Thursday 17 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 14

        ಅಷ್ಟು ಹತ್ತಿರದಿಂದ ನಾಗರಹಾವನ್ನು ನಾನು ನೋಡಿದ್ದು ಅದೇ ಮೊದಲು. ಮಿರ ಮಿರ ಮಿರುಗುವ ನಾಗರ ಹಾವು! ಅಲ್ಲಾಡದೇ ಹೆಡೆ ಎತ್ತಿ ನಿಂತಿದೆ. ನಾನಂತೂ ಉಸಿರು ಬಿಗಿ ಹಿಡಿದು ನೋಡುತ್ತಿದ್ದೆ!!
        ಒಂದು ಕ್ಷಣದಲ್ಲಿ ನೂರಾರು ಆಲೋಚನೆಗಳು ತಲೆಯಲ್ಲಿ ಸುಳಿದವು. 'ಹತ್ತು ಸಾವಿರ ಬಾರಿ ಜಪ ಮಾಡುವವರೆಗೂ ಕುಳಿತ ಜಾಗದಿಂದ ಕದಲ ಬಾರದೆಂದು ಗುರುಗಳು ಹೇಳಿದ್ದಾರೆ. ಕೇವಲ ಅರ್ಧ ಅಡಿ ದೂರದಲ್ಲಿ ಹಾವು ಹೆಡೆ ಎತ್ತಿ ಕುಳಿತಿದೆ. ಕಣ್ಣು ಎವೆಯಿಕ್ಕುವಷ್ಟರಲ್ಲಿ ಬಡಿದರೆ ಏನು ಮಾಡುವುದು? ಜಪ,ತಪ,ಸಾಧನೆ ಇವೆಲ್ಲಾ ಬೇಕಾ? ಎದ್ದು ಓಡಿ  ಹೋಗಲೇ? ಅಥವಾ ಏನಾದರಾಗಲಿ ಎಂದು ಜಪವನ್ನು ಮುಂದುವರೆಸಲೇ? ಏನು ಸಾಧನೆ ಮಾಡಬೇಕಾದರೂ ಪ್ರಾಣವಿದ್ದರೆ ತಾನೇ? ಈ ಸಾಧನೆಗಳೆಲ್ಲಾ ಬಹಳ ಕಷ್ಟಕರವಾಗಿದೆ. ಕೊನೆಗೂ ಏನಾದರೂ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಸುಮ್ಮನೆ ಸಿಕ್ಕಿಹಾಕಿಕೊಳ್ಳುವ ಬದಲು ಮೆಲ್ಲಗೆ ಹಿಂದೆ ಸರಿಯಲೇ?' ಹಲವಾರು ದ್ವಂದ್ವಗಳು, ಸಂದೇಹಗಳು. ಏನು ಮಾಡುವುದೆಂಬ ತೀರ್ಮಾನಕ್ಕೆ ಬಾರದಾದೆ. ನಂತರ ಒಂದು ಕ್ಷಣ ಯೋಚಿಸಿದೆ. 'ನಾನು ಕಣ್ಣು ಬಿಟ್ಟು ನೋಡಿದ್ದುದರಿಂದ ಹಾವಿರುವುದು ಗೊತ್ತಾಯಿತು. ಇಲ್ಲದಿದ್ದರೆ ಹಾಗೇ ಜಪವನ್ನು ಮುಂದುವರೆಸುತ್ತಿದ್ದೆ. ಏನಾದರಾಗಲಿ, ಸತ್ತರೂ ಯಾವುದೋ ಸಾಧನೆ ಮಾಡಿ ಸತ್ತ ಎಂದಾಗುತ್ತದೆ. ಅಷ್ಟೇ ತಾನೇ' ಎಂದು ಮನದಲ್ಲಿ ಧೈರ್ಯ ತಂದುಕೊಂಡು ಜಪವನ್ನು ಮುಂದುವರೆಸಿದೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಹರಿವಾಣದ ತಟ್ಟೆಯ ಸದ್ದಾಯಿತು. ಈ ಬಾರಿ ನಾನು ಕಣ್ಣು ಬಿಡಲಿಲ್ಲ. ಕೆಲ ಕಾಲ ಕಳೆದ ಮೇಲೆ ಹೊರಗೆ ರಸ್ತೆಯಲ್ಲಿ ಗದ್ದಲ. ಕೆಲವರು ಕೊಂಕಣಿಯಲ್ಲಿ ಮಾತನಾಡುತ್ತಿದ್ದರು. 'ಅಯ್ಯೋ ಹಾವು...  ಇರು ಇರು ಹೊಡೆಯಬೇಡ .. ಆ ಕೋಲಿನಿಂದ ತಳ್ಳು.. ಸೈಕಲ್ ಮೇಲೆ ಸುತ್ತಿಕೊಂಡು ಹೋಗುತ್ತಿದೆ..ದೂರ ನಿಲ್ಲು... ಬಿಡು..ಬಿಡು .. ಆ ತೋಡಿನ ಹತ್ತಿರ ಹೋಗುತ್ತಿದೆ.. ' ಎಂದೆಲ್ಲಾ ಕೂಗಾಡುತ್ತಿದ್ದರು.             ಸ್ವಲ್ಪ ಹೊತ್ತಿನ ಮೇಲೆ ಎಲ್ಲಾ ಶಾಂತವಾಯಿತು, ಬಹುಶಃ ಆ ಹಾವು ಅಲ್ಲಿಂದ ಹೋಗಿರಬೇಕು. ಎಷ್ಟು ಏಕಾಗ್ರತೆ ಸಾಧಿಸಿದ್ದೇನೆ  ಕೊಂಡಿದ್ದೆಲ್ಲಾ ಹುಸಿಯಾಗಿತ್ತು. ಅಷ್ಟೂ ಹೊತ್ತು ಮನಸ್ಸು ಹಾವಿನ ಸುತ್ತಲೇ ಸುತ್ತುತ್ತಿತ್ತು 
ಜಪದ ಸಂಖ್ಯೆ ಮುಗಿದ ಮೇಲೆ ಮತ್ತೆ ಕಣ್ಣು ಬಿಟ್ಟೆ. ಆ ಹಾವು ಎಲ್ಲಿಂದ ಬಂದಿರಬಹುದು ಎಂದು ಸುತ್ತೆಲ್ಲಾ ನೋಡಿದೆ. ನಂತರ ಮೇಲೆ ನೋಡಿದೆ. ಮೇಲೆ ತೇಗದ ಮರದಲ್ಲಿ ಮಾಡಿದ ಛಾವಣಿ ಇತ್ತು. ಅದಕ್ಕೆ ಅಡ್ಡಡ್ಡವಾಗಿ ಮರದ ತೊಲೆಗಳೂ ಇದ್ದವು. ಬಹುಶಃ ಅದರ ಸಂದಿಯಿಂದ ಬಂದಿರಬಹುದು ಎಂದು ಊಹಿಸಿದೆ. 
        ಮಾರನೇ ದಿನ ನನ್ನ ರಘುರಾಮ ಅಜ್ಜನ ಅಂಗಡಿಗೆ ಹೋಗಿ ಹೀಗೆ ಕೊಠಡಿಯಲ್ಲಿ ಹಾವು ಬಂದಿತ್ತು ಎಂದು ದೊಡ್ಡದಾಗಿ ಹೇಳಿದೆ. ಅದಕ್ಕೆ ಅವರು 'ಅದೆಲ್ಲಾ ಇಲ್ಲಿ ಸಾಮಾನ್ಯ, ಒಂದು ನಿಮಿಷ' ಎಂದು ಹೇಳಿ ಅವರ ಅಂಗಡಿಯ ಮಾಡಿನ ಬಳಿ ಕಣ್ಣಾಡಿಸುತ್ತಾ 'ಅಲ್ಲಿ ನೋಡು, ಅಲ್ಲೊಂದು ಹಾವು ಹೋಗುತ್ತಾ ಇದೆ. ಅವು ಇಲಿಯನ್ನು ತಿನ್ನಲು ಬರುತ್ತವೆ, ಮನುಷ್ಯರಿಗೆ ಏನೂ ಮಾಡುವುದಿಲ್ಲ. ಅದಕ್ಕೆ ವಿಷವಿಲ್ಲ, ಅದನ್ನು 'ದೀವೊಡು' (ಕೊಂಕಣಿ ಭಾಷೆಯಲ್ಲಿ) ಅಂತ ಕರೀತಾರೆ' ಎಂದು ಆರಾಮವಾಗಿ ತಮ್ಮ ವ್ಯಾಪಾರವನ್ನು ಮುಂದುವರೆಸುತ್ತಾ ಹೇಳಿದರು. 'ಆದರೆ ನನ್ನ ಕೊಠಡಿಗೆ ಬಂದದ್ದು ನಾಗರ ಹಾವು' ಎಂದು ಮತ್ತೆ ನೆನಪಿಸಿದೆ. 'ಹೌದಾ' ಎಂದು ನಗುತ್ತಾ ಇನ್ನೊಬ್ಬ ಗಿರಾಕಿಗೆ ಪೊಟ್ಟಣ ಕಟ್ಟಿ ಕೊಟ್ಟು 'ಒಟ್ಟು ಹದಿನೆಂಟು ರೂಪಾಯಿ ಆಯಿತು' ಅಂದರು ಅವನಿಗೆ! 'ನಾನು ಬರುತ್ತೇನೆ' ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ. 
        ನಾಗರ ಹಾವಿಗೂ ನಮ್ಮ ದೇವಸ್ಥಾನಕ್ಕೂ ಇರುವ ಸಂಬಂಧದ ಕುರಿತಾಗಿ ಕೆಲವು ವಿಷಯಗಳನ್ನು ಹೇಳ ಬಯಸುತ್ತೇನೆ. ನಮ್ಮ ದೇಗುಲಕ್ಕೆ ಸಂಬಂಧ ಪಟ್ಟ ಆಸ್ತಿಯೊಂದಿದೆ. ಅದನ್ನು 'ಮಂಡಾಡಿ' ಎಂದು ಕರೆಯುತ್ತಾರೆ. ಅಲ್ಲಿ 'ನಾಗಬನ' ಎಂಬ ಜಾಗವಿದೆ. ನಾಗರಪಂಚಮಿಯಂದು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಾನು ಚಿಕ್ಕಂದಿನಿಂದಲೂ ಬಹು ದೂರ ನಿಂತೇ ಅದನ್ನೆಲ್ಲಾ ಗಮನಿಸುತ್ತಿದ್ದೆ. ಏಕೆಂದರೆ ಅಲ್ಲಿ ಜೀವಂತ ಹಾವುಗಳು ಓಡಾಡುತ್ತಿರುತ್ತವೆ ಎಂದು ನನಗೆ ಗೊತ್ತಿತ್ತು! 
        ನಮ್ಮ 'ಅಪ್ಪಿಮಾಯಿ' ನಾನು ಚಿಕ್ಕವನಿದ್ದಾಗ ಹಿಂದೆ ನಡೆದ ಒಂದು ಘಟನೆಯನ್ನು ಹೇಳಿದ್ದರು. ಅದೇನೆಂದರೆ ನವರಾತ್ರಿಯ ಸಮಯದಲ್ಲಿ ಒಮ್ಮೆ ಖೀರಿ (ಪಾಯಸ) ಮಾಡಿ ಒಲೆಯಿಂದ ಇಳಿಸುವಾಗ ಒಂದು ನಾಗರ ಹಾವಿನ ಮೇಲೆ ಬಿಸಿ 'ಕಟಾರ'ವನ್ನು ಗೊತ್ತಿಲ್ಲದೇ ಇಟ್ಟುಬಿಟ್ಟಿದ್ದರಂತೆ. ಆಗ ಎಲ್ಲರೂ ಗಾಭರಿಯಾಗಿ 'ದರ್ಶನ'ದ ಪಾತ್ರಿಯನ್ನು ಕೇಳಿದಾಗ 'ಚಿಂತಿಸುವ ಅಗತ್ಯವಿಲ್ಲ, ಆದರೆ ಇನ್ನು ಮುಂದೆ ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ನಾಗರಾಜನಿಗೆ ಪೂಜೆ ಸಲ್ಲಿಸಿ, ಐದು ಜನ ಮುತ್ತೈದೆಯರಿಗೆ ಸುವಾಸಿನಿಯರಂತೆ ಸತ್ಕರಿಸಿ ಊಟ ಉಪಚಾರಗಳನ್ನು ನೀಡಿ ಸತ್ಕರಿಸಬೇಕು' ಎಂದು ಹೇಳಿದ್ದರಂತೆ. ಇಂದಿಗೂ ಆ ಪದ್ಧತಿ ಹಾಗೆಯೇ ನಡೆಯುತ್ತಿದೆ. 
        ನಾನು ಚಿಕ್ಕವನಿರುವಾಗ ಕಂಡ ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ದೇವಸ್ಥಾನದ ಸುತ್ತಿನಲ್ಲಿ ಯಾವುದಾದರೂ ಹಾವು ಕಂಡಾಗ, ನಮ್ಮ ಅಪ್ಪಿ ಮಾಯಿ 'ನೀನು ಬಂದಿದೀಯಾ ಎಂದರೆ ಏನೋ ಅಪವಿತ್ರವಾಗಿದೆ, ಗೊತ್ತಿಲ್ಲದೇ ಏನಾದರೂ ತಪ್ಪಾಗಿರಬಹುದು .. ಒಟ್ಟಾರೆ ಕ್ಷಮಿಸಿಬಿಡು' ಎಂದು ಹೇಳಿ ಹರಿವಾಣವೊಂದರಲ್ಲಿ ಅರಶಿನದ ನೀರನ್ನು ತಂದು ಆ ಹಾವಿನ ಮುಂದೆ ಇಟ್ಟು ಕೈ ಮುಗಿಯುತ್ತಿದ್ದರು. ಆ ಹಾವು ಅದರಲ್ಲಿ ಹೊರಳಾಡಿ ಹೋಗುತ್ತಿತ್ತು. ಅಲ್ಲಿಗೆ ಎಲ್ಲವೂ ಪವಿತ್ರವಾಯಿತು ಎಂದು ಖುಷಿ ಪಡುತ್ತಿದ್ದರು ಅಪ್ಪಿ ಮಾಯಿ. ನಾನು ದೂರದಲ್ಲಿ ಕಂಬದ ಮರೆಯಲ್ಲಿ ನಿಂತು ಇದನ್ನೆಲ್ಲಾ ಭಯದಿಂದ ನೋಡುತ್ತಿದ್ದೆ. 
        ಇದೆಲ್ಲದರ ನಡುವೆ ಗುರುಗಳ ಬರುವಿಕೆಗೆ ಕಾಯುತ್ತಿದ್ದೆ, ಏಕೆಂದರೆ ಈ ಬಾರಿ ಬಂದಾಗ ಹೆಚ್ಚು ದಿನಗಳನ್ನು ನನ್ನೊಂದಿಗೆ ಕಳೆಯುವುದಾಗಿ ಗುರುಗಳು ಹೇಳಿದ್ದರು. ಕೊನೆಗೂ ಆ ದಿನ ಬಂದಿತು. 


No comments:

Post a Comment