Monday 30 September 2019

ತಾಂತ್ರಿಕ ಸಾಧನೆಯಲ್ಲಿ ನನ್ನ ಅನುಭವಗಳು - 3

        ನಂದಳಿಕೆಗೆ ಹೋಗಿ ನಮ್ಮ ಮೂಲವಿಗ್ರಹವನ್ನು ನೋಡಬೇಕೆಂಬ ಆಸೆ ಬಾಲ್ಯದಿಂದಲೇ ಚಿಗುರತೊಡಗಿತ್ತು. ಒಬ್ಬನೇ ಬಸ್ಸು ಹತ್ತಿ ನಂದಳಿಕೆಗೆ ಹೋದೆ. ಅಲ್ಲಿ ಒಬ್ಬ ಅಂಗಡಿಯಾತನನ್ನು 'ಇಲ್ಲಿ ಮಹಾಮಾಯಿದೇವಿ ದೇವಸ್ಥಾನ ಎಲ್ಲಿದೆ?' ಎಂದು ಕೇಳಿದೆ. ಆತ 'ಇಲ್ಲಿ ಮಹಾಮಾಯಿ ದೇವಸ್ಥಾನ ಯಾವುದೂ ಇಲ್ಲ. ಆದರೆ ದೇವಿಯ ಎರಡು ದೇವಸ್ಥಾನಗಳಿವೆ' ಎಂದ. 'ಪ್ರಾಣಿಬಲಿ ಎಲ್ಲಿ ನೀಡುತ್ತಾರೆ?' ಎಂದು ಮರುಪ್ರಶ್ನಿಸಿದೆ. ಅದಕ್ಕೆ ಆತ 'ಎರಡು ಕಡೆಯೂ ಕೊಡುತ್ತಾರೆ' ಎಂದು ಉತ್ತರಿಸಿದ. ನಾನು ಕೊಂಚ ತಬ್ಬಿಬ್ಬಾದೆ. ಎರಡೂ ದೇವಸ್ಥಾನಗಳನ್ನು ನೋಡಿಯೇ ಬಿಡುವುದು ಎಂದು ತೀರ್ಮಾನಿಸಿದೆ. 
        ಮೊದಲು ಹತ್ತಿರವಿದ್ದ  ದೇವೀ ದೇವಸ್ಥಾನಕ್ಕೆ ಹೋದೆ. ಅಲ್ಲಿದ್ದ ಪೂಜಾರಿಯ ಬಳಿ ಹೋಗಿ 'ಇಲ್ಲಿ ನವರಾತ್ರಿಯಂದು ಬಲಿ ಕೊಡುವ ಪದ್ಧತಿಯಿದೆಯೇ?' ಎಂದು ಕೇಳಿದೆ. ಅದಕ್ಕೆ ಅವರು 'ಹೌದು, ಪಾತ್ರಿಗೆ ಆವೇಶ ಬಂದಾಗ ರಸ್ತೆಯುದ್ದಕ್ಕೂ ಕೋಳಿಯ ಬಲಿ ಕೊಡುತ್ತಾರೆ' ಎಂದು ನಗುತ್ತಾ ಹೇಳಿದರು. 'ಈ ಮೂರ್ತಿ ನಿಮಗೆ ಸಿಕ್ಕಿದ್ದು ಎಲ್ಲಿಂದ?' ಎಂದು ಕುತೂಹಲದಿಂದ ಕೇಳಿದೆ.  'ಈ ವಿಗ್ರಹ ನಾವೇ ಮಾಡಿಸಿದ್ದು' ಎಂದು ಅವರು ಹೇಳಿದಾಗ ನಿರಾಸೆಯಾಯಿತು. 'ಇನ್ನೊಂದು ದೇವೀ ದೇವಸ್ಥಾನ ಇದೆಯಂತಲ್ಲ, ಅದು ಎಲ್ಲಿದೆ?' ಎಂದೆ. ಅವರು ತೋರಿಸಿದ ದಾರಿಯಲ್ಲಿ ಇನ್ನೊಂದು ದೇವಸ್ಥಾನವನ್ನು ಹುಡುಕಿ ಹೊರಟೆ.  


        ನಗರ ಪ್ರದೇಶದಿಂದ ತುಸು ಒಳಗಿತ್ತು ಆ ಇನ್ನೊಂದು ದೇಗುಲ. ಆ ಭಾಗವನ್ನು ಕಲ್ಯಾಗ್ರಾಮದ 'ಕೈರಬೆಟ್ಟು' ಎಂದು ಕರೆಯುತ್ತಾರೆ. ಮತ್ತೆ ಪೂಜಾರಿಯವರನ್ನು ಭೇಟಿ ಮಾಡಿ ಅದೇ ಪ್ರಶ್ನೆಯನ್ನು ಕೇಳಿದೆ. 'ಯಾರೋ ಕೊಂಕಣಿಯವರಿಂದ ನಮಗೆ ಸಿಕ್ಕಿದ ಮೂರ್ತಿಯಂತೆ ಇದು' ಎಂದು ಅವರು ಹೇಳಿದಾಗ ಮೈಯೆಲ್ಲಾ ರೋಮಾಂಚನವಾಯಿತು. 'ಆ ಕೊಂಕಣಿಯವರು ನಾವೇ. ನಮ್ಮ ಪೂರ್ವಜರು ನೀಡಿದ ಮೂರ್ತಿ ಇದು' ಎಂದು ಸವಿಸ್ತಾರವಾಗಿ ಮೂರ್ತಿಯ ಕಥೆಯನ್ನು ಅವರಿಗೆ ಅರುಹಿದೆ. ಪೂಜಾರಿಯವರಿಗೂ ಬಹಳ ಸಂತೋಷವಾಯಿತು.  
        ದೇವಿಗೆ ಮಂಗಳಾರತಿ ಮಾಡಿ ನನಗೆ ಆರತಿ ನೀಡಿದರು. ಮತ್ತೆ ಒಳಗೆ ಹೋದವರು ದೇವೀ ವಿಗ್ರಹವನ್ನು ಕೈಯಲ್ಲಿ ಹಿಡಿದುಕೊಂಡು ಬಂದರು. ನಾನು ಆವಾಕ್ಕಾದೆ. ನಮ್ಮಲ್ಲಿ ವಿಪರೀತ ಮಡಿ ಮೈಲಿಗೆ, ಅಲ್ಲದೇ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಮೇಲೆ  ಅಲ್ಲಿಂದ ಕದಲಿಸಲು ಸಾಧ್ಯವಿರುವುದಿಲ್ಲ. ದೇವಿಯ ಮೈಮೇಲಿದ್ದ ಹೂವೊಂದನ್ನು ಕೊಟ್ಟು 'ತೆಗೆದುಕೊಳ್ಳಿ, ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಕಣ್ತುಂಬಿಕೊಳ್ಳಿ' ಎಂದು ಹೇಳುತ್ತಾ ಮೂರ್ತಿಯನ್ನು ನನ್ನ ಕೈಗೆ ವರ್ಗಾಯಿಸಿದರು. ಭಾವುಕನಾಗಿ ಮೂರ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ತದೇಕಚಿತ್ತನಾಗಿ ನೋಡಿದೆ. ನುಣುಪಾದ ಪುಟ್ಟ ವಿಗ್ರಹ. ನದಿಯ ನೀರಿನಲ್ಲಿ ಬಹುಕಾಲ  ದ್ದುದರಿಂದಲೋ ಏನೋ, ತಣ್ಣಗೆ ಸವೆದಿತ್ತು. ಕಾಲಿನಡಿಯಲ್ಲಿ ಬೆಳ್ಳಿ ಪೀಠ. ಬಲದ ಕೈ ತುಂಡಾಗಿದ್ದುದರಿಂದ ಒಂದು ಬೆಳ್ಳಿಯ ಕಟ್ಟನ್ನು ಹಾಕಲಾಗಿತ್ತು. ಮೂರ್ತಿಯನ್ನು ನೋಡುತ್ತಾ ಕಣ್ಣಾಲಿಗಳು ಮಂಜಾದವು. ಇಡೀ ಇತಿಹಾಸ ಮನಸ್ಸಿನಲ್ಲಿ ಮೂಡಿತ್ತು. ಅದನ್ನೊಮ್ಮೆ ಎದೆಗೆ ಅಪ್ಪಿಕೊಂಡು ಅವರಿಗೆ ಹಿಂದಿರುಗಿಸಿದೆ. 
        ಈ ಮರೆಯಲಾಗದ ಜೀವನಾನುಭವವನ್ನು ನನ್ನ ಮಡದಿಯೂ ಅನುಭವಿಸಲಿ ಎಂಬ ಉದ್ದೇಶದಿಂದ ಮದುವೆಯಾದೊಡನೆ ಮಡದಿಯನ್ನು ಕರೆದುಕೊಂಡು ಆ ದೇಗುಲಕ್ಕೆ ಮತ್ತೆ ಭೇಟಿ ನೀಡಿದೆ. ಕೈಯಾರೆ ಮೂರ್ತಿಯನ್ನು ಹಿಡಿದು ಭಾವುಕರಾದ ಇಬ್ಬರಿಗೂ ಅದೊಂದು ಮನದಾಳದ ಆನಂದದ ಅಪೂರ್ವ ಅನುಭವ.   
                                                              ನಂದಳಿಕೆಯಲ್ಲಿರುವ ಮುದ್ದಣ ಕವಿಯ ಸ್ಮಾರಕ ಭವನ

         ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಆವೇಶ ಹಾಗೂ ಪಾತ್ರಿಯ ಬಗ್ಗೆ  ನನ್ನ ವಿಶ್ಲೇಷಣೆಯನ್ನು ಮುಂದೆ ಬರೆಯುತ್ತೇನೆ. 

No comments:

Post a Comment