Monday 31 December 2018

ಅಧ್ಯಾತ್ಮಿಕ ಸಾಧನೆಯ ಅನುಭವಗಳು 3 - ಅಷ್ಟಾಂಗಯೋಗ

          ಮೊತ್ತ ಮೊದಲು ಪಾತಂಜಲಿ (ಪತಂಜಲಿ) ಯೋಗಸೂತ್ರವನ್ನು ನನಗೆ ಬೋಧಿಸಲಾಯಿತು. ಪಾತಂಜಲಿ ಮಹರ್ಷಿಗಳ ಅಷ್ಟಾಂಗಯೋಗವನ್ನು ಸರಳವಾಗಿ ವಿವರಿಸಲು ಇಚ್ಛಿಸುತ್ತೇನೆ. ಇದು ದೇಹ, ಮನಸ್ಸು ಹಾಗೂ ಜ್ಞಾನಕ್ಕೆ 
ಸಂಬಂಧಪಟ್ಟಿರುವಂತಹದ್ದು. ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳಲ್ಲಿ ಸಾಧನೆ ಮಾಡಿದರೆ ಜ್ಞಾನ ಪ್ರಾಪ್ತವಾಗುವುದು. 
          ಏನಿದು ಜ್ಞಾನ ? ಈ ಜ್ಞಾನ ಸಾಮಾನ್ಯವಾದದ್ದಲ್ಲ. ಆದರೆ ಇದನ್ನು ವಿವರಿಸಿ ಹೇಳುವುದೂ ಸುಲಭವಲ್ಲ. ಇದೊಂದು ರೀತಿಯಲ್ಲಿ ಸಮಗ್ರ ಅರಿವು ಎಂದು ಹೇಳಬಹುದು. ಪ್ರಪಂಚದ ಅರಿವು, ಜೀವನದ ಅರಿವು, ಜೀವದ ಅರಿವು, ಆತ್ಮದ ಅರಿವು, ಪರಮಾತ್ಮನ ಅರಿವು... ಹೀಗೆ. ಯಮ ನಿಯಮದ ಎಂಟು ಅಂಗಗಳಲ್ಲಿ ಮನಸ್ಸಿಗೆ ಅತ್ಯಂತ ಪ್ರಾಮುಖ್ಯತೆ ಉಂಟು. ಮೊದಲ ನಾಲ್ಕು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಮಗಳು ದೇಹ ಹಾಗೂ ಅದರ ಆರೋಗ್ಯಕ್ಕೂ ಸಂಬಂಧ ಪಟ್ಟಿವೆ. 'ಶರೀರಮಾದ್ಯಮ್ ಖಲು ಧರ್ಮ ಸಾಧನಂ'  ಎಂದು ಹೇಳಿದಂತೆ ಯಾವುದೇ ಸಾಧನೆ ಮಾಡಬೇಕಾದರೂ ನಮ್ಮ ಶರೀರ ಆರೋಗ್ಯಕರವಾಗಿ ಇರಲೇ ಬೇಕು.
          ಏನಿದು ಯಮ ನಿಯಮಾದಿಗಳು ?

೧. ಯಮ - ಇಲ್ಲಿ ಬದುಕಬೇಕಾದ ರೀತಿಯ ಬಗ್ಗೆ ತಿಳಿಹೇಳಲಾಗುತ್ತದೆ. ನೆಮ್ಮದಿಯಿಂದ, ಮರ್ಯಾದೆಯಿಂದ ಬದುಕಬೇಕಾದರೆ ನಾವು ಒಂದಷ್ಟು ಆದರ್ಶಗಳನ್ನು ರೂಢಿಸಿಗೊಳ್ಳಬೇಕಾಗುತ್ತದೆ. ಉದಾಹರಣೆಗೆ ಯಾರನ್ನೂ ಅಥವಾ ಯಾವುದನ್ನೂ ಹಿಂಸೆ ಮಾಡದಿರುವುದು, ಪರರ ಸ್ವತ್ತಿಗೆ ಆಸೆ ಪಡದಿರುವುದು, ಪರರ ವಸ್ತುವನ್ನು ಕದಿಯದಿರುವುದು,  ಸತ್ಯವನ್ನೇ ಹೇಳುವುದು, ಬ್ರಹ್ಮಚರ್ಯವನ್ನು ಪಾಲಿಸುವುದು.. ಹೀಗೆ ಮೌಲ್ಯಯುತವಾದ ಬದುಕನ್ನು ಕಟ್ಟಿಕೊಳ್ಳಲು ಇಲ್ಲಿ ಸಾಧಕನನ್ನು ತಯಾರು ಮಾಡಲಾಗುತ್ತದೆ.

೨. ನಿಯಮ - ಮೌಲ್ಯಗಳನ್ನು ನೀವು ಎಷ್ಟರ ಮಟ್ಟಿಗೆ ಪಾಲಿಸುತ್ತೀರೋ ಅದು ನಿಮಗೆ ಬಿಟ್ಟದ್ದು. ನೀವು ಇಹಲೋಕದಲ್ಲಿ ನೆಮ್ಮದಿಯಿಂದ ಬದುಕಲು ಹಾಗೂ ಮುಕ್ತಿ ಪಡೆಯಲು ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಶುಚಿತ್ವ - ಇಲ್ಲಿ ಬಹಿರಂಗ ಶುದ್ಧಿಯೂ ಮುಖ್ಯ, ಅಂತರಂಗ ಶುದ್ಧಿಯೂ ಮುಖ್ಯವಾಗುತ್ತದೆ.
ಸಂತೋಷ - ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಸಂತಸದಿಂದ ಬಾಳುವುದು ಹೇಗೆ ಎನ್ನುವುದನ್ನು ತಿಳಿಸಲಾಗುತ್ತದೆ. ನಮಗೆ ಸಿಕ್ಕಿದ್ದರಲ್ಲಿ ತೃಪ್ತಿ ಕಾಣುವುದು ಹೇಗೆ? ಎನ್ನುವುದನ್ನು ಮನದಟ್ಟು ಮಾಡಲಾಗುತ್ತದೆ.
ತಪಸ್ಸು- ಇಲ್ಲಿ ತಪಸ್ಸು ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಎಲ್ಲೋ ಹೋಗಿ ಧ್ಯಾನ ಮಾಡುವುದಲ್ಲ. ನಮ್ಮ ಮೌಲ್ಯಗಳಿಗೆ ನಾವು ತೋರುವ ನಿಷ್ಠೆ ಹಾಗೂ ನಮ್ಮ ಜೀವನವನ್ನು ಆದಷ್ಟು ಕಲ್ಮಶರಹಿತವಾಗಿಡುವುದಕ್ಕೆ ತೋರುವ ಶಿಸ್ತು.
          ಯಮ-ನಿಯಮಗಳನ್ನು ನೂರಕ್ಕೆ ನೂರು ಅನ್ನಲಾಗದಿದ್ದರೂ ಬಹುತೇಕ ನಾನು ಪಾಲಿಸುತ್ತಿದ್ದೆ. ನನ್ನ ಗುರಿ ಮುಂದಿನ ಆರು ಅಂಗಗಳಲ್ಲಿ ಕೇಂದ್ರೀಕೃತವಾಗಿತ್ತು. ಅಲ್ಲಿ ನನಗಾದ ಅನುಭವಗಳನ್ನು ಒಂದೊಂದಾಗಿ ಬಿಚ್ಚಿಡುತ್ತೇನೆ.

೩ . ಆಸನ - ಎಲ್ಲಾ ಆಸನಗಳನ್ನು ಕರತಲಾಮಲಕ ಮಾಡಿಕೊಳ್ಳಬೇಕೆಂದು ಅವಿರತ ಅಭ್ಯಾಸ ಮಾಡುತ್ತಿದ್ದೆ. ಮೈಕೈ ನೋವಾದರೂ ಲೆಕ್ಕಿಸದೇ ಮುಂದುವರೆಯುತ್ತಿದ್ದೆ. ಯಾವುದೇ ಆಸನದಲ್ಲಿ ಎರಡು ಗಂಟೆಗಳ ಕಾಲ ನೋವಿಲ್ಲದೇ ಇರಲು ಸಾಧ್ಯವಾದರೆ ಆ ಆಸನ ನಮಗೆ ಸಿದ್ಧಿಸಿದೆ ಎಂದರ್ಥ. ಹೀಗೆ ಹಲವಾರು ಆಸನಗಳನ್ನು ಸಿದ್ಧಿಸಿಕೊಂಡ ಮೇಲೆ ಒಮ್ಮೆ ಯೋಚಿಸಿದೆ. ನನಗೆ, ನನ್ನ ದೇಹಕ್ಕೆ ಬೇಕಾದ ಆಯ್ದ ಆಸನಗಳ ಪಟ್ಟಿ ಮಾಡಿಕೊಂಡೆ. ಬೆನ್ನುಹುರಿಗೆ ಅನುವಾಗಲು ಚಕ್ರಾಸನ, ಭುಜಂಗಾಸನ, ಪಶ್ಚಿಮೋತ್ತಾನಾಸನ ಹಾಗೂ ಅರ್ಧ ಮತ್ಸ್ಯೇ೦ದ್ರಾಸನ (ಎರಡೂ ಬದಿಯಲ್ಲಿ), ರಕ್ತಸಂಚಾರಕ್ಕಾಗಿ ಶೀರ್ಷಾಸನ , ಧ್ಯಾನಕ್ಕೆ ಅನುಕೂಲವಾಗಲು ಪದ್ಮಾಸನ, ಮನಸ್ಸಿನ, ಮೆದುಳಿನ ಬೆಳವಣಿಗೆಗೆ ಗೋಮುಖಾಸನ, ಕೊನೆಗೆ ಶವಾಸನ, ಇವುಗಳನ್ನು ಆಯ್ದುಕೊಂಡು ಮಿಕ್ಕ ಆಸನಗಳನ್ನೆಲ್ಲ ಬದಿಗಿರಿಸಿದೆ. 
          ಆಸನಗಳನ್ನು ಅಭ್ಯಸಿಸುವಾಗ ಗುರುಮುಖೇನ ಏಕೆ ಕಲಿಯಬೇಕು ಎನ್ನುವುದೂ ಅರಿವಾಯಿತು. ಉಸಿರಾಟದ ಕ್ರಮವನ್ನು (ಯಾವಾಗ ಉಸಿರು ತೆಗೆದುಕೊಳ್ಳಬೇಕು, ಯಾವಾಗ ಬಿಡಬೇಕು) ನನ್ನ ಗುರುಗಳು ಸಕಾರಣವಾಗಿ ವಿವರಿಸಿದರು. ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಂಡಾಗ ಎಲ್ಲಿ ತಪ್ಪು ಆಗುತ್ತಿದೆಯೆಂದು ತೋರಿಸಿದರು. ಎಲ್ಲಕ್ಕೂ ಮಿಗಿಲಾಗಿ ಎಷ್ಟು ನಿಧಾನವಾಗಿ ಕ್ರಿಯೆಗಳನ್ನು ನಡೆಸಬೇಕೆಂದು ಹಂತ ಹಂತವಾಗಿ ತೋರಿಸಿದರು. 'ಷಣ್ಮುಖೀ ಮುದ್ರೆ' ಅಭ್ಯಸಿಸುವಾಗ ಅನಾಹತ ಧ್ವನಿಯನ್ನು ಕಿವಿಯಾರೆ ಕೇಳುವಂತೆ ಮಾಡಿದರು.
          ಪ್ರಾಣಾಯಾಮ ಹಾಗೂ  ಧ್ಯಾನದ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೀಡುತ್ತೇನೆ ಹಾಗೂ ಪವಾಡದಂತೆ ಕಂಡ ಗುರುಗಳ ಒಂದು ಕೃತ್ಯದ ಬಗ್ಗೆ ಬರೆಯುತ್ತೇನೆ. 

No comments:

Post a Comment