Monday, 31 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು 3 - ಅಷ್ಟಾಂಗಯೋಗ

          ಮೊತ್ತ ಮೊದಲು ಪಾತಂಜಲಿ (ಪತಂಜಲಿ) ಯೋಗಸೂತ್ರವನ್ನು ನನಗೆ ಬೋಧಿಸಲಾಯಿತು. ಪಾತಂಜಲಿ ಮಹರ್ಷಿಗಳ ಅಷ್ಟಾಂಗಯೋಗವನ್ನು ಸರಳವಾಗಿ ವಿವರಿಸಲು ಇಚ್ಛಿಸುತ್ತೇನೆ. ಇದು ದೇಹ, ಮನಸ್ಸು ಹಾಗೂ ಜ್ಞಾನಕ್ಕೆ 
ಸಂಬಂಧಪಟ್ಟಿರುವಂತಹದ್ದು. ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳಲ್ಲಿ ಸಾಧನೆ ಮಾಡಿದರೆ ಜ್ಞಾನ ಪ್ರಾಪ್ತವಾಗುವುದು. 
          ಏನಿದು ಜ್ಞಾನ ? ಈ ಜ್ಞಾನ ಸಾಮಾನ್ಯವಾದದ್ದಲ್ಲ. ಆದರೆ ಇದನ್ನು ವಿವರಿಸಿ ಹೇಳುವುದೂ ಸುಲಭವಲ್ಲ. ಇದೊಂದು ರೀತಿಯಲ್ಲಿ ಸಮಗ್ರ ಅರಿವು ಎಂದು ಹೇಳಬಹುದು. ಪ್ರಪಂಚದ ಅರಿವು, ಜೀವನದ ಅರಿವು, ಜೀವದ ಅರಿವು, ಆತ್ಮದ ಅರಿವು, ಪರಮಾತ್ಮನ ಅರಿವು... ಹೀಗೆ. ಯಮ ನಿಯಮದ ಎಂಟು ಅಂಗಗಳಲ್ಲಿ ಮನಸ್ಸಿಗೆ ಅತ್ಯಂತ ಪ್ರಾಮುಖ್ಯತೆ ಉಂಟು. ಮೊದಲ ನಾಲ್ಕು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಮಗಳು ದೇಹ ಹಾಗೂ ಅದರ ಆರೋಗ್ಯಕ್ಕೂ ಸಂಬಂಧ ಪಟ್ಟಿವೆ. 'ಶರೀರಮಾದ್ಯಮ್ ಖಲು ಧರ್ಮ ಸಾಧನಂ'  ಎಂದು ಹೇಳಿದಂತೆ ಯಾವುದೇ ಸಾಧನೆ ಮಾಡಬೇಕಾದರೂ ನಮ್ಮ ಶರೀರ ಆರೋಗ್ಯಕರವಾಗಿ ಇರಲೇ ಬೇಕು.
          ಏನಿದು ಯಮ ನಿಯಮಾದಿಗಳು ?

೧. ಯಮ - ಇಲ್ಲಿ ಬದುಕಬೇಕಾದ ರೀತಿಯ ಬಗ್ಗೆ ತಿಳಿಹೇಳಲಾಗುತ್ತದೆ. ನೆಮ್ಮದಿಯಿಂದ, ಮರ್ಯಾದೆಯಿಂದ ಬದುಕಬೇಕಾದರೆ ನಾವು ಒಂದಷ್ಟು ಆದರ್ಶಗಳನ್ನು ರೂಢಿಸಿಗೊಳ್ಳಬೇಕಾಗುತ್ತದೆ. ಉದಾಹರಣೆಗೆ ಯಾರನ್ನೂ ಅಥವಾ ಯಾವುದನ್ನೂ ಹಿಂಸೆ ಮಾಡದಿರುವುದು, ಪರರ ಸ್ವತ್ತಿಗೆ ಆಸೆ ಪಡದಿರುವುದು, ಪರರ ವಸ್ತುವನ್ನು ಕದಿಯದಿರುವುದು,  ಸತ್ಯವನ್ನೇ ಹೇಳುವುದು, ಬ್ರಹ್ಮಚರ್ಯವನ್ನು ಪಾಲಿಸುವುದು.. ಹೀಗೆ ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಲು ಇಲ್ಲಿ ಸಾಧಕನನ್ನು ತಯಾರು ಮಾಡಲಾಗುತ್ತದೆ.

೨. ನಿಯಮ - ಮೌಲ್ಯಗಳನ್ನು ನೀವು ಎಷ್ಟರ ಮಟ್ಟಿಗೆ ಪಾಲಿಸುತ್ತೀರೋ ಅದು ನಿಮಗೆ ಬಿಟ್ಟದ್ದು. ನೀವು ಇಹಲೋಕದಲ್ಲಿ ನೆಮ್ಮದಿಯಿಂದ ಬದುಕಲು ಹಾಗೂ ಮುಕ್ತಿ ಪಡೆಯಲು ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಶುಚಿತ್ವ - ಇಲ್ಲಿ ಬಹಿರಂಗ ಶುದ್ಧಿಯೂ ಮುಖ್ಯ, ಅಂತರಂಗ ಶುದ್ಧಿಯೂ ಮುಖ್ಯವಾಗುತ್ತದೆ.
ಸಂತೋಷ - ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಸಂತಸದಿಂದ ಬಾಳುವುದು ಹೇಗೆ ಎನ್ನುವುದನ್ನು ತಿಳಿಸಲಾಗುತ್ತದೆ. ನಮಗೆ ಸಿಕ್ಕಿದ್ದರಲ್ಲಿ ತೃಪ್ತಿ ಕಾಣುವುದು ಹೇಗೆ? ಎನ್ನುವುದನ್ನು ಮನದಟ್ಟು ಮಾಡಲಾಗುತ್ತದೆ.
ತಪಸ್ಸು- ಇಲ್ಲಿ ತಪಸ್ಸು ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಎಲ್ಲೋ ಹೋಗಿ ಧ್ಯಾನ ಮಾಡುವುದಲ್ಲ. ನಮ್ಮ ಮೌಲ್ಯಗಳಿಗೆ ನಾವು ತೋರುವ ನಿಷ್ಠೆ ಹಾಗೂ ನಮ್ಮ ಜೀವನವನ್ನು ಆದಷ್ಟು ಕಲ್ಮಶರಹಿತವಾಗಿಡುವುದಕ್ಕೆ ತೋರುವ ಶಿಸ್ತು.
          ಯಮ-ನಿಯಮಗಳನ್ನು ನೂರಕ್ಕೆ ನೂರು ಅನ್ನಲಾಗದಿದ್ದರೂ ಬಹುತೇಕ ನಾನು ಪಾಲಿಸುತ್ತಿದ್ದೆ. ನನ್ನ ಗುರಿ ಮುಂದಿನ ಆರು ಅಂಗಗಳಲ್ಲಿ ಕೇಂದ್ರೀಕೃತವಾಗಿತ್ತು. ಅಲ್ಲಿ ನನಗಾದ ಅನುಭವಗಳನ್ನು ಒಂದೊಂದಾಗಿ ಬಿಚ್ಚಿಡುತ್ತೇನೆ.

೩ . ಆಸನ - ಎಲ್ಲಾ ಆಸನಗಳನ್ನು ಕರತಲಾಮಲಕ ಮಾಡಿಕೊಳ್ಳಬೇಕೆಂದು ಅವಿರತ ಅಭ್ಯಾಸ ಮಾಡುತ್ತಿದ್ದೆ. ಮೈಕೈ ನೋವಾದರೂ ಲೆಕ್ಕಿಸದೇ ಮುಂದುವರೆಯುತ್ತಿದ್ದೆ. ಯಾವುದೇ ಆಸನದಲ್ಲಿ ಎರಡು ಗಂಟೆಗಳ ಕಾಲ ನೋವಿಲ್ಲದೇ ಇರಲು ಸಾಧ್ಯವಾದರೆ ಆ ಆಸನ ನಮಗೆ ಸಿದ್ಧಿಸಿದೆ ಎಂದರ್ಥ. ಹೀಗೆ ಹಲವಾರು ಆಸನಗಳನ್ನು ಸಿದ್ಧಿಸಿಕೊಂಡ ಮೇಲೆ ಒಮ್ಮೆ ಯೋಚಿಸಿದೆ. ನನಗೆ, ನನ್ನ ದೇಹಕ್ಕೆ ಬೇಕಾದ ಆಯ್ದ ಆಸನಗಳ ಪಟ್ಟಿ ಮಾಡಿಕೊಂಡೆ. ಬೆನ್ನುಹುರಿಗೆ ಅನುವಾಗಲು ಚಕ್ರಾಸನ, ಭುಜಂಗಾಸನ, ಪಶ್ಚಿಮೋತ್ತಾನಾಸನ ಹಾಗೂ ಅರ್ಧ ಮತ್ಸ್ಯೇ೦ದ್ರಾಸನ (ಎರಡೂ ಬದಿಯಲ್ಲಿ), ರಕ್ತಸಂಚಾರಕ್ಕಾಗಿ ಶೀರ್ಷಾಸನ , ಧ್ಯಾನಕ್ಕೆ ಅನುಕೂಲವಾಗಲು ಪದ್ಮಾಸನ, ಮನಸ್ಸಿನ, ಮೆದುಳಿನ ಬೆಳವಣಿಗೆಗೆ ಗೋಮುಖಾಸನ, ಕೊನೆಗೆ ಶವಾಸನ, ಇವುಗಳನ್ನು ಆಯ್ದುಕೊಂಡು ಮಿಕ್ಕ ಆಸನಗಳನ್ನೆಲ್ಲ ಬದಿಗಿರಿಸಿದೆ. 
          ಆಸನಗಳನ್ನು ಅಭ್ಯಸಿಸುವಾಗ ಗುರುಮುಖೇನ ಏಕೆ ಕಲಿಯಬೇಕು ಎನ್ನುವುದೂ ಅರಿವಾಯಿತು. ಉಸಿರಾಟದ ಕ್ರಮವನ್ನು (ಯಾವಾಗ ಉಸಿರು ತೆಗೆದುಕೊಳ್ಳಬೇಕು, ಯಾವಾಗ ಬಿಡಬೇಕು) ನನ್ನ ಗುರುಗಳು ಸಕಾರಣವಾಗಿ ವಿವರಿಸಿದರು. ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಂಡಾಗ ಎಲ್ಲಿ ತಪ್ಪು ಆಗುತ್ತಿದೆಯೆಂದು ತೋರಿಸಿದರು. ಎಲ್ಲಕ್ಕೂ ಮಿಗಿಲಾಗಿ ಎಷ್ಟು ನಿಧಾನವಾಗಿ ಕ್ರಿಯೆಗಳನ್ನು ನಡೆಸಬೇಕೆಂದು ಹಂತ ಹಂತವಾಗಿ ತೋರಿಸಿದರು. 'ಷಣ್ಮುಖೀ ಮುದ್ರೆ' ಅಭ್ಯಸಿಸುವಾಗ ಅನಾಹತ ಧ್ವನಿಯನ್ನು ಕಿವಿಯಾರೆ ಕೇಳುವಂತೆ ಮಾಡಿದರು.
          ಪ್ರಾಣಾಯಾಮ ಹಾಗೂ  ಧ್ಯಾನದ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೀಡುತ್ತೇನೆ ಹಾಗೂ ಪವಾಡದಂತೆ ಕಂಡ ಗುರುಗಳ ಒಂದು ಕೃತ್ಯದ ಬಗ್ಗೆ ಬರೆಯುತ್ತೇನೆ. 

Saturday, 29 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 2

          ಯೋಗಾಭ್ಯಾಸಕ್ಕಾಗಿ ಗುರುಗಳ ಹುಡುಕಾಟದಲ್ಲಿದ್ದೆ. ನ್ಯಾಷನಲ್ ಶಾಲೆಯ ನನ್ನ 'ಸಂಸ್ಕೃತ' ಗುರುಗಳಾದ ಕೆ.ಟಿ.ಎಸ್ ಅವರು ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ಯೋಗಾಭ್ಯಾಸ ಮಾಡಲು ಉತ್ತಮ ಶಾಲೆ ಎಂದು ಸೂಚಿಸಿದರು. 'ಅಲ್ಲಿ ಗುರುಗಳಾಗಿರುವ ಚಿ.ವಿಶ್ವೇಶ್ವರಯ್ಯನವರಲ್ಲದೇ ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಕೂಡ ಆಗಾಗ ಬರುತ್ತಿರುತ್ತಾರೆ. ಅವರ ಬಳಿಯೂ ಕಲಿಯುವುದು ಸಾಕಷ್ಟಿದೆ' ಎಂದು ಹೇಳಿ ಅಲ್ಲೇ ಸೇರುವಂತೆ ಉತ್ತೇಜಿಸಿದರು. ನಾನು ಹೋಗಿ ಶ್ರೀ ವಿಶ್ವೇಶ್ವರಯ್ಯನವರನ್ನು ಭೇಟಿಯಾಗಿ ನನ್ನ ಮನದ ಇಂಗಿತವನ್ನು ಹೇಳಿಕೊಂಡೆ. 'ಯೋಗಾಭ್ಯಾಸ, ಪ್ರಾಣಾಯಾಮವಲ್ಲದೇ ಇನ್ನಾವುದೇ ರೀತಿಯ ಸಾಧನೆಗಳನ್ನಾದರೂ ಮಾಡುವುದು ನನಗೆ ಇಷ್ಟ' ಎಂದು ಹೇಳಿದೆ. ವಿಶ್ವೇಶ್ವರಯ್ಯನವರು "ಒಂದೆರಡು ತಿಂಗಳು ಯೋಗಾಭ್ಯಾಸ ಹಾಗೂ ಪ್ರಾಣಾಯಾಮದ ತರಬೇತಿ ಪಡೆಯಿರಿ. ನಂತರ ನಿಮಗೆ 'ತ್ರಾಟಕ' ಎಂಬ ಕಣ್ಣಿಗೆ ಹಾಗೂ ಮನಸ್ಸಿಗೆ ಪ್ರಯೋಗ ಒಡ್ಡುವ ವಿದ್ಯೆಯನ್ನು ಹೇಳಿಕೊಡುತ್ತೇನೆ, ನಾಳೆ ಬೆಳಿಗ್ಗೆ ಆರು ಗಂಟೆಗೆ ಮಂದಿರಕ್ಕೆ ಬನ್ನಿ" ಎಂದರು. 'ಸರಿ' ಎಂದು ನಾನು ಹೊರಡುವಾಗ "ಬೆಳಿಗ್ಗೆ ಬೇಗ ಎದ್ದು ಅಭ್ಯಾಸವಿದೆಯೋ? ಇಲ್ಲದಿದ್ದರೂ ಪರವಾಗಿಲ್ಲ, ಒಂದು ಗುಟ್ಟು ಹೇಳುತ್ತೇನೆ. 'ನಾನು ಆರು ಗಂಟೆಗೆ ಅಲ್ಲಿ ಇದ್ದೇ ಇರುತ್ತೇನೆ' ಎಂದು ಮನಸ್ಸಿನಲ್ಲಿ ತೀರ್ಮಾನ ಮಾಡಿಕೊಳ್ಳಿ. ನೀವು ಆಗ ಎದ್ದೇ ಏಳುವಿರಿ, ಬಂದೇ ಬರುತ್ತೀರಿ" ಎಂದು ಹೇಳಿ ನಕ್ಕರು. ಯೋಗದ ಪ್ರಥಮ ಪಾಠವನ್ನು, ಸೇರುವ ಮುನ್ನವೇ ಹೇಳಿಕೊಟ್ಟಿದ್ದರು. 
          ಮರುದಿನ ಬೆಳಿಗ್ಗೆ ಐದೂ ಮೂವತ್ತಕ್ಕೆ ಅಲಾರಾಂ ಇಟ್ಟಿದ್ದೆ. ಅಲಾರಾಂ ಹೊಡೆಯುವ ಮುನ್ನವೇ ಐದೂ ಇಪ್ಪತ್ತೊಂಭತ್ತಕ್ಕೇ ಎಚ್ಚರವಾಗಿತ್ತು. ಹೊರಗೆ ಬಂದಾಗ ಕೊರೆಯುವ ಚಳಿ. ಯೋಗಶಾಲೆ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದುದರಿಂದ ಆರಾಮಾಗಿ ಆರು ಗಂಟೆಗೆ ಮೊದಲೇ ತಲುಪಿದೆ. ಕಟ್ಟಡದ ಟೆರೇಸಿನ ಮೇಲೆ ಉಳಿದ ವಿದ್ಯಾರ್ಥಿಗಳೊಂದಿಗೆ ಹೋದೆ. ತುಂಡುಬಟ್ಟೆಯನ್ನುಟ್ಟುಕೊಂಡು ನಿಂತಿದ್ದ ಗುರುಗಳು ಹಿಂದೂ ಧ್ವಜವನ್ನು ಏರಿಸಿ, ಸೂರ್ಯನ ಮಂತ್ರವನ್ನು ಹೇಳುತ್ತಾ, ಸೂರ್ಯನಮಸ್ಕಾರವನ್ನು ಮಾಡಿದರು. ನಂತರ ಎಲ್ಲರೂ ಯೋಗಶಾಲೆಗೆ ಬಂದೆವು. ಮೊದಲ ದಿನ ಬಹಳ ಸುಲಭವಾದ ಎರಡು ಆಸನಗಳನ್ನು ಮಾಡಿಸಿದರು. ನಂತರ ಕೊನೆಗೆ ಸುಲಭಾತಿಸುಲಭವೆಂದು ನನಗನ್ನಿಸಿದ 'ಶವಾಸನ'ವನ್ನು ಮಾಡಿಸಿದರು. ನಾನಂತೂ 'ಯೋಗಾಸನವೆಂದರೆ ಇಷ್ಟೇನೇ, ತಿಂಗಳೆರಡುತಿಂಗಳೊಳಗೆ ಎಲ್ಲಾ ಆಸನಗಳನ್ನೂ ಅರೆದು ಕುಡಿಯುತ್ತೇನೆ' ಎಂದಂದುಕೊಂಡು ಗರ್ವಿಷ್ಠನಾದೆ. 
          ಹಂತಹಂತವಾಗಿ ಮೈಯ್ಯನ್ನು ಹಿಂಡಿ, ತಿರುಚಿ, ತಲೆಕೆಳಗಾಗಿ, ಕೈಕಾಲುಗಳನ್ನೆಳೆದು, ಸೆಳೆದು ಕಷ್ಟಾತಿಕಷ್ಟವಾದ ಆಸನಗಳನ್ನೆಲ್ಲಾ ಕಲಿಸಿದರು. ಜೊತೆಯಲ್ಲಿಯೇ ಪ್ರಾಣಾಯಾಮದ ಪಾಠವೂ ಆರಂಭವಾಗಿತ್ತು. ಅದೂ ಹಾಗೆಯೇ! ಅನುಲೋಮ, ವಿಲೋಮದಂತಹ ಸರಳ ಪ್ರಾಣಾಯಾಮದೊಂದಿಗೆ ಪ್ರಾರಂಭವಾದಾಗ 'ಪ್ರಾಣಾಯಾಮವೆಂದರೆ ಇಷ್ಟೇನೇ' ಎಂದೂ ಅನ್ನಿಸಿತ್ತು. ಆಮೇಲೆ ಗೊತ್ತಲ್ಲ! ಹೌದು, ಉಸಿರು ಬಿಗಿ ಹಿಡಿಯುವುದರಿಂದ ಪ್ರಾರಂಭವಾಗಿ ಮೂಲಬಂಧ, ಜಾಲಂಧರಬಂಧ ಹಾಗೂ ಉಡ್ಯಾನಬಂಧಗಳನ್ನು ಶಾಸ್ತ್ರಬದ್ಧವಾಗಿ, ಕರಾರುವಕ್ಕಾಗಿ ಮಾಡುವ ವೇಳೆಗೆ ಪ್ರಾಣಾಯಾಮಕ್ಕೂ, ಪ್ರಾಣ ಹಾಗೂ ಯಮನಿಗೂ ಇರುವ ಸಂಬಂಧ ಒಂದಷ್ಟು ಅರ್ಥವಾಗಿತ್ತು.             
ಇನ್ನಷ್ಟು ವಿವರಗಳು ಮುಂದಿನ ಬರಹದಲ್ಲಿ.. 

Thursday, 27 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು - 1

             'ಪ್ರಶ್ನಿಸದೇ ಒಪ್ಪಬೇಡ' ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಎಚ್. ನರಸಿಂಹಯ್ಯನವರು (ಪ್ರೀತಿಯ 'ಎಚ್.ಎನ್.') ಹೇಳುತ್ತಿದ್ದ ಮಾತು. ಎಳೆಯ ವಯಸ್ಸಿನಲ್ಲಿ ಮನದಲ್ಲಿ ನಾಟಿದ ಮಾತು. ನನಗೆ ಉಪನಯನವಾದ ಮೇಲೆ ನದೀ ತೀರಕ್ಕೆ ಕರೆದುಕೊಂಡು ಹೋಗಿ ನಮ್ಮ ಆಚಾರ್ಯರು ಸಂಧ್ಯಾವಂದನೆ ಮಾಡುವ ಕ್ರಮವನ್ನು ಹೇಳಿಕೊಡುತ್ತಿದ್ದರು. ಎಚ್.ಎನ್. ಅವರಿಂದ ಪ್ರಭಾವಿತನಾದ ನಾನು ಪ್ರತಿಯೊಂದು ಆಚಾರ ವಿಚಾರಗಳ ಕುರಿತಾಗಿ ಆಚಾರ್ಯರನ್ನು ಪ್ರಶ್ನಿಸುತ್ತಿದ್ದೆ. ಅವರೂ ತಾಳ್ಮೆಯಿಂದ ಸಮರ್ಪಕವಾದ ಉತ್ತರವನ್ನು ನೀಡುತ್ತಿದ್ದರು. ಸಂಧ್ಯಾವಂದನೆಯಲ್ಲಿ 'ಪ್ರಾಣಾಯಾಮ'ವೂ ಒಂದು ಭಾಗ. ಆಚಾರ್ಯರು ನನಗೆ ಮೂಗು ಹಿಡಿದುಕೊಂಡು  'ಓಂಭೂಃ, ಓಂಭುವಃ, ಓಂಸ್ವವಃ, ಓಂಮಹಃ, ಓಂಜನಃ, ಓಂ ತಪಃ ,ಓಂಸತ್ಯಂ ಓಂ ತತ್ಸವಿತುರ್ವರೇಣ್ಯಂ । ಭರ್ಗೋದೇವಸ್ಯ ಧೀಮಹಿ। ಧಿಯೋ ಯೋ ನಃ ಪ್ರಚೋದಯಾತ್।' ಎಂಬ ಮಂತ್ರವನ್ನು ಹೇಳಿ, ನೀರನ್ನು ಕೈ ಮೂಲಕ ಕೆಳಗೆ ತಟ್ಟೆಯಲ್ಲಿ ಬಿಟ್ಟು ಒಂದೇ ಬೆರಳನ್ನು ಕಣ್ಣಿಗೆ ಒತ್ತಿ 'ಓಂ ಆಪೋಜ್ಯೋತಿರಸೋsಮೃತಂ ಬ್ರಹ್ಮ ಭೂರ್ಭುವಸ್ವರೋಂ' ಎಂಬ ಮಂತ್ರವನ್ನು ಪಠಿಸಲು ಹೇಳಿದ್ದರು. 
ನಾನು ಅವರನ್ನು ಕೇಳಿದೆ 'ಪ್ರಾಣಾಯಾಮವೆಂದರೆ ಉಸಿರಾಟದ ನಿಯಂತ್ರಣ ಎಂದು ಎಲ್ಲೋ ಓದಿದ್ದೆ, ಹೀಗಿರುವಾಗ ಬರೀ ಮೂಗು ಹಿಡಿದುಕೊಂಡರೆ ಸಾಕೆ ?'
' ನಿಜ ಕಣಪ್ಪಾ ನೀನು ಹೇಳುವುದು, ಆದರೆ ಪ್ರಾಣಾಯಾಮ, ಹಠಯೋಗ ಮುಂತಾದವುಗಳನ್ನು ನುರಿತ ಗುರುಮುಖೇನ ಕಲಿಯಬೇಕು. ನಾವು ವೈದಿಕರು, ಅದರ ಬಗ್ಗೆ ತರಬೇತಿ ನೀಡುವಷ್ಟು ನಾನು ಅಭ್ಯಾಸ ಮಾಡಿಲ್ಲ, ಆದ್ದರಿಂದ ಸದ್ಯಕ್ಕೆ ನೀನು ಮೂಗು ಹಿಡಿದು ಮಂತ್ರ ಹೇಳಿದರೆ ಸಾಕು' ಎಂದರು. ಅಲ್ಲಿಂದ ಮುಂದೆ ನನ್ನ ದೃಷ್ಟಿಯೆಲ್ಲಾ ಪ್ರಾಣಾಯಾಮ ಕಲಿಸುವ ಸೂಕ್ತ ಗುರುವನ್ನು ಅರಸುತ್ತಿತ್ತು.
            ಇದು ಒಂದೆಡೆಯಾದರೆ ಹೆಚ್ಚು ಕಡಿಮೆ ಅದೇ ಸಮಯದಲ್ಲಿ  ಮಂಗಳೂರಿನಲ್ಲಿ ಒಮ್ಮೆ ಖ್ಯಾತ ಸಂಮೋಹಿನಿಕಾರರಾದ 'ದಿನ್ ಕೋಲಿ' ಅವರಿಂದ 'ಸಂಮೋಹಿನಿ ಪ್ರದರ್ಶನ' ಎಂಬ ಜಾಹಿರಾತು ನೋಡಿದೆ. ಸಂಮೋಹಿನಿಯ ಬಗ್ಗೆ ಒಂದಷ್ಟು ಕೇಳಿದ್ದೆ ಅಷ್ಟೇ. ಅಪ್ಪನ ಬಳಿ ಹೋಗಿ ಈ ಪ್ರದರ್ಶನಕ್ಕೆ ಕರೆದುಕೊಂಡು ಹೋಗಲು ಕೇಳಿದೆ. ಅಂದೇ ಸಂಜೆ ಆ ಪ್ರದರ್ಶನಕ್ಕೆ ಕರೆದುಕೊಂಡು ಹೋದರು ಅಪ್ಪ. ಅಲ್ಲಿ ಆತ ಒಂದಷ್ಟು ಜನರನ್ನು ಸಂಮೋಹನಕ್ಕೆ ಒಳಪಡಿಸಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಿದ್ದರು. ನನಗೆ ನಂಬಲು ಕಷ್ಟವಾಗುತ್ತಿತ್ತು. 'ನೀವೆಲ್ಲಾ ನಿಮ್ಮ ಇಷ್ಟವಾದ ದೇವಸ್ಥಾನದಲ್ಲಿರುವಿರಿ' ಎಂದು ಆತ ಅಂದೊಡನೆ ಎಲ್ಲರೂ ದೇವಸ್ಥಾನದಲ್ಲಿ ಇರುವಂತೇ ಓಡಾಡುತ್ತಿದ್ದರು. ತೀರ್ಥ ತೆಗೆದುಕೊಳ್ಳುವುದು, ಪ್ರದಕ್ಷಿಣೆ ಮಾಡುವುದು, ನಮಸ್ಕರಿಸುವುದು... ಹೀಗೆ ತಾವು ದೇವಸ್ಥಾನದಲ್ಲೇ ಇರುವಂತೆ ಅನುಭವಿಸುತ್ತಿದ್ದರು ಹಾಗೂ ಹಾಗೆಯೇ ಓಡಾಡುತ್ತಿದ್ದರು. ನಾನು ತಂದೆಯವರನ್ನು 'ಇದೆಲ್ಲಾ ನಿಜವೇ ಅಥವಾ ಎಲ್ಲರೂ ಆಕ್ಟಿಂಗ್ ಮಾಡ್ತಿದ್ದಾರಾ?' ಎಂದು ಕೇಳಿದೆ. ಅದಕ್ಕೆ ಅಪ್ಪ ' ಅದು ನಟನೆ ಅಲ್ಲ ಅವರೆಲ್ಲಾ ಸಂಮೋಹನಕ್ಕೆ ಒಳಗಾಗಿದ್ದಾರೆ, ಆದ್ದರಿಂದ ಅವರಿಗೆ ಅದು ನಿಜವಾಗಿರುತ್ತದೆ.' ಅಂದರು. 
            ನಾನು ಪ್ರದರ್ಶನ ಮುಗಿದ ಮೇಲೆ ಸಭಾಂಗಣದ ಹಿಂಭಾಗಕ್ಕೆ ಹೋಗಿ ದಿನ್ ಕೋಲಿ ಅವರನ್ನು ಭೇಟಿಯಾಗಿ 'ಈ ವಿದ್ಯೆ ನನಗೂ ಕಲಿಯಲು ಆಸೆಯಿದೆ, ಕಲಿಸುವಿರಾ?' ಎಂದು ಕೇಳಿದೆ. ಆಗ ನನಗೆ ಸುಮಾರು ಹನ್ನೊಂದರ ಪ್ರಾಯ. ನನ್ನನ್ನು ನೋಡಿ ನಕ್ಕ ಅವರು 'ದಿನಾ ಮನಸ್ಸಿನಲ್ಲಿ ಒಂದು ಚುಕ್ಕೆಯನ್ನು ನೆನೆಸಿಕೊಂಡು ಧ್ಯಾನ ಮಾಡು, ನಿನಗೆ ಈ ವಿದ್ಯೆ ಒಲಿಯುತ್ತದೆ' ಎಂದು ಹೇಳಿದರು. ನಾನು ಅಂದಿನಿಂದ ದಿನಾ ಅಂತೆಯೇ ಧ್ಯಾನ ಮಾಡುತ್ತಿದ್ದೆ.
'ಅವ್ನು ನಿನ್ನ ಹತ್ರ ಬಂಡಲ್ ಬಿಟ್ಟಿದ್ದಾನೆ, ನೀನು ಹೀಗೆ ಮಾಡೋದು ವೇಸ್ಟು' ಅಂತ ಉಮಕ್ಕನ ಮಗ ವೆಂಕಟೇಶ ಹೇಳುವ ಹೊತ್ತಿಗೆ ನನಗೂ ಹಾಗನ್ನಿಸಲು ಶುರುವಾಗಿತ್ತು. ಆದ್ದರಿಂದ ಹಾಗೆ ಧ್ಯಾನ ಮಾಡುವುದನ್ನು ಬಿಟ್ಟುಬಿಟ್ಟೆ !
             ತಂದೆಯವರಿಗೆ ಬೆಂಗಳೂರಿಗೆ ವರ್ಗವಾದಾಗ ನಾನು ನ್ಯಾಷನಲ್ ಮಿಡ್ಲ್ ಸ್ಕೂಲ್ ಸೇರಿಕೊಂಡೆ (೧೯೭೪). ಬೆಂಗಳೂರಿಗೆ ಬಂದಮೇಲೆ ನಾನು ಅರಸುತ್ತಿದ್ದುದು ಸಂಮೋಹಿನಿ ವಿದ್ಯೆ ಕಲಿಸುವ ಗುರುಗಳು, ಯೋಗ - ಪ್ರಾಣಾಯಾಮ ಕಲಿಸುವ ಗುರುಗಳು ಹಾಗೂ ಚಿತ್ರಕಲೆ ಕಲಿಸುವ ಗುರುಗಳು. ಸತತ ಹುಡುಕಾಟದಿಂದ ನಾಲ್ಕೈದು ವರ್ಷಗಳೊಳಗೆ ಎಲ್ಲರೂ ದೊರೆತರು. ಸಂಮೋಹಿನಿ ವಿದ್ಯೆ ಒಬ್ಬರಲ್ಲ, ಇಬ್ಬರಲ್ಲ, ಹಲವರ ಬಳಿ ಕಲಿತೆ. ಶ್ರೀ ರಮೇಶ್ ಕಾಮತ್ ಅವರು ನೀಡಿದ 'Clinical study of Hypnosis' ಎನ್ನುವ ಪುಸ್ತಕ ನನಗೆ ತುಂಬಾ ಸಹಕಾರಿಯಾಯಿತು.
             ತ್ಯಾಗರಾಜನಗರದಲ್ಲಿರುವ 'ಲಲಿತ ವಿದ್ಯಾಮಂದಿರ' ನನ್ನ ಯೋಗ ಶಾಲೆಯಾಯಿತು. ಗುರುಗಳಾದ ಶ್ರೀ ಚಿ. ವಿಶ್ವೇಶ್ವರಯ್ಯ (ಚಿ. ಸದಾಶಿವಯ್ಯನವರ ತಮ್ಮ ) ಅವರು ನನ್ನ ಗುರುಗಳು. ಸಹಾಯ ಮಾಡಿ ಪ್ರೋತ್ಸಾಹಿಸುತ್ತಿದ್ದ ಗುರುರಾಜ ತಂತ್ರಿಯವರನ್ನೂ ಮರೆಯಲಾರೆ. 
            ನನಗೆ ಆಸಕ್ತಿಯಿದ್ದ ಚಿತ್ರಕಲೆಯನ್ನು ಅಭ್ಯಸಿಸಲು ಶ್ರೀ ಹಡಪದ್ ಅವರ 'Ken school of arts' ಸೇರಿಕೊಂಡರೂ ನಂತರ ನನ್ನ ಕಲಾಭ್ಯಾಸ ನಡೆದದ್ದು ಶ್ರೀ ಎಂ. ಟಿ. ವಿ. ಆಚಾರ್ಯ ಅವರ 'ಆಚಾರ್ಯ ಚಿತ್ರಕಲಾ'ಭವನ'ದಲ್ಲಿ.
            ಐದಾರು ವರ್ಷಗಳಲ್ಲಿ ನಾನೇನು ಕಂಡೆ, ಏನೇನು ಕಲಿತೆ ಎನ್ನುವುದನ್ನು ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ. 


Sunday, 6 August 2017

ಪ್ರಕೃತಿ ಪ್ರೇಮ

                                ಪ್ರಕೃತಿ ಪ್ರೇಮ 
        ಇತ್ತೀಚಿಗೆ ಟ್ವಿಟ್ಟರ್ ಗೆಳೆಯರನ್ನು ಒಂದುಗೂಡಿಸಿದ್ದು ಲೋಕೇಶ್ (ಆಚಾರ್ಯ). ಇಡ್ಲಿ ತಿಂದೆವು, ಖಾರಾಬಾತ್ ಸವಿದೆವು ಹಾಗೂ ಮಸಾಲೆದೋಸೆ ಮುಗಿಸಿದೆವು. ಹೊರಡುವಾಗ ಸಂಜಯ್ (ಪುಟಾಣಿ ಪಾಪ) ಅವರ ಜವಾಬ್ದಾರಿಯಲ್ಲಿ ಎಲ್ಲರಿಗೂ ಒಂದೊಂದು ಹೊಂಗೇ ಸಸಿಯನ್ನು ಪ್ರೀತಿಯಿಂದ ಕೊಟ್ಟರು.
        ನಮ್ಮ ಮನೆಯ ಮುಂದೆ ಮರವೊಂದು ಕಾಲನ ದಾಳಿಗೆ ತುತ್ತಾಗಿ ಉರುಳಿತ್ತು. ಗಾಳಿ-ಬಿರುಗಾಳಿ ಹಾಗೂ ಮಳೆ-ಜಡಿಮಳೆಗೆ ತನ್ನ ಮೈಯೊಡ್ಡಿದ್ದಲ್ಲದೇ ನರಬಾಧೆ-ವಾನರಬಾಧೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು ಪ್ರಕೃತಿಯ ಮಡಿಲಲ್ಲಿ ತನ್ನ ಪಾಡಿಗೆ ತಾನು ಮೈದಳೆದು ನಿಂತಿತ್ತು. 'ಕಾಲನಿಗೆ ಕರುಣೆಯಿಲ್ಲ' ಎಂಬ ಸತ್ಯವನ್ನು ಜಗತ್ತಿಗೆ ಸಾರಲು ಕಡೆಗೊಮ್ಮೆ ಧರೆಗುರುಳಿತು. ನಾನು ತಂದ ಸಸಿಯನ್ನು ಅದೇ ಜಾಗದಲ್ಲಿ ನೆಟ್ಟು, ಅದರ ಎಲೆಗಳನ್ನು ನವಿರಾಗಿ ಸವರಿ ನೀರುಣಿಸಿದೆ. ಒಂದು ಕ್ಷಣ ಮೈಮರೆತೆ, ಮನಸ್ಸು ಬಾಲ್ಯಕ್ಕೆ ಜಾರಿತು.
       ೧. 'ಬಂಟ್ವಾಳ'ದಿಂದ, ಮೋಟಾರಿಗೆ ಕಮ್ಮಿ... ಕಾಲ್ನಡಿಗೆಗೆ ತುಸು ಜಾಸ್ತಿ ಅನ್ನುವಷ್ಟು ದೂರದಲ್ಲಿರುವ 'ಮಂಡಾಡಿ' ಯಲ್ಲಿ ಸುಮಾರು ಹತ್ತು ಎಕರೆಯಲ್ಲಿ ಹಸಿರು ಹೊಲಗದ್ದೆಗಳು ಯಾರ ಕಣ್ಣಿಗಾದರೂ ರಾಚುವಂತಿದ್ದವು. ಹಿರಿಯರಿಂದ ಬಂದ ಆಸ್ತಿಯನ್ನು ಜತನ ಮಾಡುವುದರಲ್ಲಿ ನನ್ನ ತಂದೆ ಅಪರಿಮಿತ ಕಾಳಜಿ ಹೊಂದಿದ್ದರು. ತಳಚೇರಿಯಿಂದ ತೆಂಗಿನ ಸಸಿಗಳನ್ನು ತಂದು ನೆಡುವುದು ಅಂತೆಯೇ ಕಾರ್ಕಳದಿಂದ ರಸಬಾಳೆ ಹಣ್ಣಿನ ಗಿಡ, ಬೆಂಗಳೂರಿಂದ ತರಕಾರಿ ಬೀಜಗಳು ಹಾಗೂ ಪಾಣೆಮಂಗಳೂರಿನಿಂದ ಗೊಬ್ಬರ .. ಹೀಗೆ ಎಲ್ಲಿ ಏನಾದರೂ ವಿಶೇಷವೆಂದರೆ ಅಲ್ಲಿಂದ ಅದನ್ನು ತರುವುದು ಅಥವಾ ತರಿಸುವುದು ನನ್ನ ತಂದೆಯ ಆಸಕ್ತಿಯಾಗಿತ್ತು. ಪಾಳೇಗಾರರಾಗಿದ್ದ ನನ್ನ ಮುತ್ತಾತಂದಿರ ದರ್ಪ ತನ್ನ ರಕ್ತದಲ್ಲಿ ಇದ್ದರೂ ಊರಿಗೆ ಬಂದಾಗ ನನ್ನಪ್ಪ ಭೂಮಿತಾಯಿಯ ಮಗನಾಗುತ್ತಿದ್ದರು. ನನ್ನಪ್ಪ ನಡೆದು ಹೋಗುತ್ತಿರುವಾಗ, ಸ್ಥಳೀಯರು ಎದುರಿಗೆ ಸಿಕ್ಕಾಗ 'ನಮಸ್ಕಾರ ಧನಿಕ್ಲೇ' ಎಂದು ಮೈಬಗ್ಗಿಸಿ ಗೌರವ ಸೂಚಿಸುತ್ತಿದ್ದಾಗ ಜತೆಯಲ್ಲಿ ಸಾಗುತ್ತಿದ್ದ ನನಗೆ ಹೆಮ್ಮೆ ಅನಿಸುತ್ತಿತ್ತು. ಅಪ್ಪ ನನಗೆ ಪಾಳೇಗಾರನಂತೇ ಕಾಣುತ್ತಿದ್ದರು. ನಮ್ಮ ದೇಗುಲದಲ್ಲಿ ಇದ್ದ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ  ಕತ್ತಿ -ಗುರಾಣಿಗಳು ಕಣ್ಣಮುಂದೆ ಬಂದು ನಿಲ್ಲುತ್ತಿದ್ದವು.
        'ನಮ್ಮಪ್ಪಾಜಿ ಕಾಲದಲ್ಲಿ ಐವತ್ತು ಎಕರೆಗಿಂತ ಜಾಸ್ತಿ ಆಸ್ತಿ ಇತ್ತು, ಉಳುವವನಿಗೆ ಭೂಮಿ ಅಂತ ಬಂದಾಗ ಹನ್ನೆರಡು ಎಕರೆ ಮಾತ್ರ ಉಳೀತು, ಅದ್ರಲ್ಲಿ ಎರಡು ಎಕರೆ ಕಾಲೇಜಿಗೆ ಅಂತ ಕೊಟ್ವಿ.. ನಿಮ್ಮ 'ಪಿಜ್ಜಿ' ಇಲ್ಲಿ ನೋಡ್ಕೋತಿದ್ದಿದ್ರಿಂದ ಅಷ್ಟಾದ್ರೂ ಉಳೀತು ... ಇದಲ್ಲದೇ 'ಕೊಳ್ಕೆರೆ' ಊರೇ ನಮ್ಮದಾಗಿತ್ತು...'  ಅಪ್ಪನಿಗೆ ಗತವೈಭವ ಯಾವಾಗಲೂ ಮುದನೀಡುತ್ತಿತ್ತು ಹಾಗೆಯೇ ನನಗೂ ಕೂಡ !
        ಅಪ್ಪನ ಜತೆ ಓಡಾಡುತ್ತಾ ಗದ್ದೆಗೆ ಇಳಿದು, ಸಸಿಗಳನ್ನು ನೆಟ್ಟು, ಮುಂದಿನ ಸಲ ಹೋದಾಗ 'ನಾನು ನೆಟ್ಟ ಸಸಿ ಎಷ್ಟು ಬೆಳೆದಿದೆ' ಎಂದು ಪರೀಕ್ಷಿಸಿ ಹೆಮ್ಮೆಯಿಂದ ಬೀಗುತ್ತಿದ್ದೆ. ಯಾವದಾದರೂ ಸಸಿಯನ್ನು 'ದನ ತಿಂದು ಹೋಯಿತು' ಎಂದು ಧರ್ನು ಪೂಜಾರಿ (ಹಿಂದೆ ಒಕ್ಕಲಾಗಿದ್ದವರು) ಹೇಳುವಾಗ ಆ ದನವನ್ನು ಹುಡುಕಿಕೊಂಡು ಹೋಗಿ ಹೊಡೆಯುವಷ್ಟು ಕೋಪ ಬರುತ್ತಿತ್ತು !   
       ನನ್ನ ಅರಿವಿಲ್ಲದೇ ನಾನು ಪ್ರಕೃತಿಯನ್ನು ಪ್ರೀತಿಸಲು ಹಚ್ಚಿಕೊಂಡಿದ್ದೆ. ಗಿಡಮರಗಳನ್ನು ಮುದ್ದಿಸುತ್ತಿದ್ದೆ, ಅವುಗಳೊಂದಿಗೆ ಮಾತನಾಡುತ್ತಿದ್ದೆ. ಅವುಗಳೂ ನನ್ನೊಡನೆ ಮಾತನಾಡುತ್ತಿರುವಂತೆಯೇ  ಭಾಸವಾಗುತ್ತಿತ್ತು !
        ೨. ಬ್ಯಾಂಕ್ ಮೇನೇಜರ್ ಆಗಿದ್ದ ನನ್ನ ತಂದೆಗೆ ಬೆಂಗಳೂರಿಗೆ ವರ್ಗವಾಗಿತ್ತು. (೧೯೭೪). ನಮ್ಮ ಮನೆಯ ಮುಂದೆ ನೆಡಲು ನಾಲ್ಕು ಗಿಡಗಳನ್ನು ಮಲ್ಲೇಶ್ವರದ ಅರಣ್ಯಭವನಕ್ಕೆ ಹೋಗಿ ತರಲು ಹೊರಟಿದ್ದ ತಂದೆಯ ಜತೆ ನಾನೂ ಹೋಗಿದ್ದೆ. ಮನೆಯ ಆ ಬದಿ ಎರಡು ಗಿಡಗಳನ್ನು ನನ್ನ ತಂದೆ ಹಾಗೂ ಈ ಬದಿ ಎರಡು ಗಿಡಗಳನ್ನು ನಾನೂ ನೆಟ್ಟೆವು. ದಿನಾ ಆ ಗಿಡಗಳಿಗೆ ನೀರು ಹಾಕುವ ಹೊಣೆಯನ್ನು ನನ್ನ ತಂದೆ ನನಗೆ ಒಪ್ಪಿಸಿದ್ದರು.  ಪ್ರೀತಿಯಿಂದ ಅವುಗಳನ್ನು ಮುದ್ದು ಮಾಡುತ್ತಾ ನಾನು ಆ ಕೈಂಕರ್ಯವನ್ನು ಮಾಡುತ್ತಿದ್ದೆ. ಎಲ್ಲ ಗಿಡಗಳ ಬಳಿ ನಿಂತು 'ಒಹ್.. ನನ್ನ ತೊಡೆಯವರೆಗೆ ಬಂದಿದೆ...ಒಹ್ ಈಗ ಸೊಂಟದವರೆಗೂ ಬಂದು ಬಿಟ್ಟಿದೆ' ..ಎಂದೆಲ್ಲಾ ಕಾಲ ಕಾಲಕ್ಕೆ ನೋಡಿ ಖುಷಿ ಪಡುತ್ತಿದ್ದೆ.
ಆದರೆ ಅದೊಂದು ದಿನ...
       ಶಾಲೆ ಮುಗಿಸಿ ಮನೆಗೆ ಬಂದಾಗ ನನಗೆ ಆಘಾತ ಕಾದಿತ್ತು !
       ನಾನು ನೆಟ್ಟ ಎರಡು ಗಿಡಗಳಲ್ಲಿ ಒಂದು ಗಿಡವನ್ನು ಯಾರೋ ದುರುಳ, ದುಷ್ಟ, ದುರ್ಬುದ್ಧಿಯುಳ್ಳ ದುರಾತ್ಮನೊಬ್ಬ ಎರಡು ಭಾಗವಾಗಿ ಸೀಳಿ ಬಿಟ್ಟಿದ್ದ !! ಎದುರು ಸಿಕ್ಕರೆ ಅವನನ್ನೇ ಎರಡೆರಡಾಗಿ ಸೀಳುವಷ್ಟು ರೋಷವಿದ್ದರೂ ಸನಿಹ ಯಾರೂ ಕಾಣಲಿಲ್ಲ.. ಅವನ್ಯಾವನೋ ಈ  ಅಮಾನುಷ ಕೃತ್ಯವೆಸಗಿ ಹೋಗಿಬಿಟ್ಟಿದ್ದ.
       ಈಗೇನು ಮಾಡುವುದು ? ಅಸಹಾಯಕನಾಗಿ ಅತ್ತುಬಿಟ್ಟಿದ್ದೆ. ಆ ಗಿಡವನ್ನೊಮ್ಮೆ ಬಾಚಿ ತಬ್ಬಿಕೊಂಡೆ....
       ಅರೆರೆ.. ! .. 'ಈ ಗಿಡ ನನ್ನ ಬಳಿ ಏನೋ ಮಾತಾಡುತ್ತಿದೆಯಲ್ಲ' ಎಂದು ಎನಿಸತೊಡಗಿತು.. 'ಹಾಗಾದರೆ ಇದಕ್ಕೆ ಇನ್ನೂ ಜೀವವಿದೆ' ಎಂಬ ಭಾವನೆ ಬಲವಾಗತೊಡಗಿತು. ನನ್ನ ಮನಸ್ಸಿಗೆ ಏನು ಮಾಡಬೇಕೆಂದು ತೋಚಿತ್ತೋ ಅದನ್ನೇ ಮಾಡಿದೆ. ಆಗ ನನಗೆ ನೂರಾನೆ ಬಲ ಬಂದ ಹಾಗೆ ಆಗಿತ್ತು.







      ಗಿಡವನ್ನು ಸೀಳಿದ ಜಾಗದಲ್ಲಿ, ಒದ್ದೆ ಮಾಡಿ ಮುದ್ದೆ ಮಾಡಿದ ಮಣ್ಣನ್ನು ಮೆತ್ತುತ್ತಾ ಬಂದೆ.. ಎರಡು ಭಾಗಗಳನ್ನು ಒಟ್ಟು ಮಾಡಿ ದಾರದಿಂದ ಒಂದು ಕಟ್ಟು ಹಾಕಿದೆ. ಮನೆಯಲ್ಲಿ  ಹಳೆಯ ಕಮಂಡಲವೊಂದಿತ್ತು, ಅದರಲ್ಲಿ ನೀರು ತುಂಬಿ ದೊಡ್ಡ ಮಹರ್ಷಿಯ ಹಾಗೆ ದೇವರ ಮೇಲೆ ಪ್ರತಿಜ್ಞೆ ಮಾಡಿ 'ನನ್ನ ಆಯಸ್ಸಿನಲ್ಲಿ ಮುವ್ವತ್ತು  ದಿನಗಳ ಆಯಸ್ಸನ್ನು ಕಮ್ಮಿ ಮಾಡಿ ಈ ಮರಕ್ಕೆ ಧಾರೆ ಎರೆಯುತ್ತಿದ್ದೇನೆ, ಇದಕ್ಕೆ ಮತ್ತೆ ಪ್ರಾಣ ನೀಡು ದೇವರೇ' ಎಂದು ಬೇಡಿಕೊಂಡೆ. (ಅಂದಿನ ಮನಸ್ಥಿತಿ).
      ಇಂದು ಮನೆಯ ಮುಂದೆ ಸುಳಿದಾಡುವಾಗೆಲ್ಲಾ  ಬೃಹತ್ತಾಗಿ ಬೆಳೆದಿರುವ ಆ ಮರವನ್ನು ಹೆಮ್ಮೆಯಿಂದ ಒಮ್ಮೆ ತಬ್ಬಿಕೊಳ್ಳುತ್ತೇನೆ.. ಆರದ ಆ ಗಾಯವನ್ನು ನವಿರಾಗಿ ಸವರುತ್ತೇನೆ... ಭಾವುಕನಾಗಿ ಮನೆ ಸೇರುತ್ತೇನೆ.
ಮರಗಿಡಗಳನ್ನು ಪ್ರೀತಿಸಿದರೆ ಮಾತ್ರ ಅವುಗಳು ನೀಡುವ ಪ್ರೀತಿಯನ್ನು ನಾವು ಸವಿಯಲು ಸಾಧ್ಯ .. ಹೆಚ್ಚೇನೂ ಹೇಳಲಾರೆ ......... 

Monday, 4 April 2016

Best remedy for the Back pain

Best remedy for the Back pain

I woke up from sleep and found that something was wrong with my neck ! I could not move my face towards my extreme left. Yes! There was a problem! The MRI Scan report showed a problem in C5,C6. I was going through the report at my studio when I encountered one of our customers !   

'I had a similar problem sir, within 5 to 6 days, it got solved, thanks to this specialist in acupuncture, you please meet him' , he said handing me the doctor's number.

I was curious.Next day I met the specialist and underwent treatment for about 10 days...   the problem still continued !

In the meanwhile my friends suggested a lot of treatment methods.

'Ayurveda is the best one..it's slow but a sure shot' said one.

'Why don't you try Homeopathy?...that's really nice..no side effects' said another.

'There is a guy who is not a doctor, but he is an experienced man, he applies some oils then pulls out the particular nerve by rotating your head' said the last.

He was the scariest among them !

The irony was, my friends seemed much interested in narrating their own problems and experiences than listening to me. Alas!!

My sis, who is also a doctor took me to an orthopedician.He referred me to a neurosurgeon after looking at my MRI Scan.The neurosurgeon further suggested me to the physiotherapist.

15 days were spent on the physiotherapy treatment and the neck & shoulder exercises .....The problem still continued!

Now the neurosurgeon tells me that 'surgery' is the only option !

At this stage I took over the matter. I asked my mind repeatedly to give me a proper solution.

The answer was BED REST ! 

Along with the bed rest, I found two things which really helped me.The Ayurvedic oil and the neck and shoulder exercises!

I did this for five days and now the pain is gone.




REST IS THE BEST but for me now REST is history.