳಿದರು. 'ಆದರೆ ನನ್ನ ಕೊಠಡಿಗೆ ಬಂದದ್ದು ನಾಗರ ಹಾವು' ಎಂದು ಮತ್ತೆ ನೆನಪಿಸಿದೆ. 'ಹೌದಾ' ಎಂದು ನಗುತ್ತಾ ಇನ್ನೊಬ್ಬ ಗಿರಾಕಿಗೆ ಪೊಟ್ಟಣ ಕಟ್ಟಿ ಕೊಟ್ಟು 'ಒಟ್ಟು ಹದಿನೆಂಟು ರೂಪಾಯಿ ಆಯಿತು' ಅಂದರು ಅವನಿಗೆ! 'ನಾನು ಬರುತ್ತೇನೆ' ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ. 
        ನಾಗರ ಹಾವಿಗೂ ನಮ್ಮ ದೇವಸ್ಥಾನಕ್ಕೂ ಇರುವ ಸಂಬಂಧದ ಕುರಿತಾಗಿ ಕೆಲವು ವಿಷಯಗಳನ್ನು ಹೇಳ ಬಯಸುತ್ತೇನೆ. ನಮ್ಮ ದೇಗುಲಕ್ಕೆ ಸಂಬಂಧ ಪಟ್ಟ ಆಸ್ತಿಯೊಂದಿದೆ. ಅದನ್ನು 'ಮಂಡಾಡಿ' ಎಂದು ಕರೆಯುತ್ತಾರೆ. ಅಲ್ಲಿ 'ನಾಗಬನ' ಎಂಬ ಜಾಗವಿದೆ. ನಾಗರಪಂಚಮಿಯಂದು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಾನು ಚಿಕ್ಕಂದಿನಿಂದಲೂ ಬಹು ದೂರ ನಿಂತೇ ಅದನ್ನೆಲ್ಲಾ ಗಮನಿಸುತ್ತಿದ್ದೆ. ಏಕೆಂದರೆ ಅಲ್ಲಿ ಜೀವಂತ ಹಾವುಗಳು ಓಡಾಡುತ್ತಿರುತ್ತವೆ ಎಂದು ನನಗೆ ಗೊತ್ತಿತ್ತು! 
        ನಮ್ಮ 'ಅಪ್ಪಿಮಾಯಿ' ನಾನು ಚಿಕ್ಕವನಿದ್ದಾಗ ಹಿಂದೆ ನಡೆದ ಒಂದು ಘಟನೆಯನ್ನು ಹೇಳಿದ್ದರು. ಅದೇನೆಂದರೆ ನವರಾತ್ರಿಯ ಸಮಯದಲ್ಲಿ ಒಮ್ಮೆ ಖೀರಿ (ಪಾಯಸ) ಮಾಡಿ ಒಲೆಯಿಂದ ಇಳಿಸುವಾಗ ಒಂದು ನಾಗರ ಹಾವಿನ ಮೇಲೆ ಬಿಸಿ 'ಕಟಾರ'ವನ್ನು ಗೊತ್ತಿಲ್ಲದೇ ಇಟ್ಟುಬಿಟ್ಟಿದ್ದರಂತೆ. ಆಗ ಎಲ್ಲರೂ ಗಾಭರಿಯಾಗಿ 'ದರ್ಶನ'ದ ಪಾತ್ರಿಯನ್ನು ಕೇಳಿದಾಗ 'ಚಿಂತಿಸುವ ಅಗತ್ಯವಿಲ್ಲ, ಆದರೆ ಇನ್ನು ಮುಂದೆ ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ನಾಗರಾಜನಿಗೆ ಪೂಜೆ ಸಲ್ಲಿಸಿ, ಐದು ಜನ ಮುತ್ತೈದೆಯರಿಗೆ ಸುವಾಸಿನಿಯರಂತೆ ಸತ್ಕರಿಸಿ ಊಟ ಉಪಚಾರಗಳನ್ನು ನೀಡಿ ಸತ್ಕರಿಸಬೇಕು' ಎಂದು ಹೇಳಿದ್ದರಂತೆ. ಇಂದಿಗೂ ಆ ಪದ್ಧತಿ ಹಾಗೆಯೇ ನಡೆಯುತ್ತಿದೆ. 
        ನಾನು ಚಿಕ್ಕವನಿರುವಾಗ ಕಂಡ ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ದೇವಸ್ಥಾನದ ಸುತ್ತಿನಲ್ಲಿ ಯಾವುದಾದರೂ ಹಾವು ಕಂಡಾಗ, ನಮ್ಮ ಅಪ್ಪಿ ಮಾಯಿ 'ನೀನು ಬಂದಿದೀಯಾ ಎಂದರೆ ಏನೋ ಅಪವಿತ್ರವಾಗಿದೆ, ಗೊತ್ತಿಲ್ಲದೇ ಏನಾದರೂ ತಪ್ಪಾಗಿರಬಹುದು .. ಒಟ್ಟಾರೆ ಕ್ಷಮಿಸಿಬಿಡು' ಎಂದು ಹೇಳಿ ಹರಿವಾಣವೊಂದರಲ್ಲಿ ಅರಶಿನದ ನೀರನ್ನು ತಂದು ಆ ಹಾವಿನ ಮುಂದೆ ಇಟ್ಟು ಕೈ ಮುಗಿಯುತ್ತಿದ್ದರು. ಆ ಹಾವು ಅದರಲ್ಲಿ ಹೊರಳಾಡಿ ಹೋಗುತ್ತಿತ್ತು. ಅಲ್ಲಿಗೆ ಎಲ್ಲವೂ ಪವಿತ್ರವಾಯಿತು ಎಂದು ಖುಷಿ ಪಡುತ್ತಿದ್ದರು ಅಪ್ಪಿ ಮಾಯಿ. ನಾನು ದೂರದಲ್ಲಿ ಕಂಬದ ಮರೆಯಲ್ಲಿ ನಿಂತು ಇದನ್ನೆಲ್ಲಾ ಭಯದಿಂದ ನೋಡುತ್ತಿದ್ದೆ. 
        ಇದೆಲ್ಲದರ ನಡುವೆ ಗುರುಗಳ ಬರುವಿಕೆಗೆ ಕಾಯುತ್ತಿದ್ದೆ, ಏಕೆಂದರೆ ಈ ಬಾರಿ ಬಂದಾಗ ಹೆಚ್ಚು ದಿನಗಳನ್ನು ನನ್ನೊಂದಿಗೆ ಕಳೆಯುವುದಾಗಿ ಗುರುಗಳು ಹೇಳಿದ್ದರು. ಕೊನೆಗೂ ಆ ದಿನ ಬಂದಿತು. 


Wednesday 16 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 13

        ಶಿವನ ಆರಾಧನೆಗೆ ಮುನ್ನ ಗುರುಗಳು ಶಿವನ ಕುರಿತಾದ ಕೆಲವು ವಿಚಾರಗಳನ್ನು ನನ್ನೊಡನೆ ಹಂಚಿಕೊಂಡರು.
        'ಶಿವ ಪೌರಾಣಿಕ ವ್ಯಕ್ತಿಯಲ್ಲ, ಈ ಭೂಮಿಯಲ್ಲಿ ಅವತರಿಸಿದ ಮಹಾದೇವ. ಸ್ಮಶಾನವಾಸಿಯಾದ ಅವನು ಜನರ ಮಧ್ಯೆ, ಜನರಿಂದ ಬೆಳೆದ. ತನ್ನನ್ನು ಬೆಳೆಸಿದ ಸಮಾಜಕ್ಕಾಗಿ ಅದ್ಭುತ ಕೊಡುಗೆಗಳನ್ನು ನೀಡಿದ. ಪಶು,ಪ್ರಾಣಿಗಳ ಧ್ವನಿಯ ಏರಿಳಿತಗಳನ್ನು ಗಮನಿಸಿ ಸಪ್ತಸ್ವರಗಳನ್ನು ಕಂಡು ಹಿಡಿದು ಸಂಗೀತಕ್ಕೊಂದು ಹೊಸ ಆಯಾಮ ನೀಡಿದ್ದು ನಮ್ಮ ಶಿವ. ಸ್ಮಶಾನದಲ್ಲಿದ್ದುಕೊಂಡೇ ತನ್ನದೇ ಆದ ನಾಟ್ಯಪ್ರಕಾರವನ್ನು ಕಂಡು ಹಿಡಿದು ಅದಕ್ಕೆ 'ತಾಂಡವ' ಎಂದು ಹೆಸರಿಸಿದ. ಅಲೆಮಾರಿ ಜನಾಂಗವಾಗಿ ಅಲೆಯುತ್ತಿದ್ದ ಜನರಿಗೆ ಕುಟುಂಬದ ಕಲ್ಪನೆ ನೀಡಿದ. ವಿವಾಹ ಪದ್ಧತಿಯನ್ನು ಆಚರಣೆಗೆ ತಂದದ್ದು ಮಹಾದೇವ ಶಿವನೇ. ದಕ್ಷಿಣ ಭಾರತದಲ್ಲಿ ವಾಸವಾಗಿದ್ದ ಶಿವನ ಸಂಗಾತಿಯಾಗಿದ್ದವಳು ಕಾಳಿ. ಆಕೆ ಕಪ್ಪಗಿರುವುದರಿಂದ ಕಾಳಿ ಎಂದು ಕರೆದರು. ಸಾಮರಸ್ಯ ಉಳಿಸಲು ಉತ್ತರದ ಹಿಮಾಲಯ ಭಾಗದ ರಾಜನೊಬ್ಬನ ಮಗಳನ್ನು ವಿವಾಹವಾದ. ಆಕೆಯ ಹೆಸರೂ ದಾಖಲೆಯಲ್ಲಿ ಸಿಗದಿರುವುದರಿಂದ, ಪರ್ವತ ಪ್ರದೇಶದ ರಾಜನ ಮಗಳಾಗಿದ್ದುದರಿಂದ ಪಾರ್ವತಿ ಎಂದು ಮುಂದೆ ಕರೆಯಲಾಯಿತು. ಇದೇ ಪ್ರಪಂಚದ ಮೊದಲ ಮದುವೆ. ಈಗಲೂ ಮದುವೆಯ ಮಂಟಪದಲ್ಲಿ ಒಳ್ಳೆಯ ಜೋಡಿಯನ್ನು ನೋಡಿದಾಗ ಶಿವ-ಪಾರ್ವತಿಯರಂತೇ ಕಾಣುತ್ತಾರೆ ಎನ್ನುವುದು ವಾಡಿಕೆಯಲ್ಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಶಿವನು ಬಿಡಿ ಬಿಡಿಯಾಗಿ ದಿಕ್ಕು ದೆಸೆಯಿಲ್ಲದೇ ನಡೆಯುತ್ತಿದ್ದ ದೇವಪೂಜೆಗೆ ಶಿಸ್ತುಬದ್ಧವಾದ ವೈಜ್ಞಾನಿಕ ರೂಪಕೊಟ್ಟ. ತಾನು ಮೊದಲು ಅಭ್ಯಸಿಸಿ, ಸಾಧನೆ ಮಾಡಿ ನಂತರ ಪಾರ್ವತಿಗೆ ಅದನ್ನು ಬೋಧಿಸಿದ. ಅದೇ ತಂತ್ರ ಶಾಸ್ತ್ರ. ನಾನು ಹೇಳಿದ ಈ ವಿಷಯಗಳು ಜನಸಾಮಾನ್ಯರ ನಂಬಿಕೆಗಳಿಗೆ ವಿರುದ್ಧವಾಗಿರಬಹುದು. ಆದರೆ ನನ್ನಲ್ಲಿ ಕೆಲವು ಪುರಾವೆಗಳಿವೆ' ಎಂದು ಹೇಳುತ್ತಾ ಕೆಲವು ತಾಳೇಗರಿಗಳನ್ನು ತೋರಿಸಿ ಅದರಲ್ಲಿರುವ ವಿವರಗಳನ್ನು ಬಿಡಿಸಿ ಹೇಳಿದರು. ಈಗಲೂ ಅವರು ನೀಡಿದ ಹಾಗೂ ಮುಂದೆ ನಾನು ಸಂಗ್ರಹಿಸಿದ ಶಿವನ ಕುರಿತಾದ ಕೆಲವು ತಾಳೇಗರಿಗಳು ನನ್ನಲ್ಲಿವೆ. 
        ನಂತರ ಕೆಲದಿನಗಳಲ್ಲೇ ನನಗೆ ಶಿವನ ಆರಾಧನೆಯ ತರಬೇತಿ ಆರಂಭವಾಯಿತು. 'ಊರ ಹೊರಗಿನ ಸ್ಮಶಾನದಲ್ಲಿ ರಾತ್ರಿ ಹೋಗಿ ಮಲಗಿ ಬರುವ ಧೈರ್ಯವಿದೆಯೇ?' ಎಂದೊಮ್ಮೆ ಕೇಳಿದರು. ನನಗೆ ಸ್ಮಶಾನದ ಬಗ್ಗೆ, ದೆವ್ವಪಿಶಾಚಿಗಳ ಬಗ್ಗೆ ಯಾವ ಭಯವೂ ಇರಲಿಲ್ಲ. ನಾನು ಕೂಡಲೇ ಒಪ್ಪಿಕೊಂಡೆ. ಅಂದಿನಿಂದ ಐದು ದಿನ ನಾನು ಸ್ಮಶಾನಕ್ಕೆ ಹೋಗಿ ಮೂಲೆಯೊಂದೆಡೆ ಮಲಗಿ ಬೆಳಿಗ್ಗೆ ಬರುತ್ತಿದ್ದೆ. ಮೊದಲ ದಿನ ಸ್ವಲ್ಪ ಭಯವಾಯಿತು. ದೆವ್ವಗಳ ಬಗ್ಗೆ ಅಲ್ಲ, ಅಲ್ಲಿರಬಹುದಾದ ಹಾವು ಚೇಳುಗಳ ಬಗ್ಗೆ. ಅಕಸ್ಮಾತ್ ಮಲಗಿರುವಾಗ ಬಂದು ಕಚ್ಚಿದರೆ? ಎಂಬ ಭಯವಿತ್ತು. ಒಂದೇ ದಿನ, ನಂತರ ನಮ್ಮ ಅಜ್ಜನ ಆಸ್ತಿಯೇನೋ ಎಂಬಂತೆ ಹೋಗಿ ಮಲಗುತ್ತಿದ್ದೆ. ಅಷ್ಟರಲ್ಲಿ ಅಲ್ಲಿ ಸಣ್ಣ ಮನೆಯಲ್ಲಿದ್ದ ಕಾವಲುಗಾರನ ಗೆಳೆತನವನ್ನೂ  ಮಾಡಿಕೊಂಡು ಬಿಟ್ಟಿದ್ದೆ. 
ಗುರುಗಳು ಕೇಳಿದರು 'ಭಯವಾಗಲಿಲ್ಲವೇ? 
'ಒಂದೆರಡು ದಿನ ಈ ಹಾವು ಚೇಳುಗಳ ಬಗ್ಗೆ ಭಯ ಇತ್ತು, ಆಮೇಲೆ ಸರಾಗವಾಗಿ ಹೋಯಿತು' ನಗುತ್ತಾ ಹೇಳಿದೆ. 
'ಶಿವನ ಅನುಷ್ಠಾನ ಮಾಡುವಾಗ ಭಯಕ್ಕೆ ಆಸ್ಪದವಿಲ್ಲ, ಅದಕ್ಕಾಗಿ ಈ ಸಣ್ಣ ಪ್ರಯೋಗ ಮಾಡಿದ್ದು. ನಾಳೆ ನಿನಗೆ ಶಿವನ ಮಂತ್ರೋಪದೇಶ ಮಾಡುತ್ತೇನೆ' ಎಂದು ಹೇಳಿ ಹೊರಟರು. ನಾನು 'ನಾಳೆ'ಗೆ ಕಾಯುತ್ತಿದ್ದೆ. 
        ಮರುದಿನ ಮಂತ್ರ ದೀಕ್ಷೆ ನೀಡುವ ಮೊದಲು ಗುರುಗಳು ನನಗೆ ಈ ಸಾಧನೆಯ ಬಗ್ಗೆ ಕೆಲ ಮಾತುಗಳನ್ನು ಹೇಳಿದರು. "ಶಿವನು ಹಿಮಾಲಯದಲ್ಲಿ ಕುಳಿತರೂ ಆತನ ಧ್ಯಾನದ ಉತ್ಕಟತೆಗೆ ಮೈ ಹೋಮಕುಂಡದಂತೆ ಸುಡುತ್ತಿರುತ್ತದೆ. ಆದ್ದರಿಂದ ಆತನಿಗೆ ಚಳಿ ಸೋಕುವುದಿಲ್ಲ. ಶಿವನ ಮಂತ್ರದೊಂದಿಗೆ ಅಗ್ನಿಮಂತ್ರವನ್ನು ಸೇರಿಸಿ 'ಹ್ರೀಂ ಓಂ ನಮಃ ಶಿವಾಯ ಹ್ರೀಂ' ಎಂದು ಚಿನ್ಮುದ್ರೆಯಲ್ಲಿ ಜಪ ಮಾಡು, ತೋರುಬೆರಳ ತುದಿಯಲ್ಲಿ ಅಗ್ನಿಯ ಸಾನ್ನಿಧ್ಯ ಇರುತ್ತದೆ. ನಾನು ನಿನಗೆ ಗೋಪ್ಯವಾಗಿ ಕೊಟ್ಟ ಬೀಜಾಕ್ಷರವನ್ನು ಆದಿಯಲ್ಲಿ ಸೇರಿಸು. ನೀನು ಶಿವನ ಅನುಷ್ಠಾನ ಮಾಡಬೇಕಾದರೆ ಮೊದಲು ನಿನ್ನ ನಾಲ್ಕೂ ಬದಿಯಲ್ಲಿ ಧಗ ಧಗ ಉರಿಯುವ ನಾಲ್ಕು ಹೋಮಕುಂಡಗಳಿವೆಯೆಂದು ಭಾವಿಸು. ನೀನೇ ಸ್ವತಃ ಒಂದು ಹೋಮಕುಂಡದಲ್ಲಿ ಕುಳಿತು ಕೊಂಡಿರುವುದಾಗಿ ಕಲ್ಪಿಸಿಕೋ. ಮಿಕ್ಕೆಲ್ಲ ವಿಧಿ ವಿಧಾನಗಳನ್ನು ನಾನು ನಿನಗೆ ತಿಳಿಸಿಕೊಟ್ಟ ರೀತಿಯಲ್ಲಿಯೇ ಮಾಡು. ನಾಳೆ ನಾನು ಮತ್ತೆ ಹೊರಡುತ್ತಿದ್ದೇನೆ. ಇಂದು ನಿನಗಾದ ಅನುಭವವನ್ನು ನಾಳೆ ನನಗೆ ಹೇಳು" ಎಂದು ಹೇಳಿ ಆಶೀರ್ವದಿಸಿ ಹೊರಟರು. ಹೊಸದಾದ ಮತ್ತೊಂದು ಅನುಭವಕ್ಕೆ ಮನಸ್ಸು ಅಣಿಯಾಗಿತ್ತು. ಮೊದಲ ದಿನ ವಿಶೇಷ ಅನುಭವವೇನೂ ಆಗಲಿಲ್ಲ. ಅದನ್ನೇ ಗುರುಗಳ ಬಳಿ ಹೇಳಿಕೊಂಡೆ. 
       ಮುಂದಿನ ದಿನಗಳಲ್ಲಿ ಶಿವನ ಉತ್ಕಟತೆ ಪಡೆಯಲು ತೀಕ್ಷ್ಣವಾದ ಬೆಂಕಿಯಲ್ಲಿ ನಾನೇ ಸುಟ್ಟುಹೋಗುತ್ತಿರುವಂತೆ ಭಾವಿಸಿಕೊಳ್ಳುತ್ತಿದ್ದೆ. ಹೀಗೆ ಸುಮಾರು ಹತ್ತು ದಿನಗಳ ಕಾಲ ಅನುಷ್ಠಾನ ಮಾಡುತ್ತಿದ್ದಂತೇ, ಪೂಜೆ ಮುಗಿಸಿದ ಮೇಲೆ ನನ್ನ ಕೈಗಳಲ್ಲಿ, ಭುಜಗಳಲ್ಲಿ, ಚರ್ಮದ ಮೇಲೆ ಸಣ್ಣದಾಗಿ ಬಿಳಿಯ ಬೂದಿಯ ಪದರವಿರುವುದನ್ನು ಗಮನಿಸಿದೆ. ಹಿತವಾಗಿ ಅದನ್ನು ಸವರಿಕೊಂಡೆ. ಅದರ ಬಗ್ಗೆಯೇ ಚಿಂತಿಸುತ್ತಿದ್ದೆ. ಶಿವನು ವಿಭೂತಿಧಾರಿ ಅನ್ನುವುದರ ಅರ್ಥ ನನಗೆ ಬೇರೆ ತರಹವಾಗಿ ಕಾಣ ಸಿಕ್ಕಿತು. ಶಿವನ ತಪಸ್ಸಿನ ತೀವ್ರತೆಗೆ ಆತನ ಮೈಯ್ಯೆಲ್ಲಾ ಸುಡುತ್ತಿತ್ತೇನೋ ಎಂದು ಅನ್ನಿಸಿತ್ತು. 
        ಮುಂದೆ ನನ್ನ ಭಾವವನ್ನು ತೀವ್ರಗೊಳಿಸಿದೆ. 'ಭಾವವಿಲ್ಲದ ಪೂಜೆಗೆ ಬೆಲೆಯಿಲ್ಲ' ಎಂದು ಪದೇ ಪದೇ ಗುರುಗಳು ಹೇಳುತ್ತಿದ್ದರು. ನನ್ನ ಮನಃಸ್ಥಿತಿ ಅಂದಿನ ದಿನಗಳಲ್ಲಿ ಗಂಭೀರವಾಗಿತ್ತು. ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಮನಸ್ಸು ಶಾಂತವಾಗಿರುತ್ತಿತ್ತು.
        ಇದಾಗಿ ಕೆಲವು ದಿನಗಳಲ್ಲಿ ಒಮ್ಮೆ ಅನುಷ್ಠಾನಕ್ಕೆ ಕುಳಿತಾಗ ನನ್ನ ಮುಂದಿಟ್ಟಿದ್ದ ಹರಿವಾಣದಲ್ಲಿ ಏನೋ ಬಿದ್ದಂತೇ ಭಾಸವಾಯಿತು. ಕಣ್ಣು ಮುಚ್ಚಿ ಜಪ ಮಾಡುತ್ತಿದ್ದ ನನಗೆ ಕಣ್ಣು ತೆರೆದು ನೋಡುವ ಕುತೂಹಲ. 'ಇರಲಿ' ಎಂದು ನನಗೆ ನಾನೇ ಹೇಳಿಕೊಂಡು ಜಪವನ್ನು ಮುಂದುವರೆಸಿದೆ. ಮತ್ತೆ ಏನೋ ಶಬ್ದ! 'ಕುಳಿತ ಸ್ಥಳದಿಂದ ಏಳಬಾರದು ಎಂದು ಹೇಳಿದ್ದರಲ್ಲದೇ ಕಣ್ಣು ಬಿಡಬಾರದು ಎಂದೇನೂ ಹೇಳಲಿಲ್ಲವಲ್ಲ' ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಕಣ್ಣು ಬಿಟ್ಟೆ.  ನನ್ನ ಮುಖದಿಂದ ಒಂದು ಅರ್ಧ ಅಡಿ ದೂರದಲ್ಲಿ ನನ್ನ ಎದುರಿಗಿದ್ದ ಹರಿವಾಣದಲ್ಲಿ ಹೆಡೆ ಎತ್ತಿ ಕುಳಿತ ನಾಗರ ಹಾವೊಂದು ನನ್ನನ್ನೇ ನೋಡುತ್ತಿತ್ತು! 
        ಮುಂದೇನಾಯ್ತು? ಮುಂದಿನ ಕಂತಿನಲ್ಲಿ... 

Tuesday 15 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 12


        ತಂತ್ರ ಎಂದೊಡನೆ ಜನರಲ್ಲಿ ಭಯಾನಕ ಕಲ್ಪನೆಗಳಿವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲನೆಯದಾಗಿ ಅದರಲ್ಲಿರುವ ದಕ್ಷಿಣಮಾರ್ಗ ಹಾಗೂ ವಾಮಮಾರ್ಗ ಪೂಜಾಪದ್ಧತಿಗಳು. ಜನಸಾಮಾನ್ಯರಿಗೆ ತಂತ್ರ ಅಥವಾ ತಾಂತ್ರಿಕ ಎಂದೊಡನೆ ಮನಸ್ಸಲ್ಲಿ ಮೂಡುವುದು ವಾಮಮಾರ್ಗ ಒಂದೇ! ವಾಮಮಾರ್ಗದಲ್ಲಿ ಕೆಲವು 'ಕ್ಷುದ್ರದೇವತೆ'ಗಳೆಂದು ಕರೆಯಲ್ಪಡುವ ದೇವತೆಗಳ ಆರಾಧನೆಯಿದೆ (ನಾನಂತೂ 'ಕ್ಷುದ್ರ ದೇವತೆ' ಎಂದು ಕರೆಯಲಾರೆ). ಇವು ನಕಾರಾತ್ಮಕ ಶಕ್ತಿಯನ್ನು/ಆಲೋಚನೆಗಳನ್ನು ಉಪಯೋಗಿಸುವ ವಿಧಾನಗಳು
        ಇದಲ್ಲದೇ 'ಪಂಚಮಕಾರ'ಗಳ ಅನುಷ್ಠಾನದ ತರಬೇತಿಯಿದೆ. ಈ ಪಂಚಮಕಾರಗಳು ಮದ್ಯ,ಮಾಂಸ,ಮತ್ಸ್ಯ,ಮುದ್ರಾ, ಮಿಥುನಗಳನ್ನು ಒಳಗೊಂಡಿವೆ. ಮೇಲ್ನೋಟಕ್ಕೆ ಮಡಿವಂತರ ಮನಸ್ಸಿಗೆ ಇದು ಅಪಥ್ಯದಂತೆ ಕಂಡರೂ, ಅದರ ಅರ್ಥ ಬೇರೆಯೇ ಇದೆ. ಪಶುಭಾವದಿಂದ ವೀರಭಾವಕ್ಕೆ ಕರೆದೊಯ್ದು, ದಿವ್ಯ ಭಾವದಲ್ಲಿ ನೆಲೆಗೊಳಿಸುವುದು ತಂತ್ರ ವಿದ್ಯೆಯ ಪರಮಗುರಿ. ಇದರ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ.
        ಈಗ ನನ್ನ ತಾಂತ್ರಿಕ ಪಯಣದ ಹಾದಿಯನ್ನು ವಿವರಿಸುತ್ತೇನೆ. ನನಗೆ ಗುರುಗಳು ಹೇಳಿದ ದೇವಿ ಅನುಷ್ಠಾನದ ಅವಧಿ ಮುಗಿಸಿದ್ದುದರಿಂದ, ಅವರು ಮತ್ತೆ ಬರುವವರೆಗೂ  ದೈನಂದಿನ ಸಾಧಾರಣ ಪೂಜೆಯಲ್ಲಿ ತೊಡಗಿಕೊಂಡಿದ್ದೆ. ಆಗ ಸಾಕಷ್ಟು ಸಮಯ ಸಿಗುತ್ತಿತ್ತು. ಒಮ್ಮೆ ಗೆಳೆಯ ಭಾಮಿ ಸುಧಾಕರ ಶೆಣೈ ವ್ಯಾಯಾಮ ಶಾಲೆಯಲ್ಲಿ ನನಗೆ ಸಿಕ್ಕಿದಾಗ 'ನಾಳೆಯಿಂದ ವೆಂಕಟರಮಣ ದೇವಸ್ಥಾನದಲ್ಲಿ ವೇದಸೂಕ್ತಗಳ ಬಗ್ಗೆ ವಿವರಣೆ ಅವುಗಳನ್ನು ಕ್ರಮವಾಗಿ ಉಚ್ಚರಿಸುವ ಹಾಗೂ ಅಭ್ಯಸಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಆಸಕ್ತಿ ಇದ್ದರೆ ನೀನೂ ಸೇರಿಕೊಳ್ಳಬಹುದು' ಎಂದು ಹೇಳಿದ. ಎಲ್ಲವೂ ಅದಾಗಿ ಹುಡುಕಿ ಬಂದಂತೇ ಭಾಸವಾಗಿತ್ತು. ಬಿಡುವಾಗಿಯೂ ಇದ್ದೆ, ಹುಡುಕಿ ಹೋದರೂ ಸಿಗದಂತಹ ಅವಕಾಶ ತಾನಾಗಿಯೇ ಒದಗಿತ್ತು!
        ಮಾರನೇ ದಿನದಿಂದಲೇ ಬೆಳಿಗ್ಗೆ ವೆಂಕಟರಮಣ ದೇವಸ್ಥಾನಕ್ಕೆ ತರಬೇತಿಗಾಗಿ ಹೋಗಲಾರಂಭಿಸಿದೆ. ಋಗ್ವೇದದ ಪ್ರಾತಃಸೂಕ್ತದಿಂದ ನನ್ನ ಕಲಿಕೆ ಆರಂಭವಾಯಿತು. ನಂತರ ಶ್ರೀಸೂಕ್ತ, ಪುರುಷಸೂಕ್ತ, ವಾಗಾಂಭ್ರಣೀ ಸೂಕ್ತ ಮುಂತಾದ ಮುಖ್ಯ ಸೂಕ್ತಗಳನ್ನು ಇಷ್ಟಪಟ್ಟು ಕಲಿತೆ. ಆಗ ನನಗೆ ನೆರವಾದ ವೇದಮೂರ್ತಿ ಶ್ರೀ ಹರಿಭಟ್ಟರ ಸಹಾಯ, ಸಹಕಾರವನ್ನು ಎಂದಿಗೂ ಮರೆಯಲಾರೆ.          ನನಗೆ ಪ್ರೋತ್ಸಾಹ ನೀಡುತ್ತಿದ್ದ ಗೆಳೆಯರಾದ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ ಬಾಳಿಗಾ ಅವರೆಲ್ಲರೊಡನೆ ಸಂಜೆ ಬೆರೆಯುತ್ತಿದ್ದೆ. ಯಶವಂತ ವ್ಯಾಯಾಮ ಶಾಲೆ, ನಮ್ಮ ಮಾತುಗಳಿಗೆ ಪ್ರತಿದಿನ ಸಾಕ್ಷಿಯಾಗುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಇನ್ನೊಬ್ಬ ಗೆಳೆಯ 'ಮಾಣೂರು ಅಚ್ಚು'. ನಾನು ಏನು ಕೇಳಿದರೂ ಇಲ್ಲವೆನ್ನದೇ ಒದಗಿಸುತ್ತಿದ್ದ. ಆರಂಭದ ದಿನಗಳಲ್ಲಿ ನನಗೆ ಕುಳಿತುಕೊಂಡು ಧ್ಯಾನ ಮಾಡಲು ಜಿಂಕೆಯ ಚರ್ಮವೊಂದು ಬೇಕಾಗಿತ್ತು. ಯಾರೂ ಸಾಯಿಸದೇ, ತಾನಾಗಿ ಸತ್ತ ಚರ್ಮವೇ ಬೇಕಾಗಿತ್ತು. 'ಅಚ್ಚು' ಯಾವುದೋ ಮಠಕ್ಕೆ ಹೋಗಿ ಅವರ ಮನವೊಲಿಸಿ ಜಿಂಕೆಯ ಚರ್ಮವೊಂದನ್ನು ಎರಡು ದಿನಗಳಲ್ಲಿ ಒದಗಿಸಿ ಕೊಟ್ಟಿದ್ದ. ನಾನು ಮತ್ತೆ ಹಿಂದಿರುಗಿ ಬರುವಾಗ, ಅದನ್ನು ಮತ್ತೆ ಅದೇ ಮಠಕ್ಕೆ ನೀಡುವಂತೆ ಹೇಳಿ ಆತನಿಗೆ ವಾಪಸ್ಸು ಕೊಟ್ಟೆ.
        ನನ್ನ ಗುರುಗಳು ಹಿಂದಿರುಗಿ ಬಂದರು. ನನ್ನನ್ನು ಅವರದ್ದೇ ಆದ ರೀತಿಯಲ್ಲಿ ಪರೀಕ್ಷಿಸಿದರು. ನನ್ನ ಕಣ್ಣುಗಳನ್ನು ಎವೆಯಿಕ್ಕದೇ ಕ್ಷಣಕಾಲ ನೋಡಿದರು. ಬಲ ಕೈಯ್ಯನ್ನು ತಮ್ಮ ಕೈಯ್ಯಲ್ಲಿ ಹಿಡಿದು ಕೆಲಕಾಲ ತೂಗುತ್ತಾ ಇದ್ದರು. ದೇವೀ ಮಂತ್ರದ ಸಣ್ಣ ಪ್ರಯೋಗವೊಂದನ್ನು ನನ್ನ ಕೈಯ್ಯಲ್ಲಿ ಮಾಡಿಸಿ ನೋಡಿದರು. ಅದನ್ನು ಕಣ್ಣಾರೆ ಕಂಡಾಗ ನನಗೇ ಅಚ್ಚರಿಯಾಯಿತು. ಅದೇನೆಂಬುದು ಇಲ್ಲಿ ಅಪ್ರಸ್ತುತ.
        'ನಿನಗೆ ದೇವೀ ಮಂತ್ರವು ಒಲಿದಿದೆ, ಈಗ ಆ ಮಂತ್ರ ನಿನಗೆ 'ಸಿದ್ಧಿ'ಯಾಗಲು ಆ ಮಂತ್ರದ ಕೆಲವು ಜಪ ಸಂಸ್ಕಾರಗಳನ್ನು ಮಾಡುತ್ತೇನೆ ' ಎಂದು ಹೇಳಿ ಕೆಲವಾರು ಸಂಸ್ಕಾರಗಳನ್ನು ಮಾಡಿದರು. ಹಲವಾರು ಸಂಸ್ಕಾರಗಳನ್ನು ಮುಗಿಸಿ 'ಇಲ್ಲಿಗೆ ಈ ದೇವೀ ಮಂತ್ರ ನಿನಗೆ ಸಿದ್ಧಿಯಾಗಿದೆ, ವಿವೇಕ ಹಾಗೂ ವಿವೇಚನೆಯಿಂದ ಬಳಸು' ಎಂದು ಹೇಳಿ ಆಶೀರ್ವದಿಸಿದರು. 



        ಜಪದ ಬಗ್ಗೆ ವಿವರವಾಗಿ, ನಾನು ಅಲ್ಲಿದ್ದಾಗ ಬರೆದ 'ಜಪ, ನನ್ನ ಅನುಭವದಲ್ಲಿ' ಪುಸ್ತಕದಲ್ಲಿ ಬರೆದಿದ್ದೇನೆ. ಅದನ್ನು ಶ್ರೀ ಹರಿಭಟ್ಟರು ಹೊಸದಿಗಂತ ಪತ್ರಿಕೆಯ 'ದಿಗಂತ ಪ್ರಕಾಶನ'ದ  ಮೂಲಕ ಪ್ರಕಟಿಸಿದ್ದರು. ಈಗ ಅದರ ಪ್ರತಿಗಳು ಬಹುಶಃ ಲಭ್ಯವಿಲ್ಲವೇನೋ.
        ಮುಂದಿನ ಅನುಷ್ಠಾನಕ್ಕೆ ನನ್ನನ್ನು ಅಣಿಗೊಳಿಸಿದರು ನನ್ನ ಗುರುಗಳು. ಶಕ್ತಿಯ ಆರಾಧನೆಯ ನಂತರ ಶಿವನ ಆರಾಧನೆ. ತಾಂತ್ರಿಕ ಆರಾಧಕರನ್ನು 'ಶಾಕ್ತೇಯರು' ಎಂದೂ ಕರೆಯುತ್ತಾರೆ.ಶಕ್ತಿ ಹಾಗೂ ಶಿವನ ಆರಾಧನೆ ಇಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತದೆ.
       ಶಿವನ ಆರಾಧನೆಗೆ ನನ್ನನ್ನು ಗುರುಗಳು ಅನುಗೊಳಿಸಿದ್ದು ಹೇಗೆ? ಶಿವ ಮಂತ್ರದ ಅನುಷ್ಠಾನದಲ್ಲಿ ನನಗಾದ ವಿಶೇಷ ಅನುಭವಗಳೇನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ.

Monday 14 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 11

        ಈ ಅನುಭವಗಳು ನನಗೆ ಅತ್ಯಂತ ಹಿತವಾದ, ನವಿರಾದ, ಹಾಗೂ ಮುದವಾದ ಅನುಭವವನ್ನು ನೀಡಿ ನಾನು ಭಾವುಕನಾಗಿದ್ದು ಮಾತ್ರ ಸತ್ಯ. ಗುರುಗಳು ಹೇಳಿದಷ್ಟು ದಿನ ದೇವಿ ಉಪಾಸನೆಯನ್ನು ಮಾಡಿ ಮುಗಿಸಿದ್ದೆ. ಕಠಿಣ ಅನುಷ್ಠಾನಕ್ಕೆ ಕೊಂಚ ಬಿಡುವು ಸಿಕ್ಕಿತ್ತು. ಗುರುಗಳ ಬರುವಿಕೆಗೆ ಕಾಯುತ್ತಿದ್ದೆ.  
        ಮನೋವಿಜ್ಞಾನದ ದೃಷ್ಟಿಯಿಂದ ನನ್ನ ಅನುಭವವನ್ನು ತುಲನೆ ಮಾಡಿದೆ. ಮನೋವಿಜ್ಞಾನ ಇಂತಹ ಅನುಭವಗಳನ್ನು ಸಾಧಾರಣವಾಗಿ ಭ್ರಮೆ (hallucination) ಎಂದು ಕರೆಯುತ್ತದೆ. ಭ್ರಮೆ ಅಥವಾ ಭ್ರಾಂತಿಯಲ್ಲಿರುವುದು ಒಂದು ಮಾನಸಿಕ ಕಾಯಿಲೆಯ ಲಕ್ಷಣ. ಭ್ರಮೆ ಅಥವಾ ಭ್ರಾಂತಿ ನಾವು ಬಯಸಿ ಸಿಗುವ ಅನುಭವವಲ್ಲ, ಬಯಸಿದ್ದನ್ನು ಕೊಡುವ ಅನುಭವವೂ ಅಲ್ಲ. ಅದು ನಮಗೆ ಬೇಡದ, ಅಥವಾ ನಾವು ಇಷ್ಟಪಡದ ಅನುಭವವನ್ನು ಕೊಡುವ ಗುಣವನ್ನು ಹೊಂದಿರುತ್ತದೆ. 
        ನಾವು ಇಷ್ಟಪಟ್ಟು ಪದೇ ಪದೇ ಚಿಂತಿಸಿ ಅರೆಪ್ರಜ್ಞಾ ಮನಸ್ಸಿನ ಸಹಾಯದಿಂದ ಅನುಭವವನ್ನು ಪಡೆಯುವ ವಿಧಾನಕ್ಕೆ ಮನೋವಿಜ್ಞಾನ 'ದೃಶ್ಯೀಕರಣ ತಂತ್ರ' (visualization technique) ಎನ್ನುತ್ತದೆ.  ಇದು ಮನಸ್ಸಿನ ಶಕ್ತಿಯನ್ನು ಉಪಯೋಗಿಸಲು ಇರುವ ಒಂದು ಶಕ್ತಿಶಾಲೀ ತಂತ್ರ. ತಾಂತ್ರಿಕ ವಿದ್ಯೆಯಲ್ಲಿರುವ ದೃಶ್ಯೀಕರಣ ತಂತ್ರದಲ್ಲಿ ನಾ ಕಂಡ ಒಂದೇ ಒಂದು ವ್ಯತ್ಯಾಸವೆಂದರೆ  'ಭಾವ'. ಅದು ಅದ್ಭುತ ಹಾಗೂ ಅಲೌಕಿಕ ಅನುಭವವನ್ನು ನೀಡುತ್ತದೆ. 
        ನಾನು ಕಂಡುಕೊಂಡ  ಇನ್ನೊಂದು ಸತ್ಯವೇನೆಂದರೆ ಯಾವುದೇ ಆಧ್ಯಾತ್ಮಿಕ ಸಾಧನೆಯ ಅನುಷ್ಠಾನದಲ್ಲಿ ನಾವು ತೊಡಗಿಕೊಂಡಿರುವಾಗ, ನಮ್ಮ ಅನುಭವಗಳ ಬಗ್ಗೆ ಯಾರ ಬಳಿಯೂ ಚರ್ಚೆ ಮಾಡದಿರುವುದೇ ಒಳಿತು. ಅವರ ನಕಾರಾತ್ಮಕ ಪ್ರತಿಕ್ರಿಯೆಗಳು ನಮ್ಮ ಮನಸ್ಸಿನಲ್ಲಿ ಸಂದೇಹದ ಬೀಜಗಳನ್ನು ಬಿತ್ತಬಹುದು. ನಿಮ್ಮ ಅನುಭವಗಳು ನಿಮ್ಮವು. ಅದು ಯಾರ ಅನುಭವಕ್ಕೂ ತಾಳೆಯಾಗಬೇಕಿಲ್ಲ. ಹಾಗೆಯೇ ಬೇರೆಯವರಿಗೆ ಆದಂತಹದ್ದೇ ಅನುಭವ ನಮಗೂ ಆಗಬೇಕಿಲ್ಲ.              ದೈವಸಾಕ್ಷಾತ್ಕಾರವೆಂದೊಡನೆ ದೇವರು ಎದುರಿಗೆ ಪ್ರತ್ಯಕ್ಷನಾಗಿ ನಿಂತು 'ಭಕ್ತಾ, ನಿನಗೇನೂ ಬೇಕು?' ಎಂದು ಕೇಳಬೇಕಾಗಿಲ್ಲ. ಆ ಸಹಜವಾದ ಪ್ರಕೃತಿಶಕ್ತಿಯೊಡನೆ ಯಾವುದೇ ಅನುಭವ, ಅನುಭಾವಗಳು ಸಾಕ್ಷಾತ್ಕಾರದ ರೂಪವೇ. 
        ಅದು ದೊರೆತ ಮಾತ್ರಕ್ಕೆ ಯಾರೂ ದೇವಮಾನವರಾಗುವುದೂ ಇಲ್ಲ. ನಮ್ಮ ಎಲ್ಲಾ ದೌರ್ಬಲ್ಯಗಳು ನಮ್ಮಲ್ಲಿಯೇ ಇರುತ್ತವೆ. ಆದರೆ ಈ ಅನುಭವಗಳು ಆಗುತ್ತಿದ್ದಂತೇ ಬದುಕಿನ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ದೌರ್ಬಲ್ಯಗಳನ್ನು, ದೌರ್ಬಲ್ಯಗಳು ಎಂದು ತಿಳಿಯುವ ಮಟ್ಟಕ್ಕೆ ಹೋಗುತ್ತೇವೆ. ಇಲ್ಲಿ ಹೊಸ ರೀತಿಯ ಬದುಕನ್ನು ರೂಪಿಸಿಕೊಳ್ಳುವ ಒಂದು ಅವಕಾಶವನ್ನು ಅದು ಕಲ್ಪಿಸಿಕೊಡುತ್ತದೆ. ಬದಲಾಗುವುದು, ಬಿಡುವುದು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ತೀರ್ಮಾನ ತೆಗೆದುಕೊಳ್ಳಬೇಕಾದವರು ನೀವೇ ಆಗಿರುತ್ತೀರಿ. 
        ಯಾವುದೇ ಸಾಧನೆಯ ಪಥವನ್ನು ನೀವು ಆರಿಸುವ ಮೊದಲು ಹತ್ತು ಬಾರಿ ಯೋಚಿಸಿ,ಆದರೆ ಆರಿಸಿಕೊಂಡಾದ ಮೇಲೆ ಮುನ್ನುಗ್ಗುತ್ತಿರಿ. ಸಾಧನೆಯ ಪಥದಲ್ಲಿದ್ದಾಗ ತುಂಬಾ ಯೋಚಿಸುವುದು, ಅದಕ್ಕೆ ಸಂಬಂಧ ಪಟ್ಟ ಹಲವಾರು ಪುಸ್ತಕಗಳನ್ನು ಓದುವುದು, ಕಂಡ ಕಂಡವರೊಂದಿಗೆ ಚರ್ಚಿಸುವುದು ಮುಂತಾದ ವಿಚಾರಗಳಿಂದ ದೂರವಿರಿ. ಇವೆಲ್ಲಾ ನಿಮ್ಮ ಸಾಧನೆಯ ಮಾರ್ಗವನ್ನು ಧೀರ್ಘ ಮಾಡುತ್ತವೆ. 
        ಆಧ್ಯಾತ್ಮಿಕ ಸಾಧನೆ ಒತ್ತಟ್ಟಿಗಿರಲಿ, ಈ ಎಲ್ಲಾ ವಿಷಯಗಳು ಲೌಕಿಕ ವಿಷಯಗಳ ಸಾಧನೆ ಮಾಡುವಾಗಲೂ ಅನ್ವಯವಾಗುತ್ತವೆ. ನನ್ನದೇ ಒಂದು ಅನುಭವದಿಂದ ನಾನು ಇದನ್ನು ಕಲಿತೆ.
ಅದೇನೆಂದರೆ 

        ಹಿಂದೊಮ್ಮ ನಾನು ಹಾಗೂ ನನ್ನ ಸಂಬಂಧಿಕ ಸುನೀಲ (ಇಂದಕ್ಕಳ ಮಗ), ಈಜು ಕಲಿಯಲು ನೇತ್ರಾವತೀ ನದಿಯಲ್ಲಿ ಇಳಿದಿದ್ದೆವು. ಇಳಿದ ಮೇಲೆ ಗೊತ್ತಾಗಿದ್ದು, ಈಜುವುದು ಅಷ್ಟು ಸುಲಭವಲ್ಲ ಎಂಬ ಕಠೋರ ಸತ್ಯ. ಈಜಲು ಹೋಗಿ ಸಾಕಷ್ಟು ನೀರು ಕುಡಿಡಿದ್ದೆವು. ನಂತರ ಬುದ್ಧಿವಂತನಾದ ನಾನು ನಮ್ಮ ಊರಿನ ಗ್ರಂಥಾಲಯಕ್ಕೆ ಹೋಗಿ ಈಜಿನ ಬಗ್ಗೆ ಕೆಲವು ಪುಸ್ತಕಗಳನ್ನು ಓದಿದೆ. ಈಜುವುದರಲ್ಲಿ ನಿಷ್ಣಾತರಾದ ಗೋವಿಂದ ಎನ್ನುವವರ ಬಳಿ ಹೋಗಿ ಈಜಿನ ಬಗ್ಗೆ ಚರ್ಚಿಸಿದೆ. ಸುಲಿಯದ 'ಪೊಟ್ಟು' ತೆಂಗಿನಕಾಯಿಯನ್ನು ಕಂಕಳಿಗೆ ಸಿಕ್ಕಿಸಿಕೊಂಡರೆ ಮುಳುಗುವುದಿಲ್ಲ ಎಂದು ಆ ಪ್ರಯೋಗವನ್ನೂ ಮಾಡಿ ನೋಡಿದೆ. ನಾನೊಂದೆಡೆ ಮುಳುಗಿ ನೀರು ಕುಡಿಯುತ್ತಿದ್ದರೆ, ತೆಂಗಿನ ಕಾಯಿ ಇನ್ನೊಂದೆಡೆ ತೇಲಿ ಹೋಗುತ್ತಿತ್ತು. ಹೀಗೆ ಸುಮಾರು ಹದನೈದಿಪ್ಪತ್ತು ದಿನಗಳನ್ನು ಈಜಿನ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಕಳೆದೆ.
        ಒಮ್ಮೆ ನದೀ ತೀರದೆಡೆ ಹೋದಾಗ ನನಗೆ ಆಘಾತ ಕಾದಿತ್ತು. ಸುನೀಲ ಆರಾಮಾಗಿ ಈಜುತ್ತಿದ್ದ ! 
'ಹೇಗೆ ಕಲಿತೆಯೋ?' ಅಚ್ಚರಿಯಿಂದ ಕೇಳಿದೆ. 
ನನ್ನ ಗೆಳೆಯ 'ಗುಂಡಿ ಇರುವ ಜಾಗ ನೋಡಿ ಸುಮ್ಮನೆ ನೀರಿಗೆ ಎಗರು,ಕೈ ಕಾಲು ಬಡಿಯುತ್ತಾ ಈಜಲು ಕಲಿಯುವೆ' ಎಂದು ಹೇಳಿದನಲ್ಲದೇ  'ನಾನು ಹಾಗೆಯೇ ಮಾಡಿದೆ' ಎನ್ನುತ್ತಾ ರಿವರ್ಸ್ ಸ್ಟ್ರೋಕ್ ಹೊಡೆಯುತ್ತಾ ಹೋದ !!  
ಆಗ ನಾನೊಂದು ನಿಶ್ಚಯ ಮಾಡಿದೆ 'ನಾಳೆ ನಾನು ಬಂದು ನೀರಿಗೆ ಧುಮುಕಿ ಈಜುವುದೇ!' ಸುನೀಲನಿಗೆ ಕೂಗಿ ಹೇಳಿದೆ ' ನಾಳೆ ಬೆಳಿಗ್ಗೆ ಎಂಟು ಘಂಟೆಗೆ ನನ್ನ ಜೊತೆ ಬಾ, ನಾನು ಈಜಿ ತೋರಿಸುತ್ತೇನೆ'   
        ಮಾರನೇ ದಿನ ಸುನೀಲನ ಜೊತೆ ನೇತ್ರಾವತಿ ತೀರಕ್ಕೆ ಬಂದೆವು. ನನ್ನ ದುರಾದೃಷ್ಟಕ್ಕೆ ಅಂದು ಪ್ರವಾಹ ಬಂದು ನೇತ್ರಾವತಿ ಉಕ್ಕಿ ಹರಿಯುತ್ತಿದ್ದಳು. 
'ಬಾ ವಾಪಸ್ ಹೋಗೋಣ, ಇಂದು ನಿನ್ನ ಗ್ರಹಚಾರಕ್ಕೆ ಪ್ರವಾಹ. ನಾಳೆ ಬಂದರಾಯಿತು ಬಿಡು' ಎಂದು ಹಿಂದಿರುಗಲು ಸಿದ್ಧನಾದ ಸುನೀಲ.
'ಇಲ್ಲ, ನಾನು ಇಂದು ನೀರಿಗೆ ಬೀಳಲು ಹಾಗೂ ಈಜಲು ನಿರ್ಧಾರ ಮಾಡಿದ್ದೇನೆ. ಬೀಳುವುದೇ, ಬಿದ್ದು ಈಜುವುದೇ!' ಎಂದು ಹೇಳಿದೆ. 
        ಸುನೀಲ 'ಹೋ ಹೋ..' ಎಂದು ಬೊಬ್ಬೆ ಹಾಕುತ್ತಿದ್ದರೂ ನಾನು ನೀರಿಗೆ ಧುಮುಕಿದ್ದೆ. ಪ್ರವಾಹದ ಸೆಳೆತದಲ್ಲಿ ಹಾಗೂ ಹೀಗೂ ಕೈಕಾಲು ಬಡಿದು ಒಂದಷ್ಟು ಪ್ರವಾಹದ ದಿಕ್ಕಿನಲ್ಲೇ ಹೋಗಿ, ಎಲ್ಲೋ ಮುಳುಗುತ್ತಾ, ಎಲ್ಲೋ ತೇಲುತ್ತಾ, ಆ ಬದಿ ಈ ಬದಿ ಈಜುತ್ತಾ, ಅಂತೂ ಇಂತೂ ನದೀ ತೀರ ತಲುಪಿದೆ. ಬಂಡೆಕಲ್ಲು, ರೆಂಬೆಕೊಂಬೆಗಳಿಗೆ ತಾಗಿ ಕೈಕಾಲು, ಮೈ ಹಲವೆಡೆ ರಚಿತ್ತು. ಮನಸ್ಸು ಮಾತ್ರ ಗೆದ್ದೇ ಎಂದು ಬೀಗುತ್ತಿತ್ತು. ಪ್ರವಾಹದಲ್ಲೇ ಈಜಿದವನಿಗೆ ನಂತರದ ದಿನಗಳಲ್ಲಿ ಈಜುವುದು ಸಲೀಸಾಗಿ ಹೋಯಿತು. ಜೀವನದ ಒಂದು ಅದ್ಭುತ ಪಾಠವನ್ನು ಈ ಅನುಭವ ನನಗೆ ಕಲಿಸಿತ್ತು.  
        ತಂತ್ರ ಎಂದರೆ ಏನು? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದೊಮ್ಮೆ ಬರೆಯುತ್ತೇನೆ. 

Saturday 12 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 10


        ನಂತರ ಅದೇ ಗುಂಗಿನಲ್ಲಿ, ಒಂದು ರೀತಿಯ ಮತ್ತಿನಲ್ಲಿ ನನ್ನ ಪೂಜೆ ಮುಂದುವರೆಯುತ್ತಿತ್ತು. ಕೆಲವು ದಿನ ಕಳೆಯುವುದರೊಳಗೆ ನನ್ನ ಗುರುಗಳು ನಮ್ಮೂರಿಗೆ ಬಂದರು. ಅವರೊಂದಿಗೆ ನನ್ನೆಲ್ಲಾ ಅನುಭವಗಳನ್ನು ಚಾಚೂ ತಪ್ಪದೇ ಹಂಚಿಕೊಂಡೆ. ಅವರ ಮುಖದಲ್ಲಿ ತೃಪ್ತಿಯ ನಗುವೊಂದನ್ನು ಕಂಡೆ. 'ಇದು ಒಂದು ಸಣ್ಣ ಅನುಭವ, ಮುಂದೆ ಸಾಗಬೇಕಾದ ದಾರಿ ಬಹಳಷ್ಟಿದೆ. ಇನ್ನೂ ಸ್ವಲ್ಪ ಕಠಿಣ ಸಾಧನೆಗೆ ಮೈಯ್ಯೊಡ್ಡಬೇಕಾಗಬಹುದು' ಎಂದರು. 
'ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ' ಧೈರ್ಯವಾಗಿ ಹೇಳಿದೆ. ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು? ಎಂಬಂತೆ ಇತ್ತು ನನ್ನ ಪರಿಸ್ಥಿತಿ. ಎರಡು ವರ್ಷಗಳಲ್ಲಿ ಸಾಧ್ಯವಾದಷ್ಟು ಸಾಧಿಸಬೇಕು ಎಂದು ಹಾತೊರೆಯುತ್ತಿದ್ದೆ. 'ಆದರೆ....' ಎಂದು ನಿಲ್ಲಿಸಿದೆ.
ಏನು? ಎನ್ನುವಂತೆ ನನ್ನೆಡೆಗೆ ನೋಡಿದರು.
'ದೇವಿಯ ಮುಖ ನೋಡುವ ಭಾಗ್ಯ ನನಗೆ ಸಿಗಲಿಲ್ಲವಲ್ಲಾ...' ದೈನ್ಯವಾಗಿ ಕೇಳಿದೆ.
'ಚಿಂತಿಸಬೇಡ. ಅದೂ ಕೂಡಾ ಆಗಬಹುದು, ಆದರೆ ಅದು ಆಕೆಯ ಇಚ್ಛೆ' ಎಂದರು  ಗುರುಗಳು.
        ನನ್ನ ಗುರುಗಳು ಒಂದೆಡೆ ಬಹಳ ದಿನ ನಿಲ್ಲುತ್ತಿರಲಿಲ್ಲ. ಅದೇನು ಕೆಲಸವೋ ಏನೋ, ದೇಶಾದ್ಯಂತ ಸುತ್ತುತ್ತಿದ್ದರು. ಹರಿದ್ವಾರ, ಹೃಷಿಕೇಶದಲ್ಲಿ ಬಹುಕಾಲ ನೆಲೆಸುತ್ತಿದ್ದರು. ನನಗೆ 'ಇಂತಿಷ್ಟು ಕಾಲ ಇದನ್ನು ಮುಂದುವರೆಸು' ಎಂದು ಹೇಳಿ ಮತ್ತೆ ಹೊರಡಲು ಸಿದ್ಧರಾಗಿದ್ದರು. ಅವರು ಜೊತೆಯಲ್ಲಿದ್ದರೆ ಚೆನ್ನ ಎಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಆದರೆ ಕೇಳಲು ಒಂದು ರೀತಿಯ ಸಂಕೋಚವಾಗುತ್ತಿತ್ತು. ಅವರು ಹೊರಟ ಮೇಲೆ ನನ್ನ ಪೂಜೆಯನ್ನು ಮುಂದುವರೆಸುತ್ತಿದ್ದೆ. ದೇವಿಯ ಮುಖ ನೋಡಲು ದಿನಾ ಹಾತೊರೆಯುತ್ತಿದ್ದೆ. ಮಂತ್ರ ಸಿದ್ಧಿಗೆ ಅವರು ಹೇಳಿದ ಗಡುವು ಹತ್ತಿರ ಬರುತ್ತಿತ್ತು.
ಅಂದು..
        ಯಥಾಪ್ರಕಾರ ಪೂಜೆ ಮಾಡಲು ಆರಂಭಿಸಿದೆ. ಎಲ್ಲ ವಿಧಿ ವಿಧಾನಗಳು ಮುಗಿದ ಮೇಲೆ ಜಪದ ಅನುಷ್ಠಾನಕ್ಕೆ ಕುಳಿತುಕೊಂಡಿದ್ದೆ. ಜಪ ಮುಂದುವರೆಯುತ್ತಿದ್ದಂತೇ, ಮನಸ್ಸಿಗೆ  ಜಪದ ಸಂಖ್ಯೆಯ ಮೇಲೆ ಹತೋಟಿ ತಪ್ಪಿದಂತೇ ಭಾಸವಾಯಿತು. ಜಪವು ಅಭ್ಯಾಸವಾದಂತೇ ಒಂದು ಕೈಯ್ಯಲ್ಲಿ ಜಪಮಾಲೆ ಚಲಿಸುತ್ತಿದ್ದರೆ, ಇನ್ನೊಂದು ಕೈ ಬೆರಳು ಗಂಟುಗಳ ಮಧ್ಯೆ ಚಲಿಸುತ್ತಾ ಜಪದ ಸಂಖ್ಯೆಯನ್ನು ನನಗೇ ಅರಿವಿಲ್ಲದಂತೆ ಮನಸ್ಸು ಕರಾರುವಾಕ್ಕಾಗಿ ಲೆಕ್ಕ ಹಾಕುತ್ತಿತ್ತು. ಅಂದು ಈ ಲೆಕ್ಕ ಮಧ್ಯದಲ್ಲೆಲ್ಲೋ ತಪ್ಪಿ ಹೋಯಿತು. ಮನಸ್ಸು ಇನ್ನೆಲ್ಲೋ ಜಾರುತ್ತಿದ್ದ ಅನುಭವ. ಆದರೆ ಅದು ನಿದ್ದೆಯಂತೂ ಆಗಿರಲಿಲ್ಲ. ಒಂದು ಕತ್ತಲ ಲೋಕ.  
        ಆ ಕತ್ತಲಲ್ಲಿ ಒಂದು ಯುದ್ಧದಂತಹ ಸನ್ನಿವೇಶ. ದೇವಿ ಬರುತ್ತಿದ್ದಾಳೆ ಎಂದಂತೂ ನನಗೆ ಅದು ಹೇಗೋ ಮನದಟ್ಟಾಗಿತ್ತು. ಮಹಿಷಾಸುರ ಹಾಗೂ ಚಾಮುಂಡೇಶ್ವರಿ ನಡುವಿನ ಯುದ್ಧದಂತೇ ಕಾಣುತ್ತಿತ್ತು. ನಾನು ದೇವಿಯ ಮುಖವನ್ನು ನೋಡಲು ಹಂಬಲಿಸುತ್ತಿದ್ದುದರಿಂದ ಬೇರೆ ವಿವರಗಳಿಗೆ ಮನಸ್ಸು ಹೋಗಲಿಲ್ಲ. ಆ ಕತ್ತಲಲ್ಲಿ ಹಲವು ಮಂದಿಯ ನಡುವೆ ಝಗ್ಗನೆ ದೇವಿಯ ಪ್ರವೇಶವಾಯಿತು. ಹುಣ್ಣಿಮೆಯ ದಿನ ಕತ್ತಲಲ್ಲಿ ಹೊಳೆಯುವ ಚಂದ್ರನನ್ನು ನೋಡಿದ ಅನುಭವ. ಆ ಚಂದ್ರ ಅದೇ ಶಾಂತತೆಯನ್ನು ಇಟ್ಟುಕೊಂಡು ನೂರು ಪಟ್ಟು ಹೊಳೆಯುತ್ತಿದ್ದರೆ ಹೇಗಿರಬಹುದು ಎಂದು ಊಹಿಸಿದರೆ ಬಹುಶಃ ಆಕೆಯ ವರ್ಚಸ್ಸು ಅಥವಾ ಪ್ರಭೆ ಅರ್ಥವಾಗಬಹುದೇನೋ! ನಾನು ಯಾವ ಚಿತ್ರ ಪಟದಲ್ಲೂ ನೋಡದಿರುವ, ಯಾವ ಕಲ್ಪನೆಗೂ ನಿಲುಕದಿರುವ ಅನುಪಮ ಸೌಂದರ್ಯವದು. ಆಕೆಯನ್ನು ನೋಡುತ್ತಿದ್ದಂತೇ ನನಗನ್ನಿಸಿದ್ದಿಷ್ಟೇ 'ಇಂತಹ ಅನುರಾಗ ತುಂಬಿದ, ತಾಯಿ ಹೃದಯದ ಕರುಣಾಮಯಿಯೊಂದಿಗೆ ಯುದ್ಧ ಮಾಡಲು ಯಾರಿಗಾದರೂ ಹೇಗೆ ಮನಸ್ಸು ಬಂದೀತು? ಬಹುಶಃ ಆಕೆ ಮಹಿಷನಿಗೆ ಶರಣಾಗಲು ನೀಡುತ್ತಿರುವ ಕೊನೆಯ ಅವಕಾಶ ಇದಾಗಿರಬಹುದೋ ಏನೋ'. 
        ಇದೊಂದು ದೃಶ್ಯವನ್ನು ಶಬ್ದಗಳಲ್ಲಿ ವಿವರಿಸಲು ನನಗೆ ಕಷ್ಟವಾಗುತ್ತದೆ. ಅದೊಂದು ಅಪೂರ್ವ ಅನುಭವ ಎಂದಷ್ಟೇ ಹೇಳಬಯಸುತ್ತೇನೆ. ಈ ಅನುಭವವಾದ ಮೇಲೆ ಅದೆಷ್ಟು ಹೊತ್ತು ಅಲ್ಲಿ ಹಾಗೆಯೇ ಕುಳಿತಿದ್ದೆನೋ ನನಗೆ ಅರಿವಿಲ್ಲ. ನಿಧಾನವಾಗಿ ಕಣ್ಣು ಬಿಟ್ಟಾಗ ದೇವಿಯ ಮೂರ್ತಿ ಕಣ್ಣ ಮುಂದೆ ಕಾಣಿಸಿತು. 'ಇದೇನು ಕನಸೇ' ಎಂದು ನನ್ನನ್ನು ನಾನೇ ಪ್ರಶ್ನಿಸುವಂತಾಯಿತು. ಆದರೆ ಪದ್ಮಾಸನದಲ್ಲಿ ಕುಳಿತಿದ್ದ ನಾನು ಹಾಗೆಯೇ ಕುಳಿತಿದ್ದೆ. ಜಾಗೃತನಾಗಿದ್ದದ್ದು ಸ್ಪಷ್ಟವಾಗಿ ಅರಿವಿನಲ್ಲಿತ್ತು. ಪ್ರಥಮ ಬಾರಿಗೆ 'ಭಾವ'ಲೋಕದ ಯಾನದ ಉತ್ಕಟತೆಯನ್ನು ಅನುಭವಿಸಿದೆ. 
        ಇದೇನಿದು? ಈ ಅನುಭವಗಳ ಮರ್ಮವೇನು? ನಾನು ಇವುಗಳನ್ನು ಮನೋವಿಜ್ಞಾನದ ದೃಷ್ಟಿಯಿಂದ ಅರಿಯಲು ಹೋಗಿ ಕೊನೆಗೆ ಏನು ಮಾಡಿದೆ? ಅಸಲಿಗೆ ತಂತ್ರ ವಿದ್ಯೆ ಎಂದರೇನು? ತಂತ್ರವೆಂದರೆ ಮಾಟ,ಮಂತ್ರಗಳ ಆಟವೇ? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

Friday 11 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 9


        ದೀಕ್ಷೆ ನೀಡಿದ ನಂತರ ಎರಡು ದಿನಗಳು ನನ್ನೊಂದಿಗಿದ್ದ ಗುರುಗಳು ನಂತರ ತಮ್ಮ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗುವವರಿದ್ದರು. ಹೊರಡುವ ಮುನ್ನ ಒಮ್ಮೆ ನದೀ ತೀರದಲ್ಲಿ ಕುಳಿತು ತಂತ್ರ ವಿದ್ಯೆಯ ಮಹತ್ವ ಹಾಗೂ ಅನುಷ್ಠಾನದ  ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. 'ತಂತ್ರ ವಿದ್ಯೆಯ ಪ್ರಥಮ ಗುರು ಶಿವ. ದೇವಾನುದೇವತೆಗಳಿಗೂ ದುರ್ಲಭ ಎನ್ನುವಂತಹ ಈ ವಿದ್ಯೆಯನ್ನು ಶಿವನು ಪ್ರಥಮ ಬಾರಿ ಪಾರ್ವತಿಗೆ ಬೋಧಿಸುತ್ತಾನೆ. ಈ ವಿದ್ಯೆಗೆ ಅರ್ಹರಾಗುವವರು ಅದೃಷ್ಟವಂತರು. ಇದನ್ನು ಪಡೆದ ಮೇಲೆ, ಈ ವಿದ್ಯೆಯ ಮರ್ಮವನ್ನು ಸಾಧಿಸಿಕೊಂಡ ಮೇಲೆ ನಿಜವಾಗಿಯೂ ಅರ್ಹರು ಎಂದು ಅನ್ನಿಸಿದರೆ ಮಾತ್ರ ಅವರಿಗೆ ಕಲಿಸಬಹುದು. ಅದನ್ನು ಆಸಕ್ತಿಯಿಂದ ಬೇಡಿಕೊಂಡು ಬಂದವರಿಗೆ ಮಾತ್ರ ನೀನು ಕಲಿಸು. ನೀನಾಗಿಯೇ ಯಾರ ಮೇಲೂ ಹೇರಲು ಹೋಗಬೇಡ. ಮಂತ್ರ ಸಿದ್ಧಿಯಾದ ಮೇಲೆ ಅನವಶ್ಯಕ ಪ್ರಯೋಗಗಳನ್ನು ಮಾಡಬೇಡ. ದೇವೀ ಪೂಜೆಯ ಆರಂಭದಲ್ಲಿ ಆಕೆಯ ಪರಿವಾರದೊಂದಿಗೆ, ಆಕೆಯ ವಾಹನದೊಂದಿಗೆ ಹೇಗೆ ದೇವಿಯನ್ನು ಆಹ್ವಾನಿಸುವೆಯೋ ಹಾಗೆಯೇ ಮುಗಿಸುವಾಗ ಅವಳನ್ನು ಆಕೆಯ ಸ್ವಸ್ಥಾನಕ್ಕೆ ಕಳಿಸಲು ಮರೆಯಬೇಡ. ಪ್ರತಿದಿನ ಒಮ್ಮೆ ಜಪ,ಧ್ಯಾನಕ್ಕೆ ಕುಳಿತರೆ ಹತ್ತುಸಾವಿರ ಜಪ ಮುಗಿಯುವವರೆಗೆ ಅಲ್ಲಿಂದ ಏಳಬೇಡ. ಪೂಜೆ ಮಾಡುವಾಗ ವಿಧಿವಿಧಾನಗಳು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾದುದು 'ಭಾವ.' ತಾಯಿಯ ಭಾವ ಅತ್ಯಂತ ಕರುಣಾಭರಿತವಾದದ್ದು, ವಾತ್ಸಲ್ಯದಿಂದ ತುಂಬಿರುವಂತಹದ್ದು. 'ಅಮ್ಮಾ' ಎಂದು ಕರೆಯುವಾಗ ಹೃದಯ ತುಂಬಿ ಕರೆಯಬೇಕು. ಆಕೆಗೆ ಸಂಪೂರ್ಣವಾಗಿ ಶರಣಾಗಬೇಕು. ಸಮರ್ಪಣಾಭಾವ ಅತ್ಯಂತ ಮುಖ್ಯ. ಎಲ್ಲವನ್ನೂ ಆಕೆಗೆ ಅರ್ಪಿಸಿಕೊಳ್ಳಬೇಕು. ಗಮನ ಅತ್ತಿತ್ತ ಹೋದರೂ ಮತ್ತೆ ಎಳೆದು ತಂದು ಆಕೆಯ ಪಾದಕಮಲಗಳಲ್ಲಿ ಸ್ಥಿರವಾಗಿರಿಸು. ಯಾವ ಕಾರಣಕ್ಕೂ ನಿರಾಶನಾಗಬೇಡ. ನಿನ್ನ ಶ್ರದ್ಧೆಗೆ, ಉಪಾಸನೆಗೆ ತಕ್ಕ ಬೆಲೆ ಸಿಕ್ಕೇ ಸಿಗುತ್ತದೆ. ಯಾವ ಕಾರಣಕ್ಕೂ ನಿನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಬೇಡ. ಹಣ್ಣುಹಂಪಲು ಅಥವಾ ಸ್ವಯಂಪಾಕವನ್ನೇ ಆಕೆಗೆ ನೈವೇದ್ಯವಾಗಿ ಅರ್ಪಿಸು. ನಾನು ಉತ್ತರಭಾರತದೆಡೆ ಹೊರಡುತ್ತಿದ್ದೇನೆ. ಸುಮಾರು ಇಪ್ಪತ್ತು ದಿನಗಳ ನಂತರ ಮತ್ತೆ ಬರುತ್ತೇನೆ. ಅಲ್ಲಿಯವರೆಗೂ ನಾನು ಹೇಳಿಕೊಟ್ಟ ವಿಧಿವಿಧಾನಗಳೊಂದಿಗೆ ನಿನ್ನ ಸಾಧನೆಯನ್ನು ಮುಂದುವರೆಸು. ನಿನಗೆ ಒಳ್ಳೆಯದಾಗಲಿ' ಎಂದು ಆಶೀರ್ವದಿಸಿ ಹೊರಟರು. ತಂದೆಯಂತೆ, ಗೆಳೆಯನಂತೆ ಜೊತೆಗಿದ್ದ ಗುರುಗಳು ಕೆಲದಿನಗಳ ಮಟ್ಟಿಗೆ ಹೊರಟಾಗ  ಒಮ್ಮೆಗೇ ಒಂಟಿತನ ನನ್ನನ್ನು ಕಾಡಿತು. ಇಲ್ಲಿಂದ ಮುಂದೆ ನನ್ನದು ಏಕಾಂಗಿ ಪಯಣ ! 

        ಪ್ರತಿದಿನ ಬೆಳಿಗ್ಗೆ ಮೂರು ಘಂಟೆಗೆ ಏಳುವುದು, ಪ್ರಾತಃಕ್ರಿಯೆಗಳನ್ನು ಮುಗಿಸಿ ದೇವಿಯ ಉಪಾಸನೆ ಮಾಡುವುದು. ಸಂಜೆಯ ನಂತರ ಒಂದಷ್ಟು ಕಾಲ ವ್ಯಾಯಾಮಶಾಲೆಗೆ ಹೋಗಿ ಗೆಳೆಯರೊಂದಿಗೆ ಕಳೆಯುವುದು.. ಇದು ನನ್ನ ದಿನಚರಿಯಾಗಿ ಹೋಯಿತು. ಒಂದು ವಾರ ಕಳೆಯುವುದರೊಳಗೆ ಒಂದಷ್ಟು ನಿರಾಸೆ, ಒಂದಷ್ಟು ಹತಾಶೆ ಮೂಡಲಾರಂಭಿಸಿದವು. 'ಏನಾಗುತ್ತಿದೆ? ಯಾವುದೇ ಅನುಭವಗಳು ಸಿಗುತ್ತಿಲ್ಲ. ಯಾಂತ್ರಿಕವಾಗಿ ಬದುಕು ಸಾಗುತ್ತಿದೆಯೇ? ಫಲಪ್ರಾಪ್ತಿಯ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸುಮ್ಮನೆ ಸಮಯ ಕಳೆಯುತ್ತಿದ್ದೇನೆಯೇ?' ಎಂಬೆಲ್ಲ ಪ್ರಶ್ನೆಗಳು ಮನಸ್ಸಿನೊಳಗೆ ನುಸುಳಲಾರಂಭಿಸಿದವು. ಹಾಗೆ ಅನಿಸಿದಾಗೆಲ್ಲ  ಮೈ ಕೊಡವಿ ಎಚ್ಚೆತ್ತುಕೊಳ್ಳುತ್ತಿದ್ದೆ. 'ಇಲ್ಲ, ನಾನಿದನ್ನು ಸಾಧಿಸಿಯೇ ತೀರುತ್ತೇನೆ' ಎಂದು ಹೇಳಿಕೊಂಡು ದೇಹಕ್ಕೆ ದಣಿವಾದರೂ ಛಲದಿಂದ ಮುಂದುವರೆಯುತ್ತಿದ್ದೆ. ಏನಾದರೂ ಸಲಹೆ ಕೇಳೋಣವೆಂದರೆ ಗುರುಗಳು ಬಳಿಯಲ್ಲಿಲ್ಲ. ಗೆಳೆಯರ ಬಳಿ ಚರ್ಚೆ ಮಾಡಲು ಮನಸ್ಸಿರಲಿಲ್ಲ. ಧೃಢನಿರ್ಧಾರದಿಂದ ಮುಂದೆ ನಡೆಯುತ್ತಿದ್ದೆ. ದಿನಗಳು ಕಳೆದಂತೆ ದೇವೀಮೂರ್ತಿಯೊಂದಿಗೆ ಒಂದು ಪವಿತ್ರ ಮಾತೃತ್ವದ ಅನುಬಂಧ ಬೆಳೆಯುತ್ತಿತ್ತು. 

        ಪೂಜಾವಿಧಾನದಲ್ಲಿ ಮೂರ್ತಿಯಲ್ಲಿ ದೇವಿಯನ್ನು ಆಕೆಯ ಪರಿವಾರಸಮೇತವಾಗಿ ಆವಾಹನೆ ಮಾಡಿ ಪಾದ್ಯ, ಅರ್ಘ್ಯ, ಘಂಟಾನಾದ, ಧೂಪ, ದೀಪ, ನೈವೇದ್ಯ ಇತ್ಯಾದಿಯಾಗಿ ಅರ್ಪಿಸುವುದು ವಾಡಿಕೆಯಾಗಿತ್ತು. ಆರಂಭದಲ್ಲಿ ವಿಧಿವಿಧಾನಗಳಂತೇ ಆಚರಿಸುತ್ತಿದ್ದರೂ ಕೆಲದಿನಗಳಲ್ಲೇ ಇವುಗಳನ್ನೆಲ್ಲಾ ಪ್ರೀತಿಯಿಂದ ಭಾವುಕನಾಗಿ ಅನುಭವಿಸುವಂತಾದೆ. 'ಅಮ್ಮಾ' ಎಂದು  ದೇವಿಯ ಮೂರ್ತಿಯನ್ನು ಎದೆಗಪ್ಪಿಕೊಂಡಾಗ ಕಣ್ಣಲ್ಲಿ ತಾನಾಗೇ ನೀರು ತುಂಬಿ ಬರುತ್ತಿತ್ತು. 

ಅದೊಂದು ದಿನ !
        ಶ್ರೀಚಕ್ರ ಯಂತ್ರವನ್ನು ಬರೆದಿರುವಂತಹ ತಾಮ್ರದ ಹಾಳೆಯ ಮೇಲೆ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾವಿಧಿಯನ್ನು ಪ್ರಾರಂಭಿಸಿದ್ದೆ. ದೇವಿಯ ಆವಾಹನೆಯನ್ನು ಮಾಡಿ ಆಕೆಗೆ ಅರ್ಘ್ಯಾದಿ ಉಪಚಾರಗಳನ್ನು ಮಾಡಲು ಸಿದ್ಧನಾಗಿದ್ದೆ. ಆರಂಭದಲ್ಲಿ ಪ್ರಾಣಪ್ರತಿಷ್ಠೆ ಮಾಡುವ ಮುನ್ನ ಒಂದು ವಿಚಿತ್ರ ಅನುಭವ ಘಟಿಸಿತು. ಪೂಜಾವಿಧಿಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಇದ್ದಕ್ಕಿದ್ದಂತೆ ಒಂದು ಅಚ್ಚರಿ ಕಾದಿತ್ತು. 

       ಎದುರಿಗಿದ್ದ ಶ್ರೀಚಕ್ರ ಇದಕ್ಕಿದ್ದಂತೆ ಮಾಯವಾಗಿ ಹೋಯಿತು. ಆ ಜಾಗದಲ್ಲಿ ಹಲವಾರು ದೇವಾನುದೇವತೆಗಳು ಹಾಗೂ ಸಪ್ತರ್ಷಿಗಳು ಮುಂತಾದವರು ಕಾಣುತ್ತಿದ್ದರು. ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ. ಒಂದೆಡೆ ಸಮುದ್ರರಾಜನು ಗೋಚರಿಸಿದ. ಮಾರೀಚನೆಂಬ ಋಷಿಯ ಕಣ್ಣು ಕೆಂಪಾಗಿರುವುದನ್ನು ಗಮನಿಸಿದೆ. ಎಲ್ಲರೂ ಒಂದು ರೀತಿಯ ಚಡಪಡಿಕೆಯಲ್ಲಿದ್ದರು. ‘ಇವರೇಕೆ ಹೀಗಿದ್ದಾರೆ? ಏನಕ್ಕಾಗಿ ಕಾಯುತ್ತಿದ್ದಾರೆ?’ ಎಂದರೆ ಅವರೆಲ್ಲರೂ ನಾನು ಪ್ರಾಣಪ್ರತಿಷ್ಠೆ ಮಾಡಲಿರುವ ಘಳಿಗೆಗಾಗಿ ಕಾಯುತ್ತಿದ್ದಾರೆ ಎಂದು ಅದು ಹೇಗೋ ಮನವರಿಕೆಯಾಯಿತು. ಆಗ ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸಿತು. ದೇವಾನುದೇವತೆಗಳು, ಋಷಿಮುನಿಗಳು ನನ್ನ ಬಾಯಿಂದ ಹೊರಬರುವ ಮಂತ್ರಕ್ಕಾಗಿ ಕಾಯುತ್ತಿದ್ದಾರೆ. (ಯಕಃಶ್ಚಿತ್ ನನ್ನ ಬಾಯಿಂದ!) 

        ನಾನು ಪ್ರಾಣಪ್ರತಿಷ್ಠೆಗೆ ಅನುವಾಗುತ್ತಿದ್ದಂತೆ ದೊಡ್ಡ ಘರ್ಜನೆಯೊಂದಿಗೆ ಸಿಂಹವೊಂದು ಅಂತರಿಕ್ಷದಿಂದೆಂಬಂತೆ ಬಂದು ಪ್ರತ್ಯಕ್ಷವಾಯಿತು. ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಸಡಗರ. ಇನ್ನೇನು ಸಾಕ್ಷಾತ್ ಜಗನ್ಮಾತೆ ಸಾಕಾರಗೊಳ್ಳುವ ಘಳಿಗೆಗಾಗಿ ಕ್ಷಣಗಣನೆ!! ಆ ಸಿಂಹದ ಗಾಂಭೀರ್ಯ, ಚೆಂದ ಹಾಗೂ ಮೃದುವಾದ ಕೇಶರಾಶಿಯನ್ನು ವರ್ಣಿಸುವುದು ಕಷ್ಟ. ಅಷ್ಟು ಮುದ್ದಾಗಿತ್ತು ಆ ಸಿಂಹ.

        ನನ್ನ ಬಾಯಿಂದ ಮಂತ್ರಗಳು ಯಾಂತ್ರಿಕವಾಗಿ ಹೊರಬೀಳುತ್ತಲೇ ಇದ್ದವು. ಪ್ರಾಣಪ್ರತಿಷ್ಠೆಯ ಮಂತ್ರವನ್ನು ಹೇಳಿದಾಗ ಭಗ್ಗನೆ ಬೆಳಕೊಂದು ಸಂಚರಿಸಿದಂತಾಯಿತು. ಆ ಬೆಳಕೇ ಕ್ರೋಢೀಕರಿಸಿ ಒಂದು ಸ್ನಿಗ್ಧ ಸೌಂದರ್ಯದ ಹೆಣ್ಣಾಗಿ, ನಂತರ ಚಾಮುಂಡಿಯಾಗಿ ಆ ಸಿಂಹದ ಮೇಲೆ ಆಸೀನವಾಯಿತು. ಆಕೆ ಕುಳಿತುಕೊಂಡಾಗ ಆಕೆಯ ಬಲಗಾಲು ಸ್ವಲ್ಪ ಬಾಗಿ ಕಾಲಿನ ತುದಿಬೆರಳುಗಳು ಮಾತ್ರ ನೆಲಕ್ಕೆ ತಾಗಿಕೊಂಡಿದ್ದನ್ನು ಗಮನಿಸಿದೆ. ನನ್ನ ಕಣ್ಣುಗಳು ಆ ಸುಂದರ ಹಾಗೂ ಮನೋಹರವಾದ ರಕ್ತವರ್ಣದಿಂದ ಮಿಳಿತಗೊಂಡತ್ತಿದ್ದ ಪಾದಗಳ ಮೇಲೆ ಕೇಂದ್ರಿಕೃತವಾಗಿದ್ದವು. ಒಬ್ಬ ಅತಿ ನಿಷ್ಣಾತ ಕಲಾವಿದ ಮಾತ್ರ ಆ ಕಾಲುಗಳ ಚಿತ್ರವನ್ನು ಕುಂಚದಲ್ಲಿ ಸೆರೆ ಹಿಡಿಯಬಲ್ಲನೇನೋ, ಅಂತಹ ಒಂದು ಮಧುರಭಾವ ಅಲ್ಲಿತ್ತು. ನನಗೆ ಆ ಕಾಲುಗಳ ಸೌಂದರ್ಯ ಎಷ್ಟು ಮಂತ್ರಮುಗ್ಧನನ್ನಾಗಿಸಿತ್ತೆಂದರೆ ಆಕೆಯ ಮುಖ ಹೇಗಿರುತ್ತದೆ ಎಂದು ನೋಡುವ ಬಯಕೆಯನ್ನೇ ಅದು ಮರೆಸಿತ್ತು.

        ಮಂತ್ರಗಳು ತನ್ನಂತಾನೇ ಬಾಯಿಂದ ಹೊರಬೀಳುತ್ತಲೇ ಇದ್ದವು. ನಾನು ಷೋಡಶೋಪಚಾರ ಮಾಡುವಾಗ ಅಲ್ಲಿದ್ದ ಪ್ರತಿಯೊಬ್ಬ ದೇವಾನುದೇವತೆಗಳು ಹಾಗೂ ಋಷಿಗಳು ಅದನ್ನು ಅನುಸರಿಸುತ್ತಿದ್ದರು. ಉದಾಹರಣೆಗೆ ನಾನು `ಪಾದ್ಯಂ ಸಮರ್ಪಯಾಮಿ' ಎಂದೊಡನೆ ಎಲ್ಲರೂ ದೇವಿಗೆ ಪಾದ್ಯವನ್ನು ಸಮರ್ಪಿಸುತ್ತಿದ್ದರು. ಈ ರೀತಿಯ ಎಲ್ಲ ವಿಧಿ ವಿಧಾನಗಳಿಗೂ ನಾನೇ ಕಾರಕನಾಗಿದ್ದೆ. ಕೆಲಕಾಲ ನಾನು ಈ ಗುಂಗಿನಲ್ಲಿಯೇ ಇದ್ದೆ. ಮತ್ತೆ ಒಮ್ಮೆ ಮೈಕೊಡವಿದಂತಾಗಿ ವಾಸ್ತವಕ್ಕೆ ಬಂದೆ.      

        ಅದೇ ಶ್ರೀಚಕ್ರ, ಅದೇ ಹೂಗಳು, ಅದೇ ಅಕ್ಷತೆ ಹೀಗೆ ಎಲ್ಲವೂ ಮತ್ತೆ ಕಣ್ಣ ಮುಂದೆ ಮೂಡಿದವು. ಮತ್ತೆ ಎಷ್ಟು ಪ್ರಯತ್ನ ಪಟ್ಟರೂ ಆ ದೃಶ್ಯ ಮರುಕಳಿಸಲಿಲ್ಲ. ನನ್ನನ್ನು ನಾನೇ ಹಳಿದುಕೊಂಡೆ 'ಅಯ್ಯೋ ಇಂತಹ ಮುಠ್ಠಾಳ ನಾನು ! ಒಮ್ಮೆಯಾದರೂ ಕತ್ತೆತ್ತಿ ಮುಖ ನೋಡಲಿಲ್ಲವೇ? ಯಾಕಮ್ಮಾ ನನಗೆ ಈ ಭಾಗ್ಯ ಕರುಣಿಸಲಿಲ್ಲ' ಎಂದು ಮೌನವಾಗಿ ರೋಧಿಸಿದೆ. ಬಹುಹೊತ್ತು ಕಾದಿದ್ದು ಒಲ್ಲದ ಮನಸ್ಸಿನಿಂದ ಅಂದಿನ ಪೂಜೆಯನ್ನು ಮುಗಿಸಿದ್ದೆ.            

Thursday 10 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 8

                                                                 ನೇತ್ರಾವತಿ ನದಿ
        
        ದೀಕ್ಷೆ ಕೊಡುವ ದಿನಬಂದೇ ಬಿಟ್ಟಿತು. ಹಿಂದಿನ ದಿನ ರಾತ್ರಿ ಏನೋ ಪುಳಕ. ಮಾನಸ ಲೋಕದ ಹೊಸ ಪಯಣಕ್ಕೆ ಹಾತೊರೆಯುತ್ತಿದ್ದೆ. ಎಲ್ಲ ತಯಾರಿಗಳೂ ಮುಗಿದಿದ್ದವು. ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಮಧ್ಯರಾತ್ರಿಯ ಹೊತ್ತಿಗೆ ಕಿವಿಯ ಒಳಗೆ ಬಿಸಿ ಗಾಳಿ ನುಗ್ಗುತ್ತಿದ್ದ ಅನುಭವ. ನಿಧಾನವಾಗಿ ಆ ಬಿಸಿಗಾಳಿ ಕಿವಿಯಲ್ಲಿ ಮೂರು ಬಾರಿ 'ಓಂ ಸಿದ್ಧ ಗುರವೇ ನಮಃ' ಎಂದು ಹೇಳುತ್ತಿರುವಂತೇ ಭಾಸವಾಯಿತು. ಆಗ ಎಚ್ಚರಗೊಂಡೆ. ತಕ್ಷಣ ನಿದ್ದೆಗಣ್ಣಲ್ಲಿಯೇ ಪಕ್ಕದಲ್ಲಿದ್ದ ಪುಸ್ತಕದಲ್ಲಿ ಈ ಮಂತ್ರವನ್ನು ಬರೆದುಕೊಂಡು ಮಲಗಿದೆ. 
        ಅಲಾರಾಂ ಹೊಡೆಯುವ ಮೊದಲೇ  ಸುಮಾರು ಎರಡೂ ನಲವತ್ತಕ್ಕೆ ಎಚ್ಚರಗೊಂಡೆ. ಎಲ್ಲ ಸಾಮಗ್ರಿಗಳ ಸಮೇತ ನೇತ್ರಾವತಿ ತೀರದಲ್ಲಿ ಗುರುಗಳು ಹೇಳಿದ ಸ್ಥಳಕ್ಕೆ ಬಂದೆ. ಆ ಹೊತ್ತಿಗಾಗಲೇ ಅವರು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಯಂತ್ರವೊಂದನ್ನು ಬರೆದಿದ್ದರು, ದೀಪವೊಂದನ್ನು ಹಚ್ಚಿಟ್ಟಿದ್ದರು. ಅವರ ಮುಖ ಅತ್ಯಂತ ಗಂಭೀರವಾಗಿತ್ತು. ನನ್ನನ್ನು ಕಂಡೊಡನೆ ನದಿಗೆ ಹೋಗಿ ಸ್ನಾನ ಮಾಡಿ ಬರಲು ಹೇಳಿದರು ಹಾಗೂ ನನ್ನ ದೇವಿಯ ಮೂರ್ತಿಯನ್ನು ನನ್ನಿಂದ ಪಡೆದುಕೊಂಡರು. ನಾನು ಸ್ನಾನ ಮಾಡುತ್ತಿದ್ದಾಗ ಅವರು ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಧ್ಯಾನಿಸುತ್ತಿದ್ದರು. ನಂತರ ನನ್ನ ಬಳಿ ಬಂದು ಮೂರ್ತಿಯನ್ನು ನನ್ನ ಕೈಗೆ ನೀಡುತ್ತಾ 'ಇದನ್ನು ತಲೆಯ ಮೇಲಿಟ್ಟುಕೊಂಡು ನೀರಿನಲ್ಲಿ ಮೂರುಬಾರಿ ಮುಳುಗಿ ಮೇಲೆ ಬಾ' ಎಂದು ಹೇಳಿದರು. 
        ಅಂತೆಯೇ ಮಾಡಿ ನಾನು ಒದ್ದೆ ಬಟ್ಟೆಯಲ್ಲಿಯೇ ಮೇಲೆ ಬಂದಾಗ ಮೂರ್ತಿಯನ್ನು ನನ್ನಿಂದ ಪಡೆದುಕೊಂಡು ಯಂತ್ರದ ಮೇಲೆ ಸ್ಥಾಪಿಸಿದರು. ನಂತರ ಕೆಲ ವಿಧಿವಿಧಾನಗಳು ನಡೆದವು. ಫಲತಾಂಬೂಲಗಳನ್ನು ಗುರುಗಳಿಗೆ ಅರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದೆ. ನನ್ನನ್ನು ಆಶೀರ್ವದಿಸುವಾಗ ಅವರ ಗಂಭೀರ ಮುಖ ಅಪಾರ ಕರುಣೆಯಿಂದ ಕೂಡಿದ್ದನ್ನು ನೋಡಿದೆ. ಮತ್ತೆ ಮುದ್ರೆಯಾದಿ ಕೆಲ ವಿಧಿ ವಿಧಾನಗಳನ್ನು ಮಾಡಿದ ನಂತರ ನಾನು ಕಾತುರದಿಂದ ಕಾಯುತ್ತಿದ್ದ,
ಮಂತ್ರೋಪದೇಶ ನೀಡುವ ಸಮಯ ಬಂದಿತು. 
        'ಈಗ ಬೀಜಾಕ್ಷರಸಹಿತ ಚಾಮುಂಡಿದೇವಿಯ ಮಂತ್ರವನ್ನು ನಿನಗೆ ಉಪದೇಶಿಸುತ್ತೇನೆ' ಎಂದು ಹೇಳಿ ಒಂದು ಬಿಳಿಯ ವಸ್ತ್ರವನ್ನು ನಮ್ಮಿಬ್ಬರ ತಲೆಯ ಮೇಲೆ ಹೊದಿಸಿ, ಮಂತ್ರೋಪದೇಶ ಮಾಡಿದರು. ಅದು ಅತ್ಯಂತ ಜನಪ್ರಿಯವಾದ ಚಾಮುಂಡಿಯ 'ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ' ಎಂಬ ಮಂತ್ರವಾಗಿತ್ತು. ಆದರೆ ಅದರೊಂದಿಗೆ ಇನ್ನೊಂದು ಬೀಜಾಕ್ಷರವನ್ನು ಸೇರಿಸಿ ನನಗೆ ಉಪದೇಶ ನೀಡಿದ್ದರು. ಆ ಬೀಜಾಕ್ಷರವನ್ನು ಗೋಪ್ಯವಾಗಿಡಲು ಹೇಳಿದರು. 
        ನಂತರ ದೇವಿಯ ವಿಗ್ರಹವನ್ನು ನನಗೆ ಕೊಡುತ್ತಾ 'ಇಂದು ನಾನು ಪ್ರಾಣಪ್ರತಿಷ್ಠೆ ಮಾಡಿದ್ದೇನೆ. ನಿನ್ನ ಪೂಜೆಯನ್ನು ಈ ಕ್ಷಣದಿಂದಲೇ ಶುರು ಮಾಡಬೇಕು' ಎಂದು ಪ್ರೀತಿಯಿಂದ ಹರಸಿದರು. ಪೂಜಾ ವಿಧಿವಿಧಾನವನ್ನು ಈ ಮೊದಲೇ ನನಗೆ ಹೇಳಿಕೊಟ್ಟಿದ್ದರು. ಹೆಮ್ಮೆಯಿಂದ ಹಾಗೂ ಪ್ರೀತಿಯಿಂದ ಆ ಮೂರ್ತಿಯನ್ನು ಎದೆಗವಚಿಕೊಂಡು ನಮ್ಮ ದೇಗುಲದತ್ತ ಹೆಜ್ಜೆ ಹಾಕಿದೆ. 

     
ನಮ್ಮ ಮಹಾಮಾಯಿ ದೇವಸ್ಥಾನದ ಒಂದು ಭಾಗದಲ್ಲಿ 'ಕೂಡಿ' ಎಂದು ಕರೆಯಲ್ಪಡುವ ಒಂದು ಪುಟ್ಟ ಕೋಣೆ ಇತ್ತು. ನಾನು ಅಲ್ಲಿಯೇ ತಂಗಿದ್ದೆ. ಚಿಕ್ಕದೊಂದು ಪೀಠವನ್ನು ಮೊದಲೇ ತಂದಿಟ್ಟಿದ್ದೆ. ಆ ಪೀಠದಲ್ಲಿ ಮೂರ್ತಿಯನ್ನು ಅಲಂಕರಿಸಿದೆ. ಪೂಜಾ ವಿಧಿವಿಧಾನಗಳನ್ನೆಲ್ಲ ಮುಗಿಸಿ ದೇವಿಯ ಮಂತ್ರವನ್ನು ಜಪಿಸಲು ಪ್ರಾರಂಭಿಸಿದೆ. ಕುಳಿತ ಮೇಲೆ ಒಟ್ಟು ಹತ್ತು ಸಾವಿರ ಬಾರಿ ಮಂತ್ರವನ್ನು ಪಠಿಸಬೇಕಿತ್ತು. ನಾನು  ಜಪಮಾಲೆಯನ್ನು ಕೆಳಗಿಟ್ಟಾಗ ಘಂಟೆ ಸಂಜೆ ನಾಲ್ಕಾಗಿತ್ತು. ಕಾಲುಗಳು ಮರಗಟ್ಟಿದಂತೆ ಭಾಸವಾಗಿತ್ತು. ಈ ದೇವೀ ಸಾಧನೆಯಲ್ಲಿ ಮುಂದುವರೆದಾಗ ಆದ ಒಂದು ಅದ್ಭುತ, ಅಪೂರ್ವ ಅನುಭವವನ್ನು ಮುಂದಿನ ಕಂತಿನಲ್ಲಿ ಹೇಳುತ್ತೇನೆ.




       

Wednesday 9 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 7


       


        ದೀಕ್ಷೆ ನೀಡುವ ಎರಡು ದಿನಗಳ ಮುಂಚೆ ನಾನು ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಹೇಳಿದರು. ನಾನು ತರಬೇಕಾದ ವಸ್ತುಗಳ ಪಟ್ಟಿ ನೀಡಿದರು. ಕೌಪೀನ ಧರಿಸಿ ಬಿಳಿಯ ಪಂಚೆ ಹಾಗೂ ಬಿಳಿಯ ವಸ್ತ್ರವನ್ನು ತರಲೂ ಹೇಳಿದ್ದರು. ಕೊನೆಗೆ ಶಿಖೆ(ಜುಟ್ಟು)ಯನ್ನು ಬಿಟ್ಟು ಕೇಶಮುಂಡನ ಮಾಡಿ ಬೆಳಗಿನ ಝಾವ ಮೂರು ಘಂಟೆಯ ಹೊತ್ತಿಗೆ ನೇತ್ರಾವತಿ ನದೀ ತೀರದ ಬಳಿ ಬರಲು ಸೂಚಿಸಿದರು. 
        ಬೇರೆ ಎಲ್ಲಾದಕ್ಕೂ ನನ್ನ ಸಹಮತಿ ಇದ್ದರೂ, 'ಈ ಜುಟ್ಟು ಬೇಕೇ?' ಎಂಬ ಪ್ರಶ್ನೆ ನನ್ನನ್ನು ಕೊರೆಯುತ್ತಲೇ ಇತ್ತು. ಕೇಳಲು ಸಂಕೋಚ ಹಾಗೂ ಭಯ. 'ಹಾಗಾದರೆ ಬೇಡ ಬಿಡು' ಎಂದು ಕೋಪಿಸಿಕೊಂಡರೆ? ಎಂಬ ಆತಂಕಕ್ಕೆ ಒಳಗಾಗಿದ್ದೆ. ಸಾಕಷ್ಟು ಯೋಚಿಸಿ ನಯವಾಗಿ ಕೇಳಿದೆ 'ನನಗೊಂದು ಕುತೂಹಲ, ತಪ್ಪು ತಿಳಿದು ಕೊಳ್ಳಬೇಡಿ. ಮೂರು ಘಂಟೆಗೆ ಎದ್ದು ಬರುವುದು.. ಜುಟ್ಟು ಬಿಡುವುದು.. ಮುಂತಾದುವುಗಳಿಗೂ, ಸಾಧನೆಗಳಿಗೂ ನಿಜವಾಗಿ ಏನಾದರೂ ಸಂಬಂಧವಿದೆಯೇ? ನಾನು ನೀವು ಹೇಳಿದ ಹಾಗೆಯೇ ಖಂಡಿತ ಮಾಡುತ್ತೇನೆ, ಆದರೆ ಒಂದು ಸಣ್ಣ ಕುತೂಹಲ ಅಷ್ಟೇ..' 
  'ನೀನು ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಪುಸ್ತಕ ಓದಿದರೆ ಸಾಕಲ್ಲವೇ? ಸಮವಸ್ತ್ರ, ಹಾಜರಾತಿ ಮುಂತಾದವು ಏಕೆ ಬೇಕು ಅನ್ನಿಸಬಹುದು ಅಲ್ಲವೇ? ವಿದ್ಯೆಯ ಜೊತೆಯಲ್ಲಿ ಶಿಸ್ತು, ಸಂಯಮ, ಸಮಾನತೆಗಳನ್ನು ಕಲಿಸಲು ಇದು ನೆರವಾಗುತ್ತದೆ. ಅದೇ ರೀತಿ ತಾಂತ್ರಿಕ ವಿದ್ಯೆಗೂ ಮೆರಗು ಕೊಡುವುದು ಶಿಸ್ತುಬದ್ಧ ಸಂಯಮದ ಜೀವನ ಕ್ರಮ. ಇದಲ್ಲದೇ ಬ್ರಾಹ್ಮೀ ಮುಹೂರ್ತದ ವೈಶಿಷ್ಟ್ಯಹಾಗೂ ಮನಸ್ಸಿನ ತರಬೇತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಮುಂದೆ ಇದರ ಗುಟ್ಟು ನಿನಗೇ ಅರಿವಾಗುತ್ತದೆ' ಎಂದು ಕಿವಿಹಿಂಡಿದ ಹಾಗೆ ಹೇಳಿದರು. 
  ತಾರ್ಕಿಕವಾಗಿ ನಾನದನ್ನು ಒಪ್ಪಿಕೊಳ್ಳಲೇಬೇಕಿತ್ತು. ಆದರೆ ನನ್ನ ಮನಸ್ಸಿನಲ್ಲಿದ್ದ ದುಗುಡ ಬೇರೆಯೇ ಇತ್ತು. ಜುಟ್ಟು ಬಿಟ್ಟು ಓಡಾಡಿದರೆ ಏನೋ ಕಪಟಿಯ ಮುಖವಾಡ ಧರಿಸಿದಂತಾಗುತ್ತದೆಯೇನೋ ಎಂಬ ಶಂಕೆ ಇತ್ತು. ಏಕೆಂದರೆ 'ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎಂಬ ಕನಕದಾಸರ ಸಾಹಿತ್ಯದ ಸಾಲುಗಳು ತಲೆಯಲ್ಲಿ ಗಟ್ಟಿಯಾಗಿ ಕುಳಿತಿದ್ದವು. ಆದರೂ ಸುಮ್ಮನೆ ತಲೆಯಾಡಿಸಿದೆ. 
        'ಈ ಜಪಮಾಲೆಯನ್ನು ತೆಗೆದು ಕೋ' ಎಂದು ಹೇಳುತ್ತಾ ತಮ್ಮ ಜೋಳಿಗೆಯಿಂದ ಒಂದು ಜಪಮಾಲೆಯನ್ನು ನೀಡಿದರು. ಅದರ ಜೊತೆಯಲ್ಲಿಯೇ ಒಂದು ವಿಶೇಷ ಪರಿಮಳವಿರುವ ನೀರಿನ ಒಂದು ತಂಬಿಗೆಯನ್ನು ನೀಡಿದರು. ಮಂತ್ರವನ್ನು ಹೇಳುತ್ತಾ ನಿನ್ನ ಜಪಮಾಲೆಯನ್ನು ಇದರಲ್ಲಿ ಅದ್ದಿಟ್ಟುಕೋ, ರಾತ್ರಿ ಮಲಗುವ ಮುನ್ನ ಜಪಮಾಲೆಯನ್ನು ಹೊರಗೆ ತೆಗೆದು ಒಂದೆಡೆ  ತೂಗಿಹಾಕು. ಇದನ್ನು ಮರೆಯದೇ ದೀಕ್ಷೆಯ ದಿನ ತೆಗೆದುಕೊಂಡು ಬಾ' ಎಂದು ಹೇಳಿ, ಹೇಳಬೇಕಾದ ಮಂತ್ರವನ್ನು ಕಿವಿಯಲ್ಲಿ ಹೇಳಿದರು.
        ಗುರುಗಳು ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ಒಟ್ಟುಮಾಡಿದೆ. ಅವರ ಎಲ್ಲಾ ಆಣತಿಗಳನ್ನು ಪರಿಪಾಲಿಸಿದೆ. ಕೊನೆಯದಾಗಿ ಕೇಶಮುಂಡನ ! 'ಭೂತದ ಓಣಿ'(ಆ ಓಣಿಯಲ್ಲಿ ದೈವಸ್ಥಾನವೊಂದು ಇದ್ದುದರಿಂದ ಅದನ್ನು ಭೂತದ ಓಣಿ ಎಂದು ಕರೆಯುತ್ತಾರೆ)ಯಲ್ಲಿದ್ದ ಕ್ಷೌರಿಕನ ಬಳಿ ಹೋಗಿ, ಕೇಶರಾಶಿಯಿಂದ ಕಂಗೊಳಿಸುತ್ತಿದ್ದ ನನ್ನ ತಲೆಯನ್ನು ನೀಡಿದೆ. ತಲೆಯೆತ್ತಿ ನೋಡಿದಾಗ ನನ್ನದೇ ಬೋಳುತಲೆ ಕಾಣಿಸಿತು. ತಲೆಯ ಹಿಂದೆ ಒಂದು ಕನ್ನಡಿ ಹಿಡಿದು ಆತ ತೋರಿಸಿದ. ಪ್ರಥಮಬಾರಿಗೆ ನನ್ನ ತಲೆಯ ಹಿಂದೆ ಜುಟ್ಟೊಂದನ್ನು ನೋಡಿದೆ. ನನಗೇ ನಗು ಬಂತು. ಮನಸ್ಸಿನಲ್ಲಿಯೇ ನಕ್ಕೆ. 



         ವಾಪಸ್ ಹೋಗುವಾಗ ದಾರಿಯಲ್ಲಿ ಹಳೆಯ ಗೆಳೆಯನೊಬ್ಬ ಎದುರಾಗಿ ಕೇಳಿದ 'ಪ್ರವೀಣಾ, ಒಂದು ಮಾತು ಕೇಳ್ತೀನಿ.  ಬೇಜಾರು ಮಾಡಿಕೋಬೇಡ. ನಿಜವಾಗಿ ಏನಾಯ್ತು? ಯಾವ ಹುಡುಗಿ ಕೈಕೊಟ್ಟಳು? ನನ್ನತ್ರ ಹೇಳು ಪರ್ವಾಗಿಲ್ಲ, ನಾನು ಯಾರ ಬಳಿಯೂ ಹೇಳುವುದಿಲ್ಲ' 
 ಇವನಿಗೆ ಏನೆಂದು ಉತ್ತರ  ಕೊಡುವುದು? ಯಾರೂ ಕೈಕೊಟ್ಟಿಲ್ಲ ಎಂದರೆ ಈತ ನಂಬುವುದಿಲ್ಲ, ಏಕೆಂದರೆ ಆತನಾಗಲೇ ಅದನ್ನು ತೀರ್ಮಾನಿಸಿಬಿಟ್ಟಿದ್ದ. ನಂತರ ಹೇಳಿದ 'ನಾನು ಯಾರ ಬಳಿಯೂ ಹೇಳುವುದಿಲ್ಲ' ಎಂಬ ಮಾತು ಅಪ್ಪಟ ಸುಳ್ಳಾಗಿತ್ತು. ಏಕೆಂದರೆ ಆತ 'ಆಲ್ ಇಂಡಿಯಾ ರೇಡಿಯೋ' ಎಂದು ಪ್ರಖ್ಯಾತನಾಗಿದ್ದ. 
        ಆದರೂ ಸೌಜನ್ಯಕ್ಕಾಗಿ ಹೇಳಿದೆ 'ಇಲ್ಲಪ್ಪ ಆ ಥರ ನಿಜವಾಗಿ ಏನೂ ಇಲ್ಲ'. 
  'ಒಂದಲ್ಲ ಒಂದು ದಿವಸ ನಿನ್ನ ಬಾಯಿ ಬಿಡಿಸ್ತೀನಿ' ಎಂದು ಹೇಳಿ ಹುಳ್ಳಗೆ ನಕ್ಕು ಹೋದ. 
        ನಾನು ನಮ್ಮ ದೇವಸ್ಥಾನ ತಲುಪುವವರೆಗೂ ಎಲ್ಲರೂ ಅಚ್ಚರಿಯಿಂದ ನನ್ನನ್ನು ನೋಡುವವರೇ! ಗುಸಗುಸ  ಮಾತನಾಡುವವರೇ! ಇನ್ನು ಮುಂದೆ ನನ್ನ ದಾರಿ ನನ್ನದು ಎಂದುಕೊಂಡು ಸಾಗುತ್ತಿರುವುದು ಅಷ್ಟೇ ಎಂದು ಮನಸ್ಸಿನಲ್ಲೇ ಅಂದುಕೊಂಡು ರಪರಪನೆ ಹೆಜ್ಜೆ ಹಾಕಿದೆ. 

Friday 4 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 6

      
   
                          ನಾನು ಮನಸಾರೆ ಆರಾಧಿಸಿ ಪೂಜಿಸಿದ ನನ್ನ ಪ್ರೀತಿಯ ದೇವಿ     

         ಮಾರನೇ ದಿನ ಮಹಾ ತಾಂತ್ರಿಕರಾದ ಆ ಗುರುಗಳನ್ನು ಭೇಟಿಯಾದೆ. ಅವರು ಅಜ್ಞಾತವಾಗಿ ಇರಬಯಸುತ್ತಿದ್ದುದರಿಂದ ಸದ್ಯಕ್ಕೆ ಅವರನ್ನು 'ಸಿದ್ಧ' ಗುರುಗಳೆಂದೇ ಕರೆಯುತ್ತೇನೆ. ಒಂದು ಫೋಟೋ ತೆಗೆಸಿಕೊಳ್ಳಲಿಲ್ಲ. ಪ್ರಚಾರವನ್ನು ಬಯಸಲಿಲ್ಲ. ತಮ್ಮ ಕೆಲಸಮುಗಿದೊಡನೆ ಹೃಷಿಕೇಶಕ್ಕೋ, ಹರಿದ್ವಾರಕ್ಕೋ ಮರಳುತ್ತಿದ್ದರು. ಅಲ್ಲಿ ಧ್ಯಾನಕ್ಕೆ ಕುಳಿತರೆ,ಕಣ್ಣು ಬಿಟ್ಟಾಗ ಯಾರಾದರೂ ಹಣ್ಣು ಹಂಪಲು ಮುಂದೆ ಇಟ್ಟಿದ್ದರೆ ಅದನ್ನು ತಿನ್ನುತ್ತಿದ್ದರು, ಇಲ್ಲವಾದಲ್ಲಿ ಅಂದು ಉಪವಾಸ. ಇಂತಹ ವ್ಯಕ್ತಿಗಳು ನೋಡಲು ಸಿಗುವುದೂ ದುರ್ಲಭ. 
        ನನಗೆ ತಾಂತ್ರಿಕ ದೀಕ್ಷೆ ನೀಡಲು ಕೇಳಿಕೊಂಡೆ. 'ಏನು ಕೆಲಸ ಮಾಡಿಕೊಂಡಿದ್ದೀಯಪ್ಪಾ?' ಎಂದು ಕೇಳಿದರು. 
       ಆಗ ನಾನು ನನ್ನದೇ ಆದ 'ಫ್ಯಾನ್ಸಿ ಸ್ಟೋರ್' ಇಟ್ಟುಕೊಂಡಿದ್ದೆ. ಅಲ್ಲದೇ ದೂರದರ್ಶನದಲ್ಲಿ ಅನೌನ್ಸರ್ ಆಗಿ ಕೆಲಸ ಮಾಡುತ್ತಿದ್ದೆ. ಕೆಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. 
 'ನಾನು ದೀಕ್ಷೆ ಕೊಟ್ಟರೆ ಈ ಕೆಲಸಗಳಿಗೆ ಏನು ಮಾಡುತ್ತೀ?' ಕೇಳಿದರು ಅವರು.  
  'ಕೆಲಸ ಹಾಗೂ ಸಾಧನೆ ಎರಡನ್ನೂ ನಾನು ಒಟ್ಟಿಗೆ ತೂಗಿಸಬಲ್ಲೆ' ಬಹಳ ಆತ್ಮವಿಶ್ವಾಸದಿಂದ ಹೇಳಿದೆ.
 'ಇಲ್ಲ,ಇಲ್ಲ... ಎರಡನ್ನೂ ತೂಗಿಸಲು ಸಾಧ್ಯವಿಲ್ಲ. ತಾಂತ್ರಿಕ ಸಾಧನೆ, ಕಠಿಣವಾದ ಸಾಧನೆ. ದಿನದ ಬಹುತೇಕ ಸಮಯವನ್ನು ಅದಕ್ಕಾಗಿ ವಿನಿಯೋಗಿಸಬೇಕಾಗುತ್ತದೆ. ಆದ್ದರಿಂದ ನೀನು ಇದನ್ನೆಲ್ಲಾ ಬಿಟ್ಟು ಬರಲು ಸಾಧ್ಯವೇ?' ನನ್ನ ಕಣ್ಣುಗಳನ್ನೇ ನೋಡುತ್ತಾ ಕೇಳಿದರು ಸಿದ್ಧ ಗುರುಗಳು. 
        ಒಂದು ಕ್ಷಣ ಯೋಚಿಸಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ, ದೂರದರ್ಶನದಿಂದಾಗಿ ಸಾಕಷ್ಟು ಜನಪ್ರಿಯನಾಗಿದ್ದೆ. ಒಂದು ಕ್ಷಣ ಯೋಚಿಸಿದೆ, ಅಷ್ಟೇ! ಇಂತಹ ಗುರುಗಳು, ಬಿಟ್ಟರೆ ಮತ್ತೆ ಸಿಗಲಾರರು ಎಂದುಕೊಂಡು 'ಎಲ್ಲವನ್ನೂ ಬಿಟ್ಟು ಬರುತ್ತೇನೆ' ಎಂದು ಹೇಳಿಬಿಟ್ಟೆ. ಆಗಿನ್ನೂ ಮದುವೆಯಾಗಿರದ ಕಾರಣ ಈ ತೀರ್ಮಾನವನ್ನು ದೃಢವಾಗಿ ತೆಗೆದುಕೊಂಡೆ, ಏಕೆಂದರೆ ಮದುವೆಯಾದ ಮೇಲೆ ಇದು ಸಾಧ್ಯವಾಗದಿದ್ದರೆ ನನ್ನ ಜೀವನದ ಬಹು ದೊಡ್ಡ ಆಸೆ ಹಾಗೂ ಕುತೂಹಲಗಳಿಗೆ ತಣ್ಣೀರು ಎರಚಬೇಕಾಗಬಹುದು ಎಂದು ಅನ್ನಿಸಿತ್ತು. 
        ಮನೆಯಲ್ಲಿ ಈ ವಿಚಾರವನ್ನು ತಿಳಿಸಿದಾಗ ಅಪ್ಪ ಅಮ್ಮನಿಗೆ ಅಚ್ಚರಿ !  ಅಷ್ಟು ಸುಲಭಕ್ಕೆ ಅವರು ಒಪ್ಪಲು ಸಿದ್ಧರಿರಲಿಲ್ಲ. 'ಕೇವಲ ಎರಡು ವರ್ಷ, ಮತ್ತೆ ಖಂಡಿತ ಹಿಂತಿರುಗಿ ಬರುತ್ತೇನೆ...' ಎಂದೆಲ್ಲಾ ಹೇಳಿ ಅಂತೂ ಇಂತೂ ಒಪ್ಪಿಸಿದೆ. ದೂರದರ್ಶನದ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಅಂಗಡಿಯನ್ನು ಮಾರಿದೆ. ಅಂದಿನ ಕಾಲಕ್ಕೆ ಸುಮಾರು ಒಂದು ಲಕ್ಷ  ರೂಪಾಯಿಗಳು ನಿವ್ವಳವಾಗಿ ದೊರೆತವು. ತಿಂಗಳಿಗೆ ಇನ್ನೂರಕ್ಕೂ ಹೆಚ್ಚು ರೂಪಾಯಿಗಳು ಬಡ್ಡಿಯಾಗಿ ಸಿಗುವಂತೆ ಅದನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಟ್ಟೆ. 
        ಸಿದ್ಧ ಗುರುಗಳ ಬಳಿ ಹೋಗಿ ಎಲ್ಲವನ್ನೂ ವಿವರಿಸಿದೆ. ಅವರಿಗೂ ಅಚ್ಚರಿಯೇ ಆಯಿತು. ಬಹುಷಃ ನಾನು ಎಲ್ಲವನ್ನೂ ಬಿಟ್ಟು ಬರಬಹುದೆಂದು ಅವರು ಕೂಡಾ ಅಂದುಕೊಂಡಿರಲಿಕ್ಕಿಲ್ಲ. 'ಹೃಷಿಕೇಶಕ್ಕೆ ಬರುತ್ತೀಯಾ?' ಎಂದು ಅವರು ಕೇಳಿದಾಗ ನನ್ನ ಮನದಾಸೆಯನ್ನು ತೋಡಿಕೊಂಡೆ. 
'ನಮ್ಮದೇ ಆದ ಬಂಟವಾಳ ಮಹಾಮಾಯಿ ಸನ್ನಿಧಿಯಲ್ಲಿ ತಾವು ದೀಕ್ಷೆ ಕೊಟ್ಟರೆ ನನ್ನಂತಹ ಅದೃಷ್ಟವಂತ ಬೇರಿಲ್ಲ' ಎಂದು ಅವತ್ತುಕೊಂಡೆ. 
'ಎಲ್ಲಿಯಾದರೂ ಕೊಡಬಹುದು ಆದರೆ ನಾನು ಪೂರ್ಣ ಸಮಯ ನಿನ್ನೊಡನೆ ಇರಲು ಆಗುವುದಿಲ್ಲ.... ಚಿಂತೆಯಿಲ್ಲ, ನಾನು ದೀಕ್ಷೆ ಕೊಟ್ಟ ನಂತರ ಆಗಾಗ ಬಂದು ನಿನ್ನ ಸಾಧನೆಗೆ ಸಹಾಯ ಮಾಡುತ್ತಿರುತ್ತೇನೆ. ನಿನ್ನ ಆಸಕ್ತಿ ನನಗೆ ಇಷ್ಟವಾಯಿತು. ಮುಂದಿನ ಸೋಮವಾರದ ಹೊತ್ತಿಗೆ ನಾನು ನನ್ನ ಕೆಲವು ಜವಾಬ್ದಾರಿಗಳನ್ನು ಮುಗಿಸುತ್ತೇನೆ. ನಂತರ ನಿಮ್ಮ ಊರಿಗೆ ಹೋಗೋಣ' ಎಂದರು. 
        ಮಂಗಳೂರಿನಲ್ಲಿ ಅವರಿಗೆ ಗೊತ್ತಿರುವ ಒಂದು ಸ್ಥಳಕ್ಕೆ ಹೋಗಿ, ಅಲ್ಲಿ ಒಂದು ದೇವಿಯ ಮೂರ್ತಿಯನ್ನು ಆರಿಸಿಕೊಂಡು ಅದನ್ನು ನನ್ನ ಕೈಯ್ಯಲ್ಲಿತ್ತರು.' ತಾಂತ್ರಿಕ ಸಾಧನೆಯ ಸಮಯದಲ್ಲಿ ಇದು ನಿನ್ನ ಆರಾಧ್ಯದೈವವಾಗಲಿದೆ.ಇದು ನಿನಗೆ ನನ್ನ ಕಾಣಿಕೆ. ವಾರಾಂತ್ಯದೊಳಗೆ ನಿನಗೆ ದೀಕ್ಷೆ ನೀಡುತ್ತೇನೆ' ಎಂದು ಹೇಳಿ ಆಶೀರ್ವದಿಸಿದರು. ಮುಂದೇನಾಯಿತು? ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ. 
        ಅದಕ್ಕೂ ಮುನ್ನ ನಾನು ನನ್ನ 'ದೇವರು ಧರ್ಮ,ಏನಿದರ ಮರ್ಮ' ಪುಸ್ತಕದಲ್ಲಿ ಬರೆದ ಕೆಲವು ಸಾಲುಗಳನ್ನು ಇಲ್ಲಿಯೂ ಕಾಣಿಸಲು ಇಚ್ಚಿಸುತ್ತೇನೆ. ನಾನು ಸಾಧನೆ ಮಾಡಿದ್ದೇನೆ, ಆದರೆ 'ಸಾಧಕನ ಪಟ್ಟ' ನನಗೆ ಒಗ್ಗುವುದಿಲ್ಲ.ದೇವರ ಬಗ್ಗೆ ಅಧ್ಯಯನ ಮಾಡಿದ್ದೇನೆ, ಆದರೆ 'ಸಾಧು-ಸಂತ'ನಲ್ಲ. ಮನಃಶಾಸ್ತ್ರದ ಬಗ್ಗೆ ಪ್ರಯೋಗಗಳನ್ನು ಮಾಡಿದ್ದೇನೆ, ಆದರೆ ಮನೋವಿಜ್ಞಾನದ ಡಿಗ್ರಿ ಸರ್ಟಿಫಿಕೇಟು ಪಡೆದವನಲ್ಲ. 'ಅರಿಷಡ್ವರ್ಗ'ಗಳೆಂದು ಕರೆಯಲ್ಪಡುವ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು 'ಅರಿ'ಗಳೆಂದು ಕರೆಯದೇ  'ಮಿತ್ರ'ರೆಂದು ಕರೆದು ಅವುಗಳನ್ನು ದೂರ ಮಾಡದೇ ಹಿತವಾಗಿ, ಮಿತವಾಗಿ ಅಪ್ಪಿಕೊಂಡು ಎಲ್ಲರಂತೇ ಬದುಕಬೇಕೆಂದು ಬಯಸಿ ಹಾಗೆಯೇ ಬದುಕುತ್ತಿರುವ ಶ್ರೀಸಾಮಾನ್ಯರಲ್ಲೊಬ್ಬ ಸಾಮಾನ್ಯ. 

Wednesday 2 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 5

        ಸಮ್ಮೋಹಿನಿ ವಿದ್ಯೆ ಕಲಿತ ಮೇಲೆ ಮನಸ್ಸಿನ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದೆ ಹಾಗೂ ಮನಸ್ಸಿನ ಶಕ್ತಿಯ ಆಗಾಧತೆಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದೆ. ಹಲವಾರು ಮನೋವಿಜ್ಞಾನಿಗಳೊಡನೆ ಸತತ ಸಂಪರ್ಕ ಇಟ್ಟುಕೊಂಡಿದ್ದೆ. ಅದು ೧೯೮೦ರ ಸಮಯ. ಆ ವಯಸ್ಸಿನಲ್ಲಿ ನಾನು ಮಾಡುತ್ತಿದ್ದ ಪ್ರಯೋಗಗಳನ್ನು ಕಂಡು ಅವರು ನನ್ನ ಬೆನ್ನು ತಟ್ಟುತ್ತಿದ್ದರು.
    ಶ್ರೀ ಲಲಿತಾ ವಿದ್ಯಾಮಂದಿರ

        ಕ್ರಮೇಣ ಆಧ್ಯಾತ್ಮಿಕತೆಯತ್ತ ಮನಸ್ಸು ವಾಲತೊಡಗಿತು. ದೈವ ಸಾಕ್ಷಾತ್ಕಾರದ ದೃಷ್ಟಿಯಿಂದಲ್ಲ, ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ. ಮೊದಲು ನನ್ನನ್ನು ಸೆಳೆದದ್ದು 'ಯೋಗಾಭ್ಯಾಸ ಹಾಗೂ ಧ್ಯಾನ'. ತ್ಯಾಗರಾಜನಗರದ 'ಶ್ರೀ ಲಲಿತಾ ವಿದ್ಯಾಮಂದಿರ 'ವನ್ನು ಯೋಗ ಕಲಿಯುವ ದೃಷ್ಟಿಯಿಂದ ಸೇರಿಕೊಂಡಿದ್ದೆ. 

         ೧೯೮೩ರ ಹೊತ್ತಿಗೆ ಮನಸ್ಸಿಗೆ ಸಂಬಂಧ ಪಟ್ಟಂತೆ ಲೇಖನಗಳನ್ನು ಬರೆಯತೊಡಗಿದ್ದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳು ಪ್ರಕಟವಾಗಿದ್ದವು.
        ಯೋಗಶಾಲೆಗೆ ಸೇರುವಾಗ ಗುರುಗಳಾದ ಚಿ. ವಿಶ್ವೇಶ್ವರಯ್ಯ ಅವರ ಬಳಿ ನನ್ನ ಮನದ ಆಸೆಯನ್ನು ವ್ಯಕ್ತ ಪಡಿಸಿದ್ದೆ. ಮನಸ್ಸಿನ ಬಗ್ಗೆ ಅಧ್ಯಯನ ಮಾಡುವ ಹಾಗೂ ಮನಸ್ಸಿನ ಶಕ್ತಿಯನ್ನು ಅರಿಯಲು ನೆರವಾಗುವ ಎಲ್ಲಾ ವಿದ್ಯೆಯನ್ನು ಕಲಿಯಲು ನನಗಿರುವ ಹಂಬಲವನ್ನು ಹೇಳಿಕೊಂಡೆ.

                   ಶ್ರೀ. ಚಿ. ವಿಶ್ವೇಶ್ವರಯ್ಯನವರು

         ಯೋಗ ಹಾಗೂ ಧ್ಯಾನದ ಬಗ್ಗೆ ನನಗೆ ತರಬೇತಿ ಆರಂಭವಾಯಿತು. ಧ್ಯಾನದ ಬಗ್ಗೆ ನನಗೆ ಅತೀವ ಆಸಕ್ತಿಯಿತ್ತು. ಸಗುಣ, ನಿರ್ಗುಣ ಧ್ಯಾನಗಳನ್ನು ಮನಸಾರೆ ಅನುಭವಿದೆ. ನಂತರ ತ್ರಾಟಕ ವಿದ್ಯೆ, ಕಣ್ಣಿನ ವ್ಯಾಯಾಮ ಹಾಗೂ ಮನಸ್ಸಿನ ಏಕಾಗ್ರತೆಯ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಸಹಕಾರಿಯಾಯಿತು. 
        ಈ ಬಗ್ಗೆ  'ಅಧ್ಯಾತ್ಮಿಕ ಸಾಧನೆಯ ಅನುಭವಗಳು - 1' ರಿಂದ 'ಅಧ್ಯಾತ್ಮಿಕ ಸಾಧನೆಯ ಅನುಭವಗಳು 9 - ಸಾಕಾರ ಧ್ಯಾನ' ದವರೆಗೆ 'ಬ್ಲಾಗ್'ನಲ್ಲಿ ಸವಿವರವಾಗಿ ಬರೆದಿದ್ದೇನೆ.ಆಸಕ್ತರು ಓದಬಹುದು. 
        ನನ್ನ ಗುರುಗಳಿಗೆ ಬಹಳಷ್ಟು ಸಂತರ, ಸಾಧುಗಳ ಪರಿಚಯವಿದ್ದುದರಿಂದ ಹಲವಾರು ಸಾಧಕರು ಅವರನ್ನು ಭೇಟಿಯಾಗಲು ಬರುತ್ತಿದ್ದರು. ಅವರಲ್ಲಿ ಯಾರಾದರೂ ವಿಶೇಷ ಸಾಧಕರಿದ್ದರೆ ಗುರುಗಳು ನನಗೆ ಅವರ ಬಗ್ಗೆ ಹೇಳುತ್ತಿದ್ದರು ಹಾಗೂ ಕಲಿಯುವ ಆಸಕ್ತಿ ಇದ್ದರೆ ಅವರ ಬಳಿ ಕಲಿಯಬಹುದು ಎಂದೂ ಹೇಳುತ್ತಿದ್ದರು. ಒಮ್ಮೆ 'ಈವತ್ತು ಬಂದ ವ್ಯಕ್ತಿ ಸಾಮಾನ್ಯದವರಲ್ಲ, ಕಾಯಕಲ್ಪ ಚಿಕಿತ್ಸೆಯಲ್ಲಿ ಇವರನ್ನು ಮೀರಿದವರಲ್ಲ.ಅವರಿಗೆ ಸುಮಾರು ಎಪ್ಪತ್ತು ವರ್ಷಗಳಾದರೂ ಮುವ್ವತ್ತರ ಗಂಡಾಳಿನಂತೇ ಕಾಣುತ್ತಾರೆ' ಎಂದು ಹೇಳಿದರಲ್ಲದೇ 'ಕಾಯಕಲ್ಪ ಚಿಕಿತ್ಸೆಯನ್ನು ಕಲಿಯಲು ಕನಿಷ್ಠ ಎರಡು ವರ್ಷ ಅವರ ಬಳಿ ಇರಬೇಕಾಗುತ್ತದೆ. ಯೌವನ ಬಾಡದಿರಲು ಅಂಗಸಾಧನೆ, ಆಹಾರ, ಮನಸ್ಸಿನ ತರಬೇತಿ, ಮುಖ ಹಾಗೂ ದೇಹಕ್ಕೆ ಅಂಗಮರ್ದನ ಮಾಡುವ ವಿಶೇಷ ಪ್ರಕ್ರಿಯೆಯನ್ನು ಕಲಿಸುತ್ತಾರೆ. ಕಲಿಯುವ  ಆಸಕ್ತಿ ಇದ್ದರೆ ಅವರ ಬಳಿ ಮಾತನಾಡುತ್ತೇನೆ ' ಎಂದರು. 
        ಆ ವ್ಯಕ್ತಿ ನಮ್ಮ ಗುರುಗಳು ಹೇಳಿದಂತೇ ಕಟ್ಟುಮಸ್ತಾದ ಯುವಕನಂತೆಯೇ ಕಾಣುತ್ತಿದ್ದರು. ಎಪ್ಪತ್ತು ವರ್ಷವೆಂದು ಖಂಡಿತಾ ಹೇಳಲಾಗುತ್ತಿರಲಿಲ್ಲ. 'ಸ್ವಲ್ಪ ಯೋಚನೆ ಮಾಡಿ ಹೇಳುತ್ತೇನೆ' ಎಂದು ಹೇಳಿದೆ. ನನಗೆ ಮನಸ್ಸಿನ ಬಗ್ಗೆ ಎಲ್ಲವನ್ನೂ ತಿಳಿದು ಕೊಳ್ಳುವ ಆಸೆ ಇದ್ದುದರಿಂದ ಹಾಗೂ ಈ ವಿದ್ಯೆಯಲ್ಲಿ ಮನಸ್ಸಿಗಿಂತ ದೇಹದ ಬಗ್ಗೆ ಹೆಚ್ಚಿನ ಆದ್ಯತೆ ಇದೆ ಅನ್ನಿಸಿ, ಏಕೋ ಈ ವಿದ್ಯೆ ಕಲಿಯಲು ಮನಸ್ಸಾಗಲಿಲ್ಲ. ಬಹುಶಃ ಈಗ ಕೇಳಿದರೆ ಖಂಡಿತಾ ಹೌದು ಎನ್ನುತ್ತಿದ್ದೆನೋ ಏನೋ !
     ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಸೂರ್ಯನಮಸ್ಕಾರ

        ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ನಮ್ಮ ಯೋಗಶಾಲೆಗೆ ಬಂದಾಗ, ಇಳಿವಯಸ್ಸಿನಲ್ಲೂ ಅವರ ದೇಹಸೌಷ್ಠವ ಹಾಗೂ ಚುರುಕುತನವನ್ನು ಕಂಡು ಬೆರಗಾದೆ. ಇವರೂ ಕಾಯಕಲ್ಪ ಚಿಕಿತ್ಸೆ ಮಾಡಿಕೊಂಡಿರಬಹುದೇನೋ ಎಂದುಕೊಂಡು ಗುರುಗಳನ್ನು ಕೇಳಿದೆ. ಅದಕ್ಕೆ ಅವರು ನಗುತ್ತಾ 'ಅವರಿಗೆ ಯಾವ ಕಾಯಕಲ್ಪ ಚಿಕಿತ್ಸೆಯ ಅಗತ್ಯವೂ ಇಲ್ಲ. ಷಟ್ಕರ್ಮಗಳನ್ನು ಕಲಿಯುವ ಆಸಕ್ತಿ ಇದ್ದರೆ ಅವರಿಗಿಂತ ಗುರು ಬೇರೆ ಯಾರೂ ಇಲ್ಲ' ಎಂದು ಹೇಳಿದರು.    
        ರಾಘವೇಂದ್ರಸ್ವಾಮಿಗಳು ಷಟ್ಕರ್ಮದ ಬಗ್ಗೆ ವಿವರವಾದ ವಿವರಣೆ ನೀಡಿ ಕಲಿಯುವ ಆಸಕ್ತಿ ಇದ್ದರೆ ಮಲ್ಲಾಡಿಹಳ್ಳಿಗೆ ಬರುವಂತೆ ತಿಳಿಸಿದರು. ಆದರೆ ನಾನು ಮಲ್ಲಾಡಿಹಳ್ಳಿಗೆ ಹೋಗಿ ಕಲಿಯುವ ಪರಿಸ್ಥಿತಿ ಇಲ್ಲದಿದ್ದುದರಿಂದ ಅವರಿಂದ ಆಶೀರ್ವಾದ ಪಡೆದು ಅವರಿಂದಲೇ ತರಬೇತಿ ಪಡೆದ ಗುರುರಾಜ ತಂತ್ರಿ ಅವರಿಂದ ನೌಲಿ, ಧೌತಿ ಮುಂತಾದ ಷಟ್ಕರ್ಮಗಳ ತರಬೇತಿ ಪಡೆದೆ. 
        ಒಂದು ದಿನ ಗುರುಗಳು 'ತಾಂತ್ರಿಕ ವಿದ್ಯೆ ಕಲಿಯುವ ಆಸಕ್ತಿಯಿದೆಯೇ?' ಎಂದು ಕೇಳಿದಾಗ ನನ್ನ ಕಿವಿಗಳು ನೆಟ್ಟಗಾದವು. ಏಕೆಂದರೆ ತಂತ್ರ ವಿದ್ಯೆಯ ಬಗ್ಗೆ ಬಹಳಷ್ಟು ಓದಿ, ಕೇಳಿ ತಿಳಿದಿದ್ದೆ. ಮನಸ್ಸಿನ ಸುಪ್ತಶಕ್ತಿಯನ್ನು ತಂತ್ರ ವಿದ್ಯೆಯ ಮೂಲಕ ಪೂರ್ಣಪ್ರಮಾಣದಲ್ಲಿ ಉಪಯೋಗಿಸಲು ಸಾಧ್ಯ ಎಂದು ತಾಂತ್ರಿಕರೊಬ್ಬರು ಹಿಂದೊಮ್ಮೆ ಹೇಳಿದ್ದರು. ಆದ್ದರಿಂದ ತಕ್ಷಣ 'ಹೌದು, ಆಸಕ್ತಿಯಿದೆ... ತುಂಬಾ ಆಸಕ್ತಿಯಿದೆ' ಎಂದು ಉತ್ಸುಕನಾಗಿ ಹೇಳಿದೆ. ಮಾರನೆಯ ದಿನ ಆ ನನ್ನ 'ತಂತ್ರ' ಗುರುಗಳನ್ನು ಭೇಟಿಯಾದೆ. ನನ್ನ ಜೀವನದ ಅತಿ ಮುಖ್ಯ ಆಧ್ಯಾಯ ಅಲ್ಲಿಂದ ಪ್ರಾರಂಭವಾಯಿತು. ಮುಂದಿನ ವಿಷಯ ಮುಂದಿನ ಕಂತಿನಲ್ಲಿ....     

Tuesday 1 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 4


        ನಮ್ಮ ಮಹಾಮಾಯಿ ದೇವಸ್ಥಾನದ ಬಗ್ಗೆ ಸಣ್ಣ ಪರಿಚಯ ಮಾಡಿದ್ದಾಯಿತು. ಈಗ ಅಲ್ಲಿ ನಡೆಯುತ್ತಿದ್ದ 'ದರ್ಶನ' ಅಂದರೆ ಪಾತ್ರಿಯ ಮೇಲೆ ಬರುತ್ತಿದ್ದ ದೇವಿಯ ಆವೇಶದ ಬಗ್ಗೆ ಕೆಲವು ವಿವರಗಳನ್ನು ಹೇಳಿ ನನ್ನ ತಾಂತ್ರಿಕ ಸಾಧನೆಯ ಅನುಭವಗಳನ್ನು ಬಿಚ್ಚಿಡುತ್ತೇನೆ. ನದಿಯೊಳಗೆ ಮುಳುಗಿದ್ದ ಮೂಲವಿಗ್ರಹ ನಮ್ಮ ವಂಶಸ್ಥರಿಗೆ ದೊರೆತಾಗಿನಿಂದ ಒಬ್ಬ ಪಾತ್ರಿಯ ಮೇಲೆ ದೇವರ ಆವಾಹನೆಯಾಗುವುದು ಸಾಮಾನ್ಯವಾಗಿತ್ತು. ಮಧ್ಯ ಕೆಲವೊಂದು ಕಾಲ ನಿಂತರೂ ಮತ್ತೆ ಇನ್ನೊಬ್ಬರ ಮೇಲೆ ಅವಾಹನೆಯಾಗುವುದು ಮುಂದುವರೆಯುತ್ತಿತ್ತು. 
        ಬೇರೆ ಭಾಗದ ಜನರಿಗೆ ಇದು ವಿಚಿತ್ರವಾಗಿ ಕಂಡರೂ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಅದು ವಿಶೇಷವಾಗಿತ್ತು. ಭೂತಕೋಲ, ನಾಗಾರಾಧನೆ, ದರ್ಶನ, ಆವಾಹನೆ, ಆವೇಶ ಮುಂತಾದವು ದಕ್ಷಿಣ ಕನ್ನಡದ ಸಂಸ್ಕೃತಿಯಲ್ಲಿಯೇ ಬೆರೆತು ಹೋಗಿವೆ. ಈ ನಂಬಿಕೆಗಳೊಂದಿಗೆ ಬೆಳೆದ ನನಗೆ ನಮ್ಮ ದೇವಸ್ಥಾನದ ದರ್ಶನ, ಭಾವಾತ್ಮಕ ಹಾಗೂ ಭಾವನಾತ್ಮಕವಾಗಿತ್ತು. ದಕ್ಷಿಣಕನ್ನಡದ ಹಲವೆಡೆ ಇಂತಹ 'ದೇವರು/ದೆವ್ವ' ಮೈಮೇಲೆ ಬರುವುದು ಅವರವರ ಲಾಭಕ್ಕೆ, ವೈಯುಕ್ತಿಕ ಕಾರಣಗಳಿಗಾಗಿ ಕೃತ್ರಿಮವಾಗಿರುವಂತೆ ಕಂಡರೂ ನಮ್ಮ ದೇಗುಲದಲ್ಲಿ ಅದು ಸಹಜವಾಗಿರುವಂತೆಯೇ ಕಾಣಿಸುತ್ತಿತ್ತು. 

ದರ್ಶನದ ಪಾತ್ರಿ - ಕೆ.ಕೃಷ್ಣನಾಯಕ್    
    
        ಇದಕ್ಕೆ ಮೊದಲ ಕಾರಣ, ದರ್ಶನದ ಪಾತ್ರಿಯಾಗಿದ್ದದ್ದು ನನ್ನ ತಂದೆ ಕೆ.ಕೃಷ್ಣನಾಯಕ್. ಅವರು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರು. ಧಾರ್ಮಿಕ ವಿಧಿ ವಿಧಾನ ಆಚಾರಗಳಲ್ಲಿ ಅವರು ಪಂಡಿತರೇನೂ ಆಗಿರಲಿಲ್ಲ. ಆದರೆ ಪುರೋಹಿತರು ಕೇಳಿದ ಪ್ರಶ್ನೆಗಳಿಗೆ ಕರಾರುವಾಕ್ಕಾಗಿ ಉತ್ತರಿಸುತ್ತಿದ್ದರು. ಭಕ್ತರು ಕೇಳಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸುತ್ತಿದ್ದರು. ಅದನ್ನು ಪಾಲಿಸಿದ ಭಕ್ತರು ಸಫಲತೆಯನ್ನು ಪಡೆಯುತ್ತಿದ್ದರು.
        ಇದಕ್ಕೆ ಉದಾಹರಣೆಯಾಗಿ ನನ್ನ ಅಕ್ಕ ಕೆ. ಪ್ರೀತಾ ನಾಯಕ್ (ಈಗ ಪ್ರಭು) ಅವರ ಒಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ನನ್ನಕ್ಕನಿಗೆ ಮದುವೆಯಾಗಿ ಕೆಲವು ವರ್ಷಗಳು ಸಂದರೂ ಮಕ್ಕಳಾಗಿರಲಿಲ್ಲ. ಅವರು ಮಗುವಿನ ಕೋರಿಕೆಯನ್ನು 'ದರ್ಶನ'ದ ವೇಳೆಯಲ್ಲಿ ವ್ಯಕ್ತ ಪಡಿಸಿದರು. ಅದಕ್ಕೆ ಉತ್ತರವಾಗಿ 'ದರ್ಶನ' ಪಾತ್ರಿ (ಅಂದರೆ ನನ್ನ ಅಪ್ಪ) ಪರಿಹಾರವನ್ನು ಸೂಚಿಸಿದರು. 'ಇಲ್ಲಿಂದ ಮುಂದೆ ಒಂದು ವರ್ಷ ಪ್ರತೀ ಹುಣ್ಣಿಮೆಯಂದು ಯಾವುದಾದರೂ ನಾಗಶಿಲೆಗೆ ಹಾಲಿನ ಅಭಿಷೇಕ ಮಾಡತಕ್ಕದ್ದು. ಅಲ್ಲದೇ ಹುಟ್ಟಿದ ಮಗುವಿಗೆ 'ನಾಗ'ನಿಗೆ ಸಂಬಂಧಪಟ್ಟ ಹೆಸರೊಂದನ್ನು ಇಡತಕ್ಕದ್ದು. ಇದಕ್ಕೆ ಈ ಸ್ಥಳದಲ್ಲಿ ನಿಂತು ಒಪ್ಪಿಗೆ ನೀಡಿದರೆ ಮುಂದಿನ ವರ್ಷ ನೀವು ಬರುವಾಗ ನಿಮ್ಮ ಮಗುವಿನೊಂದಿಗೆ ಬರುವಂತೆ ಮಾಡುತ್ತೇನೆ. ಒಪ್ಪಿಗೆಯೇ?' ಎಂದು ಕೇಳಿದಾಗ ನನ್ನ ಅಕ್ಕ ಹಾಗೂ ಭಾವ ಇಬ್ಬರೂ ಸಮ್ಮತಿಸಿದರು. ಅದರಂತೆಯೇ ನನ್ನಕ್ಕ ಗಂಡುಮಗುವೊಂದಕ್ಕೆ ಜನ್ಮ ನೀಡಿದರು. ಕಾಕತಾಳೀಯವೋ ಎಂಬಂತೆ ಆ ಮಗು ಹುಟ್ಟಿದ್ದು ನಾಗರಪಂಚಮಿಯ ದಿನ. ಅವನಿಗೆ 'ನಾಗರಾಜ' ಎಂಬ ಹೆಸರನ್ನೂ ನಾಮಕರಣ ಮಾಡಲಾಯಿತು. ಇಂತಹ ಹಲವು ಹತ್ತು ಉದಾಹರಣೆಗಳು ನನಗೆ ದರ್ಶನದ ಮೇಲಿದ್ದ ಅಭಿಮಾನ, ಪ್ರೀತಿ, ನಂಬಿಕೆಯನ್ನು ನೂರ್ಮಡಿ ಮಾಡಿದವು. 
                               ಶ್ರೀಮದ್ ವರದೇಂದ್ರತೀರ್ಥ ಸ್ವಾಮೀಜಿ

        ಎರಡನೆಯದಾಗಿ ನಮ್ಮ ಕಾಶೀಮಠದ ಹಿಂದಿನ ಯತಿವರ್ಯರಲ್ಲೊಬ್ಬರಾದ ಶ್ರೀ ವರದೇಂದ್ರ ಸ್ವಾಮೀಜಿಯವರು 'ಪ್ರಾಮಾಣಿಕ ದರ್ಶನ' ಎಂದು ಒಪ್ಪಿಕೊಂಡದ್ದು ಮೂರು ಸ್ಥಳಗಳಲ್ಲಿ ಮಾತ್ರ. ಅವು ಮಂಜೇಶ್ವರ, ಕಾರ್ಕಳ ಹಾಗೂ ಬಂಟವಾಳದ ನಮ್ಮ ದೇವಸ್ಥಾನದ 'ದರ್ಶನ'ಗಳು. ಇದನ್ನು ಕೂಡ ನನಗೆ ತಿಳಿಸಿದ್ದ ನಮ್ಮ 'ಅಪ್ಪಿ ಮಾಯಿ'. 
 ಅಪ್ಪಿ ಮಾಯಿ      

         ನನ್ನ ತಂದೆ ಪಾತ್ರಿಯಾಗಿ ದೇವಸ್ಥಾನ ಪ್ರವೇಶಿಸುವವರೆಗೂ ತಂದೆಯಂತೆಯೇ ಕಾಣುತ್ತಿದ್ದರು. ಒಮ್ಮೆ ದೇಗುಲವನ್ನು ಪ್ರವೇಶಿದರೆಂದರೆ ಅವರ ಮುಖವು ಅತ್ಯಂತ ಗಂಭೀರವಾಗುತ್ತಿತ್ತು. ಬಾಲ್ಯದಲ್ಲಿ ಮೊದಲ ಬಾರಿಗೆ ದರ್ಶನವನ್ನು ನೋಡಿದ ಮೇಲೆ ನನಗೆ ನನ್ನ ತಂದೆಯ ಬಳಿ ಹೋಗಲು ಭಯವಾಗುತ್ತಿತ್ತು. ಅವರ ಗಂಭೀರ ಮುಖಚರ್ಯೆ, ಧ್ವನಿಯ ಏರಿಳಿತ ಹಾಗೂ ಅಧಿಕಾರಯುತವಾಗಿ ಮಾತನಾಡುವ ಶೈಲಿ... ಇವೆಲ್ಲವನ್ನೂ ನೋಡುವಾಗ 'ಇವರೇನಾ ನನ್ನ ಅಪ್ಪ?' ಎಂದೆನಿಸುತ್ತಿತ್ತು. ಕಾಲ ಕಳೆದಂತೆ ಅದು ಭಕ್ತಿಯ ರೂಪವನ್ನು ಪಡೆದುಕೊಂಡಿತು. ಪ್ರತಿ ನವರಾತ್ರಿಯ ದಿನದಂದು ಭಾವೋನ್ಮಾದದ ವಾತಾವರಣವಿರುತ್ತಿತ್ತು. 
        ಅಂದಿನ ನಮ್ಮ ಪುರೋಹಿತರಾದ ಶ್ರೀ ರಾಮಾಚಾರ್ಯ ಅವರು ದೇವಿಯನ್ನು 'ಹೇ ಚಂಡಮುಂಡಾಂಬಿಕೇ, ಹೇ ಮಹಿಷಾಸುರಮರ್ದಿನೀ, ಹೇ ಮಹಾಮಾಯೇ ನಿನ್ನ ಪರಿವಾರದೊಂದಿಗೆ ಸಕಲಶಕ್ತಿಯೊಂದಿಗೆ ಆವಿರ್ಭವಿಸು ತಾಯೇ' ಎಂದು ಪ್ರಾರ್ಥಿಸುತ್ತಿರುವಾಗ ನನ್ನ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ದೇವಿಯ ಆವಾಹನೆಯಾದ ಮೇಲೆ  ಚಿತ್ರ ಅಥವಾ ವಿಡಿಯೋ ತೆಗೆಯುವುದು ನಿಷಿದ್ಧವಾಗಿದ್ದುದರಿಂದ, ಅದರ ಮುಂಚೆ ತೆಗೆದ ವಿಡಿಯೋ ಒಂದು ಇಲ್ಲಿದೆ.

         ಕಾಲಕಳೆದಂತೆಯೇ ಮನಃಶಾಸ್ತ್ರದ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದ ನನಗೆ ವೈಜ್ಞಾನಿಕವಾಗಿ ದೇವರು/ದೆವ್ವ ಮೈಮೇಲೆ ಬರುವುದು ಸಾಧ್ಯವಿಲ್ಲ. ಅದೊಂದು ಮಾನಸಿಕ ಉನ್ಮಾದದ ಸ್ಥಿತಿ ಎಂಬ ವೈಜ್ಞಾನಿಕ/ವೈಚಾರಿಕ ನೆಲೆಗಟ್ಟಿನ ವಾದ ಎದುರಿಗೆ ಬಂತು. ಇದೊಂದು ರೀತಿ 'ನಂಬಿಕೆ v/s ವಿಜ್ಞಾನ' ಎಂಬ ತೂಗುಯ್ಯಾಲೆಗೆ ನನ್ನನ್ನು ದೂಡಿತು.      
        ಮುಂದೆ ನಾನು ಸಮ್ಮೋಹಿನಿಗಾರನಾಗಿ ಹಾಗೂ ಸಮ್ಮೋಹಿನಿ ಚಿಕಿತ್ಸಕನಾಗಿ ರೂಪುಗೊಂಡಾಗ ಇದರ ವಿಶ್ಲೇಷಣೆ ನನಗೆ ಸುಲಭವಾಯಿತು. ಸಮ್ಮೋಹಿನಿಯಲ್ಲಿ ಅರೆಪ್ರಜ್ಞಾಮನಸ್ಸು ಅತ್ಯಂತ ಶಕ್ತಿಶಾಲಿಯಾದದ್ದು. 'ದರ್ಶನ'ವನ್ನು ವೈಜ್ಞಾನಿಕವಾಗಿ ನೋಡಿದಾಗ ನಾನು ಕಂಡದ್ದು ಎರಡು ಅಂಶಗಳು. ದರ್ಶನದ ಪಾತ್ರಿ ತನಗೆ ದೇವಿಯ ಆವಾಹನೆಯಾಗುತ್ತಿದೆ ಎಂದು ನಂಬಿರುವುದರಿಂದ ಆತನ ಮನಸ್ಸು ಮೇಲಿನ ಸ್ತರಕ್ಕೆ ಏರುತ್ತದೆ. ಆಗ ಆತನ ವಿವೇಚನೆ ಹಾಗೂ ಜ್ಞಾನ ಅತ್ಯಂತ ಉನ್ನತಮಟ್ಟದಲ್ಲಿರುತ್ತದೆ. ಅಂತೆಯೇ ಅದನ್ನು ಸಂಪೂರ್ಣವಾಗಿ ನಂಬಿ ಬಂದ ಭಕ್ತರಿಗೆ, ಆ ನಂಬಿಕೆಯೇ ಪರಿಹಾರವನ್ನು ನೀಡುತ್ತದೆ. ನನಗೆ ಇಲ್ಲೆಲ್ಲಾ ಕಾಣುವುದು ಮನಸ್ಸಿನ ಅಗಣಿತ ಶಕ್ತಿ. ಉನ್ಮಾದವೋ, ಭ್ರಮೆಯೋ, ಭಕ್ತಿಯೋ ಎಲ್ಲೆಡೆ ಪ್ರಾಬಲ್ಯ ಮೆರೆಯುವುದು ನಂಬಿಕೆ. ನಂಬಿ ಕೆಟ್ಟವರಿಲ್ಲವೋ..