Saturday 23 November 2019

ಜೀವನದಲ್ಲಿ ಸೋಲುವ ಕ್ಷಣಗಳು - ಜೀವನದ ಕಟುಸತ್ಯಗಳು - 1


ಜೀವನದಲ್ಲಿ ಸೋಲುವ ಕ್ಷಣಗಳು  
        ಕೆಲವು ಸತ್ಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ನಮ್ಮ ನಿಯಮಿತ ಅರಿವು, ಭರವಸೆಯ ಮೇಲೆ ನಿಂತಿರುವ ಬದುಕು ಹಾಗೂ ನಮ್ಮ ಮನಸ್ಸಿನ ಸ್ವ-ಸಮರ್ಥಿಸುವ ಗುಣದಿಂದಾಗಿ  ಕೆಲವು ಸತ್ಯಗಳನ್ನು ಅದು ಒಪ್ಪಿಕೊಳ್ಳಲು ಬಯಸುವುದಿಲ್ಲ. ಜೀವನದಲ್ಲಿ ಸೋತು, ನನ್ನ ಬಳಿ ಬಂದು ತಮ್ಮ ನೋವನ್ನು ತೋಡಿಕೊಂಡಾಗ ನಾನು ಗ್ರಹಿಸಿದ ಅನಿಸಿಕೆಗಳನ್ನು ಈ ಮೊದಲನೆಯ ಕಂತಿನಲ್ಲಿ ಹಂಚಿಕೊಳ್ಳುತ್ತೇನೆ. 
        ಜೀವನದುದ್ದಕ್ಕೂ ಬರೀ ಗೆಲುವು ಅಥವಾ ಯಶಸ್ಸನ್ನೇ ಕಾಣಲಾಗುವುದಿಲ್ಲ. ಸೋಲನ್ನು ಕೂಡಾ ಅನುಭವಿಸಬೇಕಾದ ಅನಿವಾರ್ಯತೆ ಬಂದೇ ಬರುತ್ತದೆ. 'ಬೇಕು' ಎಂದುಕೊಳ್ಳುವ ಗೆಲುವು ಸಿಗದಿದ್ದರೂ, 'ಬೇಡ' ಅನ್ನುವ ಸೋಲು ಮಾತ್ರ ಎಲ್ಲರಿಗೂ ಸಿಗುತ್ತದೆ. ಸೋಲಿನ ಮಟ್ಟ ಕಿರಿದಾಗಿರಬಹುದು ಅಥವಾ ಹಿರಿದಾಗಿರಬಹುದು, ಆದರೆ ಸೋಲನ್ನು ಒಪ್ಪಿಕೊಳ್ಳಬೇಕಾಗುವುದಂತೂ ಸತ್ಯ. ಈಗ ಸೋಲಿನ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನು ಮಾಡೋಣ. 
        'ಸೋಲು' ನಮಗೆ ಹತಾಶೆ,ನಿರಾಶೆ, ನೋವು ಇತ್ಯಾದಿ ಮಾನಸಿಕ ತುಮುಲಗಳಿಗೆ ಹಾದಿ ಮಾಡಿಕೊಡುತ್ತದೆ. ಗೆಲುವು ತನ್ನದೆಂದು ಬೀಗುವ ಮನುಷ್ಯ ಸೋಲಿಗೆ ಇತರರನ್ನು ದೂಷಿಸುತ್ತಾನೆ. 

ಸೋಲಿಗೆ ಕಾರಣಗಳೇನು ?  
        ಗೆಲುವಿಗೆ ಒಮ್ಮೊಮ್ಮೆ ಅದೃಷ್ಟ ಕಾರಣವಾದರೆ, ಸೋಲಿಗೆ ದುರಾದೃಷ್ಟ ಕಾರಣವಾಗಿರುತ್ತದೆ. ಅಂದ ಮಾತ್ರಕ್ಕೆ ನಮ್ಮೆಲ್ಲ ಸೋಲುಗಳನ್ನು ದುರಾದೃಷ್ಟದ ಮೇಲೆ ಹೊರಿಸಲಾಗುವುದಿಲ್ಲ. ಬಹುತೇಕ ನಮ್ಮ ಸೋಲಿಗೆ  ನಾವೇ ಕಾರಣಕರ್ತರಾಗಿರುತ್ತೇವೆ. ನಾವು ಮಾಡಿರಬಹುದಾದ ತಪ್ಪುಗಳು, ನಮ್ಮ ಆಲಸ್ಯತನ, ನಮ್ಮ ತಪ್ಪು ಗ್ರಹಿಕೆ, ನಮ್ಮಿಂದಾದ ಕಡೆಗಣನೆ.. ಹೀಗೆ ಹತ್ತು ಹಲವು ಕಾರಣಗಳಿರಬಹುದು. ಬಹುತೇಕ ನಾವೇ ಮಾಡಿರಬಹುದಾದ ತಪ್ಪುಗಳನ್ನು ನಾವು  ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಪ್ರಕಾರ ನಾವು ತಪ್ಪು ಮಾಡದವರು, ಬುದ್ಧಿವಂತರು, ನಿರಪರಾಧಿಗಳು,ವಿವೇಕಿಗಳು... ಎಂದೆಲ್ಲಾ ಅಂದುಕೊಂಡಿರುತ್ತೇವೆ. ಬೇರೆಯವರ ಮೇಲೆ ತಪ್ಪು ಹೊರಿಸುವುದರಲ್ಲಿ ನಾವು ನಿಷ್ಣಾತರಾಗಿರುತ್ತೇವೆ. ಏಕೆಂದರೆ ನಮ್ಮ ಮನಸ್ಸಿನ ಸ್ವ-ಸಮರ್ಥನಾಗುಣ ನಮ್ಮನ್ನು ಎಲ್ಲಾ ವಿಷಯದಲ್ಲಿ ರಕ್ಷಿಸುತ್ತಿರುತ್ತದೆ. 
        ನಿಧಾನವಾಗಿ ತೆರೆದ ಮನಸ್ಸಿನಿಂದ ಯೋಚಿಸಿದಾಗ ನಾವು ಎಲ್ಲಿ ಎಡವಿದ್ದೇವೆ ಎಂದು ಮನಗಾಣುತ್ತೇವೆ. ನಮ್ಮದೇ ಆದ ತಪ್ಪು ನಿರ್ಧಾರಗಳಿಂದಾಗಿ ಜೀವನವನ್ನು ಸಂಕೀರ್ಣಗೊಳಿಸಿಕೊಂಡಿರುತ್ತೇವೆ. ದುರಾದೃಷ್ಟದಿಂದಾಗುವ ಸೋಲಿಗೆ ನಾವು ಏನೂ ಮಾಡುವ ಪರಿಸ್ಥಿತಿಯಲ್ಲಿರುವುದಿಲ್ಲ. ಸೋಲನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಎಲ್ಲಾ ಸೋಲುಗಳನ್ನು ಚೆನ್ನಾಗಿ ಅವಲೋಕಿಸಿ, ವಿವೇಚಿಸಿದಾಗ ನಮ್ಮ ತಪ್ಪುಗಳು, ಅವಿವೇಕ ಮುಂತಾದವು ಎದ್ದು ಕಾಣುತ್ತವೆ. 

ಪೊಳ್ಳು ಸಮಾಧಾನಗಳು 
        'ಬೆಟರ್ ಲಕ್ ನೆಕ್ಸ್ಟ್ ಟೈಮ್' - ಯಾರಾದರೂ ಸೋತಾಗ ಬಹಳಷ್ಟು ಜನ ಹೇಳುವ ಮಾತಿದು. ಸೋತು ಸುಣ್ಣವಾದ ಮನುಷ್ಯ ಇದನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎನ್ನುವುದೇ ಪ್ರಶ್ನೆ. ಇತರರು ಪದೇ ಪದೇ ಆಡುವ ಈ ಮಾತುಗಳು ಅವನ ಸೋಲನ್ನು ಎತ್ತಿ ತೋರಿಸುತ್ತಲೇ ಇರುತ್ತವೆ. ಆತ ಜೀವನದಲ್ಲಿ ಸೋತಾಗಲೆಲ್ಲಾ ಈ ಮಾತುಗಳನ್ನು ಕೇಳುತ್ತಿರುತ್ತಾನೆ. ಆ 'ಬೆಟರ್ ಲಕ್' ಇರುವ 'ನೆಕ್ಸ್ಟ್ ಟೈಮ್' ಬಾರದೇ ಇರಲೂಬಹುದು. 
'ಸೋಲೇ ಗೆಲುವಿನ ಮೆಟ್ಟಿಲು' - ಅಪರೂಪದ ಕೆಲವು ಉದಾಹರಣೆಗಳನ್ನು ಬಿಟ್ಟರೆ ಈ ಮಾತುಗಳನ್ನು ಕೇಳಿ ಗೆದ್ದವರಿಲ್ಲ. ಸೋತು ಮೆಟ್ಟಿಲಾಗಿ ಎಲ್ಲರಿಂದಲೂ ತುಳಿಸಿಕೊಳ್ಳುತ್ತಲೇ ಇರುತ್ತಾರೆ. 
'ಸೋಲನ್ನು ಪಾಠವೆಂದು ತಿಳಿದುಕೋ' - ಈ ಮಾತನ್ನು ಸಾರಿ ಸಾರಿ ಹೇಳಿದರೂ, ಸೋತವರು ಮತ್ತದೇ ತಪ್ಪುಗಳನ್ನು ಮಾಡಿ ಸೋಲುತ್ತಲೇ ಇರುತ್ತಾರೆ. ಈ ರೀತಿಯ ಎಲ್ಲ ಮಾತುಗಳು ಪರೋಕ್ಷವಾಗಿ 'ನೀನು ಸೋತಿರುವೆ' ಎಂದು ಸಾರಿ ಹೇಳುತ್ತಿರುತ್ತವೆ.
        ಕೆಲವೊಮ್ಮೆ ಜೀವನದಲ್ಲಿ ಸೋಲನ್ನು ದೊಡ್ಡ ರೀತಿಯಲ್ಲಿ ಅನುಭವಿಸಬೇಕಾಗಬಹುದು. ಅದು ಜೀವನವನ್ನು ಅಲ್ಲಾಡಿಸಬಹುದು.ಅಂತಹವರಿಗ
ಮೇಲಿನ ಮಾತುಗಳೆಲ್ಲಾ ಪೊಳ್ಳು ಮಾತುಗಳಂತೆಯೇ ಕಾಣುತ್ತವೆ. ಏಕೆಂದರೆ ಆತ ಅನುಭವಿಸಿದ ಸೋಲಿನ ಕಾರಣಕರ್ತರು - ಆತ ನಂಬಿದ್ದ ಗೆಳೆಯ, ಸಂಬಂಧಿಕ,
ಪ್ರೇಮಿ ಅಥವಾ ಹಿತೈಷಿಗಳೇ ಆಗಿರುತ್ತಾರೆ. ನಂಬಿಕೆ ದ್ರೋಹವಾದಾಗ ಆಗುವ ಆಘಾತ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. 
        ಹೇಗಾದರೂ, ಎಂತಾದರೂ ಇಂತಹ ತೀವ್ರವಾಗಿ ಬಾಧಿಸುವ ಸೋಲಿನಿಂದ ಹೊರಬಂದವರು ಜಗತ್ತಿನಲ್ಲಿ ಅತ್ಯುನ್ನತ ಮಟ್ಟ ತಲುಪಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಸೋಲಿನಿಂದ ಹೊರಬರುವುದು ಹೇಗೆ? 
...ಮುಂದಿನ ಕಂತಿನಲ್ಲಿ   

No comments:

Post a Comment