Friday 4 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 6

      
   
                          ನಾನು ಮನಸಾರೆ ಆರಾಧಿಸಿ ಪೂಜಿಸಿದ ನನ್ನ ಪ್ರೀತಿಯ ದೇವಿ     

         ಮಾರನೇ ದಿನ ಮಹಾ ತಾಂತ್ರಿಕರಾದ ಆ ಗುರುಗಳನ್ನು ಭೇಟಿಯಾದೆ. ಅವರು ಅಜ್ಞಾತವಾಗಿ ಇರಬಯಸುತ್ತಿದ್ದುದರಿಂದ ಸದ್ಯಕ್ಕೆ ಅವರನ್ನು 'ಸಿದ್ಧ' ಗುರುಗಳೆಂದೇ ಕರೆಯುತ್ತೇನೆ. ಒಂದು ಫೋಟೋ ತೆಗೆಸಿಕೊಳ್ಳಲಿಲ್ಲ. ಪ್ರಚಾರವನ್ನು ಬಯಸಲಿಲ್ಲ. ತಮ್ಮ ಕೆಲಸಮುಗಿದೊಡನೆ ಹೃಷಿಕೇಶಕ್ಕೋ, ಹರಿದ್ವಾರಕ್ಕೋ ಮರಳುತ್ತಿದ್ದರು. ಅಲ್ಲಿ ಧ್ಯಾನಕ್ಕೆ ಕುಳಿತರೆ,ಕಣ್ಣು ಬಿಟ್ಟಾಗ ಯಾರಾದರೂ ಹಣ್ಣು ಹಂಪಲು ಮುಂದೆ ಇಟ್ಟಿದ್ದರೆ ಅದನ್ನು ತಿನ್ನುತ್ತಿದ್ದರು, ಇಲ್ಲವಾದಲ್ಲಿ ಅಂದು ಉಪವಾಸ. ಇಂತಹ ವ್ಯಕ್ತಿಗಳು ನೋಡಲು ಸಿಗುವುದೂ ದುರ್ಲಭ. 
        ನನಗೆ ತಾಂತ್ರಿಕ ದೀಕ್ಷೆ ನೀಡಲು ಕೇಳಿಕೊಂಡೆ. 'ಏನು ಕೆಲಸ ಮಾಡಿಕೊಂಡಿದ್ದೀಯಪ್ಪಾ?' ಎಂದು ಕೇಳಿದರು. 
       ಆಗ ನಾನು ನನ್ನದೇ ಆದ 'ಫ್ಯಾನ್ಸಿ ಸ್ಟೋರ್' ಇಟ್ಟುಕೊಂಡಿದ್ದೆ. ಅಲ್ಲದೇ ದೂರದರ್ಶನದಲ್ಲಿ ಅನೌನ್ಸರ್ ಆಗಿ ಕೆಲಸ ಮಾಡುತ್ತಿದ್ದೆ. ಕೆಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. 
 'ನಾನು ದೀಕ್ಷೆ ಕೊಟ್ಟರೆ ಈ ಕೆಲಸಗಳಿಗೆ ಏನು ಮಾಡುತ್ತೀ?' ಕೇಳಿದರು ಅವರು.  
  'ಕೆಲಸ ಹಾಗೂ ಸಾಧನೆ ಎರಡನ್ನೂ ನಾನು ಒಟ್ಟಿಗೆ ತೂಗಿಸಬಲ್ಲೆ' ಬಹಳ ಆತ್ಮವಿಶ್ವಾಸದಿಂದ ಹೇಳಿದೆ.
 'ಇಲ್ಲ,ಇಲ್ಲ... ಎರಡನ್ನೂ ತೂಗಿಸಲು ಸಾಧ್ಯವಿಲ್ಲ. ತಾಂತ್ರಿಕ ಸಾಧನೆ, ಕಠಿಣವಾದ ಸಾಧನೆ. ದಿನದ ಬಹುತೇಕ ಸಮಯವನ್ನು ಅದಕ್ಕಾಗಿ ವಿನಿಯೋಗಿಸಬೇಕಾಗುತ್ತದೆ. ಆದ್ದರಿಂದ ನೀನು ಇದನ್ನೆಲ್ಲಾ ಬಿಟ್ಟು ಬರಲು ಸಾಧ್ಯವೇ?' ನನ್ನ ಕಣ್ಣುಗಳನ್ನೇ ನೋಡುತ್ತಾ ಕೇಳಿದರು ಸಿದ್ಧ ಗುರುಗಳು. 
        ಒಂದು ಕ್ಷಣ ಯೋಚಿಸಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ, ದೂರದರ್ಶನದಿಂದಾಗಿ ಸಾಕಷ್ಟು ಜನಪ್ರಿಯನಾಗಿದ್ದೆ. ಒಂದು ಕ್ಷಣ ಯೋಚಿಸಿದೆ, ಅಷ್ಟೇ! ಇಂತಹ ಗುರುಗಳು, ಬಿಟ್ಟರೆ ಮತ್ತೆ ಸಿಗಲಾರರು ಎಂದುಕೊಂಡು 'ಎಲ್ಲವನ್ನೂ ಬಿಟ್ಟು ಬರುತ್ತೇನೆ' ಎಂದು ಹೇಳಿಬಿಟ್ಟೆ. ಆಗಿನ್ನೂ ಮದುವೆಯಾಗಿರದ ಕಾರಣ ಈ ತೀರ್ಮಾನವನ್ನು ದೃಢವಾಗಿ ತೆಗೆದುಕೊಂಡೆ, ಏಕೆಂದರೆ ಮದುವೆಯಾದ ಮೇಲೆ ಇದು ಸಾಧ್ಯವಾಗದಿದ್ದರೆ ನನ್ನ ಜೀವನದ ಬಹು ದೊಡ್ಡ ಆಸೆ ಹಾಗೂ ಕುತೂಹಲಗಳಿಗೆ ತಣ್ಣೀರು ಎರಚಬೇಕಾಗಬಹುದು ಎಂದು ಅನ್ನಿಸಿತ್ತು. 
        ಮನೆಯಲ್ಲಿ ಈ ವಿಚಾರವನ್ನು ತಿಳಿಸಿದಾಗ ಅಪ್ಪ ಅಮ್ಮನಿಗೆ ಅಚ್ಚರಿ !  ಅಷ್ಟು ಸುಲಭಕ್ಕೆ ಅವರು ಒಪ್ಪಲು ಸಿದ್ಧರಿರಲಿಲ್ಲ. 'ಕೇವಲ ಎರಡು ವರ್ಷ, ಮತ್ತೆ ಖಂಡಿತ ಹಿಂತಿರುಗಿ ಬರುತ್ತೇನೆ...' ಎಂದೆಲ್ಲಾ ಹೇಳಿ ಅಂತೂ ಇಂತೂ ಒಪ್ಪಿಸಿದೆ. ದೂರದರ್ಶನದ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಅಂಗಡಿಯನ್ನು ಮಾರಿದೆ. ಅಂದಿನ ಕಾಲಕ್ಕೆ ಸುಮಾರು ಒಂದು ಲಕ್ಷ  ರೂಪಾಯಿಗಳು ನಿವ್ವಳವಾಗಿ ದೊರೆತವು. ತಿಂಗಳಿಗೆ ಇನ್ನೂರಕ್ಕೂ ಹೆಚ್ಚು ರೂಪಾಯಿಗಳು ಬಡ್ಡಿಯಾಗಿ ಸಿಗುವಂತೆ ಅದನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಟ್ಟೆ. 
        ಸಿದ್ಧ ಗುರುಗಳ ಬಳಿ ಹೋಗಿ ಎಲ್ಲವನ್ನೂ ವಿವರಿಸಿದೆ. ಅವರಿಗೂ ಅಚ್ಚರಿಯೇ ಆಯಿತು. ಬಹುಷಃ ನಾನು ಎಲ್ಲವನ್ನೂ ಬಿಟ್ಟು ಬರಬಹುದೆಂದು ಅವರು ಕೂಡಾ ಅಂದುಕೊಂಡಿರಲಿಕ್ಕಿಲ್ಲ. 'ಹೃಷಿಕೇಶಕ್ಕೆ ಬರುತ್ತೀಯಾ?' ಎಂದು ಅವರು ಕೇಳಿದಾಗ ನನ್ನ ಮನದಾಸೆಯನ್ನು ತೋಡಿಕೊಂಡೆ. 
'ನಮ್ಮದೇ ಆದ ಬಂಟವಾಳ ಮಹಾಮಾಯಿ ಸನ್ನಿಧಿಯಲ್ಲಿ ತಾವು ದೀಕ್ಷೆ ಕೊಟ್ಟರೆ ನನ್ನಂತಹ ಅದೃಷ್ಟವಂತ ಬೇರಿಲ್ಲ' ಎಂದು ಅವತ್ತುಕೊಂಡೆ. 
'ಎಲ್ಲಿಯಾದರೂ ಕೊಡಬಹುದು ಆದರೆ ನಾನು ಪೂರ್ಣ ಸಮಯ ನಿನ್ನೊಡನೆ ಇರಲು ಆಗುವುದಿಲ್ಲ.... ಚಿಂತೆಯಿಲ್ಲ, ನಾನು ದೀಕ್ಷೆ ಕೊಟ್ಟ ನಂತರ ಆಗಾಗ ಬಂದು ನಿನ್ನ ಸಾಧನೆಗೆ ಸಹಾಯ ಮಾಡುತ್ತಿರುತ್ತೇನೆ. ನಿನ್ನ ಆಸಕ್ತಿ ನನಗೆ ಇಷ್ಟವಾಯಿತು. ಮುಂದಿನ ಸೋಮವಾರದ ಹೊತ್ತಿಗೆ ನಾನು ನನ್ನ ಕೆಲವು ಜವಾಬ್ದಾರಿಗಳನ್ನು ಮುಗಿಸುತ್ತೇನೆ. ನಂತರ ನಿಮ್ಮ ಊರಿಗೆ ಹೋಗೋಣ' ಎಂದರು. 
        ಮಂಗಳೂರಿನಲ್ಲಿ ಅವರಿಗೆ ಗೊತ್ತಿರುವ ಒಂದು ಸ್ಥಳಕ್ಕೆ ಹೋಗಿ, ಅಲ್ಲಿ ಒಂದು ದೇವಿಯ ಮೂರ್ತಿಯನ್ನು ಆರಿಸಿಕೊಂಡು ಅದನ್ನು ನನ್ನ ಕೈಯ್ಯಲ್ಲಿತ್ತರು.' ತಾಂತ್ರಿಕ ಸಾಧನೆಯ ಸಮಯದಲ್ಲಿ ಇದು ನಿನ್ನ ಆರಾಧ್ಯದೈವವಾಗಲಿದೆ.ಇದು ನಿನಗೆ ನನ್ನ ಕಾಣಿಕೆ. ವಾರಾಂತ್ಯದೊಳಗೆ ನಿನಗೆ ದೀಕ್ಷೆ ನೀಡುತ್ತೇನೆ' ಎಂದು ಹೇಳಿ ಆಶೀರ್ವದಿಸಿದರು. ಮುಂದೇನಾಯಿತು? ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ. 
        ಅದಕ್ಕೂ ಮುನ್ನ ನಾನು ನನ್ನ 'ದೇವರು ಧರ್ಮ,ಏನಿದರ ಮರ್ಮ' ಪುಸ್ತಕದಲ್ಲಿ ಬರೆದ ಕೆಲವು ಸಾಲುಗಳನ್ನು ಇಲ್ಲಿಯೂ ಕಾಣಿಸಲು ಇಚ್ಚಿಸುತ್ತೇನೆ. ನಾನು ಸಾಧನೆ ಮಾಡಿದ್ದೇನೆ, ಆದರೆ 'ಸಾಧಕನ ಪಟ್ಟ' ನನಗೆ ಒಗ್ಗುವುದಿಲ್ಲ.ದೇವರ ಬಗ್ಗೆ ಅಧ್ಯಯನ ಮಾಡಿದ್ದೇನೆ, ಆದರೆ 'ಸಾಧು-ಸಂತ'ನಲ್ಲ. ಮನಃಶಾಸ್ತ್ರದ ಬಗ್ಗೆ ಪ್ರಯೋಗಗಳನ್ನು ಮಾಡಿದ್ದೇನೆ, ಆದರೆ ಮನೋವಿಜ್ಞಾನದ ಡಿಗ್ರಿ ಸರ್ಟಿಫಿಕೇಟು ಪಡೆದವನಲ್ಲ. 'ಅರಿಷಡ್ವರ್ಗ'ಗಳೆಂದು ಕರೆಯಲ್ಪಡುವ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು 'ಅರಿ'ಗಳೆಂದು ಕರೆಯದೇ  'ಮಿತ್ರ'ರೆಂದು ಕರೆದು ಅವುಗಳನ್ನು ದೂರ ಮಾಡದೇ ಹಿತವಾಗಿ, ಮಿತವಾಗಿ ಅಪ್ಪಿಕೊಂಡು ಎಲ್ಲರಂತೇ ಬದುಕಬೇಕೆಂದು ಬಯಸಿ ಹಾಗೆಯೇ ಬದುಕುತ್ತಿರುವ ಶ್ರೀಸಾಮಾನ್ಯರಲ್ಲೊಬ್ಬ ಸಾಮಾನ್ಯ. 

No comments:

Post a Comment