Monday, 21 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 15

        ಗುರುಗಳು ಬಂದರು. ನನ್ನೆಲ್ಲಾ ಅನುಭವಗಳನ್ನು ಹಂಚಿಕೊಂಡೆ. 'ಶಿವನನ್ನಾಗಲೀ ಶಿವನ ಮುಖವನ್ನಾಗಲೀ ನೋಡಲಿಲ್ಲ'ಎಂದೆ. 
'ಅಡ್ಡಿಯಿಲ್ಲ, ಈ ಅನುಭವಗಳೇ ಮುಖ್ಯ. ಭಾವ, ಭಾವದಿಂದ ಅನುಭವ' ಎಂದು ಹೇಳಿ ಸಮಾಧಾನ ಮಾಡಿದರು. 
        ಅಂದು ಗುರುಗಳಿಗೆ ನನ್ನ ಅಡುಗೆ ರುಚಿ ತೋರಿಸಿದೆ. 'ಅಡ್ಡಿಯಿಲ್ಲಪ್ಪಾ, ಪಾಕ ಶಾಸ್ತ್ರದಲ್ಲೂ ಪ್ರವೀಣನೇ' ಮೊದಲ ಬಾರಿಗೆ ಸ್ವಲ್ಪ ತಮಾಷೆಯ ಧ್ವನಿಯಲ್ಲಿ ಮಾತನಾಡಿದ್ದರು ಅವರು. ನಂತರ ಸಂಜೆ ಮಾತನಾಡುತ್ತಾ ಕುಳಿತಿದ್ದೆವು. 'ತಂತ್ರ ಸಾಧನೆಯ ಪೂರ್ತಿ ವಿವರಗಳನ್ನು ಬರೆದಿಡಲೇ' ಕೇಳಿದೆ ನಾನು. 'ಏಕೆ?' ತಕ್ಷಣ ಬಂತು ಪ್ರಶ್ನೆ.
 'ಇದು ನಶಿಸಿಹೋಗದಂತೆ ಮುಂದಿನ ಸಂತತಿಗೂ ಉಳಿಸಲು...' 
'ನೀನ್ಯಾರು ಇದನ್ನು ಉಳಿಸಲು? ಇದನ್ನು ಯಾರೂ ಉಳಿಸಬೇಕೆಲ್ಲ, ಅಳಿಸಲೂ ಆಗುವುದಿಲ್ಲ' ಎಂದು ಹೇಳಿ, ನನ್ನ ಮುಖ ಸಪ್ಪೆಯಾಗಿದ್ದುದನ್ನು ಗಮನಿಸಿ ' ಇದು ಅನಾದಿಕಾಲದಿಂದ ಉಳಿದು ಬಂದಿದೆ. ಯಾರಿಗೆ ಬೇಕು ಎನ್ನುವ ತವಕವಿದೆಯೋ, ಅವರಿಗೆ ಹೇಗಾದರೂ ಸಿಗುತ್ತದೆ. ಬೇಕು ಅನ್ನುವವರು ಇರುವ ತನಕ ಅದು ಇರುತ್ತದೆ, ಯಾರಿಗೂ ಬೇಡವಾದಾಗ ಅದು ಇದ್ದೇನು ಪ್ರಯೋಜನ? ಆದರೆ ಅಂತಹ ಕಾಲ ಬಾರದು. ಈ ವಿದ್ಯೆಯ ತಾಕತ್ತು ಅಂತಹದ್ದು... ಚಿಂತಿಸಬೇಡ' ಎಂದು ಮೃದುವಾಗಿ ಹೇಳಿದರು. (ಆ ಕಾರಣಕ್ಕಾಗಿಯೇ ನಾನು ಈ ನನ್ನಬ್ಲಾಗ್ ನಲ್ಲಿ ವಿಧಿ ವಿಧಾನಗಳ ಬಗ್ಗೆ ವಿವರವಾಗಿ ಬರೆಯಲಿಲ್ಲ. ನನ್ನ ಅನುಭವಗಳ ಬಗ್ಗೆ ಹೇಳಲು ಅವಶ್ಯವಿರುವಷ್ಟೇ ಬರೆದಿದ್ದೇನೆ) 
        ಇದಾಗಿ ಕೆಲ ದಿನಗಳಲ್ಲಿ 'ಏನಪ್ಪಾ ವೈಷ್ಣವಾ? ರಾಮ,ಕೃಷ್ಣ, ಹನುಮಂತ ಇತ್ಯಾದಿ ದೇವರ ಆರಾಧನೆಯ ಮೇಲೆ ಒಲವಿದೆಯೇ?' ಎಂದು ತಮಾಷೆಯಾಗಿ ಕೇಳಿದರು.  ತಂತ್ರ ವಿದ್ಯೆ ಕೇವಲ ಶಿವ ಶಕ್ತಿಯರಿಗೆ ಸಂಬಂಧ ಪಟ್ಟಿದ್ದೆಂದು ಭಾವಿಸಿದ್ದೆ. 'ತಂತ್ರದಲ್ಲಿ ವಿಷ್ಣುವಿನ ಆರಾಧನೆಯೂ ಉಂಟೇ?' ಅಚ್ಚರಿಯಿಂದ ಕೇಳಿದೆ. 'ತಂತ್ರ ವಿದ್ಯೆ, ದೇವರನ್ನು ಆರಾಧಿಸುವ ಒಂದು ವಿಶೇಷ ತಂತ್ರವನ್ನು ಒಳಗೊಂಡಿರುವ ಸಾಧನಾಕ್ರಮ. ಯಾವ ದೇವರನ್ನಾದರೂ ಆರಾಧಿಸಲು ಇದರಲ್ಲಿ ತನ್ನದೇ ಆದ ಕ್ರಮಗಳಿವೆ. ನಿನಗೆ ಆಸಕ್ತಿ ಉಂಟೋ, ಇಲ್ಲವೋ? ಅದನ್ನು ಮೊದಲು ಹೇಳು' ಎಂದರು. 'ಖಂಡಿತ ಉಂಟು' ಎಂದು ಖಡಾ ಖಂಡಿತವಾಗಿ ಹೇಳಿದೆ.
         ಹನುಮಂತನ ಉಪಾಸನೆಯೊಂದಿಗೆ ನನ್ನ ಸಾಧನೆಯ ಎರಡನೆಯ ಘಟ್ಟ ಪ್ರಾರಂಭವಾಯಿತು. ಹನುಮಂತನ ಉಪಾಸನೆ ಹನ್ನೊಂದು ದಿನಗಳ ಉಪಾಸನೆ. ಇದರಲ್ಲಿ ಕೆಲವು ಕಟ್ಟಳೆಗಳಿವೆ. ಚಿಕ್ಕದೊಂದು ಗಂಧದ ತುಂಡಿನಲ್ಲಿ ನಾನೇ ನನ್ನ ಕೈಯ್ಯಾರೆ ನನಗೆ ತಿಳಿದಂತೆ ಆಂಜನೇಯನ ಮೂರ್ತಿಯನ್ನು ಕೆತ್ತಬೇಕಾಗಿತ್ತು. ಹನ್ನೊಂದು ದಿನಗಳು ಕೇವಲ ಕೆಂಪು ಬಟ್ಟೆಯನ್ನೇ ಉಟ್ಟುಕೊಳ್ಳಬೇಕಾಗಿತ್ತು. ನೆಲದ ಮೇಲೆ ಮಲುಗುವಾಗಲೂ ಕೆಂಪು ಬಟ್ಟೆಯನ್ನೇ ಹಾಸಬೇಕಾಗುತ್ತಿತ್ತು. ನಾನು ಮನೆಯಿಂದ ಹೊರಗೆ ಓಡಾಡುವುದು ನಿಷಿದ್ಧವಾಗಿತ್ತು. ಎಲ್ಲವನ್ನೂ ಗುರುಗಳೇ ಪೂರೈಸುತ್ತಿದ್ದರು. ವೀಳ್ಯದ ಎಲೆಯೊಂದಕ್ಕೆ ಕಾಡಿಗೆ(ಅಂಜನ)ಹಚ್ಚಿ ಅದನ್ನು ನೋಡುತ್ತಾ ಆಂಜನೇಯನ ಧ್ಯಾನ ಮಾಡಬೇಕು. 
        ಅಂದು ನನಗಾದ ಅನುಭವವನ್ನು ಹಂಚಿಕೊಳ್ಳುತ್ತೇನೆ. ಮೊದಲಿಗೆ ಆಂಜನೇಯನ ಉಪಾಸನೆ ಮಾಡುವ ಸಮಯದಲ್ಲಿ ಇಡೀ ದಿನ ಆಂಜನೇಯನ ಕುರಿತಾಗಿಯೇ ಯೋಚಿಸುತ್ತಿರಬೇಕು. ಆತನ ಬಾಲ್ಯ, ತುಂಟಾಟ, 
ಆತನಗರಿವಿಲ್ಲದಿದ್ದರೂ ಆತನಲ್ಲಿರುವ ಅತ್ಯದ್ಭುತ ಶಕ್ತಿ... ಹೀಗೆ ಆತನ ಬಗ್ಗೆಯೇ ಯೋಚಿಸುತ್ತಾ ಆಂಜನೇಯನ ಭಾವವನ್ನು ಮೈತುಂಬಿಕೊಳ್ಳಬೇಕು. ಈ ಸಾಧನೆ  ಮಾಡುತ್ತಿರುವಾಗ ನಮ್ಮಲ್ಲಿಯೂ ಪರಿವರ್ತನೆಗಳು ಕಾಣುತ್ತವೆ. ಒಂದಷ್ಟು ತುಂಟಾಟ, ಚೇಷ್ಟೆಯ ಸ್ವಭಾವ ಮುಂತಾದವು ತನ್ನಂತೆ ತಾನೇ ನಮ್ಮನ್ನು ಆವರಿಸಿಕೊಳ್ಳುತ್ತದೆ. 
        ಒಂಭತ್ತು ದಿನಗಳು ಕಳೆದವು. ಹತ್ತನೇ ದಿನ, ಎಲೆಯನ್ನು ನೋಡುತ್ತಾ ಕುಳಿತಾಗ ಕಪ್ಪು ಅಂಜನ ಕೆಂಪಾಗಿ ಮಾರ್ಪಟ್ಟು ಧಗಧಗಿಸುವ ಬೆಂಕಿಯಂತೇ ಕಾಣುತ್ತಿತ್ತು. 
        ಹನ್ನೊಂದನೆಯ ದಿನ, ಸಾಧನೆಯ ಅಂತಿಮ ದಿನ. ಹನುಮಂತನ ಸಾಕ್ಷಾತ್ಕಾರವಾಗುವ ದಿನ. ಹನುಮಂತ ಹೇಗಿರಬಹುದು ಎಂಬ ಚಿಂತನೆಯಲ್ಲಿಯೇ ಮನಸ್ಸು ಮುಳುಗಿತ್ತು. ಪರ್ವತ ಕೈಯಲ್ಲಿ ಹಿಡಿದ ವಾಯುಪುತ್ರ, ಎದೆ ಸೀಳಿ ರಾಮನನ್ನು ತೋರಿಸಿದ ರಾಮಭಕ್ತ, ಗದೆಯನ್ನು ಹಿಡಿದು ನಿಂತ ಗಟ್ಟಿಮುಟ್ಟಾದ ಅಂಗಸೌಷ್ಠವದ ಹನುಮ... ಹೀಗೆ ನನಗೆ ನೆನಪಿದ್ದ ಎಲ್ಲಾ ರೂಪಗಳನ್ನು ಮನಸ್ಸಿನಲ್ಲಿಯೇ ಮೂಡಿಸುತ್ತಿದ್ದೆ. ನಾನು ಮಂತ್ರವನ್ನು ಜಪಿಸುತ್ತಾ ಆ ಸಾಕ್ಷಾತ್ಕಾರದ ಕ್ಷಣಕ್ಕೆ ಕಾಯುತ್ತಿದ್ದೆ. ಜಪದ ಸಂಖ್ಯೆ ಮುಗಿಯುವ ಮುನ್ನವೇ ಮಹಡಿ ಮೆಟ್ಟಲ ಬಳಿಯಿಂದ ಯಾರೋ ಕರೆದಂತಾಯಿತು. ತಿರುಗಿ ನೋಡಿದೆ. 
        ಒಂದು ಕ್ಷಣ ಗುಂಡಿಗೆ ನಿಂತ ಅನುಭವ! ಮಹಡಿಯ ಮೆಟ್ಟಲ ಬಳಿ ಕುಳಿತಿದ್ದದ್ದು ಸಾಕ್ಷಾತ್ ಹನುಮಂತ! ನಾನಂದುಕೊಂಡ ಯಾವ ರೂಪದಲ್ಲೂ ಆತನಿರಲಿಲ್ಲ. ಮೈತುಂಬಾ ಮೃದುವಾದ ಬಿಳೀ ರೋಮವನ್ನು ಹೊಂದಿದ್ದ, ಇಳಿವಯಸ್ಸಿನ ಹನುಮ. ವಯಸ್ಸಾಗಿದ್ದರೂ ಆ ಕೆಂಪು ಮುಖದಲ್ಲಿ ಪ್ರಜ್ವಲಿಸುವ ಕಳೆ. ಇದನ್ನು ಬರೆಯುತ್ತಿರುವಾಗಲೇ ನನಗೆ ರೋಮಾಂಚನವಾಗುತ್ತಿದೆ. 'ಇದನ್ನೆಲ್ಲಾ ಅನುಭವಿಸಿದ್ದು ನಾನೇ ಅಲ್ಲವೇ?' ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೇನೆ. ನಿಜವಾಗಿ ಭಾವುಕನಾಗಿದ್ದೇನೆ. 

'ನಾ ಕಂಡ ಹನುಮಂತ' ಹೀಗಿದ್ದ ಎನ್ನಬಹುದು. (ಫೋಟೋಷಾಪ್ ನಲ್ಲಿ ನಾನು ಆದಷ್ಟು ಹತ್ತಿರವಾಗಿ ಮೂಡಿಸಲು ಪ್ರಯತ್ನಿಸಿದ್ದೇನೆ) 

Thursday, 17 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 14

        ಅಷ್ಟು ಹತ್ತಿರದಿಂದ ನಾಗರಹಾವನ್ನು ನಾನು ನೋಡಿದ್ದು ಅದೇ ಮೊದಲು. ಮಿರ ಮಿರ ಮಿರುಗುವ ನಾಗರ ಹಾವು! ಅಲ್ಲಾಡದೇ ಹೆಡೆ ಎತ್ತಿ ನಿಂತಿದೆ. ನಾನಂತೂ ಉಸಿರು ಬಿಗಿ ಹಿಡಿದು ನೋಡುತ್ತಿದ್ದೆ!!
        ಒಂದು ಕ್ಷಣದಲ್ಲಿ ನೂರಾರು ಆಲೋಚನೆಗಳು ತಲೆಯಲ್ಲಿ ಸುಳಿದವು. 'ಹತ್ತು ಸಾವಿರ ಬಾರಿ ಜಪ ಮಾಡುವವರೆಗೂ ಕುಳಿತ ಜಾಗದಿಂದ ಕದಲ ಬಾರದೆಂದು ಗುರುಗಳು ಹೇಳಿದ್ದಾರೆ. ಕೇವಲ ಅರ್ಧ ಅಡಿ ದೂರದಲ್ಲಿ ಹಾವು ಹೆಡೆ ಎತ್ತಿ ಕುಳಿತಿದೆ. ಕಣ್ಣು ಎವೆಯಿಕ್ಕುವಷ್ಟರಲ್ಲಿ ಬಡಿದರೆ ಏನು ಮಾಡುವುದು? ಜಪ,ತಪ,ಸಾಧನೆ ಇವೆಲ್ಲಾ ಬೇಕಾ? ಎದ್ದು ಓಡಿ  ಹೋಗಲೇ? ಅಥವಾ ಏನಾದರಾಗಲಿ ಎಂದು ಜಪವನ್ನು ಮುಂದುವರೆಸಲೇ? ಏನು ಸಾಧನೆ ಮಾಡಬೇಕಾದರೂ ಪ್ರಾಣವಿದ್ದರೆ ತಾನೇ? ಈ ಸಾಧನೆಗಳೆಲ್ಲಾ ಬಹಳ ಕಷ್ಟಕರವಾಗಿದೆ. ಕೊನೆಗೂ ಏನಾದರೂ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಸುಮ್ಮನೆ ಸಿಕ್ಕಿಹಾಕಿಕೊಳ್ಳುವ ಬದಲು ಮೆಲ್ಲಗೆ ಹಿಂದೆ ಸರಿಯಲೇ?' ಹಲವಾರು ದ್ವಂದ್ವಗಳು, ಸಂದೇಹಗಳು. ಏನು ಮಾಡುವುದೆಂಬ ತೀರ್ಮಾನಕ್ಕೆ ಬಾರದಾದೆ. ನಂತರ ಒಂದು ಕ್ಷಣ ಯೋಚಿಸಿದೆ. 'ನಾನು ಕಣ್ಣು ಬಿಟ್ಟು ನೋಡಿದ್ದುದರಿಂದ ಹಾವಿರುವುದು ಗೊತ್ತಾಯಿತು. ಇಲ್ಲದಿದ್ದರೆ ಹಾಗೇ ಜಪವನ್ನು ಮುಂದುವರೆಸುತ್ತಿದ್ದೆ. ಏನಾದರಾಗಲಿ, ಸತ್ತರೂ ಯಾವುದೋ ಸಾಧನೆ ಮಾಡಿ ಸತ್ತ ಎಂದಾಗುತ್ತದೆ. ಅಷ್ಟೇ ತಾನೇ' ಎಂದು ಮನದಲ್ಲಿ ಧೈರ್ಯ ತಂದುಕೊಂಡು ಜಪವನ್ನು ಮುಂದುವರೆಸಿದೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಹರಿವಾಣದ ತಟ್ಟೆಯ ಸದ್ದಾಯಿತು. ಈ ಬಾರಿ ನಾನು ಕಣ್ಣು ಬಿಡಲಿಲ್ಲ. ಕೆಲ ಕಾಲ ಕಳೆದ ಮೇಲೆ ಹೊರಗೆ ರಸ್ತೆಯಲ್ಲಿ ಗದ್ದಲ. ಕೆಲವರು ಕೊಂಕಣಿಯಲ್ಲಿ ಮಾತನಾಡುತ್ತಿದ್ದರು. 'ಅಯ್ಯೋ ಹಾವು...  ಇರು ಇರು ಹೊಡೆಯಬೇಡ .. ಆ ಕೋಲಿನಿಂದ ತಳ್ಳು.. ಸೈಕಲ್ ಮೇಲೆ ಸುತ್ತಿಕೊಂಡು ಹೋಗುತ್ತಿದೆ..ದೂರ ನಿಲ್ಲು... ಬಿಡು..ಬಿಡು .. ಆ ತೋಡಿನ ಹತ್ತಿರ ಹೋಗುತ್ತಿದೆ.. ' ಎಂದೆಲ್ಲಾ ಕೂಗಾಡುತ್ತಿದ್ದರು.             ಸ್ವಲ್ಪ ಹೊತ್ತಿನ ಮೇಲೆ ಎಲ್ಲಾ ಶಾಂತವಾಯಿತು, ಬಹುಶಃ ಆ ಹಾವು ಅಲ್ಲಿಂದ ಹೋಗಿರಬೇಕು. ಎಷ್ಟು ಏಕಾಗ್ರತೆ ಸಾಧಿಸಿದ್ದೇನೆ  ಕೊಂಡಿದ್ದೆಲ್ಲಾ ಹುಸಿಯಾಗಿತ್ತು. ಅಷ್ಟೂ ಹೊತ್ತು ಮನಸ್ಸು ಹಾವಿನ ಸುತ್ತಲೇ ಸುತ್ತುತ್ತಿತ್ತು 
ಜಪದ ಸಂಖ್ಯೆ ಮುಗಿದ ಮೇಲೆ ಮತ್ತೆ ಕಣ್ಣು ಬಿಟ್ಟೆ. ಆ ಹಾವು ಎಲ್ಲಿಂದ ಬಂದಿರಬಹುದು ಎಂದು ಸುತ್ತೆಲ್ಲಾ ನೋಡಿದೆ. ನಂತರ ಮೇಲೆ ನೋಡಿದೆ. ಮೇಲೆ ತೇಗದ ಮರದಲ್ಲಿ ಮಾಡಿದ ಛಾವಣಿ ಇತ್ತು. ಅದಕ್ಕೆ ಅಡ್ಡಡ್ಡವಾಗಿ ಮರದ ತೊಲೆಗಳೂ ಇದ್ದವು. ಬಹುಶಃ ಅದರ ಸಂದಿಯಿಂದ ಬಂದಿರಬಹುದು ಎಂದು ಊಹಿಸಿದೆ. 
        ಮಾರನೇ ದಿನ ನನ್ನ ರಘುರಾಮ ಅಜ್ಜನ ಅಂಗಡಿಗೆ ಹೋಗಿ ಹೀಗೆ ಕೊಠಡಿಯಲ್ಲಿ ಹಾವು ಬಂದಿತ್ತು ಎಂದು ದೊಡ್ಡದಾಗಿ ಹೇಳಿದೆ. ಅದಕ್ಕೆ ಅವರು 'ಅದೆಲ್ಲಾ ಇಲ್ಲಿ ಸಾಮಾನ್ಯ, ಒಂದು ನಿಮಿಷ' ಎಂದು ಹೇಳಿ ಅವರ ಅಂಗಡಿಯ ಮಾಡಿನ ಬಳಿ ಕಣ್ಣಾಡಿಸುತ್ತಾ 'ಅಲ್ಲಿ ನೋಡು, ಅಲ್ಲೊಂದು ಹಾವು ಹೋಗುತ್ತಾ ಇದೆ. ಅವು ಇಲಿಯನ್ನು ತಿನ್ನಲು ಬರುತ್ತವೆ, ಮನುಷ್ಯರಿಗೆ ಏನೂ ಮಾಡುವುದಿಲ್ಲ. ಅದಕ್ಕೆ ವಿಷವಿಲ್ಲ, ಅದನ್ನು 'ದೀವೊಡು' (ಕೊಂಕಣಿ ಭಾಷೆಯಲ್ಲಿ) ಅಂತ ಕರೀತಾರೆ' ಎಂದು ಆರಾಮವಾಗಿ ತಮ್ಮ ವ್ಯಾಪಾರವನ್ನು ಮುಂದುವರೆಸುತ್ತಾ ಹೇಳಿದರು. 'ಆದರೆ ನನ್ನ ಕೊಠಡಿಗೆ ಬಂದದ್ದು ನಾಗರ ಹಾವು' ಎಂದು ಮತ್ತೆ ನೆನಪಿಸಿದೆ. 'ಹೌದಾ' ಎಂದು ನಗುತ್ತಾ ಇನ್ನೊಬ್ಬ ಗಿರಾಕಿಗೆ ಪೊಟ್ಟಣ ಕಟ್ಟಿ ಕೊಟ್ಟು 'ಒಟ್ಟು ಹದಿನೆಂಟು ರೂಪಾಯಿ ಆಯಿತು' ಅಂದರು ಅವನಿಗೆ! 'ನಾನು ಬರುತ್ತೇನೆ' ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ. 
        ನಾಗರ ಹಾವಿಗೂ ನಮ್ಮ ದೇವಸ್ಥಾನಕ್ಕೂ ಇರುವ ಸಂಬಂಧದ ಕುರಿತಾಗಿ ಕೆಲವು ವಿಷಯಗಳನ್ನು ಹೇಳ ಬಯಸುತ್ತೇನೆ. ನಮ್ಮ ದೇಗುಲಕ್ಕೆ ಸಂಬಂಧ ಪಟ್ಟ ಆಸ್ತಿಯೊಂದಿದೆ. ಅದನ್ನು 'ಮಂಡಾಡಿ' ಎಂದು ಕರೆಯುತ್ತಾರೆ. ಅಲ್ಲಿ 'ನಾಗಬನ' ಎಂಬ ಜಾಗವಿದೆ. ನಾಗರಪಂಚಮಿಯಂದು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಾನು ಚಿಕ್ಕಂದಿನಿಂದಲೂ ಬಹು ದೂರ ನಿಂತೇ ಅದನ್ನೆಲ್ಲಾ ಗಮನಿಸುತ್ತಿದ್ದೆ. ಏಕೆಂದರೆ ಅಲ್ಲಿ ಜೀವಂತ ಹಾವುಗಳು ಓಡಾಡುತ್ತಿರುತ್ತವೆ ಎಂದು ನನಗೆ ಗೊತ್ತಿತ್ತು! 
        ನಮ್ಮ 'ಅಪ್ಪಿಮಾಯಿ' ನಾನು ಚಿಕ್ಕವನಿದ್ದಾಗ ಹಿಂದೆ ನಡೆದ ಒಂದು ಘಟನೆಯನ್ನು ಹೇಳಿದ್ದರು. ಅದೇನೆಂದರೆ ನವರಾತ್ರಿಯ ಸಮಯದಲ್ಲಿ ಒಮ್ಮೆ ಖೀರಿ (ಪಾಯಸ) ಮಾಡಿ ಒಲೆಯಿಂದ ಇಳಿಸುವಾಗ ಒಂದು ನಾಗರ ಹಾವಿನ ಮೇಲೆ ಬಿಸಿ 'ಕಟಾರ'ವನ್ನು ಗೊತ್ತಿಲ್ಲದೇ ಇಟ್ಟುಬಿಟ್ಟಿದ್ದರಂತೆ. ಆಗ ಎಲ್ಲರೂ ಗಾಭರಿಯಾಗಿ 'ದರ್ಶನ'ದ ಪಾತ್ರಿಯನ್ನು ಕೇಳಿದಾಗ 'ಚಿಂತಿಸುವ ಅಗತ್ಯವಿಲ್ಲ, ಆದರೆ ಇನ್ನು ಮುಂದೆ ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ನಾಗರಾಜನಿಗೆ ಪೂಜೆ ಸಲ್ಲಿಸಿ, ಐದು ಜನ ಮುತ್ತೈದೆಯರಿಗೆ ಸುವಾಸಿನಿಯರಂತೆ ಸತ್ಕರಿಸಿ ಊಟ ಉಪಚಾರಗಳನ್ನು ನೀಡಿ ಸತ್ಕರಿಸಬೇಕು' ಎಂದು ಹೇಳಿದ್ದರಂತೆ. ಇಂದಿಗೂ ಆ ಪದ್ಧತಿ ಹಾಗೆಯೇ ನಡೆಯುತ್ತಿದೆ. 
        ನಾನು ಚಿಕ್ಕವನಿರುವಾಗ ಕಂಡ ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ದೇವಸ್ಥಾನದ ಸುತ್ತಿನಲ್ಲಿ ಯಾವುದಾದರೂ ಹಾವು ಕಂಡಾಗ, ನಮ್ಮ ಅಪ್ಪಿ ಮಾಯಿ 'ನೀನು ಬಂದಿದೀಯಾ ಎಂದರೆ ಏನೋ ಅಪವಿತ್ರವಾಗಿದೆ, ಗೊತ್ತಿಲ್ಲದೇ ಏನಾದರೂ ತಪ್ಪಾಗಿರಬಹುದು .. ಒಟ್ಟಾರೆ ಕ್ಷಮಿಸಿಬಿಡು' ಎಂದು ಹೇಳಿ ಹರಿವಾಣವೊಂದರಲ್ಲಿ ಅರಶಿನದ ನೀರನ್ನು ತಂದು ಆ ಹಾವಿನ ಮುಂದೆ ಇಟ್ಟು ಕೈ ಮುಗಿಯುತ್ತಿದ್ದರು. ಆ ಹಾವು ಅದರಲ್ಲಿ ಹೊರಳಾಡಿ ಹೋಗುತ್ತಿತ್ತು. ಅಲ್ಲಿಗೆ ಎಲ್ಲವೂ ಪವಿತ್ರವಾಯಿತು ಎಂದು ಖುಷಿ ಪಡುತ್ತಿದ್ದರು ಅಪ್ಪಿ ಮಾಯಿ. ನಾನು ದೂರದಲ್ಲಿ ಕಂಬದ ಮರೆಯಲ್ಲಿ ನಿಂತು ಇದನ್ನೆಲ್ಲಾ ಭಯದಿಂದ ನೋಡುತ್ತಿದ್ದೆ. 
        ಇದೆಲ್ಲದರ ನಡುವೆ ಗುರುಗಳ ಬರುವಿಕೆಗೆ ಕಾಯುತ್ತಿದ್ದೆ, ಏಕೆಂದರೆ ಈ ಬಾರಿ ಬಂದಾಗ ಹೆಚ್ಚು ದಿನಗಳನ್ನು ನನ್ನೊಂದಿಗೆ ಕಳೆಯುವುದಾಗಿ ಗುರುಗಳು ಹೇಳಿದ್ದರು. ಕೊನೆಗೂ ಆ ದಿನ ಬಂದಿತು. 


Wednesday, 16 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 13

        ಶಿವನ ಆರಾಧನೆಗೆ ಮುನ್ನ ಗುರುಗಳು ಶಿವನ ಕುರಿತಾದ ಕೆಲವು ವಿಚಾರಗಳನ್ನು ನನ್ನೊಡನೆ ಹಂಚಿಕೊಂಡರು.
        'ಶಿವ ಪೌರಾಣಿಕ ವ್ಯಕ್ತಿಯಲ್ಲ, ಈ ಭೂಮಿಯಲ್ಲಿ ಅವತರಿಸಿದ ಮಹಾದೇವ. ಸ್ಮಶಾನವಾಸಿಯಾದ ಅವನು ಜನರ ಮಧ್ಯೆ, ಜನರಿಂದ ಬೆಳೆದ. ತನ್ನನ್ನು ಬೆಳೆಸಿದ ಸಮಾಜಕ್ಕಾಗಿ ಅದ್ಭುತ ಕೊಡುಗೆಗಳನ್ನು ನೀಡಿದ. ಪಶು,ಪ್ರಾಣಿಗಳ ಧ್ವನಿಯ ಏರಿಳಿತಗಳನ್ನು ಗಮನಿಸಿ ಸಪ್ತಸ್ವರಗಳನ್ನು ಕಂಡು ಹಿಡಿದು ಸಂಗೀತಕ್ಕೊಂದು ಹೊಸ ಆಯಾಮ ನೀಡಿದ್ದು ನಮ್ಮ ಶಿವ. ಸ್ಮಶಾನದಲ್ಲಿದ್ದುಕೊಂಡೇ ತನ್ನದೇ ಆದ ನಾಟ್ಯಪ್ರಕಾರವನ್ನು ಕಂಡು ಹಿಡಿದು ಅದಕ್ಕೆ 'ತಾಂಡವ' ಎಂದು ಹೆಸರಿಸಿದ. ಅಲೆಮಾರಿ ಜನಾಂಗವಾಗಿ ಅಲೆಯುತ್ತಿದ್ದ ಜನರಿಗೆ ಕುಟುಂಬದ ಕಲ್ಪನೆ ನೀಡಿದ. ವಿವಾಹ ಪದ್ಧತಿಯನ್ನು ಆಚರಣೆಗೆ ತಂದದ್ದು ಮಹಾದೇವ ಶಿವನೇ. ದಕ್ಷಿಣ ಭಾರತದಲ್ಲಿ ವಾಸವಾಗಿದ್ದ ಶಿವನ ಸಂಗಾತಿಯಾಗಿದ್ದವಳು ಕಾಳಿ. ಆಕೆ ಕಪ್ಪಗಿರುವುದರಿಂದ ಕಾಳಿ ಎಂದು ಕರೆದರು. ಸಾಮರಸ್ಯ ಉಳಿಸಲು ಉತ್ತರದ ಹಿಮಾಲಯ ಭಾಗದ ರಾಜನೊಬ್ಬನ ಮಗಳನ್ನು ವಿವಾಹವಾದ. ಆಕೆಯ ಹೆಸರೂ ದಾಖಲೆಯಲ್ಲಿ ಸಿಗದಿರುವುದರಿಂದ, ಪರ್ವತ ಪ್ರದೇಶದ ರಾಜನ ಮಗಳಾಗಿದ್ದುದರಿಂದ ಪಾರ್ವತಿ ಎಂದು ಮುಂದೆ ಕರೆಯಲಾಯಿತು. ಇದೇ ಪ್ರಪಂಚದ ಮೊದಲ ಮದುವೆ. ಈಗಲೂ ಮದುವೆಯ ಮಂಟಪದಲ್ಲಿ ಒಳ್ಳೆಯ ಜೋಡಿಯನ್ನು ನೋಡಿದಾಗ ಶಿವ-ಪಾರ್ವತಿಯರಂತೇ ಕಾಣುತ್ತಾರೆ ಎನ್ನುವುದು ವಾಡಿಕೆಯಲ್ಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಶಿವನು ಬಿಡಿ ಬಿಡಿಯಾಗಿ ದಿಕ್ಕು ದೆಸೆಯಿಲ್ಲದೇ ನಡೆಯುತ್ತಿದ್ದ ದೇವಪೂಜೆಗೆ ಶಿಸ್ತುಬದ್ಧವಾದ ವೈಜ್ಞಾನಿಕ ರೂಪಕೊಟ್ಟ. ತಾನು ಮೊದಲು ಅಭ್ಯಸಿಸಿ, ಸಾಧನೆ ಮಾಡಿ ನಂತರ ಪಾರ್ವತಿಗೆ ಅದನ್ನು ಬೋಧಿಸಿದ. ಅದೇ ತಂತ್ರ ಶಾಸ್ತ್ರ. ನಾನು ಹೇಳಿದ ಈ ವಿಷಯಗಳು ಜನಸಾಮಾನ್ಯರ ನಂಬಿಕೆಗಳಿಗೆ ವಿರುದ್ಧವಾಗಿರಬಹುದು. ಆದರೆ ನನ್ನಲ್ಲಿ ಕೆಲವು ಪುರಾವೆಗಳಿವೆ' ಎಂದು ಹೇಳುತ್ತಾ ಕೆಲವು ತಾಳೇಗರಿಗಳನ್ನು ತೋರಿಸಿ ಅದರಲ್ಲಿರುವ ವಿವರಗಳನ್ನು ಬಿಡಿಸಿ ಹೇಳಿದರು. ಈಗಲೂ ಅವರು ನೀಡಿದ ಹಾಗೂ ಮುಂದೆ ನಾನು ಸಂಗ್ರಹಿಸಿದ ಶಿವನ ಕುರಿತಾದ ಕೆಲವು ತಾಳೇಗರಿಗಳು ನನ್ನಲ್ಲಿವೆ. 
        ನಂತರ ಕೆಲದಿನಗಳಲ್ಲೇ ನನಗೆ ಶಿವನ ಆರಾಧನೆಯ ತರಬೇತಿ ಆರಂಭವಾಯಿತು. 'ಊರ ಹೊರಗಿನ ಸ್ಮಶಾನದಲ್ಲಿ ರಾತ್ರಿ ಹೋಗಿ ಮಲಗಿ ಬರುವ ಧೈರ್ಯವಿದೆಯೇ?' ಎಂದೊಮ್ಮೆ ಕೇಳಿದರು. ನನಗೆ ಸ್ಮಶಾನದ ಬಗ್ಗೆ, ದೆವ್ವಪಿಶಾಚಿಗಳ ಬಗ್ಗೆ ಯಾವ ಭಯವೂ ಇರಲಿಲ್ಲ. ನಾನು ಕೂಡಲೇ ಒಪ್ಪಿಕೊಂಡೆ. ಅಂದಿನಿಂದ ಐದು ದಿನ ನಾನು ಸ್ಮಶಾನಕ್ಕೆ ಹೋಗಿ ಮೂಲೆಯೊಂದೆಡೆ ಮಲಗಿ ಬೆಳಿಗ್ಗೆ ಬರುತ್ತಿದ್ದೆ. ಮೊದಲ ದಿನ ಸ್ವಲ್ಪ ಭಯವಾಯಿತು. ದೆವ್ವಗಳ ಬಗ್ಗೆ ಅಲ್ಲ, ಅಲ್ಲಿರಬಹುದಾದ ಹಾವು ಚೇಳುಗಳ ಬಗ್ಗೆ. ಅಕಸ್ಮಾತ್ ಮಲಗಿರುವಾಗ ಬಂದು ಕಚ್ಚಿದರೆ? ಎಂಬ ಭಯವಿತ್ತು. ಒಂದೇ ದಿನ, ನಂತರ ನಮ್ಮ ಅಜ್ಜನ ಆಸ್ತಿಯೇನೋ ಎಂಬಂತೆ ಹೋಗಿ ಮಲಗುತ್ತಿದ್ದೆ. ಅಷ್ಟರಲ್ಲಿ ಅಲ್ಲಿ ಸಣ್ಣ ಮನೆಯಲ್ಲಿದ್ದ ಕಾವಲುಗಾರನ ಗೆಳೆತನವನ್ನೂ  ಮಾಡಿಕೊಂಡು ಬಿಟ್ಟಿದ್ದೆ. 
ಗುರುಗಳು ಕೇಳಿದರು 'ಭಯವಾಗಲಿಲ್ಲವೇ? 
'ಒಂದೆರಡು ದಿನ ಈ ಹಾವು ಚೇಳುಗಳ ಬಗ್ಗೆ ಭಯ ಇತ್ತು, ಆಮೇಲೆ ಸರಾಗವಾಗಿ ಹೋಯಿತು' ನಗುತ್ತಾ ಹೇಳಿದೆ. 
'ಶಿವನ ಅನುಷ್ಠಾನ ಮಾಡುವಾಗ ಭಯಕ್ಕೆ ಆಸ್ಪದವಿಲ್ಲ, ಅದಕ್ಕಾಗಿ ಈ ಸಣ್ಣ ಪ್ರಯೋಗ ಮಾಡಿದ್ದು. ನಾಳೆ ನಿನಗೆ ಶಿವನ ಮಂತ್ರೋಪದೇಶ ಮಾಡುತ್ತೇನೆ' ಎಂದು ಹೇಳಿ ಹೊರಟರು. ನಾನು 'ನಾಳೆ'ಗೆ ಕಾಯುತ್ತಿದ್ದೆ. 
        ಮರುದಿನ ಮಂತ್ರ ದೀಕ್ಷೆ ನೀಡುವ ಮೊದಲು ಗುರುಗಳು ನನಗೆ ಈ ಸಾಧನೆಯ ಬಗ್ಗೆ ಕೆಲ ಮಾತುಗಳನ್ನು ಹೇಳಿದರು. "ಶಿವನು ಹಿಮಾಲಯದಲ್ಲಿ ಕುಳಿತರೂ ಆತನ ಧ್ಯಾನದ ಉತ್ಕಟತೆಗೆ ಮೈ ಹೋಮಕುಂಡದಂತೆ ಸುಡುತ್ತಿರುತ್ತದೆ. ಆದ್ದರಿಂದ ಆತನಿಗೆ ಚಳಿ ಸೋಕುವುದಿಲ್ಲ. ಶಿವನ ಮಂತ್ರದೊಂದಿಗೆ ಅಗ್ನಿಮಂತ್ರವನ್ನು ಸೇರಿಸಿ 'ಹ್ರೀಂ ಓಂ ನಮಃ ಶಿವಾಯ ಹ್ರೀಂ' ಎಂದು ಚಿನ್ಮುದ್ರೆಯಲ್ಲಿ ಜಪ ಮಾಡು, ತೋರುಬೆರಳ ತುದಿಯಲ್ಲಿ ಅಗ್ನಿಯ ಸಾನ್ನಿಧ್ಯ ಇರುತ್ತದೆ. ನಾನು ನಿನಗೆ ಗೋಪ್ಯವಾಗಿ ಕೊಟ್ಟ ಬೀಜಾಕ್ಷರವನ್ನು ಆದಿಯಲ್ಲಿ ಸೇರಿಸು. ನೀನು ಶಿವನ ಅನುಷ್ಠಾನ ಮಾಡಬೇಕಾದರೆ ಮೊದಲು ನಿನ್ನ ನಾಲ್ಕೂ ಬದಿಯಲ್ಲಿ ಧಗ ಧಗ ಉರಿಯುವ ನಾಲ್ಕು ಹೋಮಕುಂಡಗಳಿವೆಯೆಂದು ಭಾವಿಸು. ನೀನೇ ಸ್ವತಃ ಒಂದು ಹೋಮಕುಂಡದಲ್ಲಿ ಕುಳಿತು ಕೊಂಡಿರುವುದಾಗಿ ಕಲ್ಪಿಸಿಕೋ. ಮಿಕ್ಕೆಲ್ಲ ವಿಧಿ ವಿಧಾನಗಳನ್ನು ನಾನು ನಿನಗೆ ತಿಳಿಸಿಕೊಟ್ಟ ರೀತಿಯಲ್ಲಿಯೇ ಮಾಡು. ನಾಳೆ ನಾನು ಮತ್ತೆ ಹೊರಡುತ್ತಿದ್ದೇನೆ. ಇಂದು ನಿನಗಾದ ಅನುಭವವನ್ನು ನಾಳೆ ನನಗೆ ಹೇಳು" ಎಂದು ಹೇಳಿ ಆಶೀರ್ವದಿಸಿ ಹೊರಟರು. ಹೊಸದಾದ ಮತ್ತೊಂದು ಅನುಭವಕ್ಕೆ ಮನಸ್ಸು ಅಣಿಯಾಗಿತ್ತು. ಮೊದಲ ದಿನ ವಿಶೇಷ ಅನುಭವವೇನೂ ಆಗಲಿಲ್ಲ. ಅದನ್ನೇ ಗುರುಗಳ ಬಳಿ ಹೇಳಿಕೊಂಡೆ. 
       ಮುಂದಿನ ದಿನಗಳಲ್ಲಿ ಶಿವನ ಉತ್ಕಟತೆ ಪಡೆಯಲು ತೀಕ್ಷ್ಣವಾದ ಬೆಂಕಿಯಲ್ಲಿ ನಾನೇ ಸುಟ್ಟುಹೋಗುತ್ತಿರುವಂತೆ ಭಾವಿಸಿಕೊಳ್ಳುತ್ತಿದ್ದೆ. ಹೀಗೆ ಸುಮಾರು ಹತ್ತು ದಿನಗಳ ಕಾಲ ಅನುಷ್ಠಾನ ಮಾಡುತ್ತಿದ್ದಂತೇ, ಪೂಜೆ ಮುಗಿಸಿದ ಮೇಲೆ ನನ್ನ ಕೈಗಳಲ್ಲಿ, ಭುಜಗಳಲ್ಲಿ, ಚರ್ಮದ ಮೇಲೆ ಸಣ್ಣದಾಗಿ ಬಿಳಿಯ ಬೂದಿಯ ಪದರವಿರುವುದನ್ನು ಗಮನಿಸಿದೆ. ಹಿತವಾಗಿ ಅದನ್ನು ಸವರಿಕೊಂಡೆ. ಅದರ ಬಗ್ಗೆಯೇ ಚಿಂತಿಸುತ್ತಿದ್ದೆ. ಶಿವನು ವಿಭೂತಿಧಾರಿ ಅನ್ನುವುದರ ಅರ್ಥ ನನಗೆ ಬೇರೆ ತರಹವಾಗಿ ಕಾಣ ಸಿಕ್ಕಿತು. ಶಿವನ ತಪಸ್ಸಿನ ತೀವ್ರತೆಗೆ ಆತನ ಮೈಯ್ಯೆಲ್ಲಾ ಸುಡುತ್ತಿತ್ತೇನೋ ಎಂದು ಅನ್ನಿಸಿತ್ತು. 
        ಮುಂದೆ ನನ್ನ ಭಾವವನ್ನು ತೀವ್ರಗೊಳಿಸಿದೆ. 'ಭಾವವಿಲ್ಲದ ಪೂಜೆಗೆ ಬೆಲೆಯಿಲ್ಲ' ಎಂದು ಪದೇ ಪದೇ ಗುರುಗಳು ಹೇಳುತ್ತಿದ್ದರು. ನನ್ನ ಮನಃಸ್ಥಿತಿ ಅಂದಿನ ದಿನಗಳಲ್ಲಿ ಗಂಭೀರವಾಗಿತ್ತು. ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಮನಸ್ಸು ಶಾಂತವಾಗಿರುತ್ತಿತ್ತು.
        ಇದಾಗಿ ಕೆಲವು ದಿನಗಳಲ್ಲಿ ಒಮ್ಮೆ ಅನುಷ್ಠಾನಕ್ಕೆ ಕುಳಿತಾಗ ನನ್ನ ಮುಂದಿಟ್ಟಿದ್ದ ಹರಿವಾಣದಲ್ಲಿ ಏನೋ ಬಿದ್ದಂತೇ ಭಾಸವಾಯಿತು. ಕಣ್ಣು ಮುಚ್ಚಿ ಜಪ ಮಾಡುತ್ತಿದ್ದ ನನಗೆ ಕಣ್ಣು ತೆರೆದು ನೋಡುವ ಕುತೂಹಲ. 'ಇರಲಿ' ಎಂದು ನನಗೆ ನಾನೇ ಹೇಳಿಕೊಂಡು ಜಪವನ್ನು ಮುಂದುವರೆಸಿದೆ. ಮತ್ತೆ ಏನೋ ಶಬ್ದ! 'ಕುಳಿತ ಸ್ಥಳದಿಂದ ಏಳಬಾರದು ಎಂದು ಹೇಳಿದ್ದರಲ್ಲದೇ ಕಣ್ಣು ಬಿಡಬಾರದು ಎಂದೇನೂ ಹೇಳಲಿಲ್ಲವಲ್ಲ' ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಕಣ್ಣು ಬಿಟ್ಟೆ.  ನನ್ನ ಮುಖದಿಂದ ಒಂದು ಅರ್ಧ ಅಡಿ ದೂರದಲ್ಲಿ ನನ್ನ ಎದುರಿಗಿದ್ದ ಹರಿವಾಣದಲ್ಲಿ ಹೆಡೆ ಎತ್ತಿ ಕುಳಿತ ನಾಗರ ಹಾವೊಂದು ನನ್ನನ್ನೇ ನೋಡುತ್ತಿತ್ತು! 
        ಮುಂದೇನಾಯ್ತು? ಮುಂದಿನ ಕಂತಿನಲ್ಲಿ... 

Tuesday, 15 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 12


        ತಂತ್ರ ಎಂದೊಡನೆ ಜನರಲ್ಲಿ ಭಯಾನಕ ಕಲ್ಪನೆಗಳಿವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲನೆಯದಾಗಿ ಅದರಲ್ಲಿರುವ ದಕ್ಷಿಣಮಾರ್ಗ ಹಾಗೂ ವಾಮಮಾರ್ಗ ಪೂಜಾಪದ್ಧತಿಗಳು. ಜನಸಾಮಾನ್ಯರಿಗೆ ತಂತ್ರ ಅಥವಾ ತಾಂತ್ರಿಕ ಎಂದೊಡನೆ ಮನಸ್ಸಲ್ಲಿ ಮೂಡುವುದು ವಾಮಮಾರ್ಗ ಒಂದೇ! ವಾಮಮಾರ್ಗದಲ್ಲಿ ಕೆಲವು 'ಕ್ಷುದ್ರದೇವತೆ'ಗಳೆಂದು ಕರೆಯಲ್ಪಡುವ ದೇವತೆಗಳ ಆರಾಧನೆಯಿದೆ (ನಾನಂತೂ 'ಕ್ಷುದ್ರ ದೇವತೆ' ಎಂದು ಕರೆಯಲಾರೆ). ಇವು ನಕಾರಾತ್ಮಕ ಶಕ್ತಿಯನ್ನು/ಆಲೋಚನೆಗಳನ್ನು ಉಪಯೋಗಿಸುವ ವಿಧಾನಗಳು
        ಇದಲ್ಲದೇ 'ಪಂಚಮಕಾರ'ಗಳ ಅನುಷ್ಠಾನದ ತರಬೇತಿಯಿದೆ. ಈ ಪಂಚಮಕಾರಗಳು ಮದ್ಯ,ಮಾಂಸ,ಮತ್ಸ್ಯ,ಮುದ್ರಾ, ಮಿಥುನಗಳನ್ನು ಒಳಗೊಂಡಿವೆ. ಮೇಲ್ನೋಟಕ್ಕೆ ಮಡಿವಂತರ ಮನಸ್ಸಿಗೆ ಇದು ಅಪಥ್ಯದಂತೆ ಕಂಡರೂ, ಅದರ ಅರ್ಥ ಬೇರೆಯೇ ಇದೆ. ಪಶುಭಾವದಿಂದ ವೀರಭಾವಕ್ಕೆ ಕರೆದೊಯ್ದು, ದಿವ್ಯ ಭಾವದಲ್ಲಿ ನೆಲೆಗೊಳಿಸುವುದು ತಂತ್ರ ವಿದ್ಯೆಯ ಪರಮಗುರಿ. ಇದರ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ.
        ಈಗ ನನ್ನ ತಾಂತ್ರಿಕ ಪಯಣದ ಹಾದಿಯನ್ನು ವಿವರಿಸುತ್ತೇನೆ. ನನಗೆ ಗುರುಗಳು ಹೇಳಿದ ದೇವಿ ಅನುಷ್ಠಾನದ ಅವಧಿ ಮುಗಿಸಿದ್ದುದರಿಂದ, ಅವರು ಮತ್ತೆ ಬರುವವರೆಗೂ  ದೈನಂದಿನ ಸಾಧಾರಣ ಪೂಜೆಯಲ್ಲಿ ತೊಡಗಿಕೊಂಡಿದ್ದೆ. ಆಗ ಸಾಕಷ್ಟು ಸಮಯ ಸಿಗುತ್ತಿತ್ತು. ಒಮ್ಮೆ ಗೆಳೆಯ ಭಾಮಿ ಸುಧಾಕರ ಶೆಣೈ ವ್ಯಾಯಾಮ ಶಾಲೆಯಲ್ಲಿ ನನಗೆ ಸಿಕ್ಕಿದಾಗ 'ನಾಳೆಯಿಂದ ವೆಂಕಟರಮಣ ದೇವಸ್ಥಾನದಲ್ಲಿ ವೇದಸೂಕ್ತಗಳ ಬಗ್ಗೆ ವಿವರಣೆ ಅವುಗಳನ್ನು ಕ್ರಮವಾಗಿ ಉಚ್ಚರಿಸುವ ಹಾಗೂ ಅಭ್ಯಸಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಆಸಕ್ತಿ ಇದ್ದರೆ ನೀನೂ ಸೇರಿಕೊಳ್ಳಬಹುದು' ಎಂದು ಹೇಳಿದ. ಎಲ್ಲವೂ ಅದಾಗಿ ಹುಡುಕಿ ಬಂದಂತೇ ಭಾಸವಾಗಿತ್ತು. ಬಿಡುವಾಗಿಯೂ ಇದ್ದೆ, ಹುಡುಕಿ ಹೋದರೂ ಸಿಗದಂತಹ ಅವಕಾಶ ತಾನಾಗಿಯೇ ಒದಗಿತ್ತು!
        ಮಾರನೇ ದಿನದಿಂದಲೇ ಬೆಳಿಗ್ಗೆ ವೆಂಕಟರಮಣ ದೇವಸ್ಥಾನಕ್ಕೆ ತರಬೇತಿಗಾಗಿ ಹೋಗಲಾರಂಭಿಸಿದೆ. ಋಗ್ವೇದದ ಪ್ರಾತಃಸೂಕ್ತದಿಂದ ನನ್ನ ಕಲಿಕೆ ಆರಂಭವಾಯಿತು. ನಂತರ ಶ್ರೀಸೂಕ್ತ, ಪುರುಷಸೂಕ್ತ, ವಾಗಾಂಭ್ರಣೀ ಸೂಕ್ತ ಮುಂತಾದ ಮುಖ್ಯ ಸೂಕ್ತಗಳನ್ನು ಇಷ್ಟಪಟ್ಟು ಕಲಿತೆ. ಆಗ ನನಗೆ ನೆರವಾದ ವೇದಮೂರ್ತಿ ಶ್ರೀ ಹರಿಭಟ್ಟರ ಸಹಾಯ, ಸಹಕಾರವನ್ನು ಎಂದಿಗೂ ಮರೆಯಲಾರೆ.          ನನಗೆ ಪ್ರೋತ್ಸಾಹ ನೀಡುತ್ತಿದ್ದ ಗೆಳೆಯರಾದ ನಾರಾಯಣ ಕಾಮತ್, ನಾಗೇಂದ್ರ ಬಾಳಿಗಾ, ಸುರೇಶ ಬಾಳಿಗಾ ಅವರೆಲ್ಲರೊಡನೆ ಸಂಜೆ ಬೆರೆಯುತ್ತಿದ್ದೆ. ಯಶವಂತ ವ್ಯಾಯಾಮ ಶಾಲೆ, ನಮ್ಮ ಮಾತುಗಳಿಗೆ ಪ್ರತಿದಿನ ಸಾಕ್ಷಿಯಾಗುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಇನ್ನೊಬ್ಬ ಗೆಳೆಯ 'ಮಾಣೂರು ಅಚ್ಚು'. ನಾನು ಏನು ಕೇಳಿದರೂ ಇಲ್ಲವೆನ್ನದೇ ಒದಗಿಸುತ್ತಿದ್ದ. ಆರಂಭದ ದಿನಗಳಲ್ಲಿ ನನಗೆ ಕುಳಿತುಕೊಂಡು ಧ್ಯಾನ ಮಾಡಲು ಜಿಂಕೆಯ ಚರ್ಮವೊಂದು ಬೇಕಾಗಿತ್ತು. ಯಾರೂ ಸಾಯಿಸದೇ, ತಾನಾಗಿ ಸತ್ತ ಚರ್ಮವೇ ಬೇಕಾಗಿತ್ತು. 'ಅಚ್ಚು' ಯಾವುದೋ ಮಠಕ್ಕೆ ಹೋಗಿ ಅವರ ಮನವೊಲಿಸಿ ಜಿಂಕೆಯ ಚರ್ಮವೊಂದನ್ನು ಎರಡು ದಿನಗಳಲ್ಲಿ ಒದಗಿಸಿ ಕೊಟ್ಟಿದ್ದ. ನಾನು ಮತ್ತೆ ಹಿಂದಿರುಗಿ ಬರುವಾಗ, ಅದನ್ನು ಮತ್ತೆ ಅದೇ ಮಠಕ್ಕೆ ನೀಡುವಂತೆ ಹೇಳಿ ಆತನಿಗೆ ವಾಪಸ್ಸು ಕೊಟ್ಟೆ.
        ನನ್ನ ಗುರುಗಳು ಹಿಂದಿರುಗಿ ಬಂದರು. ನನ್ನನ್ನು ಅವರದ್ದೇ ಆದ ರೀತಿಯಲ್ಲಿ ಪರೀಕ್ಷಿಸಿದರು. ನನ್ನ ಕಣ್ಣುಗಳನ್ನು ಎವೆಯಿಕ್ಕದೇ ಕ್ಷಣಕಾಲ ನೋಡಿದರು. ಬಲ ಕೈಯ್ಯನ್ನು ತಮ್ಮ ಕೈಯ್ಯಲ್ಲಿ ಹಿಡಿದು ಕೆಲಕಾಲ ತೂಗುತ್ತಾ ಇದ್ದರು. ದೇವೀ ಮಂತ್ರದ ಸಣ್ಣ ಪ್ರಯೋಗವೊಂದನ್ನು ನನ್ನ ಕೈಯ್ಯಲ್ಲಿ ಮಾಡಿಸಿ ನೋಡಿದರು. ಅದನ್ನು ಕಣ್ಣಾರೆ ಕಂಡಾಗ ನನಗೇ ಅಚ್ಚರಿಯಾಯಿತು. ಅದೇನೆಂಬುದು ಇಲ್ಲಿ ಅಪ್ರಸ್ತುತ.
        'ನಿನಗೆ ದೇವೀ ಮಂತ್ರವು ಒಲಿದಿದೆ, ಈಗ ಆ ಮಂತ್ರ ನಿನಗೆ 'ಸಿದ್ಧಿ'ಯಾಗಲು ಆ ಮಂತ್ರದ ಕೆಲವು ಜಪ ಸಂಸ್ಕಾರಗಳನ್ನು ಮಾಡುತ್ತೇನೆ ' ಎಂದು ಹೇಳಿ ಕೆಲವಾರು ಸಂಸ್ಕಾರಗಳನ್ನು ಮಾಡಿದರು. ಹಲವಾರು ಸಂಸ್ಕಾರಗಳನ್ನು ಮುಗಿಸಿ 'ಇಲ್ಲಿಗೆ ಈ ದೇವೀ ಮಂತ್ರ ನಿನಗೆ ಸಿದ್ಧಿಯಾಗಿದೆ, ವಿವೇಕ ಹಾಗೂ ವಿವೇಚನೆಯಿಂದ ಬಳಸು' ಎಂದು ಹೇಳಿ ಆಶೀರ್ವದಿಸಿದರು. 



        ಜಪದ ಬಗ್ಗೆ ವಿವರವಾಗಿ, ನಾನು ಅಲ್ಲಿದ್ದಾಗ ಬರೆದ 'ಜಪ, ನನ್ನ ಅನುಭವದಲ್ಲಿ' ಪುಸ್ತಕದಲ್ಲಿ ಬರೆದಿದ್ದೇನೆ. ಅದನ್ನು ಶ್ರೀ ಹರಿಭಟ್ಟರು ಹೊಸದಿಗಂತ ಪತ್ರಿಕೆಯ 'ದಿಗಂತ ಪ್ರಕಾಶನ'ದ  ಮೂಲಕ ಪ್ರಕಟಿಸಿದ್ದರು. ಈಗ ಅದರ ಪ್ರತಿಗಳು ಬಹುಶಃ ಲಭ್ಯವಿಲ್ಲವೇನೋ.
        ಮುಂದಿನ ಅನುಷ್ಠಾನಕ್ಕೆ ನನ್ನನ್ನು ಅಣಿಗೊಳಿಸಿದರು ನನ್ನ ಗುರುಗಳು. ಶಕ್ತಿಯ ಆರಾಧನೆಯ ನಂತರ ಶಿವನ ಆರಾಧನೆ. ತಾಂತ್ರಿಕ ಆರಾಧಕರನ್ನು 'ಶಾಕ್ತೇಯರು' ಎಂದೂ ಕರೆಯುತ್ತಾರೆ.ಶಕ್ತಿ ಹಾಗೂ ಶಿವನ ಆರಾಧನೆ ಇಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತದೆ.
       ಶಿವನ ಆರಾಧನೆಗೆ ನನ್ನನ್ನು ಗುರುಗಳು ಅನುಗೊಳಿಸಿದ್ದು ಹೇಗೆ? ಶಿವ ಮಂತ್ರದ ಅನುಷ್ಠಾನದಲ್ಲಿ ನನಗಾದ ವಿಶೇಷ ಅನುಭವಗಳೇನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ.

Monday, 14 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 11

        ಈ ಅನುಭವಗಳು ನನಗೆ ಅತ್ಯಂತ ಹಿತವಾದ, ನವಿರಾದ, ಹಾಗೂ ಮುದವಾದ ಅನುಭವವನ್ನು ನೀಡಿ ನಾನು ಭಾವುಕನಾಗಿದ್ದು ಮಾತ್ರ ಸತ್ಯ. ಗುರುಗಳು ಹೇಳಿದಷ್ಟು ದಿನ ದೇವಿ ಉಪಾಸನೆಯನ್ನು ಮಾಡಿ ಮುಗಿಸಿದ್ದೆ. ಕಠಿಣ ಅನುಷ್ಠಾನಕ್ಕೆ ಕೊಂಚ ಬಿಡುವು ಸಿಕ್ಕಿತ್ತು. ಗುರುಗಳ ಬರುವಿಕೆಗೆ ಕಾಯುತ್ತಿದ್ದೆ.  
        ಮನೋವಿಜ್ಞಾನದ ದೃಷ್ಟಿಯಿಂದ ನನ್ನ ಅನುಭವವನ್ನು ತುಲನೆ ಮಾಡಿದೆ. ಮನೋವಿಜ್ಞಾನ ಇಂತಹ ಅನುಭವಗಳನ್ನು ಸಾಧಾರಣವಾಗಿ ಭ್ರಮೆ (hallucination) ಎಂದು ಕರೆಯುತ್ತದೆ. ಭ್ರಮೆ ಅಥವಾ ಭ್ರಾಂತಿಯಲ್ಲಿರುವುದು ಒಂದು ಮಾನಸಿಕ ಕಾಯಿಲೆಯ ಲಕ್ಷಣ. ಭ್ರಮೆ ಅಥವಾ ಭ್ರಾಂತಿ ನಾವು ಬಯಸಿ ಸಿಗುವ ಅನುಭವವಲ್ಲ, ಬಯಸಿದ್ದನ್ನು ಕೊಡುವ ಅನುಭವವೂ ಅಲ್ಲ. ಅದು ನಮಗೆ ಬೇಡದ, ಅಥವಾ ನಾವು ಇಷ್ಟಪಡದ ಅನುಭವವನ್ನು ಕೊಡುವ ಗುಣವನ್ನು ಹೊಂದಿರುತ್ತದೆ. 
        ನಾವು ಇಷ್ಟಪಟ್ಟು ಪದೇ ಪದೇ ಚಿಂತಿಸಿ ಅರೆಪ್ರಜ್ಞಾ ಮನಸ್ಸಿನ ಸಹಾಯದಿಂದ ಅನುಭವವನ್ನು ಪಡೆಯುವ ವಿಧಾನಕ್ಕೆ ಮನೋವಿಜ್ಞಾನ 'ದೃಶ್ಯೀಕರಣ ತಂತ್ರ' (visualization technique) ಎನ್ನುತ್ತದೆ.  ಇದು ಮನಸ್ಸಿನ ಶಕ್ತಿಯನ್ನು ಉಪಯೋಗಿಸಲು ಇರುವ ಒಂದು ಶಕ್ತಿಶಾಲೀ ತಂತ್ರ. ತಾಂತ್ರಿಕ ವಿದ್ಯೆಯಲ್ಲಿರುವ ದೃಶ್ಯೀಕರಣ ತಂತ್ರದಲ್ಲಿ ನಾ ಕಂಡ ಒಂದೇ ಒಂದು ವ್ಯತ್ಯಾಸವೆಂದರೆ  'ಭಾವ'. ಅದು ಅದ್ಭುತ ಹಾಗೂ ಅಲೌಕಿಕ ಅನುಭವವನ್ನು ನೀಡುತ್ತದೆ. 
        ನಾನು ಕಂಡುಕೊಂಡ  ಇನ್ನೊಂದು ಸತ್ಯವೇನೆಂದರೆ ಯಾವುದೇ ಆಧ್ಯಾತ್ಮಿಕ ಸಾಧನೆಯ ಅನುಷ್ಠಾನದಲ್ಲಿ ನಾವು ತೊಡಗಿಕೊಂಡಿರುವಾಗ, ನಮ್ಮ ಅನುಭವಗಳ ಬಗ್ಗೆ ಯಾರ ಬಳಿಯೂ ಚರ್ಚೆ ಮಾಡದಿರುವುದೇ ಒಳಿತು. ಅವರ ನಕಾರಾತ್ಮಕ ಪ್ರತಿಕ್ರಿಯೆಗಳು ನಮ್ಮ ಮನಸ್ಸಿನಲ್ಲಿ ಸಂದೇಹದ ಬೀಜಗಳನ್ನು ಬಿತ್ತಬಹುದು. ನಿಮ್ಮ ಅನುಭವಗಳು ನಿಮ್ಮವು. ಅದು ಯಾರ ಅನುಭವಕ್ಕೂ ತಾಳೆಯಾಗಬೇಕಿಲ್ಲ. ಹಾಗೆಯೇ ಬೇರೆಯವರಿಗೆ ಆದಂತಹದ್ದೇ ಅನುಭವ ನಮಗೂ ಆಗಬೇಕಿಲ್ಲ.              ದೈವಸಾಕ್ಷಾತ್ಕಾರವೆಂದೊಡನೆ ದೇವರು ಎದುರಿಗೆ ಪ್ರತ್ಯಕ್ಷನಾಗಿ ನಿಂತು 'ಭಕ್ತಾ, ನಿನಗೇನೂ ಬೇಕು?' ಎಂದು ಕೇಳಬೇಕಾಗಿಲ್ಲ. ಆ ಸಹಜವಾದ ಪ್ರಕೃತಿಶಕ್ತಿಯೊಡನೆ ಯಾವುದೇ ಅನುಭವ, ಅನುಭಾವಗಳು ಸಾಕ್ಷಾತ್ಕಾರದ ರೂಪವೇ. 
        ಅದು ದೊರೆತ ಮಾತ್ರಕ್ಕೆ ಯಾರೂ ದೇವಮಾನವರಾಗುವುದೂ ಇಲ್ಲ. ನಮ್ಮ ಎಲ್ಲಾ ದೌರ್ಬಲ್ಯಗಳು ನಮ್ಮಲ್ಲಿಯೇ ಇರುತ್ತವೆ. ಆದರೆ ಈ ಅನುಭವಗಳು ಆಗುತ್ತಿದ್ದಂತೇ ಬದುಕಿನ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ದೌರ್ಬಲ್ಯಗಳನ್ನು, ದೌರ್ಬಲ್ಯಗಳು ಎಂದು ತಿಳಿಯುವ ಮಟ್ಟಕ್ಕೆ ಹೋಗುತ್ತೇವೆ. ಇಲ್ಲಿ ಹೊಸ ರೀತಿಯ ಬದುಕನ್ನು ರೂಪಿಸಿಕೊಳ್ಳುವ ಒಂದು ಅವಕಾಶವನ್ನು ಅದು ಕಲ್ಪಿಸಿಕೊಡುತ್ತದೆ. ಬದಲಾಗುವುದು, ಬಿಡುವುದು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ತೀರ್ಮಾನ ತೆಗೆದುಕೊಳ್ಳಬೇಕಾದವರು ನೀವೇ ಆಗಿರುತ್ತೀರಿ. 
        ಯಾವುದೇ ಸಾಧನೆಯ ಪಥವನ್ನು ನೀವು ಆರಿಸುವ ಮೊದಲು ಹತ್ತು ಬಾರಿ ಯೋಚಿಸಿ,ಆದರೆ ಆರಿಸಿಕೊಂಡಾದ ಮೇಲೆ ಮುನ್ನುಗ್ಗುತ್ತಿರಿ. ಸಾಧನೆಯ ಪಥದಲ್ಲಿದ್ದಾಗ ತುಂಬಾ ಯೋಚಿಸುವುದು, ಅದಕ್ಕೆ ಸಂಬಂಧ ಪಟ್ಟ ಹಲವಾರು ಪುಸ್ತಕಗಳನ್ನು ಓದುವುದು, ಕಂಡ ಕಂಡವರೊಂದಿಗೆ ಚರ್ಚಿಸುವುದು ಮುಂತಾದ ವಿಚಾರಗಳಿಂದ ದೂರವಿರಿ. ಇವೆಲ್ಲಾ ನಿಮ್ಮ ಸಾಧನೆಯ ಮಾರ್ಗವನ್ನು ಧೀರ್ಘ ಮಾಡುತ್ತವೆ. 
        ಆಧ್ಯಾತ್ಮಿಕ ಸಾಧನೆ ಒತ್ತಟ್ಟಿಗಿರಲಿ, ಈ ಎಲ್ಲಾ ವಿಷಯಗಳು ಲೌಕಿಕ ವಿಷಯಗಳ ಸಾಧನೆ ಮಾಡುವಾಗಲೂ ಅನ್ವಯವಾಗುತ್ತವೆ. ನನ್ನದೇ ಒಂದು ಅನುಭವದಿಂದ ನಾನು ಇದನ್ನು ಕಲಿತೆ.
ಅದೇನೆಂದರೆ 

        ಹಿಂದೊಮ್ಮ ನಾನು ಹಾಗೂ ನನ್ನ ಸಂಬಂಧಿಕ ಸುನೀಲ (ಇಂದಕ್ಕಳ ಮಗ), ಈಜು ಕಲಿಯಲು ನೇತ್ರಾವತೀ ನದಿಯಲ್ಲಿ ಇಳಿದಿದ್ದೆವು. ಇಳಿದ ಮೇಲೆ ಗೊತ್ತಾಗಿದ್ದು, ಈಜುವುದು ಅಷ್ಟು ಸುಲಭವಲ್ಲ ಎಂಬ ಕಠೋರ ಸತ್ಯ. ಈಜಲು ಹೋಗಿ ಸಾಕಷ್ಟು ನೀರು ಕುಡಿಡಿದ್ದೆವು. ನಂತರ ಬುದ್ಧಿವಂತನಾದ ನಾನು ನಮ್ಮ ಊರಿನ ಗ್ರಂಥಾಲಯಕ್ಕೆ ಹೋಗಿ ಈಜಿನ ಬಗ್ಗೆ ಕೆಲವು ಪುಸ್ತಕಗಳನ್ನು ಓದಿದೆ. ಈಜುವುದರಲ್ಲಿ ನಿಷ್ಣಾತರಾದ ಗೋವಿಂದ ಎನ್ನುವವರ ಬಳಿ ಹೋಗಿ ಈಜಿನ ಬಗ್ಗೆ ಚರ್ಚಿಸಿದೆ. ಸುಲಿಯದ 'ಪೊಟ್ಟು' ತೆಂಗಿನಕಾಯಿಯನ್ನು ಕಂಕಳಿಗೆ ಸಿಕ್ಕಿಸಿಕೊಂಡರೆ ಮುಳುಗುವುದಿಲ್ಲ ಎಂದು ಆ ಪ್ರಯೋಗವನ್ನೂ ಮಾಡಿ ನೋಡಿದೆ. ನಾನೊಂದೆಡೆ ಮುಳುಗಿ ನೀರು ಕುಡಿಯುತ್ತಿದ್ದರೆ, ತೆಂಗಿನ ಕಾಯಿ ಇನ್ನೊಂದೆಡೆ ತೇಲಿ ಹೋಗುತ್ತಿತ್ತು. ಹೀಗೆ ಸುಮಾರು ಹದನೈದಿಪ್ಪತ್ತು ದಿನಗಳನ್ನು ಈಜಿನ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಕಳೆದೆ.
        ಒಮ್ಮೆ ನದೀ ತೀರದೆಡೆ ಹೋದಾಗ ನನಗೆ ಆಘಾತ ಕಾದಿತ್ತು. ಸುನೀಲ ಆರಾಮಾಗಿ ಈಜುತ್ತಿದ್ದ ! 
'ಹೇಗೆ ಕಲಿತೆಯೋ?' ಅಚ್ಚರಿಯಿಂದ ಕೇಳಿದೆ. 
ನನ್ನ ಗೆಳೆಯ 'ಗುಂಡಿ ಇರುವ ಜಾಗ ನೋಡಿ ಸುಮ್ಮನೆ ನೀರಿಗೆ ಎಗರು,ಕೈ ಕಾಲು ಬಡಿಯುತ್ತಾ ಈಜಲು ಕಲಿಯುವೆ' ಎಂದು ಹೇಳಿದನಲ್ಲದೇ  'ನಾನು ಹಾಗೆಯೇ ಮಾಡಿದೆ' ಎನ್ನುತ್ತಾ ರಿವರ್ಸ್ ಸ್ಟ್ರೋಕ್ ಹೊಡೆಯುತ್ತಾ ಹೋದ !!  
ಆಗ ನಾನೊಂದು ನಿಶ್ಚಯ ಮಾಡಿದೆ 'ನಾಳೆ ನಾನು ಬಂದು ನೀರಿಗೆ ಧುಮುಕಿ ಈಜುವುದೇ!' ಸುನೀಲನಿಗೆ ಕೂಗಿ ಹೇಳಿದೆ ' ನಾಳೆ ಬೆಳಿಗ್ಗೆ ಎಂಟು ಘಂಟೆಗೆ ನನ್ನ ಜೊತೆ ಬಾ, ನಾನು ಈಜಿ ತೋರಿಸುತ್ತೇನೆ'   
        ಮಾರನೇ ದಿನ ಸುನೀಲನ ಜೊತೆ ನೇತ್ರಾವತಿ ತೀರಕ್ಕೆ ಬಂದೆವು. ನನ್ನ ದುರಾದೃಷ್ಟಕ್ಕೆ ಅಂದು ಪ್ರವಾಹ ಬಂದು ನೇತ್ರಾವತಿ ಉಕ್ಕಿ ಹರಿಯುತ್ತಿದ್ದಳು. 
'ಬಾ ವಾಪಸ್ ಹೋಗೋಣ, ಇಂದು ನಿನ್ನ ಗ್ರಹಚಾರಕ್ಕೆ ಪ್ರವಾಹ. ನಾಳೆ ಬಂದರಾಯಿತು ಬಿಡು' ಎಂದು ಹಿಂದಿರುಗಲು ಸಿದ್ಧನಾದ ಸುನೀಲ.
'ಇಲ್ಲ, ನಾನು ಇಂದು ನೀರಿಗೆ ಬೀಳಲು ಹಾಗೂ ಈಜಲು ನಿರ್ಧಾರ ಮಾಡಿದ್ದೇನೆ. ಬೀಳುವುದೇ, ಬಿದ್ದು ಈಜುವುದೇ!' ಎಂದು ಹೇಳಿದೆ. 
        ಸುನೀಲ 'ಹೋ ಹೋ..' ಎಂದು ಬೊಬ್ಬೆ ಹಾಕುತ್ತಿದ್ದರೂ ನಾನು ನೀರಿಗೆ ಧುಮುಕಿದ್ದೆ. ಪ್ರವಾಹದ ಸೆಳೆತದಲ್ಲಿ ಹಾಗೂ ಹೀಗೂ ಕೈಕಾಲು ಬಡಿದು ಒಂದಷ್ಟು ಪ್ರವಾಹದ ದಿಕ್ಕಿನಲ್ಲೇ ಹೋಗಿ, ಎಲ್ಲೋ ಮುಳುಗುತ್ತಾ, ಎಲ್ಲೋ ತೇಲುತ್ತಾ, ಆ ಬದಿ ಈ ಬದಿ ಈಜುತ್ತಾ, ಅಂತೂ ಇಂತೂ ನದೀ ತೀರ ತಲುಪಿದೆ. ಬಂಡೆಕಲ್ಲು, ರೆಂಬೆಕೊಂಬೆಗಳಿಗೆ ತಾಗಿ ಕೈಕಾಲು, ಮೈ ಹಲವೆಡೆ ರಚಿತ್ತು. ಮನಸ್ಸು ಮಾತ್ರ ಗೆದ್ದೇ ಎಂದು ಬೀಗುತ್ತಿತ್ತು. ಪ್ರವಾಹದಲ್ಲೇ ಈಜಿದವನಿಗೆ ನಂತರದ ದಿನಗಳಲ್ಲಿ ಈಜುವುದು ಸಲೀಸಾಗಿ ಹೋಯಿತು. ಜೀವನದ ಒಂದು ಅದ್ಭುತ ಪಾಠವನ್ನು ಈ ಅನುಭವ ನನಗೆ ಕಲಿಸಿತ್ತು.  
        ತಂತ್ರ ಎಂದರೆ ಏನು? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದೊಮ್ಮೆ ಬರೆಯುತ್ತೇನೆ. 

Saturday, 12 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 10


        ನಂತರ ಅದೇ ಗುಂಗಿನಲ್ಲಿ, ಒಂದು ರೀತಿಯ ಮತ್ತಿನಲ್ಲಿ ನನ್ನ ಪೂಜೆ ಮುಂದುವರೆಯುತ್ತಿತ್ತು. ಕೆಲವು ದಿನ ಕಳೆಯುವುದರೊಳಗೆ ನನ್ನ ಗುರುಗಳು ನಮ್ಮೂರಿಗೆ ಬಂದರು. ಅವರೊಂದಿಗೆ ನನ್ನೆಲ್ಲಾ ಅನುಭವಗಳನ್ನು ಚಾಚೂ ತಪ್ಪದೇ ಹಂಚಿಕೊಂಡೆ. ಅವರ ಮುಖದಲ್ಲಿ ತೃಪ್ತಿಯ ನಗುವೊಂದನ್ನು ಕಂಡೆ. 'ಇದು ಒಂದು ಸಣ್ಣ ಅನುಭವ, ಮುಂದೆ ಸಾಗಬೇಕಾದ ದಾರಿ ಬಹಳಷ್ಟಿದೆ. ಇನ್ನೂ ಸ್ವಲ್ಪ ಕಠಿಣ ಸಾಧನೆಗೆ ಮೈಯ್ಯೊಡ್ಡಬೇಕಾಗಬಹುದು' ಎಂದರು. 
'ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ' ಧೈರ್ಯವಾಗಿ ಹೇಳಿದೆ. ನೀರಿಗಿಳಿದ ಮೇಲೆ ಮಳೆಯೇನು, ಚಳಿಯೇನು? ಎಂಬಂತೆ ಇತ್ತು ನನ್ನ ಪರಿಸ್ಥಿತಿ. ಎರಡು ವರ್ಷಗಳಲ್ಲಿ ಸಾಧ್ಯವಾದಷ್ಟು ಸಾಧಿಸಬೇಕು ಎಂದು ಹಾತೊರೆಯುತ್ತಿದ್ದೆ. 'ಆದರೆ....' ಎಂದು ನಿಲ್ಲಿಸಿದೆ.
ಏನು? ಎನ್ನುವಂತೆ ನನ್ನೆಡೆಗೆ ನೋಡಿದರು.
'ದೇವಿಯ ಮುಖ ನೋಡುವ ಭಾಗ್ಯ ನನಗೆ ಸಿಗಲಿಲ್ಲವಲ್ಲಾ...' ದೈನ್ಯವಾಗಿ ಕೇಳಿದೆ.
'ಚಿಂತಿಸಬೇಡ. ಅದೂ ಕೂಡಾ ಆಗಬಹುದು, ಆದರೆ ಅದು ಆಕೆಯ ಇಚ್ಛೆ' ಎಂದರು  ಗುರುಗಳು.
        ನನ್ನ ಗುರುಗಳು ಒಂದೆಡೆ ಬಹಳ ದಿನ ನಿಲ್ಲುತ್ತಿರಲಿಲ್ಲ. ಅದೇನು ಕೆಲಸವೋ ಏನೋ, ದೇಶಾದ್ಯಂತ ಸುತ್ತುತ್ತಿದ್ದರು. ಹರಿದ್ವಾರ, ಹೃಷಿಕೇಶದಲ್ಲಿ ಬಹುಕಾಲ ನೆಲೆಸುತ್ತಿದ್ದರು. ನನಗೆ 'ಇಂತಿಷ್ಟು ಕಾಲ ಇದನ್ನು ಮುಂದುವರೆಸು' ಎಂದು ಹೇಳಿ ಮತ್ತೆ ಹೊರಡಲು ಸಿದ್ಧರಾಗಿದ್ದರು. ಅವರು ಜೊತೆಯಲ್ಲಿದ್ದರೆ ಚೆನ್ನ ಎಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಆದರೆ ಕೇಳಲು ಒಂದು ರೀತಿಯ ಸಂಕೋಚವಾಗುತ್ತಿತ್ತು. ಅವರು ಹೊರಟ ಮೇಲೆ ನನ್ನ ಪೂಜೆಯನ್ನು ಮುಂದುವರೆಸುತ್ತಿದ್ದೆ. ದೇವಿಯ ಮುಖ ನೋಡಲು ದಿನಾ ಹಾತೊರೆಯುತ್ತಿದ್ದೆ. ಮಂತ್ರ ಸಿದ್ಧಿಗೆ ಅವರು ಹೇಳಿದ ಗಡುವು ಹತ್ತಿರ ಬರುತ್ತಿತ್ತು.
ಅಂದು..
        ಯಥಾಪ್ರಕಾರ ಪೂಜೆ ಮಾಡಲು ಆರಂಭಿಸಿದೆ. ಎಲ್ಲ ವಿಧಿ ವಿಧಾನಗಳು ಮುಗಿದ ಮೇಲೆ ಜಪದ ಅನುಷ್ಠಾನಕ್ಕೆ ಕುಳಿತುಕೊಂಡಿದ್ದೆ. ಜಪ ಮುಂದುವರೆಯುತ್ತಿದ್ದಂತೇ, ಮನಸ್ಸಿಗೆ  ಜಪದ ಸಂಖ್ಯೆಯ ಮೇಲೆ ಹತೋಟಿ ತಪ್ಪಿದಂತೇ ಭಾಸವಾಯಿತು. ಜಪವು ಅಭ್ಯಾಸವಾದಂತೇ ಒಂದು ಕೈಯ್ಯಲ್ಲಿ ಜಪಮಾಲೆ ಚಲಿಸುತ್ತಿದ್ದರೆ, ಇನ್ನೊಂದು ಕೈ ಬೆರಳು ಗಂಟುಗಳ ಮಧ್ಯೆ ಚಲಿಸುತ್ತಾ ಜಪದ ಸಂಖ್ಯೆಯನ್ನು ನನಗೇ ಅರಿವಿಲ್ಲದಂತೆ ಮನಸ್ಸು ಕರಾರುವಾಕ್ಕಾಗಿ ಲೆಕ್ಕ ಹಾಕುತ್ತಿತ್ತು. ಅಂದು ಈ ಲೆಕ್ಕ ಮಧ್ಯದಲ್ಲೆಲ್ಲೋ ತಪ್ಪಿ ಹೋಯಿತು. ಮನಸ್ಸು ಇನ್ನೆಲ್ಲೋ ಜಾರುತ್ತಿದ್ದ ಅನುಭವ. ಆದರೆ ಅದು ನಿದ್ದೆಯಂತೂ ಆಗಿರಲಿಲ್ಲ. ಒಂದು ಕತ್ತಲ ಲೋಕ.  
        ಆ ಕತ್ತಲಲ್ಲಿ ಒಂದು ಯುದ್ಧದಂತಹ ಸನ್ನಿವೇಶ. ದೇವಿ ಬರುತ್ತಿದ್ದಾಳೆ ಎಂದಂತೂ ನನಗೆ ಅದು ಹೇಗೋ ಮನದಟ್ಟಾಗಿತ್ತು. ಮಹಿಷಾಸುರ ಹಾಗೂ ಚಾಮುಂಡೇಶ್ವರಿ ನಡುವಿನ ಯುದ್ಧದಂತೇ ಕಾಣುತ್ತಿತ್ತು. ನಾನು ದೇವಿಯ ಮುಖವನ್ನು ನೋಡಲು ಹಂಬಲಿಸುತ್ತಿದ್ದುದರಿಂದ ಬೇರೆ ವಿವರಗಳಿಗೆ ಮನಸ್ಸು ಹೋಗಲಿಲ್ಲ. ಆ ಕತ್ತಲಲ್ಲಿ ಹಲವು ಮಂದಿಯ ನಡುವೆ ಝಗ್ಗನೆ ದೇವಿಯ ಪ್ರವೇಶವಾಯಿತು. ಹುಣ್ಣಿಮೆಯ ದಿನ ಕತ್ತಲಲ್ಲಿ ಹೊಳೆಯುವ ಚಂದ್ರನನ್ನು ನೋಡಿದ ಅನುಭವ. ಆ ಚಂದ್ರ ಅದೇ ಶಾಂತತೆಯನ್ನು ಇಟ್ಟುಕೊಂಡು ನೂರು ಪಟ್ಟು ಹೊಳೆಯುತ್ತಿದ್ದರೆ ಹೇಗಿರಬಹುದು ಎಂದು ಊಹಿಸಿದರೆ ಬಹುಶಃ ಆಕೆಯ ವರ್ಚಸ್ಸು ಅಥವಾ ಪ್ರಭೆ ಅರ್ಥವಾಗಬಹುದೇನೋ! ನಾನು ಯಾವ ಚಿತ್ರ ಪಟದಲ್ಲೂ ನೋಡದಿರುವ, ಯಾವ ಕಲ್ಪನೆಗೂ ನಿಲುಕದಿರುವ ಅನುಪಮ ಸೌಂದರ್ಯವದು. ಆಕೆಯನ್ನು ನೋಡುತ್ತಿದ್ದಂತೇ ನನಗನ್ನಿಸಿದ್ದಿಷ್ಟೇ 'ಇಂತಹ ಅನುರಾಗ ತುಂಬಿದ, ತಾಯಿ ಹೃದಯದ ಕರುಣಾಮಯಿಯೊಂದಿಗೆ ಯುದ್ಧ ಮಾಡಲು ಯಾರಿಗಾದರೂ ಹೇಗೆ ಮನಸ್ಸು ಬಂದೀತು? ಬಹುಶಃ ಆಕೆ ಮಹಿಷನಿಗೆ ಶರಣಾಗಲು ನೀಡುತ್ತಿರುವ ಕೊನೆಯ ಅವಕಾಶ ಇದಾಗಿರಬಹುದೋ ಏನೋ'. 
        ಇದೊಂದು ದೃಶ್ಯವನ್ನು ಶಬ್ದಗಳಲ್ಲಿ ವಿವರಿಸಲು ನನಗೆ ಕಷ್ಟವಾಗುತ್ತದೆ. ಅದೊಂದು ಅಪೂರ್ವ ಅನುಭವ ಎಂದಷ್ಟೇ ಹೇಳಬಯಸುತ್ತೇನೆ. ಈ ಅನುಭವವಾದ ಮೇಲೆ ಅದೆಷ್ಟು ಹೊತ್ತು ಅಲ್ಲಿ ಹಾಗೆಯೇ ಕುಳಿತಿದ್ದೆನೋ ನನಗೆ ಅರಿವಿಲ್ಲ. ನಿಧಾನವಾಗಿ ಕಣ್ಣು ಬಿಟ್ಟಾಗ ದೇವಿಯ ಮೂರ್ತಿ ಕಣ್ಣ ಮುಂದೆ ಕಾಣಿಸಿತು. 'ಇದೇನು ಕನಸೇ' ಎಂದು ನನ್ನನ್ನು ನಾನೇ ಪ್ರಶ್ನಿಸುವಂತಾಯಿತು. ಆದರೆ ಪದ್ಮಾಸನದಲ್ಲಿ ಕುಳಿತಿದ್ದ ನಾನು ಹಾಗೆಯೇ ಕುಳಿತಿದ್ದೆ. ಜಾಗೃತನಾಗಿದ್ದದ್ದು ಸ್ಪಷ್ಟವಾಗಿ ಅರಿವಿನಲ್ಲಿತ್ತು. ಪ್ರಥಮ ಬಾರಿಗೆ 'ಭಾವ'ಲೋಕದ ಯಾನದ ಉತ್ಕಟತೆಯನ್ನು ಅನುಭವಿಸಿದೆ. 
        ಇದೇನಿದು? ಈ ಅನುಭವಗಳ ಮರ್ಮವೇನು? ನಾನು ಇವುಗಳನ್ನು ಮನೋವಿಜ್ಞಾನದ ದೃಷ್ಟಿಯಿಂದ ಅರಿಯಲು ಹೋಗಿ ಕೊನೆಗೆ ಏನು ಮಾಡಿದೆ? ಅಸಲಿಗೆ ತಂತ್ರ ವಿದ್ಯೆ ಎಂದರೇನು? ತಂತ್ರವೆಂದರೆ ಮಾಟ,ಮಂತ್ರಗಳ ಆಟವೇ? ಬಹುತೇಕ ಜನರಲ್ಲಿರುವ ತಂತ್ರದ ಬಗೆಗಿರುವ ತಪ್ಪು ಕಲ್ಪನೆ ಏನು? ಮುಂದಿನ ಕಂತಿನಲ್ಲಿ ಬರೆಯುತ್ತೇನೆ. 

Friday, 11 October 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 9


        ದೀಕ್ಷೆ ನೀಡಿದ ನಂತರ ಎರಡು ದಿನಗಳು ನನ್ನೊಂದಿಗಿದ್ದ ಗುರುಗಳು ನಂತರ ತಮ್ಮ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗುವವರಿದ್ದರು. ಹೊರಡುವ ಮುನ್ನ ಒಮ್ಮೆ ನದೀ ತೀರದಲ್ಲಿ ಕುಳಿತು ತಂತ್ರ ವಿದ್ಯೆಯ ಮಹತ್ವ ಹಾಗೂ ಅನುಷ್ಠಾನದ  ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. 'ತಂತ್ರ ವಿದ್ಯೆಯ ಪ್ರಥಮ ಗುರು ಶಿವ. ದೇವಾನುದೇವತೆಗಳಿಗೂ ದುರ್ಲಭ ಎನ್ನುವಂತಹ ಈ ವಿದ್ಯೆಯನ್ನು ಶಿವನು ಪ್ರಥಮ ಬಾರಿ ಪಾರ್ವತಿಗೆ ಬೋಧಿಸುತ್ತಾನೆ. ಈ ವಿದ್ಯೆಗೆ ಅರ್ಹರಾಗುವವರು ಅದೃಷ್ಟವಂತರು. ಇದನ್ನು ಪಡೆದ ಮೇಲೆ, ಈ ವಿದ್ಯೆಯ ಮರ್ಮವನ್ನು ಸಾಧಿಸಿಕೊಂಡ ಮೇಲೆ ನಿಜವಾಗಿಯೂ ಅರ್ಹರು ಎಂದು ಅನ್ನಿಸಿದರೆ ಮಾತ್ರ ಅವರಿಗೆ ಕಲಿಸಬಹುದು. ಅದನ್ನು ಆಸಕ್ತಿಯಿಂದ ಬೇಡಿಕೊಂಡು ಬಂದವರಿಗೆ ಮಾತ್ರ ನೀನು ಕಲಿಸು. ನೀನಾಗಿಯೇ ಯಾರ ಮೇಲೂ ಹೇರಲು ಹೋಗಬೇಡ. ಮಂತ್ರ ಸಿದ್ಧಿಯಾದ ಮೇಲೆ ಅನವಶ್ಯಕ ಪ್ರಯೋಗಗಳನ್ನು ಮಾಡಬೇಡ. ದೇವೀ ಪೂಜೆಯ ಆರಂಭದಲ್ಲಿ ಆಕೆಯ ಪರಿವಾರದೊಂದಿಗೆ, ಆಕೆಯ ವಾಹನದೊಂದಿಗೆ ಹೇಗೆ ದೇವಿಯನ್ನು ಆಹ್ವಾನಿಸುವೆಯೋ ಹಾಗೆಯೇ ಮುಗಿಸುವಾಗ ಅವಳನ್ನು ಆಕೆಯ ಸ್ವಸ್ಥಾನಕ್ಕೆ ಕಳಿಸಲು ಮರೆಯಬೇಡ. ಪ್ರತಿದಿನ ಒಮ್ಮೆ ಜಪ,ಧ್ಯಾನಕ್ಕೆ ಕುಳಿತರೆ ಹತ್ತುಸಾವಿರ ಜಪ ಮುಗಿಯುವವರೆಗೆ ಅಲ್ಲಿಂದ ಏಳಬೇಡ. ಪೂಜೆ ಮಾಡುವಾಗ ವಿಧಿವಿಧಾನಗಳು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾದುದು 'ಭಾವ.' ತಾಯಿಯ ಭಾವ ಅತ್ಯಂತ ಕರುಣಾಭರಿತವಾದದ್ದು, ವಾತ್ಸಲ್ಯದಿಂದ ತುಂಬಿರುವಂತಹದ್ದು. 'ಅಮ್ಮಾ' ಎಂದು ಕರೆಯುವಾಗ ಹೃದಯ ತುಂಬಿ ಕರೆಯಬೇಕು. ಆಕೆಗೆ ಸಂಪೂರ್ಣವಾಗಿ ಶರಣಾಗಬೇಕು. ಸಮರ್ಪಣಾಭಾವ ಅತ್ಯಂತ ಮುಖ್ಯ. ಎಲ್ಲವನ್ನೂ ಆಕೆಗೆ ಅರ್ಪಿಸಿಕೊಳ್ಳಬೇಕು. ಗಮನ ಅತ್ತಿತ್ತ ಹೋದರೂ ಮತ್ತೆ ಎಳೆದು ತಂದು ಆಕೆಯ ಪಾದಕಮಲಗಳಲ್ಲಿ ಸ್ಥಿರವಾಗಿರಿಸು. ಯಾವ ಕಾರಣಕ್ಕೂ ನಿರಾಶನಾಗಬೇಡ. ನಿನ್ನ ಶ್ರದ್ಧೆಗೆ, ಉಪಾಸನೆಗೆ ತಕ್ಕ ಬೆಲೆ ಸಿಕ್ಕೇ ಸಿಗುತ್ತದೆ. ಯಾವ ಕಾರಣಕ್ಕೂ ನಿನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳಬೇಡ. ಹಣ್ಣುಹಂಪಲು ಅಥವಾ ಸ್ವಯಂಪಾಕವನ್ನೇ ಆಕೆಗೆ ನೈವೇದ್ಯವಾಗಿ ಅರ್ಪಿಸು. ನಾನು ಉತ್ತರಭಾರತದೆಡೆ ಹೊರಡುತ್ತಿದ್ದೇನೆ. ಸುಮಾರು ಇಪ್ಪತ್ತು ದಿನಗಳ ನಂತರ ಮತ್ತೆ ಬರುತ್ತೇನೆ. ಅಲ್ಲಿಯವರೆಗೂ ನಾನು ಹೇಳಿಕೊಟ್ಟ ವಿಧಿವಿಧಾನಗಳೊಂದಿಗೆ ನಿನ್ನ ಸಾಧನೆಯನ್ನು ಮುಂದುವರೆಸು. ನಿನಗೆ ಒಳ್ಳೆಯದಾಗಲಿ' ಎಂದು ಆಶೀರ್ವದಿಸಿ ಹೊರಟರು. ತಂದೆಯಂತೆ, ಗೆಳೆಯನಂತೆ ಜೊತೆಗಿದ್ದ ಗುರುಗಳು ಕೆಲದಿನಗಳ ಮಟ್ಟಿಗೆ ಹೊರಟಾಗ  ಒಮ್ಮೆಗೇ ಒಂಟಿತನ ನನ್ನನ್ನು ಕಾಡಿತು. ಇಲ್ಲಿಂದ ಮುಂದೆ ನನ್ನದು ಏಕಾಂಗಿ ಪಯಣ ! 

        ಪ್ರತಿದಿನ ಬೆಳಿಗ್ಗೆ ಮೂರು ಘಂಟೆಗೆ ಏಳುವುದು, ಪ್ರಾತಃಕ್ರಿಯೆಗಳನ್ನು ಮುಗಿಸಿ ದೇವಿಯ ಉಪಾಸನೆ ಮಾಡುವುದು. ಸಂಜೆಯ ನಂತರ ಒಂದಷ್ಟು ಕಾಲ ವ್ಯಾಯಾಮಶಾಲೆಗೆ ಹೋಗಿ ಗೆಳೆಯರೊಂದಿಗೆ ಕಳೆಯುವುದು.. ಇದು ನನ್ನ ದಿನಚರಿಯಾಗಿ ಹೋಯಿತು. ಒಂದು ವಾರ ಕಳೆಯುವುದರೊಳಗೆ ಒಂದಷ್ಟು ನಿರಾಸೆ, ಒಂದಷ್ಟು ಹತಾಶೆ ಮೂಡಲಾರಂಭಿಸಿದವು. 'ಏನಾಗುತ್ತಿದೆ? ಯಾವುದೇ ಅನುಭವಗಳು ಸಿಗುತ್ತಿಲ್ಲ. ಯಾಂತ್ರಿಕವಾಗಿ ಬದುಕು ಸಾಗುತ್ತಿದೆಯೇ? ಫಲಪ್ರಾಪ್ತಿಯ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸುಮ್ಮನೆ ಸಮಯ ಕಳೆಯುತ್ತಿದ್ದೇನೆಯೇ?' ಎಂಬೆಲ್ಲ ಪ್ರಶ್ನೆಗಳು ಮನಸ್ಸಿನೊಳಗೆ ನುಸುಳಲಾರಂಭಿಸಿದವು. ಹಾಗೆ ಅನಿಸಿದಾಗೆಲ್ಲ  ಮೈ ಕೊಡವಿ ಎಚ್ಚೆತ್ತುಕೊಳ್ಳುತ್ತಿದ್ದೆ. 'ಇಲ್ಲ, ನಾನಿದನ್ನು ಸಾಧಿಸಿಯೇ ತೀರುತ್ತೇನೆ' ಎಂದು ಹೇಳಿಕೊಂಡು ದೇಹಕ್ಕೆ ದಣಿವಾದರೂ ಛಲದಿಂದ ಮುಂದುವರೆಯುತ್ತಿದ್ದೆ. ಏನಾದರೂ ಸಲಹೆ ಕೇಳೋಣವೆಂದರೆ ಗುರುಗಳು ಬಳಿಯಲ್ಲಿಲ್ಲ. ಗೆಳೆಯರ ಬಳಿ ಚರ್ಚೆ ಮಾಡಲು ಮನಸ್ಸಿರಲಿಲ್ಲ. ಧೃಢನಿರ್ಧಾರದಿಂದ ಮುಂದೆ ನಡೆಯುತ್ತಿದ್ದೆ. ದಿನಗಳು ಕಳೆದಂತೆ ದೇವೀಮೂರ್ತಿಯೊಂದಿಗೆ ಒಂದು ಪವಿತ್ರ ಮಾತೃತ್ವದ ಅನುಬಂಧ ಬೆಳೆಯುತ್ತಿತ್ತು. 

        ಪೂಜಾವಿಧಾನದಲ್ಲಿ ಮೂರ್ತಿಯಲ್ಲಿ ದೇವಿಯನ್ನು ಆಕೆಯ ಪರಿವಾರಸಮೇತವಾಗಿ ಆವಾಹನೆ ಮಾಡಿ ಪಾದ್ಯ, ಅರ್ಘ್ಯ, ಘಂಟಾನಾದ, ಧೂಪ, ದೀಪ, ನೈವೇದ್ಯ ಇತ್ಯಾದಿಯಾಗಿ ಅರ್ಪಿಸುವುದು ವಾಡಿಕೆಯಾಗಿತ್ತು. ಆರಂಭದಲ್ಲಿ ವಿಧಿವಿಧಾನಗಳಂತೇ ಆಚರಿಸುತ್ತಿದ್ದರೂ ಕೆಲದಿನಗಳಲ್ಲೇ ಇವುಗಳನ್ನೆಲ್ಲಾ ಪ್ರೀತಿಯಿಂದ ಭಾವುಕನಾಗಿ ಅನುಭವಿಸುವಂತಾದೆ. 'ಅಮ್ಮಾ' ಎಂದು  ದೇವಿಯ ಮೂರ್ತಿಯನ್ನು ಎದೆಗಪ್ಪಿಕೊಂಡಾಗ ಕಣ್ಣಲ್ಲಿ ತಾನಾಗೇ ನೀರು ತುಂಬಿ ಬರುತ್ತಿತ್ತು. 

ಅದೊಂದು ದಿನ !
        ಶ್ರೀಚಕ್ರ ಯಂತ್ರವನ್ನು ಬರೆದಿರುವಂತಹ ತಾಮ್ರದ ಹಾಳೆಯ ಮೇಲೆ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾವಿಧಿಯನ್ನು ಪ್ರಾರಂಭಿಸಿದ್ದೆ. ದೇವಿಯ ಆವಾಹನೆಯನ್ನು ಮಾಡಿ ಆಕೆಗೆ ಅರ್ಘ್ಯಾದಿ ಉಪಚಾರಗಳನ್ನು ಮಾಡಲು ಸಿದ್ಧನಾಗಿದ್ದೆ. ಆರಂಭದಲ್ಲಿ ಪ್ರಾಣಪ್ರತಿಷ್ಠೆ ಮಾಡುವ ಮುನ್ನ ಒಂದು ವಿಚಿತ್ರ ಅನುಭವ ಘಟಿಸಿತು. ಪೂಜಾವಿಧಿಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಇದ್ದಕ್ಕಿದ್ದಂತೆ ಒಂದು ಅಚ್ಚರಿ ಕಾದಿತ್ತು. 

       ಎದುರಿಗಿದ್ದ ಶ್ರೀಚಕ್ರ ಇದಕ್ಕಿದ್ದಂತೆ ಮಾಯವಾಗಿ ಹೋಯಿತು. ಆ ಜಾಗದಲ್ಲಿ ಹಲವಾರು ದೇವಾನುದೇವತೆಗಳು ಹಾಗೂ ಸಪ್ತರ್ಷಿಗಳು ಮುಂತಾದವರು ಕಾಣುತ್ತಿದ್ದರು. ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೆ. ಒಂದೆಡೆ ಸಮುದ್ರರಾಜನು ಗೋಚರಿಸಿದ. ಮಾರೀಚನೆಂಬ ಋಷಿಯ ಕಣ್ಣು ಕೆಂಪಾಗಿರುವುದನ್ನು ಗಮನಿಸಿದೆ. ಎಲ್ಲರೂ ಒಂದು ರೀತಿಯ ಚಡಪಡಿಕೆಯಲ್ಲಿದ್ದರು. ‘ಇವರೇಕೆ ಹೀಗಿದ್ದಾರೆ? ಏನಕ್ಕಾಗಿ ಕಾಯುತ್ತಿದ್ದಾರೆ?’ ಎಂದರೆ ಅವರೆಲ್ಲರೂ ನಾನು ಪ್ರಾಣಪ್ರತಿಷ್ಠೆ ಮಾಡಲಿರುವ ಘಳಿಗೆಗಾಗಿ ಕಾಯುತ್ತಿದ್ದಾರೆ ಎಂದು ಅದು ಹೇಗೋ ಮನವರಿಕೆಯಾಯಿತು. ಆಗ ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸಿತು. ದೇವಾನುದೇವತೆಗಳು, ಋಷಿಮುನಿಗಳು ನನ್ನ ಬಾಯಿಂದ ಹೊರಬರುವ ಮಂತ್ರಕ್ಕಾಗಿ ಕಾಯುತ್ತಿದ್ದಾರೆ. (ಯಕಃಶ್ಚಿತ್ ನನ್ನ ಬಾಯಿಂದ!) 

        ನಾನು ಪ್ರಾಣಪ್ರತಿಷ್ಠೆಗೆ ಅನುವಾಗುತ್ತಿದ್ದಂತೆ ದೊಡ್ಡ ಘರ್ಜನೆಯೊಂದಿಗೆ ಸಿಂಹವೊಂದು ಅಂತರಿಕ್ಷದಿಂದೆಂಬಂತೆ ಬಂದು ಪ್ರತ್ಯಕ್ಷವಾಯಿತು. ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಸಡಗರ. ಇನ್ನೇನು ಸಾಕ್ಷಾತ್ ಜಗನ್ಮಾತೆ ಸಾಕಾರಗೊಳ್ಳುವ ಘಳಿಗೆಗಾಗಿ ಕ್ಷಣಗಣನೆ!! ಆ ಸಿಂಹದ ಗಾಂಭೀರ್ಯ, ಚೆಂದ ಹಾಗೂ ಮೃದುವಾದ ಕೇಶರಾಶಿಯನ್ನು ವರ್ಣಿಸುವುದು ಕಷ್ಟ. ಅಷ್ಟು ಮುದ್ದಾಗಿತ್ತು ಆ ಸಿಂಹ.

        ನನ್ನ ಬಾಯಿಂದ ಮಂತ್ರಗಳು ಯಾಂತ್ರಿಕವಾಗಿ ಹೊರಬೀಳುತ್ತಲೇ ಇದ್ದವು. ಪ್ರಾಣಪ್ರತಿಷ್ಠೆಯ ಮಂತ್ರವನ್ನು ಹೇಳಿದಾಗ ಭಗ್ಗನೆ ಬೆಳಕೊಂದು ಸಂಚರಿಸಿದಂತಾಯಿತು. ಆ ಬೆಳಕೇ ಕ್ರೋಢೀಕರಿಸಿ ಒಂದು ಸ್ನಿಗ್ಧ ಸೌಂದರ್ಯದ ಹೆಣ್ಣಾಗಿ, ನಂತರ ಚಾಮುಂಡಿಯಾಗಿ ಆ ಸಿಂಹದ ಮೇಲೆ ಆಸೀನವಾಯಿತು. ಆಕೆ ಕುಳಿತುಕೊಂಡಾಗ ಆಕೆಯ ಬಲಗಾಲು ಸ್ವಲ್ಪ ಬಾಗಿ ಕಾಲಿನ ತುದಿಬೆರಳುಗಳು ಮಾತ್ರ ನೆಲಕ್ಕೆ ತಾಗಿಕೊಂಡಿದ್ದನ್ನು ಗಮನಿಸಿದೆ. ನನ್ನ ಕಣ್ಣುಗಳು ಆ ಸುಂದರ ಹಾಗೂ ಮನೋಹರವಾದ ರಕ್ತವರ್ಣದಿಂದ ಮಿಳಿತಗೊಂಡತ್ತಿದ್ದ ಪಾದಗಳ ಮೇಲೆ ಕೇಂದ್ರಿಕೃತವಾಗಿದ್ದವು. ಒಬ್ಬ ಅತಿ ನಿಷ್ಣಾತ ಕಲಾವಿದ ಮಾತ್ರ ಆ ಕಾಲುಗಳ ಚಿತ್ರವನ್ನು ಕುಂಚದಲ್ಲಿ ಸೆರೆ ಹಿಡಿಯಬಲ್ಲನೇನೋ, ಅಂತಹ ಒಂದು ಮಧುರಭಾವ ಅಲ್ಲಿತ್ತು. ನನಗೆ ಆ ಕಾಲುಗಳ ಸೌಂದರ್ಯ ಎಷ್ಟು ಮಂತ್ರಮುಗ್ಧನನ್ನಾಗಿಸಿತ್ತೆಂದರೆ ಆಕೆಯ ಮುಖ ಹೇಗಿರುತ್ತದೆ ಎಂದು ನೋಡುವ ಬಯಕೆಯನ್ನೇ ಅದು ಮರೆಸಿತ್ತು.

        ಮಂತ್ರಗಳು ತನ್ನಂತಾನೇ ಬಾಯಿಂದ ಹೊರಬೀಳುತ್ತಲೇ ಇದ್ದವು. ನಾನು ಷೋಡಶೋಪಚಾರ ಮಾಡುವಾಗ ಅಲ್ಲಿದ್ದ ಪ್ರತಿಯೊಬ್ಬ ದೇವಾನುದೇವತೆಗಳು ಹಾಗೂ ಋಷಿಗಳು ಅದನ್ನು ಅನುಸರಿಸುತ್ತಿದ್ದರು. ಉದಾಹರಣೆಗೆ ನಾನು `ಪಾದ್ಯಂ ಸಮರ್ಪಯಾಮಿ' ಎಂದೊಡನೆ ಎಲ್ಲರೂ ದೇವಿಗೆ ಪಾದ್ಯವನ್ನು ಸಮರ್ಪಿಸುತ್ತಿದ್ದರು. ಈ ರೀತಿಯ ಎಲ್ಲ ವಿಧಿ ವಿಧಾನಗಳಿಗೂ ನಾನೇ ಕಾರಕನಾಗಿದ್ದೆ. ಕೆಲಕಾಲ ನಾನು ಈ ಗುಂಗಿನಲ್ಲಿಯೇ ಇದ್ದೆ. ಮತ್ತೆ ಒಮ್ಮೆ ಮೈಕೊಡವಿದಂತಾಗಿ ವಾಸ್ತವಕ್ಕೆ ಬಂದೆ.      

        ಅದೇ ಶ್ರೀಚಕ್ರ, ಅದೇ ಹೂಗಳು, ಅದೇ ಅಕ್ಷತೆ ಹೀಗೆ ಎಲ್ಲವೂ ಮತ್ತೆ ಕಣ್ಣ ಮುಂದೆ ಮೂಡಿದವು. ಮತ್ತೆ ಎಷ್ಟು ಪ್ರಯತ್ನ ಪಟ್ಟರೂ ಆ ದೃಶ್ಯ ಮರುಕಳಿಸಲಿಲ್ಲ. ನನ್ನನ್ನು ನಾನೇ ಹಳಿದುಕೊಂಡೆ 'ಅಯ್ಯೋ ಇಂತಹ ಮುಠ್ಠಾಳ ನಾನು ! ಒಮ್ಮೆಯಾದರೂ ಕತ್ತೆತ್ತಿ ಮುಖ ನೋಡಲಿಲ್ಲವೇ? ಯಾಕಮ್ಮಾ ನನಗೆ ಈ ಭಾಗ್ಯ ಕರುಣಿಸಲಿಲ್ಲ' ಎಂದು ಮೌನವಾಗಿ ರೋಧಿಸಿದೆ. ಬಹುಹೊತ್ತು ಕಾದಿದ್ದು ಒಲ್ಲದ ಮನಸ್ಸಿನಿಂದ ಅಂದಿನ ಪೂಜೆಯನ್ನು ಮುಗಿಸಿದ್ದೆ.