Saturday 12 January 2019

ಅಧ್ಯಾತ್ಮಿಕ ಸಾಧನೆಯ ಅನುಭವಗಳು 6 - ತ್ರಾಟಕ

         ಯಾವುದೇ ವಸ್ತುವನ್ನು ಎವೆಯಿಕ್ಕದೆ ನೋಡುವುದಕ್ಕೆ 'ತ್ರಾಟಕ' ಎಂದು ಕರೆಯುತ್ತಾರೆ. ಯೋಗಾಭ್ಯಾಸ ಸಾಧನೆಯಲ್ಲಿ ಓಂಕಾರದ ಚಿತ್ರ, ಕೆಲವು ಯಂತ್ರಗಳ ಚಿತ್ರ ಹಾಗೂ ಬೆಂಕಿಯ ಚಿಕ್ಕ ಜ್ಯೋತಿಯನ್ನು ಏಕಾಗ್ರತೆಯಿಂದ ನೋಡುವುದು ಹೇಗೆ? ಎಂದು  ಬಹುತೇಕವಾಗಿ ಕಲಿಸಲಾಗುತ್ತದೆ. ಓಂಕಾರದ ಚಿತ್ರ ಎವೆಯಿಕ್ಕದೇ ಸಾಧ್ಯವಾದಷ್ಟು ಹೊತ್ತು ನೋಡಿ ನಂತರ ಕಣ್ಣು ಮುಚ್ಚಿ ಅದನ್ನು ಒಳಗಣ್ಣುಗಳಿಂದ ನೋಡಲು ಪ್ರಯತ್ನಿಸುವುದು. ಓಂಕಾರದ ಚಿತ್ರವನ್ನು ನೋಡುವಾಗ, ಓಂಕಾರವನ್ನು ಬರೆಯುವಾಗ ಹೇಗೆ ಬರೆಯುತ್ತೇವೆಯೋ ಅದೇ ಮಾರ್ಗವನ್ನು ಕಣ್ಣುಗಳಿಂದ ಅನುಸರಿಸುವುದು. ನಂತರ ಕಣ್ಣು ಮುಚ್ಚಿಕೊಂಡು ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸುವುದು. ಅಂತೆಯೇ ಯಂತ್ರಗಳನ್ನು ಹೇಗೆ, ಎಲ್ಲಿಂದ ಎಲ್ಲಿಗೆ ಅನುಸರಿಸುತ್ತಾ ನೋಡುವುದು ಎಂಬ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುತ್ತದೆ. ಬಹಳ ಉಪಯುಕ್ತವಾಗಿ ನೆರವಾಗುವುದು ಜ್ಯೋತಿಯನ್ನು ನೋಡಿ ಅದನ್ನು ಸಾಕ್ಷಾತ್ಕರಿಸುವುದು. 
         ನಮ್ಮ ಯೋಗಶಾಲೆಯಲ್ಲಿ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕೊಠಡಿಯನ್ನು ನಿರ್ಮಿಸಲಾಗಿತ್ತು. ಪೂರ್ತಿ ಕತ್ತಲು ತುಂಬಿದ ಕೋಣೆ. ಅಲ್ಲಿ ಹೊಂಗೇ ಎಣ್ಣೆ ತುಂಬಿದ ದೀಪವನ್ನು ಇಡಲಾಗುತ್ತದೆ. ಅದರ ಹಳದಿ ಬಣ್ಣದ ಜ್ಯೋತಿಯನ್ನು ನೀಲಿ ಬಣ್ಣ ಕಾಣುವಷ್ಟು ಸಣ್ಣದಾಗಿ ಮಾಡಲಾಗುತ್ತದೆ. ನಂತರ ಅದರ ಎದುರಿಗೆ ಕುಳಿತು ಎವೆಯಿಕ್ಕದೇ ನೋಡುತ್ತಾ ಕುಳಿತುಕೊಳ್ಳಬೇಕು. ಕಣ್ಣಿಂದ ನೀರು ಹರಿಯುತ್ತಿದ್ದರೂ ತಡೆದು ಕೈಲಾದಷ್ಟು ಹೊತ್ತು ರೆಪ್ಪೆ ಮುಚ್ಚದೇ ಜ್ಯೋತಿಯನ್ನು ಗಮನಿಸುತ್ತಿರಬೇಕು. ಕಣ್ಣು ರೆಪ್ಪೆಗಳು ಒಂದಾದ ಮೇಲೆ ಜ್ಯೋತಿಯನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಯತ್ನಿಸಬೇಕು. ಅಭ್ಯಾಸ ಮಾಡಿದಂತೇ, ಕಣ್ಣು ತೆರೆದಾಗ ಕಂಡಷ್ಟೇ ಸ್ಪುಟವಾಗಿ ಜ್ಯೋತಿ ಕಾಣಿಸಲಾರಂಭಿಸುತ್ತದೆ. ನಾ ಕಂಡ ಇನ್ನೂ ಒಂದು ಅಚ್ಚರಿ ಏನೆಂದರೆ, ಕಣ್ಣು ಮುಚ್ಚಿ ಧ್ಯಾನಿಸುತ್ತಿರುವಾಗ ಜ್ಯೋತಿ ನಂದಿ ಹೋಗಿದ್ದು ಕಂಡು ಕಣ್ಣು ಬಿಟ್ಟರೆ ಅಲ್ಲಿ ಎದುರುಗಡೆ ಇರುವ ದೀಪದ ಜ್ಯೋತಿಯೂ ಆಗತಾನೇ ನಂದಿರುವುದು ಗೊತ್ತಾಗುತ್ತಿತ್ತು. 
         ಇಲ್ಲಿ ಹೊಂಗೇ ಎಣ್ಣೆ ಉಪಯೋಗಿಸುವುದು ಹಾಗೂ ಬತ್ತಿಯನ್ನು ನೀಲಿ ಬಣ್ಣದ ಜ್ಯೋತಿ ಬರುವವರೆಗೂ ಇಳಿಸುವುದರ ಉದ್ದೇಶ ಕಣ್ಣಿಗೆ ತಂಪು ನೀಡುವುದು. ಇದನ್ನು ಅಭ್ಯಸಿಸುವುದರಿಂದ ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಹಾಗೂ ಕಣ್ಣಿನ ಸಂಬಂಧ ರೋಗಗಳು ನಿಯಂತ್ರಣಗೊಳ್ಳುತ್ತವೆ. ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಹಾಗೂ 'ಧ್ಯಾನ' ಮಾಡಲು ಇದು ಬಹಳಷ್ಟು ಸಹಾಯವಾಗುತ್ತದೆ.  
         ಕಣ್ಣಿಗೆ ಸಂಬಂಧ ಪಟ್ಟ ಹಾಗೆ ನಾನು ಅಭ್ಯಸಿಸಿದ ಇನ್ನೊಂದು ವಿದ್ಯೆ 'ಚಾಕ್ಷುಮತೀ ವಿದ್ಯೆ'. ಇದರ ಸಾಧನೆ ಸ್ವಲ್ಪ ಕಷ್ಟಕರವಾಗಿದೆ. ಈ ಸಾಧನೆಯಲ್ಲಿರುವಾಗ ಕೇವಲ ಗೋಧಿ ಹಿಟ್ಟಿನ ಪದಾರ್ಥಗಳನ್ನೇ ಸೇವಿಸಬೇಕಿತ್ತು. ಒಂದಷ್ಟು ಮಂತ್ರಗಳ ಅನುಷ್ಠಾನ ಕ್ರಮವಿದೆ. ಅದಲ್ಲದೇ ಸೂರ್ಯನ ಏಳು ಬಣ್ಣಗಳಲ್ಲಿ ಒಂದೊಂದೇ ಬಣ್ಣದ ನೀರಿನಲ್ಲಿ ಹಂತ ಹಂತವಾಗಿ ಸೂರ್ಯನ ಕಿರಣಗಳ ಪ್ರತಿಫಲವನ್ನು ನೋಡಬೇಕಾಗುತ್ತದೆ. (ಇಲ್ಲೂ ಕೂಡಾ ಮಂತ್ರ ಹಾಗೂ ಏಕಾಗ್ರತೆಗೆ ಮಹತ್ವವಿದೆ.) ಇದರ ಅಭ್ಯಾಸದ ನಂತರ ಉದಯಿಸುತ್ತಿರುವ ಹಾಗೂ ಅಸ್ತಮಿಸುತ್ತಿರುವ ಸೂರ್ಯನನ್ನು ಏಕಾಗ್ರತೆಯಿಂದ ನೋಡಬೇಕಾಗುತ್ತದೆ. ಕೊನೆಯದಾಗಿ ಮಧ್ಯಾಹ್ನದ ಸೂರ್ಯನನ್ನು ಕೆಲ ಕಾಲ ನೋಡುವ ಪಾಠವೂ ಇದೆ. ಈ ಪ್ರಯೋಗವನ್ನು ಸೂಕ್ತ ಗುರು ಪಕ್ಕದಲ್ಲಿಲ್ಲದೇ ಯಾರೂ ಪ್ರಯತ್ನಿಸಬೇಡಿ. ಈ ವಿದ್ಯೆಯನ್ನು ಕರಗತ ಮಾಡಿದ ಮೇಲೆ ಗುರುಗಳು 'ನಿನಗೆ ಬಹುತೇಕ ಜನರ ಹಾಗೆ ನಲವತ್ತು ವರ್ಷಕ್ಕೆ ಕನ್ನಡಕ ಹಾಕುವ ಅವಶ್ಯಕತೆ ಬರುವುದಿಲ್ಲ, ಅಂತೆಯೇ ಕಣ್ಣಿಗೆ ಸಂಬಂಧಿಸಿದ ಬೇನೆಗಳು ಬರುವುದಿಲ್ಲ' ಎಂದರು. ನಾನು reading glass ಕೈಗೆತ್ತಿಕೊಂಡದ್ದು ನನ್ನ ಐವತ್ತೈದನೇ ವಯಸ್ಸಿಗೆ. ಮನೆಯಲ್ಲಿ ಎಲ್ಲರಿಗೂ conjunctivitis ( ಮದ್ರಾಸ್ ಐ ) ಬಂದು, ಎಲ್ಲರ ಕಣ್ಣೂ ಕೆಂಪಾಗಿತ್ತು. ಆಗ ನನಗೆ ಗುರುಗಳ ಹೇಳಿದ ಮಾತು ನೆನಪಾಗಿ ನನಗೆ ಬರಬಹುದೇನೋ ನೋಡೋಣ ಎಂದು ಕುತೂಹಲದಿಂದ ಕಾಯುತ್ತಿದ್ದೆ. ಆದರೆ ಬರಲಿಲ್ಲ, ಖುದ್ದಾಗಿ ನನ್ನ ತಮ್ಮನ ಕೆಂಪು ಕಣ್ಣುಗಳ ಮೇಲೆ ನನ್ನ ಕಣ್ಣುಗಳನ್ನು ಇಟ್ಟು ಉಜ್ಜಿ ನೋಡಿದರೂ ಆ ರೋಗ ನನಗೆ ಬರಲಿಲ್ಲ !

No comments:

Post a Comment