Monday 21 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 16

       ನಾನು ಮಾಡಿದ ನಾಲ್ಕು ಮುಖ್ಯ ದೇವೋಪಾಸನೆಯಲ್ಲಿ ಕೊನೆಯ ಉಪಾಸನೆ ಶ್ರೀ ಕೃಷ್ಣನದು. ಕೃಷ್ಣನ ಭಾವ ಅತ್ಯಂತ ಸುಂದರ ಭಾವ. ಕೃಷ್ಣನ ರಸಿಕತೆ, ಚಾಣಾಕ್ಷತನ, ಕಳ್ಳಾಟಗಳು, ಆತನ ಮೋಹಕ ರೂಪ, ಕೊಳಲ ಗಾನ, ಗೋಪಿಕಾ ವಲ್ಲಭನೆಂಬ ಬಿರುದು... ಹೀಗೆ ಒಂದೇ ಎರಡೇ?   
         ಕೃಷ್ಣನನ್ನು ಒಬ್ಬ ದೇವರಾಗಿ ಅನುಭವಿಸುವುದಕ್ಕಿಂತ ಇಡಿಯಾಗಿ
ಅನುಭವಿಸಲು ಮನಸ್ಸಾಗಿತ್ತು. ಈ ಸಾಧನೆಗೆ ಕುಳಿತಾಗ ಅವನೇ ಇಡೀ ಪ್ರಕೃತಿ ಎಂದೆನಿಸಿ, ಪ್ರಕೃತಿಯೊಡನೆ ಒಂದಾದ ಭಾವವನ್ನು ಅನುಭವಿಸಿದೆ. ಆ ಭಾವವನ್ನು ಅನುಭವಿಸಿದಾಗ, 'ಇದು ನನ್ನ ದೇಹದ, ಮನಸ್ಸಿನ ಅಳತೆಗೆ ಮೀರಿದ್ದು' ಎಂದು ಅನ್ನಿಸಿ ಒಮ್ಮೆ ತತ್ತರಿಸಿ ಹೋಗಿದ್ದೂ ನಿಜ. ಪ್ರಕೃತಿಶಕ್ತಿಯನ್ನು ಇಡಿಯಾಗಿ
ಅನುಭವಿಸುವುದು ನನಗೆ ನಿಜಕ್ಕೂ ಸವಾಲಾಗಿತ್ತು. ದೇಹವಿಡೀ ಅದರ ಪಾಡಿಗೆ ನಡುಗುತ್ತಿತ್ತು. ಆ ಶಕ್ತಿಯನ್ನು ತುಂಬಾ ಹೊತ್ತು ಹಿಡಿದಿಟ್ಟುಕೊಳ್ಳುವುದು ಅಸಾಧ್ಯ ಕೆಲಸವಾಗಿತ್ತು. ನನಗೆ ನಾನೇ ಸಮಾಧಾನ ಮಾಡಿಕೊಂಡೆ.
         ನಂತರ ಕೃಷ್ಣನನ್ನು ಪೂರ್ತಿಯಾಗಿ ಅನುಭವಿಸುವ ಬದಲು ಆತನ ಯಾವುದಾದರೊಂದು ಗುಣದ ಭಾವದಲ್ಲಿರುವುದು ಒಳಿತು ಎಂದನ್ನಿಸಿತ್ತು. ಕೃಷ್ಣನ ಭಾವ ಎಂದೊಡನೆ ಹಲವಾರು ಭಾವಗಳ ಸಂಗಮವೇ ಆಗಿರುತ್ತದೆ. ನನಗೇ ಅರಿವಿಲ್ಲದಂತೆ ಕೃಷ್ಣನ ಮೋಹಕ ರೂಪ ಹಾಗೂ ರಸಿಕತೆಯ ಕಡೆ ಮನಸ್ಸು ವಾಲತೊಡಗಿತು. ಈ ಭಾವ ಅತ್ಯಂತ ಅಪ್ಯಾಯಮಾನವಾಗಿತ್ತು. ಬಹುಶಃ ಕಠಿಣವಾದ ಪ್ರಯೋಗಗಳನ್ನು ಮಾಡಿದ ದೇಹ ಹಾಗೂ ಮನಸ್ಸು ಒಂದಷ್ಟು ಪರಿಹಾರ ಬಯಸುತ್ತಿತ್ತೋ ಏನೋ! ಈ ಭಾವದಲ್ಲಿಯೇ ಕೃಷ್ಣನ ಉಪಾಸನೆ ಮಾಡುತ್ತಿದ್ದೆ. 
        ನನ್ನಲ್ಲಿ ಆದ ಬದಲಾವಣೆಗಳನ್ನು ಇಲ್ಲಿ ಹೇಳಬಯಸುತ್ತೇನೆ. ನನಗೆ ನಾನೇ ಅತ್ಯಂತ ಸುಂದರನಾಗಿ ಕಾಣುತ್ತಿದ್ದೆ. ಅಪ್ಪಿ ತಪ್ಪಿ ಕನ್ನಡಿಯ ಮುಂದೆ ಸಾಗುವಾಗ ನನ್ನನ್ನು ನಾನೇ ನೋಡಿ ಹೆಮ್ಮೆ ಪಡುತ್ತಿದ್ದೆ. ದೇವಸ್ಥಾನಕ್ಕೆ ಬರುವ ಕೆಲವು ಹೆಣ್ಣು ಮಕ್ಕಳು ನನ್ನೊಡನೆ ಹೆಚ್ಚುಹೆಚ್ಚಾಗಿ ಮಾತನಾಡಲು ಕುಳಿತುಕೊಳ್ಳುತ್ತಿದ್ದರು. ಕೆಲವರೊಡನೆ ಮಾತನಾಡುವುದು ನನಗೂ ಹಿತವೆನ್ನಿಸುತ್ತಿತ್ತು. ಒಮ್ಮೊಮ್ಮೆ ಕಿರುಗೆಜ್ಜೆ ಧರಿಸಿದ ಗೋಪಿಕಾ ಸ್ತ್ರೀಯರೊಂದಿಗೆ ನಾನೂ ಕುಳಿತಂತೆ ಭಾಸವಾಗುತ್ತಿತ್ತು. ಕಿಟಕಿಯ ಮರೆಯಿಂದ ಯಾರಾದರೂ ಗೋಪಿಕಾ ಸ್ತ್ರೀಯರು ಕಿರುಗೆಜ್ಜೆ ಧರಿಸಿದ್ದಾರೋ ಎಂದು ಗಮನಿಸುತ್ತಿದ್ದೆ! ಯಾರೊಡನೆಯೂ ದೈಹಿಕವಾಗಿ ಒಂದು ಸಣ್ಣ ಸಲಿಗೆಯನ್ನು ತೆಗೆದುಕೊಳ್ಳಲೂ ಮನಸ್ಸು ಇಚ್ಚಿಸಲಿಲ್ಲ. ಒಟ್ಟಾರೆ ಆಹ್ಲಾದಕರ ವಾತಾವರಣವಿತ್ತು. 
        ಹಿಂದಿರುಗಿ ಬಂದ ಗುರುಗಳ ಬಳಿ ನನ್ನ ಕಷ್ಟವನ್ನು ತೋಡಿಕೊಂಡೆ. 'ಈ ಬಾರಿ ನಿನ್ನ ಮುಂದಿನ ಸಾಧನೆ ಮುಗಿಯುವವರೆಗೆ ನಿನ್ನೊಡನೆಯೇ ಇರುತ್ತೇನೆ' ಎಂದು ಭರವಸೆ ಇತ್ತರು. 'ನೀನು ಅನುಭವಿಸಿದ್ದು ವಿರಾಟ್ ಭಾವ. ಕೃಷ್ಣನ ವಿರಾಟ್ ಸ್ವರೂಪದ ಭಾವ ಸಿಗುವುದೇ ಕಷ್ಟ. ನೀನು
ಧೈರ್ಯ ಮಾಡಿ ಮುಂದುವರೆಯಬೇಕಿತ್ತು, ಹಲವಾರು ಹಂತಗಳನ್ನು ಒಮ್ಮೆಯೇ ದಾಟಬಹುದಿತ್ತು ' ಎಂದೆಲ್ಲಾ ಹೇಳಿದ ಗುರುಗಳು 'ನಾನು ಇಲ್ಲಿಯೇ ಇದ್ದರೆ ಚೆನ್ನಿತ್ತು. ಇರಲಿ, ನಿನ್ನ ಯಾವ ಸಾಧನೆಯೂ ವ್ಯರ್ಥವಾಗುವುದಿಲ್ಲ' ಎಂದು ಮೈದಡವಿದರು. ನಂತರ ಕೆಲ ದಿನಗಳು ನನಗೆ ವಿರಾಮ ಸಿಕ್ಕಿತ್ತು.  
        

No comments:

Post a Comment