Wednesday, 27 November 2019

ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.- ಜೀವನದ ಕಟುಸತ್ಯಗಳು - 3

 ನಮ್ಮೊಡನೇ ಸಾಯುವ ನಮ್ಮ ಜೀವನದ ಗುಟ್ಟುಗಳು.
        ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಕೆಲವು ಅನುಭವಗಳನ್ನು ಯಾರ ಬಳಿಯೂ ಹೇಳದೇ ಗುಟ್ಟಾಗಿಯೇ ಇಟ್ಟಿರುತ್ತಾರೆ. ಕಡೆ ಪಕ್ಷ ಒಂದಾದರೂ ಗುಟ್ಟನ್ನು ತನ್ನಲ್ಲಿಯೇ ಬಚ್ಚಿಟ್ಟುಕೊಂಡಿರುತ್ತಾರೆ. ಆ ಗುಟ್ಟು ಅವರ ಸಾವಿನೊಂದಿಗೆ ಸತ್ತು ಹೋಗುತ್ತದೆ ! 

ಯಾಕೆ ಈ ಗುಟ್ಟು ? 
        ಆ ಗುಟ್ಟಿನ ಹಿಂದೆ ಒಂದು ಅವಮಾನ, ಅನೈತಿಕತೆ, ಕೀಳರಿಮೆ, ತಾವು ಮಾಡಿದ ಮೋಸ ಅಥವಾ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡ ಯಾವುದಾದರೂ ಒಂದು ತಪ್ಪಿತಸ್ಥ ಭಾವನೆ ಇರಬಹುದು. ಈ ರೀತಿ ಯಾರಿಗೂ ಹೇಳದೇ ಗುಟ್ಟಾಗಿ ಇಟ್ಟುಕೊಳ್ಳುವುದು ಸರಿಯೇ? ನನ್ನ ಪ್ರಕಾರ ಸರಿ. ಏಕೆಂದರೆ ಇಂತಹ ಗುಟ್ಟನ್ನು ರಟ್ಟು ಮಾಡಿಕೊಳ್ಳುವುದರಿಂದ, ಲಾಭಕ್ಕಿಂತ ನಷ್ಟವೇ ಜಾಸ್ತಿ. 
        ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು? ಯಾವುದು ಪಾಪ, ಯಾವುದು ಪುಣ್ಯ?  ಈ ತುಲನಾತ್ಮಕ ವಿಷಯಕ್ಕೆ ಸರಿಯಾದ ತಕ್ಕಡಿ ಇಲ್ಲ. ಅದು ಸಮಾಜ, ನಾಗರಿಕತೆಗಾಗಿ ಸೃಷ್ಟಿಸಿಕೊಂಡ ನಿಯಮಗಳಾಗಿರುತ್ತವೆ. ಅವು ದೇಶ, ಕಾಲ, ನಿಮಿತ್ತಗಳಿಗೆ ಅನುಗುಣವಾಗಿರುತ್ತವೆ. ಒಂದು ದೇಶದಲ್ಲಿ 'ಸರಿ' ಎನ್ನಿಸಿಕೊಳ್ಳುವುದು, ಇನ್ನೊಂದು ದೇಶದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಒಂದು ಕಾಲದಲ್ಲಿ 'ಸರಿ' ಎನ್ನಿಸಿಕೊಂಡಿರುವುದು ಮತ್ತೊಂದು ಕಾಲದಲ್ಲಿ 'ತಪ್ಪು' ಎನ್ನಿಸಿಕೊಳ್ಳಬಹುದು. ಅಂತೆಯೇ ಈ ಕಾರಣಕ್ಕೆ 'ತಪ್ಪು' ಎಂದುಕೊಂಡಿರುವುದು ಆ ಕಾರಣಕ್ಕೆ 'ಸರಿ' ಎಂದೂ ಆಗಬಹುದು. ಆದರೆ ವಿಜ್ಞಾನಕ್ಕೆ ಇದಾವುದೂ ಗೊತ್ತಿಲ್ಲ. ಅದು ತನ್ನ ನಿಯಮಗಳನ್ನು ಮಾತ್ರ ಹೇಳುತ್ತದೆ. ವಿಷಯ ಹೀಗಿರುವಾಗ ಇದು 'ಸರಿ' ಅದು 'ತಪ್ಪು' ಎಂದು ಹೇಳಲು ಸಾಧ್ಯವಿಲ್ಲ. 

ಆದರೆ... 
ನಾವು ಈ ಕಾಲದಲ್ಲಿ, ಈ ಸಮಾಜದಲ್ಲಿ ಬದುಕುತ್ತಿರುವುದರಿಂದ, ಈ ಸಮಾಜದ ನಿಯಮಗಳಿಗೆ ನಾವು ತಲೆ ಬಾಗಬೇಕಾಗುತ್ತದೆ. ಅದು ಸಮಾಜ ಬಯಸುವ ನೈತಿಕತೆಯ ವಿಷಯವಾಗಲೀ, ಸಮಾಜ ಸೃಷ್ಟಿಸಿದ ಕಾನೂನಿನ ಚೌಕಟ್ಟಿನ ವಿಷಯವಾಗಲೀ ಇದಕ್ಕೆ ನಾವು ವಿರುದ್ಧವಾಗಿ ಹೋದಾಗ ಅದಕ್ಕೆ ತಕ್ಕ ಬೆಲೆ ತೆರಬೇಕಾಗಬಹುದು. ಆದ್ದರಿಂದ, ಆದಷ್ಟು ಈ ಚೌಕಟ್ಟಿನೊಳಗೆ ಜೀವನ ಸಾಗಿಸುವುದು ಅತ್ಯಂತ ಸುರಕ್ಷಿತ ಹಾದಿ. ಆದರೆ 'ಕದ್ದು ತಿನ್ನುವುದರಲ್ಲಿ ಸಿಹಿ ಜಾಸ್ತಿ' ಎಂಬ ಗಾದೆಯಂತೇ ಅದರಲ್ಲಿ ಸಿಗುವ ರೋಮಾಂಚನ ಹಾಗೂ ಪುಳಕ, ಅಂತಹ ಸಾಮಾಜಿಕ/ಅನೈತಿಕ ಅಪರಾಧಗಳನ್ನು ಮಾಡುವಂತೆ ಮನಸ್ಸು ಕುಮ್ಮಕ್ಕು ಕೊಡುತ್ತದೆ. ಬಾಲ್ಯದಲ್ಲಿ ಹಣವನ್ನು ಕದ್ದು ತಿಂಡಿ ತಿನ್ನುವುದು, ಸುಳ್ಳು ಹೇಳುವುದು,  ಯೌವನದಲ್ಲಿ ಆಕರ್ಷಣೆಗೆ ಒಳಗಾಗಿ ಗಂಡು ಹೆಣ್ಣು ಪರಸ್ಪರ ಸೆಳೆತಕ್ಕೆ ಒಳಗಾಗಿ ಸಮಾಜ 'ನೀತಿಬಾಹಿರ' ಎಂದು ಕರೆಯುವ ಕೆಲಸಗಳನ್ನು ಮಾಡಲು ಹಾತೊರೆಯುವುದು, ಜೀವನ ರೂಪಿಸಿಕೊಳ್ಳಬೇಕಾದ ಸಮಯದಲ್ಲಿ ಹಣ ಸಂಪಾದಿಸಲು ಮೋಸ, ಅನ್ಯಾಯ, ವಂಚನೆಗಳನ್ನು ಮಾಡಲು ಮನ ಈಡಾಗುವುದು.... ಹೀಗೆ ಆಯಾ ವಯಸ್ಸಿಗನುಗುಣವಾಗಿ 'ತಪ್ಪು' ಅಥವಾ 'ಪಾಪ' ಎಂದು ಸಮಾಜ ಕರೆದಿರುವ ಕಾರ್ಯಗಳನ್ನು ಮಾಡಲು ಮುಂದಾಗುತ್ತಾರೆ. 
        ಇವುಗಳಲ್ಲಿ ಯಾವುದಾದರೂ ವಿಷಯಕ್ಕೆ ನಾವೇ ಬಲಿಯಾದಾಗ ಹಾಗೂ ಅದರಲ್ಲಿ ನಾವು ಏನನ್ನಾದರೂ ಕಳೆದುಕೊಂಡಾಗ ಒಂದಷ್ಟು ಪಶ್ಚಾತ್ತಾಪ ಪಡುವ ಸಾಧ್ಯತೆ ಇದೆ. ಅದಲ್ಲದೇ ಈ ವಿಷಯ ಬೇರೆಯವರಿಗೆ ತಿಳಿದರೆ ನನ್ನ ಬಗ್ಗೆ ಕೀಳಾಗಿ ಅಥವಾ ಲಘುವಾಗಿ ನೋಡಬಹುದು, ನನ್ನನ್ನು ಗೇಲಿ ಮಾಡಬಹುದು, ನನಗೆ ಈಗಿರುವ ಮರ್ಯಾದೆಗೆ ಭಂಗ ಬರಬಹುದು ಮುಂತಾದ ಭಾವನೆಗಳಿಂದ ಅದನ್ನು ಸಾಯುವವರೆಗೂ ಗುಟ್ಟಾಗಿಯೇ ಇಟ್ಟಿರಲು ಬಯಸುತ್ತಾರೆ.
        ಕೆಲವು ಇಕ್ಕಟ್ಟಿನ ಸಮಯದಲ್ಲಿ ತನ್ನಲ್ಲಿ ಗುಪ್ತವಾಗಿ ಇಟ್ಟುಕೊಂಡಿರುವ ಈ ಗುಟ್ಟನ್ನು ಹೇಳಿಬಿಡಲೇ? ಹೇಳದಿದ್ದರೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿದಂತಾಗುವುದಲ್ಲವೇ? ಇಂತಹ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನನ್ನ ಬಳಿ ಬಂದವರಿಗೆ ನಾನು ಹೇಳುವ ಮಾತುಗಳೇನು ? 
......ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

Monday, 25 November 2019

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. - ಜೀವನದ ಕಟುಸತ್ಯಗಳು - 2

ಸೋಲಿನ ಹಾದಿ ಬದಲಿಸಿ ಗೆಲುವಿನತ್ತ ಮುಖ ಮಾಡಿ. 
        ಸಣ್ಣ ಪುಟ್ಟ ಸೋಲುಗಳನ್ನು ನಾವು ಜೀರ್ಣಿಸಿಕೊಳ್ಳುತ್ತೇವೆ. ನಮ್ಮ ಸೋಲಲ್ಲದೇ, ನಮ್ಮವರ ಸೋಲನ್ನು, ಬೇಸರವಾದರೂ ಸಹಿಸಿಕೊಳ್ಳುತ್ತೇವೆ. ಉದಾಹರಣೆಗೆ ನಾವು ಯಾವುದಾದರೂ ಕ್ರೀಡೆಗಳಲ್ಲಿ ಸೋತಾಗ 'ಛೆ! ಇನ್ನೊಂದು ಸ್ವಲ್ಪ ಚೆನ್ನಾಗಿ ಆಡಿದ್ರೆ ಗೆಲ್ತಿದ್ದೆ' ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ಕ್ರಿಕೆಟ್ ಆಡುವಾಗ ನಮ್ಮ ತಂಡ ಇತರ ದೇಶದ ತಂಡಕ್ಕೆ ಸೋತಾಗ 'ನಮ್ಮವರೂ ಚೆನ್ನಾಗಿಯೇ ಆಡಿದ್ರು, ಅದೃಷ್ಟ ಕೈಕೊಡ್ತು' ಎಂದೆಲ್ಲಾ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತೇವೆ. ಅತಿರೇಕದ ಕೆಲವು ಉದಾಹರಣೆಗಳು ಕಾಣ ಸಿಗುವುದೂ ಉಂಟು. 
        ದೊಡ್ಡ ಮಟ್ಟದ ಸೋಲು,ಜೀವನದ ದೆಸೆಯನ್ನೇ ಬದಲಿಸುವಂತಹ ಸೋಲು, ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ನೋವಿನ ಬೇಗುದಿಯನ್ನು ನೀಡುವಂತಹ ಸೋಲಿನಿಂದ ಹೊರಬರುವುದು ಹೇಗೆ? ಇಂತಹ ಸೋಲುಗಳ ಹಿಂದೆ ಅವಮಾನ, ಅನ್ಯಾಯ, ಮೋಸ, ತಪ್ಪಿತಸ್ಥ ಭಾವನೆ ಮುಂತಾದ ಕಾರಣಗಳಿರುತ್ತವೆ. ಅದರಲ್ಲೂ ತನ್ನದೇನೂ ತಪ್ಪಿಲ್ಲದಿರುವಾಗ ಈ ಸೋಲು ಗಾಢವಾದ ನೋವಿನ ತರಂಗಗಳನ್ನು ಎಬ್ಬಿಸುತ್ತವೆ. ಉದಾಹರಣೆಗೆ ಎಲ್ಲರ ಮುಂದೆ ಕೀಳಾಗಿ ಕಂಡು, ಎಲ್ಲರ ಗೇಲಿಗೆ ತುತ್ತಾಗುವಂತಹ ಅವಮಾನಗಳು. ನಂಬಿದ ಮಂದಿಯಿಂದಾಗಿ ಆರ್ಥಿಕ ನಷ್ಟವನ್ನು ಅನುಭವಿಸುವಂತಹ ಅನ್ಯಾಯ. ಮನಸ್ಸಿನೊಡನೆ ಆಟವಾಡಿ ಅಥವಾ ಪ್ರೀತಿಯ ನಾಟಕವಾಡಿ ಕೈ ಕೊಟ್ಟ ಮೋಸದ ಪ್ರಸಂಗಗಳು. ತಾವೇ ಯಾರಿಗಾದರೂ ಮೋಸ ಮಾಡಿ, ಅವರು ನರಳುವಂತೆ ಮಾಡಿದಾಗ ಮೂಡುವ ತಪ್ಪಿತಸ್ಥ ಭಾವನೆ. ಇಂತಹ ನೋವುಗಳು ಜೀವನದ ಕೊನೆಯ ಉಸಿರಿರುವವರೆಗೂ ಕಾಡುವುದುಂಟು. 

ನೀವು ಇಂತಹ ಯಾವುದಾದರೂ ನೋವಿನಿಂದಾಗಿ ಬಳಲುತ್ತಿದ್ದೀರಾ? 
       ನಿಲ್ಲಿ! ಒಂದು ಕ್ಷಣ ಯೋಚಿಸಿ. ಜೀವನ ಅಷ್ಟೇ ಅಲ್ಲ. ಅದು ಜೀವನದಲ್ಲಿ ನಡೆದ ಒಂದು ಕೆಟ್ಟ ಘಟನೆ. ಮೋಸಗಾರರು ತುಂಬಿದ್ದರೂ, ಈ ಜಗತ್ತಿನಲ್ಲಿ 
ಒಳ್ಳೆಯವರೂ ಇದ್ದಾರೆ. ನಿಮ್ಮನ್ನು ಇಷ್ಟ ಪಡುವವರು, ನಿಮ್ಮ ಬಗ್ಗೆ ಕಾಳಜಿ ಇರುವವರು ನಿಮ್ಮ ಉನ್ನತಿಯನ್ನು ಬಯಸುವವರು ನಿಮಗೆ ಸಿಕ್ಕೇ ಸಿಗುತ್ತಾರೆ. ಆದ್ದರಿಂದ ಜಗತ್ತನ್ನು ಹಾಗೂ ಜೀವನವನ್ನು ದ್ವೇಷಿಸಬೇಡಿ. ಪ್ರಪಂಚ ವಿಶಾಲವಾಗಿದೆ. ನೀವು ಸೋಲುಂಡ ಎಲ್ಲ ಘಟನೆಗಳು ಕಳೆದು ಹೋದ ಕಾಲಘಟ್ಟದಲ್ಲಿರುತ್ತವೆ. ನಿಮ್ಮ ಇಂದಿನ ದುಃಸ್ಥಿತಿಗೆ ನೀವು ಕಳೆದುಹೋದ ಘಟನೆಗಳನ್ನು ಮೆಲುಕು ಹಾಕುತ್ತಿರುವುದೇ ಕಾರಣವಾಗಿರುತ್ತದೆ. ನಿಮ್ಮ ನಾಳೆ ಸಧೃಢವಾಗಿ ಉತ್ತಮವಾಗಿ ಇರಬೇಕೆಂದರೆ, ನೀವು ಈ ಯೋಚನೆಗಳಿಗೆ ಕಡಿವಾಣ ಹಾಕಲೇ ಬೇಕು. 

ಇನ್ನೆಷ್ಟು ಕೊರಗುವಿರಿ?
        ಸಾಕು ! ಸೋಲಿನಿಂದಾದ ನಷ್ಟವನ್ನು ಅನುಭವಿಸಿದ್ದು ಸಾಕು. ಅದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆ ನಷ್ಟವನ್ನು ಹತ್ತು ಪಟ್ಟು, ನೂರು ಪಟ್ಟು ಮಾಡಿ ಕೊಳ್ಳುವುದು ಬೇಡ. ನೀವು ಸೋತ ಕ್ಷಣಗಳೇ ನಿಮ್ಮ ಸೋಲಲ್ಲ. ನೀವು ಅದನ್ನು ಮೆಲುಕು ಹಾಕುತ್ತಿರುವುದೇ ನಿಜವಾದ ಸೋಲು. ತಪ್ಪು ಮಾಡಿದ್ದು ಒಂದು ಸೋಲಾದರೆ, ತಪ್ಪಿತಸ್ಥ ಭಾವನೆಯಲ್ಲಿ ನರಳುವುದು ದೊಡ್ಡ ಸೋಲು. ಮನಸ್ಸನ್ನು ಕೆಡಿಸುವ ಇಂತಹ ನೋವಿನ ಹತಾಶ ಭಾವನೆಗಳು ನಿಮ್ಮನ್ನು ಮನೋವ್ಯಾಧಿಗೆ ತುತ್ತಾಗದಂತೆ ನೋಡಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲೇ ಇದೆ. ನಿಮ್ಮ ಮನಸ್ಸು ಸರ್ವಶಕ್ತ. ಮನೆಯಲ್ಲಿ ತುಂಬಿರುವ ಕಸವನ್ನು ಗುಡಿಸಿ ಹೇಗೆ ಹೊರಗೆ ಹಾಕುವಿರೋ ಹಾಗೆಯೇ ಮನಸ್ಸಿನಲ್ಲಿ ತುಂಬಿರುವ ಆ ಕಸವನ್ನು ಹೊರಗೆ ಹಾಕಿ. 
         ನಿಮ್ಮ ಮನಸ್ಸಿನೊಡನೆ ಮಾತನಾಡಿ. 'ಓ ನನ್ನ ಸರ್ವಶಕ್ತ ಮನಸ್ಸೇ, ಈ ಕಸವು ನನಗೆ ಬೇಡ. ಇದರಿಂದ ನನಗೆ ವಿಮುಕ್ತಿ ಕೊಡು. ಹೊಸ ಹೊಸ ಉತ್ಸಾಹಭರಿತ, ಉಲ್ಲಾಸಭರಿತ ಯೋಚನಾಲಹರಿಯನ್ನು ನನ್ನಲ್ಲಿ ತುಂಬು' ಹೀಗೆ ಪದೇ ಪದೇ ನಿಮ್ಮ ಮನಸ್ಸಿಗೆ ಹೇಳಿಕೊಳ್ಳುತ್ತಲಿರಿ. ನಿಮಗೆ ದೇವರ ಮೇಲೆ ನಂಬಿಕೆ ಇದ್ದರೆ ಇದೇ ಮಾತನ್ನು ನೀವು ದೇವರ ಬಳಿಯೂ ಕೇಳಿಕೊಳ್ಳಬಹುದು. ನಂತರದ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಆಗುವ ಮಹತ್ತರ ಬದಲಾವಣೆಗಳಿಗೆ ಎದುರು ನೋಡುತ್ತಿರಿ ಹಾಗೂ ಚಂದದ ಜೀವನವನ್ನು ಅನುಭವಿಸಿ.  

ಸರ್ವೇಜನಾಃ ಸುಖಿನೋ ಭವಂತು. 





Saturday, 23 November 2019

ಜೀವನದಲ್ಲಿ ಸೋಲುವ ಕ್ಷಣಗಳು - ಜೀವನದ ಕಟುಸತ್ಯಗಳು - 1


ಜೀವನದಲ್ಲಿ ಸೋಲುವ ಕ್ಷಣಗಳು  
        ಕೆಲವು ಸತ್ಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ನಮ್ಮ ನಿಯಮಿತ ಅರಿವು, ಭರವಸೆಯ ಮೇಲೆ ನಿಂತಿರುವ ಬದುಕು ಹಾಗೂ ನಮ್ಮ ಮನಸ್ಸಿನ ಸ್ವ-ಸಮರ್ಥಿಸುವ ಗುಣದಿಂದಾಗಿ  ಕೆಲವು ಸತ್ಯಗಳನ್ನು ಅದು ಒಪ್ಪಿಕೊಳ್ಳಲು ಬಯಸುವುದಿಲ್ಲ. ಜೀವನದಲ್ಲಿ ಸೋತು, ನನ್ನ ಬಳಿ ಬಂದು ತಮ್ಮ ನೋವನ್ನು ತೋಡಿಕೊಂಡಾಗ ನಾನು ಗ್ರಹಿಸಿದ ಅನಿಸಿಕೆಗಳನ್ನು ಈ ಮೊದಲನೆಯ ಕಂತಿನಲ್ಲಿ ಹಂಚಿಕೊಳ್ಳುತ್ತೇನೆ. 
        ಜೀವನದುದ್ದಕ್ಕೂ ಬರೀ ಗೆಲುವು ಅಥವಾ ಯಶಸ್ಸನ್ನೇ ಕಾಣಲಾಗುವುದಿಲ್ಲ. ಸೋಲನ್ನು ಕೂಡಾ ಅನುಭವಿಸಬೇಕಾದ ಅನಿವಾರ್ಯತೆ ಬಂದೇ ಬರುತ್ತದೆ. 'ಬೇಕು' ಎಂದುಕೊಳ್ಳುವ ಗೆಲುವು ಸಿಗದಿದ್ದರೂ, 'ಬೇಡ' ಅನ್ನುವ ಸೋಲು ಮಾತ್ರ ಎಲ್ಲರಿಗೂ ಸಿಗುತ್ತದೆ. ಸೋಲಿನ ಮಟ್ಟ ಕಿರಿದಾಗಿರಬಹುದು ಅಥವಾ ಹಿರಿದಾಗಿರಬಹುದು, ಆದರೆ ಸೋಲನ್ನು ಒಪ್ಪಿಕೊಳ್ಳಬೇಕಾಗುವುದಂತೂ ಸತ್ಯ. ಈಗ ಸೋಲಿನ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನು ಮಾಡೋಣ. 
        'ಸೋಲು' ನಮಗೆ ಹತಾಶೆ,ನಿರಾಶೆ, ನೋವು ಇತ್ಯಾದಿ ಮಾನಸಿಕ ತುಮುಲಗಳಿಗೆ ಹಾದಿ ಮಾಡಿಕೊಡುತ್ತದೆ. ಗೆಲುವು ತನ್ನದೆಂದು ಬೀಗುವ ಮನುಷ್ಯ ಸೋಲಿಗೆ ಇತರರನ್ನು ದೂಷಿಸುತ್ತಾನೆ. 

ಸೋಲಿಗೆ ಕಾರಣಗಳೇನು ?  
        ಗೆಲುವಿಗೆ ಒಮ್ಮೊಮ್ಮೆ ಅದೃಷ್ಟ ಕಾರಣವಾದರೆ, ಸೋಲಿಗೆ ದುರಾದೃಷ್ಟ ಕಾರಣವಾಗಿರುತ್ತದೆ. ಅಂದ ಮಾತ್ರಕ್ಕೆ ನಮ್ಮೆಲ್ಲ ಸೋಲುಗಳನ್ನು ದುರಾದೃಷ್ಟದ ಮೇಲೆ ಹೊರಿಸಲಾಗುವುದಿಲ್ಲ. ಬಹುತೇಕ ನಮ್ಮ ಸೋಲಿಗೆ  ನಾವೇ ಕಾರಣಕರ್ತರಾಗಿರುತ್ತೇವೆ. ನಾವು ಮಾಡಿರಬಹುದಾದ ತಪ್ಪುಗಳು, ನಮ್ಮ ಆಲಸ್ಯತನ, ನಮ್ಮ ತಪ್ಪು ಗ್ರಹಿಕೆ, ನಮ್ಮಿಂದಾದ ಕಡೆಗಣನೆ.. ಹೀಗೆ ಹತ್ತು ಹಲವು ಕಾರಣಗಳಿರಬಹುದು. ಬಹುತೇಕ ನಾವೇ ಮಾಡಿರಬಹುದಾದ ತಪ್ಪುಗಳನ್ನು ನಾವು  ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಪ್ರಕಾರ ನಾವು ತಪ್ಪು ಮಾಡದವರು, ಬುದ್ಧಿವಂತರು, ನಿರಪರಾಧಿಗಳು,ವಿವೇಕಿಗಳು... ಎಂದೆಲ್ಲಾ ಅಂದುಕೊಂಡಿರುತ್ತೇವೆ. ಬೇರೆಯವರ ಮೇಲೆ ತಪ್ಪು ಹೊರಿಸುವುದರಲ್ಲಿ ನಾವು ನಿಷ್ಣಾತರಾಗಿರುತ್ತೇವೆ. ಏಕೆಂದರೆ ನಮ್ಮ ಮನಸ್ಸಿನ ಸ್ವ-ಸಮರ್ಥನಾಗುಣ ನಮ್ಮನ್ನು ಎಲ್ಲಾ ವಿಷಯದಲ್ಲಿ ರಕ್ಷಿಸುತ್ತಿರುತ್ತದೆ. 
        ನಿಧಾನವಾಗಿ ತೆರೆದ ಮನಸ್ಸಿನಿಂದ ಯೋಚಿಸಿದಾಗ ನಾವು ಎಲ್ಲಿ ಎಡವಿದ್ದೇವೆ ಎಂದು ಮನಗಾಣುತ್ತೇವೆ. ನಮ್ಮದೇ ಆದ ತಪ್ಪು ನಿರ್ಧಾರಗಳಿಂದಾಗಿ ಜೀವನವನ್ನು ಸಂಕೀರ್ಣಗೊಳಿಸಿಕೊಂಡಿರುತ್ತೇವೆ. ದುರಾದೃಷ್ಟದಿಂದಾಗುವ ಸೋಲಿಗೆ ನಾವು ಏನೂ ಮಾಡುವ ಪರಿಸ್ಥಿತಿಯಲ್ಲಿರುವುದಿಲ್ಲ. ಸೋಲನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಎಲ್ಲಾ ಸೋಲುಗಳನ್ನು ಚೆನ್ನಾಗಿ ಅವಲೋಕಿಸಿ, ವಿವೇಚಿಸಿದಾಗ ನಮ್ಮ ತಪ್ಪುಗಳು, ಅವಿವೇಕ ಮುಂತಾದವು ಎದ್ದು ಕಾಣುತ್ತವೆ. 

ಪೊಳ್ಳು ಸಮಾಧಾನಗಳು 
        'ಬೆಟರ್ ಲಕ್ ನೆಕ್ಸ್ಟ್ ಟೈಮ್' - ಯಾರಾದರೂ ಸೋತಾಗ ಬಹಳಷ್ಟು ಜನ ಹೇಳುವ ಮಾತಿದು. ಸೋತು ಸುಣ್ಣವಾದ ಮನುಷ್ಯ ಇದನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎನ್ನುವುದೇ ಪ್ರಶ್ನೆ. ಇತರರು ಪದೇ ಪದೇ ಆಡುವ ಈ ಮಾತುಗಳು ಅವನ ಸೋಲನ್ನು ಎತ್ತಿ ತೋರಿಸುತ್ತಲೇ ಇರುತ್ತವೆ. ಆತ ಜೀವನದಲ್ಲಿ ಸೋತಾಗಲೆಲ್ಲಾ ಈ ಮಾತುಗಳನ್ನು ಕೇಳುತ್ತಿರುತ್ತಾನೆ. ಆ 'ಬೆಟರ್ ಲಕ್' ಇರುವ 'ನೆಕ್ಸ್ಟ್ ಟೈಮ್' ಬಾರದೇ ಇರಲೂಬಹುದು. 
'ಸೋಲೇ ಗೆಲುವಿನ ಮೆಟ್ಟಿಲು' - ಅಪರೂಪದ ಕೆಲವು ಉದಾಹರಣೆಗಳನ್ನು ಬಿಟ್ಟರೆ ಈ ಮಾತುಗಳನ್ನು ಕೇಳಿ ಗೆದ್ದವರಿಲ್ಲ. ಸೋತು ಮೆಟ್ಟಿಲಾಗಿ ಎಲ್ಲರಿಂದಲೂ ತುಳಿಸಿಕೊಳ್ಳುತ್ತಲೇ ಇರುತ್ತಾರೆ. 
'ಸೋಲನ್ನು ಪಾಠವೆಂದು ತಿಳಿದುಕೋ' - ಈ ಮಾತನ್ನು ಸಾರಿ ಸಾರಿ ಹೇಳಿದರೂ, ಸೋತವರು ಮತ್ತದೇ ತಪ್ಪುಗಳನ್ನು ಮಾಡಿ ಸೋಲುತ್ತಲೇ ಇರುತ್ತಾರೆ. ಈ ರೀತಿಯ ಎಲ್ಲ ಮಾತುಗಳು ಪರೋಕ್ಷವಾಗಿ 'ನೀನು ಸೋತಿರುವೆ' ಎಂದು ಸಾರಿ ಹೇಳುತ್ತಿರುತ್ತವೆ.
        ಕೆಲವೊಮ್ಮೆ ಜೀವನದಲ್ಲಿ ಸೋಲನ್ನು ದೊಡ್ಡ ರೀತಿಯಲ್ಲಿ ಅನುಭವಿಸಬೇಕಾಗಬಹುದು. ಅದು ಜೀವನವನ್ನು ಅಲ್ಲಾಡಿಸಬಹುದು.ಅಂತಹವರಿಗ
ಮೇಲಿನ ಮಾತುಗಳೆಲ್ಲಾ ಪೊಳ್ಳು ಮಾತುಗಳಂತೆಯೇ ಕಾಣುತ್ತವೆ. ಏಕೆಂದರೆ ಆತ ಅನುಭವಿಸಿದ ಸೋಲಿನ ಕಾರಣಕರ್ತರು - ಆತ ನಂಬಿದ್ದ ಗೆಳೆಯ, ಸಂಬಂಧಿಕ,
ಪ್ರೇಮಿ ಅಥವಾ ಹಿತೈಷಿಗಳೇ ಆಗಿರುತ್ತಾರೆ. ನಂಬಿಕೆ ದ್ರೋಹವಾದಾಗ ಆಗುವ ಆಘಾತ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. 
        ಹೇಗಾದರೂ, ಎಂತಾದರೂ ಇಂತಹ ತೀವ್ರವಾಗಿ ಬಾಧಿಸುವ ಸೋಲಿನಿಂದ ಹೊರಬಂದವರು ಜಗತ್ತಿನಲ್ಲಿ ಅತ್ಯುನ್ನತ ಮಟ್ಟ ತಲುಪಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಸೋಲಿನಿಂದ ಹೊರಬರುವುದು ಹೇಗೆ? 
...ಮುಂದಿನ ಕಂತಿನಲ್ಲಿ   

Thursday, 14 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 7

ನಕಾರಾತ್ಮಕ ಆಲೋಚನೆಗಳಿಂದ ಏಕೆ ಹಾಗೂ ಹೇಗೆ ಹೊರಬರಬೇಕು ? 
        ನಿಮ್ಮ ಮನಸ್ಸಿಗೆ ನಿಮ್ಮನ್ನು ನಿಮಗೆ ಬೇಕಾದುದೆಡೆಗೆ ಒಯ್ಯುವ ಶಕ್ತಿಯಿದೆ. ಅದು ನಿಮ್ಮ ಗುರಿಯಾಗಿರಲಿ ಅಥವಾ ನಿಮ್ಮ ಆಸೆ ಆಕಾಂಕ್ಷೆಗಳಾಗಿರಲಿ ಅಥವಾ ನಿಮ್ಮ ಮನೋವೇದನೆಯಿಂದ ಹೊರಬರುವುದಿರಲಿ, ನಿಮ್ಮ ಸುಪ್ತಮನಸ್ಸಿಗೆ ಅದನ್ನು ಸಾಕಾರಗೊಳಿಸುವ ಶಕ್ತಿಯಿದೆ. ಮನಸ್ಸನ್ನು ಆ ದಿಕ್ಕಿನೆಡೆಗೆ ಕೊಂಡೊಯ್ಯುವುದು ಹೇಗೆ? ......... 
        ನೆನಪಿರಲಿ! ನೀವು ಇಂದು ಮಾಡುವ ಆಲೋಚನೆಗಳು, ನೀವು ಮನಸ್ಸಿನಲ್ಲಿ ಇಂದು ಇಟ್ಟುಕೊಳ್ಳುವ ಆಲೋಚನೆಗಳು ಹಾಗೂ ನಿಮ್ಮಚಿಂತನೆಗಳು ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ. ನಮ್ಮನ್ನು ದೈಹಿಕವಾಗಿ ಯಾರಾದರೂ ಕಟ್ಟಿ ಹಾಕಬಹುದು ಆದರೆ ನಮ್ಮ ಮನಸ್ಸನ್ನು ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲ. ನನ್ನ ಮನಸ್ಸಿನ ಮೇಲೆ ನನಗಿರುವ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಿಮ್ಮನ್ನು ನೀವೇ ಒಂದು ಪ್ರಶ್ನೆ ಕೇಳಿಕೊಳ್ಳಿ. 'ನಾನು ಬಹಳಷ್ಟು ವೇಳೆ ಉತ್ಸಾಹದಿಂದ ಸಕಾರಾತ್ಮಕ ಯೋಚನೆಗಳಿಂದ ತುಂಬಿರುತ್ತೇನೆಯೇ? ಅಥವಾ
ಹಲವಾರು ಚಿಂತೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ನಕಾರಾತ್ಮಕ ಯೋಚನೆ ಗಳಲ್ಲಿ ಮುಳುಗಿರುತ್ತಿದ್ದೇನೆಯೇ? ಅಥವಾ ಇವೆರಡರ ಮಧ್ಯೆ ತೂಗಾಡುತ್ತಿರುವೆನೇ ? ತುಲನೆ ಮಾಡಿ ನಿಷ್ಪಕ್ಷಪಾತವಾಗಿ ಉತ್ತರ ನೀಡಿ.  ಒಂದು ವೇಳೆ ನೀವು ನಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೆ ನಿಮ್ಮ ಆಲೋಚನೆಗಳಿಂದ ಅಥವಾ ಚಿಂತೆಯಿಂದ ನಿಮಗೇನಾದರೂ ಲಾಭವಿದೆಯೇ ಎಂದು ಗಮನಿಸಿ. ನಿಮ್ಮ ಮನಸ್ಸಿಗೆ ನೋವು, ತೊಂದರೆ ಹಾಗೂ ಕಿರಿಕಿರಿ ಉಂಟು ಮಾಡುವ ಆಲೋಚನೆಗಳನ್ನು ತಡೆಯಿರಿ, ಸಾಧ್ಯವಾದರೆ ಕಿತ್ತೊಗೆಯಿರಿ. ಕೋಪದಿಂದಲೋ, ಅವಮಾನದಿಂದಲೋ ಅಥವಾ ದ್ವೇಷದಿಂದಲೋ ನಕಾರಾತ್ಮಕ ಭಾವನೆಗಳು ಮೊಳಕೆಯೊಡೆದಿರಬಹುದು. ಏನನ್ನೂ ಸಾಧಿಸದೆ ಕೇವಲ ನಿಮ್ಮ ಮನಃಶಾಂತಿಯನ್ನು ಹಾಳುಗೆಡಹುವ ಇಂತಹ ಆಲೋಚನೆಗಳಿಂದ
ನಿಮಗೆ ಯಾವ ಪ್ರಯೋಜನವೂ ಇಲ್ಲ ಎನ್ನುವುದನ್ನು ಮನಗಾಣಿ. ಇದನ್ನು ಗಮನದಲ್ಲಿಟ್ಟುಕೊಂಡು ಅಂತಹ ಆಲೋಚನೆಗಳನ್ನು ತಡೆಯಲು ಪ್ರಯತ್ನಿಸಿ. ಕಹಿನೆನಪು ಅಥವಾ ನಕಾರಾತ್ಮಕ ಆಲೋಚನೆಗಳು ಬಂದೊಡನೆ ಮನಸ್ಸಿನ ಭಾವನೆಗಳನ್ನು ವಿಷಯಾಂತರಿಸಿ. ನಿಮಗೆ ಖುಷಿ ಕೊಟ್ಟ ಅಥವಾ ಖುಷಿ ನೀಡುವ ವಿಷಯಗಳ ಬಗ್ಗೆ ಗಮನ ಹರಿಸಿ.ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳಿ. ಮನಸ್ಸಿನ ಭಾವನೆಗಳು ನಿಮ್ಮ ಜೀವನವನ್ನು ರೂಪಿಸುತ್ತವೆ. ನೀವು ನಕಾರಾತ್ಮಕ ವಾಗಿ ಯೋಚಿಸಿದಾಗೆಲ್ಲ ಅದು ಅರೆಪ್ರಜ್ಞಾಮನಸ್ಸಿನ ಮೇಲೆ ಮುದ್ರೆಯೊತ್ತುತ್ತಲೇ ಇರುತ್ತದೆ. ಅದು ಗಾಢವಾಗುತ್ತಿದ್ದಂತೆ ದುಃಖ ದುಮ್ಮಾನಗಳು ಉದ್ಭವಿಸುತ್ತವೆ. ಇದು ದೀರ್ಘಕಾಲ ಮುಂದುವರೆಯುತ್ತಿದ್ದಂತೆ ಅದು ಮನೋರೋಗವಾಗಿ ಪರಿ ವರ್ತಿತವಾಗುತ್ತದೆ. ಭಯ, ಆತಂಕ, ಖಿನ್ನತೆ ಇತ್ಯಾದಿ ಮನೋರೋಗಗಳಿಗೆ ಅದು ಎಡೆ ಮಾಡಿಕೊಡುತ್ತದೆ.ರಾತ್ರಿ ಮಲಗುವಾಗ ಕಳೆದುಹೋದ ಅಥವಾ ಅನುಭವಿಸಿದ ನೋವು, ಅವಮಾನ, ಬೇಸರದ ಸಂಗತಿಗಳನ್ನು ನೆನಪಿಸಿಕೊಳ್ಳುತ್ತಾ ಮಲಗಬೇಡಿ. ನೀವು ಪದೇ ಪದೇ ನೆನೆಸಿಕೊಂಡರೆ ಅದು ಅರೆಪ್ರಜ್ಞಾಮನಸ್ಸಿನಲ್ಲಿ ಗಾಢವಾದ ಪರಿಣಾಮ ಬೀರುತ್ತಿರುತ್ತದೆ. ನಂತರ ಅದರಿಂದ ಹೊರಗೆ ಬರುವುದು ಕಷ್ಟ ವಾಗುತ್ತದೆ. ಆದ್ದರಿಂದ ನಿಮ್ಮ ಉನ್ನತಿಗೆ ಹಾಗೂ ನಿಮ್ಮ ಮಾನಸಿಕ ಆರೊಗ್ಯಕ್ಕೆ ನೀವು ಸ್ವಲ್ಪ ಸಮಯವನ್ನು ಮೀಸಲಾಗಿಡಲೇಬೇಕು. ಸುಪ್ತಮನಸ್ಸಿನೊಂದಿಗೆ ಮಾತನಾಡಲು ಕಲಿಯಿರಿ. ನಿಮಗೆ ಬೇಡವಾದ ವಿಷಯವನ್ನು ನನಗಿದು ಬೇಡ ಎಂದು ಸ್ಪಷ್ಟವಾಗಿ ಹೇಳಿ. ನಿಮಗೆ ನೀವೇ ಕೆಲವೊಮ್ಮೆ ಸಮಾಧಾನ ಮಾಡಿಕೊಳ್ಳಿ. ನಿಮ್ಮ ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸು ಒಟ್ಟಾಗಿ ಕೆಲಸ ಮಾಡಿ ನಿಮ್ಮನ್ನು ರೂಪಿಸಿವೆ. ತನ್ಮೂಲಕ ನಿಮ್ಮಲ್ಲಿರುವ ಭಾವನೆಗಳು, ನಂಬಿಕೆಗಳು,ದೃಷ್ಟಿ ಕೋನಗಳು, ಅಭಿಪ್ರಾಯಗಳು ಹಾಗೂ ನಿಮ್ಮ ನಡವಳಿಕೆಗಳನ್ನು ರೂಪಿಸಿವೆ. ಹೀಗೆ ರೂಪಿಸುವಾಗ ನಕಾರಾತ್ಮಕ ವಿಷಯಗಳು ನಿಮ್ಮ ಮನಸ್ಸಿನಲ್ಲಿ ಮುದ್ರೆಯೊತ್ತಿದ್ದರೆ ಅದನ್ನು ಬದಲಿಸಲು ಅಥವಾ ದೂರ ಮಾಡಲು ನೀವು ಅರೆಪ್ರಜ್ಞಾ ಮನಸ್ಸನ್ನು  ರೂಪಾಂತರಿಸಬೇಕಾಗುತ್ತದೆ. (ರೀಪ್ರೋಗ್ರಾಮಿಂಗ್). ಕೇವಲ ನಕಾರಾತ್ಮಕ ವಿಶಯಗಳನ್ನು ದೂರ ಮಾಡುವುದಲ್ಲದೇ ನಿಮ್ಮ ಮನಸ್ಸನ್ನು ಆರೋಗ್ಯಕರವಾಗಿ, ಶಕ್ತಿಯುತವಾಗಿ ಹಾಗೂ ನಿಮ್ಮ ಗುರಿ ಮುಟ್ಟಲು ಒಯ್ಯುವಲ್ಲಿ ಕೂಡಾ ನೀವು ಮನಸ್ಸಿಗೆ ತರಬೇತಿ ನೀಡಬೇಕಾಗುತ್ತದೆ. ಅಂಗಸಾಧನೆಗಾಗಿ ವ್ಯಾಯಾಮ ಮಾಡುವಾಗ ಸಮಯ, ಅಭ್ಯಾಸ ಹಾಗೂ ತಾಳ್ಮೆ ಬೇಕಾಗುವಂತೆ ನಿಮ್ಮಲ್ಲಿ ಮಾನಸಿಕ ಬದಲಾವಣೆ ತರಬೇಕಾದರೂ ಸಮಯ, ಅಭ್ಯಾಸ ಹಾಗೂ ತಾಳ್ಮೆ ಬೇಕಾಗುತ್ತದೆ.

ಮನಸ್ಸಿನ ತರಬೇತಿ
ಪ್ರತಿದಿನ ಸ್ವಲ್ಪ ಸಮಯವನ್ನು ನೀವು ಇದಕ್ಕಾಗಿ ನೀಡಲೇಬೇಕು. ನಮ್ಮಬದುಕಿನಲ್ಲಿ ಬಹುತೇಕ ಸಮಯವನ್ನು ನಾವು ಇತರರಿಗಾಗಿ ವ್ಯಯಿಸುತ್ತೇವೆ. ಉದಾಹರಣೆಗೆ, ನಾನು ಕೆಲಸ ಮಾಡುತ್ತಿರುವ ಯಜಮಾನನಿಗಾಗಿ, ನನ್ನ ಕುಟುಂಬಕ್ಕಾಗಿ ಅಥವಾ ನನ್ನ ಗೆಳೆಯರ ಒಳಿತಿಗಾಗಿ. ಸಾಮಾಜಿಕ ಚೌಕಟ್ಟಿನಲ್ಲಿ ಇವೆಲ್ಲಾ ಅನಿವಾರ್ಯ ಹಾಗೂ ಲಾಭದಾಯಕ ಎನಿಸಿದರೂ ಗಮನಿಸಿ ನೋಡಿದಾಗ ಬಹಳಷ್ಟು ಸಮಯವನ್ನು ನಾವು ನಮ್ಮ ಸುತ್ತಮುತ್ತಲಿರುವ ನಮ್ಮವರಿಗಾಗಿ ವ್ಯಯಿಸುತ್ತಿರುತ್ತೇವೆ.
        ದಿನಂಪ್ರತಿ ಸುಮಾರು ಇಪ್ಪತ್ತು ನಿಮಿಷಗಳ ಮನಸ್ಸಿನ ತರಬೇತಿಯಿಂದ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಲು ಸಾಧ್ಯ. ದೈಹಿಕ ಸಾಧನೆಗೆ ದೈಹಿಕ ವ್ಯಾಯಾಮದ ಅಗತ್ಯವಿರುವಂತೇ ಮಾನಸಿಕ ಸಾಧನೆಗೆ ಅದರದ್ದೇ ಆದ ಮಾನಸಿಕ ವ್ಯಾಯಾಮಗಳಿವೆ. ಮನಸ್ಸಿನ ಸಾಧನೆ ಕೆಲವೊಮ್ಮೆ ದೈಹಿಕ ವ್ಯಾಯಾಮದ ಅಗತ್ಯವಿಲ್ಲದೆಯೇ ದೈಹಿಕ ಸಾಧನೆಯ ಪರಿಣಾಮಗಳನ್ನು ನೀಡಬಲ್ಲದು. ಬೇರೆ ಬೇರೆ ಮನಸ್ಥಿತಿಗೆ ಬೇರೆ ಬೇರೆ ತರಬೇತಿಯ ಅಗತ್ಯವಿದ್ದರೂ ಎಲ್ಲರೂ ಮಾಡಬಹುದಾದ ಮಾನಸಿಕ ತರಬೇತಿ ಕಾರ್ಯಕ್ರಮವನ್ನು ಸ್ಥೂಲವಾಗಿ
ವಿವರಿಸುತ್ತೇನೆ. 
        ಮನಸ್ಸಿನ ಶಕ್ತಿಯನ್ನು ಅರಿಯಲು ಹಾಗೂ ಅದರ ಉಪಯೋಗ ಪಡೆಯಲು ಮೊದಲನೆಯದಾಗಿ `ಸಂಕಲ್ಪ' ಮಾಡಿಕೊಳ್ಳಿ. ಸಂಕಲ್ಪ ಮಾಡಿಕೊಳ್ಳಲು  ನಿಮಗೆ ಆ ಬಗ್ಗೆ `ಬಯಕೆ' ಅಥವಾ `ಇಚ್ಛೆ' ಇರಬೇಕು. ನಿಮಗೆ ಏನು ಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ನಿಮ್ಮ ಬೇಡಿಕೆ/ಬಯಕೆ/ಗುರಿಯ ಕುರಿತಾದ ಅವಧಿ ಹಾಗೂ ಫಲ ಒಂದಳತೆಯ ಮಿತಿಯಲ್ಲಿರಲಿ.  ಆಗಿರಲಿ. ಉದಾಹರಣೆಗೆ ನಾಳೆ ಐವತ್ತುಲಕ್ಷ ರೂಪಯಿ ನನ್ನ ಬ್ಯಾಂಕ್ ಖಾತೆಯಲ್ಲಿರಬೇಕು ಅಥವಾ ಇನ್ನೊಂದು ವಾರದಲ್ಲಿ ನಾನು ಒಂದು ದೊಡ್ಡ ಮನೆಯ ಮಾಲೀಕನಾಗಬೇಕು.. ಹೀಗೆಂದುಕೊಂಡರೆ ಆಗುವುದಿಲ್ಲ. ಅದರ ಬದಲು ನಿಮ್ಮ ಪರಿಸ್ಥಿತಿ ಹಾಗೂ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಇನ್ನು ಮೂರು ಅಥವಾ ಐದುವರ್ಷಗಳಲ್ಲಿ ನನ್ನ ಖಾತೆಯಲ್ಲಿ ಐವತ್ತು ಲಕ್ಷ ರೂಪಾಯಿ ಇರುತ್ತದೆ ಎಂದುಕೊಳ್ಳಿ. ನಿಮಗೆ ಏನು ಬೇಕು ಎಂದು ಸಂಕಲ್ಪ ಮಾಡಿಕೊಂಡ ಮೇಲೆ ಆ ವಿಷಯದ ಬಗ್ಗೆ
ಆಳವಾಗಿ ಯೋಚಿಸಿ. ನಂತರ ಅದಕ್ಕೆ ಸಂಬಂಧಪಟ್ಟ ಇತರ ವಿಷಯಗಳನ್ನೂ ಸವಿಸ್ತಾರವಾಗಿ ಕಲ್ಪಿಸಿಕೊಳ್ಳಿ. ಉದಾಹರಣೆಗೆ: ನನ್ನದೇ ಆದ ಸ್ವಂತಮನೆಯೊಂದು ನನಗೆ ಬೇಕು ಎಂಬ ಬಯಕೆ ನಿಮ್ಮಲ್ಲಿದ್ದರೆ,ಇನ್ನು ಐದು ವರ್ಷಗಳಲ್ಲಿ ನಾನು ಮನೆಯೊಂದರ ಮಾಲೀಕನಾಗಿರುತ್ತದೆ. ಅದರ ವಿನ್ಯಾಸ ಹೀಗಿರುತ್ತದೆ. ಮನೆಯ ಮುಂದೆ ಒಂದು ತೋಟವಿರುತ್ತದೆ. ಸುತ್ತಮುತ್ತಲ ವಾತಾವರಣ ಹೀಗಿರುತ್ತದೆ..' ಹೀಗೆ ಸವಿಸ್ತಾರವಾಗಿ ಕಲ್ಪಿಸಿಕೊಳ್ಳಿ. 
        ನಿಮ್ಮ ಅರೆಪ್ರಜ್ಞಾಮನಸ್ಸಿನ ಜೊತೆ ಮಾತನಾಡಿ. ನಿಮ್ಮ ತೊಂದರೆ ಅಥವಾ ಬಯಕೆ ಏನೆಂದು ಅದಕ್ಕೆ ಹೇಳಿ. ಅರೆಪ್ರಜ್ಞಾಮನಸ್ಸಿನ ಜೊತೆ ಮಾತನಾದುವಾಗ ನಿಮ್ಮ ಮಾತು ಪ್ರಾಮಾಣಿಕವಾಗಿರಲಿ. ಯಾವುದೇ ಅಡ್ಡಗೋಡೆ ಇಲ್ಲದ ಹಾಗೆ ಮಾತು ಸ್ಪಷ್ಟವಾಗಿರಲಿ. ಉದಾಹರಣೆಗೆ, ಮುಲಾಜಿಗೆ ಒಳಗಾಗಿ ನಷ್ಟ ಅನುಭವಿಸುತ್ತಿದ್ದರೆ ಅದನ್ನು ಅರೆಪ್ರಜ್ಞಾಮನಸ್ಸಿಗೆ ಸ್ಪಷ್ಟವಾಗಿ ಹೇಳಿ. 'ನೋ' 
ಎಂದು ಹೇಳುವ ಬದಲು 'ಎಸ್' ಎಂದು ಹೇಳಿ ಸಿಕ್ಕಿ ಹಾಕಿಕೊಳ್ಳುತ್ತೇನೆ. ನಂತರ ಮನಸ್ಸಿಲ್ಲದಿದ್ದರೂ ಅವರೊಂದಿಗೆ ಸಮಯ ಕಳೆಯುತ್ತೇನೆ.ಅವರಿಗಾಗಿ ಸುಮ್ಮಸುಮ್ಮನೆ ನಗುತ್ತೇನೆ. ನನ್ನ ಸಮಯ ಹಾಗೂ ಹಣ ಎರಡನ್ನೂ ವ್ಯರ್ಥ ಮಾಡುತ್ತಿದ್ದೇನೆ'. ಜೊತೆಗೆ ನಾನೇಕೆ ಹಾಗೆ ಮಾಡುತ್ತಿದ್ದೇನೆ ಎಂದು ನಿಮ್ಮನ್ನೇ ಪ್ರಶ್ನಿಸಿ ಪ್ರಾಮಾಣಿಕವಾಗಿ ಕಾರಣವನ್ನು ಹುಡುಕಿ ಅರೆಪ್ರಜ್ಞಾಮನಸ್ಸಿಗೆ
ಹೇಳಿಕೊಳ್ಳಿ. `ಅವರ ಮುಂದೆ ಒಳ್ಳೆಯವನಾಗಲು ಪ್ರಯತ್ನ ಪಡುತ್ತಿದ್ದೇನೆ' ಅಥವಾ 'ಅವರಿಂದ ಮುಂದೆ ಏನಾದರೂ ಸಹಾಯ ಸಿಗಬಹುದೆಂದು ನಂಬಿಕೊಂಡಿದ್ದೇನೆ'. ನಿಮ್ಮ ಕಾರಣ ಸ್ಪಷ್ಟವಾಗಿರಲಿ. ಇನ್ನೊಂದು ಉದಾಹರಣೆ: ನೋಡಲು ಬಂದ ಗಂಡುಗಳನ್ನೆಲ್ಲಾ ಬೇಡ ಎಂದು ಹೇಳಿ ಆಮೇಲೆ ಪಶ್ಚಾತ್ತಾಪ ಪಡುವ ಹೆಣ್ಣು. ಯಾಕೆ ಹೀಗಾಗುತ್ತಿದೆ? ಯಾವುದು ನಾನು `ಹೂಂ' ಎನ್ನುವುದನ್ನು ತಡೆಯುತ್ತಿದೆ ಎನ್ನುವುದನ್ನು ಅರೆಪ್ರಜ್ಞಾಮನಸ್ಸನ್ನು ಕೇಳಿದಾಗ ಆಕೆಗೆ ಉತ್ತರ ಸಿಗುತ್ತದೆ. ಹೀಗೆ ಪದೇ ಪದೇ ನೀವು ಈ ಬಗ್ಗೆ ಕೇಳುತ್ತಿದ್ದಂತೆ ಒಂದಲ್ಲ ಒಂದು ರೀತಿಯಲ್ಲಿ ನಿಮಗೆ ಉತ್ತರ ಸಿಕ್ಕೇ ಸಿಗುತ್ತದೆ. 
        ನಮ್ಮನ್ನು ನಮ್ಮ ಗುರಿಯೆಡೆಗೆ ತಲುಪಲು ಅಥವಾ ನಮ್ಮ ಸಂಕಟಗಳಿಂದ ಅಥವಾ ವ್ಯಾಧಿಗಳಿಂದ ಹೊರತರಲು ಮನಸ್ಸಿಗಿರುವ
ಅತ್ಯಂತ ಶಕ್ತಿಶಾಲಿ ಆಯುಧದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ. 

Wednesday, 13 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 6

ನಮ್ಮ ಸುತ್ತಲೂ ಇರುವ ನಕಾರಾತ್ಮಕ ಸಲಹೆ ನೀಡುವ ಜನರು. 
        ನನ್ನ ಜೀವನದ ಉದಾಹರಣೆಯೊಂದಿಗೆ ಹೇಳಬೇಕಾದರೆ ಕಾಲೇಜು ವ್ಯಾಸಂಗ ಮುಗಿಸಿದ ಮೇಲೆ ಕೆಲವಾರು ಕಡೆ ಕೆಲಸ ಮಾಡಿದೆ. ಸ್ವತಂತ್ರವಾಗಿ ಬದುಕುವ ಮನೋಭಾವ ರೂಢಿಸಿಕೊಂಡದ್ದರಿಂದ ಯಾರ ಕೈಕೆಳಗೂ ಕೆಲಸ ಮಾಡಲು ಮನಸ್ಸು ಒಪ್ಪಲಿಲ್ಲ. ಕೊನೆಗೆ ಸ್ವತಂತ್ರವಾಗಿ ವ್ಯಾಪಾರದಲ್ಲಿ ತೊಡಗುವ ಬಗ್ಗೆ ನಿರ್ಧರಿಸಿದೆ. ಹವ್ಯಾಸವಾಗಿದ್ದ ಫೋಟೋಗ್ರಫಿಯನ್ನು ನನ್ನ ವೃತ್ತಿಯಾಗಿ ಆಯ್ದುಕೊಂಡೆ. ಫೋಟೋ ಸ್ಟುಡಿಯೋಗಾಗಿ ಒಂದು ಜಾಗವನ್ನು ಹುಡುಕಿದೆ. ಹನುಮಂತನಗರದ ಮುಖ್ಯರಸ್ತೆಯೊಂದರಲ್ಲಿ ಒಂದು ಕಟ್ಟಡದ ಮೊದಲನೇ ಮಹಡಿಯಲ್ಲಿ ಒಂದು ದೊಡ್ಡ ಜಾಗ ಖಾಲಿ ಇತ್ತು. ವೃತ್ತಿಪರ ಸ್ಟುಡಿಯೋ ಮಾಡಲು 
ಎಲ್ಲ ಅನುಕೂಲಗಳು ಅಲ್ಲಿದ್ದವು. ಹನುಮಂತನಗರದ ಕೆಲವು ಗೆಳೆಯರ ಬಳಿ ಈ ಬಗ್ಗೆ ಪ್ರಸ್ತಾಪಿಸಿದೆ. 
        'ನೋಡು ಗುರು, ಇಲ್ಲಿ ಆ ಕಡೆ ಗುರುದತ್ ಸ್ಟುಡಿಯೋ ಇದೆ. ಪಾಸ್‍ಪೋರ್ಟ್ ಫೋಟೋಸ್‍ಗೆ ಅದು ಫೇಮಸ್ಸು. ಅಲ್ಲಿಂದ ಸ್ವಲ್ಪ ಮುಂದೆ ಛಾಯಾ ಸ್ಟುಡಿಯೋ ಇದೆ. ಅದು ಹಳೇ ಫೋಟೋಗಳನ್ನು ನವೀಕರಿಸುವ ಕೆಲಸಕ್ಕೆ ಫೇಮಸ್ಸು. ಆ ಕಡೆ ಹೋದ್ರೆ ಅಜಂತ ಸ್ಟುಡಿಯೋ, ಅಲ್ಲಿಂದ ಮುಂದೆ ಎಸ್ ಜೆ ಎನ್ ಸ್ಟುಡಿಯೋ. ಇವರೆಲ್ಲಾ ಸುಮಾರು ನಲವತ್ತು ವರ್ಷಗಳಿಂದ ಫೇಮಸ್ ಆಗಿದ್ದಾರೆ. ಇವರ ಮಧ್ಯೆ ನೀನು ಹೊಸ ಸ್ಟುಡಿಯೋ ಶುರು ಮಾಡಿದರೆ ಬದುಕೋಕಾಗುತ್ತಾ ಯೋಚ್ನೆ ಮಾಡು' ಅಂದ ಒಬ್ಬ. ಇನ್ನೊಬ್ಬ 'ಅದಲ್ದೇ ಇನ್ನೂ ಏಳೆಂಟು ಸಣ್ಣ ಪುಟ್ಟ ಸ್ಟುಡಿಯೋಗಳು ಸುತ್ತಮುತ್ತ ಇದ್ದಾವೆ' ಎಂದು ಮಾತು ಸೇರಿಸಿಬಿಟ್ಟ. ಮತ್ತೊಬ್ಬ 'ಈ ಎಲ್ಲಾ ಸ್ಟುಡಿಯೋಗಳು ಗ್ರೌಂಡ್‍ಫ್ಲೋರ್ ನಲ್ಲಿ ಇವೆ. ನೀನು ನೋಡಿದ ಜಾಗ ಫಸ್ಟ್ ಫ್ಲೋರ್. ಒಂದು ಫೋಟೋಗೋಸ್ಕರ ಜನ ಮೇಲೆ ಹತ್ತಿ ಬರ್ತಾರಾ ಯೋಚ್ನೆ ಮಾಡು' ಅಂದ. ಮಗದೊಬ್ಬ 'ಸುಮ್ನೆ ಎಲ್ಲೋ ಕೆಲ್ಸಕ್ಕೆ ಹೋಗೋದು ಬೆಟ್ರು ಗುರು. ಬಿಸಿನೆಸ್ಸು ನಿಂಗೆ ಮೊದ್ಲೇ ಹೊಸ್ದು. ಬೇಕಾ ನೋಡು' ಅಂದ. 
        ಒಮ್ಮೆ ಕೂತು ಯೋಚಿಸಿದೆ. ಎಲ್ಲರ ಮಾತುಗಳಲ್ಲಿ ಸತ್ಯಾಂಶವಿತ್ತು. ಆದರೆ ಹೆದರುತ್ತಾ  ಕುಳಿತರೆ ನಾನು ಜೀವನದಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದಿಲ್ಲ. ಏಕೆಂದರೆ ಎಲ್ಲಾ ವ್ಯಾಪಾರದಲ್ಲೂ ರಿಸ್ಕ್ ಅನ್ನೋದು ಇದ್ದೇ ಇರುತ್ತೆ. ರಿಸ್ಕ್ ತೆಗೆದುಕೊಂಡು ಗೆದ್ದವರೂ ಇದ್ದಾರೆ, ಸೋತವರೂ ಇದ್ದಾರೆ. ಗೆದ್ದವರು ಹೇಗೆ ಗೆದ್ದರು ಎಂದು ಯೋಚಿಸಿದೆ. ನಾನು ಗೆಲ್ಲಲೇಬೇಕು ಎಂದು ತೀರ್ಮಾನಿಸಿಕೊಂಡು ಮನಸ್ಸಿನಲ್ಲೇ ಒಂದು ಸಂಕಲ್ಪ ಮಾಡಿಕೊಂಡೆ. ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ನಾನು ಜನಪ್ರಿಯ ಛಾಯಾಗ್ರಾಹಕನಾಗುತ್ತೇನೆ ಎಂದು ನಂಬಿದೆ ಅಥವಾ ನನ್ನ ಮನಸ್ಸನ್ನು ನಂಬಿಸಿದೆ ಎಂದು ಹೇಳಬಹುದು.
        ನಾನೊಬ್ಬ ಭಿನ್ನ ಛಾಯಾಗ್ರಾಹಕನಾಗಲು ಏನು ಮಾಡಬೇಕೆಂದು ಯೋಚಿಸಿದೆ. ಆಗ ತಾನೇ ಮಾರುಕಟ್ಟೆಗೆ ಬಂದಿದ್ದ `ಅಂಬ್ರೆಲ್ಲಾಲೈಟ್ಸ್'ಗಳನ್ನು ಮುಂಬೈಗೆ ಹೋಗಿ ಖರೀದಿಸಿ ತಂದೆ. ಜನಪ್ರಿಯನಾಗಲು ಪತ್ರಿಕಾ ಛಾಯಾಗ್ರಾಹಕನಾದರೆ ಹಾದಿ ಸುಗಮವಾಗಬಹುದು ಎಂದು ಸಿನೆಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳಗಳಿಗೆ ಹೋಗಿ ಅಲ್ಲಿದ್ದ ನಟನಟಿಯರ ಚಿತ್ರಗಳನ್ನು ತೆಗೆದೆ. ಆ ಚಿತ್ರಗಳನ್ನು ತೆಗೆದುಕೊಂಡು ಪತ್ರಿಕಾಕಛೇರಿಗಳಿಗೆ ಅಲೆದೆ. ಎಲ್ಲಾ ಕಡೆ ನಿರಾಸೆಯಾದರೂ
 'ವಾರದ ರಾಜಕೀಯ' ಪತ್ರಿಕೆಯ ಸಂಪಾದಕರಾದ ಶ್ರೀ.ಚಂದ್ರಶೇಖರ್ ತೌಡೂರು ಅವರು ನನ್ನ ಚಿತ್ರಗಳನ್ನು ನೋಡಿ ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಅವುಗಳನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಲ್ಲದೇ 'ಹೇಗೂ ಚಿತ್ರಗಳನ್ನು ತೆಗೆಯುತ್ತೀರ. ಹಾಗೆಯೇ  ಅವರ ಸಂದರ್ಶನವನ್ನೂ ಮಾಡಿಕೊಟ್ಟರೆ ನಮಗೆ ಇನ್ನೂ ಅನುಕೂಲ' ಎಂದರು. ಹೀಗೆ ಪತ್ರಿಕಾಛಾಯಾಗ್ರಾಹಕ ಹಾಗೂ ಪತ್ರಕರ್ತನಾಗುವ ಅವಕಾಶ ಲಭಿಸಿತು. ಕ್ರಮೇಣ ಸ್ಟುಡಿಯೋದಲ್ಲಿ ಕೂಡಾ ನಟನಟಿಯರ ಚಿತ್ರಗಳನ್ನು ಕ್ಲಿಕ್ಕಿಸತೊಡಗಿದೆ. ಇದರಿಂದಾಗಿ  ಸ್ಟುಡಿಯೋ ಜನಪ್ರಿಯವಾಗತೊಡಗಿತು. ಬಹುತೇಕ ನವ ನಟನಟಿಯರು ನನ್ನ ಸ್ಟುಡಿಯೋಗೆ ಬಂದು ಪೋರ್ಟ್ ಫೋಲಿಯೋ (ಚಿತ್ರಗಳ ಆಲ್ಬಮ್) ಮಾಡಿಸಿಕೊಳ್ಳುತ್ತಿದ್ದರು. ಇತ್ತ ಬೇರೆ ಬೇರೆ ಪತ್ರಿಕೆಗಳಿಂದಲೂ ನನ್ನ ಚಿತ್ರಗಳಿಗಾಗಿ ಬೇಡಿಕೆ ಬರತೊಡಗಿತು. ಹೀಗಾಗಿ ಕನ್ನಡದ ಬಹುತೇಕ ಪತ್ರಿಕೆಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದೆ. ಇದಲ್ಲದೇ 'ಟೈಮ್ಸ್ ಆಫ್ ಇಂಡಿಯ', 'ಸ್ಟಾರ್ ಡಸ್ಟ್' ಮುಂತಾದ ಇಂಗ್ಲೀಷ್ ಪತ್ರಿಕೆಗಳಿಗೂ ಕೆಲಸ ಮಾಡಿದೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳನ್ನು ಪತ್ರಿಕಾರಂಗದಲ್ಲಿ ಕಳೆದೆ. ಇಂದಿಗೂ ನನಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ತೃಪ್ತಿ ನೀಡುತ್ತಿರುವುದು ನನ್ನ ಫೋಟೋಸ್ಟುಡಿಯೋ. 
        ಇದು ನನ್ನ ಕಥೆಯಾದರೂ ಬಹುತೇಕ ಜನರ ಕಥೆ ಬೇರೆಯದೇ ಆಗಿರುತ್ತದೆ. ಸಾಮಾನ್ಯವಾಗಿ ಬಹುತೇಕ ಜನರು ಇತರರು ನೀಡುವ ನಕಾರಾತ್ಮಕ 
ಸಲಹೆಗಳನ್ನು ಒಪ್ಪುತ್ತಾರೆ. 'ಹೌದಲ್ಲ. ನಷ್ಟವಾದರೆ ಏನು ಮಾಡುವುದು? ನನಗೆ ಅನುಭವವಿಲ್ಲ. ವ್ಯಾಪಾರ ತುಂಬಾ ಕಷ್ಟವೇ ಸರಿ. ಆದ್ದರಿಂದ ಇದಕ್ಕೆ ಕೈ ಹಾಕದಿರುವುದೇ ಒಳಿತೇನೋ ಎನ್ನಿಸದಿರದು'. ಹೀಗೆ ಪ್ರಜ್ಞಾಮನಸ್ಸು ನಮ್ಮ ಗುರಿ ಅಥವಾ ಆಕಾಂಕ್ಷೆಗಳಿಗೆ ತಣ್ಣೀರೆರೆಚುತ್ತಾ ಹೋದರೆ ಜೀವನದಲ್ಲಿ ಏನನ್ನಾದರೂ ಸಾಧಿಸುವುದಾದರೂ ಹೇಗೆ? ಅದು ಅಸಾಧ್ಯವಾದುದಂತೂ ಅಲ್ಲ. ಆದರೆ ಅದಕ್ಕೆ ನೀವು ಮನಸ್ಸಿಗೆ ತರಬೇತಿ ನೀಡಬೇಕಾಗುತ್ತದೆ.
        ನಿಮ್ಮ ಮನಸ್ಸಿಗೆ ನಿಮ್ಮನ್ನು ನಿಮಗೆ ಬೇಕಾದುದೆಡೆಗೆ ಒಯ್ಯುವ ಶಕ್ತಿಯಿದೆ. ಅದು ನಿಮ್ಮ ಗುರಿಯಾಗಿರಲಿ ಅಥವಾ ನಿಮ್ಮ ಆಸೆ ಆಕಾಂಕ್ಷೆಗಳಾಗಿರಲಿ ಅಥವಾ ನಿಮ್ಮ ಮನೋವೇದನೆಯಿಂದ ಹೊರಬರುವುದಿರಲಿ, ನಿಮ್ಮ ಸುಪ್ತಮನಸ್ಸಿಗೆ ಅದನ್ನು ಸಾಕಾರಗೊಳಿಸುವ ಶಕ್ತಿಯಿದೆ. ಮನಸ್ಸನ್ನು ಆ ದಿಕ್ಕಿನೆಡೆಗೆ ಕೊಂಡೊಯ್ಯುವುದು ಹೇಗೆ? ಮುಂದಿನ ಸಂಚಿಕೆಯಲ್ಲಿ... 

Tuesday, 12 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 5

   ಮನಸ್ಸಿನ ಶಕ್ತಿಯನ್ನು ಉಪಯೋಗಿಸುವುದು ಹೇಗೆ?
        ಮನಸ್ಸಿಗೆ ಅಪಾರ ಶಕ್ತಿ ಇರುವುದು ನಿಜವಾದರೂ ಅದನ್ನು ಪಳಗಿಸಿ ಉಪಯೋಗಿಸುವುದು ಹೇಗೆ? ಮನಸ್ಸೆಂಬ ಚಿನ್ನದ ಗಣಿಯಿಂದ ಚಿನ್ನವನ್ನು ತೆಗೆದು ಅಪರಂಜಿ ಮಾಡುವುದು ಹೇಗೆ? ಈ ಮೂಲಕ ಜೀವನದಲ್ಲಿ ಗೆಲುವು ಸಾಧಿಸುವುದು ಹೇಗೆ?
        ಕೆಲವು ವಿಷಯಗಳನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಅರೆಪ್ರಜ್ಞಾಮನಸ್ಸು ನಿಮ್ಮ ಗೆಲುವಿಗೆ ಸದಾ ನಿಮ್ಮ ಸಂಗಾತಿಯಾಗಿರುತ್ತದೆ. ಅರೆಪ್ರಜ್ಞಾಮನಸ್ಸಿನ ಶಕ್ತಿಯ ಬಗ್ಗೆ ನಿಮ್ಮ ಪ್ರಜ್ಞಾಮನಸ್ಸಿಗೆ ಅರಿವು ಮೂಡಿದರೆ ಅದು ನಿಮ್ಮ ಮೊದಲ ಗೆಲುವು. ನಿಮ್ಮ ಜೀವನದ ಸಾಧನೆಯ ಅಥವಾ ಗುರಿಯ ಬಗ್ಗೆ ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಂಡು, ಅದನ್ನು ದೃಶ್ಯೀಕರಿಸಲು ನೀವು
ಸಮರ್ಥರಾದರೆ, ಅದು ನಿಮ್ಮ ಎರಡನೆಯ ಗೆಲುವು. ಗುರಿ ತಲುಪುವವರೆಗೂ ಅವಿರತವಾಗಿ ಮುನ್ನಡೆಯುವುದು ನಿಮ್ಮ ಅಂತಿಮ ಗೆಲುವು. ಅರೆಪ್ರಜ್ಞಾಮನಸ್ಸು ಹಾಗೂ ಪ್ರಜ್ಞಾಮನಸ್ಸುಗಳನ್ನು ಜತೆಗೂಡಿಸಿ ಕೆಲಸ ಮಾಡುವುದು ನಿಮ್ಮ ಯಶಸ್ಸಿನ ಏಣಿ.
        ನಿಮ್ಮ ಕನಸುಗಳನ್ನು ನಿಜವಾಗಿಸುವ ಶಕ್ತಿ ಅರೆಪ್ರಜ್ಞಾಮನಸ್ಸಿಗೆ ಇದೆ. ಅದಕ್ಕೆ ತರ್ಕ, ಚರ್ಚೆ, ವಾದ ಹಾಗೂ ವಿಶ್ಲೇಷಣೆಗಳು ಬೇಕಿಲ್ಲ. ನಿಮ್ಮನ್ನು ನಿಮ್ಮ ಗುರಿಯತ್ತ ಕರೆದೊಯ್ಯುವುದು ಅದರ ಕೆಲಸ. ನಿಮ್ಮ ಅನಿಸಿಕೆ ಬಲವಾಗಿದ್ದು ನಿಮ್ಮ ಕನಸುಗಳ ಮೇಲೆ ನಿಮ್ಮ ನಂಬಿಕೆ ಬಲವಾಗಿದ್ದರೆ, ಅರೆಪ್ರಜ್ಞಾಮನಸ್ಸು ಅದನ್ನು ಅಕ್ಷರಶಃ ನಂಬಿ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗುವುದು.
        ನಿಮ್ಮ ಪ್ರಜ್ಞಾಮನಸ್ಸು ಯಾವುದನ್ನೂ ಸುಲಭವಾಗಿ ನಂಬುವುದಿಲ್ಲ. ಪ್ರಜ್ಞಾಮನಸ್ಸಿನ ಒಪ್ಪಿಗೆ ದೊರಕದಿದ್ದರೆ ಅದು ಅರೆಪ್ರಜ್ಞಾಮನಸ್ಸಿಗೆ ತಲುಪದು.
ಪ್ರಜ್ಞಾಮನಸ್ಸು ಅರೆಪ್ರಜ್ಞಾಮನಸ್ಸಿಗೆ ಬಾಗಿಲಿದ್ದಂತೆ. ಪ್ರಜ್ಞಾಮನಸ್ಸು ಎಲ್ಲವನ್ನೂ ಅಳೆದು ತೂಗಿ ಅರೆಪ್ರಜ್ಞಾಮನಸ್ಸಿಗೆ ತಲುಪಿಸುತ್ತದೆ. ನಿಮ್ಮ ಸಾಧನೆ, ನಿಮ್ಮ ಗುರಿ ತಲುಪುವ ಶಕ್ತಿ ಹಾಗೂ ನಿಮ್ಮ ಸಮಸ್ಯೆಗಳ ಪರಿಹಾರ ನಿಮ್ಮಲ್ಲೇ ಇದೆ ಎನ್ನುವುದನ್ನು ಪ್ರಜ್ಞಾಮನಸ್ಸು ನಂಬಿ ಮುಂದುವರೆದರೆ ನಿಮ್ಮ ಗೆಲುವು ಖಚಿತ.
ಆದರೆ...
        ಸಮಸ್ಯೆ ಇರುವುದು ಇಲ್ಲಿಯೇ. ನಿಮ್ಮ ಪ್ರಜ್ಞಾಮನಸ್ಸನ್ನು ನಂಬಿಸುವುದೇ ಕಷ್ಟದ ಕೆಲಸ. ನಂಬದಿದ್ದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದೇ ಇಲ್ಲ. ಪ್ರಜ್ಞಾಮನಸ್ಸು ಪಂಚೇಂದ್ರಿಯಗಳು ಅನುಮೋದಿಸಿದ್ದನ್ನು ಒಪ್ಪುತ್ತದೆ. ಉದಾಹರಣೆಗೆ 'ನನ್ನ ಕೈಯ್ಯಲ್ಲೊಂದು ಮಾವಿನ ಹಣ್ಣಿದೆ' ಅಂದಾಗ ಕಣ್ಣಿನಿಂದ ನೋಡಿ ಅಥವಾ ಕೈಯ್ಯಿಂದ ಮುಟ್ಟಿ ನೋಡಿ ಅಥವಾ ಮೂಗಿನಿಂದ ಮೂಸಿ ನೋಡಿ
ಅಥವಾ ಅದನ್ನು ಕಚ್ಚಿ ರುಚಿ ನೋಡಿದಾಗ ಮಾತ್ರ ಪ್ರಜ್ಞಾಮನಸ್ಸು ಅಲ್ಲೊಂದು ಮಾವಿನ ಹಣ್ಣು ಇದೆಯೆಂದು ಒಪ್ಪುತ್ತದೆ. ಇಂತಹ ಯಾವ ಅನುಭವವೂ ಆಗದಿದ್ದಾಗ ಮಾವಿನ ಹಣ್ಣು ಅಲ್ಲಿಲ್ಲ ಎಂದು ಕೂಡಾ ನಂಬುತ್ತದೆ.
        ಚಿಕ್ಕ ವಯಸ್ಸಿನಿಂದ ಒದಗಿ ಬಂದ ಸಂಸ್ಕಾರಕ್ಕೆ ತಕ್ಕ ಹಾಗೆ ತನ್ನ ಭಾವನೆಗಳನ್ನು ಹಾಗೂ ನಂಬಿಕೆಗಳನ್ನು ಅದು ಬೆಳೆಸಿಕೊಂಡು ಬಂದಿರುತ್ತದೆ. ಉದಾಹರಣೆಗೆ 'ಶಿವನೇ ಅತ್ಯಂತ ಬಲಿಷ್ಟ ದೇವರು' ಎಂದು ಚಿಕ್ಕಂದಿನಿಂದ ನಂಬಿರುವ ಮನಸ್ಸಿಗೆ, ಶಿವನಿಗಿಂತ ಬೇರೊಬ್ಬ ದೇವರು ಬಲಿಷ್ಟನಾಗಿರುವನು ಎಂದು ಸುಲಭವಾಗಿ ಒಪ್ಪಿಸಲಾಗದು. ಏಕೆಂದರೆ ಆತನ ಪ್ರಜ್ಞಾಮನಸ್ಸು ದಕ್ಕೆ ವಿರುದ್ಧವಾಗಿ ತರ್ಕ ನೀಡಿ ತನ್ನ ಹಳೆಯ ನಂಬಿಕೆಯನ್ನು ಉಳಿಸಿಕೊಳ್ಳುತ್ತದೆ. ಇದೇ ರೀತಿ ಇನ್ನು ಐದು ವರ್ಷಗಳಲ್ಲಿ ನಾನೊಂದು ಮನೆ ಕಟ್ಟುತ್ತೇನೆ ಎಂದು ನೀವು ಆಸೆ ಪಟ್ಟರೆ ಪ್ರಜ್ಞಾಮನಸ್ಸು ಅದು ಸಾಧ್ಯವಿಲ್ಲ ಎಂದು ಯೋಚನೆ ಮಾಡುತ್ತದೆ. ಅದರ ನಕಾರಾತ್ಮಕ ಗುಣ, 'ಏಕೆ ಸಾಧ್ಯವಿಲ್ಲ' ಎನ್ನುವುದಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತದೆ. 'ಅದು ಹೇಗೆ ಸಾಧ್ಯ? ದೂರದಲ್ಲೆಲ್ಲೋ ಜಾಗ ಖರೀದಿ ಮಾಡಬೇಕೆಂದರೂ ಲಕ್ಷಗಟ್ಟಲೆ ಹಣ ಬೇಕು. ಅದಲ್ಲದೇ ಮನೆ ನಿರ್ಮಾಣದ ವೆಚ್ಚ ಗಗನಕ್ಕೇರಿದೆ. ಕಡಿಮೆ ಎಂದರೂ ಒಂದೈವತ್ತು ಲಕ್ಷ ಬೇಕು. ನನ್ನ ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಷ್ಟು ಲಾಭ ಮಾಡಲು ಐದಾರು ವರ್ಷಗಳಲ್ಲಿ ಅಸಾಧ್ಯ' 
ಎಂದೆಲ್ಲಾ ಪ್ರಜ್ಞಾಮನಸ್ಸು ನಿರ್ಧರಿಸಿಬಿಡುತ್ತದೆ. ಹೀಗಿರುವಾಗ ಒಂದು ಸಕಾರಾತ್ಮಕ ಸಂದೇಶ ನಿಮ್ಮ ಅರೆಪ್ರಜ್ಞಾಮನಸ್ಸನ್ನು ತಲುಪಲು ಸಾಧ್ಯವಾಗುವುದೇ ಇಲ್ಲ. ತತ್ಪರಿಣಾಮವಾಗಿ ಅರೆಪ್ರಜ್ಞಾಮನಸ್ಸು ಕೂಡಾ ನಕಾರಾತ್ಮಕವಾಗಿಯೇ ಉಳಿದು ಬಿಡುತ್ತದೆ.
        ಇದೇ ರೀತಿ 'ನಾನೊಬ್ಬ ಯಶಸ್ವೀ ವ್ಯಾಪಾರಿಯಾಗಬೇಕು' ಎಂದು ಬಯಸಿದೊಡನೆ ಪ್ರಜ್ಞಾಮನಸ್ಸು ಮತ್ತದೇ ನಕಾರಾತ್ಮಕ ಕಾರಣಗಳನ್ನು ನೀಡುತ್ತದೆ. 'ಎಷ್ಟೊಂದು ಜನ ಪ್ರಯತ್ನಿಸುತ್ತಿದ್ದಾರೆ. ವ್ಯಾಪಾರದಲ್ಲಿ ಸಾಕಷ್ಟು ಪೈಪೋಟಿ ಇದೆ. ವಾಣಿಜ್ಯಸ್ಥಳಗಳ ಬಾಡಿಗೆಯೂ ಹೆಚ್ಚು. ಹೇಗೋ ಕಷ್ಟ ಪಟ್ಟು  ಹಣ ಹೊಂದಿಸಿದರೂ ವ್ಯಾಪಾರವಾಗದಿದ್ದರೆ ಏನು ಮಾಡುವುದು? ಕಣ್ಣ ಮುಂದೆಯೇ ಹಲವಾರು ಅಂಗಡಿಗಳು ವ್ಯಾಪಾರವಿಲ್ಲದೆ ನಷ್ಟವಾಗಿ ಮುಚ್ಚಿ ಹೋಗುತ್ತಿವೆ. ಇದ್ದಬದ್ದ ಹಣವೆಲ್ಲವೂ ಕೊಚ್ಚಿ ಹೋಗಿ ಸಾಲದ ಸುಳಿಗೆ ಸಿಲುಕಿ ನಿರ್ನಾಮವಾದರೆ?' ಇಂತಹ ಯೋಚನೆಗಳು ಮೂಡಿ, ನಕಾರಾತ್ಮಕ ಸಂದೇಶಗಳು ಅರೆಪ್ರಜ್ಞಾಮನಸ್ಸಿಗೆ
ತಲುಪಿ ಆತ ಪ್ರಯತ್ನ ಪಡಲು ಕೂಡಾ ಹೋಗುವುದಿಲ್ಲ. ಪ್ರಜ್ಞಾಮನಸ್ಸು ನಂಬದೇ ಹೋದರೆ ಅದು ಅರೆಪ್ರಜ್ಞಾಮನಸ್ಸನ್ನು ತಲುಪುವುದಿಲ್ಲ. ಅರೆಪ್ರಜ್ಞಾಮನಸ್ಸು ನಂಬದಿದ್ದರೆ ನಮ್ಮಉದ್ದೇಶದ ಫಲ ಸಿಗುವುದಿಲ್ಲ. 'ಮದುವೆಯಾಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗುವುದಿಲ್ಲ' ಎಂಬಂತಹ ಎಡಬಿಡಂಗಿ ಸ್ಥಿತಿಯಲ್ಲಿ ಸಫಲತೆ ಕಾಣುವುದು ಹೇಗೆ? ಅದಕ್ಕಾಗಿ ಮನಸ್ಸಿಗೆ ತರಬೇತಿ ನೀಡುವ ಕೆಲಸವನ್ನು ನೀವು ಮಾಡಬೇಕಾಗುತ್ತದೆ.
       ಅದಕ್ಕೇನು ಮಾಡುವುದು? ನನ್ನ ಜೀವನದ ಉದಾಹರಣೆಯೊಂದಿಗೆ, ಮುಂದಿನ ಸಂಚಿಕೆಯಲ್ಲಿ ವಿವರಿಸುತ್ತೇನೆ.  

Saturday, 9 November 2019

ಮನಸ್ಸು ಹಾಗೂ ಮನಸ್ಸಿನ ಶಕ್ತಿ - 4

'ನಾನು' ನಾನಾಗಿ ರೂಪಗೊಂಡಿರುವುದು ಹೇಗೆ ?
ಮಗು ಕಣ್ಣು ಬಿಟ್ಟ ಕ್ಷಣದಿಂದ ಪ್ರಜ್ಞಾಮನಸ್ಸು ತಾನು ಹೊಸದಾಗಿ ಅನುಭವಿಸುತ್ತಿರುವುದನ್ನು ಅರೆಪ್ರಜ್ಞಾಮನಸ್ಸಿಗೆ ರವಾನೆ ಮಾಡುತ್ತಿರುತ್ತದೆ. ಆದರೆ ಪ್ರಜ್ಞಾಮನಸ್ಸಿಗೆ ಸುತ್ತಮುತ್ತ ನಡೆಯುತ್ತಿರುವುದು ಏನೆಂಬುದರ ಅರಿವಿರುವುದಿಲ್ಲ. ಅದು ಹೊಸದಾಗಿ ಎಲ್ಲವನ್ನೂ ಗಮನಿಸುತಿರುತ್ತದೆ. ಸರಿತಪ್ಪುಗಳ ಗ್ರಹಿಕೆ ಅದಕ್ಕಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ದೈನಂದಿನ ವ್ಯವಹಾರಗಳನ್ನು ಅರೆಪ್ರಜ್ಞಾಮನಸ್ಸು ದಾಖಲಿಸುತ್ತಾ ಹೋಗುತ್ತದೆ. 
        'ತಾನು ಅತ್ತರೆ ಗಮನ ಸೆಳೆಯಬಹುದು' 'ಅಮ್ಮನ ಎದೆಹಾಲು ಅಥವಾ ಹಾಲಿನ ಬಾಟಲಿ ತನ್ನ ಆಹಾರ' ಎಂದು ಅರೆಪ್ರಜ್ಞಾಮನಸ್ಸಿನಲ್ಲಿ ಗುರುತಿಸಲು ಪ್ರಾರಂಭಿಸುತ್ತದೆ. ತೊಟ್ಟಿಲಲ್ಲಿ ತೂಗಿ ಲಾಲಿ ಹಾಡು ಕೇಳುತ್ತಿದ್ದಂತೆ ನಿಧಾನವಾಗಿ ನಿದ್ದೆಗೆ ಜಾರುವುದು, ಪದೇ ಪದೇ ಕಣ್ಣಿಗೆ ಕಾಣುವ ಮುಖಗಳು ಹಾಗೂ ಅವರ ಪ್ರೀತಿಯ ಆರೈಕೆಯಿಂದ ಇವರು ನನ್ನವರು ಎಂದು ಗುರುತಿಸುವುದು, 
ಹೀಗೆ ಹತ್ತು ಹಲವು ವಿವರಗಳು ಅರೆಪ್ರಜ್ಞಾಮನಸ್ಸಿನಲ್ಲಿ ದಾಖಲಾಗುತ್ತ ಹೋಗುತ್ತವೆ. ಇಲ್ಲಿಂದ ಮುಂದೆ ಭಾವನೆಗಳು, ಹವ್ಯಾಸಗಳು, ನಂಬಿಕೆಗಳು ನಿರ್ಧಾರಗಳು ಬಲವಾಗುತ್ತಾ ಹೋಗುತ್ತವೆ. 
        ಮುಂದೆ ದಿನಕಳೆದಂತೆ ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ನಿಮ್ಮ ಅರೆಪ್ರಜ್ಞಾಮನಸ್ಸು ಬಹಳಷ್ಟು ಅನುವು ಮಾಡಿಕೊಡುತ್ತದೆ. ಅದು ಪ್ರಜ್ಞಾಮನಸ್ಸಿನ ಜೊತೆ ಸೇರಿ ಕೆಲಸ ಮಾಡುತ್ತದೆ. ಉದಾಹರಣೆಗೆ : ನೆನಪಿಸುವುದು. ಯಾವುದೋ ಒಂದು ಸಮಯದಲ್ಲಿ ಥಟ್ಟನೆ ಮರೆತುಹೋದ ಒಂದು ಕೆಲಸ ನೆನಪಾಗುವುದು. ಮರುದಿನ ಬೇಗ ಎದ್ದು ಕೆಲಸಕ್ಕೆ ಹೋಗುವ ಪ್ರಮೇಯವಿದ್ದಾಗ 
ಬೆಳಿಗ್ಗೆ ಥಟ್ಟನೆ ಎಚ್ಚರವಾಗುವುದು ಇತ್ಯಾದಿ. 
        ನಿಮ್ಮ ಜೀವನಾನುಭವದಿಂದ ಪ್ರಜ್ಞಾಮನಸ್ಸಿನ ಮೇಲೆ ಮುದ್ರೆಯೊತ್ತಿರುವ ನಂಬಿಕೆ ಹಾಗೂ ಮೌಲ್ಯಗಳನ್ನೂ ಎತ್ತಿ ಹಿಡಿಯುವ ಕೆಲಸವನ್ನು ಅದು ಮಾಡುತ್ತದೆ. ನಿಮ್ಮ ಪಂಚೇಂದ್ರಿಯಗಳು ಆ ಕ್ಷಣ ಏನನ್ನು ಅನುಭವಿಸುತ್ತಿವೆ ಎಂಬ ಅರಿವು ಅರೆಪ್ರಜ್ಞಾಮನಸ್ಸಿಗೆ ಇರುತ್ತದೆ. 
        ಅರೆಪ್ರಜ್ಞಾಮನಸ್ಸಿನ ಕೆಲಸ ನಿರಂತರ. ಆಯಾ ಕ್ಷಣಕ್ಕೆ ನಿಮಗೆ ಬೇಕಾಗುವ ಮಾಹಿತಿಯನ್ನು ನೀಡುತ್ತಾ ಅನವಶ್ಯಕ ಮಾಹಿತಿಯನ್ನು ಹಿಂದೆ ಸರಿಸುತ್ತದೆ. ಉದಾಹರಣೆಗೆ ಪರೀಕ್ಷೆಗೆ ಕುಳಿತಾಗ ಪ್ರಶ್ನೆಯನ್ನು ನೋಡುತ್ತಿದ್ದಂತೆ ಓದಿದ ಇತರ ಎಲ್ಲಾ ವಿಷಯಗಳನ್ನು ಹಿಂದಿಕ್ಕಿ, ಆ ಪ್ರಶ್ನೆಯ ಉತ್ತರಕ್ಕೆ ಮಹತ್ವವನ್ನು ನೀಡುತ್ತದೆ.
        ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಸಂಬಂಧ ಹಾಗೂ ವಿಚಾರ ವಿನಿಮಯ ಮಾತುಗಳಲ್ಲಿ ಇರುವುದಿಲ್ಲ. ಅದು ಭಾವನೆ, ಅನುಭವದ ಸಂವೇದನೆ, ಚಿತ್ರಣ, ಕನಸು ಮುಂತಾದವುಗಳ ಮೂಲಕ ವ್ಯಕ್ತ ಪಡಿಸುತ್ತವೆ. ಅರೆಪ್ರಜ್ಞಾಮನಸ್ಸಿನ ಮುಖ್ಯ ಗುಣವೆಂದರೆ ಅದು ಪ್ರಜ್ಞಾಮನಸ್ಸಿನ ಆಜ್ಞೆಗಳಿಗೆ/ಅಭಿಪ್ರಾಯಗಳಿಗೆ ತಲೆ ಬಾಗುವುದು. ಆದರೆ ನಿಮ್ಮ ಪ್ರಜ್ಞಾಮನಸ್ಸಿನ ಮೂಲಕ ಯಾವ ವಿಚಾರಗಳ ಬೀಜ ಬಿತ್ತುವಿರೋ ಅದು ಹೆಮ್ಮರವಾದಂತೆ ನಿಮ್ಮ ಪ್ರಜ್ಞಾಮನಸ್ಸು ಅದರ ವಶವಾಗಿ ಬಿಡುತ್ತದೆ. 
        ನೀವು ಬಿತ್ತುವ ನಕಾರಾತ್ಮಕ ವಿಷಯಗಳಾಗಲೀ, ಸಕಾರಾತ್ಮಕ ವಿಷಯಗಳಾಗಲೀ, ದಿನಗಳೆದಂತೇ ಪ್ರಜ್ಞಾಮನಸ್ಸು ಆ ವಿಷಯಗಳಿಗೆ ಬಲವಾಗಿ ಸ್ಪಂದಿಸುತ್ತದೆ. ಉದಾಹರಣೆಗೆ ದುಡ್ಡು ಕದಿಯಲು ಪ್ರಾರಂಭಿಸಿದರೆ, ಮುಂದೊಮ್ಮೆ ನಿಮ್ಮ ಪ್ರಜ್ಞಾಮನಸ್ಸಿಗೆ ಬೇಡವೆನಿಸಿದರೂ ಅರೆಪ್ರಜ್ಞಾ ಮನಸ್ಸು ಒತ್ತಡ ಹೇರಿ ಮತ್ತೆ ಕದಿಯಲು ಪ್ರೇರೇಪಿಸುತ್ತದೆ.  ನಾವೇ ಕಟ್ಟಿಕೊಟ್ಟಿರುವ ಕೋಟೆಯಲ್ಲಿ ವಿಹರಿಸುತ್ತಿರುವ ಅರೆಪ್ರಜ್ಞಾಮನಸ್ಸನ್ನು ಮತ್ತೆ ಬದಲಿಸುವುದು ಕಷ್ಟಾಸಾಧ್ಯ.
        ಅರೆಪ್ರಜ್ಞಾಮನಸ್ಸಿನ ಉಗ್ರಾಣವೇ ಸುಪ್ತಮನಸ್ಸು.ಇಲ್ಲಿ ನಿಮ್ಮ ಜೀವನದಲ್ಲಿ ಹುಟ್ಟಿದ ಕ್ಷಣದಿಂದ ನಡೆದ ಎಲ್ಲಾ ಘಟನೆಗಳು ದಾಖಲಾಗಿರುತ್ತವೆ.
ಅರೆಪ್ರಜ್ಞಾಮನಸ್ಸು ಮರೆತಿರುವ ವಿಷಯಗಳು ಕೂಡಾ ಇಲ್ಲಿ ಜಮೆಯಾಗಿರುತ್ತವೆ.
ಈ ಭಾಗ ಸ್ವಲ್ಪ ನಿಗೂಢ ಹಾಗೂ ಕೆಲವೊಮ್ಮೆ ವಿವರಿಸಲು ಆಗದ ಕಾರ್ಯಗಳನ್ನು
ಅದು ನಿರ್ವಹಿಸುತ್ತದೆ. ಇಲ್ಲಿ ಹುದುಗಿರುವ ಒಂದು ನೆನಪು ಅಥವಾ ಒಂದು ಘಟನೆ ಭುಗಿಲೆದ್ದಾಗ ಆತನ ವಿಚಿತ್ರ ನಡವಳಿಕೆಗೆ ಕಾರಣವಾಗಬಹುದು. ಸಾಧಾರಣವಾಗಿ ಪ್ರಜ್ಞಾಮನಸ್ಸಿಗೆ ಸಿಗದ  ಮನಸ್ಸಿನ ಈ ಭಾಗವನ್ನು ಸಮ್ಮೋಹಿನಿಯಿಂದ ಹೊರತರಬಹುದಾಗಿದೆ. 
        ಅರೆಪ್ರಜ್ಞಾ ಮನಸ್ಸು ನಮ್ಮ ಜೀವನದ ಹಲವಾರು ನೆನಪುಗಳು, ಅನುಭವಗಳು, ಸಂಸ್ಕಾರ, ಕಲಿಕೆ, ಗ್ರಹಿಕೆ ಎಲ್ಲವೂ ಸೇರಿ ಅವುಗಳನ್ನೆಲ್ಲಾ ನಮ್ಮ ಅರಿವಿಲ್ಲದೇ ವಿಶ್ಲೇಷಿಸಿ ಇಂದಿನ ನನ್ನನ್ನು `ನಾನು' ಆಗಿ ರೂಪಿಸಿರುತ್ತದೆ. ಹಲವಾರು ವಿಷಯಗಳನ್ನು ನಾವು ಮರೆತಿದ್ದರೂ ಅದರ ಪ್ರಭಾವ 'ನಮ್ಮ' ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುತ್ತದೆ. ಇದರ ಆಧಾರದ ಮೇಲೆ ನಮ್ಮ ನಂಬಿಕೆಗಳು ಯೋಚನಾಲಹರಿ, ನಡವಳಿಕೆ, ವೈಚಾರಿಕತೆ, ವಿಶ್ಲೇಷಣೆ ಮುಂತಾದವು ನಮ್ಮೊಂದಿಗೆ ಬೆಸೆದುಕೊಂಡಿರುತ್ತವೆ. 
        ನೆನಪಿಗೆ ಬಾರದಿರುವ ಮನಸ್ಸಿನ ಭಾಗವನ್ನು, ಸುಪ್ತ ಮನಸ್ಸು ಅಥವಾ ಪ್ರಜ್ಞಾರಹಿತಮನಸ್ಸುಎಂದು ಕರೆಯಬಹುದು. ಅರೆಪ್ರಜ್ಞಾಮನಸ್ಸಿನಲ್ಲಿ ನೆನಪುಗಳು, 
ಚಿಂತನೆಗಳು ಹಾಗೂ ಚಟುವಟಿಕೆಗಳು ತಾನೇ ತಾನಾಗಿ ಹಸಿರಾಗಿರುತ್ತವೆ. ನಿಮಗೆ ಪ್ರಶ್ನೆ ಕೇಳಿದೊಡನೆ ನೆನಪಿಗೆ ಬರುವ ಉತ್ತರಗಳು ಅರೆಪ್ರಜ್ಞಾಮನಸ್ಸಿನಲ್ಲಿರುತ್ತವೆ. ಬಯಸಿದರೂ, ಹುಡುಕಿದರೂ, ತಿಣುಕಾಡಿದರೂ ನೆನಪಿಗೆ ಬಾರದಿರುವ ಅಂಶಗಳು 
ಸುಪ್ತ ಮನಸ್ಸಿನಲ್ಲಿರುತ್ತವೆ. 
        ಸುಪ್ತ ಮನಸ್ಸು ದೊಡ್ಡದೊಂದು ಉಗ್ರಾಣವಿದ್ದಂತೆ. ಅದರ ಸಂಗ್ರಹಣಾ ಸಾಮರ್ಥ್ಯಕ್ಕೆ ಮಿತಿಯಿಲ್ಲ. ನಿಮ್ಮ ಜೀವನದ ಎಲ್ಲಾ ವಿವರಗಳು ಅಲ್ಲಿ ಜಮೆಯಾಗಿರುತ್ತವೆ. ಪ್ರಜ್ಞಾಮನಸ್ಸು ಹಾಗೂ ಅರೆಪ್ರಜ್ಞಾಮನಸ್ಸಿನ ಮೂಲಕ ಹರಿದು ಬರುವ ಅಪಾರ ವಿಷಯಗಳನ್ನು ನಿರಂತರ ಸಂಪರ್ಕವಿಟ್ಟುಕೊಂಡು ಸುಪ್ತ ಮನಸ್ಸು ದಾಖಲಿಸುತ್ತಾ ಇರುತ್ತದೆ.