Wednesday 2 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 5

        ಸಮ್ಮೋಹಿನಿ ವಿದ್ಯೆ ಕಲಿತ ಮೇಲೆ ಮನಸ್ಸಿನ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದೆ ಹಾಗೂ ಮನಸ್ಸಿನ ಶಕ್ತಿಯ ಆಗಾಧತೆಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದೆ. ಹಲವಾರು ಮನೋವಿಜ್ಞಾನಿಗಳೊಡನೆ ಸತತ ಸಂಪರ್ಕ ಇಟ್ಟುಕೊಂಡಿದ್ದೆ. ಅದು ೧೯೮೦ರ ಸಮಯ. ಆ ವಯಸ್ಸಿನಲ್ಲಿ ನಾನು ಮಾಡುತ್ತಿದ್ದ ಪ್ರಯೋಗಗಳನ್ನು ಕಂಡು ಅವರು ನನ್ನ ಬೆನ್ನು ತಟ್ಟುತ್ತಿದ್ದರು.
    ಶ್ರೀ ಲಲಿತಾ ವಿದ್ಯಾಮಂದಿರ

        ಕ್ರಮೇಣ ಆಧ್ಯಾತ್ಮಿಕತೆಯತ್ತ ಮನಸ್ಸು ವಾಲತೊಡಗಿತು. ದೈವ ಸಾಕ್ಷಾತ್ಕಾರದ ದೃಷ್ಟಿಯಿಂದಲ್ಲ, ಮನಸ್ಸಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ. ಮೊದಲು ನನ್ನನ್ನು ಸೆಳೆದದ್ದು 'ಯೋಗಾಭ್ಯಾಸ ಹಾಗೂ ಧ್ಯಾನ'. ತ್ಯಾಗರಾಜನಗರದ 'ಶ್ರೀ ಲಲಿತಾ ವಿದ್ಯಾಮಂದಿರ 'ವನ್ನು ಯೋಗ ಕಲಿಯುವ ದೃಷ್ಟಿಯಿಂದ ಸೇರಿಕೊಂಡಿದ್ದೆ. 

         ೧೯೮೩ರ ಹೊತ್ತಿಗೆ ಮನಸ್ಸಿಗೆ ಸಂಬಂಧ ಪಟ್ಟಂತೆ ಲೇಖನಗಳನ್ನು ಬರೆಯತೊಡಗಿದ್ದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳು ಪ್ರಕಟವಾಗಿದ್ದವು.
        ಯೋಗಶಾಲೆಗೆ ಸೇರುವಾಗ ಗುರುಗಳಾದ ಚಿ. ವಿಶ್ವೇಶ್ವರಯ್ಯ ಅವರ ಬಳಿ ನನ್ನ ಮನದ ಆಸೆಯನ್ನು ವ್ಯಕ್ತ ಪಡಿಸಿದ್ದೆ. ಮನಸ್ಸಿನ ಬಗ್ಗೆ ಅಧ್ಯಯನ ಮಾಡುವ ಹಾಗೂ ಮನಸ್ಸಿನ ಶಕ್ತಿಯನ್ನು ಅರಿಯಲು ನೆರವಾಗುವ ಎಲ್ಲಾ ವಿದ್ಯೆಯನ್ನು ಕಲಿಯಲು ನನಗಿರುವ ಹಂಬಲವನ್ನು ಹೇಳಿಕೊಂಡೆ.

                   ಶ್ರೀ. ಚಿ. ವಿಶ್ವೇಶ್ವರಯ್ಯನವರು

         ಯೋಗ ಹಾಗೂ ಧ್ಯಾನದ ಬಗ್ಗೆ ನನಗೆ ತರಬೇತಿ ಆರಂಭವಾಯಿತು. ಧ್ಯಾನದ ಬಗ್ಗೆ ನನಗೆ ಅತೀವ ಆಸಕ್ತಿಯಿತ್ತು. ಸಗುಣ, ನಿರ್ಗುಣ ಧ್ಯಾನಗಳನ್ನು ಮನಸಾರೆ ಅನುಭವಿದೆ. ನಂತರ ತ್ರಾಟಕ ವಿದ್ಯೆ, ಕಣ್ಣಿನ ವ್ಯಾಯಾಮ ಹಾಗೂ ಮನಸ್ಸಿನ ಏಕಾಗ್ರತೆಯ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಸಹಕಾರಿಯಾಯಿತು. 
        ಈ ಬಗ್ಗೆ  'ಅಧ್ಯಾತ್ಮಿಕ ಸಾಧನೆಯ ಅನುಭವಗಳು - 1' ರಿಂದ 'ಅಧ್ಯಾತ್ಮಿಕ ಸಾಧನೆಯ ಅನುಭವಗಳು 9 - ಸಾಕಾರ ಧ್ಯಾನ' ದವರೆಗೆ 'ಬ್ಲಾಗ್'ನಲ್ಲಿ ಸವಿವರವಾಗಿ ಬರೆದಿದ್ದೇನೆ.ಆಸಕ್ತರು ಓದಬಹುದು. 
        ನನ್ನ ಗುರುಗಳಿಗೆ ಬಹಳಷ್ಟು ಸಂತರ, ಸಾಧುಗಳ ಪರಿಚಯವಿದ್ದುದರಿಂದ ಹಲವಾರು ಸಾಧಕರು ಅವರನ್ನು ಭೇಟಿಯಾಗಲು ಬರುತ್ತಿದ್ದರು. ಅವರಲ್ಲಿ ಯಾರಾದರೂ ವಿಶೇಷ ಸಾಧಕರಿದ್ದರೆ ಗುರುಗಳು ನನಗೆ ಅವರ ಬಗ್ಗೆ ಹೇಳುತ್ತಿದ್ದರು ಹಾಗೂ ಕಲಿಯುವ ಆಸಕ್ತಿ ಇದ್ದರೆ ಅವರ ಬಳಿ ಕಲಿಯಬಹುದು ಎಂದೂ ಹೇಳುತ್ತಿದ್ದರು. ಒಮ್ಮೆ 'ಈವತ್ತು ಬಂದ ವ್ಯಕ್ತಿ ಸಾಮಾನ್ಯದವರಲ್ಲ, ಕಾಯಕಲ್ಪ ಚಿಕಿತ್ಸೆಯಲ್ಲಿ ಇವರನ್ನು ಮೀರಿದವರಲ್ಲ.ಅವರಿಗೆ ಸುಮಾರು ಎಪ್ಪತ್ತು ವರ್ಷಗಳಾದರೂ ಮುವ್ವತ್ತರ ಗಂಡಾಳಿನಂತೇ ಕಾಣುತ್ತಾರೆ' ಎಂದು ಹೇಳಿದರಲ್ಲದೇ 'ಕಾಯಕಲ್ಪ ಚಿಕಿತ್ಸೆಯನ್ನು ಕಲಿಯಲು ಕನಿಷ್ಠ ಎರಡು ವರ್ಷ ಅವರ ಬಳಿ ಇರಬೇಕಾಗುತ್ತದೆ. ಯೌವನ ಬಾಡದಿರಲು ಅಂಗಸಾಧನೆ, ಆಹಾರ, ಮನಸ್ಸಿನ ತರಬೇತಿ, ಮುಖ ಹಾಗೂ ದೇಹಕ್ಕೆ ಅಂಗಮರ್ದನ ಮಾಡುವ ವಿಶೇಷ ಪ್ರಕ್ರಿಯೆಯನ್ನು ಕಲಿಸುತ್ತಾರೆ. ಕಲಿಯುವ  ಆಸಕ್ತಿ ಇದ್ದರೆ ಅವರ ಬಳಿ ಮಾತನಾಡುತ್ತೇನೆ ' ಎಂದರು. 
        ಆ ವ್ಯಕ್ತಿ ನಮ್ಮ ಗುರುಗಳು ಹೇಳಿದಂತೇ ಕಟ್ಟುಮಸ್ತಾದ ಯುವಕನಂತೆಯೇ ಕಾಣುತ್ತಿದ್ದರು. ಎಪ್ಪತ್ತು ವರ್ಷವೆಂದು ಖಂಡಿತಾ ಹೇಳಲಾಗುತ್ತಿರಲಿಲ್ಲ. 'ಸ್ವಲ್ಪ ಯೋಚನೆ ಮಾಡಿ ಹೇಳುತ್ತೇನೆ' ಎಂದು ಹೇಳಿದೆ. ನನಗೆ ಮನಸ್ಸಿನ ಬಗ್ಗೆ ಎಲ್ಲವನ್ನೂ ತಿಳಿದು ಕೊಳ್ಳುವ ಆಸೆ ಇದ್ದುದರಿಂದ ಹಾಗೂ ಈ ವಿದ್ಯೆಯಲ್ಲಿ ಮನಸ್ಸಿಗಿಂತ ದೇಹದ ಬಗ್ಗೆ ಹೆಚ್ಚಿನ ಆದ್ಯತೆ ಇದೆ ಅನ್ನಿಸಿ, ಏಕೋ ಈ ವಿದ್ಯೆ ಕಲಿಯಲು ಮನಸ್ಸಾಗಲಿಲ್ಲ. ಬಹುಶಃ ಈಗ ಕೇಳಿದರೆ ಖಂಡಿತಾ ಹೌದು ಎನ್ನುತ್ತಿದ್ದೆನೋ ಏನೋ !
     ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಸೂರ್ಯನಮಸ್ಕಾರ

        ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ನಮ್ಮ ಯೋಗಶಾಲೆಗೆ ಬಂದಾಗ, ಇಳಿವಯಸ್ಸಿನಲ್ಲೂ ಅವರ ದೇಹಸೌಷ್ಠವ ಹಾಗೂ ಚುರುಕುತನವನ್ನು ಕಂಡು ಬೆರಗಾದೆ. ಇವರೂ ಕಾಯಕಲ್ಪ ಚಿಕಿತ್ಸೆ ಮಾಡಿಕೊಂಡಿರಬಹುದೇನೋ ಎಂದುಕೊಂಡು ಗುರುಗಳನ್ನು ಕೇಳಿದೆ. ಅದಕ್ಕೆ ಅವರು ನಗುತ್ತಾ 'ಅವರಿಗೆ ಯಾವ ಕಾಯಕಲ್ಪ ಚಿಕಿತ್ಸೆಯ ಅಗತ್ಯವೂ ಇಲ್ಲ. ಷಟ್ಕರ್ಮಗಳನ್ನು ಕಲಿಯುವ ಆಸಕ್ತಿ ಇದ್ದರೆ ಅವರಿಗಿಂತ ಗುರು ಬೇರೆ ಯಾರೂ ಇಲ್ಲ' ಎಂದು ಹೇಳಿದರು.    
        ರಾಘವೇಂದ್ರಸ್ವಾಮಿಗಳು ಷಟ್ಕರ್ಮದ ಬಗ್ಗೆ ವಿವರವಾದ ವಿವರಣೆ ನೀಡಿ ಕಲಿಯುವ ಆಸಕ್ತಿ ಇದ್ದರೆ ಮಲ್ಲಾಡಿಹಳ್ಳಿಗೆ ಬರುವಂತೆ ತಿಳಿಸಿದರು. ಆದರೆ ನಾನು ಮಲ್ಲಾಡಿಹಳ್ಳಿಗೆ ಹೋಗಿ ಕಲಿಯುವ ಪರಿಸ್ಥಿತಿ ಇಲ್ಲದಿದ್ದುದರಿಂದ ಅವರಿಂದ ಆಶೀರ್ವಾದ ಪಡೆದು ಅವರಿಂದಲೇ ತರಬೇತಿ ಪಡೆದ ಗುರುರಾಜ ತಂತ್ರಿ ಅವರಿಂದ ನೌಲಿ, ಧೌತಿ ಮುಂತಾದ ಷಟ್ಕರ್ಮಗಳ ತರಬೇತಿ ಪಡೆದೆ. 
        ಒಂದು ದಿನ ಗುರುಗಳು 'ತಾಂತ್ರಿಕ ವಿದ್ಯೆ ಕಲಿಯುವ ಆಸಕ್ತಿಯಿದೆಯೇ?' ಎಂದು ಕೇಳಿದಾಗ ನನ್ನ ಕಿವಿಗಳು ನೆಟ್ಟಗಾದವು. ಏಕೆಂದರೆ ತಂತ್ರ ವಿದ್ಯೆಯ ಬಗ್ಗೆ ಬಹಳಷ್ಟು ಓದಿ, ಕೇಳಿ ತಿಳಿದಿದ್ದೆ. ಮನಸ್ಸಿನ ಸುಪ್ತಶಕ್ತಿಯನ್ನು ತಂತ್ರ ವಿದ್ಯೆಯ ಮೂಲಕ ಪೂರ್ಣಪ್ರಮಾಣದಲ್ಲಿ ಉಪಯೋಗಿಸಲು ಸಾಧ್ಯ ಎಂದು ತಾಂತ್ರಿಕರೊಬ್ಬರು ಹಿಂದೊಮ್ಮೆ ಹೇಳಿದ್ದರು. ಆದ್ದರಿಂದ ತಕ್ಷಣ 'ಹೌದು, ಆಸಕ್ತಿಯಿದೆ... ತುಂಬಾ ಆಸಕ್ತಿಯಿದೆ' ಎಂದು ಉತ್ಸುಕನಾಗಿ ಹೇಳಿದೆ. ಮಾರನೆಯ ದಿನ ಆ ನನ್ನ 'ತಂತ್ರ' ಗುರುಗಳನ್ನು ಭೇಟಿಯಾದೆ. ನನ್ನ ಜೀವನದ ಅತಿ ಮುಖ್ಯ ಆಧ್ಯಾಯ ಅಲ್ಲಿಂದ ಪ್ರಾರಂಭವಾಯಿತು. ಮುಂದಿನ ವಿಷಯ ಮುಂದಿನ ಕಂತಿನಲ್ಲಿ....     

No comments:

Post a Comment